ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 3.1

1 ಚಕ್ರ- ಶಂಖಗಳ ಧರಿಸಿ ಸಾಧಕ |

ವಕ್ರವಿರದ ಊರ್ಧ್ವಪುಂಢ್ರವನಿಟ್ಟು ||

ಚಕ್ರಗಳಾರು ನಿರೋಧಿಸಿ |

ಚಕ್ರಾಬ್ಜ ಮಂಡಲ ರಚಿಸಿ ||

ನಕ್ರಹರನ ಸ್ಥಿರದಿ ನಿಲಿಸಿ|

ಚಕ್ರಾಕಾರದಿ (ಗೋಳಕ) ಸ್ಮರಿಸುತಾ ||

ಶಕ್ರಾಂತರ್ಗತ ರುದ್ರಾಂತರ್ಗತ |

ವಿಕ್ರಮ ತುರಂಗ ಮರುತಾಂತರ್ಗತ ||

ಚಕ್ರಧರ ಶ್ರೀಕೃಷ್ಣವಿಠ್ಠಲನ ಪೂಜಿಸೆ |

ಸಾಕ್ಷಾತ್ತಾಗಿ ಒಲಿದು ವರವ ನೀಡುವಾ |

2 ಪಾದದಿಂ ಶಿರದವರೆಗೆ ಸಕಲಲೋಕ ಚಿಂತಿಸಿ ||

ಪಾದತಲದಲ್ಲಿರುವುದೇ ಪಾತಾಳ |

ಅದರ ಮೇಲೆ ಹಿಮ್ಮಡಿಯಲಿ ರಸಾತಲ ||

ನೋಡಲದರ ಮೇಲೆ ಮಹಾತಲ |

ಉದ್ದಕೆ ಮೀನು ಖಂಡದಿ ತಲಾ ತಲ ||

ಗುಂಡಗಿನ ಮೊಣಕಾಲಲಿ ಸುತಲ |

ತೊಡೆಯಲ್ಲಿ ಅತಲ-ವಿತಲಗಳು ||

ಇದೆ ಸೊಂಟದಲಿ ಭೂಲೋಕ |

ಇದರ ಮೇಲೆ ನಾಭಿಯಲಿ ಅಂತರಿಕ್ಷ ||

ಎದೆಯ ಭಾಗದಿ ಇಹುದು ಸ್ವರ್ಗ |

ಸಿದ್ಧವಾಗಿದೆ ಕಂಠದಿ ಮಹರ್ಲೋಕ ||

ಪೊಂದಿದೆ ಮುಖದಿ ಜನೋಲೋಕ |

ಅಂದದಿ ಹಣೆಯಭಾಗದಿ ಶೋಭಿಪ ತಪೋಲೋಕ ||

ಮುಂದೆ ಶಿರಸ್ಸಿನಲಿ ಸತ್ಯಲೋಕವು |

ಹದಿನಾಲ್ಕು ಲೋಕಗಳ ಪೊತ್ತವನ ||

ಅಂದಿನ ಕ್ರಿಯಾವಸಾನವಾಗಲು ಬಿಡದೆನಿತ್ಯ |

ಒಂದೇ ಮನದಿಂ ಸ್ಮರಿಸಲು ವಿರಾಡ್ರೂಪವ ಕ್ರಿಯಾವಸಾನದಿ ||

ಬಂದು ಸದಾ ಪೊರೆವ ಶ್ರೀಕೃಷ್ಣವಿಠ್ಠಲ ||

3. ಅವನಿಯೊಳು ಗಂಧವಿಟ್ಟೆ ಗರ್ಭದಿ ಜೀವವಿಟ್ಟೆ |

ಆ ವನದೊಳು ರಸವಿಟ್ಟೆ ಅದರಲಿ ರುಚಿಯಿಟ್ಟೆ ||

ಉಜ್ವಲ ಶಿಖೆಯಲಿ ರೂಪವಿಟ್ಟೆ ಜೊತೆ ಶಾಖವಿಟ್ಟೆ |

ಪವನನಲಿ ಸ್ಪರ್ಶವಿಟ್ಟೆ ಅದರಲಿ ಅರಿವಿಟ್ಟೆ ||

ಭವ್ಯ ಆಗಸದಿ ಶಬ್ದವಿಟ್ಟೆ ಸುವಿಶಾಲ ಭಾವವಿಟ್ಟೆ |

ಅವ್ಯಕ್ತಾವ್ಯಕ್ತ ಶ್ರೀಕೃಷ್ಣವಿಠ್ಠಲನೇ ಎನ್ನಲಿ ಏನಿಟ್ಟೆ ತಿಳಿಸು ||

4 ಒಲಿದು ಬಾರೋ, ಒಲಿದು ಬಾರೋ ||ಪ||

ಸಲ ಪ್ರತಿ ಸಲ ಒಲಿದು ಬಾರೋ ಚೆನ್ನ ||ಅಪ||

ಅಜಮಿಳನ ತಪ್ಪು ನೋಡದೆ ಒಲಿದಂತೆ |

ಗಜೇಂದ್ರನ ಆರ್ತತೆಗೆ ಒಲಿದಂತೆ ||1||

ದ್ರೌಪದಿಯ ಕೂಗಿಗೆ ಓಡಿ ಬಂದಂತೆ |

ತಪಕೆ ಮೆಚ್ಚಿ ಬಾಲಕನೆಡೆ ಬಂದಂತೆ ||2||

ಗರ್ಭಸ್ಥ ಶಿಶುವ ಸುತ್ತಿ ಸುತ್ತಿ ರಕ್ಷಿಸಿದವನೇ |

ಗರ್ಭರಹಿತ ಶ್ರೀಕೃಷ್ಣವಿಠ್ಠಲ ಎನ್ನನ್ನೂ ಗರ್ಭರಹಿತಳನ್ನಾಗಿಸು ||3||

5 ಸಹಿಸೆನು ಗರ್ಭವಾಸ ದು:ಖವ |

ವಹಿಸೆನು ಸಂಸಾರದ ದುರ್ಭರ ಭಾರವ ||

ದಹಿಸೆನ್ನ ಪ್ರಾರಬ್ಧ ಕರ್ಮಗಳನ್ನೆಲ್ಲ |

ಅಹಿಶಯನ ಶ್ರೀಕೃಷ್ಣವಿಠ್ಠಲ ಇರಿಸಿಕೋ ನಿನ್ನಲ್ಲೇ ಸದಾ ||

6 ಶ್ರೀಗಂಧ ತಾನು ಸವೆದರೂ ಪರಿಮಳ ಪಸರಿಸುವುದು |

ಸಂಗ್ರಹಿಸಿದ ಜೇನು ಪರರಿಗೆ ನೀಡುವುದು ಹುಳು || 1||

ಮಡಿವಸ್ತ್ರವಾಗುವುದು ತನ್ನ ಪ್ರಾಣ ತೆತ್ತು |

ನೀಡಿ ತನ್ನರಕ್ತ ಕ್ಷೀರ ರೂಪದಿ ಸಕಲರ ಸಲುಹುದು || 2 ||

ಮಾನವ ಸ್ವಾರ್ಥಿಯಾಗದೇ ನಿ:ಸ್ವಾರ್ಥಿಯಾಗು |

ಹೀನ ಬದುಕಿಗಿಂತ ತ್ಯಾಗಮಯಿಯಾಗು || 3 ||

ಪರಮದಯದಿ ಸಿಕ್ಕ ಈ ಅವಕಾಶದಿ |

ಗುರಿಯಾಗಿಸಿ ಶ್ರೀಕೃಷ್ನವಿಠ್ಠಲನ ಧ್ಯಾನಿಯಾಗು || 4 ||

7 ಇದು ಯಾರ ದೇಹ, ನನ್ನದೋ ಮತ್ತ್ಯಾರದೋ ತಿಳಿಯದಲ್ಲ ? |

ಈ ದೇಹ ನನ್ನ ವೀರ್ಯದೊಂದ ಹುಟ್ಟಿದೆ ಎಂದ ತಂದೆ ||

ಈ ದೇಹ ನನ್ನ ಗರ್ಭದಲಿ ಬೆಳೆದಿದೆ ಎಂದ ಜನನಿ |

ಈ ದೇಹ ನಾ ಕೊಟ್ಟ ಅನ್ನದಿಂದ ಬೆಳೆದಿದೆ ಎಂದ ಅನ್ನದಾತ ||

ಈ ದೇಹ ನನ್ನದಾಗಲು ಎಷ್ಟು ಶ್ರಮಿಸಿದ್ದೆನೆಂದೆಳರ್ಧಾಂಗಿ |

ಈ ದೇಹ ಸತ್ತ ಮೇಲೆ ನಾ ಸುಡುವೆನೆಂದ ಅಗ್ನಿ ||

ಈ ದೇಹ ಕೊಳೆತರೆ ನನ್ನ ವಶವೆಂದ ಕ್ರಿಮಿಗಳು |

ಈ ದೇಹ ಕೊಳೆಯದಿರೆ ನಮ್ಮ ವಶವೆಂದ ನಾಯಿ-ನರಿಗಳು ||

ಈ ದೇಹ ನನ್ನಾಧೀನ ಎಂದ ಪ್ರತಿದಿನ ದುಡಿತಕೆ ಹಣವಿತ್ತವ ||

ಈ ದೇಹ ಯಾರದೆಂಬುದೇ ನಿರ್ಣಯವಾಗದಿರೆ ಈ ಅಹಂ ಏಕೆ ?||

ಇದಕ್ಕಾಗಿ ಮಾಡುವ ಮೋಸ, ಸ್ವಾರ್ಥಗಳೇಕೆ |

ಮದತರುವ ಮೋಹವೇಕೆ ? ಸುಂದರತೆಗಾಗಿ ಶ್ರಮಿಸುವುದೇಕೆ ? ||

ಬಿದ್ದು ಹೋಗುವ ದೇಹದ ಮೇಲೆ ದುರಭಿಮಾನವೇಕೆ ? |
ಸದಾ ಪಾಪ-ಶಾಪಕೆ ಈಡಾಗುವ ಈ ದೇಹ ಬೇಡವೆನಗೆ ||

ಎಂದೂ ನಿನ್ನನ್ನೇ ಸ್ಮರಿಸುವ, ಕಾಣುವ ಯೋಗವೆನೆಗಿರಲಿ |

ಬಂದಿದ್ದಕ್ಕೆ ಪ್ರತಿ ಜನ್ಮ ಸಾರ್ಥಕವಾಗುವಂತೆ ಮಾಡೋ ಶ್ರೀಕೃಷ್ಣವಿಠ್ಠಲ ||

8. ನಿಲ್ಲಿಲು ನೆಲ ಬೇಕು |
ಕುಳ್ಳಿರಲು ನೆಲ ಬೇಕು ||

ಮಲಗಲು ನೆಲಬೇಕು |

ಕಾಲಿಟ್ಟು ಓಡಲೂ ನೆಲಬೇಕು ||

ಬೆಳೆಬಂದರೆ ಮಾತ್ರ ತಿನ್ನಲು ಅನ್ನ |

ನೆಲದ ನೆಲೆ ಇ,ಲ್ಲದಿರೆ ಇರಲು ಸಾಧ್ಯವೇ ? ||

ಕುಲ ಗೋತ್ತಿರದಿದ್ದರೂ ನೆಲೆಗೊತ್ತಿದೆ |

ನೆಲೆಯ ಬೆಲೆ ಗೊತ್ತಿದ್ದರೂ ||

ಅಲಕ್ಷ್ಯ ಹಾಗೂ ಸದಾ ಉದಾಸೀನ |

ಹೇಳುವುದಕ್ಕೆ ಮಾತ್ರ ನೆಲವೇ ಜನನಿ ಎಂದು ||

ಕೆಲಸಕ್ಕೆ, ಬದುಕಲಿಕ್ಕೆ ಎರಡೂ ಬೇಕು ||

ಹೊಲಸು ಮಾಡಲು ಸದಾ ಸಿದ್ದ |

ಕೀಳಾಗಿ ಬಯ್ಯಲಿಕ್ಕೂ ಇವೇ ಎರಡು ಬೇಕು |

ಕಾಲಿನಿಂದ ವದೆದರೂ, ಪ್ರೀತಿಯಿಂದ ಕಾಣುವವು ||

ಒಲವಿಂದ ಈ ವಿಪರೀತದ ಅರ್ಥಮಾಡಿಸು |

ಆಲದೆಲೆ ಮೇಲೆ ಪವಡಿಸಿದ ಶ್ರೀಕೃಷ್ಣವಿಠ್ಠಲನೇ ||

9 ಯತಿ ಶ್ರೀ ರಾಘವೇಂದ್ರ ಸಕಲರ ಪೊರೆಯುವ ||ಪ||

ದ್ವೈತಮತೋದ್ಧಾರಕ ಸುಜ್ಞಾನಿ ಪರಮವೈರಾಗಿ || ಅಪ||

ಮಂತ್ರಾಲಯದಿ ಕುಳಿತಿಹರು ಗುರುರಾಯರು |

ಸಂತರಮಣನ ಜಪಿಸುತ ವೃಂದಾವನದೊಳು ||

ಪತಿತರ ಪಾವನಗೊಳಿಸುತ, ಹೀನ ದು:ಖಿತರ ಸಲಹುತ |

ಸತತ ಸಕಲರ ಮನದಿಚ್ಛೆ ಪೂರೈಸುತ ||1||

ಸುರಿಸುತ ವರಗಳ ನಿರುತ ರಕ್ಷಿಪ ಭಕ್ತರ |

ಪರಿಪರಿಯಿಂದ ಸಕಲರ ಪಾಲಿಸುತ ||

ಬರೆದಿಹುರು ಪಂಚಾಶತ ಮೇಲಾರು ಗ್ರಂಥಗಳ |

ಪರಿಮಳ ಸೂಸಿದರು ನ್ಯಾಯ ಸುಧೆಯ ||2||

ಕಷ್ಟ ಕಾರ್ಪಣ್ಯದಿ ತಾ ದಿನ ನೂಕಿದರೂ |

ಇಷ್ಟಪುಣ್ಯವ ಹಂಚಿಉದ್ಧರಿಸುತರಲ್ಲರೆ ||

ದಿಟ್ಟತನದಿ ಸಜೀವ ವೃಂದಾವನಸ್ಥರಾದರು |

ಶಿಷ್ಟ ಪರಿಪಾಲಕ ಶ್ರೀಕೃಷ್ನವಿಠ್ಠಲನ ನಿಜಭಕುತ ||3||

. ಇರವಿದ್ದರೆ ಸಾಲದು |

ಇರವಿನ ಅರಿವುಬೇಕು ||

ಅರಿವಿಗೆ ಗುರುಬೇಕು |

ಗುರುವಿನ ಗುರು ಜಗದ್ಗುರು ||

ಶ್ರೀಕೃಷ್ಣವಿಠ್ಠಲನ ಅನುಗ್ರಹಬೇಕು ||

11 ಎದ್ದು ಶ್ರೀಕೃಷ್ಣನ ಸುಪ್ರಭಾತ ಕೇಳುತ್ತಾ |

ವಂದಿಸಿ ಧರಣಿಯ ಕ್ಷಮೆ ಕೋರುತ್ತಾ ||

ಮಧ್ವ ಸರೋವರದಿ ಸ್ನಾನವ ಮಾಡಿ |

ಶುದ್ಧ ವಸನ ಧರಿಸಿ ಬೇಗನೆ ||

ಮುದ್ದು ಶ್ರೀಕೃಷ್ಣ ವಿಠಲನ ದರುಶನಮಾಡಿ |

ನಿಂದು ಸಕಲ ಪೂಜೆಯ ನೋಡಿ |

ಮುದದಿ ಅಲಂಕಾರದಿ ಮೈವೆತ್ತಿನಿಂತ |

ಮಧ್ವೇಶ ಉಡುಪಿ ಶ್ರೀಕೃಷ್ಣವಿಠ್ಠಲನ ||

ನೋಡಿ ನಾ ಧನ್ಯನಾದೆ ||

12 ಮಧ್ವ ಸಿಂಹಾಸನದಿ ವಿರಾಜಿಪರ |

ಕಂಡು ಶ್ರೀ ವಿಶ್ವೇಶತೀರ್ಥರ ಧನ್ಯತೆಯಲಿ ||

ಪಡೆದು ತೀರ್ಥ, ಗುರುಗಳಾಶೀರ್ವಾದ ಸಹಿತ |

ನಡೆತಂದು ಚೌಕಿಯ ಭೋಜನಕೆ ||

ವಂದಿಸಿ ಗುರುಳೊಂದಿಗೆ ಸಹಭೋಜನ |

ಮಾಡಿ ನಂತರ ಮಂತ್ರಾಕ್ಷತೆ ಪ್ರಸಾದ ||

ಪಡೆದಿದ್ದೇ ಶ್ರೀಕೃಷ್ನವಿಠ್ಠಲನ ಅನುಗ್ರಹದಿ ||

13. ಶ್ರೀ ವಿಶ್ವೇಶತೀರ್ಥರ ಸಮ್ಮುಖದಿ |

ಸುವಿಶೇಷದಿ ಉಪನ್ಯಾಸ ಮಾಡಿದ್ದೇ ಪುಣ್ಯ ||

ಭವದಿ ಹರಿದಾಸರು ಪಾಡಿದ ಶ್ರೀರಾಘವೇಂದ್ರತೀರ್ಥರ |

ಸುವರ್ಣಿಸಿ ವಾಕ್ ಶುದ್ಧಿ ಪಡೆಡಿದ್ದೇ ಪುಣ್ಯಪ್ರದ ||

ದಿವ್ಯಪ್ರಸನ್ನತೆಯಲಿ ಆಲಿಸಿ ಧ್ವನಿಸಾಂದ್ರತೆ |

ಮೆಚ್ಚಿ ಬಿಡುಗಡೆಮಾಡಿದರು ಗುರುಗಳು ಸಭೆಯಲಿ ||

ಚಾರ್ವಾಂಗ ಶ್ರೀಕೃಷ್ಣವಿಠ್ಠಲನ ಶೇಷ ವಸ್ತ್ರವಿತ್ತು ಹರಿಸಿದರು ||

14. ಪುರ್ವಜನ್ಮಕೃತ ಪುಣ್ಯದ ಬಲದಿಂ |

ಅವಕಾಶ ದೊರೆಯತೆನಗೆ ಮುತ್ತೈದೆಯರ ಸತ್ಸಂಗ ||

ಸಾವಿರ ಸ್ತ್ರೀಯರ ಜೊತೆ ಶ್ರೀ ಲಕ್ಷ್ಮೀ ಶೋಭಾನ ಪಠಿಸಿದೆ |

ಶ್ರೀ ವಿಶ್ವೇಶತೀರ್ಥರ ಉಪಸ್ಥಿತಿಯಲಿ ಮುದದಿ ||

ಶ್ರಾವಣ ಬಹುಳ ಶುಕ್ರವಾರದ ಸಂಜೆಯಲಿ |

ಸರ್ವ ಮುತ್ತೈದೆಯರ ಆಶೀರ್ವಾದದ ಸಂಗದಿ ||

ಶ್ರೀವಿಶ್ವಪ್ರಸನ್ನತೀರ್ಥರಿಂದ ದಕ್ಷಿಣೆಸಹಿತ ಪ್ರಸಾದ ಸ್ವೀಕರಿಸಿ |

ಭವತಾರಕ ಬಿಂಬಸ್ಥ ಶ್ರೀಕೃಷ್ಣವಿಠ್ಠಲಗರ್ಪಿಸಿ ಧನ್ಯಳಾದೆ ||

15. ಗೋದಾನ ಸಹಿತ ನವನೀತ ಸೇವೆ ಅರ್ಪಿಸಿ |

ಮುದದಿ ಪ್ರದಕ್ಷಿಣೆ, ದಕ್ಷಿಣೆ ಸಮರ್ಪಿಸಿ ||

ಮುದ್ದು ಶ್ರೀಕೃಷ್ಣಣಪ್ರಸಾದ ಮಿಷ್ಟಾನ್ನಭುಂಜಿಸಿ |

ಹಿಂದಿನ ದಿನ ಅಲಂಕರಿಸಿದ ಸೀರೆ ಪ್ರಸಾದದಿ ||

ಪಡೆದು ಶ್ರೀವಿಶ್ವೇಶತೀರ್ಥ ಗುರುಗಳಿಂದ |

ಹೃದಯ, ಮನತುಂಬಿ ತೃಪ್ತಿಯಾಯಿತು ||

ಮಾಡಿ ಪುನ: ಶ್ರೀಕೃಷ್ಣವಿಠ್ಠಲನ ದರುಶನ |

ಉಡುಪಿಯ ಯಾತ್ರೆಯಲಿ ಪುಣ್ಯದಿ ದೊರೆತ ||

ಸದವಕಾಶದಿಂದೆನ್ನ ಜನುಮ ಸಾರ್ಥಕವಾಯಿತು ||

16. ಬಾಲಕೃಷ್ಣನಿರಲಿ, ಮುರಳಿ ಮನೋಹರನಿರಲಿ |

ಕಾಲಕಾಲಕೆ ತೋರಿದ ಲೀಲೆಗಳ ಅಮಿತಾನಂದ ||

ನಿಲುವ ಸದಾ ಒಂದೇ ಮನದಿ ನೆನೆಯಲು |

ಚೆಲುವ ಶ್ರೀಕೃಷ್ನವಿಠ್ಠಲ ಒಲಿವ ತನ್ನ ನೆನೆವರ ||

17. ಕೃಷ್ಣನ ನೆನೆಯಿರಿ ಸದಾ ಕೃಷ್ನನ ನೆನೆಯಿರಿ ||ಪ||

ಕಷ್ಟತಾರಕ ಇಷ್ಟ ಪ್ರದಾಯಕ ಆಪದ್ಬಾಂಧವ ||ಅಪ||

ಈ ಲೋಕದಿ ಕೈಪಿಡಿಸು ನಡೆಸುವವ |

ಒಲವಿಂದ ಸಲಹುವ ನಿರುತ ಕರುಣದಿ ||

ನಿಲುವ ಮನ, ಚಿತ್ತ, ಬುದ್ಧಿಯಲಿ |

ಸಲ್ಲುವ ಕಾರ್ಯವನೇ ಸದಾ ಮಾಡಿಸುವ || 1 ||

ಒಲ್ಲೆನೆಂದರೂ ಪ್ರಾರಬ್ಧ ತಪ್ಪದು |

ಬಲ್ಲ ನಿವ, ಮರ್ದಿಸು ಮಣಿಸುವ ||

ಎಲ್ಲ ಸಹಿಸಲು ಶಕ್ತಿಯನೀವ |

ಒಲಿದು ಗುಡ್ಡದಷ್ಟನ್ನು ಕಡ್ಡಿಯಾಗುಸುವ || 2 ||

ಸುಖದಿ ನೆನೆದರೆ ಕಷ್ಟ ಬರಲೀಸ |

ದು:ಖದಿ ನೆನೆದರೆ ಸುಖವ ಕೊಡುವ ||

ಅಖಿಲ ಕಾರ್ಯಕಾರಣಕರ್ತನೆಂದು |

ಸಖ ಶ್ರೀಕೃಷ್ಣವಿಠ್ಠಲನ ಎಂದೂ ಮರೆಯದೆ || 3 ||

18. ಸಕಲ ಅಕ್ಷರಗಳು ಅವನನ್ನೆಪೇಳುವುದು |

ಸಕಲ ಶಬ್ದಗಳು ಅವನನ್ನೇ ಪೇಳುವುದು ||

ಸಕಲ ಸ್ವರಗಳು ಅವನನ್ನೇ ಪೇಳುವುದು |

ಅಖಿಲವೂ ಅವನನ್ನೇ ಪೇಳುವಾಗ ವ್ಯರ್ಥವಾಗಿಸದೆ ||

ನಿಖಿಲ ಪದಗಳೂ ಅವನ ಪೂಜೆಯಾಗಬೇಕು |

ದುಷ್ಕಾಲದಲ್ಲೂ ಅಪಶಬ್ದ ಬರಬಾರದು ||

ಅಕ್ಷರ ಪೂಜೆಯೆ ಜೀವನದ ಲಕ್ಷ್ಯವಾಗಿರಲಿ |

ಆಕಾಶಾಧಿಪತಿ ಯಾದವ ಅನಾದಿ ಅಂತ್ಯರಹಿತ ||

ಶ್ರೀಕೃಷ್ಣವಿಠ್ಠಲನ ಪೂಜೆಎಂಬ ಅರಿವಿರಲಿ ||

19 ನೀನೇ ತಂದೆ, ನೀನೇ ತಾಯಿ |

ನೀನೇ ಬಂಧು, ನೀನೇ ಬಳಗ ||

ನೀನೇ ದಿಕ್ಕು, ನೀನೇ ಜಗತ್ತು |

ನೀನೇ ಕಾರ್ಯ, ನೀನೇ ಕಾರಣ ||

ನೀನೇ ಹಸಿವು, ನೀನೇ ಅನ್ನ |

ನೀನೇ ಉಸಿರು, ನೀನೇ ಪ್ರಾಣ ||

ನೀನೇ ಶಕ್ತಿ, ನೀನೇ ಭಕ್ತಿ |

ನೀನೇ ಬುದ್ಧಿ, ನೀನೇ ಚಿತ್ತ ||

ನೀನೇ ಜಾಗ್ರತ, ನೀನೆ ಸುಷುಪ್ತಿ |

ನೀನೇ ಸ್ವಪ್ನ, ನೀನೇ ಕರ್ತೃ||

ನೀನೇ ಸ್ಮರಣ, ನೀನೇ ವಿಸ್ಮರಣ |

ನೀನೇ ಒಳಗೂ, ನೀನೇ ಹೊರಗೂ ||

ನೀನೇ ದೇಹ, ನೀನೇ ಆತ್ಮ |

ನೀನೇ ನಿಧಿ, ನೀನೇ ಸಾಧನ ||

ನೀನೇ ಸುಖ, ನೀನೇ ಕಷ್ಟ |

ನೀನೇ ಕೋಪ, ನೀನೇ ಶಾಂತ ||

ನೀನೇ ಮಾತು, ನೀನೇ ಮೌನ |

ನೀನೇ ನೆಲೆ, ನೀನೇ ಆಶ್ರಯ ||

ನೀನೇ ಸೃಷ್ಟಿ, ನೀನೇ ಲಯ |

ನಿನ್ನ ಬಿಟ್ಟರನ್ಯರಿಲ್ಲ, ನೀನೇ ಎಲ್ಲ ||

ನೀನೇ ಇಲ್ಲೂ, ನೀನೇ ಅಲ್ಲೂ |

ನೀನೇ ಎಲ್ಲಲ್ಲೂ ಶ್ರೀಕೃಷ್ಣವಿಠ್ಠಲ ||

ನಿನಗೇ ಸಕಲ ಸಮರ್ಪಣೆ |

ನೀನೇ ಉದ್ಧರಿಸೋ ಸದಾ ಸರ್ವದಾ||

20. ಹರೇ ರಾಮ ಹರೇ ರಾಮ ರಾಮ ರಾಮ ಹರೇ |

ಹರೇ ಕೃಷ್ಣ ಹರೇ ಕೃಷ್ಣ ರಾಮ ಕೃಷ್ಣ ಹರೇ ||

ಮಾಧವ ಮಧುಸೂದನ ಗೋವಿಂದ ಮುಕುಂದ |

ನರಹರಿ ಮುರಾರೇ ವಾಸುದೇವ ಶ್ರೀಕೃಷ್ಣವಿಠ್ಠಲ |

ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ವಿಠ್ಠಲ ||

ಶ್ರೀಕೃಷ್ಣವಿಠ್ಠಲ ಶ್ರೀಕೃಷ್ಣವಿಠ್ಠಲ, ಶ್ರೀಕೃಷ್ಣವಿಠ್ಠಲ ||

21. ಎನ್ನ ಪುಟ್ಟಿಸಿದವgÁåರೋ, ಸಲಹಿದವgÁåರೋ |

ಎನಗೆ ವಿದ್ಯೆವಿತ್ತವgÁåರೋ, ಬುದ್ಧಿಯಿತ್ತವgÁåರೋ ||

ಎನ್ನ ಒಡಲಿಗ್ಹಾಕಿದವgÁåರೋ, ವಸ್ತ್ರವಿತ್ತgÁåರೋ |

ಎನಗೆ ಸಂಪತ್ತಿತ್ತವgÁåರೋ, ಮಕ್ಕಳ ಭಾಗ್ಯವಿತ್ತವgÁåರೋ ||

ಎನ್ನ ಸುಖ-ದುಖ:ಕ್ಕೆ ಮೂಲgÁåರೋ, ಸಂತೈಸಿದವgÁåರೋ |

ಎನಗೆ ತಿಳಿದಂತೆ, ತಿಳಿಯದಂತೆ ಉಪಕರಿಸಿದವgÁåರೋ||

ಎನಗೆ ಹೆಜ್ಜೆ ಹೆಜ್ಜೆಗೆ ಕಲಿಸಿದ ಗುರುಗಳ್ಯಾgÁåರೋ |

ಎನ್ನ ತಿದ್ದಿ ಮೂರ್ತಿ ಮಾಡಿದವgÁågÁåರೋ ||

ಎನ್ನ ಕೈ ಪಿಡಿದು ಕಾಪಾಡಿದವರ ಲೆಕ್ಕವಿಲ್ಲ |

ನೀನೇ ಸರ್ವರೊಳಿದ್ದು ಮಾಡಿ ಮಾಡಿಸಿದ್ದು ವಿದಿತ ||

ಎನ್ನ ಬಲ್ಲ ಶ್ರೀಕೃಷ್ಣವಿಠ್ಠಲ ಸರ್ವರನೂ ಸಲಹೋ ಸ್ವಾಮಿ ||

