ಶ್ರೀ ಕೃಷ್ಣವಿಠ್ಠಲಪದಗುಚ್ಛ 2
ಉಪಾಸಕ ನಾನು, ಸತ್ಯ ಉಪಾಸನೆ ತಿಳಿಸು
ಉಪಾಸ್ಯ ಸರ್ವಗತ ಶ್ರೀಕೃಷ್ಣವಿಟ್ಠಲನೇ ದಯದಿ ||
ಎಎಎ
303. ಬೇಕೆನ್ನುವುದು ಹೋಗದು, ಸಾಕೆನ್ನುವುದು ಬರದು | (ಆಸೆ-ತೃಪ್ತಿ)
ಜೋಕೆಯಿರದೆ ಜಾರಿ ಬೀಳುವುದು ತಪ್ಪಿಲ್ಲ ||
ದಕ್ಕದಿರುವುದರ ಹಿಂದೆ ಓಡಿ ದಣಿದೆ |
ಸಿಕ್ಕಿದ್ದರಲ್ಲಿ ತೃಪ್ತಿ ಕಾಣದೇ ಹೋದೆ ||
ಸಕಲ ಪ್ರಾಪ್ತಿಯ ಲೆಕ್ಕ ತಿಳಿಯದಾದೆ |
ಏಕೈಕನಾಥ ಶ್ರೀಕೃಷ್ಣವಿಟ್ಠಲನ ನಂಬದಾದೆ ||
ಎಎಎ
304. ರೂಪ, ಕುಲ, ವಿದ್ಯೆ, ಜನನ-ಮರಣ ಪೂರ್ವನಿರ್ಧಾರಿತ |
ಕೋಪ-ತಾಪ, ಮಾನ-ಅಪಮಾನ ಸ್ವರೂಪಾನುಸಾರ ||
ಜಪ-ತಪ, ವ್ರತ-ನಿಯಮಾಚರಣೆ ಸ್ವಯೋಗ್ಯತಾನುಸಾರ |
ಪ್ರಾಪ್ತಿ-ಅನುಗ್ರಹ ಮಾತ್ರ ಶ್ರೀಕೃಷ್ಣವಿಟ್ಠಲನ ಇಚ್ಛಾನುಸಾರ ||
ಎಎಎ
305. ಲಕ್ಷ್ಮೀಪತಿಗೆ ಐಶ್ವರ್ಯದಾಸೆಯೇ |
ಪಕ್ಷಿವಾಹನಗೆ ಉತ್ಸವದಾಸೆಯೇ ||
ಕುಕ್ಷಿಯೊಳು ಜಗವನಿಟ್ಟವಗೆ ನೈವೇದ್ಯವೇ |
ದಕ್ಷ ಸೇವಕಗೆ ಕೈಂಕರ್ಯಗೊಳ್ಳುವಾಸೆಯೇ ||
ಸಾಕ್ಷೀ ಶ್ರೀಕೃಷ್ಣವಿಟ್ಠಲಗೆ ನಿಜ ಭಕುತಿಯೊಂದೇ ಸಾಲದೆ ||
ಎಎಎ
306. ಅಂತರಂಗ ಸಖ ಸರ್ವಾಂತರ್ಯಾಮಿ, ಸರ್ವಪ್ರೇರಕ,
ಮೂಕಪ್ರೇಕ್ಷಕ ಅನವರತ ಸಂಗಾತಿ |
ನಿನ್ನಲಿ ಅಮಲಭಕುತಿ ಇತ್ತು ಪರಿಪಾಲಿಸೊ ಕರುಣಾಕರನೇ ||
ಸದಾ ನಿನ್ನ ಸ್ಮರಣೆಯಲ್ಲಿದ್ದು ಅನ್ಯಾಪೇಕ್ಷೆ ಇಲ್ಲದಂತೆ
ದಯ ಮಾಡೋ ಶ್ರೀಕೃಷ್ಣವಿಟ್ಠಲ ||
ಎಎಎ
307. ಲೋಕದಿ ಮನುಜರ ಮೆಚ್ಚಿಸಲರಿಯೆ ಎನ್ನ ಮಾಧವ ಮನವ ಮೆಚ್ಚಿಸಬಹುದು |
ಪರಿಪರಿ ಸ್ತುತಿಗೆ ಪರರಿಂದ ಅಪವಾದ ತಪ್ಪದು ||
ಆರ್ತದಿಂದೊಮ್ಮೆ ಕರೆಯೆ ಅನಿಕೇತನ |
ಪರರ ಆಪೇಕ್ಷೆಗೆ ಮಿತಿಯಿಲ್ಲ ಅಮಿತ ವಿಕ್ರಮ ||
ಅವಿರತ ನೆನೆದೊಡೆ ಶ್ರೀಕೃಷ್ಣವಿಟ್ಠಲ ಕಾರುಣ್ಯಗೆ ಎಣೆಯಿಲ್ಲ ||
ಎಎಎ
308. ಪ್ರತ್ಯಕ್ಷ ಕಂಡು, ಎಲ್ಲಾ ಕೇಳುವ, ಹೇಳುವ |
ಸರ್ವವಿದಿತ ಸರ್ವ ಮನ: ಪ್ರೇರಕನೇ ||
ಪ್ರಾಣ, ಗುಣಪೂರ್ಣನೇ, ಸಂಹಾರಕನೇ |
ಬ್ರಹ್ಮಗಿರಿಯಾದ ನಮ್ಮ ಶ್ರೀಕೃಷ್ಣವಿಟ್ಠಲ ||
ಎಎಎ
309. ಬೇಡಿದರೂ ಕೊಡಲಾಗದವಗೆ ಕರೆದುಕೊಡುವ ಮನಸ್ಸೆಲ್ಲಿ? |
ಮನುಜರಲ್ಲೇ ಕರುಣೆ ತೋರದವಗೆ ಪ್ರಾಣಿಗಳಲಿ ದಯೆಯೆಲ್ಲಿ? ||
ಹಸಿದವರ ಮುಂದೆ ಸುಗ್ರಾಸ ಭೋಜನ ಮಾಡುವವ ಕಾಗೆಗಿಂತ ಕಡೆ |
ಹೃದಯವಂತಿಕೆ ಇಲ್ಲದವನ ಜೀವನ ಇಹ-ಪರದಲ್ಲೂ ದುಃಸ್ಸಹ ||
ಶ್ರೀಕೃಷ್ಣವಿಟ್ಠಲನ ಭಜಿಸದಿರುವನ ಜನುಮ ವ್ಯರ್ಥ ||
ಎಎಎ
310. ಚಿಕ್ಕವರಿದ್ದಾಗ ತಾಯಿಯ ಆಶ್ರಯ |
ಸ್ಥಾನಮಾನ ಗಳಿಸಲು ತಂದೆಯ ಆಶ್ರಯ ||
ಯೌವನದಲಿ ಮಡದಿಯ ಆಶ್ರಯ |
ಮುದಿತನದಲಿ ಮಕ್ಕಳ ಆಶ್ರಯ ||
ಹುಲುಮಾನವರಲ್ಲೇ ಹೊಗಳುವ ಜಿಹ್ವೆಗೆ |
ಅನಾದಿ ಕಾಲಕೂ ಆಶ್ರಯದಾತನಾಗಿರುವೆ ||
ಶ್ರೀಕೃಷ್ಣವಿಟ್ಠಲನ ನೆನೆದು ಪಾಡಲು |
ಮನಬಾರದೇ ಹೀನಾಯರಾಗಿರುವರಯ್ಯಾ ||
ಕರೆದು ಪೇಳಿದರೂ ಒಪ್ಪಲಾರದೆ ನಿತ್ಯ |
ನರಕವೆಂಬ ಕೂಪದಲಿ ಹೊರಳಾಡುವರು ||
ಎಎಎ
311. ತಾಯಿ, ತಂದೆ ಬಂಧು ಬಳಗ ರಕ್ಷಿಪುದು ಕೆಲವರಿಗೆ |
ಧನ-ಕನಕ, ಮನೆಯೇ ಸರ್ವಸ್ವ ಜೀವನದಲಿ ಹಲವರಿಗೆ ||
ಇಚ್ಛಿತಮಡದಿ, ಮಕ್ಕಳು ಇರಲು ಜೀವನಸುಖ ವೆನಿಪುದು |
ಸುಗ್ರಾಸ ಭೋಜನದಿ ಎಲ್ಲಾ ದುಃಖ ಮರೆವರು ಬಹುಜನ ||
ಕಾಮಕೇಳಿಯಲಿ ನಿಜವಾದ ಸುಖವ ಕಾಣುವರು |
ವಾಂಛಿತ ಜೀವನ ಸುಖದ ಸುಪ್ಪತ್ತಿಗೆ ಇಷ್ಟೇ ಜೀವನ ||
ವೆನ್ನುವ ಮಂದಬುದ್ಧಿ ಜನ ನಿಜ ಮರ್ಮ ತಿಳಿಯದೇ |
ಸಂಸಾರದಲಿ ತೊಳಲಾಡಿ ಹೊರಳಾಡುವರು ಪದೆ ಪದೇ ||
ಶ್ರೀಕೃಷ್ಣವಿಟ್ಠಲನ ನಾಮಸ್ಮರಣೆ ಒಂದೇ ಪಾರಮಾರ್ಥಕ್ಕೇ |
ಸರಳ ಸೊಪಾನವೆಂದರಿಯದೆ ಮೊಸಹೋಗುವರಲ್ಲಾ ||
ಎಎಎ
312. ಆನಂದತೀರ್ಥರ ದ್ವೈತಮತ ಅರಿತವರಿಗೆ |
ಪನ್ನಂಗ ಶಯನ ಒಲಿದು ರಕ್ಷಿಪನನವರತ ||
ಅನಂತ ಜನುಮದ ಪುಣ್ಯದಿ ಈ ಭಾಗ್ಯ ದೊರಪುದು |
ಜ್ಞಾನನಿಧಿ ದೊರಕೆ ಆಪ್ತರಸಂಗದನುಗ್ರಹದಿ ||
ಮನಸಿನ ಸುಖಗಳ ಬೇಡದಿರಲು ಸಾನುರಾಗದಿ |
ಒಲಿದು ಸಾಮಿಪ್ಯ ನೀಡುವ ಶ್ರೀಕೃಷ್ಣವಿಟ್ಠಲರೇಯಾ ||
ಎಎಎ
313. ಅರಿವಿನಲಿ ಮಹಾನ್ ಅರಿವು ವೇದಶಾಸ್ತ್ರದರಿವು |
ಗುರುವಿನಲಿ ಮಹಾನ್ ಗುರು ಶ್ರೀಮಧ್ವಾಚಾರ್ಯರು ||
ಎಂಬತ್ತ್ನಾಲ್ಕು ಲಕ್ಷಯೋನಿಯಲಿ ಸಾರ್ಥಕ ಮಾನವಜನ್ಮ |
ಸಂಬಳದಾಸೆ ಬಿಟ್ಟು ಗುರು ಮಧ್ವಾಂತರ್ಗತ ಶಾಸ್ತ್ರ ತಿಳಿ ಶ್ರೀಕೃಷ್ಣವಿಟ್ಠಲನ ದಾಸನಾಗಿ ||
ಎಎಎ
314. ಸದಾ ನಿನ್ನ ಧ್ಯಾನಕೊಡು ಮನದಿ |
ಸದಾ ನಿನ್ನ ಸ್ಮರಣೆ ಕೊಡು ಚಿತ್ತದಿ ||
ಸದಾ ನಿನ್ನ ಮೂರುತಿ ನಿಲಿಸೋ ಬುದ್ಧಿಯಲಿ |
ಸದಾ ನಿನ್ನ ಬೇಡುವಂತೆ ಮಾಡು ಇದೊಂದೇ ||
ಸದಾನಂದ ಒಡೆಯಾ ಶ್ರೀಕೃಷ್ಣವಿಟ್ಠಲ ದಯಪಾಲಿಸೋ ||
ಎಎಎ
315. ಬೇಕು ಪ್ರತಿಕಾರ್ಯದಲಿ ಜ್ಞಾನ |
ಬೇಕು ಪ್ರತಿಕಾರ್ಯದಿ ಇಚ್ಛೆ ||
ಬೇಕು ಪ್ರತಿಕಾರ್ಯಕೆ ಸಮಯ |
ಸಕಲಕೂ ಮುಂಚೆ ಬೇಕು ಶ್ರೀಕೃಷ್ಣವಿಟ್ಠಲನುಗ್ರಹ ||
ಎಎಎ
316. ಆತ್ಮನೇ ಬಂಧು, ಆತ್ಮನೇ ಶತ್ರು ಎನ್ನುವ |
ಆತ್ಮೋಧ್ಧಾರಕ ಶ್ರೀಕೃಷ್ಣವಿಟ್ಠಲನೇ ಎನ್ನ ಜಿತಾತ್ಮಳಾಗಿಸು ||
ಎಎಎ
317. ಜ್ಞಾನವೆಂದರೆ ಅಲೌಕಿಕ ಶ್ರೇಷ್ಠ ಜ್ಞಾನ |
ಜ್ಞಾನಯಜ್ಞವೇ ಯಜ್ಞಗಳಲಿ ಪರಮಮುಖ್ಯ ||
ಜ್ಞಾನ ಶ್ರದ್ಧಾವಂತಗೆ ಮಾತ್ರ ಲಭ್ಯ |
ಜ್ಞಾನಯಜ್ಞದಿ ಸಕಲ ಕರ್ಮ ಸಮಾರೋಪ ||
ಜ್ಞಾನಾಗ್ನಿ ಸರ್ವ ಕುಕರ್ಮಗಳ ದಹಿಸುವದು |
ಜ್ಞಾನಕೆ ಸಮಾನ ಪವಿತ್ರವಾವುದೂ ಇಲ್ಲ ||
ಜ್ಞಾನವಿನಾ ಮಾನವ ಜನ್ಮ ನಿರರ್ಥಕ |
ಜ್ಞಾನ ದೊರಕೆ ಶ್ರೀಕೃಷ್ಣವಿಟ್ಠಲನ ದಯದಿ ಪರಮ ಶಾಂತಿ ಲಭ್ಯ ||
ಎಎಎ
318. ಸರ್ವರ ಹಿತದಲ್ಲಡಗಿದೆ ನಿನ್ನ ಸುಖ |
ಸರ್ವರ ಅಹಿತದಲ್ಲಿದೆ ನಿನ್ನ ದು:ಖ ||
ಸರ್ವದಾ ಸರ್ವರ ಹಿತವೇ ಬಯಸು |
ಸರ್ವೇಶ ಶ್ರೀಕೃಷ್ಣವಿಟ್ಠಲ ರಕ್ಷಿಸುವನನವರತ ||
ಎಎಎ
319. ಅನಂತ ರೂಪಗಳೊಂದು ಮೂಲರೂಪದಿಂ |
ಅನಂತ ಜೀವ, ಅನಂತ ಚೇತನಾಚೇತನ ||
ಅನಂತ ಕಾಲ, ಕರ್ಮ, ಗುಣಗಳು |
ಅನಂತಾನಂತ ಯೋನಿಜ ಸ್ವಭಾವ ಹೊಂದಿಸುವ | || 1 ||
ಒಂದು ರೂಪವು ಅನಂತ ರೂಪದಿಂ |
ಒಂದರೊಳಗೊಂದು ಬೆರೆದಿಹ ಬ್ರಹ್ಮಾಂಡ- ||
ಪಿಂಡಾಂಡದಿ ಸ್ರೀಕೃಷ್ಣವಿಟ್ಠಲ ಕಾಣಿಸುವ ಪರಿ |
ಅನಂತ ಮಹಿಮೆ ಅದ್ಭುತ! ಅತ್ಯಾದ್ಭುತ! | || 2 ||
ಎಎಎ
320. ಹಿಂದೆ ಬಂದ ಅನೇಕ ಜನುಮದಿ |
ಒಂದೊಂದರಲ್ಲೂ ಎನ್ನಲಿ ನೀನಿದ್ದು ||
ಮಾಡಿ ಮಾಡಿಸಿದ ಸಕಲ ಕರ್ಮದಿ |
ಬಂಧನವ ಹೆಚ್ಚಿಸಿದ್ದನುಕೂಲದಿಂದ ||
ಇಂದು ಬಂದ ಮಾನವಜನ್ಮದರಿವಿಲಿ |
ಸಾಧನದ ಮಾರ್ಗ ತೋರು ಸುಜ್ಞಾನವಿತ್ತು ||
ಮುಂದೆ ಬಪ್ಪ ಜನುಮದಿ ನಿನ್ನ ಮರೆಯದಂತೆ |
ಮಾಡು ಇಂದಿರೇಶ ಶ್ರೀಕೃಷ್ಣವಿಟ್ಠಲನೇ ||
ಎಎಎ
321. ದಿಗ್ಭ್ರಮೆಗೊಂಡೆ ಭಗವಂತನ ವ್ಯಾಪಾರ ವೀಕ್ಷಿಸಿ |
ವಿಭ್ರಮೆ ಅಳಿಯಿತು ತಾರತಮ್ಯವನರಿತು ||
ಸಂಭವಿಪ ಸಕಲ ಕಾರ್ಯಕಾರಣಕರ್ತ |
ಗಂಬೀರ ಬಲು ಉದಾರ, ಭಕ್ತಿಗೊಲಿವನ ||
ಸಂಭ್ರಮದಿ ಪೂಜಿಪೆ ಅಂಭ್ರಣಿಪತಿಯ |
ಬಿಂಬಸ್ಥ ಶ್ರೀಕೃಷ್ಣವಿಟ್ಠಲ ಸದಾ ಬಲಗೊಂಬೆ ||
ಎಎಎ
322. ಸಿರಿಹರಿ ಒಲುಮೆಗೆ ಎಣೆಯಿಲ್ಲವೋ |
ಧರೆಯೊಳು ಬಹು ಸುಲಭ ಹರಿಯನೊಲಿಸಲು ||
ನಿರ್ಮಲ ಚಿತ್ತದಿಂ ನಾ ನಿನ್ನವನೇನುವೆನು |
ನನ್ನವನಿವನೆಂದು ಶ್ರೀಕೃಷ್ಣವಿಟ್ಠಲನೆಂದರೆ ಸಾಕು ||
ಎಎಎ
323. ಚಕ್ರ-ಶಂಖಗಳ ಧರಿಸಿ ಸಾಧಕ |
ವಕ್ರವಿರದ ಊಧ್ರ್ವಪುಂಡ್ರವನ್ನಿಟ್ಟು ||
ಚಕ್ರಗಳಾರು ನಿರೋಧಿಸಿ |
ಚಕ್ರಾಬ್ಜ ಮಂಡಲ ರಚಿಸಿ ||
ನಕ್ರಹರನ ಸ್ಥಿರದಿ ನಿಲಿಸಿ |
ಚಕ್ರಾಕಾರದಿ(ಗೋಲಕ)ಸ್ಮರಿಸುತಾ ||
ಶಕ್ರಾಂತರ್ಗತ, ರುದ್ರಾಂತರ್ಗತ |
ವಿಕ್ರಮ ತುರಂಗ ಮರುತಾಂತರ್ಗತ ||
ಚಕ್ರಧರ ಶ್ರೀಕೃಷ್ಣವಿಟ್ಠಲನ ಪೂಜಿಸೆ |
ಸಾಕ್ಷಾತ್ತಾಗಿ ಒಲಿದು ವರವ ನೀಡುವಾ ||