ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ನರಸಿಂಹ ಸುಳಾದಿ

52. ಪಾಹಿ ನರಸಿಂಹ, ಶ್ರೀ ಲಕ್ಷ್ಮೀ ನರಸಿಂಹ | ಪ್ರಲ್ಹಾದ ವರದ ಭಕ್ತ ವತ್ಸಲನೇ || - ಪಾಹಿ ||

ತಂದೆ ಹಿರಣ್ಯಕ ತರಳ ಬಾಲಕನಿಗೆ ಕೋಪದಿಂ ಕೇಳಿದ |

ಎಡಬಿಡದ ನಿನ್ನೊಡೆಯ ಎಲ್ಲಿರುವ ತೋರೆನಗೆ ||

ಖಡುಗದಿಂ ಸ್ತಂಭ ಒಡೆದು ನೋಡಲು |

ಗಡಗಡನೆ ಕಂಬ ಸಿಡಿ ಸಿಡಿದು ಉರುಳಲು ||

ಒಡನೆಯೇ ಅರ್ಧ ನರ-ಮೃಗ ವೇಷದಿ ಹೊರಬಂದ |

ಕಡು ಕೆಂಪಾದ ಕಣ್ಗಳು ಗಿರಗಿರನೆ ತಿರುಗಿಸುತ ಕೋಪದಿ ||

ಕೂದಲನು ಛಟೀ ಛಳಿರೆಂದು ಝಾಡಿಸುತ |

ನಿಡಿ ಸುಯ್ಯುತ ಸುರ್ರ ಸುರ್ರೆಂದು ಬಿಸಿ ಉಸಿರು ಜೋರಾಗಿ ||

ಕಡಿಯುತ ಪಲ್ಗಳ ಕಟಕಟನೆಂದು ಸಿಂಹನಾದ |

ಮಾಡುತ ಭುಸು ಭುಸುಗುಡುತ ದಿಟ್ಟಿಸುತ ||

ಉದಿಸಿದ ನರಸಿಂಗ ಭಯಂಕರ ರೂಪದಿ |

ಕಂಡ ಕಂಡಲ್ಲಿ ಚೆಂಡಾಡಿದ ಅಸುರರ ರಕ್ತದೊಕುಳಿ ಚೆಲ್ಲಿದ ||

ನೋಡಿದ ಹಿರಣ್ಯಕಶ್ಯಪನ ದುರು ದುರುಗುಟ್ಟಿ |

ದಡ ಬಡನೆ ನಡೆದವನೆಡೆಗೆ ದಾಪುಗಾಲಿಟ್ಟು ||

ಹಿಡಿದವನ ಮುಂಗೈ ಸರಸರನೆಳೆದು ತಂದು ಮುಸ್ಸಂಜೆಯಲಿ |

ತೊಡೆಯಲಿರಿಸಿಕೊಂಡು ತಾ ಕುಳಿತ ಹೊಸ್ತಿಲಲಿ ||

ಭಡ ಭಡನೆ ನಖದಿ ಉದರವ ಸೀಳಿ ಕರಕರನೆ |

ತಾ ಧರಿಸಿದವನ ರಕ್ತಸಿಕ್ತ ಕರುಳ ಮಾಲೆ ಅಂದದಿ ||

ಎಂದೆಂದೂ ಕಾಣದ ಅದ್ಭುತ | ಆಗಾಧ ರೂಪವ ಕಂಡು |

ಶ್ರೀದೇವಿ ಸುತ ಬ್ರಹ್ಮಾದಿಗಳು ಭಯದಿ ಪ್ರಾರ್ಥಿಸಲು ||

ಒಡೆಯ ಒಲಿಯದೇ ಕೆಂಡಾಮಂಡಲವಾಗೇ ಇರಲು |

ಮುಂದೆ ಮಾಡಿ ಬಾಲಕನ ಸಾರಿದರು ಭಕ್ತಿ ಮಹಿಮೆಯ ||

ಮಧುಸೂದನನ ಸಂತೈಸಲು ತರಳ ಪ್ರಲ್ಹಾದನು ಪ್ರಾರ್ಥಿಸೆ |

ನುಡಿಗೆ ಮೆಚ್ಚಿ ಒಡನೆ ಶಾಂತನಾದ ಜಗದಂತರ್ಯಾಮಿ ||

ನೀಡಿದ ವರವ ಕರುಣದಿ ಮಾಡಿದ ಪಟ್ಟಾಭಿಷೇಕ |

ರುದ್ರಾದಿ ದೇವತೆಗಳು ಸುರಿಸಿದರು ಹೂಮಳೆಯ ||

ಸುಂದರ ಮೂರ್ತಿ ನರಹರಿಯ ಪೂಜಿಸುತ ಸಕಲರು |

ಸುಧರ್ಮನ ಕೊಂಡಾಡಿ ಕರವ ಮುಗಿದರು ಶ್ರೀಕೃಷ್ಣವಿಠ್ಠಲರೇಯಗೆ ||

ಜತ್ತೆ

ವಜ್ರನಖ, ವಜ್ರದಂಷ್ಟ್ರ, ವಜ್ರದೇಹಿ, ಪ್ರಲ್ಹಾದವರದ ನರಸಿಂಹಾಭಿನ್ನ |

ವಜ್ರಾಂಕಿತ ವ್ರಜನಾಯಕ ಶ್ರೀಕೃಷ್ಣವಿಠ್ಠಲ ಸತತ ಸಲಹೆನ್ನ ||

53. ಜಯ ಜಯ ಶ್ರೀನರಸಿಂಹ ಸ್ತಂಭೋದ್ಭವ |

ಜಯ ಜಯ ಸಮಸ್ತ ಲೋಕ ಕಲ್ಯಾಣಕಾರಕ ||

ಜಯ ಜಯ ಹಿರಣ್ಯಕಶ್ಯಪ ಸಂಹಾರಕ |

ಜಯ ಜಯ ತರಳ ಪ್ರಹ್ಲಾದ ವರದಾಯಕ ||

ಜಯ ಜಯ ಬ್ರಹ್ಮ ವಾಯು ಸುರಾದಿ ಪೂಜಿತ |

ಜಯ ಜಯ ನರಸಿಂಹಾಭಿನ್ನ ಶ್ರೀಕೃಷ್ಣವಿಠ್ಠಲ - ಭೋಪರಾಕ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು