ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಮಹಾಲಕ್ಷ್ಮೀದೇವಿ

"ಶ್ರೀ ಮಹಾಲಕ್ಷ್ಮೀದೇವಿ"

32. ಶ್ರೀ ರಮಾ ಕಮಲಾಸನೇ ಅಭಯಹಸ್ತೇ |

ವರಲಕ್ಷ್ಮೀ ಅಂಬುಜಾಕ್ಷೀ ಪದ್ಮಪ್ರಿಯೇ || 1 ||

ಪದ್ಮ ಶಂಖ ಚಕ್ರ ಗದಾಧಾರಿಣಿ |

ವಂದಿಪೆ ಸುಮನಸೆ ಮಹಾಮಾಯೆ || 2 ||

ಸರ್ವಾಲಂಕಾರ ಭೂಷಿತೇ ಸರಸಿಜಾಕ್ಷಿ |

ಶ್ರೀಕೃಷ್ಣವಿಠ್ಠಲ ಪ್ರಿಯೇ ವೇದಾಂತ ವೇದ್ಯಳೇ || 3 ||

33. ಧನ್ಯೆ ಧನ್ಯೆ ಲೋಕಮಾತೆ ಭಕ್ತವತ್ಸಲೆ |

ಜ್ಞಾನಪ್ರದಾಯಿನಿ ಸಂತೋಷದಾಯಿನಿ || 1 ||

ವಿನೂತನೆ ನಿತ್ಯಾವಿಯೋಗಿ ಚಿರಯೌವ್ವನೆ |

ಮಾನಾಪಮಾನ ನಿನ್ನದೇ ಮಹಾಲಕುಮಿ || 2 ||

ಜನನಿ ನೀ ಸರ್ವರಿಗೆ, ಕುಂದೆಣಿಸುವಿಯೇ |

ನನ್ನ ಸುಕರ್ಮವೆಲ್ಲಾ ನಿನ್ನ ಕೃಪೆಯಿಂ ಹರಿಸೇವೆಯಾಗಲಿ || 3 ||

ವರ್ಣಾಭಿಮಾನಿಯೇ ಎನ್ನ ಮಾತೆಲ್ಲಾ ಹರಿಸ್ತುತಿಯಾಗಲಿ |

ಧ್ಯಾನಪ್ರಿಯೇ, ಹರಸು ಶ್ರೀಕೃಷ್ಣವಿಠ್ಠಲನ ದಯೆ ಎನಗಾಗಲಿ || 4 ||

34. ಹರಿಯಂತಿರುವ ಮನವ ಹರಿಯಗೊಡದೆ ನಿರುತ |

ಹರಿಯ ಧ್ಯಾನದಿ ನಿಲಿಸಿ ಹರಸು ತಾಯೇ ಹರಿಪ್ರಿಯೆ || ಪ ||

ಅರಿಯದೇ ಆಗಿರುವ ತಪ್ಪುಗಳ ಅರಿತು ಮನ್ನಿಸು ಎನ್ನ |

ಅರಿಗಳ ತರಿದು ಅರಿವು ನೀಡೇ ಅರವಿಂದ ಪ್ರಿಯೆ || 1 ||

ಬಿಂಬನ ಪ್ರತಿ ಬಿಂಬವೇ ನಾನೆಂದು ನಂಬಿ ಅಂಬುಧಿವಾಸಗೆ ಶರಣೆಂಬೆ

ಅಂಬೆ ಎನ್ನ ಮನವತಿದ್ದಿ ಶ್ರೀಕೃಷ್ಣವಿಠ್ಠಲನಲಿ ಇಂಬುಗೊಡೆ || 2 ||

35. ಮಾರಮಣನ ಪಾದವ ತೋರೇ ತಾಯೇ, ಅಂಬುಜಾಕ್ಷಿಯೇ |

ಪಾರುಗಾಣಿಸು ಭವ ಸಂಸಾರವ ನೀ ದಯದಿ || ಪ ||

ಸುರಗುರವಂದ್ಯ ವಾಯು, ಬ್ರಹ್ಮ ಸುಪೂಜಿತೆ |

ಚಾರು ಚರಣವ ತವಕದಿ ಪಾಲಿಸೆ ತಾಯೇ || ಅ ||

ಮೂರು ಪಾದದಿ ಜಗವನಳೆದ ತ್ರಿವಿಕ್ರಮ |

ತೋರಿದ ಮೊದಲು ವಾಮನ ಪುಟ್ಟ ಬಾಲಕನಾಗಿ ||

ಗಿರಿಯನೆತ್ತಿದ ಕಿರು ಬೆರಳಲಿ ನಂದಕುಮಾರ |

ಪರಮಾದರದಲಿ ಪಾಡಲು ಒಲಿದು ಬರುವ || 1 ||

ಮುರಳಿ ನಾದದಿ ಮೋಹಗೊಳಿಸುವ |

ಜಾರ ಶ್ರೀವೇಣುಲೋಲ ನವನೀತ ಚೋರನ ||

ಎರಗಿ ನಿನ್ನ ಪಾದಕೆ ಬೇಡಿಕೊಂಬೆ ಚಿತ್ತಕ್ಕೆ ತಂದು |

ಸಿರಿಕೃಷ್ಣವಿಠ್ಠಲನ ಪಾದಪದ್ಮ ಸಮೀಪದಲ್ಲಿಡು ಎನ್ನ || 2 ||

36. ಇಂದುವದನೆ ಸಿಂಧುನಂದನೆ ಮಂದಹಾಸಿಯೇ ಮಹಾಲಕ್ಷ್ಮೀ |

ಭದ್ರೇ, ಕಂಗಳು ತೆರೆದು ನೋಡೆ ಕೃಪಾಕಟಾಕ್ಷದಿ ಜಗನ್ಮಾತೆಯೇ || 1 ||

ಪಕ್ಷಿವಾಹನಪ್ರಿಯೆ, ಕ್ಷೀರಾಬ್ಧಿನಂದನೆ ಮಂಗಳಾಂಗಿಯೇ |

ಇಕ್ಷುಚಾಪನ ಪಡೆದ ಸರಸಿಜಾಕ್ಷಿ ನೀಳಕುಂತಳೇ || 2 ||

ಸರ್ವಮಂಗಳೆ ಅಕ್ಷಯದಾತೆ ಶ್ರೀಹರಿಯ ಸದಾಸೇವಿತೆ |

ಉರ್ವಿಯೊಳುತ್ತಮೆ ಬ್ರಹ್ಮರುದ್ರಾದಿ ವಂದ್ಯೆ ಕಮಲನಯನೆ || 3 ||

ನಿಗಮವೇದ್ಯಳೆ ನಲುಮೆಯಿಂ ಹರಸಿ ದರುಶನ ತೋರೆ |

ಜಗದ್ರಕ್ಷಕ ಶ್ರೀಕೃಷ್ಣವಿಠ್ಠಲನ ಭಾಮೆ ಎನ್ನ ಜನನಿಯೇ || 4 ||

37. ಅಮ್ಮಾ ಲಕುಮಿ ದೇವಿ ಬೇಡಿಕೊಂಬೆ ಅನುದಿನ |

ನಲ್ಮೆಯ ಕರೆಯ ಓಲೈಸಿ ಪೇಳು ನಿನ್ನ ಪತಿಗೆ || ಪ ||

ಒಮ್ಮೆಯಾದರೂ ತನ್ನವನೆಂದೆನ್ನ ಸ್ವೀಕರಿಸಲಿ |

ಸುಮ್ಮಾನದಿ ಆಲಿಸಿ ನಿಜ ಭಕ್ತರ ಕರೆಯ || ಅ ||

ನೀನೇ ಪೆತ್ತ ಮಕ್ಕಳ ಕುಂದು ಎಣಿಸುವೆಯಾ ? |

ತಪ್ಪು ಅಕ್ಷಮ್ಯವಾದರೂ ತಾಯಿ ನೀನಲ್ಲವೇ ? ||

ನಾ ಪ್ರತಿದಿನ ಚರಣಕೆರಗಿ ಬೇಡುವೆನಮ್ಮಾ |

ಸಫಲವಾಗುವಂತೆನ್ನ ಜನುಮ ಹರಸಮ್ಮಾ || 1 ||

ಉಪ್ಪಿಲ್ಲದ ಊಟ ಒಗ್ಗುವುದೇ ಜಿಹ್ವೆಗೆ ? |

ಕುಪ್ಪೆಹಣ ತುಂಬಿರಲು ವಾರಸುದಾರನಿಲ್ಲದಂತೆ ||

