ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 2

ಪರಮಾತ್ಮನ ಪದಗಳು

ದಶಾವತಾರ ಸ್ತುತಿ

51. ಪರಮಾತ್ಮ ನಿನ್ನ ನಾಮ ರೂಪಗಳನೇಕ, ಗುಣವಾಚಕವಲ್ಲವೇ? |

ನೀರಲಿ ಶೇಷಶಯನನಾಗಿ, ಪಾಪತೊಳೆವ ನಾರಾಯಣನೆನಿಸಿದೆ ||

ಧರ್ಮವ ರಕ್ಷಿಸಿ, ಪ್ರಳಯದಿ ಮತ್ಸನೆನಿಸಿದೆ |

ವರಾಹನೆನಿಸಿ, ಉರ್ವಿಯ ರಕ್ಷಿಸಿದೆ ||

ಕೂರ್ಮನಾಗಿ ಗಿರಿಯ ಪೊತ್ತೆ, ಅಮೃತವನಿತ್ತೆ |

ವರವಿತ್ತೆ ಪ್ರಹ್ಲಾದಗೆ ಸೌಮ್ಯ ನರಸಿಂಹನೆನಿಸಿದೆ ||

ಸುರ ಸುಂದರ ವಟುವಾಮನನಾಗಿ ತ್ರಿಪಾದ ಭೂಮಿ ಬೇಡಿದೆ |

ಮೂರು ಪಾದದಿ ಭೂಮಿ ಅಳೆದು ತ್ರಿವಿಕ್ರಮನಾಗಿ ಬಲಿಯ ಪಾತಾಳಕ್ಕಟ್ಟಿದೆ ||

ಕ್ಷತ್ರಿಯರ ಸಂಹರಿಸಿ ಭೂಪ್ರದಕ್ಷಣೆ ಮಾಡಿ ಪರಶುರಾಮನೆನಿಸಿದೆ |

ಪಿತೃವಚನಪಾಲಿಸಿ ವನದಿ ಸಂಚರಿಸಿ ರಿಪುಸಂಹರಿಸಿದೆ ಶ್ರೀರಾಮನಾಗಿ ||

ಸರ್ವರ ಆಕರ್ಷಿಸಿ ಮೊದಪ್ರಮೋದವಿತ್ತೆ ನಂದನಕಂದನಾಗಿ |

ತುರು-ಕರು ಕಾಯ್ದೆ ಮೋಹದಿ ಕೊಳಲೂದಿ ಗೋಪಾಲನಾಗಿ ||

ಪರ್ವತವೆತ್ತಿ ಇಂದ್ರನ ಗರ್ವವಳಿದು ಸಕಲರಿಗಾಶ್ರಯವಿತ್ತೆಗೋವರ್ಧನಧಾರಿಯಾಗಿ |

ಚೋರನಂತೆ ಹಾಲು ಬೆಣ್ಣೆ ಮೊಸರು ಕದ್ದು ನವನೀತ ಚೋರನೆನಿಸಿದೆ ||

ಅರಿವನು ಮೂಡಿಸಿ ಜ್ಞಾನವ ಬೋಧಿಸಿ ಧರ್ಮವನುಳುಹಿದೆ ಗೋವಿಂದನಾಗಿ |

ಸರ್ವತ್ರ ವ್ಯಾಪಿಸಿ ಸರ್ವರ ಪ್ರಾಣ ಪ್ರೇರಕನಾಗಿ ವಾಸುದೇವನೆನಿಸಿದೆ ||

ಪರಿಕಲ್ಪನೆಯಲ್ಲಿ ವಿರುದ್ಧ ಧರ್ಮಬೋಧಿಸಿ ಬುದ್ಧನೆನಿಸಿದೆ |

ತುರುಗವನೇರಿ ಧರ್ಮ ಉಳುಹಲು ಬರಲು ಕಲ್ಕಿಯೆನಿಸಿದೆ ||

ನಿರ್ದೋಷ ಪವಿತ್ರ ಉತ್ತಮಶ್ಲೋಕ ಅಚ್ಯುತನೆನಿಸಿದೆ |

ಶ್ರೀರಮಣಿಗಾಶ್ರಯನಾಗಿ ಶ್ರೀಧರನೆನಿಸಿದೆ ||

ಸರ್ವರ ಜ್ಞಾನ ಪ್ರದಾಯಕ ಜ್ಞಾನಾನಂದ ಮಾಧವನೆನಿಸಿದೆ |

ಕರೆದು ಮುಕ್ತಿ ಕೊಡುವ ಭಕುತರ ವಶನಾಗಿ ಮುಕುಂದನೆನಿಸಿದೆ ||

ನಾರಿಯ ರೂಪದಿ ಮೋಡಿಮಾಡಿ ಶಿವನ, ಮೋಹಿನಿಎನಿಸಿದೆ |

ಅತ್ರಿಗೆ ನಿನ್ನನ್ನೇ ದತ್ತವಾಗಿಸಿ ದತ್ತಾತ್ರಯ ಎನಿಸಿದೆ ||

ಕರಿಮೊರೆ ಕೇಳಿ ತ್ವರಿತದಿ ಬಂದು ನಕ್ರನ ತರಿದು ಶ್ರೀಹರಿ ಎನಿಸಿದೆ |

ಮರ್ದಿಸಿ ಪಾಪ, ಜನನ ಮರಣ ಚಕ್ರ ಅಳಿಸಿ ಜನಾರ್ದನನೆನಿಸಿದೆ ||

ಕರೆ ಆಲಿಸಿ ಭಕ್ತನ ಅಣತಿಯಂತೆ ಇಟ್ಟಿಗೆಮೇಲೆ ನಿಂತು ವಿಟ್ಠಲನೆನಿಸಿದೆ |

ಸರ್ವದಾ ಸುಖ, ಬಲ, ಜ್ಞಾನ ನೀಡುವ ವಿಷ್ಣುವೆನಿಸಿದೆ ||

ತೋರಿ ಅಂತವಿಲ್ಲದ ಅದ್ಭುತಲೀಲೆ ಅನಾದಿ ಅನಂತನೆನಿಸಿದೆ |

ಸರ್ವಾಶ್ರಯ ಸ್ವತಂತ್ರ ದೋಷದೂರ ಶ್ರೀಕೃಷ್ಣವಿಟ್ಠಲ ಸಕಲಕರ್ತೃನೀನೊಬ್ಬನೇ ||

52. ನಿನ್ನ ದಯೆ ಒಂದಿದ್ದರೆ ಸಾಕೋ |

ಹತ್ತವತಾರಗಳಲಿ ಮಿಂಚಿ ನನ್ನನೇ ನಾ ಮರೆಯುವೆ ||

ಮತ್ಸಾವತಾರಿಯಂತೆ, ಕ್ಷಣ ಕ್ಷಣಕ್ಕೂ ಭಕ್ತಿ ಬೆಳೆಯಲಿ ನಿನ್ನದಯದಿ |

ಕೂರ್ಮಾವತಾರಿಯಂತೆ, ಪಾದಸ್ಮರಣೆ ಸದಾ ಹೊತ್ತಿರಲಿ ನಿನ್ನದಯದಿ ||

ವರಾಹವತಾರಿಯಂತೆ, ಸರಳವಾಗಿ ಕ್ಲೇಶಗಳ ಎತ್ತಿರಲಿ ನಿನ್ನದಯದಿ |

ನಾರಸಿಂಹವತಾರಿಯಂತೆ, ದುಷ್ಟ ಶಕ್ತಿಗಳ ಎದುರಿಸಲಿ ನಿನ್ನದಯದಿ ||

ವಾಮನಾವತಾರಿಯಂತೆ, ಸಮರ್ಪಣಾ ಬುದ್ಧಿ ತ್ರಿವಿಕ್ರಮನಂತೆ ಏರಲಿ ನಿನ್ನದಯದಿ |

ಭಾರ್ಗವನವತಾರಿಯಂತೆ, ವಿಷಯದಾಸೆ ಅಳಿಯಲಿ ನಿನ್ನದಯದಿ ||

ರಾಮಾವತಾರದಂತೆ, ಸದ್ಗುಣಗಳ ಸಾಂದ್ರನಾಗಲಿ ನಿನ್ನದಯದಿ ||

ಮುಕುಂದನವತಾರದಂತೆ, ಮುಕ್ತಿಯ ಉಪದೇಶವಾಗಲಿ ನಿನ್ನದಯದಿ |

ಬುದ್ಧಾವತಾರನಂತೆ, ಚಂಚಲಮನದಿ ಸ್ಥಿರತೆ ಉಳಿಯಲಿ ನಿನ್ನ ದಯದಿ ||

ಕಲ್ಕ್ಯಾವತಾರದಂತೆ, ದುರ್ವಿಷಯಗಳ ಖಂಡಿಸಲಿ ನಿನ್ನದಯದಿ |

ಶ್ರೀಕೃಷ್ಣವಿಟ್ಠಲ ನಿನ್ನ ದಯೆ ದೊರಕದಿದ್ದರೆ ಏನೂ ದೊರೆಯದು ||

ದಯಾನಿಧೇ, ನಿನ್ನ ದಯೆ ಒಂದೇ ಸಾಕೋ ||

53. ಶರಣಾದೆ, ಮೇಲಿರಿಸಿದೆ, ಎತ್ತಿಕೊಂಡೆ, ಮಡಿಲೊಳಿಟ್ಟೆ |

ಶಿರವೊತ್ತಿದಿ, ತರಿದಿಟ್ಟೆ, ಒರೆಸಿಟ್ಟೆ, ಕೊಲ್ಲಿಸಿದೆ ||

ಅರಿವೂ ಕಳೆದೆ, ಹಯವೇರಿದೆ ಪ್ರಭು ಶ್ರೀಕೃಷ್ಣವಿಟ್ಠಲನೇ |

ಹೊರೆಇಳಿಸಿ, ಉದ್ಧರಿಸಿ, ಮೇಲಿರಿಸೋ || (ಮುಕ್ತಿ)

54. ನಿನ್ನ ದಯೆ ಒಂದಿದ್ದರೆ ಸಾಕೋ |

ಹತ್ತಾವತರಗಳಲಿ ಮಿಂಚಿ ನನ್ನನೇ ನಾ ಮರೆಯುವೆ | || ||

ಮತ್ಸಾವತಾರಿಯಂತೆ ಕ್ಷಣ ಕ್ಷಣಕ್ಕೂ ಭಕ್ತಿ ಬೆಳೆಯಲಿ ನಿನ್ನ ದಯದಿ |

ಕೂರ್ಮಾವತಾರಿಯಂತೆ ಪಾದಸ್ಮರಣೆ ಸದಾ ಹೊತ್ತಿರಲಿ ನಿನ್ನ ದಯದಿ ||

ವರಾಹಾವತಾರಿಯಂತೆ ಸರಳವಾಗಿ ಕ್ಲೇಶಗಳ ಎತ್ತಿರಲಿ ನಿನ್ನ ದಯದಿ |

ನಾರಸಿಂಹಾವತಾರಿಯಂತೆ ದುಷ್ಟ ಶಕ್ತಿಗಳ ಎದುರಿಸಲಿ ನಿನ್ನ ದಯದಿ || 1 ||

ವಾಮನಾವತಾರಿಯಂತೆ ಸಮರ್ಪಣಾ ಬುದ್ಧಿ ತ್ರಿವಿಕ್ರಮನಂತೆ ಏರಲಿ ನಿನ್ನದಯದಿ |

ಭಾರ್ಗವನವತಾರಿಯಂತೆ ವಿಷಯದಾಸೆ ಅಳಿಯಲಿ ನಿನ್ನದಯದಿ ||

ರಾಮಾವತಾರದಂತೆ ಸದ್ಗುಣಗಳ ಸಾಂದ್ರನಾಗಲಿ ನಿನ್ನದಯದಿ |

ಮುಕುಂದನವತಾರದಂತೆ ಮುಕ್ತಿಯ ಉಪದೇಶವಾಗಲಿ ನಿನ್ನ ದಯದಿ || 2 ||

ಬುದ್ಧಾವತಾರನಂತೆ ಚಂಚಲಮನದಿ ಸ್ಥಿರತೆ ಉಳಿಯಲಿ ನಿನ್ನದಯದಿ |

ಕಲ್ಕೀವತಾರದಂತೆ ದುರ್ವೀಷಯಗಳ ಖಂಡಿಸಲಿ ನಿನ್ನದಯದಿ ||

ಶ್ರೀಕೃಷ್ಣವಿಟ್ಠಲ ನಿನ್ನ ದಯೆ ದೊರಕದಿದ್ದರೆ ಏನೂ ದೊರೆಯದು |

ನಿನ್ನ ದಯೆ ಒಂದೇಸಾಕೋ ಸರ್ವಕಾಲಕೂ || 3 ||

55. ಪ್ರಳಯದಿ ಸತ್ಯವ್ರತನ ರಕ್ಷಿಸಿದ ಮತ್ಸನಾಗಿ |

ಒಲವಿಂದ ಪರ್ವತ ಬೆನ್ನಲಿ ಪೊತ್ತ ಕೂರ್ಮನಾಗಿ ||

ಜಲದಿ ಪೊಕ್ಕು ಮೇದಿನಿಯ ತಂದ ವರಾಹನಾಗಿ |

ಬಾಲಕನ ರಕ್ಷಿಸಿದ ಸ್ತಂಭಸ್ಥ ನರಸಿಂಹನಾಗಿ ||

ಬಲಿಯನೊತ್ತಿದ ಪಾತಾಳಕೆ ವಾಮನನಾಗಿ |

ಬಲವಡಗಿಸಿದ ಕ್ಷತ್ರೀಯರ ಪರಶುರಾಮನಾಗಿ ||

ಜಾನಕಿಯ ರಕ್ಷಿಸಿದ ಶ್ರೀರಾಮನಾಗಿ |

ವಿಲಕ್ಷಣ ಮಹಿಮೆ ತೋರಿದ ವಸುದೇವ ಸುತನಾಗಿ ||

ಪಾಲಿಸುದ ಧರ್ಮಮೋಹಕ ಬುದ್ಧನಾಗಿ |

ಕಲಿಯ ನಿಗ್ರಹಿಸಲು ತೇಜಿಏರಿ ಬರುವ ಕಲ್ಕಿಯಾಗಿ ||

ಲೀಲೆಯಲಿ ಸರ್ವರೂಪ ಧರಿಸುವ ನಮ್ಮ ಶ್ರೀಕೃಷ್ಣವಿಟ್ಠಲ ||

ಶ್ರೀಮನ್ನಾರಾಯಣ

56. ಹೃದಯದಿ ಸದಾ ನಾರಾಯಣನ ನೆನಿಸು |

ಮನದಲಿ ಸದಾ ನಾರಾಯಣನ ನೆನೆಸು ||

ಕಂಗಳಲಿ ಸದಾ ನಾರಾಯಣನ ದೃಷ್ಟಿಸು |

ಕಿವಿಯಲಿ ಸದಾನಾರಾಯಣನ ನಾಮ ಕೇಳಿಸು ||

ನಾಲಿಗೆಯಲಿ ಸದಾನಾರಾಯಣನ ಪದ ನುಡಿಸು |

ಹಸ್ತಗಳು ಸದಾ ನಾರಾಯಣನ ಪೂಜಿಸಲಿ ||

ಪಾದಗಳು ಸದಾ ನಾರಾಯಣನತ್ತ ಪೋಗಲಿ |

ಭವತಾರಕ ಶ್ರೀಕೃಷ್ಣವಿಟ್ಠಲ ಸದಾ ಸರ್ವರನು ಸಲಹಲಿ ||

57. ಎನ್ನ ಜೀವನದ ಬೆಳಕು ನಾರಾಯಣ |

ಎನ್ನ ಜೀವದ ಉಸಿರು ನಾರಾಯಣ ||

ಎನ್ನ ಕಂಗಳ ದೃಷ್ಟಿ ನಾರಾಯಣ |

ಎನ್ನ ಮನದ ನಿವಾಸಿ ನರಾಯಣ ||

ಎನ್ನ ಜಿಹ್ವೆಯಲಿ ನೆಲಸಿಹ ನಾರಾಯಣ |

ದೇಹದ ಕಣಕಣದಿ ನಾರಾಯಣ ||

ಸರ್ವಕರ್ತೃಮೂಲ ನಾರಾಯಣ |

ಸರ್ವಫಲದಾತ ನಾರಾಯಣ ||

ಸರ್ವ ಬಂಧಕನೇ ನಾರಾಯಣ |

ಜೀವನದ ಮೋಚಕ ನಾರಾಯಣ ||

ಸೃಷ್ಟಿಸ್ಥಿತಿ ಲಯಕರ್ತ ನಾರಾಯಣ |

ಸರ್ವಕಾರ್ಯೋದ್ದೇಶ ನಾರಾಯಣ ||

ಸಕಲ ಸಮಯವೂ ನಾರಾಯಣ |

ಸರ್ವದಾ ಸಮದರ್ಶಿ ನಾರಾಯಣ ||

ಸರ್ವವಿಲಕ್ಷಣ ನಾರಾಯಣ |

ಎನ್ನ ಹೃದಯದಿ ನೆಲಿಸಿದ ನಾರಾಯಣ ||

ಸಕಲವೂ ನಾರಾಯಣಮಯ |

ನಾರಾಯಣನ ನಾಮದ ಸವಿಬಲ್ಲವನೇ ಬಲ್ಲ ||

ನಾರಾಯಣಾಭಿನ್ನ ಶ್ರೀಕೃಷ್ಣವಿಟ್ಠಲನ ಸ್ಮರಣೆ ಪ್ರತಿಜನಮಕೂ ಇರಲಿ ||

58. ಶಂಖಚಕ್ರಗದಾ ಪದ್ಮಧಾರಿ ಪದ್ಮನಾಭಗೆ ಮಂಗಳಂ |

ಉರಗಶಯನ ಉತ್ತಮ ಶ್ಲೋಕಗೆ ಮಂಗಳಂ ||

ಜಾನು ಜಂಘಸುಂದರ ಜನಾರ್ದನಗೆ ಮಂಗಳಂ |

ಉದರದಿ ತ್ರೀಲೋಕ ಧರಿಪ ತ್ರಿವಿಕ್ರಮಗೆ ಮಂಗಳಂ ||

ನಾಭಿಯಿಂದ ಜನಿತ ಬ್ರಹ್ಮನ ಕಂತುಪಿತಗೆ ಮಂಗಳಂ |

ವಕ್ಷದಿ ವಾಸಿಪ ಲಕ್ಷ್ಮೀರಮಣಗೆ ಮಂಗಳಂ ||

ಮೌಕ್ತಿಕಹಾರ ಸುಶೋಭಿತ ಕಂಠದ ಅನಿಕೇತಗೆ ಮಂಗಳಂ |

ಅಭಯಹಸ್ತಪೊತ್ತ ಹೃಷಿಕೇಶಗೆ ಮಂಗಳಂ ||

ಕಂಕಣಧೃತ ಕರದಿಂ ವರವೀವ ಅನಂತಗೆ ಮಂಗಳಂ |

ನಿಮಿಲನೇತ್ರ ನಳಿನಾಕ್ಷ ಶ್ರೀವಿಷ್ಣುವಿಗೆ ಮಂಗಳಂ ||

ನೀಳನಾಸಿಕದಿಂ ವೇದ ಉಸುರಿದ ಹಯಗ್ರೀವಗೆ ಮಂಗಳಂ |

ತುಟಿಯಲಿ ಮಂದಹಾಸ ಬೀರಿದ ಮೋಹನಗೆ ಮಂಗಳಂ ||

ಮಕರಕುಂಡಲಧಾರಿ ಖಗವಾಹನ ಶ್ರೀಹರಿಗೆ ಮಂಗಳಂ |

ವಿಶಾಲ ಕೇಶರಾಶಿಯ ಕೇಶವನಿಗೆ ಮಂಗಳಂ ||

ಕಿರೀಟಧಾರಿ ಕ್ಷಿತಿಜನ ಪಾಲಿಪ ಗೋವಿಂದಗೆ ಮಂಗಳಂ |

ಅಚ್ಯುತ ನಾರಸಿಂಹ ಪುರುಷೋತ್ತಮಗೆ ಮಂಗಳಂ ||

ಅಡಿಯಿಂ ಮುಡಿವರೆಗೆ ಸರ್ವಾಂಗ ಸುಂದರನಾದ |

ಶ್ರೀಕೃಷ್ಣವಿಟ್ಠಲಗೆ ಮಂಗಳಂ ಜಯಮಂಗಳಂ ||

59. ನಾರಾಯಣನ ನಮಿಸಿ ಪಾದಕಮಲಕೆ | ನಾರಾಯಣನ ಪಾಡಿನಾಮಸದಾ ||

ನಾರಾಯಣ ಪೂಜೆಮಾಡಿ ಮನದಿ | ನಾರಾಯಣನ ಸ್ಮರಿಸಿ ವಿಗ್ರಹದಿ ||

ನಾರಾಯಣ ಅನುಗ್ರಹಿಪ ಸದಾ | ವಿರಾಜಿಪ ಭಕ್ತರಹೃದಯದಿ ||

ನಾರಾಯಣರೂಪಿ ಶ್ರೀಕೃಷ್ಣವಿಟ್ಠಲ | ತಾರಿಸಿ ಭವ ಪಾಪಿಗಳ ಉದ್ಧರಿಪ ||

60. ಜಯಮಂಗಳಂ, ನಿತ್ಯ ಶುಭಮಂಗಳಂ |

ಮನೋ ನಿಯಾಮಕನಿಗೆ, ಮನುಜೊದ್ಧಾರಗೆ ಮಂಗಳಂ ||

ಮತ್ಸಾವತಾರಿಗೆ, ಮಂದರೊದ್ಧಾರಕನಿಗೆ |

ಬ್ರಹ್ಮಾಂಡವನೆ ಪೊತ್ತವನಿಗೆ, ಮೂರು ಪಾದ ಅಳೆದವಗೆ ||

ಮಗುವಿಗೆ ಅಭಯವಿತ್ತವಗೆ, ಮಾತೆಯ ಶಿರವ ತರಿದವಗೆ |

ಮಾತೃ ವಾಕ್ಯ ಪರಿಪಾಲಕಗೆ, ಮುರಹರ ಮುರಳಿವಾದಕನಿಗೆ ||

ಮನವ ಕೆಡಿಸಿದ ಮನುಜಗೆ, ಮದವ ಹೆಚ್ಚಿಸುವ ವಾಜಿಗೆ |

ಮಂಗಳಾಂಗನಿಗೆ ಶ್ರೀಕೃಷ್ಣವಿಟ್ಠಲಗೆ ಮಂಗಳಂ ||

ಶ್ರೀ ನರಸಿಂಹ

61. ದರುಶನ ಮಾತ್ರದಿ ದುರಿತ ಕಳೆವ ಶೂರ್ಪಾಲಯ ಪ್ರಭು |

ನರಸಿಂಹ-ಶ್ರೀಲಕ್ಷ್ಮೀನರಸಿಂಹಸ್ವಾಮಿ ಲಕ್ಷ್ಮೀನರಸಿಂಹ ||

ಚರಣಯುಗಳ ಭಜಿಸಲು ಪೊರೆವ ಕರುಣದಿ |

ಊರುವಿನಲಿ ಉರ್ವಿಯುತ್ತಮಳ (ಸುಂದರಿಯ) ಕುಳ್ಳಿರಿಸಿ ||

ಕರದಿ ಅಭಯ ತೋರುತಿರುವ ಶಂಖ ಚಕ್ರಧಾರಿ |

ಕಿರೀಟ, ಕಂಕಣ, ಕೊರಳೊಳು ಹಾರ ಪದಕ ||

ಧರಿಸಿ ಕಾಲಲಿ ಕಡಗ ಪೀತಾಂಬರಧಾರಿ |

ಕರದಿಂ ಅರ್ಧಾಂಗಿಯ ನಡು ಬಳಸಿ ನಗುತಿರುವ ||

ಪರಮ ಸುಂದರನ ವೀಕ್ಷಿಸೇ ಆತ್ಮ ಶಾಂತಿ ಸಿಗುವುದು |

ಸುರ ಶ್ರೇಷ್ಠ ಭಕ್ತಜನಪ್ರಿಯ ನಮ್ಮ ಶ್ರೀಕೃಷ್ಣವಿಟ್ಠಲ ||

62. ಸಭೆಯಲಿ ಪರಮಾತ್ಮ ಎಲ್ಲಿಹ ತೋರೆನಲು |

ಸದ್ಬುದ್ಧಿ ಬಾಲಕನ ಭಕ್ತಿಗೆ ಮೆಚ್ಚಿ ||

ಡಿಂಬಸ್ಥ ಬಿಂಬ ಕಂಜನಾಭ ಸರ್ವವ್ಯಾಪಿ |

ಉದ್ಭವಿಸಿದ ಶೇಷಶಾಯಿ ಸ್ತಂಭದಿಂ ||

ಅದ್ಭುತ ಲೀಲಾ ವಿನೋದಿ ನರಸಿಂಹರೂಪದಿ |

ನಿಭೃತಕಾಯ ತಟಿತ್ಕೋಟಿ ಜಗನ್ನಾಥ ||

ಅಭಯಂಕರ ನಾಲ್ಮೊಗನಯ್ಯಾ |

ವಿಭ್ರಮ ಅಸುರ ವಿಭಂಗಿಸಲು ಯತ್ನಿಸೆ ||

ಸಂಭವಿಸಿತು ಮರಣ ಹರಿದ್ವೇಷಿಗೆ |

ಶುಭ್ರ ಬಭ್ರು ದು:ಖಭಂಜಕ ||

ಸುಭದ್ರ ವಿಭೋ ಶ್ರಿಕೃಷ್ಣವಿಟ್ಠಲ ಜಯ ಜಯ ||

63. ನವಮಾಸ ತುಂಬಿರಲು ಕಯಾದುವಿನ ಬಸಿರಲಿ |

ನಾರದರುಪದೇಶ ಪೊಂದಿ ಜನ್ಮ ಸಾರ್ಥಕವಾಗಿಸಲು ಪುಟ್ಟಿದ ಬಾಲಕ ಶ್ರೀ ಪ್ರಲ್ಹಾದ ||

ಬಾಲ್ಯದಿ ಆಟವಬಿಟ್ಟು, ಪಾಠವ ಬಿಟ್ಟು |

ನಾರಾಯಣನ ಧ್ಯಾನವ ಉಸಿರನ್ನಾಗಿಸಿಕೊಂಡ ಶ್ರೀಪ್ರಲ್ಹಾದ ||

ಗುರುಗಳ ದೂಷಣಿಗೆ, ತಂದೆಯ ಕೋಪಕೆ ಪಾತ್ರನಾದ |

ಶ್ರೀಹರಿಯ ಬಿಡದೆ ಸತತ ಸ್ಮರಿಸುತ ಗೆಳೆಯರ ಕೂಡಿ ಭಜನೆಯ ಮಾಡುತಿರೆ||

ಗುರುಗಳು ನೋಡಿ ತಂದೆ ಹಿರಣ್ಯಕಶ್ಯಪನ ಹತ್ತಿರ ಸೆಳೆತರಲು |

ಅತೀ ಕೋಪದಿ ತಂದೆ ನಾನಾ ಶಿಕ್ಷೆಗೆ ಬಳಪಡಿಸಿದ ಶ್ರೀಪ್ರಲ್ಹಾದನಾ ||

ಧೃತಿಗೆಡೆದೆ ಶಾಂತಮೂರ್ತಿಯಾಗಿ ಶ್ರೀಹರಿಯ ಭಜನೆ ಮಾಡುವ ಪ್ರಲ್ಹಾದನ ಕಂಡು |

ಕಡುಕೋಪದಿಂ ನಿನ್ನ ನಾರಾಯಣನೆಲ್ಲಿರುವನು ತೋರೋ ಎನಲು ||

ಹೆದರದೆ ಬೆದರದೆ ಸೌಮ್ಯನಾದ ಬಾಲಕ ಭಕ್ತಿಯಿಂ |

ಸರ್ವತ್ರ ವ್ಯಾಪಿಸಿರುವ ಸರ್ವೋತ್ತಮನ ಭಕ್ತಿಯಿಂ ನೋಡೆ ನೀನೆಲ್ಲಲ್ಲೂ ಕಾಣಿವಿ ಎಂದ||

ಕಂಬದಲ್ಲಿರುವನೋ ನಿನ್ನ ನಾರಾಯಣ ಎನ್ನುತ |

ಖಡ್ಗವನೇ ಪಿಡಿದು ಕಂಬವ ಭೇದಿಸಲು, ಒಡನೆ ಕಾಣಿಸಿದ ಶ್ರೀನರಸಿಂಹ ||

ತಾಯಿಯು ಕಂದನ ತೊಡೆಯ ಮೇಲೆ ಮಲಗಿಸಿ ಕೊಳ್ಳುವಂತೆ |

ಹಿರಣ್ಯಕಶ್ಯಪನ ಮಲಗಿಸಿಕೊಂಡು ನಖದಿಂ ಹೊಟ್ಟೆಯ ಬಗೆದ ||

ಶ್ರೀಪ್ರಲ್ಹಾದಸಂತಹ ಪುತ್ರರತ್ನಗಳಿಗಾಗಿ ಹುಡುಕಿ ಸಿಗದೆ |

ನಿರಾಸನಾಗಿ ಮುಕ್ತಿಯನು ಕರುಣಸಿÂದನು ವಿಜಯಗೆ ||

ಬಾಲಕ ಪ್ರಲ್ಹಾದನು ಬಗೆಬಗೆಯಾಗಿ ಸ್ತುತಿಸಲು ಶ್ರೀಲಕ್ಷ್ಮೀನರಸಿಂಹನು |

ಬಲುಕರುಣೆಯಿಂದ ವರವಿತ್ತು ಸಲುಹಿದನು ಕಂದ ಶ್ರೀಪ್ರಲ್ಹಾದನ ||

ಸದಾ ಸ್ಮರಿಸುವರ ಬಿಡದೆ ಸಲಹುವ | ನಮ್ಮ ಶ್ರೀಕೃಷ್ಣವಿಟ್ಠಲ ಅನವರತ ||

64. ಉಗುರನು ನೆನೆದರೆ ಕಷ್ಟ ಎಷ್ಟೂ ಇಲ್ಲ |

ಉಗುರಿನ ಮಹಿಮೆ ತಿಳಿದಷ್ಟೂ ಕಗ್ಗಂಟು ||

ಉಗುರು ಕೋಟಿ ಸೂರ್ಯಸಮಪ್ರಭ |

ಉಗುರು ನಿತ್ಯಜ್ಞಾನಾನಂದಮಯ ||

ಉಗುರು ವಜ್ರಾಯುಧದಂತೆ ಅದ್ರಿಯ ಸೀಳುವುದು |

ಉಗುರಿನಿಂದಲೆ ದುಷ್ಟ ಹಿರಣ್ಯಕನ ಸಂಹಾರವಾಯಿತು ||

ಉಗುರು ಅಸುರ ಶತೃಗಳ ಸದೆ ಬಡೆವುದು |

ಉಗುರನು ಸದಾ ಧ್ಯಾನಿಪರು ಸುರರೆಲ್ಲ ||

ಉಗ್ರ ಉಗುರಿರುವ ಶ್ರೀಕೃಷ್ಣವಿಟ್ಠಲ ರಕ್ಷಿಸಲಿ ನಮ್ಮನನವರತ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು