ಭಕ್ತಿಗೀತೆಗಳು
126. ನಿನ್ನ ದಯೆ ಒಂದಿದ್ದರೆ ಸಾಕೋ ಎನಗೆ || ಪ ||
ಹತ್ತಾವತಾರಗಳಲಿ ಮಿಂಚಿ ನಾ ಮೆರೆಯುವೆ |
ಮತ್ಸಾವತಾರದಂತೆ ಕ್ಷಣ ಕ್ಷಣಕೂ ಭಕ್ತಿ ಬೆಳೆಯಲಿ || 1 ||
ಕೂರ್ಮಾವತಾರದಂತೆ ಪಾದ ಸ್ಮರಣೆ ಸದಾ ಹೊತ್ತಿರಲಿ |
ವರಾಹವತಾರದಂತೆ ಕ್ಲೇಶಗಳ ಸರಳವಾಗಿ ಎತ್ತಲಿ || 2 ||
ನರಸಿಂಹವತಾರದಂತೆ ದುಷ್ಟ ಶಕ್ತಿಗಳ ಎದುರಿಸಲಿ |
ವಾಮನವತಾರದಂತೆ ಸಮರ್ಪಣಾ ಬುದ್ಧಿ ತ್ರಿವಿಕ್ರಮನಂತೆ ಏರಲಿ || 3 ||
ಭಾರ್ಗವತಾರದಂತೆ ವಿಷಯದಾಸೆ ಅಳಿಯಲಿ |
ರಾಮಾವತಾರದಂತೆ ಸದ್ಗುಣಗಳ ಸಾಂದ್ರನಾಗಲಿ || 4 ||
ಮುಕುಂದಾವತಾರದಂತೆ ಮುಕ್ತಿಯ ಉಪದೇಶವಾಗಲಿ |
ಬುದ್ಧಾವತಾರದಂತೆ ಚಂಚಲದ ಸ್ಥಿರತೆಯಾಗಲಿ || 5 ||
ಕಲ್ಕೀ ಅವತಾರದಂತೆ ದುರ್ವಿಷಯ ಖಂಡಿಸಲಿ
ಶ್ರೀಕೃಷ್ಣವಿಠ್ಠಲ ನಿನ್ನ ದಯೆ ದೊರಕದಿದ್ದರೆ ಏನು ದೊರೆಯದು || 6 ||
127. ಹರಿ ನಿನ್ನ ಚರಣದಿ ಸ್ಥಿರ ಭಕುತಿ ಕರುಣಿಸೋ |
ಪರಿ ಪರಿ ಬೇಡಿಕೊಂಬೆ ನಿಜ ಭಕುತಿ ದಯಪಾಲಿಸೋ || ಪ ||
ನೀರಿಗಿಂತ ತಿಳಿಯಾದ ಜ್ಞಾನವಿತ್ತು ಸಲುಹೋ |
ಧರೆಗಿಂತ ಭಾರವಾದ ಪಾಪದಿಂದ ಉಳಿಸೋ || 1 ||
ಕರಿಯಾದ ಕಾಡಿಗೆಗಿಂತ ಕಲಂಕದ ಕಪ್ಪು ಅಳಿಸೋ |
ಉರಿಗಿಂತ ತೇಜವಾದ ಕ್ರೋಧದಿಂದ ತಪ್ಪಿಸೋ || 2 ||
ಅರಿಯದೇ ಬರುವ ಒಳಗಿನ ಅರಿಯ ತರಿಯೋ |
ನರ ಜನ್ಮದಿ ಹೊರುವ ಕರ್ಮದ ಭಾರವಿಳುಹೋ || 3 ||
ಬರದಂತೆ ಜನುಮ ಇರುವ ಉಪಾಯ ತಿಳಿಹೋ |
ಭರದಿಂ ಸಂಸಾರ ಸಾಗರ ದಾಟುವ ದಾರಿ ತೋರೋ || 4 ||
ಪರರ ದೈನ್ಯಕೆ ಸಿಲುಕದಂತೆ ನಡೆಸೋ |
ಸ್ಮರಿಸಿ ಸದಾ ಶ್ರೀಕೃಷ್ಣವಿಠ್ಠಲನ ಬದುಕುವಂತೆ ಮಾಡೋ || 5 ||
"ದಶವತಾರ"
128. ನೀರಿನಿಂದ ಅಂಗೈಲಿ ಬಂದೆ ನೀನು |
ಗಿರಿಯನ್ನು ಬೆನ್ನಲಿ ಪೊತ್ತು ನಿಂದೆ || 1 ||
ಧರೆಯನ್ನು ಕೊರೆಯಲ್ಲಿಟ್ಟು ರಕ್ಷಿಸಿದೆ |
ನರಮೃಗನಾಗಿ ಕಂಬದಿಂದ ಬಂದೆ || 2 ||
ಮೂರಡಿಬೇಡಿ ಪಾತಾಳಕ್ಕೊತ್ತಿ ಕಾವಲಾದಿ |
ಮಾತೃ ಶಿರವ ಕಡಿದು ತಂದೆಗೆ ಮಗನಾದಿ || 3 ||
ಅರಣ್ಯದಿ ಸುತ್ತಿ ಪಿತೃವಾಕ್ಯ ಪರಿಪಾಲಕನಾದಿ |
ಪೊರೆದೆ ಅಕ್ಷಯಾಂಬರವಿತ್ತು ಮಾನಿನಿಯ ಮಾನ || 4 ||
ದುರ್ಜನರಿಗೆ ಬೋಧಿಸಿ ಜ್ಞಾನ ಕಳೆದೆ |
ಏರಿ ಹಯವ ಧರ್ಮ ರಕ್ಷಿಸಿದೆಯಾ ಶ್ರೀಕೃಷ್ಣವಿಠ್ಠಲ || 5 ||
129. ಅಧಿಕಾರಿ ಸಾಧಕರ ತಿಳವಳಿಕೆ ಕಾಣಿರೋ ||
ಓದಿದ್ದೆಲ್ಲಾ ವೇದ - ಧರ್ಮ ಶಾಸ್ತ್ರವಾಗಲಿ || 1 ||
ಓಡಾಡಿದ್ದೆಲ್ಲಾ ತೀರ್ಥಯಾತ್ರೆಯಾಗಲಿ |
ನಡೆದಾಡಿದ್ದೆಲ್ಲಾ ಪವಿತ್ರ ದೇವಸ್ಥಾನವಾಗಲಿ || 2 ||
ನೋಡಿದ್ದೆಲ್ಲಾ ಪರಮಾತ್ಮನ ದಿವ್ಯ ಮೂರ್ತಿಯಾಗಲಿ |
ಕೊಡಮಾಡಿದ್ದೆಲ್ಲಾ ದಾನ-ಧರ್ಮವಾಗಲಿ || 3 ||
ಒಡಲಲ್ಲಿ ಹಾಕಿದ್ದೆಲ್ಲಾ ನೈವೇದ್ಯವಿರಲಿ |
ನುಡಿದಿದ್ದೆಲ್ಲಾ ಸ್ತುತಿ - ಸ್ತೋತ್ರವಾಗಲಿ || 4 ||
ಮಾಡಿದ್ದೆಲ್ಲಾ ಶ್ರೀಹರಿಯ ಕೈಂಕರ್ಯವಾಗಲಿ |
ಬಿಡದೆ ವಿಹಿತ ಸಕಲವೂ ಶ್ರೀಕೃಷ್ಣವಿಠ್ಠಲಗೆ ಪ್ರೀತಿಯಾಗಲಿ || 5 ||
130. ಆಲಿಸಿ ಕಂದನ ಕರೆ ಮಾತೆ ಓಡಿ ಬರುವಂತೆ |
ಮುರ್ಲೋಕದೊಡೆಯ ಭಕ್ತಿಗೊಲಿದು ಬರುವ || ಪ ||
ಪ್ರೇಮದಿ ಎಲೆ ಕೊಟ್ಟವಳ ಸಂರಕ್ಷಿಸಿದ |
ನೇಮದಿ ಫಲ ಕೊಟ್ಟವಳಿಗಿತ್ತ ಮುಕುತಿಯ ||
ಕಾಮದಿ ಪುಷ್ಪ ವಿತ್ತವನ ಬಂಧನ ಕಿತ್ತಿದ |
ಒಮ್ಮನದಿ ಜಲವಿತ್ತವಗಿತ್ತ ತನ್ನ ದರುಶನವ || 1 ||
ನಿರಂತರ ನಿತ್ಯ ಚಿಂತನ ನಿಷ್ಕಾಮದಿ ಭಜಿಪ |
ಪುರುಷರ ಯೋಗಕ್ಷೇಮ ಸ್ವಯಂ ತಾ ನೋಡುವ ||
ಪರಮೇಶ್ವರ ಮನೋವಾಚಾಗಮಗೋಚರನ |
ಸ್ವರ್ಗ ಬೇಡದೆ ಸದಾ ಭಕ್ತಿ ದರುಶನ ಬೇಡುವರು || 2 ||
ನಿಷ್ಕಲಂಕ ಭಾವದಿ ಸಮರ್ಪಿತವೆಂದಿದ್ದೆಲ್ಲಾ |
ಸ್ವೀಕರಿಸುವ ಶುದ್ಧಾತ್ಮ ಕರ್ಮ ಬಿಡಿಸುವ ||
ಸಕಲ ವಿದಿತಾತ್ಮ ಕೂಗಿಗೆ ಓಡಿ ಬಂದು |
ಅಕ್ಷಯ ಫಲ ಕೊಡುವ ನಮ್ಮ ಶ್ರೀಕೃಷ್ಣವಿಠ್ಠಲ || 3 ||
131. ಎನಗೆ ಎಳೆತ, ಸಕಲ ಕಡೆಯಿಂದಲೂ ಎಳೆತ |
ನಿನಗೆ ತಿಳಿಯದೇ, ನಾ ಹೇಗೆ ಧ್ಯಾನಿಸಲಿ ನಿನ್ನ || ಪ ||
ನಿನ್ನ ಬಿಟ್ಟು ಅನ್ಯದರಲ್ಲಿ ಸದಾ ಸೆಳೆತ |
ಮನ, ಶರೀರ, ಸತಿ, ಆತ್ಮಜರಲಿ ||
ಮನೆ ಮತ್ತು ಆಪ್ತರು, ಸಮಾಜ ರಾಷ್ಟ್ರದಲ್ಲಿ |
ಧನ, ಕನಕ, ಸೇವಕ, ಆತ್ಮೀಯರಲಿ || 1 ||
ತ್ರಿಗುಣದಲಿ ಸಿಲುಕಿ ಸುತ್ತುತಿರುವೆ ಸದಾ |
ಸಂಗರಹಿತಳಾಗಲು ಆಗದೆ ಒದ್ದಾಡುತ್ತಿರುವೆ ||
ಸುಜ್ಞಾನ ಪಡೆಯದೆ ಜನುಮ ವ್ಯರ್ಥವಾಗುತಿದೆ |
ಸುಗುಣಾಂತರಂಗ ಶ್ರೀಕೃಷ್ಣವಿಠ್ಠಲ ಪಾರುಗಾಣಿಸೋ || 2 ||
132. ಪರಮ ಪುರುಷ ಪರಮೇಶ್ವರ ಪರಾಶಕ್ತಿ ಪರಾತ್ಪರ |
ಪರಿಶುದ್ಧ ಪರಮ ಕಾರಣ ಪರಮ ಪರಿಮಾಣ ಪರೇಶ || 1 ||
ಸರ್ವ ವೀಕ್ಷಕ ಪ್ರೇರಕ ಸಾಕ್ಷಿ ಸಾಕ್ಷಾತ್ ಸ್ಥಿತ |
ಸರ್ವತ್ರ ಸ್ಥಿತ ಅಂತರ್ಬಹಿಶ್ಚ ವ್ಯಾಪ್ತ ಅವ್ಯಕ್ತ || 2 ||
ಪರಮ ಚೇತನ ಆದಿಬೀಜಾಯ ಪರಂ ಬ್ರಹ್ಮ |
ಪರಮಧಾಮ ಹೃದಿಸ್ಥಿತ ಶ್ರೀಕೃಷ್ಣವಿಠ್ಠಲ ನ ವಿದುಃ || 3 ||
133. ಭಕ್ತರ ಕರೆಗೆ ಭಕ್ತಿಯ ಕೂಗಿಗೆ ಭೂಮಿಗೆ ಬರುವ ಭಗವಂತ ಇದು ನಿಶ್ಚಯ |
ಭಕುತಿಗೆ ಒಲಿದು ಬಾಲಕ ಧ್ರುವನ ಕರೆಗೆ ಶ್ರೀಮನ್ನಾರಾಯಣ ಬರಲಿಲ್ಲವೆ ? ||
ಶಕ್ತಿಯ ಸೆಣಸಾಟದಿ ಸೋತ ಗಜೇಂದ್ರನ ಆರ್ತತೆಗೆ ಶ್ರೀಹರಿ ಬರಲಿಲ್ಲವೇ ? |
ಮೂಕರೋದನದಿ ಶಿಲೆಯಂತಾದ ಅಹ್ಯಲೆಯ ಬಳಿಗೆ ಶ್ರೀರಾಮ ಬರಲಿಲ್ಲವೆ ? ||
ಯಾಕೆ ಇನ್ನು ಬರಲಿಲ್ಲವೆಂದು ಕಾಯುತ್ತಿದ್ದ ಶಬರಿಯ ಕಾಣಲು ಶ್ರೀರಾಮ ಬರಲಿಲ್ಲವೇ ? |
ದುಃಖಿತ ಅಬಲೆ ದ್ರೌಪದಿ ಶರಣಾಗಲು ಶ್ರೀ ಕೃಷ್ಣ ಬಂದೊದಗಿದನಲ್ಲವೆ ? |
ಏಕ ಪರಮಾತ್ಮ ಅನೇಕ ರೂಪದಿ ಭಕ್ತರು ಕರೆದಲ್ಲಿ ತಾ ಬರುವನೆಂಬುದು ನಿಜವಲ್ಲವೆ ? ||
134. ಇಲ್ಲಿ ಬರಸಿದವ ನೀನೆ ಕರ್ಮ ಕಳೆಯಲು |
ಇಲ್ಲಿ ಇರಿಸಿದವ ನೀನೇ ಭೋಗ ಉಣಲು || 1 ||
ಇಲ್ಲಿ ಮೆರೆಸಿದವ ನೀನೇ ಪುಣ್ಯ ಅನುಭವಿಸಲು |
ಇಲ್ಲಿ ಉರಿಸಿದವ ನೀನೇ ಪಾಪ ಕಳೆಯಲು || 2 ||
ಇಲ್ಲಿ ಹೊರೆಸಿದ ಭಾರ ಕರಗಿಸುವವ ನೀನೇ |
ಇಲ್ಲಿ ಒರೆಸಿದವ ನೀನೇ ಶ್ವಾಸ ಋಣ ತೀರಲು || 3 ||
ಅಲ್ಲಿ ಕರೆಸಿದವ ನೀನೇ ಸ್ವಯೋಗ್ಯತಾ ಫಲ ಕೊಡಲು |
ಎಲ್ಲ ಬಲ್ಲ ಸತ್ಯವ ಸರಸಿಜನಾಭ ಶ್ರೀಕೃಷ್ಣವಿಠ್ಠಲ || 4 ||
135. ಗುರುವೆಂದರೆ ಯಾರಿಹರು ಎಲ್ಲಿಹರು |
ಅರಿವೇ ಗುರು ಎಂಬುವರು ತಿಳಿದವರು ||
ಅರಿವಿನ ಪರಿಪೂರ್ಣ ಅರಿತವರಿಲ್ಲ ಇಹದಿ |
ಅರಿತಾಗ ಹರಿವುದು ಜನನ - ಮರಣ ಚಕ್ರ || 1 ||
