ಉಗಾಭೋಗಗಳು
83. ಮಧ್ವಮತದಿ ಹರಿಯೇ ಗುರು, ಹರಿಯೇ ಶ್ರೇಷ್ಠ |
ಬುಧಜನ ಪೇಳ್ವರು ತತ್ವವ ಈ ಜಗಸತ್ಯ ನಿತ್ಯ ||
ಸಾಧನದಿ ಭಕ್ತಿಯೇ ಉತ್ತಮ ತ್ರಿಕಾಲದಿ |
ಪಡೆಯಲು ನಿತ್ಯಸುಖ, ನಿಜ ಮುಕುತಿಯಲಿ
ವೇದವೇ ಸಾಕ್ಷಿ ಶ್ರೀಕೃಷ್ಣವಿಠ್ಠಲನಾಣೆಗೂ ||
84. ವೇದವೇ ಸರ್ವಧರ್ಮದ ಮೂಲ | ವೇದವೇ ಮೂಲ
ಪರಮಾತ್ಮನರಿವಿಗೆ ||
ವೇದದಿ ಪೇಳಿದಂತೆ ಶ್ರೀಕೃಷ್ಣವಿಠ್ಠಲನಾ | ರಾಧಿಪರಿಗೆ ಶ್ರೇಷ್ಠ ಪರಗತಿಯೇ
ಪ್ರಾಪ್ತಿ ||
85. ಭಾಸ್ಕರನ ದಯದಿ ಆರೋಗ್ಯ | ಐಶ್ವರ್ಯವು ಅಗ್ನಿ ದಯದಿ
ಈಶ್ವರನ ದಯದಿ ಜ್ಞಾನವು | ಮೋಕ್ಷ ಸಿಗುವುದು ಶ್ರೀಕೃಷ್ಣವಿಠ್ಠಲನ ದಯದಿ |
86. ಮಧುರ ಕೆನೆಮೊಸರು | ಮಧುರ ಸವಿ ಜೇನು |
ಮಧುರ ಆಮ್ರರಸ | ಮಧುರಾತಿ ಅಮೃತ |
ಮಧುರಾತೀ ಮಧುರತಮ | ಮಧುರಾಧಿಪತಿ ಶ್ರೀಕೃಷ್ಣವಿಠ್ಠಲನಾಮ ||
87. ಅಲ್ಲಿಯೂ, ಇಲ್ಲಿಯೂ, ಎಲ್ಲೆಲ್ಲಿಯೂ ಇರುವವ ಪರಿಪೂರ್ಣವ್ಯಾಪುತ |
ಮಲಗಿದಾಗಲೂ, ಕುಳಿತಾಗಲೂ, ನಡೆವಾಗಲೂ, ಸ್ಮರಿಸು ಹೃದಯಸ್ಥ ಶ್ರೀಕೃಷ್ಣವಿಠ್ಠಲನ ||
88. ಮುಂಜಾವಿನಿಂದ ಸಂಜೆವರೆಗೆ | ಸಂಜೆಯಿಂದ ಮುಂಜಾವಿನವರೆಗೆ ||
ಕಂಜನಾಭ ನಾ ಮಾಡುವ ಕರ್ಮವೆಲ್ಲಾ | ಅಂಜನಾಪುತ್ರಾಂತರ್ಗತ ಶ್ರೀಕೃಷ್ಣವಿಠ್ಠಲ ನಿನಗೊಪ್ಪಿಸುವೆ ಸಲಹೋ ||
89. ಅರಿತು ಮಾಡುವ ಕರ್ಮ ಶ್ರೇಷ್ಠ | ಅರಿತು ಪೇಳುವ ವಾಣಿ ಉತ್ತಮ
ಅರಿತು ಮನದಿ ಆಲೋಚಿಸಿ ನಡೆಸು | ಶ್ರೀ ಕೃಷ್ಣವಿಠ್ಠಲಾ ಅರಿವಿನ ಗುರು ನೀನೇ||
90. ನೀನಿದ್ದರೆ ನಾನಿರುವೆ - ನೀನೆದ್ದರೆ ನಾನೆಲ್ಲಿರುವೆ ? |
ನಿನ್ನೊಳು ನಾನಿರುವೆ - ನನ್ನೊಳು ನೀನಿರುವೆ ||
ನನ್ನ - ನಿನ್ನ ಸಂಬಂಧ ಬಿಡಿಸಲಾಗದ ನಂಟು |
ಏನೀ ಒಗಟು ಗಂಟು ಬಿಡಿಸು ಶ್ರೀಕೃಷ್ಣವಿಠ್ಠಲಾ ||
ವಿವರಣೆ - ಲಯ ಕಾಲದಲ್ಲಿ ಪರಮಾತ್ಮನ ಉದರದಲ್ಲಿ ಜೀವರ ವಾಸ ಹಾಗೂ ಜೀವಿಯ ಹೃದ್ಗುಹಾವಾಸಿ ಪರಮಾತ್ಮ.