ಒಪ್ಪಿಸಿರುವೆ ಎನ್ನನ್ನು ನಿಶ್ಚಿಂತೆಯಿಂದ ಒಮ್ಮನದಿ |

ಸಂಪ್ರೀತಿಯಿಂದ ನೆಚ್ಚಿರುವೆ ಮಾಧವನ ಚರಣವ || 2 ||

ಒಪ್ಪುವುದೆ ಶೃಂಗಾರ ಸರ್ವಾಲಂಕಾರದಿ ಮುತ್ತೈದೆಗೆ |

ಕಪ್ಪುಮಣಿ ಮಂಗಳ ಸರ ಕೊರಳಲ್ಲಿ ಇಲ್ಲದಿರೆ ||

ವಿಪುಲ ಧನಕನಕ ಬಂಧುಬಳಗವಿರೆ |

ವಿಫಲವಾಗುವುದು ಪತಿ ಒಲುಮೆ ಇಲ್ಲದಿರೆ || 3 ||

ಕೊಂಪೆಯಲ್ಲಿದ್ದ ಎನ್ನ ಉಪ್ಪರಿಗೆ ಮೇಲಿರಿಸಿ |

ಜೊಂಪೆಯಾಗಿದ್ದೆನ್ನ ಪಾಪಕರಗಿಸಿ ಹಗುರಮಾಡಿ ||

ವಿಪರ್ಯಾಸದಿ ತನ್ನ ಭಕುತಿಯ ದಾರಿ ತೋರಿದ |

ಮುಪ್ಪು, ಬಾಲ್ಯ ಬರದಂತೆ ಮಾಡುವ ಶ್ರೀಕೃಷ್ಣವಿಠ್ಠಲಗೆ ಎನ್ನ ಒಪ್ಪಿಸಮ್ಮಾ || 4 ||

38. ವಂದಿಪೆ ಪಾದ ಸುಂದರಿಯ | ನಾ | ವಂದಿಪೆ ಪಾದ ಮಹಾಲಕುಮಿಯ ||ಪ||

ಇಂದುವದನೆಯ ಮೀನಲೋಚನೆಯ ಸುಸ್ಮಿತೆಯ ಪಾದ ವಂದಿಪೆ ||ಅ||

ಪದುಮಕರ ಪದುಮಪಾದ ಪದುಮಜಾತೆ ತಾಯೇ |

ಪದುಮರಾಗ ಶೋಭೆ ಪದುಮನಾಭ ಪ್ರಿಯೇ ||

ಸದ್ಗುಣವಂತೆ ಶ್ರೀಶವಲ್ಲಭೆ ಭಕ್ತಜನರೊದ್ಧಾರಿಯೇ |

ಆದಿಮಾಯೆ ಸಮನಾ ಬ್ರಹ್ಮಾದಿ ಸುರಗಣ ವಂದಿತೇ || 1 ||

ಚತುರ್ವೇದಾಭಿಮಾನಿಯೇ ಚತುರಳೇ ಸುಮುಖಳೇ |

ನಿತ್ಯ ನಿರ್ಮಲೆ ಸುಮಾಂಗಲ್ಯಧರಿತೆ ಅವಿಕಾರಳೇ ||

ನಿತ್ಯ ತೃಪ್ತಳೆ ನಾರಾಯಣಪಾದ ಸದಾ ಸೇವಿತೇ |

ರತ್ನಖಚಿತ ಕಾಂಚಿ ಪೀತಾಂಬರಧಾರಿ ಮಂದಹಾಸಿಯೇ || 2 ||

ದೇವಿ, ದೇವ ಪುರುಷೋತ್ತಮನ ಆರಾಧಿಪಳೇ, ಮುಕ್ತಳೇ |

ಸರ್ವ ಜೀವ ಭೂತಗಣ ರಕ್ಷಿಪಳೇ ಕರುಣಾ ಕಟಾಕ್ಷದಿ ||

ಸರ್ವಾಲಂಕಾರಭೂಷಿತೇ, ಸುಗಂಧ ಪುಷ್ಪಹಾರ ಧರಿತೇ |

ಸರ್ವಜ್ಞೇ ನಮಾಮಿ ತೇ ಶ್ರೀಕೃಷ್ಣವಿಠ್ಠಲನರ್ಧಾಂಗಿಯೇ || 3 ||

"ಶ್ರೀ ರುಕ್ಮಿಣಿ ಕಲ್ಯಾಣ"