ಅರಿವಿನ ಪರಿವೇ ಇಲ್ಲದೆ ತೊಳಲಾಡುವರು |
ಅರಿವೆಂದರೆ ಜ್ಞಾನ-ಸುಜ್ಞಾನಗಳೆಂಬುವರು ||
ಅರಿತ ಗುರುವಿನ ಹುಡುಕಾಟದಿ ಜನ್ಮ ಕಳೆವರು |
ಅರಿಹಂತಕನೇ ಅಕ್ಷರ ಪ್ರತಿಪಾದ್ಯನೆಂಬುವನೇ ಜ್ಞಾನಿ || 2 ||
ಅಜ್ಞಾನ ಕಳೆದು ಸುಜ್ಞಾನ ನೀಡುವ |
ವಿಜ್ಞಾನದಿ ಪೊಳೆ ಪೊಳೆವ ಸರ್ವಜ್ಞ ||
ವಿಜ್ಞಾಪನೆ ಮಾಡೇ ನಲಿದು ತಿಳಿಸುವ |
ವಾಙ್ಮನೋಹರ ಮೂರ್ತಿ ಒಲಿದು ಬರುವ || 3 ||
`ಅ' ದಿಂದ `ಜ್ಞ' ವರೆಗೆ ಪ್ರತಿ ಅಕ್ಷರಾರ್ಥ ತಿಳಿದವಗೆ |
ಆದರದಿ ಹರಿಯು ಅರಿತು ಸ್ವೀಕರಿಸುವ ||
ಸಾದರ ಭಕ್ತಿಯಲಿ ಜ್ಞಾನ ಮಾರ್ಗದಿ ಸಾಗುವ |
ವೇದ ಮೂರ್ತಿ ನಮ್ಮ ಶ್ರೀಕೃಷ್ಣವಿಠ್ಠಲನೇ ಜಗದ್ಗುರು ಎನ್ನುವ || 4 ||
136. ದಿವ್ಯರೂಪ ನೋಡಲು ದಿವ್ಯದೃಷ್ಟಿ ಪಾಲಿಸೋ |
ದಿವ್ಯ ದರುಶನದಿ ಧನ್ಯನಾಗುವೆ ಯೋಗೇಶ್ವರನೇ || ಪ ||
ದಿವ್ಯ ಯೋಗವಿದು ಸಕಲರಿಗೂ ಸುಲಭವಲ್ಲ |
ದಿವ್ಯ ಶಕ್ತಿ ಭವ್ಯ ವಿಶ್ವರೂಪ ವೀಕ್ಷಿಸಲು || ಅ ||
ದಿವ್ಯ ಆಭರಣಗಳ ಸಮೂಹವಿಲ್ಲಿದೆ |
ದಿವ್ಯಮಾಲೆ ಧರಿಸಿ ದಿವ್ಯಗಂಧ ಪೂಸಿದೆ ||
ದಿವ್ಯಾಯುಧಗಳ ಪಿಡಿದು ಅಚಿಂತ್ಯಾದ್ಭುತ |
ದಿವ್ಯಾನಂದ ದೇಶ ಕಾಲ ಗುಣತಃ ನಿರವಧಿಕನ || 1 ||
ಅನೇಕಾನೇಕ ಮುಖಗಳಿಂದ ಕೂಡಿದೆ |
ಅನೇಕಾನೇಕ ನಯನಗಳು ತುಂಬಿವೆ ||
ಅನೇಕಾನೇಕ ಆಶ್ಚರ್ಯ ನೋಟಗಳಡಗಿದೆ |
ಅನೇಕಾನೇಕ ಸೂರ್ಯಪ್ರಭೆ ಒಮ್ಮೇ ಮೂಡಿದೆ || 2 ||
ಸರ್ವಲೋಕನೊಳಗೊಂಡ ವಿಶ್ವತೋಮುಖ |
ಸರ್ವವ್ಯಾಪಿ ಸರ್ವಪ್ರೇರಕ ಸರ್ವಜ್ಞನಿವ ||
ಸರ್ವ ನಿಯಾಮಕ ಸತ್ಯಸ್ಯಸತ್ಯನಿವ |
ಸರ್ವ ದೇವೋತ್ತಮ ಶ್ರೀಕೃಷ್ಣವಿಠ್ಠಲನ ರೂಪ ಬಲು ಅಪರೂಪ || 3 ||
137. ಭಕುತಿ ಮೇಲೋ ವಿರಕ್ತಿ ಮೇಲೋ | ಯುಕುತಿವಂತರು ಪೇಳಬೇಕು || 1 ||
ಮುಕುತಿ ಮಾರ್ಗಕೆ ನವವಿಧ ಭಕುತಿ ಬೇಕು | ಶಕುತಿಯೊಂದೆ ಸಾಲದು ಹರಿ ಪ್ರೇರಣೆ ಬೇಕು || 2 ||
ಸತ್ಯಪಥದಿ ಸಾಗಲು ಭಗವದ್ಭಕ್ತಿ ಬೇಕು | ನಿತ್ಯ ಸಂಸಾರದಿ ವಿರಕ್ತಿ ಪೊಂದಬೇಕು || 3 ||
ಪತಿತಜೀವನ ಪಾವನವಾಗಲು ಭಕ್ತಿ ಬೇಕು | ಸತತಯತ್ನದಿ ಬದುಕು ಸವೆಸಬೇಕು || 4 ||
ಸದಾ ವಿಷಯ-ಸುಖದಿ ವಿರಕ್ತಿ ಬೆಳಸಿ | ಶುದ್ಧ ಹೃದಯದಿ ಪೂರ್ಣ ಭಕ್ತಿ ಧರಿಸಿ || 5 ||
ಸಾಧನೆಯ ಮಾರ್ಗದಿ ಸಾಗಿ ಸಮರ್ಪಿಸೆ | ಶೋಧಿಸಿ ಶ್ರೀಕೃಷ್ಣವಿಠ್ಠಲ ಮೋಕ್ಷ ಕರುಣಿಪ || 6 ||
138. ಪಿಡಿವೆ ನಿನ್ನ ಪಾದ ಎನ್ನಾಣೆಗೂ |
ಬಿಡದಿರೂ ಎನ್ನ ಹೃದಯ ನಿನ್ನಾಣೆಗೂ || ಪ ||
ಜೋಡಿಸಿದ ಕರದಿ ನೀ ಜಾರಿದರೂ |
ಹೊಡೆದು ತಿವಿದರೂ ನೀ ದಾಡೆÀಯಲಿ ||
ಬಡೆದು ಭಾರ ಹಾಕಿದರೂ ಬೆನ್ನಲಿ |
ಬಂದು ಸ್ತಂಭದಿಂ ಘುಡು ಘುಡಿಸಿದರೂ || 1 ||
ಪಾದವನ್ನೊತ್ತಿ ಪಾತಾಳಕೆ ಇಳಿಸಿದರೂ |
ಕಡಿದರೂ ಎನ್ನ ಶಿರವ ಪರುಶದಿ ||
ಗುಡ್ಡ ಕಾಡಲಿ ತಿರುಗಿಸಿ ಬಳಲಿಸಿದರೂ |
ಕದಿಯುವ ಕಳ್ಳ ನಾನೆಂದರೂ || 2 ||
ಬುದ್ಧಿ ಇಲ್ಲದ ಮೋಹ ಪರವಶನೆಂದರೂ |
ಕುದುರೆ ಕಾಲಲಿ ಎನ್ನ ತುಳಿಸಿದರೂ ||
ಕಾಡುವೆ ಬೇಡುವೆ ಫಲ ಅಲ್ಪ ಸಾಧನಕೆ |
ಶುದ್ಧ ಫಲದಾತ ಶ್ರೀಕೃಷ್ಣವಿಠ್ಠಲ ಕಡೆಹಾಯಿಸೋ || 3 ||
139. ಚಂಚಲವೀ ಮನ ಎಂದವಗೆ, ಸರ್ವೇಶನೇ |
ಅಚಲವಾದ ಮನವೀಯಬಾರದೆ ದಯದಿ || 1 ||
ಸಚರಾಚರದಲ್ಲೂ ನೆಲಸಿಹ ಜೀವೇಶ |
ಪಾಚಕನ ಕೈಯ್ಯಲಿ ಅಡುಗೆ ರುಚಿ ಇರುವಂತೆ || 2 ||
ಅಚಿಂತ್ಯಾದ್ಭುತ ಶಕ್ತಿ ಪೊಂದಿರುವ ದೇವನೇ |
ಶುಚಿರ್ಭೂತವಾದ ಜೀವನ ಸಕಲರಿಗೆ ಕೊಡೆ || 3 ||
ನಿಶ್ಚಯದಿ ಪಾಪ ಪೆಸರಿಲ್ಲದೆ ಓಡಿ ಪೋಪುದು |
ಅಚ್ಯುತನೇ ಶ್ರೀಕೃಷ್ಣವಿಠ್ಠಲ ನೀನಲ್ಲದೆ ನಮಗಾರು ದಿಕ್ಕು || 4 ||
140. ಕಾಡಾಟವ ದೂರ ಮಾಡೋ, ಗ್ರಹಗಳ ಕಷ್ಟ ತಾಳಲಾರೆ |
ಬೇಡಿದಿಷ್ಟಾರ್ಥ ನೀಡುವ ಸಕಲ ಗ್ರಹಬಲ ದೊರೆಯೆ || ಪ ||
ಚಾಡಿ ಮಾತು ಕೇಳಿ ಎನ್ನ ಹಿಂಸಿಸಲು ಬೇಡ |
ನಡೆಸಿದಂತೆ ನಡೆವ ಎನ್ನ ನಡೆ ಕಾಯೋ ||
ಕೊಡುವ ದೊರೆ ನೀನಿರಲು ಇನ್ನೊಬ್ಬರ ಹಂಗೇಕೆ |
ಕಡೆಗಾಣಿಸದೆ ದಯದಿ ಎನ್ನಪಾರು ಮಾಡೋ || 1 ||
ಆದರದಿ ನಿನ್ನ ಸಕಲ ಸೇವೆ ಮಾಳ್ಪೆ ಅವಕಾಶ ಕೊಡು |
ಸಾಧಿಸದೆ ನಿನ್ನೊಲುಮೆ ಈ ಸಾಲದ ಜೀವನವೇಕೊ ||
ಭಾಧಿಸುತಿರುವ ಷಡ್ವೈರಿಗಳ ಬಾಧೆ ತಡೆಯದಾದೆ |
ಬದುಕು ದುರ್ಭರವಾಗಿದೆ ನಿನ್ನಡೆಗೆ ದಾರಿ ತೋರೋ || 2 ||
ಮರ್ದಿಸೆನ್ನ ಸರ್ವಪಾಪ ಸನ್ಮತಿಯ ಪಾಲಿಸಿ |
ಮದನನಯ್ಯ ನಿನ್ನ ಪಾದದಡಿ ಬಿದ್ದಿರುವೆ ||
ಕಂದನಂದದಿ ಎನ್ನೆತ್ತಿ ಸಂರಕ್ಷಿಸೋ ಬೇಗ |
ತಂದೆ ಶ್ರೀಕೃಷ್ಣವಿಠ್ಠಲ ನಿನ್ನನೇ ಮೊರೆಹೊಕ್ಕಿರುವೆ || 3 ||
141. ಮಂತ್ರ ಮಹಾಮಂತ್ರ ಸರಳ ಮಂತ್ರವಿದು |
ಸಂತತ ಜಪಿಸೆ ಜೀವನ ಸಾರ್ಥಕಗೊಳಿಪುದು || ಪ ||
ಬಾಳಿಗೆ ಬಲವೀಯುವ ಮಂತ್ರ |
ಹಲವು ವ್ಯಸನದಿಂ ಕಾಪಿಡುವ ಮಂತ್ರ ||
ಕುಳಿತಲ್ಲಿ ನಿಂತಲ್ಲಿ ಜಪಿಸಬಹುದೀ ಮಂತ್ರ |
ನಾಲಿಗೆಗೆ ರಸ, ಮನಸಿಗೆ ಮುದವೀವ ಮಂತ್ರ || 1 ||
ಶತ್ರುನಾಶಕ ಮಹಾವ್ಯಾಧಿ ನಿವಾರಕ ಮಂತ್ರ |
ಹಿತಕರ ಸಂಜೀವಿನಿ ದಿವ್ಯೌಷಧ ಮಂತ್ರ ||
ಸರ್ವೈಶ್ವರ್ಯ ಫಲಪ್ರದ ಮಂತ್ರ |
ಭವ ಸಾಗರ ಸುಲಭದಿ ದಾಟಿಸುವ ಮಂತ್ರ || 2 ||
ಭಕ್ತರಿಗೆ ಶ್ರೇಯಃ ಪ್ರಾಪ್ತಿಕರ ಮಂತ್ರ |
ಮುಕ್ತಿ ಮಾರ್ಗ ತೋರುವ ಸುಲಭ ಮಂತ್ರ ||
ಸಕಲ ಉಪನಿಷತ್ತುಗಳ ಸಾರ ಈ ಮಂತ್ರ |
ಶ್ರೀಕೃಷ್ಣವಿಠ್ಠಲನ ನಾಮಜಪ ಮಂತ್ರ || 3 ||
142. ಶಿಕ್ಷಿಸದೆ ಬಿಡುವೆಯಾ ಎನ್ನ ದೋಷಗಳ |
ಲಕ್ಷಿಸದೆ ಮನ್ನಿಸುವೆಯಾ ಕರುಣಾಕರ || 1 ||
ಪಾಪಗಳ ಪರ್ವತವೇ ನಾನಾಗಿರುವಾಗ |
ಚಾಪಧರನೇ ಎನ್ನ ಅವಗುಣಗಳಿಗೆ || 2 ||
ನೀನಿತ್ತ ಮಾನವ ಜನುಮದಿ |
ನಿನ್ನನ್ನೇ ಮರೆತಿರುವ ಪಾಪಕೆ || 3 ||
ಸಾಧನೆಯ ದೇಹವ ವ್ಯರ್ಥಗೊಳಿಸಿ |
ಕ್ರೋಧ ಕಾಮವಶದಿ ಕಾಲ ಕಳೆದೆನ್ನ || 4 ||
ಕ್ಷಣ ಭಂಗುರದ ಈ ಸಂಸಾರದಿ |
ಮಣಭಾರ ತಪ್ಪೆಸೆಗುವ ಎನಗೆ || 5 ||
ಭಕುತಿ ಒಂದಿನಿತು ಮಾಡಲಿಲ್ಲ |
ಮುಕುತಿದಾಯಕ ಶ್ರೀ ಕೃಷ್ಣ ವಿಠ್ಠಲ || 6 ||
143. ಮಾನಾಭಿಮಾನ ನಿನ್ನದೇ, ಶ್ರೀ ಲಕುಮಿ ವಲ್ಲಭ || ಪ ||
ನಿನ್ನದೇ ಸಕಲ ಸಂಪದವು || ಅ ||
ಕ್ಷಣದಿ ಅಟ್ಟಕ್ಕೇರಿಸಿ ಕಾಣದ ಸೌಭಾಗ್ಯವೀವೆ |
ಅನೇಕ ಮದಗಳಿತ್ತು ಮಿನುಗಿಸುವೆ ||
ಚಿನ್ಮಯ ರೂಪದಿ ಸಲಹುವೆ |
ಘನ್ನ ಮಹಿಮೆ ಕೃಪೆ ಸುರಿಸುತ || 1 ||
ಚೆನ್ನಿಗ ರಾಯನ ನೋಟ ಸರಿದರೆ |
ಬನ್ನ ಬಡಿಸುವೆ ಈ ಸಂಸಾರದಿ ||
ಆಣೆ ಮಾಡಿ ಹೇಳುವೆ ಶ್ರೀಕೃಷ್ಣವಿಠ್ಠಲನ |
ಪೂರ್ಣ ಅರಿತವರ್ಯಾರು ಮೂರ್ಲೋಕದೊಳಿಲ್ಲ || 2 ||
144. ಏನಾದರೊಂದನ್ನು ಕರುಣಿಸೆನಗೆ ದೇವಾ |
ಮುನಿಯೋಗಿಗಳಿಗೆ ಪಾದದ್ವಯವಿತ್ತೆ || ಪ |
ನಖದಿಂದ ಗಂಗೆಗೆ ಜನುಮವಿತ್ತೆ |
ಸಖ ಪಾರ್ಥನಿಗೆ ಜ್ಞಾನವನಿತ್ತೆ ||
ಕುಕ್ಷಿಯೊಳು ಬ್ರಹ್ಮಾಂಡಗಾಶ್ರಯವಿತ್ತೆ |
ಲಕ್ಷ್ಮಿಗೆ ವಕ್ಷಸ್ಥಳ ವಾಸವವಿತ್ತೆ || 1 ||
ಪ್ರಲಯದಿ ಸಕಲ ಜೀವರುದರಲಿಟ್ಟೆ |
ವಾಲಿಯ ತರಿದು ಸುಗ್ರೀವಗೆ ರಾಜ್ಯವನ್ನಿತ್ತೆ ||
ಬಾಲಿಕೆ ತ್ರಿವಕ್ರೆಗೆ ಸುಂದರ ರೂಪವಿತ್ತೆ |
ಬಲಿಯ ಪಾತಾಳಕ್ಕೊತ್ತಿ ನಿನ್ನನೇ ಇತ್ತೆ || 2 ||
ಧ್ರುವಗೆ ವರದಿ ಚಿರಸ್ಥಾನವನಿತ್ತೆ |
ಸುವಧು ದ್ರೌಪದಿ ಕರೆಗೆ ವಸ್ತ್ರವನಿತ್ತೆ ||
ಪವನಪುತ್ರಗೆ ಸಂಪೂರ್ಣಾಲಿಂಗನವಿತ್ತೆ |
ಭವಭಯ ಪರಿಹರಿಸೋ ಶ್ರೀಕೃಷ್ಣವಿಠ್ಠಲ || 3 ||
"ಭ್ರಮರಗೀತೆ"
145. ಮೂರ್ಖರಾದೆವು ನಾವು ಹೇ ! ಉದ್ಧವ |
ಏಕೋಭಾವದಿ ನೆನೆದವನ ರೂಪವ || ಪ ||
ಶಿಕ್ಷಿಸದೇ ನಮ್ಮ ಅಪಚಾರ ಲಕ್ಷಿಸದೇ |
ಸುಖವನಿತ್ತು ತಣಿಸಿದವ ಮನಕೆ || ಅ ||
ಬೀಸುವ ಗಾಳಿಯೇ ಗುಯ್ಗುಡುವ ಭ್ರಮರವೇ |
ಕಸ್ತೂರಿ ಬೊಟ್ಟನಿಟ್ಟು ವನಮಾಲೆ ಧರಿಸಿದ ||
ವತ್ಸಾಂಕಿತ ಹೃದಯ ನಮ್ಮೆಲ್ಲರ ಕಣ್ಮಣಿ |
ವಶವಲ್ಲ ತಾನೊಬ್ಬರ, ಸಕಲರೂ ಅವನವಶ || 1 ||
ಬೇಗ ಬರುವೆನೆಂದು ಪೇಳಿ ಪೋದವನ |
ಮಂಗಳೆಯರೆಲ್ಲಾ ಅವನ ಬರವ ಕಾಯುತ ||
ಅಂಗಸಂಗ ರಾಸಲೀಲೆಯ ನೆನೆ ನೆನೆಸಿ |
ಕಂಗಳಾಶ್ರುವಿನಿಂದ ತುಂಬಿ ಕಾಯುತಿರೆÉ || 2 ||
ಲಕ್ಷಿಸದೇ ಗೋಪಿಯರ ಅಳಲು |
ಗೋಕುಲ ಬಿಟ್ಟು ಭರದಿಂ ತೆರಳಿದವನ ||
ಮೋಕ್ಷರಸ ವೀಕ್ಷಿಸುತ ಕಾಯುತಿಹೆವು |
ಲಕ್ಷ್ಮೀಪತಿ ಶ್ರೀಕೃಷ್ಣವಿಠ್ಠಲನ ತಂದು ತೋರು || 3 ||
"ಕುಚೇಲೋಪಾಖ್ಯಾನ"
146. ಸಾಂದೀಪನಿ ಗುರ್ವಾಶ್ರಮದಲ್ಲಿದ್ದ ಸಹಪಾಠಿ ತಾನೆಂದು ಬೀಗದೆ |
ಅಂದು ಹೊರಟ ಕುಚೇಲ ಬ್ರಾಹ್ಮಣನೊಬ್ಬ ಶ್ರೀಕೃಷ್ಣ ದರುಶನಕೆ || 1 ||
ಮಡದಿ ತಂದಿತ್ತ ಎರವಲು ಅವಲಕ್ಕಿ ಹರಕು ಬಟ್ಟೆಗಂಟು ಕಂಕುಳಲಿಟ್ಟು |
ಎದುರಲವನ ಕಾಣಲು ಕಂಬನಿ ಮಿಡಿದು ತೆÀಕ್ಕೈಸಿ ಬಿಕ್ಕುತ ಸ್ಮರಿಸಿ ಕಳೆದ ದಿನಗಳ ||2||
ಪಾದ ತೊಳೆದು ಬ್ರಾಹ್ಮಣನ ಪರಿಪರಿಯಲಿ ಉಪಚರಿಸಿದ ರುಕ್ಮಿಣಿ ಸಮೇತನಾಗಿ |
ಎದ್ದು ಹೋಗಿ ಬರುವೆನೆಂದವನ ಸಂತೋಷದಿ ಬೀಳ್ಕೊಟ್ಟ ಸರ್ವವಿದಿತನು || 3 ||
ಬೇಡದೇನೂ ಹಿಂತಿರುಗಿದವ ಕಂಡ ಸತಿ ಸುತರ ಸಂಪದ್ಭರಿತ ಆನಂದಿತರ |
ನೀಡಿದರೆನಗೆ ನಿನ್ನೇ ನೀಡು ಬೇರೇನೊ ಬೇಡದಂತೆ ಮಾಡು ಎಂದ ಕಣ್ಣಾಲಿ ತುಂಬಿ ||4||
ಬೇಡದಿದ್ದರೂ ಭಕ್ತನ ಮನದಿಚ್ಛೆ ಅರಿತುಕೊಳ್ಳುವ ಹೃದ್ಗುಹಾವಾಸಿ |
ಒಡೆಯ ಶ್ರೀಕೃಷ್ಣವಿಠ್ಠಲ ಮಾಡಿದುಪಕಾರವ ನೆನೆನೆನೆದು ಪುಳಕಿತನಾದ || 5 ||
"ಶ್ರೀ ಮದ್ಭಾಗವತ"
147. ನಾರಾಯಣ ಮಂತ್ರ ಜಪಿತ ನಾರದ ಪ್ರಾರ್ಥಿಸಿದಂತೆ ಬಾ- |
ದರಾಯಣ ರಚಿಸಿದ ಶ್ರೀಮದ್ಭಾಗವತ ಆನಂದದಿ || 1 ||
ವಿರಾಗಿ ಶುಕಮುನಿಗೆ ಪೇಳಿದರ್ಮೊದಲು ಒಲುಮೆಯಿಂದಲಿ |
ಹರಿ ಪ್ರೇರಿತ ಶುಕರು ಸಂಚರಿಸುತ ಬಂದರು ಗಂಗಾ ತಟಕೆ || 2 ||
ಪರೀಕ್ಷಿತರಾಜ ಪರಮಭಾಗ್ಯದಿ ಭಾಗವತೋಪದೇಶ ಪಡೆದವರಿಂದಲಿ |
ನಿರ್ಮಲ ಮನದಿ ನಿರೀಕ್ಷಿಸುತ ಕಾಲಾಗಮನ ಸಪ್ತದಿನ ಪರ್ಯಂತ || 3 ||
ಖಟ್ವಾಂಗರಾಜ ಮೂಹುರ್ತದಿ ಸಾಧಿಸಿದ ಸತ್ಯಲೋಕ ಖಗಪತಿ ಧ್ಯಾನದಿ |
ಸಟೆಯಲ್ಲ ಶ್ರೀಮದ್ಭಾಗವತ ನೀಡುವುದು ಸಕಲೇಷ್ಟಗಳ ಇಹಪರದಿ || 4 ||
ಪುಷ್ಟಿ ಕೊಡುವುದು, ಸಂತುಷ್ಟಿ ಕೊಡುವುದು ಸಕಲ ಸಜ್ಜನರ ಮನಕೆ |
ದಿಟವಿದು ಶ್ರೀ ಕೃಷ್ಣ ವಿಠ್ಠಲನಾಣೆಗೂ ಸತ್ಯ, ಸತ್ಯ, ಪರಮ ಸತ್ಯ || 5 ||
148. ದರುಶನ ತೋರೋ ದಯಾನಿಧೇ ಘನಶ್ಯಾಮ |
ದುರಿತರಾಶಿ ತರಿದು ಒಲವಿಂದ ದಯೆ ತೋರು || ಪ ||
ಕರೆದಾಕ್ಷಣ ಬಂದು ಕರಿಯ ಪೊರೆದೆ |
ಆರ್ತಳಾದ ದ್ರೌಪದಿಗೆ ಅಕ್ಷಯಾಂಬರವಿತ್ತೆ ||
ಪೋರ ಪ್ರಲ್ಹಾದಗೆ ಇದ್ದಲ್ಲಿ ಬಂದು ದರ್ಶನವಿತ್ತೆ |
ಹರಿಧ್ಯಾನಿಪ ಧ್ರುವಗೆ ಒಲಿದುಎದುರು ನಿಂತೆ || 1 ||
ಕರೆಯದೆಯೆ ಸರಳ ಗೋಪಾಲರೊಡನಾಡಿದೆ |
ನಾರಾಯಣನೆಂದೊಮ್ಮೆ ಕರೆಯಲು ಮೋಕ್ಷವಿತ್ತೆ ||
ಆರ್ತಕರೆಯಾಲಿಸಿ ಒದಗುವ ನರಹರಿಯೇ |
ಭರ್ತೃ ಶ್ರೀಕೃಷ್ಣವಿಠ್ಠಲಾ ನಿನ್ನ ದರ್ಶನ ಎನಗೆಂದೀವೆ ? || 2 ||
149. ಸ್ವರ್ಗಾದಿ ಲೋಕಗಳಲ್ಲಿ ಇಡಬೇಡಾ ಎನ್ನನ್ನು |
ಸರ್ವದಾ ಶ್ರೀಕೃಷ್ಣವಿಠ್ಠಲ ನಿನ್ನ ಪಾದತಳದಲ್ಲಿಡು || 1 ||
ಜಡಮತಿಯಾಗಲಿ ಮತಿವಂತನಾಗಲಿ ಪ್ರತಿ ಜನುಮದಿ |
ದೃಢ ಭಕುತಿ ನಿನ್ನಲಿ ನೀಡು ಶ್ರೀಕೃಷ್ಣವಿಠ್ಠಲ || 2 ||
ಭಕ್ತಜನರು ಮುಂದೆ ನೀನವರ ಹಿಂದೆಯಂತೆ
ಭಕ್ತವತ್ಸಲ ಶ್ರೀಕೃಷ್ಣವಿಠ್ಠಲ ಸದಾಭಕ್ತಿ ನೀಡು || 3 ||
ಭಕ್ತಿಯಿಂದ ಬೇಡಿದ್ದು ನೀಡುವ ಅಕ್ಷಯದಾಯಕ |
ಶ್ರೀಕೃಷ್ಣವಿಠ್ಠಲ ನಿನ್ನೇ ಸದಾ ಬೇಡುವಂತೆ ಮಾಡು || 4 ||
ಯಾವ ಪುಣ್ಯ ಲೋಕದಲ್ಲೂ ಆಸೆ ಇರಿಸದೆ ಎನಗೆ |
ಕೈವಲ್ಯದಾಯಕ ಶ್ರೀಕೃಷ್ಣವಿಠ್ಠಲ ಸೇವೆ ಭಾಗ್ಯಕರುಣಿಸು || 5 ||
ಅಜ್ಞಾನದಿ ನಾ ಮರೆತರೂ ನೀ ಮರೆಯದಿದ್ದರೆ ಸಾಕು |
ಸುಜ್ಞಾನಮೂರ್ತಿ ಶ್ರೀಕೃಷ್ಣವಿಠ್ಠಲನ ಕೃಪೆಯಾದರೆ ಧನ್ಯೆ || 6 ||
"ಮಾನಸ ಪೂಜೆ"
150. ದಿವ್ಯ ಪೂಜೆ ಮಾಡಿರೋ ಭಗವಂತನ ಮನದಣಿಯ |
ಕಾಸು ಖರ್ಚಿಲ್ಲದೆ ಹೊರಗಿರುವ ಸ್ವಾಮಿಯೇ ಅಂತರಂಗದಲ್ಲಿರುವನೆಂದು || ಪ ||
ಮನವ ಶುಚಿಮಾಡಿ ಸಾರಿಸಿ ಚಕ್ರಾಬ್ಜ ಮಂಡಲದಿ |
ಒಂದೇ ಮನದಿ ಕರೆದು ಉನ್ನತ ಪೀಠದಿ ಕುಳ್ಳಿರಿಸಿ ||
ಅಘ್ರ್ಯಪಾದ್ಯಾಚಮನ ಮದುಪರ್ಕದಿ ಉಪಚರಿಸಿ |
ಸಕಲ ಪವಿತ್ರ ಜಲ ಸ್ಮರಿಸಿ ಶುದ್ಧೋದಕ ಸ್ನಾನ ಮಾಡಿಸಿ || 1 ||
ಶ್ರೇಷ್ಠ ದುಕೂಲವ ಉಡಿಸಿ ಮೇಲೆ ವಸ್ತ್ರ ಹೊದಿಸಿರಿ |
ಸರ್ವಾಲಂಕಾರ ಮಾಡಿ ಕಿರೀಟ, ಹಾರ, ಕೇಯೂರ ||
ಕಡಗ, ಕಂಕಣ, ಮಕರಕುಂಡಲ, ಕಸ್ತೂರಿ ತಿಲಕ ಇಡಿ |
ತುಳಸಿ, ಶ್ರೀಗಂಧ, ಪುಷ್ಪದಿಂದ ಅರ್ಚಿಸಿ ಮೆಚ್ಚಿಸಿ || 2 ||
ಸರ್ವಭಕ್ಷ, ಭೋಜ್ಯ, ಫಲ, ತಾಂಬೂಲ ನೈವೇದ್ಯವ ಅರ್ಪಿಸಿ |
ಸರ್ವವಿಧ ಆರತಿ ಬೆಳಗಿ ಪ್ರದಕ್ಷಿಣ ನಮಸ್ಕಾರ ಸಲ್ಲಿಸಿ |
ಷೋಡಶೋಪಚಾರ ಒಂದೇ ಮನದಿ ಮಾಡಿ ಸಂತೋಷಿಸಿ |
ಸರ್ವ ಸಮರ್ಪಣವೆಂದು ತನ್ನನ್ನೇ ಶ್ರೀಕೃಷ್ಣವಿಠ್ಠಲಗರ್ಪಿಸಿ ಮಾನಸಪೂಜೆ ಮಾಡಿರಿ || 3 ||
151. ರಂಗಾ ನಿನ್ನ ಅಂಗಸಂಗವಿತ್ತು ಸಲಹೋ | ನಂದೇನೋ ಸಕಲವೂ ನಿನ್ನದೇ || 1 ||
ಸಂಸಾರ ಸೃಷ್ಟಿಸಿ ಸುಖ- ದುಃಖವಿತ್ತು | ಇಂದ್ರಿಯದಾಸೆಗೆ ಬಲಿಪಡಿಸಿ || 2 ||
ಸಂಚಿತ ಕರ್ಮ ಪ್ರಾರಬ್ಧವನುಣಿಸಿ | ಸಂದಣಿಸುವ ಲೆಕ್ಕಿಗ ಮಿತಿ ಉಂಟೇನೋ || 3 ||
ಬಂಧ ಮೋಕ್ಷ ಕೊಡುವ, ಬಿಡಿಸುವ | ಚೆಂದದ ಪರಿಪೂರ್ಣಗುಣ ಸಾಗರನೇ || 4 ||
ನುಂಗುವೆ ಸಕಲ ಲಯಕಾಲದಿ ಬಿಡದೆ | ಬೊಮ್ಮಾಂಡನಾಯಕ ಶ್ರೀಕೃಷ್ಣವಿಠ್ಠಲ || 5 ||
152. ಅಂತಿಲ್ಲ ಇಂತಿಲ್ಲ ಸುಳ್ಳಿನ ಕಂತೆಯೆ ಮೊದಲಿಲ್ಲ |
ಅಂತರಂಗದಿ ಅಂತರ್ಯಾಮಿ ಕಾಣಲು ಅಸಂಭವವೇನಿಲ್ಲ || ಪ ||
ಅಸಂಪ್ರಾಜ್ಞಾತ ಸ್ಥಿತಿಯೇ ಬೇಕಿಲ್ಲ, ಆಡಂಬರಗಳ ಮಾತೇ ಬೇಡಾ |
ಸರ್ವವ್ಯಾಪಿತ ಶ್ರೀಕೃಷ್ಣವಿಠ್ಠಲನ ದೃಷ್ಟಿಸಲು ಒಳಗಣ್ಣಿದ್ದರೆ ಸಾಕು || 1 ||
ಆನಂದದಿ ಮಾಡಿದ ಸುಕರ್ಮವ ಭಕ್ತಿಯಲಿ ಸಮರ್ಪಿಸೆ |
ಅನಂತ ಫಲ ಕೊಡುವ ನಮ್ಮ ಶ್ರೀಕೃಷ್ಣವಿಠ್ಠಲ ಬಿಡದೆ || 2 ||
ಸುರಾಸುರ, ಧನಿಕನಿರ್ಧನಿಕ ಎಂದು ಭೇದವಿಲ್ಲದೆ ಒಲಿವ |
ಆರ್ತಿಯ ಕರೆಗೆ ಓಡೋಡಿ ಬರುವ ನಮ್ಮ ಶ್ರೀಕೃಷ್ಣವಿಠ್ಠಲ || 3 ||
ಅಲ್ಲಿ ಇದ್ದಾನೆ ಇಲ್ಲಿ ಇದ್ದಾನೆ ಎನ್ನದೇ ಭಗವಂತನ ಸರ್ವತ್ರ ಕಾಣು |
ಅಚಿಂತ್ಯಾದ್ಭುತ ನಮ್ಮ ಶ್ರೀಕೃಷ್ಣವಿಠ್ಠಲ ಎಲ್ಲಿ ಕಡೆ ಕಂಡಾನು || 4 ||
ಆನಂದಪೂರ್ಣ ನಿತ್ಯತೃಪ್ತನಿಗೆ ಕೊಡುವುದೇನೂ ಬೇಕಿಲ್ಲ ಕೊಡುವುದಾದರೆ |
ಅಭಿಮಾನ ಬಿಟ್ಟು ಒಂದೇ ಮನದಿ ತನ್ನನೇ ಕೊಟ್ಟರೆ ಸಾಕು ಶ್ರೀಕೃಷ್ಣವಿಠ್ಠಲ ಸ್ವೀಕರಿಪ || 5 ||
153. ನಾ ಧನವಂತ ಸೌಭಾಗ್ಯವಂತ ಭಗವಂತನೆಂಬೋ |
ಸುಧನ ಪೊಂದಿದ ಮಾನವಂತ ||
ವಿಷಯ ಸುಖ ಬೇಡದ, ಅನ್ಯ ದೇವತಾರಾಧಿಸದ |
ಎಂದೆಂದೂ ಅಲ್ಪ ವರ ಅಪೇಕ್ಷಿಸದ ಗುಣವಂತ ||
ಹಿಡಿ ಹಿಟ್ಟಿಗಾಗಿ ಕಲ್ಪವೃಕ್ಷವ ಪೀಡಿಸದೇ ಸಂಸಾರತಾರಕ |
ಶ್ರೀಕೃಷ್ಣವಿಠ್ಠಲನ ಎಂದೆಂದೂ ಏನು ಬೇಡದ ಬುದ್ಧಿವಂತ |
ಬೇಡುವುದಾದರೆ ಮೋಕ್ಷಪ್ರದ ಅಕ್ಷಯನನ್ನೆ ಬೇಡುವೆ ||
154. ಅಲ್ಲಿ ಅಲೆದೆ ಇಲ್ಲಿ ಅಲೆದೆ ಎಲ್ಲೆಲ್ಲೊ ಅಂಡಲೆದೆ |
ಬಲ್ಲದೇ ನಿಜ ಸುಖದ ನೆಲೆಯಾ || ಪ ||
ಶೃಂಗಾರದಿ ಮೈಮೆರೆತೆ ಬಂಗಾರ ಭಗವಂತನರಿಯದೆ |
ಸಂಗ ತೊರೆಯದೆ ಮಂಗನಂತೆ ಕುಣಿದಾಡಿದೆ || 1 ||
ಸುತ್ತಿ ಸುತ್ತಿ ಸೋತು ಮತ್ತೆ ಗತ್ತು ಬಿಡದೆ |
ಆರ್ತತೆಯ ಭಾವ ಅರಿಯದೆ ಕರ್ತೃನ ಕಡೆಗಣಿಸಿದೆ || 2 ||
ಮಣಿಸಿ ಹಣೆಯ ಸಕಲೆಡೆ ಸುಣ್ಣವಾದೆನಾದರೂ
ಕಣ ಕಣದಲ್ಲಿರುವನ ಚಣ ಕಾಲವೂ ಕಾಣದಾದೆ || 3 ||
ಅಕ್ಷಯದಾತನ ಮರೆತು ಸಕಲಾಪೇಕ್ಷೆ ಬಯಸಿದೆ |
ಸಾಕ್ಷಿ ಶ್ರೀಕೃಷ್ಣವಿಠ್ಠಲನ ಪಾದಭಕ್ತಿಯೇ ನಿಜಸುಖದನೆಲೆ ಎಂದರಿಯದೆ || 4 ||
155. ಗುರು ಕರುಣೆಯಿಂದ ಹರಿ ಸ್ಮರಣೆಯಾಗಲಿ || ಪ ||
ನಿರಂತರ ಜಪದಿಂದ ಹರಿ ದರುಶನವಾಗಲಿ || ಅ ||
ಜಪ-ತಪಗಳೊಂದು ಅರಿಯದೆ |
ವೃತ ನೇಮಗಳೊಂದು ಸಾಧಿಸದೆ ||
ಸುಖಲೋಲುಪದಿ ಜೀವಿಸಿದೆ |
ಹೀಗೇ ಜನುಮ ಹೋಯಿತಲ್ಲ || 1 ||
ಸಾಧನ ಶರೀರವೆಂದು ತಿಳಿಯದೆ |
ವ್ಯರ್ಥವಾಗಿ ದಿನ ಕಳೆಯುತಾ ||
ಇನ್ನಾದರೂ ಗುರುಗಳೊಲುಮೆಯಿಂದ |
ಶ್ರೀಕೃಷ್ಣವಿಠ್ಠಲನ ಸೇವಾ ಭಾಗ್ಯಸಿಗಲಿ || 2 ||
156. ನಿನ್ನ ಸ್ಮರಣೆ ದಯಪಾಲಿಸೋ | ಜೀಯಾ | ನಿನ್ನ ಪ್ರೇರಣೆ ಇಲ್ಲದೆ
ದೊರೆಯದೋ ಈ ಭಾಗ್ಯ || ಪ ||
ಜ್ಞಾನಿ ನೀನು, ಅಜ್ಞಾನಿ ನಾ ನಿನ್ನ ಗುಣಗಳರಿಯೆ |
ಭಕ್ತಿಗೆ ಒಲಿದು ಮುಕ್ತಿಯ ನೀಡುವವ ನೀನೆ || 1 ||
ಅನಂತ ಗುಣಗಳ ಮಹಿಮನೇ, ಭವಪಾಶ ಮೋಚಕನೇ |
ಪಂಚಭೇದ, ತಾರತಮ್ಯ ಜ್ಞಾನ ಕೊಟ್ಟು ಸಲಹೋ ಕರುಣಾಕರನೇ || 2 ||
ನನ್ನನು ಅರಿಯೇ, ನಿನ್ನನು ತಿಳಿಯೇ ಅಸ್ವತಂತ್ರ ನಾನು |
ಸೂತ್ರಧಾರಿ ಶ್ರೀಕೃಷ್ಣವಿಠ್ಠಲ ಎಲ್ಲ ನೀನಾಡಿಸಿದಂತೆ || 3 ||
157. ಸದಾ ಸಿರಿವಂತ ಆಗುವಂತೆ ಅನುಗ್ರಹಿಸೋ ಸಿರಿವಲ್ಲಭ ನಿನ್ನ ದಯದಿ || ಪ ||
ಭಕ್ತಜನರ ಸಂಗದಿ ಕುಟುಂಬ ಸಿರಿವಂತವಾಗಲಿ |
ಸದಾ ನಿನ್ನ ನಾಮಜಪದಿ ಕೋಟಿ ಸಿರಿವಂತವಾಗಲಿ ||
ಎನ್ನ ಹೃದಯದಿ ನೀನೇ ನೆಲಸಿ ಲಕ್ಷ್ಮೀಪತಿ ನಿವಾಸವಾಗಲಿ |
ಸಮಾನ ಭಾವದಿ ಸರ್ವರಲಿ ಸರಸಿಜನಾಭನ ಕಾಣುವಂತಾಗಲಿ || 1 ||
ನಿನ್ನ ಪಾದ ದರುಶನದ ಆಶೆ ಮನದಿ ಹೆಚ್ಚುತಿರಲಿ |
ಎನ್ನ ಪಾಪರಾಶಿ ಎಂಬ ಬಡತನ ಕರಗಲಿ ||
ಭಕ್ತಿ, ಜ್ಞಾನದ ಧನಕನಕ ರಾಶಿ ಸಿಗುವಂತಾಗಲಿ |
ಶ್ರೀಕೃಷ್ಣವಿಠ್ಠಲನ ದಯದಿ ಈ ದುರಾಸೆ ಎಂದಿಗೂ ಇರಲಿ || 2 ||
158. ನಮಿಪೆ ಶ್ರೀಹರಿಪಾದಪದ್ಮಕೆ, ಮುಕುತಿಪಥ ತೋರುವಪಾದ |
ಅಮಿತ ಸೂರ್ಯ ಸಮಪ್ರಭ ನಖಕಾಂತಿಯುಕ್ತ ಪಾದ ||
ಋಷಿಮುನಿ ವಂದಿತ ಪಾದ, ಶಂಖ ಚಕ್ರಾಂಕಿತ ಪಾದ |
ಜಾಹ್ನವಿಜನಕ ಪಾದ, ಸರ್ವಲೋಕಗಳಳೆದ ಪಾದ || 1 ||
ಅಂಗುಷ್ಟದಿ ಭೂಮಿಯ ಒತ್ತಿದ ಪಾದ, ಜಾನಕಿ ಸೇವಿತ ಪಾದ |
ಅಹಲ್ಯೋದ್ಧಾರಕ ಪಾದ, ಶಬರಿ ಭಕ್ತಿಯಲಿ ಪೂಜಿಪ ಪಾದ ||
ದ್ವಿಜ ಸ್ಮರಿಸುವ ಪಾದ, ಸದಾ ಹೃನ್ಮನದಲ್ಲಿ ನೆನೆವ ಪಾದ |
ಭಕ್ತರಿಗೊಲಿದು, ದರುಶನದಿ ದಯಪಾಲಿಪ ಪಾದ, ಅದುವೇ ಶ್ರೀಕೃಷ್ಣವಿಠ್ಠಲನ ದಿವ್ಯಪಾದ || 2 ||
159. ನಿನ್ನ ಇಚ್ಛೆಯೇ ನನ್ನ ಇಚ್ಛೆಯಾಗಲಿ |
ನಿನ್ನ ಸೇವೆಯೇ ನನ್ನ ಕರ್ಮವಾಗಲಿ || 1 ||
ನಿನ್ನ ಧ್ಯಾನ ನಿರಂತರ ನನ್ನದಾಗಲಿ |
ನನ್ನ ಆತ್ಮ ಎಂದೂ ಪರಮಾತ್ಮ ನಿನ್ನದಾಗಲಿ || 2 ||
ನನ್ನದೆಂಬುದು ಎಲ್ಲಾ ನಿನ್ನದಾಗಲಿ |
ನನ್ನ ಮೇಲೆ ಸದಾನುಗ್ರಹ ನಿನ್ನದಿರಲಿ || 3 ||
ನಾನು ನಿನ್ನವಳೆಂದು ಮಾತ್ರ ಮರೆಯದಿರು |
ನನಗೆ ಶ್ರೀಕೃಷ್ಣವಿಠ್ಠಲನ ಸ್ಮರಣೆವೊಂದೇ ಸಾಕು || 4 ||
160. ಸುಗುಣಾಂತರಂಗ ಸಂಸಾರ ಭಯತಾರಕ |
ಸುಂದರ ಮೂರುತಿ ಸಕಲ ಪಾಪ ಪರಿಹಾರಕ || 1 ||
ಸವೋತ್ತಮ ಸರ್ವ ಪರಿ ಪಾಲಕ |
ಸರ್ವೇಶ ಸರ್ವ ಶಬ್ದವಾಚ್ಯ ಸರ್ವಜ್ಞ || 2 ||
ಸೃಷ್ಟಿಕರ್ತ ಸರ್ವಾಭೀಷ್ಟ ಫಲಪ್ರದಾತ |
ಸರ್ವಾಂತರ್ಯಾಮಿ ಶ್ರೀಕೃಷ್ಣವಿಠ್ಠಲ ಸಕಲರ ಸಲಹಲಿ || 3 ||
161. ಚದುರಂಗವ ನಾಡಿದ ಚದುರ ಚತುರ್ಯುಗದಿ || ಪ ||
ಚೆಂದದಿ ನೋಡಿ ಕಾಯಿಯ ನಡೆಸಿ ಮಾಯದಿ || ಅ ||
ಲೋಕವ ಹಾಸನ್ನಾಗಿಸಿ ಚೇತನಾಚೇತನರ ಕಾಯನ್ನಾಗಿಸಿ |
ಸಕಲರ ಅಂತರಂಗವರಿತು ತಾ ಮುನ್ನಡೆಸಿದ || 1 ||
ಸಾಧನೆ ಮಾರ್ಗದಿ ನಡೆದವರೆಷ್ಟೋ ಮನೆಗಳ ಹಾರಿ ಕುಣಿದವರೆಷ್ಟೋ |
ಕೊಂದವರೆಷ್ಟೋ ಕರ್ಮಾನುಸಾರದಿ ಕೊಲ್ಲಿಸಿ ಕೊಂಡವರೆಷ್ಟೋ || 2 ||
ಕುಣಿಸಿದಂತೆ ಕುಣಿವ ಬಿಂಬದ ಪ್ರತಿಬಿಂಬ ತಾನೆಂದರಿಯದೆ |
ಮಣಿದು ಸ್ವತಂತ್ರ ಸರ್ವೋತ್ತಮ ಶ್ರೀಕೃಷ್ಣವಿಠ್ಠಲನ ತಿಳಿಯದೆ ಬಳಲುತಾ || 3 ||