ಶ್ರೀ ಕೃಷ್ಣವಿಠ್ಠಲಪದಗುಚ್ಛ 3.2
ಮುಳುಗಿಸೆನ್ನ ಈ ಜೀವನದಿ ಮುಳುಗಿಸು |
ಏಳದಂತೆ ಕುತ್ತಿಗೆ ಒತ್ತಿ ಮುಳುಗಿಸು ||ಪ||
ಒಪ್ಪಿದವರು ಮೆಚ್ಚುವಂತೆ ಸದಾ |
ಸಪ್ತಕ್ರಮದಲ್ಲೇ ಮುಳುಗಿಸು ||ಅಪ||
ಸುಪಾವಕ ಚಿನ್ಹೆ ಧರಿಸಿ ಮೆರೆವಲ್ಲಿ |
ಸುಪಥದಿ ಸಾಗಿ ಸಂದರ್ಶಿಸುವಲ್ಲಿ ||
ಕೃಪೆಯಿಂ ಸ್ವೀಕರಿಸುವ ತೀರ್ಥ-ಪ್ರಸಾದದಿ |
ಒಪ್ಪವಾಗಿ ಸತತ ನಾಮಸ್ಮರಣೆಯಲಿ ||
ಸುಪ್ತೇಶನ ರಂಗಿನ ಕಥಾಸಾಗರದಿ |
ಅಪ್ಯಾಯವಾದ ಆಳದ ಧ್ಯಾನದಲಿ ||
ಸುಪೂಜೆಯ ಮೌನದ ಆನಂದದಿ |
ಅಪ್ಪ ಶ್ರೀಕೃಷ್ಣವಿಠ್ಠಲ ನೀ ಮುಳುಗಿಸಿದಷ್ಟೂ ನಾ ತೇಲುವೆ ||2||
102. ಧರ್ಮ ಬೇರೆ, ದಾನ ಬೇರೆ |
ಧರ್ಮವೆಂದರೆ ಮನುಜ ಸಹಜ ||
ಕರುನದಿ ನೀಡುವ ಅನ್ನ-ವಸನ |
ಬೀರುವ ಸಹಾಯ ದೈನ್ಯರಿಗೆ ||
ಸರ್ವರ ಕಷ್ಟದಿ ಮನಮಿಡಿಯುವುದು |
ದಾನವೆಂದರೆ ಕೈಎತ್ತಿ ಪಾತ್ರರಿಗೆ ||
ನನ್ನದಲ್ಲ ಇದು ನಿಮ್ಮದೇ ಎಂದು |
ಮನಕೆ ಪ್ರೀತಿ ಕರವಾಗಿದ್ದು ಕೊಡುವುದು ||
ಪುಣ್ಯ ವಿಶೇಷ ಪಡೆಯಲು ದಕ್ಷಿಣೆ ಜೊತೆ |
ಎನ್ನ ಶ್ರೀಕೃಷ್ಣವಿಠ್ಠಲಗರ್ಪಿಸುವುದು ||
103. ದಾನದಿ ತ್ರಿವಿಧ ಉತ್ತಮ, ಮಧ್ಯಮ, ಅಧಮ |
ಮೌನದಿ ಸಕಾಲಕೆ ಪಾತ್ರರಿಗೆ ದಕ್ಷಿಣೆ ||
ಮನದಿ ಫಲಪೇಕ್ಷೆ ಇಲ್ಲದೆ ಕೊಡುವುದು ಉತ್ತಮ |
ದಾನಿಸಿದ ಮೇಲೂ ವಸ್ತುವಿನ ಮಮಕಾರ ||
ಮನದಿ ಪ್ರತಿ ಫಲಾಪೇಕ್ಷೆ ಇದ್ದರೆ ಮಧ್ಯಮ |
ತನಗೆ ಬೇಡವಾದ ತಿರಸ್ಕೃತ ವಸ್ತು ||
ತನ್ನ ಪ್ರಶಂಸನೆಗಾಗಿ ದಕ್ಷಿಣೆ ರಹಿತ ಇತ್ತರೆ ಅಧಮ |
ದಾನಿಸಿದರೆ ಶ್ರಿಕೃಷ್ಣವಿಠ್ಠಲ ಮೆಚ್ಚುವಂತಿರಬೇಕು ||
ಮನ್ನಿಸಿ ತನ್ನಾಲಯದಿ ಇರಿಸುವಂತಿರಬೇಕು ||
104. ಕಾಲಕೂ ಮುಂಚೆ ಕಾಣಿಸಿದಿರೆ |
ಫಲವೇನು ನಿನ್ನ ಪಾಡಿ-ಕೊಂಡಾಡಿದುಕೆ ||
ಬಲವಿಲ್ಲದೆನ್ನಲಿ, ಛಲ ತೋರದೆ |
ಅಲ್ಪ ದೃಷ್ಟಿಯ ಮಂದ ಭಾಗ್ಯಳೆನ್ನದೆ ||
ಅಲ್ಲಲ್ಲಿ ಸ್ವಲ್ಪವಾದರೂ ಕಂಡರೆ |
ಒಲುಮೆಯಲಿ ಶ್ರೀಕೃಷ್ಣವಿಠ್ಠಲ ನಿನ್ನ ಒಪ್ಪುವೆನಯ್ಯಾ ||
105. ಎಂದು ಒಲಿಯುವೆ ಎನಗೆ ಎಂದು ಕಾಂಬುವೆ |
ಎಂದಿಗೆ ಬಂದು ಬೇಗ ಸಂದರುಶನವೀವೆ ||ಪ||
ಸುತ್ತಮುತ್ತ ನೀನಿದ್ದರೂ ಎಲ್ಲೂ ಕಾಣೆನೂ |
ಪ್ರತಿ ವಸ್ತುವಲ್ಲಿದ್ದರೂ ಎಂದೂ ತೋರಲಿಲ್ಲ ||
ತತ್ತದಾಕಾರದಲ್ಲಿದ್ದರೂ ಎಂದೂ ಗುರುತಿಸಲಿಲ್ಲ |
ಕತ್ತಲೆ ತುಂಬಿದೆ ಬೆಳಕಿನ ಕಿರಣ ಬೀರೆಯಾ ||1||
ವೇದಶಾಸ್ತ್ರವ ಖಚಿತದಿ ತಿಳಿಯಲಿಲ್ಲ |
ಬುದ್ಧಿ ಮನದಿ ಪೂರ್ಣದಿ ಅರಿಯಲಿಲ್ಲ ||
ಬುಧ-ಜನರ್ಯಾರೂ ಸಹಾಯವಾಗಲಿಲ್ಲ |
ಮಂದ-ಅಯೋಗ್ಯಳೆಂದು ತಿರಸ್ಕರಿಸಬೇಡಾ ||2||
ಅರಿತಷ್ಟು ಜ್ಞಾನದಿ ಸಾಧಿಸಿ ನೊಡದಾದೆ |
ಬರಿದೇ ಭಕ್ತಿಲಿ ಪೂಜಿಸಲು ಅರಿಯೆ ||
ವೈರಾಗ್ಯವೆನಿತೂ ಬಾರದೀ ಜನುಮದಿ |
ಕರುಣೆಯಲಿ ಶ್ರೀಕೃಷ್ಣವಿಠ್ಠಲ ನೀನೇ ಕಾಣಿಸೆಯಾ ||3||
106. ನೀನಿದ್ದರೆ ಸಕಲವೂ ಹಿತವೆನಿಸುವುದು |
ನೀನೆದ್ದರೆ ಹಿತವೂ ಅಹಿತವೆನಿಪುದು ||
ನೀನೊದ್ದರೆ ಬರುವುದೂ ಬಾರದು |
ನೀನೇ ನನ್ನಹಿತ, ನನ್ನ ಭಾಗ್ಯ ಶ್ರೀಕೃಷ್ಣವಿಠ್ಠಲ ||
107. ಇರುಳಲಿ-ಹಗಲಲಿ ನೀನು |
ಸುರಿವ ಮಳೆ-ಮಿಂಚಲಿ ನೀನು ||
ಕಣ್ಣಿಗೆ ಕಾಣುವುದರೆಲ್ಲೆಲ್ಲಾ ನೀನು |
ಮಣ್ಣಿನ ಕಣ-ಕಣದಲಿ ನೀನು ||
ಆಕಾಶದ ಅವಕಾಶದಿ ನೀನು |
ಪ್ರಕಾಶದ ಸೂರ್ಯನಲಿ ನೀನು ||
ಬೀಸುವ ಗಾಳಿಯಲಿ ನೀನು |
ಸೂಸುವ ತಂಪಿನಲಿ ನೀನು ||
ದಾಹ ತಣಿಸುವ ನೀರಲಿ ನೀನು |
ದಾಹಕ ಅಗ್ನಿಯಲಿ ನೀನು ||
ನೋಡುವ ದೃಷ್ಟಿಯಲಿ ನೀನು |
ಪಾಡುವ ಪದದಲಿ ನೀನು ||
ಪ್ರತಿ ಉಸಿರಿನಲಿ ನೀನು |
ಪ್ರತಿ ತುತ್ತು ಅನ್ನದಿ ನೀನು ||
ಮಾಡುವ ಕರ್ಮದಲಿ ನೀನು |
ಬಡಿಯುವ ಮಿಡಿತದಿ ನೀನು ||
ಮೊಳಕೆಯ ಅಂಕುರದಿ ನೀನು |
ಸೆಳೆಯುವ ಪ್ರಾಣನಲಿ ನೀನು ||
ಸರ್ವಕಾಲದಿ ಸಕಲದಿ ನೀನು |
ಶ್ರೀಕೃಷ್ಣವಿಠ್ಠಲ ನೀನಿಲ್ಲದೇನಿಲ್ಲ ||
108. ಜೊತೆ ಬಾರದು ಎಂದಿಗೂ ಜೊತೆ ಬಾರದು |
ಮತ್ತೆ ಮಾಡಿದ ಪಾಪ-ಪುಣ್ಯ ಬಿಟ್ಟು ಬೇರೇನೂ ಬಾರದು ||ಪ||
ಉಂಡುಟ್ಟು ಮೆರೆದ ದೇಹಸುಖ |
ಗಂಡು ಗಲಿಯಂತೆ ಮಾಡಿದ ಅಧಿಕಾರ ||
ಬಿಡದೇ ಗಳಿಸಿದ ಆಸ್ತಿ-ಅಂತಸ್ತು |
ಒಡನಾಡಿಗಳು ಯಾರು ಸಂಗಡ ಬಾಹರು ||1||
ಅನ್ಯಾಯ-ಮೋಸದಿ ಗಳಿಸಿದ ಹಣ |
ದಾನಿಸದೇ ಜಿಪುಣತನದ ಹಣ ||
ಅನ್ನ-ವಿದ್ಯೆ-ಮಕ್ಕಳ ಮಾರಿದ ಹಣ |
ಮನೆ-ಮಡದಿ,ಬಂಧುಗಳ್ಯಾರೂ ಬಾಹರು ||2||
ಗುರು-ಹಿರಿಯರಿಗೆಸೆದ ದ್ರೋಹ |
ಕಿರಿಯರಿಗೆ, ದು:ಖಿತರಿಗೆ ಮಾಡದ ಸಹಾಯ ||
ಪರಮ ಪ್ರಿಯ ಶ್ರೀಕೃಷ್ಣವಿಠ್ಠಲನ ಸ್ಮರಿಸದಕಾಲ |
ವಜ್ರಲೇಪದಂತೆ ಬಿಡದೆ ಹಿಂಬಾಲಿಸುವುದು ||3||
109. ನೀನು ಸಕಲರಿಗೂ ಆಶ್ರಯನಾದರೆ |
ನಾನೂ ಆಶ್ರಯದಾತೆ ನಿನ್ನ ಒಲುಮೆಯಲಿ ||ಪ||
ನೀನು ಒಂಟಿ ನಿನ್ನಿಂದ ಎಲ್ಲರೂ ಇಹರು |
ನಾನು ಸಂಘ ಜೀವಿ ಇವರಿಲ್ಲದೆ ಬದುಕಲಾರೆ ||ಅ.ಪ||
ಎನ್ನೊಳಗೊಬ್ಬ ಆಸೆಬುರುಕನಿರುವ |
ಎನ್ನೊಳಗೊಬ್ಬ ಸುಳ್ಳನಿರುವ ||
ಎನ್ನೊಳಗೊಬ್ಬ ಕಳ್ಳನಿರುವ ||1||
ಎನ್ನೊಳಗೊಬ್ಬ ಸಮಯ ಸಾಧಕನಿರುವ |
ಎನ್ನೊಳಗೊಬ್ಬ ವಂಚಕನಿರುತ ||
ಎನ್ನೊಳಗೊಬ್ಬ ಕ್ರೋಧನಿರುವ ||2||
ಎನ್ನೊಳಗೊಬ್ಬ ಕಾಮುಕನಿರುವ |
ಎನ್ನೊಳಗೊಬ್ಬ ಮತ್ಸರನಿರುವ ||
ಎನ್ನೊಳಗೊಬ್ಬ ಅಸಹನನಿರುವ ||3||
ಎನ್ನೊಳಗೊಬ್ಬ ದ್ವೇಷಿ ಇರುವ |
ಎನ್ನೊಳಗೊಬ್ಬ ದು:ಖಿ ಇರುವ ||
ಎನ್ನೊಳಗೊಬ್ಬ ಅಸಂತೃಪ್ತಿ ಇರುವ ||4||
ಎನ್ನೊಳಗೆಲ್ಲ ಇವರೇ ಇರಲಾಗಿ |
ನಿನಗೆಲ್ಲಿದೆ ಜಾಗ ಶ್ರೀಕೃಷ್ಣವಿಠ್ಠಲ ||
ನಿನ್ನೊಳಗೇ ಸದಾ ಎನ್ನಿರಿಸಿಕೋ ಸ್ವಾಮಿ-ದಯಾನಿಧೇ ||5||
110. ವಿಷ ವಿಷಯಗಳಿಂದ ದೂರ ವಿಶೇಷ |
ಅಶೇಷ ದೋಷದೂರ ಶೇಷಶಾಯಿ ||
ಈಶ ಸುರಾದಿ ನರರಿಗೂ ಲಕ್ಷ್ಮೀಶ |
ಶುಚಿಪ್ರಿಯ ಶುಭದಾಯಿ ಶ್ರೀಕೃಷ್ಣವಿಠ್ಠಲ ||
111. ಶಾಂತ, ಅತೀಶಾಂತ, ಸುಶಾಂತನಿವ ||ಪ||
ಭ್ರಾಂತನಲ್ಲ ಲಕ್ಷ್ಮೀಕಾಂತ ಸುಕಾಂತ ||ಅ.ಪ||
ಅಂತ್ಯ ಆದಿ ಇಲ್ಲದವ ಪ್ರಶಾಂತ |
ಸ್ವತಂತ್ರ ತಾನಿರುವ ಸದಾ ಸ್ವರತ ||
ಮತ್ಸ್ಯಾದಿ ರೂಪದಿ ಅವತರಿಪ |
ಅಂತರ್ಬಹಿರ ಬ್ರಹ್ಮಾಂಡದಿ ವ್ಯಾಪುತ ||1||
ಸತತ ಸೃಷ್ಟಿ-ಲಯ ಲೀಲೆಯಲಿ ಮಾಳ್ಪ |
ಸ್ಥಿತಿ-ನಿಯಮನದಿ ತಲ್ಲೀನ ಗುಣಪೂರ್ಣ ||
ಭಕ್ತವತ್ಸಲ ದು:ಖಾರ್ತ-ಭೀತರ ಕಾಯ್ವ |
ಮೂರ್ತಿಮಾನ್ ಸಚ್ಚಿದಾತ್ಮ ಶ್ರೀಕೃಷ್ಣವಿಠ್ಠಲ ||2||
112. ನಮ್ಮವರೆಂಬುವರು ಹೊತ್ತಿಗೆ ಒದಗರು |
ಸುಮನದಿ ಹೊತ್ತಿಗಾಗುವರೇ ನಮ್ಮವರು ||
ನಮ್ಮವರು-ಪರರೆನ್ನದೆ ಸೇವಿಸು ಸರ್ವರ |
ನಮ್ಮವರಲ್ಲದವರೂ ನಮ್ಮವರಾಗುವರು ||
ನಮ್ಮವನಾಗೇ ಸದಾ ಇರುವವನೊಬ್ಬನೇ |
ನಮ್ಮ ಸಹೃದಯಿ, ಅವನೇ ಶ್ರೀಕೃಷ್ಣವಿಠ್ಠಲ ||
113. ಯಾರೋ ಹೆತ್ತವರು, ಯಾರೋ ಅನ್ನವಿತ್ತವರು |
ಯಾರೋ ವಿತ್ತ ವಿತ್ತವರು, ಯಾರೋ ವಿದ್ಯೆ ವಿತ್ತವರು ||
ಯಾರೋ ಜೊತೆಯಲ್ಲಿದ್ದವರು, ಯಾರೋ ಬಿಟ್ಟುಹೋದವರು |
ಯಾರೋ ಹೊತ್ತಿಗಾದವರು, ಯಾರೋ ಧೈರ್ಯವಿತ್ತವರು ||
ಯಾರೋ ಸುಖವಿತ್ತವರು, ಯಾರೋ ದು:ಖವಿತ್ತವರು ||
ಯಾರೋ ಗೊತ್ತಿದ್ದವರ, ಗೊತ್ತಿಲ್ಲದವರ ಕೈವಾಡ ||
ಯಾರೋ ಸ್ಮಶಾನಕೊಯ್ಯುವರು, ಪರರ ಸ್ವತ್ತು ಈ ಜೀವನ |
ಯಾರೂ ಮೊದಲಿಂದ ಕಡೆವರೆಗೆ ಇರಲಿಲ್ಲ ||
ಯಾರು ಯಾರೋ ಗೊತ್ತಿಲ್ಲ ಆದರೆ ಎಲ್ಲರೊಳಗಿರುವ |
ಪರಾತ್ ಪರ ಶ್ರೀಕೃಷ್ಣವಿಠ್ಠಲನಂತೆ ನಡೆವುದು ಸದಾ ||
114. ಎಲ್ಲಿ ಹುಡಕಲಿ ರಂಗಯ್ಯಾ ನಿನ್ನ ಎಲ್ಲಿ ಕಾಣಲಿ |
ಎಲ್ಲೆಡೆ ನೀನಿರುವಿ ಎಂಬುವರು ಬಲ್ಲವರು ||ಪ||
ಕಲ್ಲಿನಲ್ಲೂ ಕಾಣೆನಲ್ಲ-ಎಲ್ಲರಲ್ಲೂ ಕಾಣೆನು |
ಸಲ್ಲುವರಲ್ಲೂ ಕಾಣಸಿಗದೇ ಎಲ್ಲಿ ಇರುತಿಹಿ ||
ಮೇಲ್ನೋಟಕೆ ಕಂಡಿರುವೆ ನಿನ್ನ ಎಂಬುವರ |
ಸೊಲ್ಲ ಕೇಳಿ ಹುಡುಕಿ ಹುಡುಕಿ ಮೋಸಹೋದೆ ||1||
ಹೊರಗಣ್ಣಿನಿಂದ ಗುರುತಿಸದಾದೆ |
ಅರಿಯ ದಾದೆ ಅಂತರಂಗದಲಿ ||
ಸರಿದ ಸಮಯ ಸರಿದು ಹೋಯಿತು |
ಬರುವ ಸಮಯ ಸಾರ್ಥಕಗೊಳಿಸು ||2||
ಬುದ್ಧಿಗೆ ನಿಲುಕದ, ದೃಷ್ಟಿಗೆ ಎಟುಕದ |
ಒಂದು ಕ್ಷಣವೂ ಮನದಿ ನಿಲ್ಲದವನ ||
ಎಂದೂ ಕಾಣದೆ ವ್ಯರ್ಥ ಪ್ರಯತ್ನಿಸಿದೆ |
ಹೃದಯದಿ ವಾಸಿಪ ಶ್ರೀಕೃಷ್ಣವಿಠ್ಠಲ ಇನ್ನೂ ಕಾಣಲಿಲ್ಲ ||3||
115. ನಿನ್ನ ಭಕ್ತರ ಪಟ್ಟಿಯಲ್ಲಿ |
ಅನ್ನ-ದಾನ ಕೊಟ್ಟವರಲ್ಲಿ ||
ಅನ್ಯರಲ್ಲಿ ದಯೆ ಇಟ್ಟವರಲ್ಲಿ |
ಜ್ಞಾನಿಗಳ ಸಾಲಿನಲ್ಲೂ ಎನ್ನ ಹೆಸರಿಲ್ಲ ||
ನಿನಗಾಗಿ ವ್ರತ ಮಾಡದವರ |
ನಿನ್ನ ಪ್ರೀತ್ಯರ್ಥಶಾಸ್ತ್ರ ಓದದವರ ||
ನಿನ್ನ ಹೊರತು ಅನ್ಯರತರಲ್ಲಿ |
ಎನ್ನ ಹೆಸರೇ ಮೊದಲಿದೆ ||
ಚೆನ್ನ ಶ್ರೀಕೃಷ್ಣವಿಠ್ಠಲ ಸರಿಯೋ ತಪ್ಪೋ ತಿಳಿಯದು |
ನೀನಿಟ್ಟಂತೆಯೇ ಸದಾ ನಾನಿರುವೆ ||
116. ಎಷ್ಟು ದಿವ್ಯ, ಎಷ್ಟು ಭವ್ಯ- ಶ್ರೀಕೃಷ್ಣಗಾಥಾ |
ಎಷ್ಟು ರಮ್ಯ, ಎಷ್ಟು ರೋಚಕ - ಶ್ರೀಕೃಷ್ಣಗಾಥಾ ||
ಶಿಷ್ಟ ವಿಶಿಷ್ಟ, ನಿತ್ಯ ಸತ್ಯ - ಶ್ರೀಕೃಷ್ಣಗಾಥಾ |
ನಿಷ್ಠೆಯಲಿ ಧರ್ಮಪರಿಪಾಲಕ- ಶ್ರೀಕೃಷ್ಣಗಾಥಾ ||
ಪುಟ್ಟವನಾಗಿ ಗೈದ ಮೇರು ಸಾಹಸದ- ಶ್ರೀಕೃಷ್ಣಗಾಥಾ |
ದುಷ್ಟರ ದಮನ ಗೈದು ರಕ್ಷಿಸಿದ - ಶ್ರೀಕೃಷ್ಣಗಾಥಾ ||
ಕಷ್ಟಕಾಲದಿ ಸಕಲರ ಸಲುಹಿದ - ಶ್ರೀಕೃಷ್ಣಗಾಥಾ |
ದಿಟ್ಟ ಸದಾ ಆಪದ್ಬಾಂಧವನ- ಶ್ರೀಕೃಷ್ಣಗಾಥಾ ||
ಇಷ್ಟದಿ ತತ್ವಜ್ಞಾನ ಬೋಧಿಸಿದ - ಶ್ರೀಕೃಷ್ಣಗಾಥಾ |
ದೃಷ್ಟಿಯಲಿ ವಿರಾಟರೂಪ ತೋರಿದ - ಶ್ರೀಕೃಷ್ಣಗಾಥಾ ||
ಚೇಷ್ಟೆಯಲಿ ಸ್ವಕುಲ ನಾಶಗೈದ- ಶ್ರೀಕೃಷ್ಣಗಾಥಾ |
ಹೃಷ್ಟನಾದ ವೀರ ಶ್ರೀಕೃಷ್ಣವಿಠ್ಠಲನ- ಶ್ರೀಕೃಷ್ಣಗಾಥಾ ||
117. ಸಕಲರ ಬದುಕಿನ ದಾರಿದೀಪ ಶ್ರೀಕೃಷ್ಣನಕಥೆ |
ಸಕಲ ಕಲಾವಲ್ಲಭ ತಾ ನಡೆದು ತೋರಿದ ||
ಸುಕರ್ಮ-ಕುಕರ್ಮಗಳ ಫಲವೀವ ನಿತ್ಯ |
ಸಂಕಲ್ಪ-ವಿಕಲ್ಪ, ಭಕ್ತ-ಅಭಕ್ತರ ಪೋಷಿಪ ||
ಶ್ರೀಕೃಷ್ಣವಿಠ್ಠಲ ಯದುಕುಲ ಲಲಾಮ ಸತ್ಯಸ್ಯಸತ್ಯ ||
118. ನಂಬಿದರಿಗೆ ಇಂಬುನೀಡುವ |
ನಂಬದವರಿಗೆ ಚೊಂಬು ಕೊಡುವ ||
ನಂಬಿಯೂ-ನಂಬದವರಿಗೆ ಕಂಬದಂತಿರುವ |
ನಿಭತ್ಕಾಯ ಶ್ರೀಕೃಷ್ಣವಿಠ್ಠಲ ಅವರವರ ತೆರನಾಗಿರುವ ||
119. ಸತತ ಮಾಡುವ ಕೆಲಸ ಸರಾಗವಾಗುವಂತೆ |
ಚಿಂತಿಸುವುದು ಅಂತೆಯೇ ಸುರಾಗವಾಗುವುದು ||
ಅಂತ್ಯಕಾಲದಿ ಶ್ರೀಕೃಷ್ಣವಿಠ್ಠಲನ ಚಿಂತನೆ ಬರಬೇಕೆಂದರೆ |
ಸತತ ಚಿಂತನೆಯ ಸುರಾಗವಿದ್ದರೆ ಸರಾಗದಿ ಆಗುವುದು ||
120. ದುರ್ಗಂಧ ಒಳಗೆ ತುಂಬಿರಲು | ಸುಗಂಧ ಹೊರಗೆ ಸೂಸುವುದ್ಹೇಗೆ ?|
ದುರ್ಗತಿ ಭಾವ ಒಳಗಿರಲು | ಸುಗತಿ ಮಾರ್ಗಪ್ರಾಪ್ತಿ ಹೇಗೆ ?||
ಸಂಗತಿ ಒಳ್ಳೆಯದಿರಲು | ಭಂಗ ಬರುವುದು ತಪ್ಪುವುದ್ಹೇಗೆ ||
ಮಂಗಳೇ ಕಟಾಕ್ಷವಿಲ್ಲದಿರೆ | ರಂಗ ಶ್ರೀಕೃಷ್ಣವಿಠ್ಠಲ ಒಲಿಯುವನ್ಹೇಗೆ ||
ಸುಗತಿ = ಮೋಕ್ಷಮಾರ್ಗ
ಭಂಗ= ಪುಣ್ಯಕಾರ್ಯದಿ
ಮಂಗಳೇಕಟಾಕ್ಷ = ಅಂತರ್ಗತಪೂಜೆ
121. ಜನಮನ ಜಗದೀ ಮೆಚ್ಚಿಸುವುದು ದುಸ್ತರ |
ಮನವಿರೆ ಅಂದಣದೀ ಕೂರಿಸಿ, ಇಲ್ಲದಿರೆ ಕೆಳಗೆ ನೂಕುವರು ||
ಕೊನೆವರೆಗೂ ಕೈಬಿಡದಿರುವವನೊಬ್ಬನೇ |
ಅನಿಮಿತ್ತ ಬಂಧು ಅವನೇ ಶ್ರೀಕೃಷ್ಣವಿಠ್ಠಲ ||
122. ಜನ್ಯ ಜನಕ ಪ್ರತಿ ಜನುಮಕೆ ಅನ್ಯರಿಹರು |
ಮಾನ-ಅಪಮಾನ ಪ್ರತಿ ಕ್ಷಣದಿ ಆಗುವುದು ||
ಅನ್ಯ ಚೊಂತಸದೆ ಸದಾ ಶ್ರೀಕೃಷ್ಣವಿಠ್ಠಲನ್ನೆ ಉಪಾಸಿಸಿದರೆ |
ಮಾನದೋ ಮಾನ್ಯ ನಿತ್ಯವೂ ಯೋಗಕ್ಷೇಮ ನೋಡಿಕೊಳ್ಳುವ ||
123. ಕ್ರೌರ್ಯವು ನರ-ನಾಡಿಯಲಿ ಹರಿವಾಗ |
ದಯೆಯು ಹೊರಗೆ ಸೂಸಬಲ್ಲುದೆ ? ||
ಮಾಯೆಯು ಒಳ-ಹೊರಗೆ ತುಂಬಿರಲು |
ಕಾಯಾ, ವಾಚಾ, ಮನಸಾ ಶ್ರೀಕೃಷ್ಣವಿಠ್ಠಲನ ಸೇವಿಸಲು ಸಾಧ್ಯವೇ ||
124. ದಾನಿಸಬೇಕು ಸದಾ ದಾನಿಸುತಿರಬೇಕು |
ದಾನದಲ್ಲಿ ದಾನ ಶ್ರೇಷ್ಠ ಅನ್ನದಾನ ||
ಉನ್ನತ, ಅತಿ ಉತ್ತಮ ದಾನ ವಿದ್ಯಾದಾನ |
ಅನ್ನವು ಜೀವಕೆ ಕ್ಷಣಿಕ ತೃಪ್ತಿ ಇತ್ತರೆ ||
ವಿನಾಶರಹಿತ ವಿದ್ಯೆ, ಜೀವನ ಪರ್ಯಂತ |
ಮನದುಂಬಿ ಶ್ರೀಕೃಷ್ಣವಿಠ್ಠಲನ ಪ್ರೀತ್ಯರ್ಥ ||
ದಾನಿಸಿದ ದಾನವೇ ಸಾರ್ಥಕ ದಾನ ||
125. ಬಾಗಿದರೂ ಬೀಗಿದರೂ ಹೋಗಲೇಬೇಕು |
ಹೋಗುವುದು ಎಲ್ಲಿಗೆ, ಹೇಗೆ, ಯಾವಾಗ ||
ಆಗಲೋ, ಈಗಲೋ ಮತ್ತ್ಯಾವಾಗಲೋ ಗೊತ್ತಿಲ್ಲ |
ಸಗ್ಗ ಸುಖವೋ, ನರಕ ದು:ಖವೋ ತಿಳಿಯದು ||
ಜಗದಿಂದ ಹೊರಟು ಮರಳಿ ಬರುವರೆಗಿರುವ |
ಜಾಗ ಯಾರೂ ಅರಿಯರು, ಅರಿತವರು ಪೇಳರು ||
ಕರ್ಮಭೂಮಿ ಇದು, ಎಲ್ಲ ಅವಸರದಿ ಬಂದು |
ಪೂರ್ವನಿರ್ಧಾರಿತ ಕಾರ್ಯಮುಗಿಸುವರು ||
ಸರ್ವರ ಜೀವನವೂ ವೈವಿಧ್ಯ, ವೈಚಿತ್ರ್ಯವು |
ಸರ್ವ ಪ್ರಾಣಿಗಳ ಜನ್ಮ-ಮೃತ್ಯು ಮಾತ್ರ ಖಚಿತ ||
ಯಾರೋ, ಎಲ್ಲಿವರೋ ಇಲ್ಲಿ ಬಂದು ಜೊತೆಇದ್ದು |
ತೆರಳುವರು ಸ್ವಸ್ಥಾನಕ್ಕೆ ಶ್ರೀಕೃಷ್ಣವಿಠ್ಠಲನ ಅನುಜ್ಞೆಯಲಿ ||
126. ದುರ್ಗಮ ಜೀವನದ ಸುಗಮ ಮಾರ್ಗವೆಂದರೆ |
ಭಗವಂತನ ಪಾದಸೇವೆ, ಅನನ್ಯಭಕ್ತಿ ||
ಜಗಕೆ ಸತ್ಸಂತಾನ ಕೊಡ ಮಾಡುವಿಕೆ |
ನಿರ್ಗಮಿಸುವತನಕ ಸುಧರ್ಮ ಪರಿಪಾಲನೆ ||
ಸುಗುಣವಂತ ಶ್ರೀಕೃಷ್ಣವಿಠ್ಠಲನ ಅಣತಿಪಾಲನೆ |
ಆಗಲೇ ಮಾನವ ಜನುಮದ ಸಾರ್ಥಕ್ಯ ||
127. ತ್ರಿಕಾಲದಿ ಕಾಯಾ, ವಾಚಾ, ಮನಸಾ ಸುಖವೀವ |
ಶಂಕೆ ಇಲ್ಲದೆ ಕಷ್ಟಕಳೆದು ಸಂತೋಷವೀವ ||
ಸಕಲ ಪ್ರದಾತಾ ಈ ಜೀವಕೆ ಇಹ-ಪರದಿ ||
ಶ್ರೀಕೃಷ್ಣವಿಠ್ಠಲನ ನಂಬದೆ ಭವದಿ ಬಳಲುವಿರೇಕೆ ?||
128. ಪಂಚೇಂದ್ರಿಯ ಪಂಚ ಪಾಂಡವರಂತೆ, ಬುದ್ಧಿ ದ್ರೌಪದಿಯಂತೆ |
ಹೊಂಚುಹಾಕುವ ಕಲಿ ದುರ್ಯೋಧನನಂತೆ, ಕಷ್ಟದ ಸಂಸಾರದಿ ||
ವಂಚನೆಗೆ ಬಲಿಯಾಗದಂತೆ ಪೇಚಿನಿಂದ ಪಾರುಮಾಡುವ |
ಹೆಚ್ಚಿನ ಅಘಗಳ ತರಿದು, ಮೆಚ್ಚಿ ಉದ್ಧರಿಸುವ ನಮ್ಮ ||
ಅಚ್ಯುತಾನಂತ ಗೋವಿಂದ ಶ್ರೀಕೃಷ್ಣವಿಠ್ಠಲ ಕೈಪಿಡಿದು ನಡೆಸುವ ||
129. ಮುಚ್ಚಿಕೊಂಡಿರುವುದರಲ್ಲೇ ಇದೆ ಮರ್ಯಾದೆ |
ಹೆಚ್ಚಿನ ಮೈತೋರದೆ ಮುಚ್ಚಿದಷ್ಟೂ ಗೌರವ ||
ಬಚ್ಚಿಟ್ಟು ಅಂಜಿಕೆ, ಕೆಚ್ಚೆದೆ ಬಂಟನಂತೆ ತೋರಬೇಕು |
ಹಚ್ಚಬೇಕು ಆರದಂತಹ ನಂದಾದೀಪ ಬಿರುಗಾಳಿಯಲ್ಲೂ ||
ಮುಚ್ಚಿದ ಬಾಗಿಲೊಳಗಿರುವದೇ ಸದಾ ಸುರಕ್ಷೆ |
ಮುಚ್ಚಿ ಒಳಗೆ ಕಷ್ಟ-ಕಾರ್ಪಣ್ಯ ನಗುನಗುತಿರಬೇಕು ||
ಹೊಚ್ಚಹೊಸದಂತೆ ಹೊರಗೆ ತೋರಬೇಕು, ಒಳಗೆ ತೇಪೆ ಇದ್ದರೂ |
ಹೆಚ್ಚಿಗೆ ತೇಗಿರಿ ಮೃಷ್ಟಾನ್ನ ಉಂಡಂತೆ, ಉಪವಾಸವಿದ್ಧರೂ ||
ಕೊಚ್ಚೆ ಗುಂಡಿಯಲ್ಲಿದ್ದರೂ ಹೊರಗೆ ಕಮಲ ಅರಳಿಸಬೇಕು |
ಸ್ವಚ್ಛ ಮನದಿ ಸಕಲರ ಸೇವಿಸುತಿರಬೇಕು ||
ಮೆಚ್ಚುವ ಶ್ರೀಕೃಷ್ಣವಿಠ್ಠಲ ನಿಜದಿ ಅನುಗ್ರಹಿಸಿ ||
130. ಬಡತನವಿರಲಿ, ಸಿರಿತನವಿರಲಿ ಅಂಗಹೀನನಿರಲಿ |
(ಸುದಾಮ, ಅಂಬರೀಷ, ಜಡಭರತ)
ಎನ್ನೊಡೆಯ, ಬುದ್ಧಿ ಭ್ರಷ್ಟನಾಗಿಸಲು ಬೇಡಾ || (ಅಜಮಿಳ)
ಬಿಡದೆ ಪರಿಪಾಲಿಸೋ ನಿನ್ನವನೆಂದು | (ಪ್ರಲ್ಹಾದ)
ಕಡೆಗೆ, ಕಡೆಹಾಯಿಸೋ ಆಪದ್ಬಾಂಧವ ಶ್ರೀಕೃಷ್ಣವಿಠ್ಠಲನೇ || (ಗಜೇಂದ್ರಮೋಕ್ಷ)
131. ಉರಿ ಬಿಸಿಲ ಬೇಗೆ ಇರಲಿ, ಮರದ ತಂಪಿರಲಿ |
ಸೂರು ಇರಲಿ, ಇರದೇ ಸದಾ ತಿರುಗುತಿರಲಿ ||
ಬರೀ ಉಪವಾಸವಿರಲಿ, ಮೃಷ್ಷಾನ್ನ ಭೊಜನವಿರಲಿ |
ಜರಿ ಪೀತಾಂಬರವಿರಲಿ, ಹರಕು ವಸನವಿರಲಿ |
ಶ್ರೀಕೃಷ್ಣವಿಠ್ಠಲ ಹೇಗಾದರೂ ಇರಲಿ ಜೊತೆಗಾರನಾಗಿರಲಿ ||
132. ಉಸಿರಲಿ, ದೇಹದಿ ಕಣ-ಕಣದಿ ಇದ್ದು |
ಬಸಿರಿನಿಂದ- ಉಸಿರಿರುವ ತನಕ ||
ಸಂಸಾರದ ಕೆಸರಿನಿಂದ ಪಾರುಗೈವ |
ಕಂಸಾರಿ ಶ್ರೀಕೃಷ್ಣವಿಠ್ಠಲನಿರೆ ಕ್ಲೇಶವೆಲ್ಲಿದೆ ? ||
133. ಪರಮಾತ್ಮನ ಕರುಣಾಪೂರಿತ ದೃಷ್ಟಿ |
ಅಮೃತದ ಹಸ್ತ ತಲೆಯ ಮೇಲೆ ||
ಪೂರ್ಣಕೃಪೆಯಲಿ ಪೋಷಿತನಾಗಿರಲು |
ಶ್ರೀಕೃಷ್ಣವಿಠ್ಠಲನಲಿ ಹೇಗೆ ರತಿ ಮಾಡದಿರಲಿ ||
134. ಅಂಜನಾಪುತ್ರ ಭಕ್ತಿಯಲಿ ಸೇವಿಸಿದ ಪ್ರಥಮಾವತಾರದಿ |
ಭಂಜಿಸಿದ ಕುರುಸೈನ್ಯ ಬಲಭೀಮನಾಗಿ ದ್ವಿತೀಯವತಾರದಿ ||
ಅಂಜಿಸಿ ಕುಮತಿಗಳ ಪೂರ್ಣಪ್ರಜ್ಞರಾಗಿ ತೃತೀಯವತಾರದಿ |
ರಂಜಿಸಿದ ವಿವಿಧ ಕಾರ್ಯಸಾಧಕನಾಗಿ ರಾಮ, ಕೃಷ್ಣ, ವೇದವ್ಯಾಸರ ||
ಭಜಿಸಿ ಭಕ್ತಿಯಲಿ ಮುಖ್ಯಪ್ರಾಣನು ಮೂರು ಅವತಾರದಿ |
ಕಂಜನಾಭ ಶ್ರೀಕೃಷ್ಣವಿಠ್ಠಲನ ಬಿಡದೆ ಸರ್ವತ್ರ ಜೊತೆಲಿರುವ ||
135. ಹೊಟ್ಟೆ ಹಾಳು ಹೊಟ್ಟೆ, ಹೊಟ್ಟೆಗಾಗಿ ಏನೇನೋ ಮಾಡಿಸುವುದು |
ಹುಟ್ಟಿಂದನಿಂದ ಚಟ್ಟವೇರುವತನಕ ಬಿಡದ ಹೊಟ್ಟೆ||
ಕುಟ್ಟಿ ಕುಟ್ಟಿ ಒಳಗ್ಹಾಕಿದರೂ ಎಂದಿಗೂ ತೃಪ್ತವಾಗದು |
ಕಟ್ಟ ಕಡೆಯತನಕ ತುಂಬದೇ, ಹಿಗ್ಗಿಸಿದಷ್ಟೂ ಹಿಗ್ಗುವುದು ||
ಕೆಟ್ಟದ್ದು-ಸುಟ್ಟಿದ್ದು, ಸುಡದದ್ದು ಮಸಣದಂತೆ ಹಿಡಿಸುವುದು |
ಹೊಟ್ಟೆಯಿಂದಲೇ ಆರೋಗ್ಯ, ಹೊಟ್ಟೆಯಿಂದಲೇ ನಾನಾರೋಗ ||
ಕಷ್ಟಪಡಿಸುವುದಲ್ಲದೇ, ನಾನಾ ಅಪಮಾನಗಳ ಭರಿಸುವುದು |
ಒಟ್ಟಿನಲಿ ಬಡವ-ಶ್ರೀಮಂತನೆನ್ನದೆ ಎಲ್ಲ ಜೀವಿಗಳ ಬೆಂಬಿಡದು ||
ಹೊಟ್ಟೆಬಾಕ ಶ್ರೀಕೃಷ್ಣವಿಠ್ಠಲನ್ನೇ ಬೇಡಿದರೆ ಹೊಟ್ಟೆತುಂಬುವುದೇನೋ |
136. ನಿಲ್ಲೇ ಗೋಪಿಕೆ ನಿಜವ ಪೇಳೇನಗೆ |
ಹಾಲು-ಬೆಣ್ಣೆಗೆ ಕೃಷ್ಣ ನಿನ್ನ ಮೆಚ್ಚಿದನೇನೆ ||ಪ||
ಒಲವಿಂದ ಮೃಷ್ಟಾನ್ನ ನೀಡುವೆ ಎನ್ನ ಒಪ್ಪುವನೇನೆ ? ||ಅಪ ||
ಕಳ್ಳತನ ಹೊರೆಸಿ ಒರಳಿಗೆ ಕಟ್ಟಿಸಿದೆ |
ಮೆಲ್ಲಗೆ ಮೆಚ್ಚಿಸಿ ರಾಸವ್ಹೇಗೆ ಆಡಿದೆ ? ||1||
ಎಳೆದ ಸೆರಗ ದಾರಿ ಬಿಡದೆ ಎಂದೆ |
ನಲಿದು ಹೃದಯಲಿ ಹೇಗೆ ನಿಲ್ಲಿಸಿದೆ ? ||2||
ಗೊಲ್ಲರೆಲ್ಲರ ಗೋಕುಲದಿ ಪೊರೆದ ಚಿಣ್ಣ |
ಸಲ್ಲಿದನ್ಹೇಗೆ ಮಥುರೆಗೆ ಪೋಗಿ ||3||
ಎಲ್ಲ ಬಲ್ಲ ಲಕುಮಿರಮಣ |
ಎಲ್ಲರ ಹೇಗೆ ಮರುಳ ಮಾಡಿದ ? ||4||
ಮಲ್ಲ ಸಕಲರ ದುರಿತ ಕಳೆವ |
ಚೆಲ್ವ ಶ್ರೀಕೃಷ್ಣವಿಠ್ಠಲ ಪುನ: ಗೋಕುಲಕೆ ಬರಲಿಲ್ಲವೇಕೆ ? ||
137. ಕೊಂಡು ತಂದ ಜೀವನ ವ್ಯರ್ಥವಾಗುತಿಹೆ |
ಚೆಂಡಿನಂತೆ ಈಡಾಡುತಿಹುದು ಕಂಡರೂ ||ಪ||
ಭಂಡ ಜೀವ ಕಾಡಿ-ಬೇಡಿ ಓಲೈಸುತಿದೆ |
ಕಂಡರೂ, ಕಾಣದಂತಿಹರೆಲ್ಲ ಕುಂಡೆ ತಿರುಗಿಸುತ ||
ಮಂಡೆಗೆ ಕುಕ್ಕಿ ಜಡಿಯುತಿಹರೆಲ್ಲ ಆದರೂ |
ಬಿಡದೆ ಅವರನ್ನೇ ಮೋಹಿಸುತಿದೆ ಜೀವ ||1||
ಸುಡು ಸುಡು ಬಿಸಿಲು ಮಳಲಲಿ ನಡೆದೆ |
ಬೆಂಡು ಬಸವಳಿದೆ ಕಂಡೆಯಾ ||
ಜಡಿ ಮಳೆಯಲಿ ಗಡಗಡ ನಡುಗುತ |
ಓಡಿ ಓಡಿ ದಣಿಯುತ ತಿರುಗಾಡಿದೆ ||2||
ಪೊಡವಿಯೊಳು ಎಡಬಿಡದೆ ದಡ-ಬಡ |
ನಡೆದಾಡಿ ಎಡವಿ ಬೀಳುತಿರುವೆ ||
ಒಡನೆ ಕಡೆಹಾಯಿಸೋ ಕಡು ಕರುಣಿಯೇ |
ಒಡೆಯಾ ನಿನ್ನಡಿಗಳ ಮೇಲೆ ಬಿದ್ದುಕೊಂಡಿರುವೆ ಶ್ರೀಕೃಷ್ಣವಿಠ್ಠಲ ||3||
138. ಮುಳುಗಿಸೋ ಇಲ್ಲ ತೇಲಿಸೋ ಪ್ರಭುವೇ ||ಪ||
ಮುಳುಗಲು ಆಳದಿ ರತ್ನಗಳ ಹೆಕ್ಕುವೆ ||ಅ.ಪ||
ಪ್ರಳಯದಿ ಸಕಲವೂ ಮುಳುಗಲು |
ಏಳುದಿನ ನೌಕೆಯಲಿ ತೇಲಿಸಿದವನೇ ||
ಕಳಚಿದ ಇಳೆಯ ದಾಡೆಯಲಿ ರಕ್ಷಿಸಿದವನೇ |
ಮುಳುಗುವ ಶಿಲೆಗಳ ತೇಲಿಸಿದವನೇ ||1||
ಮುಳುಗಿರುವೆ ಸಂಸಾರದಿ ಸರಾಗದಿ ಮೇಲೆತ್ತಿ |
ಕೊಳೆಗಳ ತೊಳೆದು ನಿನ್ನ ಸದನದಿ ಇಡಿಸು ||2||
ಸೆಳೆದು ರಭಸದ ಸುಳಿಯಿಂದ ತೇಲಿಸು |
ಪೊಳೆವ ಶ್ರೀಕೃಷ್ಣವಿಠ್ಠಲ ಚಿತ್ತಕ್ಕೆ ಬಂದಂತೆ ದಯಾಮಾಡೋ ||3||
139. ಕಾಡಿನಲ್ಲಿರಿಸು-ನಾಡಿನಲ್ಲಿರಿಸು ಬೇಡುವುದೊಂದೇ |
ಬಿಡದೇ ದೊರಕಿಸು ಪಾದಕಮಲ ಅಖಂಡಸೇವೆ |
ಧೃಡಭಕುತಿ ಪ್ರತಿ ಜನುಮದಿ ಕೊಡು |
ಒಡೆಯಾ ಶ್ರೀಕೃಷ್ಣವಿಠ್ಠಲ ನಿನ್ನಡಿಗಡಿಗೆ ವಂದಿಪೆ ||
140. ಅಖಂಡ ನಾಮಸ್ಮರಣೆಯಿಂದ ಧೃಡಭಕುತಿ |
ಸಂಖ್ಯೆ ಇಲ್ಲದ ಭಗವದ್ಭಕ್ತರ ಸತ್ಸಂಗದಿ ||
ನಿಖಿಳ ಸೇವಾಭಾಗ್ಯ ದೊರಕುವುದಲ್ಲದೆ |
ಸಖ ಶ್ರೀಕೃಷ್ಣವಿಠ್ಠಲನ ಸಾನಿಧ್ಯ ನಿಶ್ಚಿತ ||
141. ಹರಿನಾಮೋಚ್ಛಾರವು ಸಕಲ ಸುಖಪ್ರದಾಯಕ ||ಪ|\
ಹರಿಯುವುದು ಅನಂತ ಪಾಪರಾಶಿ ||ಅ.ಪ||
ಬರದಂತೆ ತಡೆಯುವುದು ದು:ಖಗಳ |
ನರಕ ದರುಶನವಾಗದು ಇಹ-ಪರದಿ ||
ಗೌರವದ ಸರಮಾಲೆ ತೊಡೆಸುವುದು |
ಪರಿಪರಿಯಲಿ ಅಂತರ್ಯದಿ ಹರುಷವಾವುದು ||1||
ಸರ್ವ ಪವಿತ್ರ ತೀರ್ಥಸ್ನಾನದ ಫಲವಾಹುದು |
ಸರ್ವ ಶ್ರೇಷ್ಠ ದಾನದ ಪುಣ್ಯಪ್ರಾಪ್ತಿಯಾಗುವುದು ||
ಸರ್ವ ಪ್ರತಾಚರಣೆಕಿಂತ ವಿಶೇಷವಿದು |
ಪುರಾಣಾದಿಗಳ ಸಾರ ಇದೇ ಇರುವುದು ||2||
ಸರ್ವತ್ರ, ಸರ್ವಾವಸ್ಥೆಯಲಿ ಸದಾ ಪೇಳಬಹುದು |
ಜೋರಾಗಿ ಇಲ್ಲದೇ ಮನದಿ ಉಚ್ಚರಿಬಹುದು ||
ಬೇರೆಯವರಿಂದಲೂ ಹೇಳಿಸುತಲಿರಬೇಕು |
ಸರ್ವವೇದಾರ್ಥ ಅಕ್ಷರನಾಮಕ ಶ್ರೀಕೃಷ್ಣವಿಠ್ಠಲನಾಮ ||3||
142. ತೆರೆದ ಕಣ್ಣಲಿ ಹುಸಿಕೋಪ |
ಬರೀ ಅವನ ರೂಪ ಹೃದಯದಿ ||
ಬಿರಿದ ತುಟಿಯಲಿ ‘ನ’ಕಾರ |
ಪೂರ್ಣಮನದಿ ಶ್ರೀಕೃಷ್ಣವಿಠ್ಠಲನ್ನೇ ಅಪ್ಪುವ ಬಯಕೆ ರಾಧೆಗೆ ||
143. ಹರಿನಾಮ ಸ್ಮರಸುತ, ಹರಿಲೀಲೆಗಳ ಕೊಂಡಾಡುತ |
ಹರಿ ದರುಶನಕಾಗಿ ಕಾತರದ ಕ್ಷಣಗಣನೆ ಮಾಡುತ ||ಪ||
ಸರಿ ರಾತ್ರಿಯಲ್ಲೆದ್ದು ಚಳಿಯಲಿ ನಡುಗುತ |
ಸರದಿಯಲಿ ನಿಂತು ತರತರದ ಜನರ ನೋಡುತ ||
ಭರಭರನೆ ಓಡುತಾ, ನಿಲ್ಲುತಾ, ಜನರ ದೂಗಿಸುತ್ತಾ |
ಬೇರೆಯವರನು ಬೈಯುತ್ತಾ, ಬೈಸಿಕೊಳ್ಳುತ್ತಾ ||1||
ಸರಿಯುವುದು ಮನದಿ ಗಂಟೆಗಳೆಷ್ಟೋ (ಆದರೂ) |
ಸರಿಯಾಗಿ ಒಂದುಕ್ಷಣ ಶ್ರೀನಿವಾಸನೆದುರು ನಿಂತಾಗ ||
ಮರೆತೆಲ್ಲ ಪಟ್ಟಶ್ರಮ ಧನ್ಯತೆಯಲಿ ಮಿಂದು |
ಭರ್ಜರಿ ನಾಮದ ಇಷ್ಟದೈವನ ಮುಖವೋ, ಪಾದವೋ ||2||
ವರದಹಸ್ತವನ್ನೋ, ಶಂಖ-ಚಕ್ರವನ್ನೋ ನೋಡುವುದರಲ್ಲಿ |
ಹರಕೆ ಮನದಿ ಹೇಳಿಕೊಂಬುವುದನ್ನೆ ಮರೆತಾಗ ||
ಗರ್ಭಗುಡಿಯ ಹೊಗೆಗಳೆದು ಹಾಕಿರುತ್ತಾರೆ |
“ಹರೇ ಶ್ರೀನಿವಾಸ” ಎಂದೆನ್ನುತ್ತಾ ಏನೋ ಸಮಾಧಾನದಿ ||3||
ನರ ಜನ್ಮವೇ ಸಾರ್ಥಕವಾದ ಭಾವಹೊತ್ತು |
ಹೊರಬಂದು ಅನಂತಭಕ್ತರ ದರುಶನದಿ ತೃಪ್ತಿಪಟ್ಟು ||
ತಿರುಗಿ ಎಂದಿಗೆ ದರುಶನ ಕೊಡುವನೋ |
ತಿರುಮಲಾಧೀಶ ಶ್ರೀಕೃಷ್ಣವಿಠ್ಠಲನ ಕರುಣೆಯಲಿ ||4||
144 ದುರ್ಲಭವಾದ ಸ್ವಾಮಿ ದರುಶನವೆಂದಾಗ |
ಪೂರ್ವಜನ್ಮಕೃತ ಪುಣ್ಯದ ಫಲವೇ ಸರಿ ||
\ ಗುರುಹಿರಿಯರ ಆಶೀರ್ವಾದದ ಪ್ರಭಾವದಿ |
ಹರಿಚಿತ್ತಕ್ಕೆ ಬರಲು, ಕರೆದು ಸುದರುಶನವಿತ್ತು ||
ಗುರುಗಳಿಂದ ಸನ್ಮಾನಿಸೆನ್ನ ಜನ್ಮ ಸಾರ್ಥಕವಾಗಿಸಿದ |
ಶ್ರೀಕೃಷ್ಣವಿಠ್ಠಲನ ಕೃಪೆಗೇನೆಂದು ಹೇಳಲಿ ? ||
145. ಕ್ಷಣ ಕ್ಷಣ ಕೂಡಿದರೆ ಯುಗಗಳಾಗುವುದು |
ಕ್ಷಣವೇನು ಬಲ್ಲುದು ಯುಗದ ಕಾಲ ||
ಕ್ಷಣ ಕಳೆದರೆ ಮತ್ತೆಬಾರದೂ ಎಂದೂ |
ಕಾಣದ ಕ್ಷಣದಿಂದ ನಿತ್ಯಕಾಲದ ಗಣನೆ ||
ಗುಣತ್ರಯಗಳ ಸೂಕ್ಷ್ಮಭಾಗ ರೂಪತ್ವ ಮೂಲ ಪ್ರಕೃತಿಯಿಂದ |
ಗುಣ ಮೂರು ಪ್ರಧಾನ ತ್ರಿಗುಣಾತ್ಮಕ ಪ್ರಕೃತಿಯಲಿ ||
ಗುಣ ಸಾಮ್ಯವೇ ಲಯವು, ಗುಣ ವೈಷಮ್ಯವೇ ಸೃಷ್ಠಿ |
ಗುಣತ್ರಯಗಳ ಉಪಚಯವೇ ತತ್ವಗಳ ಸ್ಥೂಲಕ್ಕೆ ಕಾರಣ ||
ಪ್ರಾಣಿರಾಶಿಗಳು ಅನಂತ ಹಾಗೇ, ಸ್ಥೂಲ ಶರೀರವೂ ಅನಂತವೇ |
ಕಾಣುವ ತದ್ಭೋಗ್ಯ ವಸ್ತುಗಳು ಸಹ ಅನಂತಾನಂತ ||
ಕಾಣುವ ಪ್ರಕೃತಿ ಸ್ವರೂಪತ: ನಿತ್ಯಾನಿತ್ಯವೇ |
ಮಣ್ಣು-ಘಟದ ಸೃಷ್ಟಿಗೆ ಉಪಾದಾನ ಕಾರಣದಂತೆ ||
ಸೃಷ್ಟವಾಗುವ ಸಮಸ್ತ ವಸ್ತುಗಳಿಗೆ ಪ್ರಕೃತಿ ಕಾರಣ |
ಸೃಷ್ಟಿಯಲಿ ದೇಶ, ಕಾಲ, ಗುಣಗಳ ಸಂಬಂದವಿಲ್ಲದಿಲ್ಲ ||
ದೇಶ ಕಾಲಗಳು ಸದಾ ಸ್ವಗತ ಈಶಾಧೀನ |
ಸೃಷ್ಟ್ಯಾಧೀಶ ಶ್ರೀಕೃಷ್ಣವಿಠ್ಠಲ ಸ್ವತಂತ್ರ, ಸರ್ವಕ್ಕೂ ಮೂಲಕಾರಣ ||
146. ರಕ್ಷಕ ನೀನಿರಲು ನನಗ್ಯಾತರ ಭಯವೋ |
ರಕ್ಷಿಸುವೆ ನವಮಾಸ ಗರ್ಭದಿ ||
ರಕ್ಷಿಸುವೆ ಜನನಾನಂತರ ಜೀವನದಿ |
ಚಕ್ಷುವಿನಲ್ಲಿದ್ದು ನೋಟ ನೀಡುವಿ ||
ಭಿಕ್ಷೆ ನೀಡುವೆ ಸಕಲ ಭೋಗಂಗಳ |
ಭಕ್ಷ್ಯಗಳಲ್ಲಿದ್ದು ತೃಪ್ತಿ ಪಡಿಸುವಿ ||
ಶಿಕ್ಷಿಸಿ ಎನ್ನ ತಪ್ಪುಗಳ ತಿದ್ದುವಿ |
ಲಕ್ಷಿಸದೆನ್ನಪಚಾರಗಳ ಉಪಕರಿಸುವಿ ||
ಪಕ್ಷಪಾತ ಮಾಡದ ಸಮದರ್ಶಿ |
ಸೂಕ್ಷ್ಮರೂಪದಿ ಸರ್ವತ್ರವ್ಯಾಪಕ ||
ಸಾಕ್ಷಿಯಾಗಿದ್ದು ಸಕಲ ವೀಕ್ಷಿಸುವ |
ಲಕ್ಷ್ಮೀಪತಿ ನಿನ್ನ ಕರುಣೆಗೆ ಎಣಿಗಾಣೆ ||
ಸಕ್ಷಮದಕ್ಷ ಶ್ರೀಕೃಷ್ಣವಿಠ್ಠಲನಿರೆ ಭಯವೇಕೆ ? ||
147. ದಿನಕರಂತರ್ಗತ ಶ್ರೀಹರಿಯ ನೆನೆಯೆ |
ದಿನ ಪ್ರತಿದಿನ ಬುದ್ಧಿಶೋಧಿಸುವ |
ದಿನ ದಿನದಿ ಆಯುರಾರೋಗ್ಯ ಹೆಚ್ಚಿಸಿ |
ಮಾನ್ಯವಂತನಾಗಿಸುವ ಶ್ರೀಕೃಷ್ಣವಿಠ್ಠಲ ||
148. ವ್ರತವಾಚರಿಸಿದರು ಗೋಪಿಕೆಯರು ವ್ರತವಾಚರಿಸಿದರು ||ಪ||
ಪತಿಯಾಗಲಿ ದೇವಕಿಕಂದ ತಮಗೆಂದೆಂದೂ ||ಅಪ||
ಪ್ರತಿ ಉಸಿರನ್ನೇ ಮಿಸಲಾಗಿಟ್ಟರು |
ಪ್ರತಿ ಘಳಿಗೆ ತುಂಬು ಭಾವದಿ ಧೇನಿಸುತ ||
ಪ್ರತಿ ವಸ್ತುವಿನಲಿ ಅವನನ್ನೇ ಕಾಣುತ |
ಜೊತೆಗಾರನಾಗಲಿ ಎಂದು ಬಯಸುತ ||1||
ಕಾತ್ಯಾಯನಿ ವ್ರತಾಚರಣೆ ನಿಷ್ಠೆಯಲಿ ಮಾಡಲು |
ಬತ್ತಲೆಯಾಗಿ ನದಿಯಲಿ ಕನ್ನಿಕೆಯರು ಮುಳುಗಲು ||
ಇತ್ತ ಯದುಕುಲಚಂದ್ರ ಮಾಡಿದವರ ವಸ್ತ್ರಾಪಹಾರ |
ಎತ್ತಿ ಎರಡು ಕೈ ಹೊರಬಂದು ಬೇಡಿದರೆ ಕೊಡುವೆನೆಂದ ||2||
ಕತ್ತಲೆಯಲ್ಲೂ ಮಾನಿನಿಯರು ನಾಚಿ ನೀರಾದರು |
ರಾತ್ರಿಯಲಿ ನಗ್ನರಾಗಿ ನದಿಯಲಿ ಮುಳಗಬಾರದು ||
ತತ್ವಾಭಿಮಾನಿ ದೇವತೆಗಳಿಗಪಚಾರ ಮಾಡಬಾರದು |
ಇತ್ತನು ವಸ್ತ್ರ ಸರಿಯಾದ ಪದ್ಧತಿ ಪೇಳಿ ||3||
ಭಕ್ತಿಯಲಿ ಪೂರ್ತಿ ಶರಣಾಗಿ ಫಲ ಕೇಳಲು |
ಅತಿ ಸಂತೋಷದಿ ವ್ರತ ಸಮಾಪ್ತಿ ಮಾಡಿದ ||
ಸ್ವತಂತ್ರ ಸ್ವರಮಣ ವಚನವಿತ್ತವರಿಗೆ |
ಪತಿಯಾಗಿ ರತಿ ನೀಡುವೆ ನಿಮಗೆಂದ ಶ್ರೀಕೃಷ್ಣವಿಠ್ಠಲ ||4||
149. ಸವತಿ ಮಾತ್ಸರ್ಯ ಮೋಹನನ ಮುರುಳಿಯಲಿ |
ತವಕದಿ ಅಂಗಸಂಗವೆಲ್ಲ ತನದಾಗಿಸುವ ಬಯಕೆ ||
ಅವನ ಅಧರಾಮೃತ ತನಗಾಗಿ ಮಾತ್ರ ಎನ್ನುವ ರಾಧೆ |
ಅವನು ಸಕಲ ಭಕ್ತ ಪರಾಧೀನ ಎಂಬುದ ಮರೆತಳು ||
ಅವನ ಕಾಣದೇ ಪರಿತಪಿಸಿ ಬೇಡಿಕೊಂಡಳು |
ಸ್ವವಶ ಶ್ರೀಕೃಷ್ಣವಿಠ್ಠಲ ಯಾರ ಅಧೀನನು ಅಲ್ಲ ||
150 ನಾರಾಯಣ ತಾನಿಹನು ಕ್ಷೀರಸಾಗರದಿ |
ಶ್ರೀರಮಾ ಇಹಳು ಇವನ ವಕ್ಷ ಸ್ಥಳದಿ ||
ಇರುವನು ನಾಲ್ಮೋಗನು ಕಮಲದಿ |
ಹರನಿಹನು ಕೈಲಾಸ ಗಿರಿಯಲಿ ||
ಇಂದ್ರನಿಹನು ಅಮರಾವತಿಯಲಿ |
ನರಕಲೋಕದಿ ಜವರಾಯನಿಹನು ||
ನರರಿಗೂ ಭೂಲೋಕ ವಿತ್ತಿಹನು |
ಸುರವೈರಿಗೂ ಇತ್ತಿಹನು ಅಧಮಲೋಕ ||
ಸರ್ವರಿಗೂ ಸ್ಥಾನ ಇತ್ತಿಹನು ಸ್ವಾಮಿ |
ಸರ್ವಪ್ರಾಣರ ಪ್ರಾಣನೇ ನಿನ್ನಲೋಕ ಯಾವುದು ? ||
ಸರ್ವತ್ರ ವ್ಯಾಪ್ತ ಸ್ವಾಮಿಯ ಆಪ್ತ ಬಂಟನೇ |
ಶ್ರೀಕೃಷ್ಣವಿಠ್ಠಲನ ಬಿಟ್ಟಿರದ ಮುಖ್ಯಪ್ರಾಣನೇ ನಿನ್ನ ತಾಣ ಯಾವುದು ? ||
...151. ವಂಶೋದ್ಧಾರಕ ನೀನೇ ವಂಶನಿರ್ಮೂಲಕ ನೀನೆ ||ಪ|| (ಪಾಂಡವ,ಯಾದವ)
ಆಶಿಪೆ ಸದಾ ನಿನ್ನ ಕೃಪೆ ಎನ್ನ ಮೇಲಿರಲಿ ||ಅಪ||
ಈಶ ನೀನು, ನಿನ್ನ ದಾಸ ನಾನು |
ಪಾಶ ಬಂಧನ ಬಿಡಿಸುವವ ||
ಆಶಾ, ಕ್ಲೇಶಾದಿಗಳ ಕಳೆದು |
ಹರ್ಷ ನೀಡುವವ ನೀನಲ್ಲದೇ ಮತ್ಯಾರು ? ||1||
ದೋಷ ದೂರ ನೀನು, ಹೇಶಿ ನಾನು |
ಕಾಶಿ ಸುತ್ತಿ, ಕೋಶ ಓದಿದರೂ ||
ಲೇಶ ಪಾಪ ಕಳೆಯಲಿಲ್ಲ |
ವಶವೆಲ್ಲ ನಿನಗೆ, ನೀನೊಬ್ಬರ ವಶನಲ್ಲ ||2||
ಅಂಶಿ ನೀನು, ನಿನ್ನಂಶ ನಾನು |
ಸಾಂಶರೆಲ್ಲ ನಿನ್ನ ವಶರಿಹರು ||
ವಿಷಯ ದೂರ ಮಾಡೆನ್ನ |
ಕೀಶ, ಅವನೀಶ ವ್ರತಿಶನಾಥ ಶ್ರೀಕೃಷ್ಣವಿಠ್ಠಲನೇ ||3||
(ಹನುಮ,ಭೀಮ,ಮಧ್ವ.)
152 ಹುಟ್ಟಿಲ್ಲದವ ಹೊಕ್ಕುಳಲಿ ಹುಟ್ಟಿಸಿ ಹೂವೊಂದು ಮೂಲರೂಪದಿ |
ಎಂಟು ಮೇಲ್ನಾಕು ಪಕಳೆಯ ಪುಷ್ಪದ ಬ್ರಹ್ಮಾಂಡದೊಳೊಂದು ರೂಪ ||
ಹೊಟ್ಟೆಯಲ್ಲಿದ್ದ ಜೀವಿಗಳಿಗೆ ದೇಹ ಸೃಷ್ಟಿಸಿ, ಪಿಂಡಾಂಡದಲ್ಲೊಂದು ರೂಪ |
ಜಟ್ಟಿ ತ್ರಯೀಶ ಶ್ರೀಕೃಷ್ಣವಿಠ್ಠಲ ವ್ಯಾಪಿತ ಸರ್ವತ್ರ ||
153. ಹಲವು ಬಗೆಯಲಿ ಆರಾಧಿಪರು ಲೋಕದಿ |
ಒಲಿಸಲು ಭಗವಂತನ ಸತತ ಯತ್ನದಿ ||ಪ||
ಕೆಲವರು ಭಜನೆಯಲಿ ಮೈಮರೆವರು |
ಕೆಲವರು ತಾಳ ಹಾಕುತ್ತಾ ಕುಣಿವರು ||
ಕೆಲವರು ಏಕಾಂತದಿ ಕುಳಿತು ಧ್ಯಾನಮಾಳ್ಪರು |
ಕೆಲವರು ಪ್ರಕೃತಿ ಅಚ್ಚರಿಯಲ್ಲೇ ತನ್ಮಯರು ||1||
ಕೆಲವರು ಬಾಹ್ಯ ಚಿನ್ಹೆ ಢಾಳಾಗಿ ಧರಿಸುವರು |
ಕೆಲವರು ಬರೀ ಸ್ನಾನ, ಸ್ತೋತ್ರ ಪಠಿಸುವರು ||
ಕೆಲವರು ಮಾಡುವ ಕೆಲಸವೇ ದೇವರೆಂಬುವರು |
ಕೆಲವರು ಪ್ರತ-ನಿಯಮದಿ ದೇಹ ದಣಿಸುವರು ||2||
ಕೆಲವರು ಸತ್ಸಂಗದಲ್ಲೇ ಇರುವರು |
ಕೆಲವರು ಪ್ರವಚನ ಆಲಿಕೆ ಬಯಸುವರು ||
ಕೆಲವರು ಯಜ್ಞ, ಗೋಪೂಜೆ ನಿರುತರು |
ಕೆಲವರು ಮುತ್ತೈದೆ-ಬ್ರಾಹ್ಮಣರ ಪೂಜೆಯಲಿ ತೃಪ್ತರು ||3||
ಕೆಲವರು ಭೋಜನ ಮಾಡಿಸಿ ತಣಿಸುವರು |
ಕೆಲವರು ಅತಿಥಿ-ಅಭ್ಯಾಗತರ ಸೇವಿಸುವರು ||
ಕೆಲವರು ದೀನ-ದು:ಖಿತರ ಸೇವೆಯಲಿ ಸಂತಸರು |
ಕೆಲವರು ಪ್ರಾಣಿದಯೆ ದೊಡ್ಡ ಸೇವೆ ಎಂಬುವರು ||4||
ಕೆಲವರು ಜಪ-ತಪದಿ ತನ್ಮಯರು |
ಕೆಲವರು ಪಾದಯಾತ್ರೆಯಲಿ ನಿರುತರು ||
ಕೆಲವರು ಬರೀ ನಾಮಸ್ಮರಣೆಯಲಿ ಸಂತಸರು |
ಕೆಲವರು ಭಕುತರ ಸೇವೆಯೇ ಭಾಗ್ಯವೆನ್ನುವರು ||5||
ಕೆಲವರಿಗೆ ತೀರ್ಥಯಾತ್ರೆಯಲಿ ರತಿ |
ಕೆಲವರಿಗೆ ದಾನಗಳಲ್ಲೇ ಆಸಕ್ತಿ ||
ಕೆಲವರಿಗೆ ಮೂರ್ತಿ ಪೂಜೆಯಲಿ ತನ್ಮಯತೆ |
ಕೆಲವರಿಗೆ ಬಾಹ್ಯ ಆಚರಣೆಯಲ್ಲಿ ಸುಖಿಪರು ||6||
ಕೆಲವರಿಗೆ ಪ್ರದಕ್ಷಿಣೆಯಲಿ ಭಕುತಿ |
ಕೆಲವರಿಗೆ ನಮಸ್ಕಾರದಲ್ಲೇ ನಂಬಿಕೆ ||
ಕೆಲವರಿಗೆ ದುಡಿಮೆಯಲ್ಲಿ ತತ್ಪರತೆ |
ಕೆಲವರಿಗೆ ಶಾಸ್ತ್ರಭ್ಯಾಸದಲ್ಲೇ ನಂಬಿಕೆ ||7||
ಕೆಲವು ವಿಚಾರವಂತರು ಆಚಾರ ನಂಬರು |
ಕೆಲವರು ಸಕಲರಿಗೆ ಪ್ರಿಯವಚನರು ||
ಕೆಲವರು ಗುರು-ಹಿರಿಯರು ವಚನಪಾಲಕರು |
ಕೆಲವರು ಸ್ವಂತದ ಬಲವೇ ದೈವ ಬಲವೆನ್ನುವರು ||8||
ಎಲ್ಲವೂ ಸುಗತಿಗೆ ಅನೇಕ ದಾರಿಗಳು |
ಸ್ವಲ್ಪ ಮಾಡಿದರೂ ಪುಣ್ಯವೇ ಬರುವುದು ||
ಬಲ್ಲವರು ಬಲ್ಲರು ಒಲಿಸುವ ಬಗೆ |
ಚೆಲ್ವ ಶ್ರೀಕೃಷ್ಣವಿಠ್ಠಲ ತಾನೇ ಒಲಿದರೆ ಅನುಗ್ರಹೀಪ ||9||
154. ಉತ್ತಮರ ಸಂಗದಿ ನಿತ್ಯ ಒಡನಾಡ |
ಉತ್ತಮ ಜ್ಞಾನವೃದ್ಧಿಗಾಗಿ ಮಾತಾಡು ||
ಜೊತೆಗಾರನಾಗಿ ಧಾರಾಳಿಯ ಸ್ನೇಹಮಾಡು |
ಮತ್ತೆಂದೂ ಜೀವನದಿ ಸೋಲು ಕೊಡೆನು ಶ್ರೀಕೃಷ್ಣವಿಠ್ಠಲ ||
155. ಮರೆತು ಬಾಹ್ಯ ವಿಷಯಂಗಳ |
ಅರಿವೆಂಬ ಜ್ಞಾನ ಸರೋವರದಿ ||
ಪರಮಾತ್ಮನ ಧ್ಯಾನದಿ ಸದಾ ಮುಳುಗೇ |
ಕಾರುಣ್ಯ ರತ್ನ ಶ್ರೀಕೃಷ್ಣವಿಠ್ಠಲ ಕಾಣದಿಹನೇ ||
156. ತೀರ್ಥಯಾತ್ರೆ ಮಾಡಿ ಜೀವನದಿ ಧನ್ಯರಾಗಿರಿ ||ಪ||
ಅರ್ಥಸಹಿತ ಪುಣ್ಯಪ್ರದಾಯಕ ತೀರ್ಥಯಾತ್ರೆ ಮಾಡಿರಿ ||ಅಪ||
ಯಾವ ಪುಣ್ಯಕ್ಷೇತ್ರಕೆ ಹೋದರೆ ಬಾಹೋದೇನು |
ಯಾವ ನದಿಯಲಿ ಮುಳುಗಿದರೆ ಫಲವೇನು ||
ಯಾವ ದಾನ-ಧರ್ಮದಿಂದಲೂ ದೊರೆದಂತಹ |
ಸಾವು-ನೋವು ನೀಗುವಂತಹ ಯಾತ್ರೆ ಮಾಡಿರಿ ||1||
ಶ್ರಮವಿಲ್ಲದಂತಹ ತೀರ್ಥಯಾತ್ರೆ |
ದಮ್ಮಡಿ ಖರ್ಚಿಲ್ಲದಂತಹ ತೀರ್ಥಯಾತ್ರೆ ||
ಸುಮ್ಮನೆ ಓಡಾಡಿ ದಣಿಯದೆ |
ನಿರ್ಮಲ ಮನದಿ ನಿರುತ ಇದ್ದಲೇ ಯಾತ್ರೆ ಮಾಡಿರಿ ||2||
ಮಾನಸ ಸರೋವರದಿ ಬ್ರಹ್ಮಧ್ಯಾನ ಮಾಡಿರಿ |
ಮಾನಸೋಪಚಾರವೆಂದು ಇಂದ್ರಿಯ ನಿಗ್ರಹಸಿ ||
ಏನೊಂದು ಬಿಡದೆ ವ್ರತ-ಉಪವಾಸ ಆಚರಿಸೆ |
ಮನು-ದೇಹದ (ಭಾವ)ಶುದ್ಧಿಯೇ ತೀರ್ಥಯಾತ್ರೆ ||3||
ಇದೇ ಜೀವನದ ಪರಮಯಜ್ಞ |
ಇದನ್ನೇ ಯಜ್ಞ ಪುರುಷ ನಿಂತು ನಡೆಸೆ ||
ಶುದ್ಧ ಹೃದಯದ ಯಜ್ಞೇಶನು ಸ್ವೀಕರಿಸಿ |
ಬಂಧು ಶ್ರೀಕೃಷ್ಣವಿಠ್ಠಲ ಯಜ್ಞ ಭಾವದಿ ಯಜ್ಞ ಭೋಕ್ತಾರನಾಗುವ ||4||
=
157. ವಿಪ್ರನಿಗೆ ಭೂಷಣ ಅಧ್ಯಾತ್ಮವಿದ್ಯೆ |
ಉರ್ವಿಗೆ ಭೂಷಣ ಧಾರ್ಮಿಕ ಭೂಪತಿ ||
ಆಕಾಶಕೆ ಭೂಷಣ ರಾಜ ಚಂದ್ರ |
ಸಕಲರಿಗೂ ಭೂಷಣ ಸುಶೀಲ ||
ಮನ:ಪೂರ್ವಕ ನಾಮೋಚ್ಚಾರ ವ್ಯರ್ಥವಾಗದು |
ಸ್ವನಿಯಾಮಕ ಶ್ರೀಕೃಷ್ಣವಿಠ್ಠಲ ನಾಮ ಸರ್ವಮಾನ್ಯ ||
158. ಮಡಿಯೆಂದರೆ ಮೈ ತೊಳೆಯುವದಷ್ಟೇ |
ಮಾಡಿ ಆದಷ್ಟು ಅಷ್ಟವಿಧದ ಮಡಿಯನು ||
ಮಡಿಯೆಂದರೆ ಸತ್ಯದ ನಡೆ-ನುಡಿ |
ಮಡಿಯೆಂದರೆ ಸರ್ಮ ಪ್ರಾಣಿ ದಯೆ ||
ಮಡಿಯೆಂದರೆ ನಿರುತ ಅಧ್ಯಾತ್ಮಚಿಂತನ |
ಮಡಿಯೆಂದರೆ ಇಂದ್ರಿಯ ನಿಗ್ರಹ ||
ಪುಂಡರಿಕಾಕ್ಷನ ಸ್ಮರಣೆಯಲಿ ಅಪವಿತ್ರವೂ ಪವಿತ್ರವಾಗುವುದು |
ಮಡಿಗೆ ಮಡಿ ಶ್ರೀಕೃಷ್ಣವಿಠ್ಠಲನ ನಾಮೋಚ್ಚಾರ ||
ಅಷ್ಟವಿಧ ಮಡಿ-ಸತ್ಯ, ದಾನಂ, ದಯಾ, ಅಲೋಭ, ವಿದ್ಯಾ, ಇಜ್ಯಾಂ(ಅಗ್ನಿಹೋತ್ರ ಇಡುವುದು) |ಪೂಜನಂ, ದಮ (ಇಂದ್ರಿಯನಿಗ್ರಹ)
159. ಬೇಡಾದದ್ದು ಕೊಡುವಿ, ಬೇಕೆಂದಿದ್ದನ್ನು ಬಿಡಿಸುವಿ |
ಒಡಲು ತುಂಬಿದಾಗ ತಿನ್ನಿಸುವಿ, ಹಸಿದಾಗ ಹಿಡಿಯೂ ಸಿಗದು ||
ಹೊಡೆತ ತಾಳದಾಗ ಮತ್ತೆ ಹೊಡೆಯುವಿ, ತಡೆಯುವುದೆಂತು |
ಚೆಂಡಿನಂತೆ ಈಡಾಡಿ ಕಡೆಗೆ ಕೈ ಬಿಡುವುದು ಸರಿಯೇ ಶ್ರೀಕೃಷ್ಣವಿಠ್ಠಲ ||
160 ಎನ್ನಲ್ಲಿರುವ ನೂರಾರು ಅವನುಣನಿನಗೊಪ್ಪಿಸುವೆ |
ನಿನ್ನ ಅನಂತಗುಣಗಳಲ್ಲೊಂದಾದ ಕ್ಷಮಾಗುಣದಿಂದೆನ್ನ ಮನ್ನಿಸು ಶ್ರೀಕೃಷ್ಣವಿಠ್ಠಲ ||
161. ಮಾವಿನ ಗೊಟ್ಟದಿಂ ಅಂತರಿಕ್ಷದಲಿ ವೃಕ್ಷವಾಗುವುದೇ? |
ಭುವಿಲಿ ನೆಟ್ಟು ನೀರುಣಿಸಿದಾಗ ಫಲವಿವುದು ||
ಜೀವಿಗೆ ದೇಹವಿತ್ತರೆ ಸಾಧನೆಯಾಗುವುದೇ ? |
ಸ್ವಇಚ್ಛಾ, ಪ್ರಯತ್ನ ಜೊತೆ ಶ್ರೀಕೃಷ್ಣವಿಠ್ಠಲನ ಅನುಗ್ರಹ ಬೇಕಲ್ಲವೇ ? ||
162. ಸಣ್ಣವನೆಂದು ಉದಾಸೀನತೆ ಬೇಡಾ ವಿರಾಟರೂಪಿಯೇ |
ನಿನಗೆ ಅಭಿಷೇಕಿಸುವ ಜೇನು ಬಂದಿದ್ದು ಸಣ್ಣಹುಳುವಿನಿಂದ ||
ನಿನಗೆ ಪಟ್ಟಿಮಡಿ ಉಡಿಸುವುದು ಸಣ್ಣರೇಶಿಮೆ ಹುಳುವೇ |
ಎನ್ನನು ಸದಾಯೋಗ್ಯ ಭಕ್ತರ ಸಂಗದಲ್ಲಿರಿಸಿ ಸೇವೆಕೊಡು ||
ನಾನೂ ಸಾಧನೆಮಾಡಿ ನಿನ್ನಅನುಗ್ರಹ ಪಡೆಯುವೆ ಶ್ರೀಕೃಷ್ಣವಿಠ್ಠಲ ||
163. ಜಡಮತಿಗೆ ಸುಮತಿ ನೀಡುವ ಬ್ರಹ್ಮಾಣಿಯೇ |
ಮಾಡುವೆ ನಿನ್ನಾಧೀನ ಕಾಯಾ, ವಚನ, ಮನವ ||
ಬಿಡದೆ ತೀಡಿ ತಿದ್ದಿ ಒಳಗಿಳಿಸು ಸಕಲ ವೇದಾರ್ಥವ |
ಮಾಡದ್ದಿದರೆ ಇದನ್ನು, ನಿನಗೆ ಒಡೆಯ ಶ್ರೀಕೃಷ್ಣವಿಠ್ಠಲನಾಣೆ ||
164. ಕಳ್ಳ ಬರುವ ಮೆಲ್ಲಗೆ ಕಳ್ಳ ಬರುವ |
ಹೇಳದೆ ಕೇಳದೆ ಬಂದು ಸದ್ದಿಲ್ಲದೆ ಒಯ್ಯುವ ||ಜೋಕೆ|| ||ಪ||
ದಿಟ್ಟನಿವ ಹಗಲುಗಳ್ಳನಂತೆ ಬರುವ |
ಗುಟ್ಟಾಗಿ ಮಾಡಿದ ಸಂಪತ್ತೆಲ್ಲಾ ಹೊತ್ತೋಯ್ಯುವ ||
ಸಿಟ್ಟು ಮಾಡಿದರೂ ಅಂಜನು ಯಾರಿಗೂ |
ದಿಟವಿದು ಸಟೆಯಲ್ಲ ಪುಂಡನಿವ ||1||
ಕಳೆದುಕೊಳ್ಳದಂತೆ, ಶ್ರೀದೇವಿ ಇತ್ತಿದ್ದು |
ಉಳಿಸಲೊಂದೇ ದಾರಿ ಇರುವುದು ||
ಕಳ್ಳರ ಕಳ್ಳ ಮಹಾಕಳ್ಳ ಇವನೊಬ್ಬನೇ |
ಒಳಗೊಳಗೆ ಶ್ರೀಕೃಷ್ಣವಿಠ್ಠಲಗೆ ಸಮರ್ಪಿಸೆ ಸದಾ ಕಾಯ್ವ ||2||
165. ಹನುಮಂತ ಹೇಳೆನಗೆ, ಅಸ್ವಾತಂತ್ರನಲಿ ಸ್ವತಂತ್ರ ಇರುವನ್ಹೆಂಗೆ ||ಪ||
ಹೀನ ಶರೀರದಿ ಅಶರೀರನಿರುವನ್ಹೆಂಗೆ? ||ಅಪ||
ಸರ್ವಭೋಕ್ತೃ ತನ್ನನ್ನು ತಾನೇ ತಿನ್ನುವನ್ಹೆಂಗೆ ? (ಯೋಗಾವಸ್ಥೆ)
ಸರ್ವತೃಪ್ತ ಒಂದೇ ತುತ್ತಲಿ ಜಗವ ನುಂಗುವನ್ಹೆಂಗೆ? ||(ಲಯ)
ಸರ್ವದಾತೃ ತನ್ನನ್ನು ಪೂರ್ಣ ದಾನಿಸುವನ್ಹೆಂಗೆ? |
ಸರ್ವಪಿತನಿಗೆ ಪಿತನಿಲ್ಲದಿರುವದ್ಹೆಂಗೆ ||1||
ಸರ್ವಕರ್ತೃತ್ವ ತಾನಾದರೆ, ಜೀವ ಕರ್ತೃತ್ವ ಇರುವುದಹೆಂಗೆ? |
ಸರ್ವಶಕ್ತ ತಾನಾದರೆ ಪುರುಷ ಪ್ರಯತ್ನವಿರುವುದದ್ಹೆಂಗೆ ? ||
ಸರ್ವಜ್ಞಾತ ತಾನಾದರೆ ಜೀವಿ ಬೇಡಿಕೊಳ್ಳುವುದ್ಹೆಂಗೆ ? |
ಸರ್ವ ಚಿತ್ತ ತಾನಾದರೆ ಇಚ್ಛಾ-ದ್ವೇಷವಿರುವುದ್ಹೆಂಗೆ ? ||2||
ಸರ್ವವ್ಯಾಪ್ತನಿಗೆ ಅಧಿಷ್ಠಾನ ವಿರುವುದ್ಹೆಂಗೆ ? | (ಪ್ರಾಣ)
ಸರ್ವ ಆತ್ಮ-ಅಂತರಾತ್ಮ ಒಬ್ಬನೇ ಇರುವುದ್ಹೆಂಗೆ ? ||
(ಆತ್ಮ= ದೇಹದೊಳಗಿರುವ, ಅಂತರಾತ್ಮ= ಜೀವದೊಳಗಿರುವ ಪರಮಾತ್ಮ)
ಮೂರ್ತಿಮಂತ ಅಮೂರ್ತಿ ಅಚಿಂತ್ಯನ ತಿಳಿವುದ್ಹೇಂಗೆ |
ಉರ್ವಿಪತಿ ಶ್ರೀಕೃಷ್ಣವಿಠ್ಠಲ ಸರ್ವಪತಿ ಹೆಂಗೆ ||3||
166. ತಿಳಿಯೆನು ಮಾಯೆ ಏನೆಂದು ತಿಳಿಯೆನು ||ಪ||
ತಿಳಿಯೆನು ಜಗತ್ತು ಮಾಯೆ ಹೇಗೆ ಎಂಬುದು ||ಅಪ||
ಮಯನು ಮಾಡಿದ್ದರಿಂದ ಮಾಯೆ ಸರಿಯೇ |
ಮಾಯೆ ಕುಹಕವೆಂಬುದು ಸರಿಯೇ || (ಜಾದೂ)
ಮಾಯೆ ಪರಮ ಆಸೆ ಎಂಬುದು ಸರಿಯೇ |
ಮಾಯೆ ಸಾಮ್ಯರ್ಥವೆಂಬುದು ಸರಿಯೇ ||1||
ಮಾಯೆ ಜ್ಞಾನವೆಂಬುದು ಸರಿಯೇ |
ಮಾಯೆ ಕೃಪೆ ಎಂಬುದು ಸರಿಯೇ ||
ಮಾಯೆಯ ಸರ್ವಾರ್ಥದ ನೆಲೆತಿಳಿಸು |
ಮಾಯಾಪತಿ ವಾಸುದೇವಾಭಿನ್ನ ಶ್ರೀಕೃಷ್ಣವಿಠ್ಠಲನೇ ||2||
167. ಕಂದ ಬೇಕೆನಗೆ ಚೆಂದದ ಕಂದ ಬೇಕೆನೆಗೆ |
ಆದಿ ಸುಂದರ ಧೀಮಂತನಾದ ||ಪ||
ನೀರು ಸುತ್ತಲೂ ಪ್ರಳಯಾಂತಕ ನೀರು |
ಸುರ-ನರ ಯಾರದೂ ಸುಳಿವಿಲ್ಲ ||
ಪರ್ಣವೊಂದೇ ತೇಲಿ ಬರಲು |
ಚಿತ್ತಚೋರ ಪೋರನೊಬ್ಬನೇ ಮಲಗಿದ್ದ ||1||
ಹೆದರದೆ ಕತ್ತಲಲಿ ಒಬ್ಬನೇ ಆಡುತ್ತಾ |
ಪಾದವನ್ನೆತ್ತಿ ಬೆರಳು ಬಾಯಲ್ಲಿಡುತಾ ||
ಅಂದದ ಕಣ್ಣರಳಿಸಿ ಸುತ್ತ ನೋಡುತ |
ಮೋದದಿ ನಲಿವ ಪುಟ್ಟ ಕಂದ ||2||
ತಾಯಿ ಹೆರಲಿಲ್ಲ, ತಂದೆ ಬೆಳಸಲಿಲ್ಲ |
ಬಯಸನು ಯಾರನ್ನೂ, ಎಲ್ಲರೂ ಬಯಸುವಂತಹ ||
ಸ್ವಯಂ ತನ್ನನ್ನು ಕಾಯ್ದು ಎಲ್ಲರನ್ನೂ ಕಾಯ್ವ |
ಜಯ ಶ್ರೀಕೃಷ್ಣವಿಠ್ಠಲನಂತಹ ಕಂದ ಬೇಕು ||3||
168. ಪಥಿಕ ನಾನು ಪಾಥೇಯ ಕಟ್ಟುತಿರುವೆ |
ಮಥಿಸಿ ಜ್ಞಾನ ಅರ್ಥ ತಿಳಿಯುತಿರುವೆ ||
ಪಂಥನೇ, ಅನ್ಯವರಿಯದಂತೆ ಮಾಡೆನ್ನ |
ಪಾರ್ಥಸಖ ಶ್ರೀಕೃಷ್ಣವಿಠ್ಠಲ ದಯಾನಿಧೇ ||
169 ಎನಗೆ ದೇಹವಿತ್ತು ಸಲುಹಿದವ ಪಿತೃ | (ಸ್ಥೂಲ)
ಎನಗೆ ಜನ್ಮ-ಆಹಾರವಿತ್ತವಳು ಮಾತೃ ||
ಎನಗೆ ಅರಿವಿತ್ತು ತಿದ್ದಿದವರು ಗುರು |
ಎನ್ನ ಸರ್ವ ಆಗು-ಹೋಗುಗಳ ನಿರ್ಧಾರ ನಿನ್ನದು ||
ಎನ್ನ ಪಾತ್ರ ಇದರಲ್ಲೇನಿದೆ ಪೇಳು ಶ್ರೀಕೃಷ್ಣವಿಠ್ಠಲ ||
170. ಒಂದೇ ಕಾಲ, ಒಂದೇ ಶರೀರ |
ಒಂದೇ ಜೀವನ, ಒಂದೇ ಅವಕಾಶ ||
ಒಂದೇ ಮನ, ಒಂದೇ ಬುದ್ದಿ |
ಒಂದೇ ಭಕುತಿಯಲಿ ಒಂದೇ ದೈವದಿಂದ ||
ಒಂದನ್ನೇ ಪಡೆಯಿರಿ ಶ್ರೀಕೃಷ್ಣವಿಠ್ಠಲನ ಭಜಿಸಿ ||
171. ತಿಳಿಯಿರೋ ಒಳ ತಿರುಳು ತಿಳಿದು ತಿಳಿಯಿರೋ |
ಒಳ್ಳೆಯದನ್ನು ಬಿಡದೇ ಕೇಳಿ ತಿಳಿಯಿರಿ ||ಪ||
ಬಾಳಿನಲಿ ಏಳು-ಬೀಳುಗಳು ಸಹಜವೇ |
ಗೋಳು ಹೇಳಿಕೊಳ್ಳದೇ ಸಹಿಸಿರಿ ||
ದಾಳಿಂಬೆ ಕಾಳು ಹಣ್ಣಿನಿಂದ ಸಿಡಿದರೆ ಬೆಲೆಯಿಲ್ಲ |
ಒಳಗೇ ಜೋಡಣೆಯಲ್ಲಿದ್ದರೆ ರುಚಿ-ಶುಚಿ ||1||
ಕಳೆಯುವ ಉದಯಾಸ್ತಮಾನ ಆಯುಷ್ಯಕಳೆವುದು |
ಒಳಗೊಳಗೆ ಬೆಂದು ಪಕ್ವವಾಗುವುದು ಪಾಕದಂತೆ ||
ಕೊಳೆ ಹತ್ತದಂತಿರುವ ಕಮಲದೆಲೆಯಂತೆ |
ಸುಳಿಯೊಳು ಸಿಲುಕದೆ ಮೆಲ್ಲ ಜಾರಿಕೊಳ್ಳಿ ||2||
ಪೊಳ್ಳು ಮಾತಲಿ ವ್ಯರ್ಥವ್ಯಯಿಸದೇ ಕಾಲ |
ಸುಳ್ಳು ಜೊಳ್ಳುಗಳಿಗೆ ಜೋತು ಬೀಳದೆ ||
ಕಳ್ಳ ಹೊಂಚು ಹಾಕಿ ಮಳ್ಳ ಮಾಡುವ ಮುನ್ನ |
ಮುಳುಗದಂತೆ ಕಾಯ್ವ ಶ್ರೀಕೃಷ್ಣವಿಠ್ಠಲಗೆ ಶರಣೆನ್ನಿ ||3||
ಸಂಕ್ಷಿಪ್ತ ಪೃಥುರಾಜ ಚರಿತೆ (ಪದಗದ್ಯ)
172. ಮಥಿಸಲು ವೇನನ ಬಾಹು ಜನಿಸಿದ ಹರಿಅಂಶದ ಪೃಥು |
ಸಾರ್ಥಕದಿ ವರಸಿದಳು ಸಹಜಾತೆ ಅರ್ಚಿ ||ಪ||
ದೇವತೆಗಳೊಡಗೂಡಿ ಋಷಿಗಳೈದರು ಪಟ್ಟಾಭಿಷೇಕ |
ಅವನ ಸ್ತುತಿಸಲು ವಂದಿ-ಮಾಗಧರು ಮುಂದಾದಾಗ ತಡೆದು ||
ಯಾವ ಗುಣಗಳನ್ನೂ ತಿಳಿಯದೆನ್ನ ಪೊಗಳದಿರಿ |
ಸರ್ವೋತ್ತಮನಾದ ಪರಮಾತ್ಮನನ್ನೇ ಸ್ತುತಿಸಲು ಪೇಳಿದ ||1||
ಬರ ಭೀಕರದಿ ದೇಶ ಬಳಲಲು ರಾಜನ ಮೊರೆ ಹೊಕ್ಕರೆಲ್ಲ |
ಶರಣು ಬಂದವರ ಕಾಪಾಡಲು ಧಮರ್ಧಾರಿಯಾದ ||
ಕಾರಣ ತಿಳಿದು ಗೋರೂಪದ ಉರ್ವಿ ಬೆನ್ನಟ್ಟಿದ |
ನಿರಪರಾಧಿ ಸ್ತ್ರೀವಧೆ ಪ್ರಜಾಪಾಲಕಗೆ ಸಲ್ಲದೆಂದಳು ||2||
ಧರಿತ್ರಿಯೇ, ಹಾಕಿದ ಬೀಜನುಂಗಿ ಬೆಳೆಕೊಡದಿರುವುದು ನ್ಯಾಯವೇ ?|| ಎಂದಾಗ ||
ಉಗ್ರರಾಜನ ನೋಡಿ ಮೋದಿನಿ ಅನ್ನ ಪ್ರಾಪ್ರಿಯ ಉಪಾಯ ಪೇಳಿದಳು ||
ಗೋರೂಪಿ ತಾನಾಗಿ ಕರು, ಪಾತ್ರೆ, ಹಿಂಡುವರ ವ್ಯವಸ್ಥೆ ಮಾಡೆಂದಳು ||
ಕರುಣದಿ ಸಕಲರಿಗೆ ಅಭೀಷ್ಟ ಪ್ರದಳಾದಳು ||3||
ಸ್ವಾಯಂಭೂ ಮನುವನ್ನು ಕರುವಾಗಿಸಿ ಸಮಸ್ತ ಧಾನ್ಯಾದಿಗಳನು |
ಸ್ವಯಂ ಪೃಥುರಾಜ ತನ್ನ ಕರವನ್ನೇ ಪಾತ್ರೆಯಾಗಿಸಿ ಕರೆದ ||
ಬೃಹಸ್ಪತಿಯು ವೇದರೂಪಿ ಹಾಲನ್ನು ಕರೆದರು |
ಪ್ರಲ್ಹಾದನನ್ನು ಕರು ಮಾಡಿ ದೈತ್ನರು ಮದಿರೆ ಹಿಂಡಿದರು ||4||
ದೇವತೆಗಳು ಇಂದ್ರನ ಕರುಮಾಡಿ ಅಮೃತ ಹಿಂಡಿದರು |
ಸರ್ವಗಂಧರ್ವರು ವಿಶ್ವಾವಸು ಕರುಮಾಡಿ ಗಾನವಿದ್ಯೆ ಹಿಂಡಿದರು ||
ಪಿತೃಗಳು ಮೃತ್ತಿಕಾ ಪಾತ್ರೆಯಲಿ ಕವ್ಯವನ್ನು ಹಿಂಡಿದರು |
ಸಿದ್ಧರು ಕಪಿಲನ್ನ ಕರುಮಾಡಿ ಅಣಿಮಾಡಿ ಸಿದ್ಧಿ ಪಡೆದರು ||5||
ರುದ್ರನನ್ನು ಕರುಮಾಡಿ ಪಿಶಾಚಿಗಳು ಕಪಾಲದಿ ರಕ್ತಹಿಂಡಿದರು |
ಸರ್ಪಗಳು ತಕ್ಷಕನ ಕರುಮಾಡಿ ವಿಷವನ್ನೇ ಕರೆದರು ||
ಗರುಡನ್ನ ಮುಂದೆ ಮಾಡಿ ಪಕ್ಷಿಗಳು ಕೀಟ-ಪತಂಗ ಹಿಂಡಿದರು |
ಪರ್ವತಗಳು ಹಿಮಾಲಯ ಕರುಮಾಡಿ ನಾನಾಧಾತುಗಳ ಹಿಂಡಿದರು ||6||
ಸರ್ವರೂ ಸಂತೋಷಿಸಲು ಪೃಥ್ವಿಯನ್ನು ಪುತ್ರಿಯೆಂದು ಸ್ವೀಕರಿಸಿದ |
ಸುಪ್ರಜೆಗಳ ಅನುಕೂಲಕ್ಕಾಗಿ ನೆಲಸಮಗೊಳಿಸಿ ಪುರನಿರ್ಮಿಸಿದ ||
ನೂರನೇ ಅಶ್ವಮೇಧ ಯಜ್ಞವನು ಪ್ರಾರಂಭಿಸಿದ |
ಇಂದ್ರನು ಸಹಿಸದೇ ಯಜ್ಞಾಶ್ವವ ಅಪಹರಿಸಿದ ||7||
ಪುತ್ರನಿಗೆ ಇಂದ್ರನ ವಧೆಗೆ ಪೇಳಿ ಯಜ್ಞ ಮುಂದುವರಿಸಿದ |
ಧರ್ಮರಕ್ಷಣಾರ್ಥ ಅವತರಿಸಿದ ನಿನಗಿದು ತರವಲ್ಲವೆಂದು ಬ್ರಹ್ಮ ಪೇಳಲು ||
ಇಂದ್ರನೊಡನೆ ಸಂಧಾನಮಾಡಿ “ಏಕೋನ ಶತಕ್ರತು” ಎನಿಸಿದ |
ವಾರ್ಧಕ್ಯದಿ ವಿಜಿತಾಶ್ವಗೆ ಪಟ್ಟಗಟ್ಟಿ ವನಕೆ ತೆರಳಿದ ||8||
ಗುರೂಪದೇಶದಂತೆ ಚಕ್ರಸ್ಥಿತ ಪಂಚತತ್ವಗಳರಿತು |
ಆರೋಹಿಸಿ ಶರೀರವನ್ನು ತ್ಯಜಿಸಿದ ಶಾಂತತೆಯಲಿ ||
ನಿವೃತ್ತಿಸಿ ವಿಷಯ ಚಿಂತನೆಗಳ ಶ್ರೀಕೃಷ್ಣವಿಠ್ಠಲನ ಪಾದರತಿ ಪಡೆದ |
ಪರಮಾತ್ಮನಲಿ ರತಿ ಕೊಡುವುದೀ ಪೃಥು ಚರಿತೆ (ಓದಿ) ಕೇಳಿದವರಿಗೆ ||
173. ಪಟ್ಟೆ ನಾಮ ಇಟ್ಟ ದಿಟ್ಟ ನಿಂತಿರುವ |
ಬೆಟ್ಟದೊಡೆಯ ನೆಟ್ಟಿಯಾಗಿ ಕಾಲೂರಿ ನಿಂತಿರುವ ||ಪ||
ಸೊಂಟದ ಮೇಲೆ ಎಡೆಗೈ ಇಟ್ಟು |
ಕಂಟಕ ಕಳೆವ, ವರವ ನೀಡುವ ||
ಒಂಟಿಯಾಗಿ ನಿಂತು ಕರೆಯುತಿರುವ |
ಬಂಟರೆಲ್ಲ ಬಂದು ಪಾದಭಜಿಸಿ ||1||
ಸುಂಟರ ಗಾಳಿಯಂದದಿ ದರುಶನ |
ದಿಟ್ಟಿಸಲು ಪೂರ್ಣಕಾಣದಿದ್ದರೂ ||
ಕೆಟ್ಟ ಘಳಿಗೆ ಬರುವುದು ತಡೆದು |
ಚಟ್ಟನೆ ಚಿಂತೆ ಕಳೆವ ಚಿನ್ಮಯ ||2||
ಸಿಟ್ಟಾಗದೆ ಎನ್ನವಗುಣ ಬಿಟ್ಟು |
ಘಟ್ಯಾಗಿ ಪಾದಭಕ್ತಿ ಕೊಡಲಿ ||
ಸೃಷ್ಟಿಗೊಡೆಯ ಶ್ರೇಷ್ಠದೈವ |
ಸೃಷ್ಠಸೃಷ್ಟ ಶ್ರೀಕೃಷ್ಣವಿಠ್ಠಲ ಒಲಿಯಲಿ ||3||
174.. ಹುಟ್ಟಿದ ಮೇಲೆ ಸಾವು ನಿಶ್ವಿತ |
ಅಷ್ಟರಲಿ ಪ್ರಕೃತಿಯ ತಿಳಿದುಕೋ ||
ಉಟ್ಟ ಬಟ್ಟೆ ಕಳೆಚುವ ಮುನ್ನ |
ಕಟ್ಟು ಬುತ್ತಿ ಸಾಕಾಗುವಷ್ಟು ||
ಅಷ್ಟೂ ವೈವಿಧ್ಯತೆಯ ವೈಚಿತ್ರ್ಯವ |
ಬಿಟ್ಟು ಬಿಡದೆ ಧ್ಯಾನಿಸಿ ಅಚಿಂತ್ಯಾದ್ಭುತನ ||
ಸೃಷ್ಟಿದಾತನ ಸಾಮರ್ಥ್ಯವರಿತು |
ಅಷ್ಟವಿಧದಿ ಭಜಿಸಿ ಸಮರ್ಪಿಸು ||
ಕಷ್ಟ ಕಳೆದು ಸದಾ ಸುಖಕೊಡುವ |
ಇಷ್ಟದೈವ ಶ್ರೀಕೃಷ್ಣವಿಠ್ಠಲ ಪೊರೆವ ||
175. ಎಂಬತ್ತ್ನಾಲ್ಕು ಲಕ್ಷಯೋನಿ ಜೀವಿ ಸೃಷ್ಟಿಸಿ ಪೊರೆವ ನಿನಗೆ |
ಒಬ್ಬ ನಾನು ಭಾರವಾದನೆ? ||
ಬಿಂಬ ನೀನು, ಪ್ರತಿಬಿಂಬನಾನು |
ಇಂಬು ನೋಡಿ ನಡೆಸಲಾರೆಯಾ? ||
ಕೊಂಬು ಕಹಳೆ ನಗಾರಿ ವೈಭವ ಬೇಡ |
ಸಂಬ್ರಮದಿ ನಿನ್ನಡಿ ಸೇರುವ ಸೌಭಾಗ್ಯ ನೀಡೆಯಾ? ||
ನಂಬಿದ ದೈವ ಶ್ರೀಕೃಷ್ಣವಿಠ್ಠಲ ಕೈಬಿಡಬೇಡಾ ||
176. ಸರ್ವರಿಗೂ ಸುಖಾನಂತರ ದು:ಖ, ದು:ಖಾನಂತರ ಸುಖವಿದ್ದೇ ಇದೆ |
ಇರುಳು-ಹಗಲಿನಂತೆ ಬರಲೇಬೇಕು, ಯಾರಿಗೂ ಎಂದಿಗು ತಪ್ಪದು ||
ಸವಿಯಾದ ಸುಖದಿ ಕಳೆದ ಕಾಲ ತಿಳಿಯದು, ದು:ಖ ಕ್ಷಣವೊಂದು ಯುಗವಾಗಿ ಕಾಯ್ವದು | ಭವದಿ ಜನರು ಪರರ ದು:ಖದಿ ಸಂತೋಷಿಸಿ, ಅವರ ಉತ್ಕರ್ಷಸಿ ದ್ವೇಷ ಪಡುವರು ||
ಶವದಂತೆ ಕಾಣುವರು ಬಡವರ, ಹಣವಂತರ ಕಂಡು ಮಣೆ ಹಾಕುವರು |
ಭುವದಿ ಹಸಿದವಗೆ ಅನ್ನವಿಕ್ಕದೇ, ಹೊಟ್ಟೆತುಂಬಿದವಗಿಕ್ಕಿ ಆದರಿಸುವರು ||
ಯಾವುದೋ ಕ್ಷುದ್ರ ದೇವತೆಗಳ ಭಜಿಸಿ, ಇಲ್ಲದ ಬವಣೆ ಪಡುವರು |
ಚೆಲ್ವ ಶ್ರೀಕೃಷ್ಣವಿಠ್ಠಲನ ಒಲಿಸಲು, ದಾರಿ ತಿಳಿಯದೇ ಮೂರ್ಖರಾಗುವರು ||
177. ಪ್ರಭು ನಿನ್ನಲಿ ಬೇಡದೇ ಬೇಡುವಂತಿರಲಿ |
ಪ್ರಭು ಎನಗೆ (ಸೊಕ್ಕು) ಮದ ಕೊಡದೆ, (ಸಂತೋಷ) ಮದ ಕೊಡು ||
ಪ್ರಭು ಎನಗೆ (ಭಾಹ್ಯವಿಷಯಗಳಲಿ) ರತಿಕೊಡದೆ, (ಪದರತಿ) ರತಿಕೊಡು |
ಪ್ರಭು ಎನಗೆ (ವಿಪರೀತ) ಜ್ಞಾನಕೊಡದೆ, (ಸ್ಥಿರ) ಜ್ಞಾನಕೊಡು ||
ಪ್ರಭು ಎನಗೆ (ವೇದಾಭ್ಯಾಸದಿ) ವೈರಾಗ್ಯ ಕೊಡದೆ, (ಲೌಕಕದಿ) ವೈರಾಗ್ಯ ಕೊಡು |
ಪ್ರಭು ಎನ್ನ ಶ್ರಿಕೃಷ್ಣವಿಠ್ಠಲ ನಿನ್ನವಳೆಂದೆಣಿಸು ||
178. ಎಲ್ಲ ಬಲ್ಲವ, ಎಲ್ಲಕಡೆ ತುಂಬಿರುವ |
ಎಲ್ಲಗುಣಗಳ ಕಡಲಾಗಿರುವ ||
ಕಾಲ, ದೇಶ-ಗುಣತ: ಪರಿಪೂರ್ಣ |
ಎಲ್ಲ ಸಂಜ್ಞಾನ, ವಿಜ್ಞಾನ, ಪ್ರಜ್ಞಾನಕ ||
ಎಲ್ಲ ಇಂದ್ರಿಯಗಳ ಪ್ರೇರಕ |
ಬಲ್ಲವರಿಗೆ ಹೃದಯಸ್ಥನಾಗಿರುವ ||
ಎಲ್ಲ ಅವನ ವಶ, ಅವನಾರವಶನಲ್ಲ |
ಎಲ್ಲ ಕಾಲದ ಆತ್ಮೀಯ ಬಂಧು ||
ಎಲ್ಲ ಜ್ಞಾತ ಆನಂದರೂಪಿ ಶ್ರೀಕೃಷ್ಣವಿಠ್ಠಲ ||
179. ತೊರವಿಯ ಕಂಡಿರ್ಯಾ ತ್ವರಿತ್ವಾಲಯ ಕಂಡಿರ್ಯಾ ||ಪ||
ತ್ವರಿತದಿ ಒಲಿವ ನರಹರಿಯ ಕಂಡಿರ್ಯಾ ||ಅಪ||
ಎರಡು ಕರದಿ ಶಂಖ-ಚಕ್ರ ಧರಿಸಿ |
ಎರಡು ಕರದಿ ಖಡ್ಗ-ಗದಾಪಾಣಿ ||
ಎರಡು ಕರದಿಂ ಉದರ ಸೀಳುತ |
ಎರಡು ಕರದಿಂ ಕರಳುಮಾಲೆ ಧರಿಸುವ ನೃಸಿಂಹನ ||1||
ದಶಾವತಾರದ ಪ್ರಭಾವಳಿ ಸುತ್ತಲೂ |
ಅಷ್ಟಬಾಹು ನರಸಿಂಹ ಕುಳಿತ ಭಂಗಿ ||
ದುಷ್ಟ ಹಿರಣ್ಯಕನ ತೊಡೆಯಲಿ ಮಲಗಿಸಿ |
ವಿಶಿಷ್ಟ ರೀತಿಯಲಿ ದೃಷ್ಟಿಸುತಿರುವ ನೃಸಿಂಹನ ||2||
ಬಲಕೆ-ಎಡಕೆ ಲಕ್ಷ್ಮೀ-ಪ್ರಲ್ಹಾದ ನಿಂತಿರುವರು |
ಕೆಳಗೆ ಗರುಡ ಕುಳಿತಿರುವ ಸ್ವಾಮಿ ಭಕ್ತಿಯಲಿ ||
ಬಲಭೀಮ ಇರುವ ಗದೆಯಲಿ |
ಸಾಲಿಗ್ರಾಮ ಏಕಶಿಲೆಯ ಸ್ಪಷ್ಟಮುರುತಿ ನೃಸಿಂಹನ ||3||
ಭಕುತರ ಕೈಬೀಸಿ ಕರೆಯುವ ದೇಗುಲದಿ |
ಭಕುತ ದುರ್ವಾಸ ಸ್ಥಾಪಿತ ಲಿಂಗ ದರ್ಶನಾನಂತರ ||
ಸಂಕಟ ಕಳೆದು ಸದಾ ಸಂತೈಪ ಶಾಂತದೈವ |
ಮುಕ್ತಿದಾಯಕ ಶ್ರೀಕೃಷ್ಣವಿಠ್ಠಲಾಭಿನ್ನ ನೃಸಿಂಹನ ||4||
180. ಒಂದೇ ಜೀವನ (ಸಾಧನಕೆ), ಒಂದೇ ಗುರಿ (ಮೋಕ್ಷ) |
ಒಂದನ್ನೇ ನಂಬಿ (ಏಕತತ್ವ), ಒಂದರಂತೆ ಇನ್ನೊಂದಿಲ್ಲ (ಪರಮತ) ||
ಒಂದೇ ಮತ (ಮಧ್ವ), ಒಂದೇ ವಿದ್ಯೆ (ವೇದ) |
ಒಂದೇ ಗುರು (ಪ್ರಾಣ), ಒಂದೇ ದೇವರು (ನಾರಾಯಣ) ||
ಒಂದೇ ಅಂಕಿತ, ಒಂದೇ ನಾಮ |
ಒಂದೇ ತಿಳಿದರೆ, ಒಂದೇ ತಿಳಿದಂತಲ್ಲ ||
ಒಂದರೊಳಗೊಂದಾಗುವ ತನಕ ಒಂದಾಗಿ ಇರು |
ವಂದೇ ವಂದ್ಯಂ ಶ್ರೀಕೃಷ್ಣವಿಠ್ಠಲಂ ಸದಾ ||
181. ಮಾತು ಕೇಳಿಸೊ ಇಲ್ಲ ರೂಪ ತೋರಿಸೋ |
ಕಾತುರದಿ ಹಾತೊರೆಯುತಿರುವೆ ಪ್ರಭು ||ಪ||
ಬಾಲ್ಯದಿ ನಾರದರಿಗೆ ಆಕಾಶದಿಂದ ಕೇಳಿಸಿದೆ |
ಬಾಲಕ ಧ್ರುವನೆದುರು ನಿಂತು ಹೇಳಿದೆ ||
ಬಾಲಕ ಪ್ರಲ್ಹಾದಗೊಲಿದಿತ್ತೆ ಸುವಚನ |
ಒಲಿದು ಕಕ್ಷಿವಂತಗಿತ್ತೆ ಸುವಾಕ್ಯವ ||1|| (ಉಶಿನರಮಗ)
ಕರಿರಾಜನ ಕಂಟಕ ಕಳೆದೆ ದರುಶನದಿ |
ಕರಾಳ ಶಾಪ ಕಳೆದು ಅಹಲ್ಯನುದ್ಧರಿಸಿದೆ ||
ಕರುವಧುಗೆ ಕಾಣಿಸದೇ ಅಕ್ಷಯ ವಸ್ತ್ರವಿತ್ತೆ |
ಶ್ರೀಕೃಷ್ಣವಿಠ್ಠಲ ನಿಜ ದರುಶನದಿ ಸ್ವರಾರ್ಣವ ನೀಡೋ ||
182. ಕರ್ಮ ಸವೆಯಲು ಜನುಮವೋ ಜನುವೆತ್ತಿದ್ದಕ್ಕೆ ಕರ್ಮವೋ ||ಪ||
ಕರ್ಮಬಹು ಜಟಿಲ ಅರ್ಥವಾಗದು ಸರಳದಿ ||ಅ.ಪ||
ಕರ್ಮ ಮಾಡಲೇಬೇಕು ಜೀವಿಗಳೆಲ್ಲ |
ಕರ್ಮ ಮಾಡದೇ ಇರಲು ಆಗದು ಎಂದೂ ||
ಕರ್ಮವಿಲ್ಲದ ಜೀವನವಿಲ್ಲ, ಕರ್ಮವೇ ಮುಖ್ಯ |
ಕರ್ಮದ ಲಕ್ಷಣ ತಿಳಿಯಿರಿ ಎಲ್ಲ ||1||
ಕರ್ಮ ಮಾಡಿದ್ದೆಂದೂ ನಶಿಸದು |
ಕರ್ಮಫಲ ಎಂದೂ ಹೆಚ್ಚು-ಕಡಿಮೆಯಾಗದು ||
ಕರ್ಮ ಫಲ ತಾನೇ ಭೋಗಿಸಬೇಕು |
ಕರ್ಮದ ಫಲ ಈಗಲ್ಲದಿದ್ದರೆ ಮುಂದಾದರೂ ಉಣ್ಣಲೇಬೇಕು ||2||
ಕರ್ಮದ ಫಲ ಬೇರೆಯವರಿಗೆ ಕೊಡಲಾಗದು |
ಕರ್ಮದ ಸತ್ಪಲವು ಕುಕರ್ಮಫಲ ನಿಷ್ಕ್ರಿಯಗೊಳಿಸದು ||
ಕರ್ಮದ ಫಲ ವಿವಿಧ ರೂಪದಿ ಬರುವುದು |
ಕರ್ಮದ ಲೆಕ್ಕದೊಡೆಯ ಶ್ರೀಕೃಷ್ಣವಿಠ್ಠಲನಲ್ಲದೆ ಬೇರಾರಿಲ್ಲ ||
183. ಆಡುವ ಮಾತೆಲ್ಲ ಮಹದೇವನ ಗುಣಗಾನ ||ಪ||
ಆಡಿದ ಮಾತು, ಒಡೆದ ಮುತ್ತು ಹೋದರೆ ಹೋಯಿತು |
ಆಡಿದ ಮಾತು ಎಂದೂ ಅಳಿಸಲಾಗದು ||
ಹೊಡೆದು ಹಾಕಲಾಗದು, ಅಳಿಯದೆಂದೂ |
ನುಡಿಯಬಾರದು ಮರ್ಮಭೇದಕ ಮಾತು ||1||
ಮಾಡಿ ಮನದಿ ವಿಚಾರ ನಂತರ ನುಡಿಯಬೇಕು |
ದುಡುಕುತನದ ಮಾತು ಅತೀ ಗಂಡಾಂತರ ||
ಆಡಿದ ಮಾತಿಂದಲೇ ಬರುವುದು ಪಾಪ-ಪುಣ್ಯ |
ಆಡಿದ್ದೆಲ್ಲಾ ಕೂಡಿ ಶಾಶ್ವತವಾಗಿರುವುದು ಆಕಾಶದಿ ||2||
ಮಾಡಬಾರದು ವೃಥಾಹರಟೆ ನಿಂದಕ ಮಾತು |
ಕೇಡುಮಾತುಗಳ ಸ್ತುತಿಪರ ಎನ್ನಬೇಕು ||
ಮಾಡಬಾರದು ವರ್ಣಗಳ ದುರುಪಯೊಗ |
ಆಡಿದ್ದೆಲ್ಲಾ ವರ್ಣಾಭಿಮಾನಿ ಶ್ರೀಕೃಷ್ಣವಿಠ್ಠಲನ ಸೇವೆ ಎನ್ನಿ ||3||
184. ನಾನು ನನ್ನದಲ್ಲ, ನನ್ನದೆಂಬುವುದು ಏನಿಲ್ಲ |
ನನ್ನವರೆಂಬುವರು ಎಂದೂ ನನ್ನವರಲ್ಲ ||1||
ನಾನು ದುಡಿದು ಮಾಡಿದ್ದೆಲ್ಲಾ ಮಂದಿಗಾಗಿ |
ಚೆನ್ನಾದ ಮನೆ, ಮಡದಿ, ಮಕ್ಕಳು ನನ್ನವಲ್ಲ ||2||
ಮನೆಯ ಒಡೆತನ ನನ್ನದೆಂಬುವಳು ಮಡದಿ |
ನನ್ನ ಮನೆ ಸುಂದರ ಎನ್ನುವವು ಮಕ್ಕಳು ||3||
ಮನೆಯಲ್ಲಿ ವಾಸವಾಗಿಹ ಜಿರಳೆ, ಇರುವೆ |
ಮನೆ ಕೆಲಸದಾಕೆ ಎಲ್ಲ ನಮ್ಮನೆ ಎನ್ನುವುವು ||4||
ನಾನು ಹಾಕಿದ ಬಟ್ಟೆ ನಾಶವಾಗುವ ದೇಹಕ್ಕೆ |
ನಾನು ಉಣ್ಣುವ ಅನ್ನ ಒಳಗಿರುವ ಕ್ರಿಮಿಗಳಿಗೆ ||5||
ಅನುದಿನದ ವ್ಯಾಪಾರವೆಲ್ಲ ಇಂದ್ರಿಯ ತೃಪ್ತಿಗೆ |
ಮನದಿ ಬೇಡದೆ ಪರವಿಷಯ ನೆಲೆವೂರಿಸಿ ||6||
ಕನಕದ ಸಂಕೋಲೆ ಆಭರಣವೆಂದು ಧರಿಸಿದೆ |
ಅನವರತ ಇರುವ ಜೊತೆಗಾರನ ಲಕ್ಷಿಸಲಿಲ್ಲ ||7||
ನನಗೆ ನಿಜದಿ ಬೇಕಾಗಿದ್ದು ಎಂದೂ ಮಾಡಲಿಲ್ಲ |
ನನ್ನದೆಂಬುವ ಸುಹೃತ ಶ್ರೀಕೃಷ್ಣವಿಠ್ಠಲನ ಅರಿಯಲಿಲ್ಲ ||8||
185. ಕೇಳಿ, ಪ್ರಕೃತಿ ಕೇಳಿಯ ಕೇಳಿ |
ಕೇಳಿ ತಿಳಿಯಿರಿ ಅವುಗಳರ್ಥವ ||
ಪಕ್ಷಿಗಳ ಕಲರವ ಸಾರುತಿದೆ |
ವೃಕ್ಷಗಳ ಮರ್ಮರ ಸದ್ದಲ್ಲಿದೆ ||
ಗಾಳಿಯು ಸುಂಯ್ ಗುಟ್ಟುವಿನಲ್ಲಿದೆ |
ನಳಿನಳಿಸುವ ಪುಷ್ಪದ ಸುಗಂಧದಲ್ಲಿದೆ ||
ಜುಳುಜುಳು ನದಿಯ ಶಬ್ದದಲ್ಲಿದೆ |
ಹಲ್ಲಿಯ ಲೊಚು ಗುಟ್ಟುವಿಕೆಯಲ್ಲಿದೆ ||
ಭೋರ್ಗೆರೆವ ಸಾಗರದ ಘೋಷದಲ್ಲಿದೆ |
ಅಗಣಿತ ಗುಣಧಾಮ ಶ್ರೀಕೃಷ್ಣವಿಠ್ಠಲನ ಗುಣಗಾನ ||
186. ಪ್ರಕೃತಿ ಸಾರುತಿದೆ ಓಂಕಾರನಾದ | ಸೂಕ್ಷ್ಮತೆಯಲಿ ತಿಳಿದು ಆರಾಧಿಸಿ |
ಶ್ರೀಕೃಷ್ಣವಿಠ್ಠಲನ ಭಕ್ತಿಲಿ ತಿಳಿದು | ವೈಕುಂಠದಲಿ ಶಾಶ್ವತ ನೆಲೆಗಾಣಿರಿ ||
187. ಸವಿ ಸವಿಗಾನ ಸವಿಯಾದ ಗಾನ |
ಆವಾಗ ಈವಾಗ ಯಾವಾಗಲು ಹೇಳುವಗಾನ ||ಪ||
ಸುಲಭದಿ ಮೆಲಕು ಹಾಕುವ ಗಾನ |
ಕುಳಿತಲ್ಲಿ, ನಿಂತಲ್ಲಿ, ಮಲಗಿದಲ್ಲಿ ಹೇಳುವ ಗಾನ ||
ಎಲ್ಲರೂ ಎಲ್ಲ ಸ್ಥಳದಿ ಬಿಡದೆ ಹೇಳುವ ಗಾನ |
ಬಲ್ಲವರೆಲ್ಲ ಸದಾ ಹೇಳುವ ಗಾನ ||1||
ನಲುಮೆಯಲಿ ಹೇಳುವ ಗಾನ |
ಒಲುಮೆಯಿಂದ ಉಪದೇಶಿಸುವ ಗಾನ ||
ಹೇಳುತ್ತಾ ಹೇಳುತ್ತಾ ಬರುವುದು ಸುಜ್ಞಾನ |
ಚೆಲುವ ಶ್ರೀಕೃಷ್ಣವಿಠ್ಠಲನ ಅಮೃತ ಗಾನ ||2||
188. ಅಕ್ಷಮಾಲೆಯ ಎಲ್ಲ ಅಕ್ಷರಗಳಿಗೂ ಪರಮಾರ್ಥವಿದೆ |
ಸಾಕ್ಷಾತ್ ಪರಮಾತ್ಮನ ಗುಣ ತಿಳಿಸಿ ಹೇಳುವುದು ||
ಸಾಕ್ಷರಿಸಿಕೊಂಡರೆ ವರ್ಣಗಳ ಉತ್ಕೃಷ್ಟ ಜೋಡಣೆ |
ಅಕ್ಷರನಾಮಕ ಪರಮಾತ್ಮನನ್ನು ಆರಾಧಿಸಿದಂತೆ ||
ಸ್ವಕ್ಷಯವಾಗುವುದು ದು:ಖ ಜೀವನದಿ |
ಅಕ್ಷಯ ಫಲದಾತಾ ಶ್ರೀಕೃಷ್ಣವಿಠ್ಠಲ ಒಲಿದು ಮೆಚ್ಚುವ ||
189. ನಾಭಾಗ ಚರಿತೆ
ನಭಗ ಪುತ್ರ ನಾಭಾಗ ವೈವಸ್ವತನ ಪೌತ್ರ |
ಸಭ್ಯನು ವಿದ್ಯಾರ್ಜನೆಗೆ ಗುರುಕುಲಕೆ ಪೋದ ||
ವಿಭಾಗಿಸಿ ಆಸ್ತಿ ಭಾತೃಗಳು ಹಂಚಿಕೊಂಡರೆಲ್ಲ |
ಅಭಾಗನಿಗೆ ಪಿತೃಧನ ಭಾಗ್ಯವಿಲ್ಲದಾಯ್ತು ||
ಸಂಭಾವಿತ ಬಂದು ತನ್ನ ಭಾಗ ಕೇಳಿದ |
ವೈಭವದಿ ಯಜ್ಞನಿರುತ ಅಂಗೀರಸರು ಷಷ್ಠಿದಿನ ||
ಶೋಭೆ ತರುವ ವೈಶ್ಯದೈವತ್ವ ಕರ್ಮದ ಸೂಕ್ತ ಮರೆವರು |
ಪ್ರಭಾವಿ, ನೀನದ ನೆನಪಿಸು, ಯಜ್ಞಶೇಷ ಪೆಡೆಯುವೆ ಎಂದನು ||
ಸಂಭ್ರಮದಿ ತೆರಳಿ ತರುವಷ್ಟರಲಿ ವಿಲಕ್ಷಣಪುರುಷ |
ಸುಭಗನೊಬ್ಬ ಉತ್ತರ ದಿಕ್ಕಿನಿಂದ ಬಂದು ತನ್ನದೆಂದನು ||
ದಿಗ್ಭ್ರಮೆಗೊಂಡ ನಾಭಾಗ ತಂದೆಗೆ ಬಂದು ಕೇಳಿದ |
ಸುಭಾಗ ಯಜ್ಞಶೇಷ ಎಂದೂ ರುದ್ರನದೆಂದು ಪೇಳಲು ||
ಸುಭದ್ರದಿ ಆದ ತಂದು ರುದ್ರನಿಗೊಪ್ಪಿಸಿದನು |
ನಭಗ-ನಾಭಾಗರ ಸತ್ಯತೆಗೆ ಮೆಚ್ಚಿ ಸಕಲವನ್ನು ಕೊಟ್ಟು ||
ನಾಭಾಗನಿಗೆ ಬ್ರಹ್ಮಜ್ಞಾನ-ಮಂತ್ರದರ್ಶಿತ್ವ ದಯಪಾಲಿಸಿದ |
ನಾಭಾಗ ಚರಿತೆ ಪ್ರಾತ: ಸಾಯಂಕಾಲ ಸ್ಮರಿಸಿದವರು ||
ಈ ಭವದಿ ತತ್ವಜ್ಞನಾಗಿ ದಿವ್ಯಗತಿ ಪೊಂದಲು |
ಶುಭಸಾರ ಶ್ರೀಕೃಷ್ಣವಿಠ್ಠಲನೆಡೆಗೆ ಪೋಗುವರು ||
190. ನೇರ ಹರಿಯ ದರುಶನ-ಅನುಗ್ರಹವಾಗದು ||ಪ||
ತಾರತಮ್ಯದಿ ಭಜಿಸಿ ಪೂಜಿಸೆ ಒಲಿವಾ |
ಕ್ಷುದ್ರ ದೇವತಾ ಪೂಜೆ ವರ್ಜಿಸಿ ||
ಸರ್ವ ಸುರ ಪರಿವಾರ ಜ್ಞಾನದಿ |
ತಂತ್ರೋಕ್ತಸಾರ ಪದ್ಧತಿ ಅನುಸರಿಸಿ ||1||
ಗುರುಮುಖೇನ ಮಂತ್ರ ಸ್ವೀಕರಿಸಿ |
ಸ್ಥಿರವಾಗಿ ಶುಚಿಯಲಿ ಜಪ, ಧ್ಯಾನಿಸಿ ||
ಮರುತಾಂತರ್ಗತ ಶ್ರೀಕೃಷ್ಣವಿಠ್ಠಲನ ಪೂಜಿಸೆ |
ಪ್ರಾರಬ್ಧವಶಾತ್ ಅನುಗ್ರಹಿಸಿ ದರ್ಶನವೀವ ||2||
191. ಒಂದೇ ಮನದಿ ಕೊಂಡಾಡುತಿರಿ |
ಎಂದೂ ಬಿಡದೆ ವಿವಿಧ ನಾಮ ಸ್ಮರಿಸಿರಿ ||ಪ||
ನೇಮದಿ ಗೊಪಿಚಂದನ ಮುದ್ರೆ ಹಚ್ಚುವಾಗ |
ಸುಮ್ಮನ ಕುಳಿತಾಗ, ಕೆಲಸ ಮಾಡುವಾಗ ||
ಮೈಮನ, ನೋವು ಪರಿಹಾರಕ |
ರಾಮ, ವಾಸುದೇವ, ನಾರಾಯಣ ಎನ್ನಿ ||1||
ದಾರಿ ತಪ್ಪಿದಾಗ, ಕಷ್ಟದಲ್ಲಿದ್ದಾಗ |
ಅರಿತುಅರಿಯದೇ ಅಪರಾಧವಾದಾಗ ||
ಮಂತ್ರಾಕ್ಷರ ಲೋಪದೋಷವಾದಾಗ |
ಮೂರುಬಾರಿ ಅಚ್ಯುತಾನಂತ ಗೋವಿಂದ ಎನ್ನಿ ||2||
ಬರಬಾರದ ಆದಿ-ವ್ಯಾಧಿಗಳು ಬಂದಾಗ |
ಬೇರೆಯವರಿಂದ ಮನಕೆ ನೋವಾದಾಗ ||
ನರಸಿಂಹ, ಹರಿ ಎಂದರೆ ಹರಿವುದು ಸಕಲ ಬಂಧನ |
ಸುರವರ ಶ್ರೀಕೃಷ್ಣವಿಠ್ಠಲ ಪದತಲದಲ್ಲಿಡುವ ||3||
192. ರಾಮ, ರಾಮ ಎನೆ ಸಂಸಾರ ಆರಾಮ |
ರಾಮ ಸರ್ವತ್ರ ಇರುವನೆಂದು ತಿಳಿಯೆ ಆರಾಮ ||ಪ||
ಅವನೆಲ್ಲಿರುವ ಎಂದು ಸಂಶಯಬೇಡ |
ಅವನಲ್ಲಿ ರಾಮ ಇವನಲ್ಲಿ ರಾಮ ||
ಆವಾವ ಜೀವಿಯಲಿ ಆವಾವ ರೀತಿಯಲ್ಲಿರುವ |
ಸರ್ವಾಂತರ್ಯಾಮಿಯಾಗಿರುವ ರಾಮ ||1||
ಶ್ರೀ ಎನೆ ಸಕಲ ಶುಭಕ್ಕೂ ಶ್ರೀಕಾರ |
ರಾ ಎನೆ ರಾರಾಜಿಸುವ ಇಹಪರದಿ ||
ಮ ಎನೆ ಮಾರುತಿ ಕಾಂತಕಾಯ್ವ ಸದಾ |
ಶ್ರೀರಾಮ ಜಪಿಸಲು ಆರಾಮವೇ ಆರಾಮ ||2||
ಹೇಳಲು ಸುಲಭ ತಿಳಿಯಲು ಸುಲಭ |
ಗಳಿಸಲು ಪುಣ್ಯ ಸುಲಭದ ನಾಮ ||
ಕಳೆಯಲು ಪಾಪ ಒಳ್ಳೆಯ ನಾಮ |
ಕೆಳೆಯ ಶ್ರೀರಾಮನೇ ಶ್ರೀಕೃಷ್ಣವಿಠ್ಠಲನೆಂದು ತಿಳಿ ||3||
193. ನಾರಾಯಣ ನಾಮ ನುಡಿಸುವುವು |
ನಾರಾಯಣನತ್ತ ನಡೆಸುವುವು ||
ನಾರಾಯಣನ ಪೂಜೆ ಮಾಡಿಸುವುವು |
ನಾರಾಯಣ ಮೂರ್ತಿ ನೋಡಿಸುವುವು ||
ನಾರಾಯಣ ಕೀರ್ತಿ ಪಾಡಿಸುವುವು |
ನರರಹಂಕಾರ ಕೆಡಿಸುವುವು ||
ನರದೇಹ ಮೋಹ ಬಿಡುಸುವುವು |
ನರರನು ಸತ್ಕರ್ಮದಿ ಸಲಹುವುವು ||
ನರೋದ್ಧಾರಕ ಶ್ರೀಕೃಷ್ಣವಿಠ್ಠಲನ ದಯೆದಿ ||
194. ಜರೆಯದಿರು ಎಂದೂ ಜರಾವಸ್ಥೆಯ ||ಪ||
ಜರೆಯು ಕಾಲನ ದೂತಿಯಾಗಿ ಬರುವಳು ||ಅ.ಪ||
ವಿನಯದಿಂದ ಕೇಳಿಕೊಂಡರು ಬರದಿರದು |
“ವಿನಾ ದೈನ್ಯೇನ ಜೀವನಂ, ಅನಾಯಾಸೇನ ಮರಣಂ” ||
ಪುಣ್ಯವಂತರಿಗೆ ಮಾತ್ರ ಸಿಗುವುದೀ ಭಾಗ್ಯ |
ಜ್ಞಾನಿಗಳು ಕರ್ತವ್ಯ ಮುಗಿಸಿ ಹೋಗಲಣಿಯಾಗುವರು ||1||
ಕುರೂಪಿಯಾಗಿ ಶರೀರ ಒಣಗುವುದು |
ತಿರುಗುವುದು ಕಠಿಣವಾಗಲು ಕೊಲೇ ಸಹಾಯ ||
ನೇತ್ರ ದೃಷ್ಟಿ, ಶ್ರವಣ ಮಂದವಾಗುವುದು |
ಸುರಿಯುವುದು ಜೊಲ್ಲು, ಉದುರುವುದು ಹಲ್ಲು ||2||
ಕೊಡುಗೈ ದಾನಿ ಇದ್ದರೂ ಕೊಡುವತನಕ ಪ್ರೀತಿ |
ಒಡನೆ ಸಾಯುವ ದಾರಿ ಕಾಯುವರು ||
ಬಡ ಬಡನೆ ಕೋಪಿಸಿ ಎದುರೇ ಬೈಯ್ವರು |
ಕೊಡದೇ ಏನನ್ನೂ ತಿರಸ್ಕರಿಸುವರು ||3||
ಮಾತು ಆಡಿಸಲು ಸಮಯವೇ ಇರದು |
ಪ್ರೀತಿ, ಸಹನೆಗೂ ಬರ ಇರುವುದು ||
ಅತೀ ಅಸಹ್ಯದಿ ಸನಿಹಬಾರರು |
ಪ್ರೇತಕಳೆ ನೋಡಿ ಹೆದರುವರು ||4||
ಸರ್ವರು ಶತ್ರುವಿನಂತೆ ನೋಡುವರು |
ಮರಣಕ್ಕಿಂತ ವೃದ್ಧಾಪ್ಯ ಅಸಹನೀಯ ||
ಪರರ ಆಶ್ರಯಿಸದೇ ಪರಮಾತ್ಮನ ಭಜಿಸಿ |
ಪರಾತ್ ಪರ ಶ್ರೀಕೃಷ್ಣವಿಠ್ಠಲನಾಶ್ರಯಿಸೇ ಪಾರುಗೈವ ||5||
ಶ್ರೀವಾದಿರಾಜವಿರಚಿತ ದಶಾವತಾರ ಸ್ತುತಿ |
ಆಧಾರಿತ ಪದ ಗದ್ಯಸಾರ
ಮತ್ಸ್ಯ
195. ಸಾಗರದ ಜಲಧಿಯಲಿ ವಿಹರಿಸುವ |
ಯುಗಾಂತದಲಿ ಸಕಲ ಜೀವಿ ಸಮೂಹ ||
ಭಂಗ ಬರದಂತೆ ಉದರದಲಿ ಪೊರೆವ |
ಬಂಗಾರದ ಮತ್ಸ್ಯದ ಕೋಡಿಗೆ ಘಟ್ಯಾಗಿ ||
ಹಗ್ಗದಿಂದ ಬಿಗಿದ ದೋಣಿ ಹೊತ್ತವನೆ ನಿನ್ನ ಪಾದಪದ್ಮತೋರೋ ||