22. ಇಲ್ಲೂ ಭಯವಿಲ್ಲ, ಅಲ್ಲೂ ಭಯವಿಲ್ಲ |

ಎಲ್ಲಲ್ಲೂ ನೀನೇ ಇರಲಾಗಿ, ಎನಗೇತರ ಭಯ?||

ಕಳ್ಳರ ಭಯವಿಲ್ಲ, ಸುಳ್ಳರ ಭಯವಿಲ್ಲ |

ಮಲ್ಲ ಜನರ ಭಯವಿಲ್ಲ, ಒಳ್ಳೆಯವರ ಭಯವಿಲ್ಲ ||

ಒಲವಿಂದ ಸಲಹುವ ಶ್ರೀಕೃಷ್ಣವಿಠ್ಠಲನಿರುವಾಗ ಯಾವಭಯ || ಎಲ್ಲಿಯ ಭಯ |

23. ಅಲ್ಲಿ ಇಲ್ಲಿ ಸುಳಿವ ಚಂಚಲಮನ |

ಚಲ ಅಚಲ ವಸ್ತುಗಳಲಿ ಓಡುವುದು ||

ಕಾಲ-ಕಾಲಕೆ ಎಳೆತಂದು ಬೇಗ |

ನಿಲ್ಲಿಸು ನಿನ್ನಲ್ಲೇ ಚಿತ್ತ ಚೋರನೇ ||

ಶ್ರೀಲಕ್ಷ್ಮೀನಲ್ಲ ಶ್ರೀಕೃಷ್ಣವಿಠ್ಠಲ ಮನದೊಡೆಯ ನೀನಲ್ಲವೆ ? ||

24. ಬೇಡುವವರನೇಕರು, ನೀಡುವವ ನೀನೇಬ್ಬನೇ |

ಕಾಡುವವರನೇಕರು, ಒಡೆಯ ನೀನೊಬ್ಬನೇ ||

ಕೊಡುವವ ಒಬ್ಬನೇ, ಹೇಗೆ ಮಾಡಲಿ ಎಂದೆನ್ನದೇ |

ಬಿಡದೆ ಕಾಪಾಡುವ ನಿನಗೆ, ಅನಂತರೂಪ, ಅನಂತಹಸ್ತವಿರೇ ||

ತಡ ಮಾಡದೇ ಸಕಲರನುದ್ಧರಿಸು ಶ್ರೀಕೃಷ್ಣವಿಠ್ಠಲ ನಿನ್ನ ಬಿಟ್ಟರನ್ಯರಿಲ್ಲ ||

25. ಬೆರಳುಗಳೈದು ಒಂದು ಕೈಯಲಿ |

ತೋರುವುದು ಬಹುಪಯೋಗವ ||

ಇರುವುದು ಪಂಚತತ್ವಗಳಲ್ಲಿ |

ಮುದ್ರೆಮಾಡಲು ವಿಧವಿಧದಿ ||

ಆರೋಗ್ಯಕರ ಜೀವನವೀವುದು |

ಅರುಹುವುದು ಪಂಚತಾರತಮ್ಯವ ||

ಎರಡೂ ಕೈ ಜೋಡಿಸಲು ವಿನಮ್ರದಿ |

ಶ್ರೀಕೃಷ್ಣವಿಠ್ಠಲ ಒಲಿದು ಮೆರೆಸುವ ||

26. ದು:ಖನುಭವ ಸುಖದ ಪ್ರಾಪ್ತಿಗೆ ಕಾರಣ |

ದು:ಖಾನಂತರ ಸುಖ ಜೀವನವು ನಿಯಮ ||ಪ||

ಸುಖ-ದು:ಖಕೆ ಪೂರ್ವಜನುಮದ ಪ್ರಾರಬ್ಧವೇ ಕಾರಣ ||ಅಪ||

ನಕ್ರ ಕಾಲ್ಪಿಡಿಯಲು ಗಜನ ಮದವಡಗಿ |

ವಕ್ರಬುದ್ಧಿ ಸರಿಯಾಗಿ ಶ್ರೀಹರಿ ದರುಶನವಾಲಯಿತು ||1||

ತಂದೆ ಕೊಟ್ಟ ನಾನಾ ಬಗೆ ಶಿಕ್ಷೆ ಸಹಿಸಲು |

ಕಂದಗೆ ಶ್ರೀ ನರಸಿಂಹನ ಅನುಗ್ರಹವಾಯಿತು ||2||

ಪತಿಯ ಶಾಪದಿ ದು:ಖಿತಳಾಗಿ ಕಲ್ಲಾದ |

ಸತಿಗೆ ಶ್ರೀರಾಮನ ಸಂದರುಶನವಾಯಿತು ||3||

ಮಾತೆಯ ಮಾತಿಗೆ ದು:ಖಿತನಾಗಿ ತಪಗೈದ |

ಸುತ ಧ್ರುವಗೆ ಶ್ರೀಮನ್ನಾರಾಯಣ ದರುಶನವಿತ್ತ ||4||

ಮರವಾಗಿ ನಿಂತ ಶಾಪಿತ ನಳಕೂಬರು |

ಶ್ರೀಕೃಷ್ಣವಿಠ್ಠಲನ ಸ್ಪರ್ಶದಿ ವಿಮುಕ್ತರಾದರು ||5||

27. ದು:ಖದಿ ದೈವವ ಹಳಿಯುವ ಮನುಜ |

ಸುಖದಿ ತನ್ನನ್ನೇ ಬಣ್ಣಿಸಿಕೊಳ್ಳುವುದ ಬಿಟ್ಟು ||

ಸುಖ-ದು:ಖ ಎರಡನ್ನೂ ಸಮಾನದಿ ಸ್ವೀಕರಿಸುತ |

ಅಖಿಲಕೂ ಪ್ರಾರಬ್ಧವೇ ಕಾರಣವೆಂದು ತಿಳಿದು ||

ಸಖ, ಶ್ರೀಕೃಷ್ಣವಿಠ್ಠಲನೇ ಪರದೈವ, ಸದಾಕಾಯ್ವ ಎಂದುನಂಬು ||

28. ಅನ್ಯ ಜನುಮವೇಕೆ- ಸಾಧನಾ ಜನುಮವಿರಲು |

ಅನ್ಯಮತಗಳೇಕೆ- ಮಧ್ವಮತವಿರಲು ||

ಅನ್ಯ ಶಾಸ್ತ್ರಗಳೇಕೆ- ಶುಕ ಶಾಸ್ತ್ರವಿರಲು |

ಅನ್ಯ ಗ್ರಂಥಗಳೇಕೆ- ಬ್ರಹ್ಮ ಸೂತ್ರವಿರಲು ||

ಅನ್ಯ ಬಯಕೆ ಏಕೆ- ಮೋಕ್ಷದ ಗುರಿ ಇರಲು |

ಅನ್ಯಗುರುಗಳೇಕೆ- ಸುಖತೀರ್ಥರಿರಲು ||

ಅನ್ಯದೈವವೇಕೆ- ಶ್ರೀಕೃಷ್ಣವಿಠ್ಠಲನೇ ಇರಲು ||

29. ನಿನ್ನ ಬಿಟ್ಟರನ್ಯ ದೈವವಿಲ್ಲ |

ಅನ್ಯ ಭಜಿಸಿದರೆ ಅಲ್ಪ ಫಲ ||

ನಿನ್ನ ಭಜಿಸಿದರೆ ಮಹಾಫಲ |

ಸನ್ನುತ ಶ್ರೀಕೃಷ್ನವಿಠ್ಠಲನಾಲಯದಿ ನಲಿವ ||

30. ಸಂಸಾರ ದಾಟಿದವರ ಊರುಗೋಲಾಗಿ |

ಸಸಾರದಿ ಅವರ ಅವಚಿಗೊಂಬೆ ||

ಅಸುರರ ದಾಮದಿ ಬಂಧಿಸಿ ಕೆಳಗಿರಿಸುವೆ |

ಮಿಶ್ರರ ಎನ್ನಕೃಪಾದೃಷ್ಟಿಯಿಂ ವೀಕ್ಷಿಸುವೆಂಬ ||

ಸುಸಂದೇಶವೀಯುತ ರಜತಪೀಠದಿ |

ಸುಸ್ಮಿತ ಬಾಲ ಶ್ರೀಕೃಷ್ಣವಿಠ್ಠಲನಿಂತಿರುವ ಸದಾ ||

31 ಭದ್ರೇ, ದಿತಿಯು ಇಂದ್ರ ಸಂಹಾರಕ |

ಪುತ್ರಬೇಕೆಂದು ಪುಂಸವನ ಆಚರಿಸಿದಳು ||

ಸರಿ ರಾತ್ರಿಯಲಿ ದಿತಿಯ ಗರ್ಭಪ್ರವೇಶಿಸಿ |

ಗರ್ಭವ ಚೂರಾಗಿಸಿದ ಏಳು ಏಳರಂತೆ ||

ಮಾsರುದ ಎನ್ನುತ ಅಳಲು ನೀಗಿಸಿದ |

ಹಿರಿಯ ತಾನಾಗಿ ತನ್ನ ತಮ್ಮಂದಿರನ್ನಾಗಿಸಿದ ||

ತೋರು ಬೆರಳಿಂದ ಕ್ಷೀರಪಾನ ಮಾಡಿಸಿದ | (ಮಾಂಧಾತ)

ಇಂದ್ರನ ಮಹಿಮೆಯೇ ಇಷ್ಟಿರುವಾಗ ||

ಶ್ರೀರಾಮನಾಗಿ ದೂರ್ವಾಸರಿಗೆ ತೋರುಬೆರಳಿಂದ |

ಶೀಘ್ರದಿ ಮೃಷ್ಟಾನ್ನ ಉಣಿಸಿ ಹಸಿವು ತಣಿಸಿದ ||

ಪುರುಷೋತ್ತಮ ತನ್ನ ನಾಭಿಯಿಂ ಬ್ರಹ್ಮನ ಪೆತ್ತ |

ಸರ್ವಸ್ವಾಮಿ ಸುರ-ನರ ಸೃಷ್ಟಿದಾತನಿವ ||

ಉರುಕ್ರಮ ಶ್ರೀಕೃಷ್ಣವಿಠ್ಠಲ ಸಕಲಪ್ರದಾತ |

ಪರಾತ್ಪರ ಎಂಬಲ್ಲಿ ಸಂಶಯವೇಕೆ ? ||

32. ಸವೋತ್ತಮನ ಮಹಾತ್ಮೆ ಅರಿತು |

ಜೀವೋತ್ತಮ ಗುರುಗಳ ಪಾದಕೆರಗಿ ||

ಜೀವನು ಜ್ಞಾನ ಪೂರ್ವಕ ಸುಧೃಡದಿ |

ಸರ್ವಕಾಲಕೂ ಭಕ್ತಿಯಿಂ ಸ್ಮರಿಸಿ ||

ದೇವ ಶ್ರೀಕೃಷ್ನವಿಠ್ಠಲನೇ ಬಿಂಬ |

ಅವನ ಪ್ರತಿ ಬಿಂಬ ತಾನೆಂದು ಉಪಾಸಿಸಿ ||

ನಿವೇದಿಸೇ ಆತ್ಮ, ಆಗುವುದು ಮುಕ್ತಿ ಇದು ಸತ್ಯ ||

33. ಬಯಸಲಿ, ಬಯಸದಿರಲಿ | ಸುಯೋಗ್ಯಭಾಗ್ಯ ನಮಗಿರಲು |

ಕಾಲಕಾಲಕೆ ಪ್ರಾಪ್ತಿ ಇದ್ದಷ್ಟು ಲಭ್ಯ | ಎಲ್ಲವೂ ಪೂರ್ವನಿಯೋಜಿತ ||

ಕರುಣಾಳು ಶ್ರೀಕೃಷ್ಣವಿಠ್ಠಲ | ಗುರುತಿಸಿ ಸಕಲರ ಪೊರೆವ ||

34. ಅಂತರಂಗದ ಸುಖಾನುಭವ |

ಸಂತರು ಮೆಚ್ಚುವರು ಮುದದಿ ||

ಕಂತೆ ಹಣಕೂ ಸರಿ ತೂಗದು |

ಚಿಂತಿಸಿದರೂ ಸಿಗಲಾರದು ||

ಸಂತೆಯ ಬಿಟ್ಟು ಏಕಾಂತದಿ |

ಚಿಂತಾಮಣಿ ಶ್ರೀಕೃಷ್ಣವಿಠ್ಠಲನ ||

ನಿತ್ಯದಿ ಬೇಡಲು ಅನುಗ್ರಹೀಪ ||

35. ಬದುಕೆಲ್ಲ ಸಾಧನೆಗೆ ಮೀಸಲಾಗಲಿ |

ಇಂದ್ರಿಯಗಳ ವಿಷಯ ಸುಖನಾಶವಾಗಲಿ ||

ಒಂದು ಜನುಮದಿ ಸಾಧಿಸುವ ಮಾತಲ್ಲ |

ಬುಧರು ಪೇಳಿದಂತೆ ನಡೆಯಲು ಅಸಾಧ್ಯವೇನಲ್ಲ||

ಸಾಧನೆ ಮೊದಲ ಮೆಟ್ಟಲೇ ಭಗವಂತನ ಅರಿವು |

ಒಂದೇ ಮನದಿ ಮಾಡಲು ಭಕುತಿ, ಭಗವತ್ತತ್ವಚಿಂತನ ||

ಇದುವೇ ಸಾಕ್ಷಾತ್ಕಾರಕ್ಕೆ ದಾರಿ, ಮುಕುತಿಗೆ ಗುರಿ |

ಆಧಾರ ಮೊದಲಾದ ಆರು ಚಕ್ರ ಜಾಗ್ರತಗೊಳಿಸಿ ||

ಸಾಧಿಸಿ ಸುಷುಮ್ನಾನಾಡಿ, ಭೇದಿಸಿ ಪರಬ್ರಹ್ಮನ ಸೇರಲು |

ಮೊದಲು ಕಾಣುವುದು ಭಾನುಕೋಟಿ ತೇಜ ||

ದ್ವಾದಶ ನಾದ, ಓಂಕಾರಘೋಷದ ಮಧ್ಯೆ |

ಬಿಂದು ಕಾಣುವುದು ಅನುಭವ ವೇದ್ಯದಿ ||

ಆದಿ-ಅಂತ್ಯವಿರದೀ ಸ್ಥಿತಿಯಲಿ ಅರಿವರು ಸರ್ವ ಸಮರ್ಥನ |

ಸಿದ್ಧ ಪುರುಷರು ಪಡೆದ ಅನುಭವ ಬೇರೆಬೇರೆ ||

ನಿರ್ದಿಷ್ಟ ಸಮಯದಿ ಗುರುಗಳಿಂದ ಅನುಗ್ರಹವಾದಾಗ |

ಅಂದದ್ದೆಲ್ಲಾ ಭಗವಂತನ ವಾಕ್ಯಗಳು || (ವೇದವಾಕ್ಯ)

ಹಾಡಿದ್ದೆಲ್ಲಾ ಭಗವಂತನ ಮಹಿಮೆಗಳು |

ಕಂಡಕಂಡದ್ದೆಲ್ಲಾ ಭಗವಂತನ ರೂಪಗಳು ||

ಆದ ಆನಂದ ಮಂದಿಗೆ ಹೇಳಲಾಗದು, ಹೇಳಿದರೆ ತಿಳಿಯಲಾಗದು |

ಸಾಧ್ಯದ ಮಾತಲ್ಲ ಬಿಂಬೋಪಾಸನೆ ಸಕಲರಿಗೆ ||

ಸಾದೃಶ್ಯಅಂತರಂಗದ ಏಕಾಗ್ರತೆ ಜೊತೆ ಬಿಂಬಕ್ರಿಯಾನುಸಂಧಾನದಿ |

ಹೃದಯಸ್ಥ ಶ್ರೀಕೃಷ್ಣವಿಠ್ಠಲನ ಕಾಣುವುದೇ ಬಿಂಬಾಪರೋಕ್ಷ ||

36. ನಿಂದಿಸುವರು ಸುತ್ತಮುತ್ತವಿರಲಿ |

ಹಂದಿ ಇದ್ದರೆ ಸಂದಿ ಸಂದಿ ಸ್ವಚ್ಛ ||

ಅಂದು ಅಂದು-ಇಂದಿನ ಪಾಪ ತೊಳೆವರು |

ಇಂದು ಮುಂದಿನ ಏಳ್ಗೆಗೆ ಕಾರಣರಾಗುವರು ||

ಛಂದದಿ ಶ್ರೀಕೃಷ್ಣವಿಠ್ಠಲನೆಡೆ ಕೊಂಡೊಯ್ಯುವರು ||

37. ಹುಟ್ಟಿದ ಮೇಲೆ ಚಟ್ಟವೇರುವತನಕ |

ಹೊಟ್ಟೆಗೆ ಬದುಕಲು ಅನ್ನ ಹಾಕಲೇಬೇಕು ||

ಮಾಡಿದ್ದು ಒತ್ತಾಯದಿ ತಿನ್ನಲೇಬೇಕು |

ತಿಂದಿದ್ದು ಖಂಡಿತದಿ ಹೊರಹಾಕಲೇಬೇಕು ||

ಸರ್ವರೂ ಊಟವನೇ ಮಾಡುವರು |

ಅವರವರಿಗೆ ಬಡಿಸಿದ್ದು ಉಣಬೇಕು ||

ಇಷ್ಟವಿದ್ದದ್ದು ಪಾಲಿಗೆ ಬರದಿರಬಹುದು |

ಕಷ್ಟವಾದರೂ ಅಷ್ಟೂ ಸೇವಿಸಲೇಬೇಕು ||

ಜೀರ್ಣವಾದರೂ ಸರಿ ಅಜೀರ್ಣವಾದರೂ ಸರಿ |

ಪೂರ್ಣವಾಗಿ ಬಿಡದೆ ಸಹಿಸಲೇಬೇಕು ||

ಏನಾದರಾಗಲಿ ಬೇಡದಂತೆ ಮಾಡು |

ಅನುಗ್ರಹಿಸು ದಯದಿ ಶ್ರೀಕೃಷ್ನವಿಠ್ಠಲ ||

38. ಪುಟ್ಟಿದೆ ಉತ್ತಮ ಕುಲದಿ ಮುಂದೇನು? |

ಉತ್ತಮ ತಾಯ್ತಂದೆಯರ ಪಡೆದ ಮುಂದೇನು? ||

ಆಟ-ಪಾಟದಿ ಬಾಲ್ಯವ ಕಳೆದೆ ಮುಮದೇನು? |

ಉತ್ತಮ ಲೌಕಿಕಶಿಕ್ಷಣ ಪಡೆದೆ ಮುಂದೇನು? ||

ಮಾತಿನ ಪ್ರತಿಭೆಯಲಿ ಪ್ರಶಂಸೆ ಪಡೆದೆ ಮುಂದೇನು? |

ಉತ್ತುಂಗ ಶಿಖರದಿ ಮೆರೆದೆ ಮುಂದೇನು? ||

ಪ್ರೀತಿ-ಕಾಮದಿ ಯೌವ್ವನ ಹೋಯಿತು ಮುಂದೇನು? |

ಹುಟ್ಟಿದ ಮಕ್ಕಳ ಉನ್ನತಿ ನೋಡಿದೆ ಮುಂದೇನು? ||

ಕಟ್ಟಿಮನೆ, ಧನ-ಕನಕ ಸೇರಿಸಿಟ್ಟೆ ಮುಂದೇನು? |

ಇಷ್ಟ ಪಟ್ಟಿದ್ದೆಲ್ಲಾ ಹರ ಸಾಹಸದಿ ಪಡೆದೆ ಮುಂದೇನು? ||

ಕಷ್ಟ ಪಡೆದೆ ಸುಖದಿ ಜೀವನ ಸಾಗಿತು ಮುಂದೇನು? |

ಇಷ್ಟೇನಾ ಹುಟ್ಟಿ ಬಂದ ಜೀವನದ ಅರ್ಥ? ||

ಸತ್ಕರ್ಮ, ದಾನ-ಧರ್ಮ ಒಂದಿನ ಮಾಡಲಿಲ್ಲ |

ಬಿಟ್ಟು ಎಲ್ಲ ಇಲ್ಲೇ, ಹೋಗಬೇಕೆಂಬುದು ತಿಳಿಯಲಿಲ್ಲ ||

ನಿತ್ಯ ಅರಿಯದೇ ಪರರಿಗೆ ಬೇಕಾದಂತೆ ಬಾಳಿದೆ |

ಸ್ವಂತ ಸುಖದ ನೆಲೆಯ ಅರಿಯಲಿಲ್ಲ ||

ಭ್ರಷ್ಟವಾಯಿತು ಬುದ್ಧಿ, ನಿಜಮರ್ಮ ತಿಳಿಯದೇ |

ನಷ್ಟವಾಯಿತು ಮಾನವ ಜನುಮವೆಲ್ಲ ||

ಕಟ್ಟಕಡೆಗೆ ಅರ್ಥಮಾಡಿಕೊಳ್ಳುವುದರಲ್ಲಿ ||

ಮಾತು ಮೌನ, ದೇಹ ಜೀರ್ಣ, ಪರಸಾಧೀನ |

ಪುಟ್ಟಿಸಿ ಜೊತೆ ಸುಖ ಕೊಟ್ಟವನ ಮರೆತೆ ||

ಸುತ್ತಲೂ ನೋಡುತ್ತಾ, ಒಳಗೇ ಇಣುಕಿಸದಾದೆ |

ಮತ್ತ್ಯಾವಾಗ ಮಾನವ ಜನುಮ ಬರುವುದೋ ಗೊತ್ತಿಲ್ಲ ||

ಮತ್ತೊಮ್ಮೆ ಹುಟ್ಟಿದರೂ ಧರ್ಮದಿ ಇಚ್ಛೆ ಬರಬೇಕಲ್ಲ |

ಇಷ್ಟೆಲ್ಲಾ ಕೊಟ್ಟ ಶ್ರೀಕೃಷ್ಣವಿಠ್ಠಲಗೆ ದ್ರೋಹ ಬಗೆದೆ

ವಿಠ್ಠಲ ಶ್ರೀಕೃಷ್ಣವಿಠ್ಠಲ ತಪ್ಪು ಮನ್ನಿಸಿ ಸಲಹೋ ದಯನಿಧೇ ||

39. ಮುಂದೆ ಮಾಡುವ ಕೆಲಸ ಇಂದೇ ಮಾಡು |

ಇಂದು ಮಾಡುವುದ ಈಗಲೇ ಮುಗಿಸು ||

ಉದಿಸುವ ಸೂರ್ಯ, ಮೃತ್ಯು ಯಾರಿಗೂ ಕಾಯರು |

ಒಂದಿನ ಹೋಗುವುದು ಸತ್ಯ, ತಯಾರಿಯಲ್ಲಿರು ||

ಇಂದಿರಾಪತಿ ಶ್ರೀಕೃಷ್ನವಿಠ್ಠಲನ ಧ್ಯಾನಿಸುತಿರು ||

40. ಕಾಲಕಾಲಕೆ ತಿದ್ದಿಕೊಳ್ಳುವುದರಲ್ಲೇ ಹೋಯಿತು ಜೀವನ |

ಕಲಿಯಲಿಲ್ಲ ಪೂರ್ಣ, ಕಾಲಮಾತ್ರ ಕಳೆಯಿತು ||

ಕಲಿ ಆವೇಶದಿ, ಸಾತ್ವಿಕ ಬುದ್ಧಿ ಬರಲಿಲ್ಲ |

ಕಲೆ ಅಳಿಯಲಿಲ್ಲ, ಆಳ ತಿಳಿಯಲಿಲ್ಲ ||

ಕುಲಸ್ವಾಮಿ ಶ್ರೀಕೃಷ್ನವಿಠ್ಠಲನೇ ತಿಳಿಸಬಲ್ಲ ||

41. ನಿನ್ನ ನಾಮೋಚ್ಚಾರಣದಿ ಎನಗೆ ಸುಪ್ರಭಾತವಾಗಲಿ |

ನಿನ್ನ ನಾಮೋಚ್ಚಾರಣೆ ಸಹಿತ ದಿನದ ಕಾರ್ಯಗಳು ಆಗಲಿ ||

ನಿನ್ನ ನಾಮೋಚ್ಚಾರಣೆ ಸಹಿತ ನಿತ್ಯ-ನೈಮತ್ತಿಕ ಕಾರ್ಯವಾಗಲಿ |

ನಿನ್ನ ನಾಮೋಚ್ಚಾರಣೆ ಸಹಿತ ವ್ರತ-ನೇಮಗಳು ನಡೆಯಲಿ ||

ನಿನ್ನ ನಾಮೋಚ್ಚಾರಣೆ ಹಗಲು-ರಾತ್ರಿ ನಡೆಯಲಿ |

ನಿನ್ನ ನಾಮೋಚ್ಚಾರಣೆ ಮನದಿ ಬಿಡದೆ ನಡೆಯಲಿ ||

ನಿನ್ನ ನಾಮೋಚ್ಚಾರಣೆ ಸಹಿತ ಪಂಚೇಂದ್ರಿಯ ಕಾರ್ಯವೆಸಗಲಿ |

ನಿನ್ನ ನಾಮೋಚ್ಚಾರಣೆ ಸಹಿತ ಅನ್ನ ಭುಂಜಿಸುವಂತಾಗಲಿ ||

ನಿನ್ನ ನಾಮೋಚ್ಚಾರಣೆ ಪ್ರತಿ ಉಸಿರಿನಲ್ಲಿರಲಿ |

ನಿನ್ನ ನಾಮೋಚ್ಛಾರಣೆ ಮಾಡುತಾ ಪ್ರಾಣಬಿಡುವಂತಾಗಲಿ ||

ನಿನ್ನ ನಾಮೋಚ್ಚಾರಣೆ ಪ್ರತಿಕ್ಷಣ, ಪ್ರತಿ ಜನುಮದಿ ಮಾಡುವಂತಾಗಲಿ |

ನಿನ್ನ ನಾಮಾಮೃತ ಸಾಗರವನ್ನೇ ಅನುಗ್ರಹಿಸು ಶ್ರೀಕೃಷ್ನವಿಠ್ಠಲಾ ||

42. ಎಲ್ಲ ಬಲ್ಲವನಾಟ ಬಲ್ಲದು |

ಬಲ್ಲಿದವಗೆ ಇದು ಚೆಲ್ಲಾಟ (ಸರಳದಾಟ)

ಬಲ್ಲದವಗೆ ಸದಾ ಪ್ರಾಣ ಸಂಕಟ ||

ಒಲ್ಲೆನೆಂದರೆ ಬಿಡದೆಂದಿಗೂ |

ಚೆಲ್ವ ಶ್ರೀಕೃಷ್ನವಿಠ್ಠಲನ ಜಗತ್ತಿನಾಟ ||

43. ( ಆದದ್ದೇನು (ಮಾನವಜನ್ಮ), ನೋಡಿದ್ದೇನು (ಜಗತ್ತಿನವ್ಯಾಪಾರ), ನಡೆದಿದ್ದೇನು? (ಕರ್ಮಾನುಸಾರ)

ಮಾಡಿದ್ದೇನು (ಕರ್ಮ), ಉಂಡಿದ್ದೇನು (ಕರ್ಮಫಲ), ಸಂದಿಸಿದ್ದೇನು (ಕೊಟ್ಟದ್ದು)?

ಬಂದದ್ದೇನು (ಪಾಪಪುಣ್ಯ-ಆಗಾಮಿ), ಹೋದದ್ದೇನು (ಸಂಚಿತ), ಇದ್ದುದ್ದೇನು (ಪ್ರಾರಬ್ಧ)?

ಮಂದವಾಯಿತೋ-ಛಂದವಾಯಿತೋ ಎಲ್ಲ ಶ್ರೀಕೃಷ್ಣವಿಠ್ಠಲನಂತಾಯಿತು || (ಪೂರ್ವನಿರ್ಧಾರಿತ))

ಆದ್ಧದ್ದೇನು?, ನೋಡಿದ್ದೇನು?, ನಡೆದಿದ್ದೇನು? |

ಮಾಡಿದ್ದೇನು?, ಉಂಡಿದ್ದೇನು? ಸಂದಿಸಿದ್ದೇನು? ||

ಬಂದದ್ದೇನು? ಹೋದದ್ದೇನು ? ಇದ್ದುದ್ದೇನು? |

ಮಂದವಾಯಿತೋ-ಛಂದವಾಯಿತೋ ಎಲ್ಲ ಶ್ರೀಕೃಷ್ಣವಿಠ್ಠಲನಂತಾಯಿತು ||

44. ಉದಿಸುವ ದಿನಕರ ಪ್ರತಿದಿನ |

ಸದಾ ಶುಭಕರ ಮೂಡಣದಿ ||

ಶೋಧಿಸುತ, ಬೋಧಿಸುತ, ಪೊಂದಿಸುತ |

(ಶುದ್ಧವಾಗಿಸುವ, ಜ್ಞಾನ, ಆಹಾರ)

ವೃದ್ಧಿ-ಹ್ರಾಸದಿ ಸೆಳೆಯುತ ಜೀವನ ||

ಆದಿತ್ಯಾಂರ್ಗತ ಶ್ರೀಕೃಷ್ಣವಿಠ್ಠಲನ |

ವಂದಿಸೆ ನಿತ್ಯ ಅತ್ಯಂತದಿ ಒಲಿವ ||

45. ಅರಸುತ ಹಿರಣ್ಯದ ಹರಿಣಿಯ |

ಸರಸದಿ ಬೆನ್ಹತ್ತಿದ ಮಾಯಾವಿ ||

ಸರಸಿಜಾಕ್ಷಳ ಅಪಹರಿಸಿದ ಭಿಕ್ಷುಕ |

ಘೋರ ಯುದ್ಧದಿ ಅಸುರರ ತರಿದ ||

ಸುರಾಜ್ಯವ ತನ್ನ ಭಕ್ತನಿಗಿತ್ತಾ |

ಅರ್ಪಿಸಿ ಅಗ್ನಿಗೆ (ಮಾನವಿತ್ತವಳ) ಪರಸ್ತ್ರೀಯಳ ||

ಪರಮ ಸತಿ ನಿತ್ಯಾವಿಯೋಗಿಯ ಪಡೆದ |

ಸ್ಮರಿಸಲು ಸದಾ ಸುರಸುಂದರನ ||

ಸರಾಗವಾಯಿತು ಬಾಳು ಸುರಾಗದಿ |

ಸ್ವರತ ಶ್ರೀಕೃಷ್ಣವಿಠ್ಠಲನ ಅನುರಾಗದಿ ||

46. ಸಹಿಸೆ ದು:ಖ-ಕೋಟಲೆಗಳ |

ವಹಿಸಿ ಅಪಮಾನದ ಸರಮಾಲೆಗಳ ||

ದಹಿಸುವ ಅಗ್ನಿ ಪರೀಕ್ಷೆಗೊಳಗಾಗಿ |

ಮಹಿಯೊಳು ತಾಳಿದವ ಬಾಳಿಯಾನೆಂಬ ||

ಮಹತ್ತಾದ ಸಂಧೆಶವಿತ್ತ ಕ್ಷಮಯಾಧರಿತ್ರೀ |

ಮಹಿಮೆ ತೋರಿದಳು ಶ್ರೀಕೃಷ್ಣವಿಠ್ಠಲನರ್ಧಾಂಗಿ ||

47. ಭೂಮಿಜೆ ಮೇದಿನಿ ಸುತೆ ಮೋದದಿ |

ರಮ್ಯತೆಯಲಿ ರಮಣನಾಜ್ಞೆ ಪಾಲಿಸಲು ||

ರಮಿಸಿ ನಟಿಸಿದಳು ನರಲೋಕದಿ ಸ್ತ್ರೀಪಾತ್ರ |

ರಮಾಪತಿ ಶ್ರಿಕೃಷ್ನವಿಠ್ಠಲನ ಅವತಾರ ನಾಟಕದಿ ||

48. ಭವ್ಯಮಾತೆ ದಿವ್ಯತೆಯಲಿ |

ನವ್ಯತೆಯಲಿ ಸ್ತವ್ಯ ||

ಉರ್ವಿಸುತೆ ಮರ್ಮವನರುಹಿದಳು |

ಪರ್ವ ಪರಮ ಶ್ರೀಕೃಷ್ಣವಿಠ್ಠಲನಾಜ್ಞೆಯಲಿ ||

49. ಮಾಡುವುದೆಲ್ಲ ನಿನಗಾಗಿ | (ಕರ್ಮ)

ನೋಡುವುದೆಲ್ಲ ನಿನ್ನಿಂದ || (ದೃಷ್ಟಿ)

ಕೊಡುವುದೆಲ್ಲ ನಿನ್ನದೇ | (ದಾನ)

ಜೋಡಿದಾರ ನೀನಾಗಿರುವಾಗ || (ದ್ವಾಸುಪರ್ಣಾಸಯುಜಾಸಖ )

ಅಂಡಲೆಯದಂತೆ ನೀನೇ ಅನುಗ್ರಹಿಸು ಶ್ರೀಕೃಷ್ಣವಿಠ್ಠಲ ||

50.. ದಾರಿ ಬಿಡು ಎನಗೆ ಗೋಪಾಲ ಹೋಗಬೇಕು ಮನೆಗೆ ||ಈಗ|| ||ಪ||

ಸರಿ ದಾರೀಲಿ ಅಡ್ಡಗಟ್ಟಿದರೆ ನಿನಗಿದು ತರವೇ ||

ಮಾರಲು ಹಾಲು_ಮೊಸರು ಸಂತೆಗೆ ಹೋಗಬೇಕು ||ಅಪ||

ಹಾದಿಯಲಿ ಸೆರಗ ಪಿಡಿದೆಳೆದು ರಂಪಮಾಡಿ |

ಬೀದಿಯಲಿ ಗಡಿಗೆ ಒಡೆದು ಸೂರೆಗೊಂಡರೆ ||

ಹೋದ ಮಾನ ಮರಳಿ ಬರುವುದೇ |

ನಾದ ಕೇಳಿಯಲಿ ತಪ್ಪದೇ ಬರುವೇನಯ್ಯಾ ||1||

ಅತ್ತೆ ಮಾವರ ಸೇವೆಯಲಿ ಸಂತೈಸುವೆ |

ಪತಿ-ಸುತಗೆ ಭೊಜನವಿಕ್ಕಿ ಮಲಗಿಸುವೆ ||

ಸುತ್ತದಾರಿ ಬಳಸದೇ ಒಡನೆ ಓಡಿ |

ಚಿತ್ತದಿ ನಿನ್ನನ್ನೇ ನೆನೆಯುತ ಬರುವೆ ||2||

ಚೆಂದದಿ ಫಣೆಯಲಿ ಕುಂಕುಮ, ಕಿವಿಯೋಲೆಧರಿಸಿ |

ಅಂದದ ಕಣ್ಣಿಗೆ ಕಾಡಿಗೆ ಇಟ್ಟು ಷೋಡಶ ಸಿಂಗಾರದಿ ||

ಅಂದುಗೆ ಕಾಲ್ಗೆಜ್ಜೆ, ಕಡಗ, ಕಂಕಣ ಕಿಂಕಿಣೆ ಮಾಡುತ |

ಮಂದಾರ-ಮಲ್ಲಿಗೆ ಮುಡಿದು ವ್ಯೆಯಾರದಿ ಬರುವೆ ||3||

ಜಡ ದಾರಿಯ ಸವೆಸುತ ಆತುರದಿ ಬಂದು |

ಕಂಡು ನಿನ್ನ ನಾ ಮರೆತು ಪರವಶಳಾಗಿ ||

ಕೂಡಿ ಕುಣಿಯುತ ಸತತ ಸರಸವಾಡುವೆ |

ಬಿಡದೆ ಎನ್ನ ತಣಿಸು ಶ್ರೀಕೃಷ್ನವಿಠ್ಠಲ ಬೇಡಿಕೊಂಬೆನು ||4||

ಮುಕ್ತಿ ತೋರುವ ಮುಕುಟಗೆ ಮಂಗಳಂ |

ಸುಖ ಕೊಡುವ ಮುಖಕೆ ಮಂಗಳ ||

ದು:ಖ ಕಳೆವ ಸುಕಂಠಕೆ ಮಂಗಳಂ |

ಕಕ್ಕುಲಾತಿ ನೀಡುವ ಹೃದಯಕೆ ಮಂಗಳಂ ||

ಕುಕ್ಷಿಯೊಳು ಜಗಪೊತ್ತ ಉದರಕೆ ಮಂಗಳಂ |

ಪಂಕಜಾಸನನ ಪೆತ್ತ ನಾಭಿಗೆ ಮಂಗಳಂ ||

ಸಕಲಾಶ್ರಯ ಜಾನು-ಜಂಘಕೆ ಮಂಗಳಂ |

ಲೋಕದಿ ಸುರಗಂಗೆ ಹರಿಸಿದ ಪಾದಕೆ ಮಂಗಳಂ ||

ಏಕೈಕ ಶ್ರೀಕೃಷ್ಣವಿಠ್ಠಲನ ಸರ್ವಾಂಗಕೆ ಮಂಗಳಂ |

ಲಕ್ಷ್ಮೀಪತಿ ಶ್ರೀಕೃಷ್ಣವಿಠ್ಠಲಗೆ ಮಂಗಳಂ-ಜಯಮಂಗಳಂ ||

ಶ್ರೀ ಕೃಷ್ಣವಿಠ್ಠಲಪದಗುಚ್ಛ 3 ಅನುಕ್ರಮಣಿಕಾ

52. ನೋಡುವ ದೃಶ್ಯ ನಿನ್ನದೇ | ಆಡುವ ಮಾತು ನಿನ್ನದೇ ||

ಮಾಡುವ ಕರ ನಿನ್ನದೇ | ನಡೆಯುವ ಕಾಲು ನಿನ್ನದೇ ||

ಓಡುವ ಮನ ನಿನ್ನದೇ | ಮಿಡಿಯುವ ಹೃದಯ ನಿನ್ನದೇ ||

ಓಡನಾಡುವ ಆತ್ಮ ನಿನ್ನದೇ | ನೀಡುವ ಜ್ಞಾನ ನಿನ್ನದೇ ||

ಕೊಡುವ ಭಕ್ತಿ ನಿನ್ನದೇ | ಕಂಡ ಕಂಡದದ್ದೆಲ್ಲಾ ನಿನ್ನದೇ ||

ಚಂಡ ಪ್ರಚಂಡ ಉದ್ದಂಡ | ಗಂಡರ ಗಂಡ ಸ್ವಾಮಿ ಶ್ರೀಕೃಷ್ಣವಿಠ್ಠಲ ಸರ್ವವೂ ನೀನೇ- ನಿನ್ನದೇ ||

53. ಇಳೆಯೊಳು ಒಳ್ಳೆಯ ಉಪಾಯ | (ಮುಕ್ತಿ ಸಾಧನ ಮಾರ್ಗ)

ಕೊಳೆ ಕಳೆಯುವ ಸಾಧನವಿದು || (ಅಜ್ಞಾನ ನಿವೃತ್ತಿ)

ತಿಳಿಯಲು ವೇಳೆ ಕಳೆಯಿರಿ | (ಶಾಸ್ತ್ರ)

ತಿಳಿಯದ್ದು ಕೇಳಿ ತಿಳಿಯಿರಿ || (ಗುರುಮುಖೇನ)

ತಿಳಿದಿದ್ದು ಹೇಳದೆ ಇರಬೇಡಿ | (ಉಪದೇಶ)

ತಿಳಿಯುವರಿಗೆ ತಿಳಿಸಿ ಹೇಳಿ || (ಆಸಕ್ತರಿಗೆ)

ತಿಳಿಯಾಗಿ ಸದಾ ತಿಳಿಸುತಿರಿ | (ನಾಸ್ತಿಕರಿಗೆ)

ತಿಳಿಯದವರಿಗೆ ತಿಳಿಸಬೇಡಿ || (ಅಧ್ಯಯನ-ಅಧ್ಯಾಪನ)

ಒಳ್ಳೇ ಮಾತೇ ಹೇಳುತ್ತಾ ಇರಿ | (ಮಧ್ವಸಿದ್ಧಾಮತ)

ಸುಳ್ಳು-ಗೊಳ್ಳು ಹೇಳದಿರಿ || (ಸಿದ್ಧಾಂತವಿರುದ್ಧ )

ಸುಳ್ಳು ಹೇಳಿದರೆ ಶ್ರಿಕೃಷ್ಣವಿಠ್ಠಲ ಮೆಚ್ಚನು || (ಅನುಗ್ರಹವಾಗದು)

54. ಎಂಬತ್ತ್ನಾಲ್ಕು ಲಕ್ಷಯೋನಿಯಲಿ ಸುತ್ತಿದರೂ |

ಕಂಬದಂತಾಗಿರುವ ಬಿಂಬ, ಶ್ವಾನ ಬಾಲದಂತೆ ||

ದಂಬ-ದರ್ಪ, ಅಹಂ-ಮಮತೆ ನೀಗದೆ |

ಸಂಬಳಕ್ಕಾಗಿ ಸುತ್ತುತ್ತಿರುವೆ ಆಶೆಯಲಿ ||

ಹಂಬಲಿಸಿ ಬೇಡವೆ ಶ್ರಿಕೃಷ್ಣವಿಠ್ಠಲ |

ಬೆಂಬಿಡದೆ ಎನ್ನ ತಿದ್ದಿ ನಿನ್ನಡಿ ಇರಿಸಿಕೋ ||

55. ಶ್ರೀಕೃಷ್ಣವಿಠ್ಠಲನೆಂದು ಅಂಕಿತವಿತ್ತ ಗುರುಗಳು |

ಶ್ರಿಕೃಷ್ಣನ ಪೂಜೆ ಮಾಡುವುದ ಕಂಡೆ ||ಪ||

ಶ್ರೀಕೃಷ್ಣನ ಪರ್ಯಾಯ ಪೂಜಾಕೈಂಕರ್ಯನಿರುತ ಶ್ರೀವಿಶ್ವೇಶತೀರ್ಥರ ಕಂಡೇ || ಅಪ||

ಗಡಿಬಿಡಿಯಲಿ ಬಂದು ತನ್ಮಯತೆಯಲಿ |

ಉಡುಪಿ ಬಾಲಕೃಷ್ಣನ ಸರ್ವಸೇವೆ ||

ಖಂಡುಗ ಉತ್ಸಾಹದಿ ಅಖಂಡದಿ |

ಮಾಡುವುದ ಕಂಡು ಪುನೀತಳಾದೆ ||1||

ಸರ್ವರ ಆದರದಿ ಬರಮಾಡುವ |

ಸರ್ವ ಯೋಗ-ಕ್ಷೇಮ ವಿಚಾರಿಸುತ ||

ಸರ್ವರಿಗೆ ಹಿತೋಪದೇಶ ಕೊಡುವ |

ಸರ್ವಕಲೆ, ನಿತ್ಯದಿ ಪ್ರೋತ್ಸಾಹಿಸುವ ||2||

ಸತತ ಶಕ್ತಿಯ ಸೆಲೆಯಾದ |

ನಿತ್ಯನೂತನ ಹರುಷ ಪುರುಷ ||

ಚೇತೊಹಾರಿ ತೇಜೋಪುಂಜ: |

ಸತ್ಯವ್ರತ ವಾಯ್ವಂಶ ಶ್ರೀಕೃಷ್ಣವಿಠ್ಠಲನ ನಿಜದೂತ ||3||

56. ಬೀದಿ ಬೀದಿಯಲಿ ಸುತ್ತುವ ನಾಯಿಯಂತೆ |

ಸಂದಿ ಸಂದಿಯಲಿ ತಿರುಗುತ ||

ಹಾದಿ ಬೀದಿಯಲಿ ಮೂಸುತ |

ಬಿದ್ದ ಬಿದ್ದ ಹೊಲಸು ತಿನ್ನುತ ||

ಮಂದಿ ಮಂದಿ ಕಾಲು ನೆಕ್ಕುತ ||1||

ಹಿಂದೆ ಮುಂದೆ ಬಾಲ ಅಲ್ಲಾಡಿಸಿ ಓಡಾಡುತ |

ಮುಂದೆ ಮುಂದೆ ಎಸೆದಿದ್ದು ಹಿಡಿಯುತ ||

ಎದ್ದು ಜಿಗಿದಾಡಿ, ಹೊಗಳಿದಾಗ ಉಬ್ಬುತ |

ವಿಧೇಯನಾಗಿದ್ದರೂ ಹೊಡೆಸಿ, ಬೈಸಿಕೊಳ್ಳುತ ||

ತಿಂದು, ನಿದ್ದೆ-ಮೈಥುನದಿ ಕಾಲಕಳೆಯುತ ||2||

ಇದೇ ಜೀವನವೆಂದು ನಂಬಿ ನಡೆದಿರುವೆ |

ಇದನ್ನು ಬಿಟ್ಟು ಹೊರ ಬರುವ ದಾರಿ ಕಾಣದೆ ||

ಒದ್ದಾಡುತ್ತಾ ಒಂದೇ ಮನದಿ ಬೇಡಿಕೊಂಬೆ |

ಬಿದ್ದುಹೋಗುವ ದೇಹದಿಂದ ನಿನ್ನ ಜೀತಗೈಸಿಕೋ ||

ಇದರಿಂದ ಪಾರುಗೈಸೋ ಒಡೆಯಾ ಶ್ರಿಕೃಷ್ಣವಿಠ್ಠಲ ದಯಾನಿಧೇ ||3||

57. `ಜೀವನವೆಂದರೆ ಇಷ್ಟೇನಾ ನಿತ್ಯದಿ ||ಪ||

ಪಾವನಗೊಳಿಸುವ ದಾರಿ ಇದೇನಾ || ಅಪ||

ಊಟ, ನಿದ್ದೆ, ಮೈಥುನದಿ ವ್ಯಯಿಸಿ |

ಕೊಟ್ಟ ಕಾಲ ಕಳೆಯುತ ವ್ಯರ್ಥದಿ ||

ನಿಟ್ಟುಸಿರು ಬಿಡುತಾ ಓಡಿ ದಣಿವುದು |

ಬಿಟ್ಟು ಇದೆಲ್ಲಾ ಬೇರೆ ಮಾರ್ಗದಿ ನಡೆದು ||

ಶ್ರೇಷ್ಠ ಅರ್ಥದಿ ಸಾರ್ಥಕ ಹೇಗೆ ಮಾಡಲಿ |

ಸೃಷ್ಟಿಕರ್ತನ ಉದ್ದೇಶ ಹೇಗೆ ತಿಳಿಯಲಿ? ||1||

ಪರರ ಧನ-ಕನಕಕ್ಕಾಗಿ ಆಶೆಪಟ್ಟೆ |

ಪರರ ಉನ್ನತಿ ಕಂಡು ಅಸೂಯೆ ಪಟ್ಟೆ ||

ಪರರೊಡನೆ ಹೋಲಿಸಿ ದು:ಖಪಟ್ಟೆ |

ಪರರಿಂದ ಹೊಗಳಿಸಿಕೊಳ್ಳಲು ಶ್ರಮಪಟ್ಟೆ||

ಪರರ ಸೇವೆಯಲಿ ಅಂತ:ದನಿ ಬಿಟ್ಟೆ |

ಪರತಮ ಶ್ರಿಕೃಷ್ಣವಿಠ್ಠಲನ್ನೇ ಮರೆತುಬಿಟ್ಟೆ ||2||

58 ಅರ್ಜಿ ಹಾಕುವೆ ನೀಕು ಸ್ವಾಮಿ ಪ್ರತಿಜನುದಿ |

ವರ್ಜಿಸಿ ಭವ ವಿಷಯ ಸುಖಂಗಳ ||

ಗರ್ಜಿಸಿ ಪಂಚಭೇದ ತಾರತಮ್ಯ ಜ್ಞಾನದಿ |

ಭಜಿಸಿ ಬಿಡದೆ ತವಪಾದ ಭಕ್ತಿಯಲಿ ||

ಮರ್ಜೀsಸೆ ಶ್ರೀಕೃಷ್ಣವಿಠ್ಠಲ ನಿನ್ನಡಿ ಸೇರುವಂತೆ ಮಾಡು ||

59. ಶಾಪ-ಕೋಪವೂ ಪರಮಾನುಗ್ರಹಕೆ ಕಾರಣವಾಹುದು ||ಪ||

ಪಾಪ-ಲೇಪಿತ ಭಕ್ತರೂ ಉದ್ಧಾರವಾಗುವರು ||ಅಪ||

ಶಾಪಿತ ಅಹಲ್ಯಗೆ ಶ್ರೀರಾಮ ದರುಶನ |

ಶಾಪಿತ ಗಜೇಂದ್ರನಿಗೆ ಶ್ರೀಹರಿ ಅನುಗ್ರಹ ||

ಶಾಪಿತ ಊರ್ವಶಿಗೆ ಸ್ತನ್ಯಪಾನಿಸುವ ಭಾಗ್ಯ |

ಶಾಪಿತ ನಳಕೂಬರಿಗೆ ನಂದಕಂದನ ಸ್ಪರ್ಶ ||1||

ನಿಂದೆ ಮಾಡಿ ಶಿಶುಪಾಲ ಮುಕ್ತಿಹೊಂದಿದ |

ಕದ್ದು ಪೃಥ್ವಿಯ ವರಾಹನ ದರುಶನ ಪಡೆದ ||

ಕದ್ದು ಮಾನಿನಿಯ ಅಸುರ ಶ್ರೀರಾಮನ ಸಂದರ್ಶಿಸಿದ |

ಒದ್ದು ಎದೆಗೆ ನಾರಾಯಣನಿಂದ ಉಪಚರಿಸಿಕೊಂಡ ||2||

ಕೋಪಿತ ಮಾತೆಯಿಂ ಧ್ರುವಗೆ ನಾರಾಯಣ ದರುಶನ |

ಕೋಪಿತ ಪಿತನಿಂ ಪ್ರಲ್ಹಾದಗೆ ನರಸಿಂಹನ ಅನುಗ್ರಹ ||

ಪಾಪಿ ಅಜಮಿಳ ವಿಷ್ಣು ಲೋಕಕೆ ನಡೆದ |

ಪಾಪಿ ಪಿಂಗಳೆ ಶ್ರೀಕೃಷ್ಣವಿಠ್ಠಲನ ಅಂಗಸಂಗ ಪಡೆದು ಧನ್ಯಳಾದಳು ||3||

60. ನೀ ಅಡಿ ಇಟ್ಟೆಡೆ ಎಲ್ಲ ಪಾವನವಾಯಿತೋ | ||ಕೃಷ್ಣ||

ನೀ ಅಡಿ ಇಟ್ಟಲ್ಲೆಲ್ಲಾ ಪವಿತ್ರ ಸ್ಥಳಗಳಾದವು ||

ನಿನ್ನಡಿ ಸೋಕಲು ಯಮುನೆ ದಾರಿ ಬಿಟ್ಟಳು |

ನಿನ್ನಡಿ ಮುಡಿದ ಕಾಳಿಂಗ ನಿರ್ಭಯನಾದನು ||

ನಿನ್ನಡಿ ಸೋಕಲು ಅಸುರ ಅಸು ನೀಗಿದ |

ನಿನ್ನಡಿ ಸೋಕಲು ಅಜಗರ ಸುಂದರ ಯುವಕನಾದ ||

ನೀ ಅಡಿ ಮೆಟ್ಟಿ ತ್ರಿವಕ್ರಳ ಸುಂದರಳಾಗಿಸಿದೆ |

ನಿನ್ನಡಿ ಕುಳಿತ ಅರ್ಜುನ ನಿನ್ನೇ ಬೇಡಿ ಪಡೆದ ||

ನೀ ಅಡಿ ಒತ್ತಿ ಅರ್ಜುನನ ಪ್ರಾಣ ಉಳಿಸಿದೆ |

ನಿನ್ನಡಿ ಸ್ಪರ್ಶಿಸಿದ ಗಂಗೆ ಪಾವನಳಾದಳು ||

ನಿನ್ನಡಿ ಕುಳಿತ ಮಾರುತಿ ಸ್ವಾತ್ಮಾಲಿಂಗನ ಪಡೆದ |

ನಿನ್ನಡಿ ಒತ್ತುತಾ ರಮೆ ಹೃದಯದಿ ಕುಳಿತಳು ||

ನಿನ್ನಡಿಯಲ್ಲಿದೆ ಸಕಲ ಸುಖದ ಸಾಗರ |

ನಿನ್ನಡಿ ಸೇವಕ ನಾನು ಶ್ರಿಕೃಷ್ಣವಿಠ್ಠಲ ನಿನ್ನಡಿಗೆ ಸೇರಿಸಿಕೋ ||

61. ಮಥುರೆಯಲಿ ಪುಟ್ಟಿ ಗೋಕುಲಕೆ ನಡೆದ |

ಎಂಥೆಂಥಾ ಅಸುರರ ಅಸು ಹೀರಿದ ||

ಮಥಿಸಿದ ಮೊಸರು ಬೆಣ್ಣೆ ಚೆನ್ನಾಗಿ ಕದ್ದುಮೆದ್ದ |

ಪಂಥದಿ ವೃಂದಾವನಕೆ ಪೊಗಿ ನೆಲಸಿದ ||

ಜಾಥಾಕೆ ಕರೆಸಿದ ಮಾವನ ಒರೆಸಿದ |

ಪೃಥೆಯ ಸುತರ ಕಣ್ರೆಪ್ಪೆಯಂದದಿ ಕಾಯ್ದುವ ||

ರಥ ನಡೆಸಿ ಧರ್ಮಯುದ್ಧ ಜಯಸಿದ |

ಕಥಾನಾಯಕ ಶ್ರೀಕೃಷ್ಣವಿಠ್ಠಲಗೆ ನಮೋನಮೋ ||

62. ಗಡಿ ಬಿಡಿಯಲ್ಲಿ ಗಡಿಗೆ ಒಡೆದೇ ಹೋಯ್ತು |

ಗಡಗಡ ಬಂದು ತುಂಬುವುದರಲ್ಲಿ ||

ಬಡ ಬಡನೆ ಉರುಳಿ ಜಾರಿಹೋಯ್ತು |

ಸಡಗರದ ಶ್ರೀಂಗಾರದ ಗಡಿಗೆ ||

ನೋಡು ನೊಡುವುದರಲ್ಲೇ ಚೂರಾಯ್ತು |

ಕಂಡ ಕಂಡವರ ಬೇಡಿದರೂ ಉಳಿಯಲಿಲ್ಲ ||

ಮಂಡೆ ಹೊಡಕೊಂಡರೂ ಮತ್ತೆಬಾರದು |

ಗಂಡರ ಗಂಡ ಶ್ರೀಕೃಷ್ಣವಿಠ್ಠಲ ಕೊಟ್ಟರೆ ಬರುವುದು ||

63 ಉಡುಪಿಯ ಕೃಷ್ಣನ ಮುಖ ಚೆಂದ |

ಒಡೆಯ ಶ್ರೀನಿವಾಸನ ನಡು ಚೆಂದ ||

ಪಂಢರಿಯ ವಿಠ್ಠಲನ ಪಾದ ಚೆಂದ |

ಕೂಡಿ ಎಲ್ಲವೂ ಶ್ರಿಕೃಷ್ಣವಿಠ್ಠಲ ಅತೀ ಚೆಂದ ||

64. ಬದರಿಯ ಹಾದಿಯು ಚೆಂದ |

ಸೌಂದರ್ಯದಿ ರಾಮೇಶ್ವರ ಚೆಂದ ||

ಬಂಧನ ಬಿಡಿಸುವಲ್ಲಿ ಜಗನ್ನಾಥ ಚೆಂದ |

ಅಂದವೋ ಅಂದ ನಮ್ಮ ದ್ವಾರಕಾಧೀಶ ಶ್ರಿಕೃಷ್ಣವಿಠ್ಠಲ ||

65. ಧರ್ಮದಿ ನಡೆದವಗೆ ವನವಾಸ | (ಯುಧಿಷ್ಠಿರ)

ಅರ್ಥ ಬಿಟ್ಟವನಿಗೆ ದಾಸತ್ವ || (ಪುರಂದರದಾಸ)

ಕಾಮ ಪೀಡಿತನಿಗೆ ವಿಷ್ಣುಲೋಕ | (ಅಜಮಿಳ)

ಮರ್ಮವನರಿತವಗೆ ಮೋಕ್ಷವೀವ ಶ್ರೀಕೃಷ್ಣವಿಠ್ಠಲ ||

66. ಗಾಳಿ ಬೆಳಕಿಲ್ಲದ ಖೋಲಿ |

ಕಾಲು ಚಾಚೇನಂದರೆ ಜಾಗ ಇಲ್ಲ ||

ಪಾಲಿಗೆ ಬಂದಿದ್ದಷ್ಟೇ ತಿನ್ನುವುದು |

ಹೊಲಸಿನಲ್ಲೇ ಉರುಳಾಡುವುದು ||

ಒಳದನಿ ಹೊರಗ್ಯಾರಿಗೂ ಕೇಳದು |

ಒಲ್ಲೆನೆಂದರೂ ನವಮಾಸ ಇರಲೇಬೇಕು ||

ಎಲ್ಲ ಸೈರಿಸಿದರೂ ಹೊರಬರಲು ತಿಳಿಯದು |

ಒಲವಿಂದ ವಾಯು ಹೊರಹಾಕಿದರೆ ||

ಅಳುತ್ತಾ ಉಸಿರೆಳೆದುಕೊಳ್ಳುವೆ |

ಕಾಲ ಎಲ್ಲ ದು:ಖ ಮರೆಸುವುದಂತೆ ||

ಕಳೆದ ಗರ್ಭವಾಸ ದು:ಖ ಮರೆತು |

ಉಳಿದ ದಿನ ಆನಂದದಿ ಕಳೆವೆ ||

ಕಾಲ ಚಕ್ರದಿ ಪುನ: ಪುನ: ಸಿಲುಕಿ |

ಒಳಗೆ ಬರುವುದು ಹೊರಗೆ ಹೋಗುವುದು ||

ಎಲ್ಲ ಬಲ್ಲ ಚೆಲ್ವ ಶ್ರೀಕೃಷ್ಣವಿಠ್ಠಲ ಪಾರುಮಾಡೋ ||

67. ಪರಿಮಳವು ಕಸ್ತೂರಿ, ಶ್ರೀಗಂಧದಲಿ |

ಹಾರುವುದು ಆಗಸದಿ ಹಕ್ಕಿಗಳಿಗೆ ||

ಪರೋಪಕಾರಿ ಮರಗಳಿಗೆ ನಿಶ್ಚಲತ್ವ |

ನೀರಲಿ ಈಸುವುದು ಜಲಚರವು ||

ಸರ್ವರಲೂ ಒಂದೊಂದು ವಿಶೇಷತೆವಿಟ್ಟ |

ಪರಮಾತ್ಮ ಮನುಜರಿಗಾಗಿ ಮೀಸಲಿಟ್ಟ ||

ಸರ್ವೋತ್ತಮ ಗುಣಗಳಾದ ಜ್ಞಾನ-ಮಾತು |

ನರರು ಬರೀ ಲೌಕಿಕಕ್ಕಾಗಿ ಇದನ್ನು ಬಳಸಿ ||

ಶ್ರೀಕೃಷ್ಣವಿಠ್ಠಲನ ಪಾಡಿ ಪೊಗಳದಿರೆ ಮೆಚ್ಚುವನೇ ||

68. ನಿನ್ನ ಬಿಟ್ಟರನ್ಯರಿಲ್ಲ | ಎನ್ನವರೆನ್ನುವgÁåjಲ್ಲ ||

ಅನಾಥೋ ದೀನರಕ್ಷಕ | ಉನ್ನತದಿ ಎತ್ತಿ ಕಾಪಾಡು ||

ಎನಗೆ ನಿನ್ನ ಅರಿವಿಲ್ಲ | ನಿನಗೆ ಎನ್ನರಿವಿದ್ದರೆ ಸಾಕೋ ಶ್ರೀಕೃಷ್ಣವಿಠ್ಠಲ ||

69. ಹೊಂಗಿರಣ ಮೂಡಿ ಮೂಡಣದಿ ಉಲ್ಲಾಸ ತಂದಿತು | ||ಪ||

ಅಂಗನೆಯರೆದ್ದು ಸುರಾಗದಿ ಉದಯರಾಗ ಪಾಡುತಿರಲು ||ಅಪ||

ಅಂಗದಿ ಕಂಬಳಿಯ ಹೊದ್ದು ಕೈಲಿ ಕೋಲನೆ ಪಿಡಿದು |

ಪೊಂಗಳಲೂದುತ್ತಾ ನಡೆದ ಗೊಲ್ಲರೊಡಗೂಡಿ ||

ಸಂಗಡಿಗರೆಲ್ಲಾ ಹರುಷದಿ ಅಡವಿಗೆ ಪೋದರು |

ಚೆಂಗನೆ ನಗೆಯುತ್ತಾ ಗೋವುಗಳು ಮುನ್ನಡೆದವು ||1||

ಪೋಗುತ್ತಾ ಪೋದರೆಲ್ಲ ಗುಹೆಯಂತಿರುವ ಅಜಗರದೊಳಗೆ |

ಪೋಗಿದ್ದರೆಲ್ಲ ಒಳಗೆ ಗೋಗಳ ಸಹಿತ ಗೋಪಾಲಕರು ||

ದಂಗಾದ ಗೋಪಾಲಕರು ಭೀತಿಯಲಿ ಸ್ಮರಿಸಿದರು |

ಕಗ್ಗಂಟಿನಿಂದ ಪಾರಾಗುವುದರಲ್ಲೇ ವರುಷ ಕಳೆದಿತ್ತು ||2||

ಭಂಗವಾಗದಂತೆ, ಯಾರ ಅರಿವಿಗೂ ಬಾರದಂತೆ |

ಆಗ ಸೃಜಿಸಿದ ಗೋಪಾಲಕರ ಗೋಗಳ ಸಹಿತ ||

ಅಗಮ್ಯ ಮಹಿಮೆಯ ಸರ್ವಸಮರ್ಥ ಕರುಣಾಳು |

ಭಗವಂತ ಶ್ರೀಕೃಷ್ಣವಿಠ್ಠಲನೆಂತು ಪೊಗಳಲಿ ||3||

70. ಬುತ್ತಿ ಕಟ್ಟೋ ಮನುಜ ಏಳೋ ಬುತ್ತಿ ಕಟ್ಟೋ ||ಪ||

ಜೊತೆ ಸದಾ ಇರುವಂತೆ, ತಿನ್ನುವಂತಹ || ಬುತ್ತಿಕಟ್ಟೋ ||ಅಪ||

ಸುತ್ತು ಸುತ್ತುವಾಗ ಹಸಿವಾದಾಗ |

ಸುಸ್ತಾದಾಗ ಬೆಂಡು ಬಸವಳಿದಾಗ ||

ಹೊತ್ತು ಹೊತ್ತಿಗೆ ಹೊಟ್ಟೆಗೆ ಹಾಕಲು |

ಹಿತವಾದ ಬುತ್ತಿಯೇ ಹಿತಕೆ ಕಾರಣ ||1||

ಕರಗದ ಬುತ್ತಿ, ಚೆನ್ನಾಗಿ ಅರಗುವ |

ಸೋರದ ಹಾಗೆ ಸರಿಯಾಗಿ ಕಟ್ಟುವಂತಹ ||

ಸಾರದ ಬುತ್ತಿ, ಅಮೃತದಂತಹ |

ಮರೆಯದೆ ಜೊತೆ ಬರುವಂತಹ ||2||

ಕಳೆಯಲಾರದ ಎಂದೂ ಹಳೆಯದಾಗದ |

ಹಳಸಲಾರದ ಎಂದೂ ತಿಳಿಸಲಾರದ ||

ಕಳ್ಳತನವಾಗದ ಇಳೆಯೊಳು ಒಳ್ಳೆಯದಾದ |

ಕಳ್ಳ ಶ್ರೀಕೃಷ್ಣವಿಠ್ಠಲಗೆ ಪ್ರಿಯವಾದ ಬುತ್ತಿ ||3||

71. ಅನ್ನಬೇಕು, ಅನ್ನಬೇಕೆಂದು ಸದಾ ಅನ್ನುತಿರು |

ಚೆನ್ನಾದ ಅನ್ನ ತಿನ್ನಲು ಪರಿತಪಿಸುತಿರು ||

ಮನವಿಟ್ಟು ದುಡಿದು ಅನ್ನ ಬೇಡುತಿರು |

ಚಿನ್ಮಯ ಶ್ರೀಕೃಷ್ಣವಿಠ್ಠಲನೇ ಅನ್ನಪ್ರದಾತಾ ಎಂದು ಮರೆಯದಿರು ||

72. ಮೂಲ ತಿಳಿಯದಲ್ಲ, ಎಲ್ಲದರ ಮೂಲ ತಿಳಿಯದಲ್ಲ |

ಮೂಲದ ನೆಲೆಯ ಸುಳಿವೂ ಸಿಗದಲ್ಲ ||

ಎಲ್ಲಿಂದ ಬಂದೆವು, ಎಲ್ಲಿಗೆ ಹೋಗುವೆವು |

ಎಲ್ಲ ಭೋಗ-ಸಂಪತ್ತು ಎಲ್ಲಿಂದ ಬಂದಿತು ||

ಬಲದಿಂದ, ಒಲವಿಂದ ಸಿಗುವುದೂ ಇಲ್ಲ |

ಒಲ್ಲೆನೆಂದರೆ ಸಿಗದೆ ಇರುವುದೂ ಇಲ್ಲ ||

ಕಾಲ ಹೇಗೆ ಬರುವುದು, ಹೇಗೆ ಸರಿವುದು |

ಎಲ್ಲದರ ಚಲನಾ ಚಲದ ಕಾರಣವಾವುದು ||

ಚೆಲ್ವ ಶ್ರೀಕೃಷ್ಣವಿಠ್ಠಲನೇ ಪೇಳಿ ತಿಳಿಸಬೇಕಷ್ಟೆ ||

73. ಕಾಲವು ಹೇಗೆ ಬಂದು-ಹೋಗುವುದೋ | (ಕಾಲ=ಸಮಯ & ಪ್ರಾಣ)

ಕಾಲ-ಕಾಲಕೆ ಕಾಲ ಹೇಗೆ ಒದಗುವುದೋ ||

ಕಾಲ ಎಮ್ಮ ,ಕಾಲ ಸೆಳೆದೊಯ್ಯುದೇಕೆ |

ಕಾಲಕಾಶ್ರಿತ ಶ್ರೀಕೃಷ್ಣವಿಠ್ಠಲ ಕಾಲಕಾಲದಿ ಕಾಯಲಿ ||

74. ದಾರಿಯ ತೋರೋ ಮುಕುಂದನೇ | ಬೇಗ ||ಪ||

ದೂರದ ದಾರಿಯು ಸಲ್ಲದು-ಸನಿಹದ ದಾರಿತೋರೋ ||ಅಪ||

ಸರಿದಾರಿ ಕಲ್ಲು-ಮುಳ್ಳಿಲ್ಲದ ದಾರಿ |

ಭಾರ ಹೊತ್ತಿರುವೆ ಸುಗಮದಾರಿಯ ತೋರೋ ||1||

ನೀರಡಿಕೆ-ಹಸಿವು, ದಣಿವಾಗದಂತಹ ದಾರಿ |

ತಿರುಗಿ ಬರಬಾರದಂತಹ ದಾರಿಯ ತೋರೋ ||2||

ಇರುಳು ಭಯಾನಕ ಒಬ್ಬಳೇ |

ಗಾರುಡಿಗಾರ, ಗಾಡಿಕಾರ ಶ್ರೀಕೃಷ್ಣವಿಠ್ಠಲ ದಾರಿ ತೋರೋ ||3||

75. ರಥದ ರಥಿಕನೇ ಪಥ ತೋರೋ |

ವೃಥಾ ಪೃಥ್ವಿಯಲಿ ಬಳಲಿಸದೆ ||

ಜಾಥಾದೊಳಗೆ ಯಥಾ ಪ್ರಕಾರವಿಡದೆ |

ಅರ್ಥ-ಕಾಮ ವರ್ಜ್ಯದಿ ಧರ್ಮದಿಂದಿದ್ದು ||

ಪಂಥದಿ ಸ್ವಾರ್ಥತೆ ತೊರೆದು ಪ್ರಾರ್ಥಿಪೆ |

ನಾಥ ಶ್ರೀಕೃಷ್ಣವಿಠ್ಠಲ ಸುಪಥ ತೋರೋ ||

76. ಬಂಧುಗಳ ಭಾಗ್ಯದಿಂ ಬಡವರಿಗೇನು ಫಲವಿಲ್ಲ |

ಶ್ರೀದೇವಿ, ಕಲ್ಪವೃಕ್ಷ, ಶಂಖಕ್ಕೂ ರತ್ನಾಕರನೇ ತಂದೆ ||

ಊದಿ ಶಂಖ ಮನೆಗಳಲಿ ಭಿಕ್ಷೆ ಬೇಡುವುದುಂಟು |

ಮಂದಿಗೆ ಯಾಚಿಸುವ ದುರವಸ್ಥೆ ತಪ್ಪಲಿಲ್ಲ ||

ಬೇಡಿದ್ದೆಲ್ಲಾ ಕೊಡುವ ಮಹಾದಾನಿ ಕಲ್ಪವೃಕ್ಷ |

ಸುಂದರಿ, ವರಿಸಿ ಶ್ರೀಕೃಷ್ಣವಿಠ್ಠಲನ ಎದೆಯಲಿ ಸ್ಥಿರದಿ ನಿಂತಳು ||

77. ಆರು ಕಾಯ್ವರು ಈ ಜೀವನದಿ |

ಆರನ್ನು ನಂಬುವುದು ತಿಳಿಯದು ||ಪ||

ಕೈಕೇಯಿಯಂತಹ ತಾಯಿ |

ಹಿರಣ್ಯಕಶ್ಯಪನಂತಹ ತಂದೆ ||

ಶ್ರೀರಾಮನಂತಹ ಪತಿ |

ತಾಯಿಯ ಶಿರ ಕಡಿವ ಮಗ ||1|| (ಪರಶುರಾಮ)

ಸುಗ್ರೀವನಂತಹ ತಮ್ಮ |

ಮಾವನ ಶಿರ ತರಿದ ಅಳಿಯ || (ಶಿವ)

ಶಿಷ್ಯನ ಬೆರಳು ತೆಗೆದ ಗುರು || (ದ್ರೋಣ)

ಶ್ರೀಕೃಷ್ಣವಿಠ್ಠಲ ನಿನ್ನ ಬಿಟ್ಟು ಯಾರನ್ನೂ ನಂಬಲಾರೆ ||

78. ದಾನ ಇತ್ತವರಲ್ಲಿ ಯಾರು ಶ್ರೇಷ್ಟರೂ ||ಪ||

ತನ್ನ ಅನ್ನ-ನೀರು ಕೊಟ್ಟ ರಂತಿಯೇ |

ತನ್ನ ಕವಚ-ಕುಂಡಲವಿತ್ತ ಕರ್ಣನೇ ||1||

ತನ್ನ ಮಾಂಸವನ್ನೇ ಕೊಟ್ಟ ಶಿಬಿಯೇ |

ತನ್ನ ಬೆನ್ನೆಲುಬಿತ್ತ ದಧೀಚಿಯೇ ||2||

ಹೊನ್ನು- ಹಣ ದಾನವಿತ್ತ ಪುರಂದರದಾಸರೇ |

ತನ್ನ ನಲವತ್ತು ವರುಷ ಆಯುರ್ದಾನ ಮಾಡಿದ ಗೋಪಾಲದಾಸರೆ ||3||

ತನ್ನನ್ನೇ ದಾನಿಸಿದ ಜೀಮೂತವಾಹನನೇ |

ದಾನಿಸಲು ಅವಕಾಶವಿತ್ತ ಶ್ರೀಕೃಷ್ಣವಿಠ್ಠಲನೇ ||4||

79. ಬಂದಿ ತುಂಬಿದ ಜಗದಿ ಒಬ್ಬನಾಗಿ |

ಇದ್ದಿ ಬಂಧು-ಬಳಗ ಮಧ್ಯದಲಿ ||

ಬಿದ್ದಿ ಕಷ್ಟ-ಸುಖದ ಗುಂಡಿಯಲಿ |

ಹೊದ್ದಿ ಪಾಪ-ಪುಣ್ಯಗಳ ಹೊದಿಕೆ ||

ಸದ್ದಿಲ್ಲದೆ ಹೋದಿ ಶ್ರೀಕೃಷ್ಣವಿಠ್ಠಲನೊಡನೆ | (ಜೀವ-ಆತ್ಮ)

ಸಾಧಿಸಿದ್ಧೇನು ಎಂದು ಮಾತ್ರ ತಿಳಿಯಲಿಲ್ಲ ||

80. ವೇದವ್ಯಾಸರು, ಸತ್ಯವತಿ-ಪರಾಶರ ಪುತ್ರರು |

ಬಾದರಾಯಣರು ವಿಶಾಲ ಬದರಿಲಿ ನೆಲಸಿಹರು ||

ವೇದ ವಿಭಾಗಕರು-ಪಂಚರಾತ್ರವಿತ್ತವರು |

ಓದಲು ದಶೋಪನಿಷತ್-ಮಹಾಭಾರತ ರಚಿಸಿಹರು ||

ಬಿದ್ದ ಜೀವಿಗಳ ಉದ್ಧರಿಸಲು ಭಾಗವತಾದಿ ಇತ್ತವರು |

ವಿದುರ, ಪಾಂಡು-ಧೃತರಾಷ್ಟ್ರರ ಸೃಷ್ಟಿಸಿದರು ||

ಮಧ್ವ ಗುರುವಿಗೆ ಧರ್ಮವಿಧ್ಯೆ ಬೋಧಿಸುತ್ತಿರುವರು |

ಶುದ್ಧರಾದ ಇವರೇ ಶ್ರೀಕೃಷ್ಣವಿಠ್ಠಲಾಭಿನ್ನರು ||

81. ಜೀವಿ ಹುಟ್ಟಿದಾಗ ಇರುವ ಗ್ರಹಸ್ಥಾನದಿಂದ ಜೀವಿತದಿ ಫಲ |

ಅವನ ಪುರ್ವಜನ್ಮಕೃತ ಪಾಪ-ಪುಣ್ಯಗಳಿಂದ ಫಲ ||

ಸರ್ವ ಅನಿಷ್ಟ ಫಲದಿಂದ ಪಾರಾಗುವ ಬಗೆ ಹೇಗೆಂದು |

ಅವಕಾಶ ಸಿಕ್ಕಂತೆ ಬದಲಾಗುವ ಮನುಜ ||

ತಾ ವಂಚಿಸಿ ಜಾತಕವನ್ನೇ ಬದಲಿಸಿದರೆ ಹಣೆಬರಹ ಬದಲಾಗುವುದೇ |

ಸರ್ವಗ್ರಹ ಬಲ ಶ್ರೀಕೃಷ್ಣವಿಠ್ಠಲ ಕರ್ಮಫಲ ಬದಲಾಯಿಸುವನೇ ||

82. ಕಾಣುವ ಪ್ರಪಂಚದಲ್ಲಿ ಭೇದ |

ಉಣುವ ಪದಾರ್ಥದಲ್ಲಿ ಭೇದ ||

ದಣಿವ ಜೀವಗಳಲಿ ಭೇದ |

ಮಣ್ಣು-ಮಣ್ಣಲಿ ಭೇದ ||

ಬಣ್ಣ ಬಣ್ಣದ ಹೂಗಳಲಿ ಭೇದ |

ಕಾಣದ ಪರಿಮಳದಲಿ ಭೇದ ||

ಕಣ್ಣರಿಯದ ದೇವತೆಗಳಲಿ ಭೇದ |

ವರ್ಣ್ಯಾತ್ಮಕ ಸೃಷ್ಟಿಯಲಿ ಭೇದ ||

ಗುಣ ಪೂರ್ಣನ ಅವತಾರದಿ ಭೇದ |

ಸ್ವರ್ಣಗರ್ಭ ಶ್ರೀಕೃಷ್ಣವಿಠ್ಠಲನ ಸರ್ವನಾಮ ಮಾತ್ರ ಅಭೇದ ||

83. ಭೇದಾತ್ಮಕ ಪ್ರಪಂಚದಿ ತಾರತಮ್ಯ ಸಹಜ |

ವೇದಾತ್ಮಕ ನಿರ್ಣಯದಿ ದ್ವೈತ-ಅದ್ವೈತ ಸಹಜ ||

ಆಧ್ಯಾತ್ಮಕ ಸಾಧನೆಯಲಿ ವಿವಿಧ ದಾರಿ ಸಹಜ |

ವಂದ್ಯಾತ್ಮಕ ಶ್ರೀಕೃಷ್ಣವಿಠ್ಠಲ ಒಬ್ಬನೇ ಅಸಹಜ ||

84. ಅಂದದ ದೇಹವ ಸುಂದರವಾಗಿಸಿ |

ಚೆಂದದ ಜೀವನ ಚಂದನವಾಗಿಸಿ ||

ಹೋದ ಸಮಯ ಮರಳಿಬಾರದು |

ವಂದಿಸಿ ಶ್ರೀಕೃಷ್ಣವಿಠ್ಠಲನ, ಬಂಧನ ನೀಗಿಸಿ ||

(ಶಂಖ ಚಕ್ರ ದ್ವಾದಶನಾಮ ಧರಿಸಿ ಅಖಂಡ ಪರೋಪಕಾರದಿ,

ವ್ಯರ್ಥ ಸಮಯ ಕಳೆಯದೇ, ಸತತ ಸ್ಮರಿಸಿ ಶ್ರೀಕೃಷ್ಣವಿಠ್ಠಲನ, ಜನ್ಮ ಸಾರ್ಥಕವಾಗಿಸಿ )

85. ಜನಸೇವೆ ಡಂಬಾಚಾರಕ್ಕೆಂದೂ ಮಾಡದಿರು |

ಮನಮುಟ್ಟಿ ಮಾಡಿದ್ದು ಹೇಳಿ ಪುಣ್ಯ ಕಳೆದುಕೊಳ್ಳದಿರು ||

ಋಣದ ಕರ ಸಂದಾಯಿಸಲು ಪರರ ಸೇವಿಸು |

ತನು,ಮನ,ಧನ ಯಾವುದೇ ರೂಪದಲ್ಲಿರಲಿ ||

ಧನ-ಪ್ರಸಿದ್ಧಿ-ಲೋಭದಾಸೆಗಾಗಿ ಮಾಡದಿರು |

ಹೀನ-ಸ್ವಾರ್ಥ ಕಾರಣಕ್ಕಾಗಿ ಬಳಸದಿರು ||

ಪುನ: ಪ್ರತೀ ಪ್ರತ್ಯುಪಕಾರ ಬಯಸದಿರು |

ಈ ನರ ಜನುಮದ ದೇಹ-ಆತ್ಮಶುದ್ಧಿಗಾಗಿ ಮಾಡು ||

ಜನ-ಮೆಚ್ಚದಿರೆ ಎಂದೂ ದು:ಖಿಸದಿರು |

ಕೊನೆಯತನಕ ಅವಕಾಶವಿದ್ದೆಡೆ ಬಿಡದೆ ಸೇವಿಸು ||

ಮಾನ್ಯ, ಆತ್ಮಸ್ಥ ಶ್ರೀಕೃಷ್ಣವಿಠ್ಠಲನ ಸೇವೆಯೆಂದು ಸೇವಿಸು ||

86. ಹಣದ ಹಿಂದೆ ಬಿದ್ದು ಹೆಣಗಾಡದಿರು |

ಸಣ್ಣಗಾಗದಿರು ಎಲ್ಲರ ಮೆಚ್ಚಿಸಲು ||

ಕಣಜದಿ ಕೂಡಿಟ್ಟ ಧಾನ್ಯ ಹಾಳಾಗುವುದು |

ಮಣ ಬಂಗಾರವಿತ್ತರೂ ಯಾರೂ ತೃಪ್ತರಾಗರು ||

ಮಣ್ಣು-ಮನೆಎಂದೂ ಜೊತೆಗೊಯ್ಯಲಾಗದು |

ಬಣ್ಣದ ಜಗತ್ತಿನಲ್ಲೂ ಹೃದಯದಿ ವೈರಾಗ್ಯತಾಳು ||

ಹೆಣವಾಗುವ ಮುನ್ನ ಜ್ಞಾನಗಳಿಸು |

ಕ್ಷಣವೂ ಹಾಳುಮಾಡದೇ ಸಾರ್ಥಕದಿ ||

ಕಣ ಕಣದಿ ಶ್ರೀಕೃಷ್ಣವಿಠ್ಠಲನ ಪ್ರತಿ ಭಕ್ತಿ ತುಂಬಿಸು ||

87. ಮಾನವ ಜನುಮದಿ ಅನವರತ ನೆನೆಯಲೇಬೇಕು |

ಜ್ಞಾನಾನಂದ ರೂಪಿಯ ಸಕಲ ಅವತಾರ, ಸಕಲ ಪ್ರದಾತ ||

ಅನೇಕ ಅವತಾರವಾದರೂ ಪರಮಾತ್ಮನೊಬ್ಬನೇ |

ಘನಕಾರ್ಯವೆಸಗುವ ಪ್ರತೀ ಅವತಾರದಿ ||

ಅನ್ಯನಲ್ಲನಿವ ಗುಣಪೂರ್ಣ, ದೋಷದೂರ, ನಿತ್ಯಸತ್ಯ |

ನೆನೆಯಲು ಅನೇಕ ರೂಪ, ಜಪಿಸಲು ಒಂದೇಮಂತ್ರ ||

ಚೆನ್ನಾಗಿ ನೆನೆದರೆ ವಿವಿಧ ರೂಪದಿ ಕೃಪೆ ತೋರುವ |

ನೆನೆದರೆ ಮತ್ಸ್ಯನ ಸತ್ಯಸಂಧನಾಗುವಿ ||

ನೆನೆದರೆ ಕೂರ್ಮನ ಕರ್ಮ ಕಳೆದುಕೊಳ್ಳುವಿ |

ನೆನೆದರೆ ವರಾಹನ ಅಹಂಕಾರ ಪೋಪುದು ||

ನೆನೆದರೆ ನಾರಸಿಂಹನ ಭಯ ಪರಿಹರಿವುದು |

ನೆನೆದರೆ ವಾಮನನ ಸುಂದರ ವಿಚಾರ ಬರುವುದು ||

ನೆನೆದರೆ ಭಾರ್ಗವನ ದುಷ್ಟಶಕ್ತಿ ದೂರ ನಿಲ್ಲುವವು |

ನೆನೆದರೆ ಶ್ರೀರಾಮನ ಜೀವನವೆಲ್ಲಾ ಆರಾಮ ||

ನೆನೆದರೆ ಬುದ್ಧನ ಬುದ್ಧಿ ಶುದ್ಧವಾಗುವುದು |

ನೆನೆದರೆ ಕಲ್ಕಿಯ ರಕ್ಷಣೆ ಸಿಗುವುದು ||

ಅಚ್ಯತನ ನೆನದರೆ ಚ್ಯತಿಯಾಗದೆಂದೂ |

ನೆನೆದರೆ ಅನಂತನ ಪುಣ್ಯಅನಂತವು ||

ನೆನೆದರೆ ಗೋವಿಂದನ ಸೇರುವಿ ಶ್ರೀಕೃಷ್ಣವಿಠ್ಠಲನ ಪಾದ ||

88. ಪರರಿಗೆ ಸೇರಿದ್ದು ತೆಗೆದುಕೊಳ್ಳಬೇಡಾ |

ಪರಸತಿ, ಪರಧನ, ಪರಾಸ್ತಿ ಕಣ್ಣಿತ್ತಿ ನೋಡದಿರು ||

ಪರರ ಪೀಡಿಸಿ ಮನ ನೋಯಿಸದಿರು |

ಪರಮಾತ್ಮ ಕೊಟ್ಟಿದ್ದರಲ್ಲೇ ತೃಪ್ತಿಪಡು ||1||

ಇರುವುದರಲ್ಲೇ ಸಂತಸದಿಂದಿರು |

ಇರುದುದರೆಡೆಗೆ ತುಡಿತವಿರದಿರಲಿ ||

ಇರುತಿರು ಸದಾ ವಿನೀತ-ಪುನೀತ ಭಾವದಿ |

ಇರುಳು-ಹಗಲು ದೇವರ ಸ್ಮರಣೆ ಇರಲಿ ||2||

ಮರೆಯುತಿರು ಮನದ ಕಹಿ ಪ್ರಸಂಗಗಳ |

ಮರೆಯದಿರು ಮಾನವ ಜನುಮವಿತ್ತವನ ||

ಮೆರೆಯುತಿರು ಸದ್ಭಕ್ತರ ಸತ್ಸಂಗದಲಿ |

ಸ್ಮರಿಸುತಿರು ಮಹಾದೇವನ ಲೀಲೆಗಳ ||3||

ಮರ್ಮಭೇದಕ ಮಾತಲಿ ಮನ ನೋಯಿಸದಿರು |

ಪರರ ಸುಖ ನೋಡಿ ಕರುಬದಿರು ||

ಪರಲೋಕದ ಸಾಧನೆಗಾಗಿ ಪರಿತಪಿಸುತಿರು |

ಪರಮಾತ್ಮ ಶ್ರೀಕೃಷ್ಣವಿಠ್ಠಲನ ಭಜಿಸುತಿರು ||4||

89. ಅನ್ಯರ ಸಂಗಮಾಡದಿರು | ಅನ್ಯಥಾ ಸಮಯ ಕಳೆಯದಿರು ||

ಅನ್ನಕ್ಕಾಗಿ ಪರದಾಡದಿರು | ಅನ್ಯರಿಗೆ ದೈನ್ಯದಿ ಕೈ ಒಡ್ಡದಿರು ||

ಅನ್ಯನಲ್ಲ, ಸ್ವಾಮಿ ನನ್ನವನೆಂದು ಸಂತಸಪಡು |

ಅನನ್ಯ ಭಕ್ತಿ ಶ್ರೀಕೃಷ್ಣವಿಠ್ಠಲನಲ್ಲಿ ಎಂದೂ ಬಿಡದಿರು ||

90. ಹೆರವರ ವಸ್ತುಗಾಗಿ ಕಣ್ಣಟ್ಟರೆ ಕಣ್ಣು ಕಳೆದುಕೊಳ್ಳುವಿ |

ಹೆರವರ ದೋಷಗಳೆಣಿಸಿದರೆ ದೋಷಪೂರ್ಣನಾಗುವಿ ||

ಹೆರವರಿಗೆ ಉಪಕರಿಸದಿದ್ದರೂ ಅಪಕಾರವೆನಿತೂ ಮಾಡದಿರು |

ಹೆರವರಿಗೆ ಮನದಲ್ಲೂ ಕೆಡಕು ಬಯಸದಿರು |

ಹೆರವರನು ನಿಂದಿಸಿ ಮನ ನೋಯಿಸದಿರು ||

ಹೆರವರಲ್ಲೂ ಅಂತರ್ಯಾಮಿಯಾಗಿ ಶ್ರೀಕೃಷ್ಣವಿಠ್ಠಲನೇ ಇಹನು ||

91. ಬಾಯಿಗೆ ಸವಿ, ಸತತ ಮನಕೂ ಸವಿ |

ಭಯ-ಭವತಾರಕ ಸ್ಫೂರ್ತಿದಾಯಕ ಸವಿ ||

ಒಯ್ಯಬಹುದು ಎಲ್ಲೆಡೆ ಭಾರವಿಲ್ಲದ ಸವಿ |

ಸಾಯುವತನಕ ಸವಿಯುವ ಸವಿ ||

ಹೇಯವಲ್ಲದ, ಸದ ಬಯಸುವ ಸವಿ |

ಗೇಯದೇ ಸುಖ ನೀಡುವ ಸವಿ ||

ಕೈಯ್ಯಲಿ ಕಾಸು ಇಲ್ಲದೆಯೂ ಸಿಗುವ ಸವಿ |

ಮೈಯೊಳಗೆ ಚೇತನ ಹರಿಸುವ ಸವಿ ||

ಆಯ್ದ ಸವಿಯ ಸವಿ, ಆಯ್ದವರೇ ಬಲ್ಲರು |

ದಯಾಮಯ ಶ್ರೀಕೃಷ್ಣವಿಠ್ಠಲನ ನಾಮದ ಸವಿ ||

92. ಬಡಾಯಿ ಕೊಚ್ಚದಿರು ಪರರೆದುರು |

ಮಾಡಿದ್ದು-ಮಾಡದ್ದು ಹೇಳಿಕೊಳ್ಳದಿರು ||

ನೋಡಿದ್ದೂ ನೋಡದಂತಿರು ಜಗದಲಿ | (ಅನ್ಯಾಯ)

ಮೊಂಡಾಟ-ಒಡನಾಟ ಮಾಡದಿರು || (ದುಷ್ಟರಸಂಗ, ಅಹಂಕಾರ)

ಬಿಡದಿರು ಸತ್ಸಂಗ ಬಿಟ್ಟು ಕೆಡದಿರು |

ಒಡೆಯ ಶ್ರೀಕೃಷ್ಣವಿಠ್ಠಲನ ಲೀಲೆಗಳ ಕೋಂಡಾಡುತಿರು ||

(ಸಂಗಬಿಡದಿರು ಬಿಟ್ಟುಕೆಡದಿರು)

93. ಪಾದವ ಭಜಿಸಿ ಸೌಖ್ಯ ಪೊಂದಿರೋ ಎಂದಿಗೂ ||ಪ||

ಅದಮ್ಯ ಭಕ್ತಿಲಿ ಪಾದವ ನಂಬಿರೋ ||ಅ.ಪ||

ಪಾದ-ಪ್ರಕ್ಷಾಲನೆಯ ಪವಿತ್ರ ಜಲ ಶಿರದಿ ಧರಿಸು |

ಶುದ್ಧ ಭಾಗವತರು ಪೇಳುವ ಸನ್ಮತಿಯ ಪಾಲಿಸು ||

ಸದಾಚಾರ, ಸತ್ಯ-ಅಹಿಂಸೆ- ಪರೋಪಕಾರದಿ |

ಹೃದಯದಿ ಧರಿಸಿ ಭಕ್ತಿ, ನಡೆ-ನುಡಿ ಒಂದಾಗಿಸೋ ||1||

ಒಂದೇ ಮನದಿ ಗುರು-ಹಿರಿಯರ ಪಾದ ನಮಿಸಿ |

ಪಾದ ಸೇವೆ ದಿವ್ಯೌಷಧ ಕಲಿಯುಗದಲಿ |

ಬಂದ ದುರಿತ ಕಳೆದು ಇಹ-ಪರರ ಸುಖವೀವ ||

ಎಂದೆಂದಿಗೂ ಸದ್ಧರ್ಮವಾಚರಿಸುವರ ಬಿಡದೆ ||2||

ಹಿಂದೆ ಆಗಿದ್ದುದರ ಚಿಂತಿಸಿ ಹಳಿಹಳಿಸದಿರು |

ಮುಂದೆ ಉಳಿದ ಸಮಯ ಸದ್ವಿನಿಯೋಗಿಸು ||

ಬಂದ ಮಾನವ ಜನುಮದಿ ಇದನ್ನೇ ಸಾಧಿಸಿ |

ಸದ್ಭಾವದಿ ಶ್ರೀಕೃಷ್ಣವಿಠ್ಠಲನ ಪಾದ ಬಿಡದಿರೂ ||3||

94. ಗುರುಗಳ ಪಾದ ಸೇವೆ ಎಂದರೆ |

ಧರ್ಮಶಾಸ್ತ್ರ ಅಧ್ಯಯನ ಮಾಡುತ್ತಾ ||

ಮಾರ್ಗದರ್ಶನದಂತೆ ನಡೆವುದು |

ಸೂರ್ಯಕೋಟಿ ಸಮಪ್ರಭೆ ಬೀರುವ ||

ನರಸಿಂಹನ ಪಾದ ನಖದ ಗುಣಗಳೆಣಿಸುವ |

ಶ್ರೀರಮಾ, ಬ್ರಹ್ಮಾದಿಗಳ ತಾರತಮ್ಯದಿ ಅರಿತು ||

ಸುಹೃದಯದಿ ಧೃಡಭಕುತಿ ಧರಿಸುವುದು ||

ಶ್ರೀಕೃಷ್ಣವಿಠ್ಠಲ ಆಗ ಕೊಡುವ ತನ್ನ ಪಾದಸೇವಾ ಭಾಗ್ಯ ||

95. ಹರಿಯ ಪಾದದ ವಜ್ರಾಂಕುಶ, ಗದಾಪದ್ಮ |

ತೋರುವುದು ನಾವು ಬಾಳುವ ರೀತಿಯ ||

ವಜ್ರದಂತೆ ಕಠಿಣ ಯಮ-ನಿಯಮ ಆಚರಿಸಿ |

ಗರಿಕೆದರಿ ಹಾರಾಡುವ ಮನಕೆ ಅಂಕುಶ ಹಾಕಿ ||

ಭಾರದ ಗದಾ ಪ್ರಹಾರ ಶಾಸ್ತಿಗೆ ಹೆದರಿದರೆ |

ಪೊರೆವ ಪದ್ಮಸ್ಥ ಶ್ರೀಕೃಷ್ಣವಿಠ್ಠಲನ ಪಾದ ನಂಬಲು ||

96. ಮನದಿ ಅಗಣಿತ ಗುಣಧಾಮನ ಕೊಂಡಾಡುವುದೇ ಮೌನ |

ಮೌನ ಸಾಧಿಸಿ ಸಪ್ತ ಕ್ರಿಯೆಯಲಿ ಪುಣ್ಯವರ್ಧಿಸುವುದು ||

ಮೌನ ಧರಿಸಿ ಅನ್ನ-ಜಲ ಸೇವನೆಯ ಸಮಯದಿ |

ಮೌನ ಧರಿಸಿ ಮೂತ್ರ ವಿಸರ್ಜನೆಯಲಿ ||

ಮೌನ ಧರಿಸಿ ಮಲ ತ್ಯಜಿಸುವಾಗ |

ಮೌನ ಧರಿಸಿ ದಂತ-ಧಾವನದಿ ||

ಮೌನ ಧರಿಸಿ ಸ್ನಾನ ಶುದ್ಧಿಯಲಿ |

ಮೌನ ಧರಿಸಿ ಹೋಮ ಮಾಡುವಾಗ ||

ಮೌನ ಧರಿಸಿ ಜಪ-ತಪದಲಿ |

ಮೌನ ಧರಿಸಿ ಪೂಜಿಸೆ, ಶ್ರೀಕೃಷ್ಣವಿಠ್ಠಲ ಮೆಚ್ಚುವಾ ||

97. ಮೌನ ಪಾಲಿಸಿ ಹರಿ ದಿನದಿ |

ಮೌನದಿ ಅಂತ: ಶಕ್ತಿವರ್ಧಿಸಿ ||

ಮನದಿ ಸುಭಕ್ತಿ ಹೆಚ್ಚಲು |

ಜ್ಞಾನದ ವಿಶಿಷ್ಠ ಅನುಭವದಿ ||

ಚಿನ್ಮಯರೂಪಿ ಶ್ರೀಕೃಷ್ಣವಿಠ್ಠಲ ವೇದ್ಯನಾಗುವ ||

98. ಭಕ್ತಿಯಲಿ ಅರ್ಪಿಸು ಮಾಡಿದ್ದ ಕರ್ಮವೆಲ್ಲಾ || ಬಿಡದೆ ||ಪ||

ಲಕ್ಷ್ಮೀಪತಿಯನೊಲಿಸಲು ಬುಧರು ಪೇಳಿದಂತೆ ||ಅ.ಪ||

ಸಣ್ಣ ದೊಡ್ಡ ಕಾರ್ಯಮಾಡಿ ತಣ್ಣಗಿರು |

ಕ್ಷಣದಿ “ನಾಹಂ ಕರ್ತಾಹರಿ: ಕರ್ತಾ” ಎಂದು ||

ಪುಣ್ಯ ಕರ್ಮವ ಮಾಡಿ ಸಮರ್ಪಿಸು |

ಪೂರ್ಣ ನಿಷಿದ್ಧ ಕರ್ಮ ತೊರೆದು ಒಪ್ಪಿಸು ||

ಅಣು-ರೇಣು, ತೃಣ ಕಾಷ್ಠದಲ್ಲಿರುವ |

ಗುಣಪೂರ್ಣ ಶ್ರೀಕೃಷ್ಣವಿಠ್ಠಲನ ಒಲಿಸಿಕೋ ||1||

ತನು-ಮನದಿ ಮಾಡಿದ್ದೆಲ್ಲಾ |

ದಿನದಿನದಿ ಸಮರ್ಪಿಸು ||

ನೆನ್ನೆ-ನಾಳೆ ಆಗಿದ್ದು, ಆಗುವುದೆಲ್ಲಾ |

ಮನದಿ ಸಮರ್ಪಿಸು ಸರ್ವತ್ರವ್ಯಾಪ್ತಗೆ ||

ಆನಂದದಿಂದರು ಸತತ ಮರೆತು |

ಅನುಭವದಿ ಶ್ರೀಕೃಷ್ಣವಿಠ್ಠಲನ ಒಲಿಸಿಕೋ ||2||

ತ್ರೈಕರ್ಮ ದೈಹಿಕ, ದೈಶಿಕ, ಕಾಲಕವ |

ನಿಷ್ಕಾಮನೆಯಲಿ ಭಾರತೀಶನ ನೆನೆದು ||

ತತ್ಕಾಲದ ಆನಂದವ ಶ್ರೀಕೃಷ್ಣಾರ್ಪಣವೆಂದು |

ಭಕ್ತಿಪರವಶದಿ ಪೇಳಿದರೆ ಸಾಕು ||

ಮುಕ್ಕಿದ ಒಪ್ಪಿಡಿ ಅವಲಕ್ಕಿಯಂದದಿ |

ಶ್ರೀಕೃಷ್ಣವಿಠ್ಠಲ ಸ್ವೀಕರಿಸಿ ಅನಂತ ಫಲವೀವ ||3||

99. ವಿಶ್ವಕರ್ತ, ವಿಶ್ವಪ್ರಾಣ, ವಿಶ್ವಸ್ಥ |

ವಿಶ್ವಾಧಾರ, ವಿಶ್ವಕುಟುಂಬಿ, ವಿಶ್ವನಿಧಿ ||

ವಿಶ್ವಾರೂಪಿ, ವಿಶ್ವಪಿತ, ವಿಶ್ವದ್ಧಾತ್ರಿ (ಗಂಗಾ) |

ವಿಶ್ವಜ್ಯೋತಿ, ವಿಶ್ವಸೃಷ್ಟಿ, ವಿಶ್ವ ಲಯಕರ್ತ ||

ವಿಶ್ವದೇವ, ವಿಶ್ವದಿ ದೃಷ್ಟಾದೃಷ್ಟ |

ವಿಶ್ವಸುಂದರ, ವಿಶ್ವಸೃಜ, ವಿಶೇಷ ||

ವಿಶ್ವಮೋಹಕ, ವಿಶ್ವಾಧೀಶ, ವಿಶ್ವ ಚಕ್ಷುಸ್ |

ವಿಶ್ವನಾಥ,ವಿಶ್ವತ:, ವಿಶ್ರುತ, ವಿಸ್ತೃತ ||

ವಿಶುದ್ಧ, ವಿಶಿಷ್ಟ, ವಿಲಕ್ಷಣ, ವಿಶ್ವಂಭರ |

ವಿಶ್ವೇಶ ಶ್ರೀಕೃಷ್ಣವಿಠ್ಠಲ ವಿಶ್ವವಂದ್ಯಂ ||

100. ವೇಷಧರಿಸಲು ವಿಶ್ವದೇವ ಕಾಂಬೆನೆ |

ಕೋಶ ಸುತ್ತಲು ಪಂಚಕೋಶಸ್ಥ ಕಾಣನು ||

ವಿಶ್ವವ್ಯಾಪ್ತನ ವಿಶ್ವದಿ ಅನುಭವಿಸಲು |

ವಿಶೇಷದಿ ಅಂತರ್ಮುಖಿಯಾಗೇ ||

ಶೇಷಶಯನನ ದಯವಾಗಲು |

ಸುಶೇಷ ಶ್ರೀಕೃಷ್ಣವಿಠ್ಠಲ ಅಲ್ಪದಿ ತೋರ್ಪ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು