ಶ್ರೀ ಕೃಷ್ಣವಿಠ್ಠಲಪದಗುಚ್ಛ 2
ಮುಂಡಿಗೆಗಳು
324. ನೀನಿದ್ದರೆ ನಾನಿರುವೆ, ನೀನೆದ್ದರೆ ನಾನೆಲ್ಲಿರುವೆ? |
ನಿನ್ನೊಳು ನಾನಿರುವೆ, ನನ್ನೊಳು ನೀನಿರುವೆ ||
ನನ್ನ ನಿನ್ನ ಸಂಬಂಧ ಬಿಡಿಸಲಾಗದ ನಂಟು |
ಏನೀ ಒಗಟು ಶ್ರೀ ಕೃಷ್ಣವಿಟ್ಠಲಾ ||
ಎಎಎ
325. ಮನುಜ ಮನುಜನಾಗಿರಲು ಎರಡನ್ನು
ಮರೆತು ಎರಡನ್ನು ನೆನಪಿಡು |
(ಮಾಡಿದುಪಕಾರ & ಪಡೆದಅಪಕಾರ) & (ಮೃತ್ಯೂ & ದೇವರು)
ಸ್ವೋನ್ನತಿ ಪಡೆಯಬೇಕೆಂದರೆ ಬಿಡು ಎರಡನ್ನು,
ಹಿಡಿ ಘಟ್ಟ್ಯಾಗಿ ಶ್ರೀಕೃಷ್ಣವಿಟ್ಠಲನ ಪಾದ || (ದುರಭಿಮಾನ & ದುರಾಸೆ)
ಎಎಎ
326. ಮೂರ್ಲೋಕದಿ ಇರುವುದೇ ಮೂರರ
ಮೋಜಿನಾಟ ಹುಟ್ಟು, ಬದುಕು, ಸಾವಿನಾಟ |
ಮರೆಯದೇ ಆಡಿ, ಆಡಿಸುವ
ಮೂರ್ಲೋಕದೊಡೆಯ ಜಗದೋದ್ಧಾರಕ || (ಭೂ, ಭುವ, ಸುವ)
ನರಜನ್ಮದಿ ಪ್ರಾತ:, ಮಧ್ಯಾನ್ಹ:, ಸಾಯಂ-ಕಾರ್ಯ,
ಕಾರಣ, ಕರ್ತೃನ ಅರಿತು |
ಪರಮಾತ್ಮನ ಧ್ಯಾನ, ಪ್ರಾಣಾಗ್ನಿಹೋತ್ರದಿ ಭೋಜನ,
ನಂತರ ದಿನದ ಕರ್ಮಸಮರ್ಪಣೆ ||
ಓಂಕಾರ ರೂಪದಿ ಇರುವುದು ಅವಸ್ಥಾತ್ರ್ರಯನ
ವ್ಯಾಪಾರ ಸತತ ನಡೆವುದು | (ವಿಶ್ವ, ತೈಜಸ, ಪ್ರಾಜ್ಞ)
ಭಕ್ತಿ, ಜ್ಞಾನ, ವೈರಾಗ್ಯಕ್ಕಾಗಿ ಸತತ ಪ್ರಯತ್ನ,
ಸ್ವಯೋಗ್ಯತೆ, ದೇವರ ಕೃಪೆ ಬೇಕು ||
ಸತ್ಕಥಾಶ್ರವಣ, ಸಜ್ಜನ ಸಮಾಗಮ, ಸಮೀಚೀನ ಧ್ಯಾನಕ್ಕೆ
ಅಡ್ಡಿಯಾದಾವು ತ್ರಿವಿಧ ಬಾಧೆಗಳು | (ಆದಿಭೌತಿಕ, ಆಧ್ಯಾತ್ಮ, ಅದಿದೈವಿಕ)
ಸುಖಕೆ ಸಾಮಗ್ರಿ ಆಯುಷ್ಯ, ಆರೋಗ್ಯ, ಐಶ್ವರ್ಯ ದೊರೆತರೂ
ತ್ರಿನಾಮ ಸ್ಮರಿಸಲಿಲ್ಲ || (ಅಚ್ಯುತಾನಂತಗೋವಿಂದ)
ಜಾಗ್ರತ, ಸ್ವಪ್ನ, ಸುಷುಪ್ತಿಯಲ್ಲೇ
ಕಳೆಯಿತು ಬಾಲ್ಯ, ಯೌವ್ವನ, ಮುಪ್ಪು
ಹೋಗಲಿಲ್ಲ ಕ್ರೋಧ, ಲೋಭ, ಮೋಹ,
ಬರಲಿಲ್ಲ ಧಾರಣ, ಧ್ಯಾನ, ಸಮಾಧಿ ||
ಜಗದೊಡೆಯಕೊಟ್ಟ ಮನ, ಬುದ್ಧಿ,
ಇಂದ್ರಿಯ ಸುಧರ್ಮಗಳಾಚರಿಸಲಿಲ್ಲ |
ಸುಗುಣವಂತ, ದೋಷದೂರ, ಸ್ವತಂತ್ರನ
ತಿಳಿಯದಾದೆ ಪರಶುಕ್ಲತ್ರಂiÀiರ ಅನುಗ್ರಹವಿಲ್ಲದೆ || (ಲಕ್ಷ್ಮೀ, ಬ್ರಹ್ಮ-ವಾಯು, ಸರಸ್ವತಿ-ಭಾರತಿ)
ಸದ್ವೈಷ್ಣವರ ದ್ವೇಷ, ನಿಷಿದ್ಧ ಇಚ್ಛಾ,
ಆತ್ಮ ಪ್ರಶಂಸೆ ಬಿಡಲಾಗದೆ ತೊಳಲಿದೆ |
ಓಡಾಡಿ, ಮಲಗಿ, ಕುಳಿತೇ ಕಳೆಯಿತು ಕಾಲ,
ಮಾಡಲಿಲ್ಲ ದಾನ, ಧರ್ಮ,ತಪವ ||
ಮರೆಯದಿರು ಮೃತ್ಯು, ದೇವರ
ಹಾಗೂ ದೇವರ ಉಪಕಾರಗಳು |
ಗುರುವಾಗಲೀ ದೇಹ ಜ್ಞಾನ, ವಿಜ್ಞಾನ,
ಸುಜ್ಞಾನಗಳ ಉತ್ಪತ್ತಿ ಸ್ಥಾನ || (ಸಂಗಮ)
ತ್ರಿಗುಣಗಳ ಸುಳಿಯಲ್ಲಿ ಅಳೆಯದಾದೆ ಪೋದಾಯುಷ್ಯ ತ್ರಿಕರಣದಿ |
ಜಗದೀಶ್ವರ ಬಿಂಬರೂಪಿ ಶ್ರೀಕೃಷ್ಣವಿಟ್ಠಲನರಿಯದೆ ವ್ಯರ್ಥಹೊಯಿತು ಜನ್ಮವೆಲ್ಲಾ ||
ಎಎಎ
327. ಪಂಚಭೂತಾತ್ಮಕ ಶರೀರದಿ ಪಂಚಭೇದವರಿತು |
ಪಂಚ ಪಂಚ ಅಂಗಗಳಿಂದ ಮಾಳ್ಪಕರ್ಮವ || (ಜ್ಞಾನ, ಕರ್ಮೇಂದ್ರಿಯಗಳು)
ಪಂಚ ಪ್ರಾಣಾಂತರ್ಗತ, ಪಂಚಕೋಶಾಂತರ್ಗತ |
ಪಂಚ ದೇಹದಿ ನಿರ್ವಂಚನದಿ ಕಾಯ್ಪ ಪಂಚರೂಪಿ ||
ಪಂಚಾಯತನ ಶ್ರೀಕೃಷ್ಣವಿಟ್ಠಲಗೆ ಅರ್ಪಿಸಿ ಸುಖಿಯಾಗೋ ||
(ಪಂಚದೇಹದಿ (ಸ್ವರೂಪ, ಲಿಂಗ, ಅವ್ಯಕ್ತ, ಅನಿರುದ್ದ, ಸ್ಥೂಲದೇಹಗಳು) ಮಾಯಾದೇವಿ ಮಾಯೆಯನ್ನು ಅಪಸರಣ ಮಾಡಿಕೊಳ್ಳುವುದೇ ಜೀವನಮುಕ್ತಿ)
ಎಎಎ
328. ಒಂದರಲ್ಲೇ ಇದ್ದು (ಅನ್ನ), ಒಂದರಿಂದಯೈದು |
ಒಂದೇ ಐದಾಗಿ, ಐದರ ಸಂಬಂಧ ಮಾಡಿಸಿ ||
(ಪಂಚಪ್ರಾಣ-ಪಂಚಕೋಶದಲ್ಲಿರುವ ಅನಿರುದ್ಧಾದಿ)
ಐದರ ಫಲ ಆನಂದದಿಂದ ಉಣಬಡಿಸಿ |
ಕೊಡಮಾಡಿದ ಉಪಕಾರ ಮರೆಯಲುಂಟೆ? ||
ಬದ್ಧರ ಬಿಂದಿಗೆ ಸುಜಲದಿ ತುಂಬಿಸಿ |
ಬಿಡದೇ ನಿತ್ಯಸುಖವೀವ ಶ್ರೀಕೃಷ್ಣವಿಟ್ಠಲನ ಕರುಣೆಗೆ ಎಣೆಯುಂಟೆ?||
ಎಎಎ
329. ಆನು ತಾನಲ್ಲ ತಾನ್ಯಾರೆಂದು ಅರಿವಿಲ್ಲ |
ತಾನೇ (ದೇಹ) ತಾನೆಂದು (ಆತ್ಮ) ಹೇಳುವರು ಜಾಣರಲ್ಲ || || ಪ ||
ಎರಡನ್ನು ತಾ ತಿಳಿದು ಮಾಡಿಲ್ಲ | (ಪಾಪ ಪುಣ್ಯ)
ಎರಡರ ಫಲ ತನ್ನರಿವಿಂದೇ ಅನುಭವಿಸಬೇಕು ||
ಬೇರೆಯವರಿಗೆ ಕೊಡಲಾಗದು | (ಪಾಪ)
ಎರವಲು ಪಡೆಯಲು ಬಾರದು || (ಪುಣ್ಯ) || 1 ||
ಸಟ್ಟುಗದಂತೆ ಅದ್ದಿದೆಡೆ ತಾನಿದ್ದು |
ಒಟ್ಟಿನಲ್ಲಿ ಪಾಯಸವಾಗಲಿ, ಸಾರಾಗಲಿ ||
ಇಟ್ಟಲ್ಲಿ ಇದ್ದು ರುಚಿ ತಿಳಿಯದಿದ್ದರೂ |
ಕಟ್ಟಕಡೆಗೆ ಅದರ ಲೇಪವಾಗುವುದೇ ಸರಿ || || 2 ||
ಬಂದದ್ದೇಕೆ, ಹೋಗುವುದೆಲ್ಲಿ ಗೊತ್ತಾಗದೆ |
ಹಿಂದೆ-ಇಂದು-ಮುಂದಿನದು ಅರಿವಿಲ್ಲದೆ ||
ಮದಡನಂತೆ ನಾನು, ನನ್ನದು, ನನಗಾಗಿಯೆ |
ಬಿದ್ದು ಎದ್ದರೂ ಬುದ್ದಿ ಬರಲಿಲ್ಲ || || 3 ||
ಅಣು ರೇಣುವಿನಲ್ಲಿರುವವನ ತಿಳಿಯದೇ |
ಮಣ್ಣು, ಹೊನ್ನನ್ನು ಪ್ರೀತಿಸಿ ಅಜರಾಮರಂತೆ || (ತಾನೇ ಸ್ಥಿರವೆಂದು ತಿಳಿದು)
ಹೊಣಗೇಡಿಯಂತೆ ಜನ್ಮದ ಗುರಿ ಅರಿಯದೆ |
ಪ್ರಾಣಿ ಪಶುವಿನಂತೆ ದಿನನೂಕಿ ಬದುಕಿದೆ || || 4 ||
ಬೇಡೆಂದರೆ ಬಿಡದು ಬೇಕೆಂದರೆ ಸಿಗದು |
ಕಡೆಗಣಿಸಿದವರ ಮೇಲಕ್ಕೆತ್ತುವುದು ||
ತುದಿಯಲ್ಲಿದ್ದವರ ಕೆಳಗೆ ದೂಕುವುದು |
ವಿಧಿಯಾಟವಲ್ಲದೆ ನಮ್ಮ ಕ್ಯೆಯ್ಯಲ್ಲಿರುವುದೇ? || || 5 ||
ಶ್ವಾಸದ ಪರಿಮಿತಿ ಪೂರ್ವನಿರ್ಧಾರಿತ |
ಕೋಶ ಕೊಟ್ಟರೂ ಸಿಗದು ಹೆಚ್ಚಿನದು ||
ದೇಶ ಸುತ್ತಿದರೂ ದೇಹದಅದ್ಭುತ ಪರಿ ತಿಳಿಯದು |
ಅಸುಪತಿ ದಯದಿ ಕಾಲತ: ಯೋಗ್ಯತಾನುಸಾರ ಪ್ರಾಪ್ತಿ || || 6 ||
ದೋಷ ದೂರನೂ, ಗುಣ ಪೂರ್ಣನೂ ಆದ |
ಅಂಶಿಯ ಅಂಶ ತಾನು ಅನಾದಿಯಂದರಿತು ||
ಆಶಾ ಪಾಶ ಕ್ಲೇಶ ಕಳೆದು ಪ್ರಯತ್ನದಿ |
ವಿಶುದ್ಧ ಭಾವದಿ ಸದ್ಗುಣಗಳ ಜ್ಞಾನ ಪಡೆಯದೆ || || 7 ||
ಮನ್ನಿಸು ಎನ್ನ ತಪ್ಪೆಂದು ಬೇಡಲು |
ಜ್ಞಾನಿ ಜನುಮ ಮತ್ತೆ ಸಿಗುವುದೆ? ||
ಮನುಜನಾದರೂ ಮುನ್ನ ಮಾಡಿದ್ದೇ ಮಾಡಲಿಕ್ಕಿಲ್ಲವೇ? |
ಇನ್ನಾದರೂ ಆದದ್ದಾಗಲಿ ಶ್ರೀಕೃಷ್ಣವಿಟ್ಠಲ ಸ್ಮರಣೆ ಸಂತತವಿರಲಿ || || 8 ||
ಎಎಎ
330. ಸದಾ, ಸದಾ ಚಿಂತೆ ಜೀವಕೆ ಸದಾ ಸಾದಾ ಚಿಂತೆ | (ಜಗದಿ)
ಬಂದು ಹೋಗುವ ಮಧ್ಯೆ ಚಿಂತೆ ಸಾಗರ || || ಪ ||
ಇದ್ದರೂ ಚಿಂತೆ ಇರದಿದ್ದರೂ ಚಿಂತೆ | (ಮಡದಿ ಮಕ್ಕಳು)|
ಬಂದರೂ ಚಿಂತೆ ಬರದಿದ್ದರೂ ಚಿಂತೆ || (ಬಂಧುಗಳು, ಲಾಭ) |
ತಂದರೂ ಚಿಂತೆ ತರದಿದ್ದರೂ ಚಿಂತೆ | (ಧನ, ಕನಕ) |
ಹೋದರೂ ಚಿಂತೆ ಹೋಗದಿದ್ದರೂ ಚಿಂತೆ || (ಸಮಯ) || 1 ||
ಕೊಂದರೂ ಚಿಂತೆ ಕೊಲ್ಲದಿದ್ದರೂ ಚಿಂತೆ | (ಬಾಂಧವ್ಯ)
ನೊಂದರೂ ಚಿಂತೆ ನೋಯದಿದ್ದರೂ ಚಿಂತೆ || (ಮನೋವಿರುದ್ದವಾದಾಗ)
ಉದಾರಿಯಾದರೂ ಚಿಂತೆ ಆಗದಿದ್ದರೂ ಚಿಂತೆ | (ಸ್ವಾರ್ಥನಿಸ್ವಾರ್ಥ)
ಬಂದಾಗಲೂ ಚಿಂತೆ ಹೋದಾಗಲೂ ಚಿಂತೆ || (ಸುಖ-ದು:ಖ) || 2 ||
ಬೇಡಿದರೂ ಚಿಂತೆ ಬೇಡದಿದ್ದರೂ ಚಿಂತೆ | (ಆಸೆ-ನಿರಾಸೆ)
ಹೊಡೆದರೂ ಚಿಂತೆ ಹೊಡೆಯದಿದ್ದರೂ ಚಿಂತೆ || (ಅಹಂ, ಮಮ, ಕಾಮ)
ಮಾಡಿದರೂ ಚಿಂತೆ ಮಾಡದಿದ್ದರೂ ಚಿಂತೆ | (ದಾನ, ಧರ್ಮ, ಕರ್ಮ)
ಕೊಂಡರೂ ಚಿಂತೆ ಕೊಳ್ಳದಿದ್ದಿರೂ ಚಿಂತೆ || (ಬೇರೆಯವರ ಒಡನಾಟ) ||3||
ಸದ್ಗುರು ಪಾದ ನಂಬಿ ಸಾಧನೆ ಮಾರ್ಗದಿಂದಿದ್ದು |
ಬಿದ್ದು ಎದ್ದು ಹೋಗುವ ಮುನ್ನ ಚಿನ್ಮಯಮೂರುತಿ ||
ಉದ್ಧಾರಕರ್ತ ನಮ್ಮ ಶ್ರೀಕೃಷ್ಣವಿಟ್ಠಲನೇ ಗತಿ |
ಎಂದಿಗೂ ಒಂದೇಮನದಿ ಧ್ಯಾನಿಸಿ ಸಂಸಾರಚಿಂತೆ ತಾರಿಸಿ | || 4 ||
ಎಎಎ
331. ಒಬ್ಬನಾಗಿ ಬಂದಿ ಒಬ್ಬನಾಗಿ ಇದ್ದು
ತಬ್ಬಿಬ್ಬು ಸಂಸಾರದಿ ಗಬ್ಬೇರದಂತೆ ತೂಗಿಸಿ ||
ಕೊಬ್ಬೇರಿಸದೆ ಹಬ್ಬದಂತಿದ್ದು ಎಲ್ಲ ಬಿಟ್ಟು |
ಒಬ್ಬನೇ ಹೋಗುವಾಗ ಪರಿತಪಿಸದೆ ||
ಜರ್ಬಾಗಿ ದರ್ಪದಿ ಪಯಣಿಸು ಶ್ರೀಕೃಷ್ಣವಿಟ್ಠಲ ಜೊತೆಯಲಿರುವ ||
ಎಎಎ
332. ಓಡೋಡಿ ಬರುವ ಭಕ್ತವತ್ಸಲ ಸಕಲರನುದ್ಧರಿಸಲು | || ಪ ||
ನೋಡದೆ ಸಮಯ ತ್ವರಿತದಿ ಧಾವಿಸಿ ಬರುವ ದೇವ || || ಅಪ ||
ಪುಟ್ಟ ಬಾಲಕನಿರಲಿ (ಧ್ರುವ), ದೀನಾರ್ತಪ್ರಾಣಿಇರಲಿ | (ಆನೆ)
ಕಷ್ಟದಲ್ಲಿರಲಿ(ದ್ರೌಪದಿ), ಶಾಪಿತಳಾಗಿರಲಿ || (ಅಹಲ್ಯ)
ಇಷ್ಟದಿ ಭಕ್ತಿಯಿಂದ ದಾರಿ ಕಾಯ್ದಿರಲಿ | (ಶಬರಿ) || 1 ||
ಬಡವನಿರಲಿ (ಸುದಾಮ), ಸಖ-ಸಖಿಯಾಗಿರಲಿ || (ಅರ್ಜುನ & ಗೋಪಿಕೆ)
ಭಂಡ ಬಲ್ಲಿದವನಿರಲಿ(ಪ್ರಲ್ಹಾದ), ಅಸುರನಿರಲಿ | (ಬಲಿ)
ಬಿಡದೆ ಸಲಹುವ ಅವರಿದ್ದಲ್ಲಿಗೆ ಪೋಗಿ || || 2 ||
ತ್ರಿವಕ್ರಳಿರಲಿ, ಜ್ಞಾನಾರ್ತಿ ಇರಲಿ | (ಉದ್ಭವ)
ಈವ ಆಭಯ ದು:ಖಭಂಜಕ ||
ಕಾವ ಸರ್ವದಾ ನಮ್ಮ ಶ್ರೀಕೃಷ್ಣವಿಟ್ಠಲ ಭೇದವೆಣಿಸದೆ ||
ಎಎಎ
333. ಮೂರಕ್ಷರದಿಂ ನೆಲಸಿಹ ‘ಓಂಕಾರಾತ್ಮನೆ’ |
ಮೂರುಪಾದ ಮಂತ್ರ ರೂಪನೆ ||
ಮೂರು ವೇದ ಪ್ರತಿಪಾದ್ಯನೆ |
ಮೂರು ಲೋಕಗಳ ಒಡೆಯನೆ ||
ಮೂರು ಕಾಲ, ಗುಣತ: ದೇಶತ: ನೆಲಸಿಹನೆ |
ಮೂರು ರೂಪಾತ್ಮಕ ಗಂಗಾ ಜನಕನೆ ||
ಮೂರು ಕಾರ್ಯಗಳ ಮಾಳ್ಪನೆ |
ಮೂರು ನಾಡಿಗಳಲ್ಲಿ ಗಮಿಸುವ ದೈವನೆ ||
ಮೂರು ಅವಸ್ಥಾ ಕೊಡುವ ಸ್ವಾಮೀಯೆ |
ಕ್ಷರಾಕ್ಷರಗಳ ನಿಯಾಮಕನೆ ||
ಪರಾಕ್ರಮಿ, ಜ್ಞಾನಿ ಗುಣಪೂರ್ಣ ಚಿದಾನಂದ |
ಶರೀರಿ ಸರ್ವಬಿಂಬಸ್ಥ ಶ್ರೀಕೃಷ್ಣವಿಟ್ಠಲೆನ್ನ ಪೊರೆಯೋ ಕರುಣದಿ ||
ಎಎಎ
334. ಒಳಗಿದ್ದದ್ದೇ ಹೊರಗಿದೆ, ಹೊರಗಿದ್ದದ್ದೇ ಅತಿ ಹೊರಗಿದೆ | (ಪಿಂಡಾಂಡ, ಬ್ರಹ್ಮಾಂಡ)
ಕೆಳಗಿದ್ದದ್ದೇ ಮೇಲೆ ಇದೆ, ಮೇಲಿದ್ದದ್ದೇ ಸುತ್ತಲೂ ಇದೆ || (ಪರಮಾತ್ಮ)
ಒಳ್ಳೆಯದು-ಕೆಟ್ಟದ್ದು ತಿಳಿಸುವ ಶಕ್ತಿ ಅದಕಿದೆ | (ಪಾಪ-ಪುಣ್ಯ)
ಕೊಳೆಯನ್ನು ತೊಳೆದು ಶುಭ್ರ ಮಾಡುವುದು || (ಸರ್ವಶಕ್ತ)
ತಿಳಿವು ನೀಡಿ, ತಿದ್ದಿ, ಒಳ್ಳೆಯ ದಾರಿ ತೊರುವುದು | (ಸಾಧನೆಮಾರ್ಗ)
ತಿಳಿಯದಿದ್ದರೆ ಹೊರಳಿ-ಮರಳಿ ಯತ್ನ ಮಾಡಿಸುವುದು || (ಗುರುಮುಖದಿ)
ಕೇಳದಿದ್ದರೆ ತುಳಿದು-ಕೆಡವಿ ಮತ್ತೆ ಕಷ್ಟಪಡಿಸುವುದು | (ಸಂಸಾರದಿ)
ಕೇಳಿದರೆ ಒಳ್ಳೇ ಮಾರ್ಗ ತೋರಿ ಮೇಲೆ ಮೇಲೇರಿಸುವುದು || (ಜ್ಞಾನದಿಂದ)
ತೊಳೆಯುವುದು ಒಳಗಿನ ಕೊಳೆ ಸ್ವಲ್ಪವೂ ಬಿಡದೆ | (ಲಿಂಗಭಂಗ)
ಹೊಳೆಯುವುದು ಶಾಶ್ವತದಿ ಸ್ವಯೋಗ್ಯತಾನುಸಾರದಿ || (ಮುಕ್ತಿಯಲಿ)
ತಿಳಿದು ಇದನು ಬಾಳಿದರೆ ಆಗುವುದು ಜನುಮ ಸಾರ್ಥಕ |
ಒಳಿತು ಹಾರೈಸುವ ಸದಾ ಸರ್ವೇಶ ಶ್ರೀಕೃಷ್ಣವಿಟ್ಠಲ ||
ಎಎಎ
335. ಕದವೇ ಇಲ್ಲ ಆದರೂ ಕದ ತೆರೆ ಎನ್ನುವೆ | (ಕಿವಿ)
ಪದವೇ ಇಲ್ಲ ಆದರೂ ಪದ ಪೇಳಿಸು || (ಶಬ್ದಾತೀತ, ನಾಮೋಚ್ಚಾರ)
ನೋಡದ ಕಂಗಳು ನೋಡುವಂತೆ ಮಾಡು | (ಅದೃಷ್ಟ, ಪರಮಾತ್ಮನ)
ಮಾಡದ ಕೈಗಳು ಮಾಡುವಂತೆ ಮಾಡು || (ನಾಹಂ ಕರ್ತಾ, ಕೈಂಕರ್ಯ)
ಎಂದೂ ಪೋಗದ ಕಾಲುಗಳು ಪೋಗುವಂತಾಗಲಿ |
ಬುದ್ಧಿ, ಮನದಿ ಸ್ಥಿರದಿ ನೆಲಸುವಂತಾಗಲಿ || (ಚಂಚಲತೆ ನೀಗಿ ನಿಶ್ಚಯವಾಗಲಿ)
ಉದ್ಧಾರ ಕರ್ತ ಎನ್ನ ಸ್ವಾಮಿ ಶ್ರೀಕೃಷ್ಣವಿಟ್ಠಲನ ದಯದಿ ||
ಎಎಎ
336. ವಸುವಿನಿಂದ ಜನಿಸಿ, ವಸುವನು ಪಾಲಿಸಿದ |
ವಸುಧೀಶ ಶ್ರೀಕೃಷ್ಣವಿಟ್ಠಲ ವಾಸಿಸೆನ್ನ ಹೃನ್ಮಂದಿರದಿ ||
ಎಎಎ
337. ಸುಂದರಾಂಗ, ಸುಂದರನ ಒಲಿಸುವ ದಾರಿಯೊಂದೇ |
ಒಂದೊಂದ್ಲ ಒಂದು ಮೂಲ ನಾರಾಯಣ ರೂಪ ಸ್ಮರಣೆ ||
ಒಂದೆರಡ್ಲ ಎರಡು ಇಹ-ಪರದೊಳು |
ಒಂದ ಮೂರ್ಲ ಮೂರು ಶ್ರೀ, ಭೂ, ದುರ್ಗಾ ಸಹಿತ ||
ಒಂದನಾಕ್ಲ ನಾಲ್ಕು ಬಾಲ್ಯ, ಕೌಮಾರ, ಯೌವ್ವನ, ವೃದ್ಧ್ಯಾಪ್ಯದಿ |
ಒಂದ ಐದ್ಲ ಐದು ಪಂಚತತ್ವ, ತಾರತಮ್ಯವರಿತು ||
ಒಂದ ಆರ್ಲ ಆರು ಅರಿಷಡ್ವೈರಿಗಳ ತರಿದು |
ಒಂದು ಏಳ್ಲ ಏಳು ಸಪ್ತಧಾತುಗಳಲ್ಲೂ ಇರುವಂತೆ ||
ಒಂದ ಎಂಟ್ಲ ಎಂಟ ಅಷ್ಟಮದಗಳ ಬಿಟ್ಟು |
ಒಂದ ಒಂಬತ್ಲ ಒಂಬತ್ತು ನವವಿಧ ಭಕುತಿಯಲಿ ಭಜಿಸಿ ||
ಒಂದು ಹತ್ಲ ಹತ್ತು ದಶಾವತಾರ ತಿಳಿದು ಪೂರ್ಣಜ್ಞಾನಿಯಾಗಿ |
ಒಂದು ಹನ್ನೊಂದ್ಲ ಹನ್ನೊಂದು ಏಕಾದಶೇಂದ್ರಿಯ ವ್ಯಾಪಾರವರಿತು ||
ಒಂದು ಹನ್ನೆರಡ್ಲ ಹನ್ನೆರಡು ದ್ವಾದಶ ಪುಂಡ್ರ ಧರಿಸಿ ಮೆರೆದರೆ |
ಛಂದದಿ ಬಂದು ಶ್ರೀಕೃಷ್ಣವಿಟ್ಠಲ ಮನದಲಿ ಸ್ಥಿರದಿ ನೆಲೆಸುವ ||
ಎಎಎ
338. ಮಾಡಿದೆ (ದೇಹ), ನೀಡಿದೆ (ಜೀವನ) |
ಕಾಡಿದೆ (ಆಸೆಪೂರೈಕೆಗೆ), ಬೇಡಿದೆ (ಬರದಿದ್ದುದಕೆ) ||
ನೋಡಿದೆ (ಜಗವ), ಆಡಿದೆ (ಬಾಳಿದೆ) |
ಬಾಡಿದೆ (ಮಾನಸಿಕ-ದೈಹಿಕಕಷ್ಟದಿ), ಬೆಂಡಾದೆ (ಸೋತು) ||
ಚೆಂಡಾದೆ (ಯೋನಿಯಿಂದಯೋನಿಗೆ ತಿರುಗಿ), ಬಿಡದೆ (ಸದಾ) |
ಕಾಡದೆ (ತಿರುಗಿಸದೆ), ಒಡೆದು (ಲಿಂಗದೇಹ) ||
ನಾಡಲಿ (ಶಾಶ್ವತನೆಲೆ), ಕೂಡಿಸು (ಮುಕ್ತರೊಂದಿಗೆ ಸೇರಿಸು) |
ಒಡೆಯಾ ಶ್ರೀಕೃಷ್ಣವಿಟ್ಠಲ ಬೇಡುವೆ ಇದೊಂದೇ ||
ಎಎಎ
339. ಉಭಯ ತಿಳಿದವಗೆ ಭಯವಿಲ್ಲ || ಸರ್ವತ್ರ | || ಪ ||
ಉಭಯ ಶಕ್ತಿಗಳು ಪರನ | (ಅಚಿಂತ್ಯ-ವಿಶೇಷ)
ಉಭಯ ರೂಪಗಳು ಪರನ || (ವ್ಯಕ್ತ-ಅವ್ಯಕ್ತ)
ಉಭಯ ಲೋಕಗಳು ಸುಖಕೆ | (ಇಹ-ಪರ)
ಉಭಯ ವ್ಯಾಪ್ತ ಪರಮಾತ್ಮ || (ಬ್ರಹ್ಮಾಂಡ-ಪಿಂಡಾಡ) || 1 ||
ಉಭಯ ವಸ್ತುಗಳು | (ನಿತ್ಯ-ಅನಿತ್ಯ)
ಉಭಯ ಸೃಷ್ಟಿಯನು || (ಜೀವ-ಜಡ)
ಉಭಯ ನಂಬಿಕೆಗಳು | (ಆಸ್ತಿಕ-ನಾಸ್ತಿಕ)
ಉಭಯ ಉಪಾಸನೆಗಳು || (ಸಗುಣ-ನಿರ್ಗುಣ) || 2 ||
ಉಭಯ ಪಂಥಗಳು | (ದೈತ-ಅದೈತ)
ಉಭಯ ದೇಹಗಳು || (ಪ್ರಾಕೃತ-ಅಪ್ರಾಕೃತ)
ಉಭಯ ಅವಸ್ಥೆ ಜೀವಿಗೆ | (ಮುಕ್ತ-ಅಮುಕ್ತ)
ಉಭಯ ಮೃತ್ಯು ಮಾರ್ಗ || (ದೇವ-ಪಿತೃ) || 3 ||
ಉಭಯ ಸ್ಥಿತಿ ಜೀವನದಿ | (ವಿದ್ಯೆ-ಅವಿದ್ಯೆ)
ಉಭಯ ಪ್ರಸಾದ ಅವಶ್ಯ || (ಗುರು-ಹರಿ)
ಉಭಯ ಗುಣಗಳು | (ಭಿನ್ನ-ಅಭಿನ್ನ)
ಉಭಯ ಸಾನಿಧ್ಯ ಅಧ್ಯಾತ್ಮದಿ ||
ಶ್ರೀಭಾರತೀಶ ಅಂತರ್ಗತ ಶ್ರೀಕೃಷ್ಣವಿಟ್ಠಲ ನಮ: ||
ಎಎಎ
340. ನನಗೆ(ಅತ್ಮ) ನಾನೇ(ದೇಹ)ಆಶ್ರಯ ಎಂಬಂತೆ ಕರ್ಮವುಂಬುವಾಗ |
ನನಗೆ(ಜೀವ)ನೀನೇ(ದೇವ)ಆಶ್ರಯ ಸಾಧನದಿ ಅನವರತ ||
ನನ್ನೀ ಜೀವನದಿ ಸುಖಭೋಗ ಉಣುವಾಗ |
ನನ್ನ ಕಾಲನು ಕಾಲನದೂತರ್ಹಿಡಿದು ಎಳೆವಾಗ ತಿಳಿದು ||
ನಿನ್ನ ಕೂಗಿ ಕರೆಯುವಂತೆ ಜ್ಞಾನವಿತ್ತು ಸಲಹೋ |
ಬನ್ನ ಬವಣೆಗೆ ಸಿಲುಕಿ ಸೊರಗಿಕೊರಗದಂತೆ ಮಾಡದೆ ||
ಚೆನ್ನ ಶ್ರೀಕೃಷ್ಣವಿಟ್ಠಲ ಎನ್ನನ್ನೆತ್ತಿ ಉದ್ಧರಿಸೋ ಕಾಲಾಶ್ರಯನೇ ||