91. ಅನೇಕಾನೇಕ ಶಿರ, ನೇತ್ರ, ಪಾದ, ಬಾಹುವಿಗೆ ನಮಃ |
ಅನೇಕಾನೇಕ ರೂಪ ಪರಮಾತ್ಮನಿಗೆ ನಮಃ ||
ಅನೇಕಾನೇಕ ಹೆಸರಿನ ಪುರುಷ ಶಾಶ್ವತಗೇ ನಮಃ |
ಅನೇಕಾನೇಕ ಯುಗಗಳಲ್ಲವತರಿಸುವ ಶ್ರೀಕೃಷ್ಣವಿಠ್ಠಲ ತೇ ನಮೋ ನಮಃ ||
92. ತನ್ನತನವ ಬಿಡದೆ ಇನ್ನೊಬ್ಬರಿಗೂ ಪೂರ್ಣ ತಿಳಿಸದೆ |
"ಅನ್ನಂದೇಹಿ" ಎಂದವರಿಗೆ ನಾಸ್ತಿ ಎನ್ನದೆ ||
ಉನ್ನತ ಪ್ರಾರ್ಥಿಪರಿಗೆ ಇಹ-ಪರ ಸುಖವೀವ |
ಮನವನಿತ್ತರೆ ತನ್ನನೀವ ಶ್ರೀ ಕೃಷ್ಣವಿಠ್ಠಲನು ಭಕ್ತರ ವಶ ||
93. ಒಮ್ಮೆ ಹಾಡಿ ಹೊಗಳಿ ಕುಣಿದರೂ ಸರಿ | ಒಮ್ಮೆ ನೋಡಿ ಬೇಡಿ
ಕಾಡಿದರೂ ಸರಿ ||
ಒಮ್ಮೆ ಬಳಿ ಸಾರಿ ಕರೆದರೂ ಸರಿ | ಸುಮ್ಮಾನದಿ ಶ್ರೀಕೃಷ್ಣವಿಠ್ಠಲ ಕರಪಿಡಿವ ||
94. ಗುರು ಕರುಣೆ ಇಲ್ಲದೆ ಹರಿ ಒಲುಮೆಯಾಗದು | ಹರಿಯೊಲುಮೆ ಇಲ್ಲದೆ
ಸಾಧನೆ ಸಾಗದು ||
ಗುರಿ ತಲುಪದ ಮಾನವ ಜನ್ಮವ್ಯರ್ಥ | ಸರ್ವವೂ ಸಾಧ್ಯ ಶ್ರೀಕೃಷ್ಣವಿಠ್ಠಲನ ದಯದಿ ||
95. ಅಂಜೆನು ಬಿರುಗಾಳಿ, ಮಳೆ, ಬಿಸಿಲಿಗೆ | ಅಂಜೆನು ಕಷ್ಟ ಕೋಟಲೆಗಳ
ಸರಮಾಲೆಗೆ ||
ಅಂಜೆನು ಲೋಕೋಪವಾದ ನಿಂದೆಗೆ | ಅಂಜುವೇ ಶ್ರೀಕೃಷ್ಣವಿಠ್ಠಲ ನೀ ಎನ್ನ ತೊರೆದರೆ ||
96. ಅಲ್ಲೂ ಇಹನು, ಇಲ್ಲೂ ಇಹನು | ಎಲ್ಲೆಲ್ಲೂ ಅವನೇ ಇಹನು ||
ಒಳಗೂ ಇಹನು ಹೊರಗೂ ಇಹನು | ಲೀಲಾಮಾನುಷ ಸೃಷ್ಠಿಕರ್ತ ||
ಪ್ರಳಯ ಜಲದಿ ಪವಡಿಪನೊಬ್ಬನೇ | ಎಲ್ಲಾ ಬಲ್ಲ ನಮ್ಮ ಶ್ರೀಕೃಷ್ಣವಿಠ್ಠಲ ||
97. ಅದ್ಭುತ ಲೀಲೆಗೈದ ನಂದನಂದನ | ನಂದ ಗೋಪರೆಲ್ಲಾ ಗೋವರ್ಧನವ
ಪೂಜಿಸಲು ||
ಇಂದ್ರ ರೋಷದಿ ಮುಸಲಧಾರೆ ಸುರಿಸೆ | ಭೂಧರ ಕಿರುಬೆರಳಲೆತ್ತಿ ಸಂರಕ್ಷಿಸಿದ ||
ವೇದ ಪ್ರತಿಪಾದ್ಯ ಶ್ರೀಕೃಷ್ಣವಿಠ್ಠಲ | ಮಾಡಿದ ದೇವೇಂದ್ರನ ಗರ್ವಾಪಹಾರ ||
98. ಹಿರಿಯರಿಲ್ಲದ ಮನೆ ಹಗೇವಿನಂತೆ | ಮಕ್ಕಳಿಲ್ಲದ ಮನೆ ಮಸಣದಂತೆ ||
ಹೃತ್ಕಮಲದಿ ಶ್ರೀಕೃಷ್ಣವಿಠ್ಠಲ ನಿಲ್ಲದಿರೆ | ದೇಹವು ಶವದಂತೆ ಕಾಣಿರೋ ||
99. ಒಪ್ಪಿಕೋ ಧರ್ಮಶಾಸ್ತ್ರಗಳ ತಿಳಿದು | ಅರ್ಪಿಸಿಕೋ ಶ್ರೀ ಕೃಷ್ಣವಿಠ್ಠಲನ
ಸೇವೆಗೆ ಸದಾ ||
ತಪ್ಪು ನೋಡದೆ ಅಪ್ಪಿಕೊಳ್ಳುವನು | ಸಪ್ಪೆ ಜೀವನ ಸಾರ್ಥಕವಾಗುವುದು ||
100. ದಂಡಿಸಿ ದೇಹವ ಬಿಡಿಸಿ ಕಾಮವ | ಭಂಡ ಜೀವವು ಕಂಡ ಕಂಡಲ್ಲಿ ||
ಅಂಡಲೆಯದಂತೆ ಮಾಡಿ ದಯದಿ | ಪುಂಡರೀಕಾಕ್ಷ ಶ್ರೀಕೃಷ್ಣವಿಠ್ಠಲಾ ನಿನ್ನಲ್ಲೇ ನಿಲ್ಲಿಸು ||
101. ಚಿತ್ತಕ್ಕೆ ಬಂದಂತೆ ಇರಿಸೋ | ಚಿತ್ತದಿ ನೀನಿಂದು ಸದಾ ||
ಚಿತ್ತಾಪಹಾರಿ, ನಾ ನಿನ್ನವನೆಂದು | ಚಿತ್ತೈಸು ಶ್ರೀಕೃಷ್ಣವಿಠ್ಠಲನೇ ||
102. ಬೇಡ ಬೇಡ ಎನಗೇನು ಬೇಡ | ಬೇಡದಂತೆ ಮಾಡು ಎನ್ನ ಸದಾ ||
ಬೇಡಿದರೆ ನಿನ್ನಲ್ಲಿ ಶುದ್ಧಭಕ್ತಿ | ಬೇಡುವಂತೆ ಮಾಡು ಎನ್ನೊಡೆಯಾ ಶ್ರೀಕೃಷ್ಣವಿಠ್ಠಲ ||
103. ನೀನೇ ಪೂರ್ಣಾನಂದ, ಜ್ಞಾನವಂತ | ನೀನೇ ಗುಣಪೂರ್ಣ
ದೋಷದೂರ ||
ನಿನಗೇ ನೀನೆ ಸಮ ಶ್ರೀಕೃಷ್ಠವಿಠ್ಠಲ ಅಧಿಕರಾರಿಲ್ಲ | ನಿನ್ನ ಸಂಪೂರ್ಣ ಬಲ್ಲವರ್ಯಾರು? ||
104. ಹರಿನಾಮಜಪ ಸಂಸಾರತಾರಕ ಪುಣ್ಯದಾಯಕ ಸದಾ |
ಹರಿದ್ವೇಷಿಯಾಗಿ ಸಂಸಾರದಿ ಸುಖಿಸುವುದು ಬೇಡ ||
ಹರಿಪ್ರಿಯಳಾಗಿ ನರಕದಿ ಹೊರಳಾಡುವುದುಚಿತ ಕಾಣೋ |
ಹರಿ ಶ್ರೀಕೃಷ್ಣವಿಠ್ಠಲನ ನೆನೆವ ಭೃತ್ಯಗೆ ನರಕವೆಲ್ಲಿದೆ ? ||
105. ಗೀತಾಚಾರ್ಯ ವಸುದೇವಾತ್ಮಜ ಯದುಕುಲಚಂದ್ರ ಸತ್ಯಸಂಕಲ್ಪ |
ಚತುರ ರುಕ್ಮಿಣೀಶ ಶ್ರೀಕೃಷ್ಣವಿಠ್ಠಲ ಪರಬ್ರಹ್ಮಣೇ ನಮೋ ನಮಃ ||
106. ಚತುರ್ಭುಜಸ್ಥ ಶಂಖ ಚಕ್ರಧಾರಿ | ಸತತ ಯೋಗ ಮುದ್ರಾವಸ್ಥಾ |
ಕಂತುಪಿತ ಶ್ರೀಬದರಿನಾರಾಯಣ ಸ್ವಯಂ | ಸತ್ಯರೂಪಿ ಶ್ರೀಕೃಷ್ಣವಿಠ್ಠಲ ||
107. ಉಡುಪಿಯಲಿ ನಿಂತ ಬಾಲಕೃಷ್ಣ | ಕಡೆಗೋಲು ನೇಣ ಪಿಡಿದಿರುವ ||
ಸದ್ಭಕ್ತರ ಮನ ಸೆಳೆದು ಪೋಷಿಸುವ | ಒಡೆಯಾ ಶ್ರೀಕೃಷ್ಣವಿಠ್ಠಲ ಎಂದಿಗೂ ಕೈ ಬಿಡ ||
108. ಆಹಾರ - ವಿಹಾರ, ನಿದ್ರೆ - ಮೈಥುನ |
ಒಣ ಪ್ರತಿಷ್ಠೆ ಹಿಂದೆ ತಿರುಗುವರು ನಿತ್ಯ ||
ಪರಮಾಪ್ತ ಸಖ ಶ್ರೀ ಕೃಷ್ಣವಿಠ್ಠಲನ |
ಸ್ಮರಣೆಗೆ ಸಮಯವಿಲ್ಲ ವೆನ್ನುವರು ||
109. ಚೊಕ್ಕ ಚಿನ್ನವಾಗಿರುವ ಚಿನ್ಮಯರೂಪ |
ಸರ್ವಾಭರಣಭೂಷಿತ ಸರ್ವಾಂಗ ಸುಂದರ || 1 ||
ಶುದ್ಧ ಭಕ್ತಿಗೆ ಒಲಿವ ಶ್ರೀಕೃಷ್ಣವಿಠ್ಠಲನೇ ||
ನಿಜ ಭಕ್ತಿಪಾಲಿಸು ಇಲ್ಲಾ ಎನ್ನನ್ನು ಸ್ವೀಕರಿಸು || 2 ||
110. ಎನ್ನಲಿ ನಿಂತು ನುಡಿಸಿ, ನಡೆಸುವವ ಪರಮಾತ್ಮನಿರಲಾಗಿ |
ಎನಗೇಕೆ ಕರ್ಮಲೇಪದ ಸಂಸಾರ ಭಯ ||
ಸಂಚಿತ ಆಗಾಮಿ ಕರ್ಮಗಳ ಹತ್ತಿಯ ಬೆಟ್ಟದ ರಾಶಿ ಸುಡಲು |
ಶ್ರೀಕೃಷ್ಣವಿಠ್ಠಲಾಪರೋಕ್ಷ ಕಿಡಿಯೊಂದೇ ಸಾಲದೆ ||
111. ಸುಜ್ಞಾನಿಗಳು ತೋರಿಪ ದಾರಿಯಲಿ |
ಕಣ್ಮುಚ್ಚಿ ಓಡಿದರೂ ಬೀಳದೆ ||
ಕನಸಿನಂತೆ ಸರಾಗವಾಗಿ ತೇಲಿ |
ಪುನಃ ಬರದಂತೆ ತಲುಪುವೆವು ಶ್ರೀಕೃಷ್ಣವಿಠ್ಠಲನಪುರ ||
112. ಧ್ಯಾನಿಸು ಜಗದೇಕವಂದ್ಯ ಶ್ರೀ ವಿಷ್ಣುರೂಪ ಹೃದಯಾಕಾಶದಿ |
ಕಿರೀಟ, ಶಂಖ, ಚಕ್ರಧರಿತ ಬ್ರಹ್ಮರುದ್ರೇಂದ್ರ ವಂದ್ಯ ಯೋಗಿಯ ||
ಕಮಲ ಪೀಠದಿ ವಿರಾಜಿಪ ಮಂದಹಾಸ ಬೀರುವ ಸದಾ |
ಶ್ರೀರುಕ್ಮಿಣಿ ಸತ್ಯಭಾಮಾಸಹಿತ ಶ್ರೀಕೃಷ್ಣವಿಠ್ಠಲ ಸಕಲ ಪ್ರದಾತ ||
113. ಗುಣಪೂರ್ಣ ಜ್ಞಾನ ಸ್ವರೂಪ | ಆನಂದರೂಪ ರಕ್ಷಕ ||
ಓಂ ನಮೋ ಸುಖಸ್ವರೂಪತ | ವಿನಾಶರಹಿತ ಸರ್ವವ್ಯಾಪ್ತ -
ಶ್ರೀಕೃಷ್ಣವಿಠ್ಠಲಾಯ ನಮಃ ||
114. ನಾರಾಯಣಂ ನಮಸ್ಕøತ್ಯ ದೇವಂ ದೇವಕಿನಂದನಮ್ |
ವಂದೇ ಜಗದ್ರಕ್ಷಕತಮಂ ದೀನ ಬಂಧುಂ ಸದಾಶ್ರಯೇ ||
ಸರ್ವಪಾಪ ಪ್ರಶಮನಂ ಸದ್ಭಕ್ತಿಪ್ರದಾಯಕಮ್ |
ಕರುಣಾವಾರುಣ ಸಂಪೂರ್ಣಂ ನೌಮಿ ಶ್ರೀಕೃಷ್ಣವಿಠ್ಠಲಂ ||
"ನವವಿಧ ಭಕ್ತಿ"
115. ಕೇಳು ನೀ ಕೇಶವ ಗಾಥಾ | ಓಲೈಸಿ ಕೀರ್ತಿಸು ಸದಾ ಕೃಷ್ಣನ ||
ಲೀಲೆಗಳ ಸ್ಮರಿಸು ಸಂತತ ಶ್ರೀ ಹರಿಯ | ಒಲ್ಮೆಯಿಂ ಪಾದ ಸೇವಿಸು ಪದ್ಮನಾಭನ ||
ಬಲು ಅರ್ಚಿಸು ಅಚ್ಯುತಾನಂತನ | ಒಳಗೇ ವಂದಿಸು ವಿಷ್ಣು ವ್ಯಾಪಿಯ ||
ಒಳ್ಳೇ ದಾಸನಾಗು ನಾರಸಿಂಹನ | ಮೆಲ್ಲ ಸಖ್ಯ ಬೆಳಸು ನಾರಾಯಣನಲಿ ||
ಬಲ್ಲಿದ ಆತ್ಮ ನಿವೇದಿಸು ಗೋವಿಂದಗೆ | ಚೆಲ್ವ ಶ್ರೀಕೃಷ್ಣವಿಠ್ಠಲ ನಿನ್ನೇ ಮೆಚ್ಚುವಾ ||
116. ಬಿಂಬದಂತೆ ಪ್ರತಿಬಿಂಬ, ಬಿಂಬ ಚಲಿಸಿದೊಡೆ ಪ್ರತಿಬಿಂಬ ಚಲಿಸುವುದು |
ವಸ್ತು ಚಲಿಸಿದೊಡೆ ನೆರಳು ಚಲಿಸುವಂತೆ, ದೃಷ್ಟಿ, ಸೃಷ್ಟಿ ಒಬ್ಬನದೇ ||
ತೈಲಕೆ ಧಾರೆಯಂತೆ, ಕಣ್ಣಿಗೆ ದೃಷ್ಟಿಯಂತೆ |
ಕೋಗಿಲೆಗೆ ವಸಂತದಂತೆ, ಸರಸಿಗೆ ಸೂರ್ಯನಂತೆ |
ಆತ್ಮಸಖ ಶ್ರೀಕೃಷ್ಣವಿಠ್ಠಲನ ಇಚ್ಛೆಯಲಿ ಕ್ರಿಯೆ ನಡೆಯುವುದು ||
117. ಚಕೋರಿಗೆ ಚಂದ್ರಮ, ಬೆಳಕಿಗೆ ಸೂರ್ಯ |
ಜೀವಕೆ ಜೀವನ ಶರೀರ, ಬದುಕಲು ಪ್ರಾಣ ||
ಭಕ್ತಗೆ ಭಗವಂತ, ಆತ್ಮಕ್ಕೆ ಪರಮಾತ್ಮನಂತೆ |
ಎನಗೆ ಆಪ್ತಸಖ ಶ್ರೀಕೃಷ್ಣವಿಠ್ಠಲನೊಬ್ಬನೇ ||
118. ನಾನಿರುವುದು ಸಂಸಾರದಲಿ, ಎನ್ನ ಮನವಿರುವುದು ವಿರಕ್ತಿಯಲಿ |
ವೈರಾಗ್ಯವಿರಲಿ ಅನ್ಯ ವಿಷಯದಲಿ, ಸುರಾಗವಿರಲಿ ನಿನ್ನ ಪಾದ ಕಮಲದಲಿ ||
ಅಜ್ಞಾನವಿರಲಿ ಜಗದ ವಿಚಾರದಲಿ, ಸುಜ್ಞಾನ ಪಾಲಿಸೋ ನಿನ್ನಲಿ |
ಶ್ರೀಕೃಷ್ಣವಿಠ್ಠಲ ಎನ್ನ ಹೃದಯ ಮಂದಿರದಿ ನಿತ್ಯ ನೀನೇ ವಿರಾಜಿಸೋ ಸ್ವಾಮಿ ||
119. ಪರಿಪರಿ ನರರಿಂದೇನು ಫಲ ? | ಬಂಧನ ತೊಡಿಸುವರ ಸಂಗದಿಂದೇನು ಫಲ? ||
ಬಂಧನ ಬಿಡಿಸುವ ಬಿಂದುಮಾಧವನ ಸಂಗ ಸುಖ | ಮಾಡದಿರೆ ಮಾನವ ಜನುಮವಿದ್ದೇನು ಫಲ? ||
ನರರಿಗಿಂತ ಸುರೋತ್ತಮ, ಸರ್ವೋತ್ತಮ ಶ್ರೀಕೃಷ್ಣವಿಠ್ಠಲಗೆ | ಸರ್ವಸಮರ್ಪಣೆ ಮಾಡೆ ಕರೆದು ಸಾಯುಜ್ಯ ಕೊಡುವ ||
120. ಸದಾ ಶ್ರವಣ ಸತತ ಕೀರ್ತನದಿ ಸ್ಮರಿಸಿ |
ಮುದದಿ ಪಾದ ಸೇವನೆ ಪೂಜಾರ್ಚನೆ ||
ವಂದಿಸಿ ನಿಷ್ಕಳಂಕದಿ ಸೇವಿಸು ದಾಸ್ಯದಿ |
ಎಡಬಿಡದೇ ಸಖನಂತಿಹಗೆ ಪ್ರೀತಿಯಿಂ ||
ಮಾಡು ಶ್ರೀಕೃಷ್ಣವಿಠ್ಠಲಗೆ ಆತ್ಮ ಸಮರ್ಪಣೆ
ಕೊಡುವ ಮುಕ್ತಿಯ ತ್ವರಿತದಿ ಕರೆದು ||
121. ಸರಿಯುವುದು ಸಮಯ ಅರಿವಿಲ್ಲದೆ |
ಮರೆಯದೆ ಮುನ್ನಮಾಡು ಹರಿಸೇವೆ ||
ಸದಾ ಶ್ರವಣನಿರುತನಾಗು ಹರಿಕಥೆಯಲಿ |
ಸದಾ ಕೀರ್ತಿಸು ಚಿತ್ತದಿ ಹರಿ ಮಹಾತ್ಮೆಯಾ ||
ಸದಾ ಧ್ಯಾನಿಸು ಅಂತ್ಯವಿಲ್ಲದ ಹರಿ ಗುಣಗಳ |
ಸದಾ ಸ್ಮರಿಸು ಹರಿ ಮಾಡಿದ ಮಹೋಪಕಾರಗಳ ||
ಸದಾ ಸಖ್ಯ ಬೆಳಸು ಹರಿ ನಿಜಭಕ್ತರಲಿ |
ಸದಾ ಸೇವಿಸು ಪ್ರೀತಿಯಿಂ ಹರಿಪ್ರಸಾದವ ||
ಸದಾ ಸತ್ಕರ್ಮಾಚರಣೆಯೇ ಉಸಿರಾಗಿರಲಿ |
ಸದಾ ಅಘ್ರಾಣಿಸು ಹರಿ ನಿರ್ಮಾಲ್ಯವ ||
ಸದಾ ಓಡಾಡುವುದು ತೀರ್ಥಯಾತ್ರೆಯಾಗಲಿ |
ಸದಾ ದೃಷ್ಟಿಸು ಒಲುಮೆಯಿಂದ ಹರಿ ಸೃಷ್ಟಿಯ ||
ಸದಾ ಮಾಡಿದ ಕೆಲಸವ ಹರಿಗರ್ಪಿಸು |
ಸದಾ ನಡೆಯುವುದೆಲ್ಲಾ ಹರಿ ಪ್ರೇರಣೆಯೆನ್ನು |
ಸದಾನಂದಾತ್ಮ ಶ್ರೀಕೃಷ್ಣವಿಠ್ಠಲನೊಲಿವ ||