39. ಚೆಲುವೆ ರುಕ್ಮಿಣಿ ಮನ ಸೋತಳು ಚೆಲುವರ ಚೆಲುವಗೆ |

ಬಲು ಮೋಡಿ ಮಾಡುವ ಮುರಳಿ ಮನೋಹರನಿಗೆ || ಪ ||

ಮಹಾ ಸ್ವಯಂವರವೇರ್ಪಡಲು ತಾ ಭಯತೋರುತ |

ಆಹಾರ ಸೇರದೆ ನಿದ್ರೆ ಬಾರದೆ ಚಡಪಡಿಸುತ ||

ಅಹೇಯಗೆ ಬರೆದಳೋಲೆ ತನ್ನಪಹರಿಸಲು ಬಿನ್ನೈಸಿ |

ಬ್ರಾಹ್ಮಣನ ಕರೆಸಿ ಕೈಗಿತ್ತು ಕಳುಹಿದಳು ಆತಂಕದಿ || 1 ||

ಗೋಪಾಲನ ಕಂಡು ಭಕ್ತಿಲಿ ಮೈಮರೆತು ತಾ ನಿಲ್ಲಲು |

ಭೂಪಾಲ ದ್ವಿಜನ ಪಾದಕ್ಕೆರಗಿ ವಿಷಯ ತಿಳಿಯಲು ||

ಗೌಪ್ಯದಿ ತ್ವರಿತದಿ ತೆರಳಿ ರಾಜಕುವರಿಯ ಕಂಡು |

ರೂಪಸಿ ಕೈಪಿಡಿದು ಶೀಘ್ರದಿಂ ರಥಕೆ ಕರೆತಂದನು || 2 ||

ಬೆನ್ನಟ್ಟಿದ ದುಷ್ಟರ ತರಿದಟ್ಟಿ ದಿಟ್ಟತನದಿ |

ಕನಲಿದ ಭ್ರಾತೃನ ಹತ್ಯೆಗೈಲು ಮುಂದಾದ ||

ಕನ್ಯೆ ನೋಟದಿ ಬಿನ್ನೈಸಲು ಜೀವದಿ ಉಳಿಸಿದ |

ಚಿನ್ಮಯ ಕರೆತಂದವಳ ದ್ವಾರಕಾಪುರಿಗೆ || 3 ||

ವೈಭವದಿ ವಿವಾಹ ನಡೆಯಿತಲ್ಲಿ ಸಂಭ್ರಮದಿ |

ನಭದಿ ಸುರರು ಭವದಿ ಪುರಜನರು ಆನಂದಿಸಿದರು ||

ಶೋಭನ ದಕ್ಷತೆ ನಿತ್ಯ ವಧುವರರಿಗೆ ತಳೆದರು |

ಶುಭಾಂಗಿ ಕೈಪಿಡಿದ ವಿನೂತನ ಶ್ರೀಕೃಷ್ಣವಿಠ್ಠಲರೇಯ ಜಯ ಜಯ ||4||

"ಶ್ರೀ ಲಕ್ಷ್ಮೀ ಸ್ವಯಂವರ"

40. ಸಿಂಧು ನಂದನೆಗೆ ಕಲ್ಯಾಣಂ, ನಿತ್ಯಕಲ್ಯಾಣಂ, ಶುಭ ಕಲ್ಯಾಣಂ |

ಸುಂದರವದನೆ, ನಾನಾಭರಣಭೂಷಿತೆ, ಅರವಿಂದಮಾಲೆ ಪಿಡಿದು || 1 ||

ನಿರ್ದೋಷ, ಗುಣಪೂರ್ಣ ಪುರುಷನ ಹುಡುಕುತ್ತಾ ನಡೆದಳು ಸಭೆಯಲಿ |

ಸುಂದರಾತಿ ಸುಂದರರ ಸಾಲಲಿ ಕುಳಿತ ಬ್ರಹ್ಮ-ವಾಯು ರುದ್ರೇಂದ್ರರಲ್ಲಿ || 2 ||

ಕಂಡಳವರ ಗುಣಕಿಂತ ಅಧಿಕ ದೋಷಗಳ ಎಣಿಸಿದಳು ಮನದಿ |

ವೃದ್ಧ ಬ್ರಹ್ಮ, ಚಂಚಲ ವಾಯು, ರುದ್ರನ ಕೋಪ, ಜ್ವಲಿಪ ಸೂರ್ಯನ || 3 ||

ಇಂದ್ರನ ಗರ್ವ, ಚಂದ್ರನ ಕ್ಷಯ, ನೋಡಿ ನಸುನಗುತ ಮುನ್ನಡೆದಳು |

ಬಿಡದ ಕಡು ಕೋಪದ ಸಾಧನಾ ಮಾರ್ಗದ ಋಷಿಗಳ ನೋಡಿದಳು ||4 ||

ಉದ್ದ ಮೂಗಿನ ಗರುಡ, ಹೆಳವ ಶೇಷ, ಜಡನಾದ ವರುಣರ ಬಿಟ್ಟು |

ಕಂಡಳು ನಿರಪೇಕ್ಷ, ನಿರ್ದೋಷ, ಗುಣಪೂರ್ಣನ ಆನಂದದಿ || 5 ||

ಮಂದರಧಾರಿಯನರ್ಧಾಂಗಿ ಲೋಕಮಾತೆ ದೋಷರಹಿತಳು |

ಸುಂದರ ಪುರುಷೋತ್ತಮ ಶ್ರೀಕೃಷ್ಣವಿಠ್ಠಲನ ವರಿಸಿದಳು ನಿತ್ಯಾವಿಯೋಗಿನಿ || 6 ||

41. ಜಯ ಕರವೀರಪುರ ಮಹಾಲಕುಮಿ ಜಯಾ ಜಯಾ |

ಜಯ ಯೋಗಿನಿ ಕಮಲಪೀಠಸ್ಥೇ ಜಯಾ ಜಯಾ ||

ಜಯ ಅಭಯ ಹಸ್ತೇ ಭಕ್ತವತ್ಸಲೆ ಜಯಾ ಜಯಾ |

ಜಯ ಮಾಯಾದೇವಿ ಶಂಖಚಕ್ರಧಾರಿ ಜಯಾ ಜಯಾ ||

ಜಯ ಶ್ರೀವೇದಮಾತಾ ತ್ರಿಗುಣಾತೀತೆ ಜಯಾ ಜಯಾ |

ಜಯ ಸರೋಜ ಭೃಂಗಕುಂತಳೆ ಸುರವಂದ್ಯೇ ಜಯಾ ಜಯಾ ||

ಜಯ ಇಂದಿರೇಶನ ನಿತ್ಯಪಾದ ಸೇವಿತೇ ಜಯಾ ಜಯಾ |

ಜಯ ಶ್ರೀಕೃಷ್ಣವಿಠ್ಠಲ ಹೃದಯಸ್ಥೇ ಪ್ರಿಯೇ ಜಯಾ ಜಯಾ ||

42. ಶ್ರೀ ಕಮಲಾಕ್ಷಿಯೇ ಕಸ್ತೂರಿ ತಿಲಕಧಾರಿಯೆ |

ಶ್ರೀಕರ ಮನೋಹಾರಿಣಿ ಚತುರ್ಭುಜೇ ||

ಶಂಖಚಕ್ರಧಾರಿಣಿ ಪಾಪ ವಿಮೋಚನಿ |

ಅಖಿಲಾಂಡ ಕೋಟಿ ಬ್ರಹ್ಮಾಂಡ ನಾಯಕೀ || 1 ||

ಶ್ರೀಪದ ಸೇವಿತೆ ಸದಾ ಹರಿಗುಣ ಚಿಂತಿತೆ |

ರಿಪುವೈರಿ ಹೃದ್ಗುಹವಾಸಿ ಸದಾ ಮಾನ್ಯೇ ||

ಪಾಪ ಕಳೆವ ತ್ರಿಲೋಕ ಜಗನ್ಮಾತೆ |

ಕೈಪಿಡಿದು ಉದ್ಧರಿಸೆನ್ನ ವೇದಾಭಿಮಾನಿಯೆ || 2 ||

ಕರುಣಿಸು ನಿನ್ನ ಪಾದಸೇವೆ ಭಾಗ್ಯವ |

ಭರದಿಂ ಸಲಹು ನೀ ಕುಂದೆಣಿಸದೆ ||

ಸರ್ವಶಕ್ತಳೇ, ಮಹಾಮಾಯೆ ನಮಿಸುವೆ |

ಶರಣೆಂಬೆ ಪೊರೆ ಎನ್ನ ಪ್ರಿಯ ಶ್ರೀಕೃಷ್ಣವಿಠ್ಠಲನ ರಾಣಿ || 3 ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು