ಶ್ರೀ ಕೃಷ್ಣವಿಠ್ಠಲಪದಗುಚ್ಛ 3.3
1 ಚಕ್ರ- ಶಂಖಗಳ ಧರಿಸಿ ಸಾಧಕ |
ಹಯಗ್ರೀವ
ತುಂಡಾದ ಅನೇಕ ನೊರೆಯಿಂದ ಭಯಾನಕದಿ |
ಕಂಡ ಅಪ್ರಮೇಯ ಮಹಾ ಕನಕದಂತ ||
ಅಂಡಜನಾಭ ಗಜ ಗಂಡಸ್ಥಲ ಖಂಡಿಸುವಂತೆ |
ಚೆಂಡಾಡುವ ದುಷ್ಟರ, ಕಂಬುಕಂಠದ ಹಯಗ್ರೀವನೇ ||
ಕೊಡು ನಿನ್ನಲಿ ಅಖಂಡ ನಿರ್ಮಲ ಭಕುತಿ ||
ಕೂರ್ಮ
ಬೆನ್ನಮೇಲೆ ಮಂದರಗಿರಿ ಪೊತ್ತವನೆ |
ಚೆನ್ನಾದ ಧರ್ಮವನ್ನೇ ಅವಲಂಬಿಸಿದ ||
ಅನೀಶ ಸುರಿಗೆ ಸದಾ ಸುಖ ಬಯಸುವ |
ದಾನವರ ಮರ್ಮಭೇದಕ ಕೂರ್ಮನೇ ||
ಘೃಣೀ ಕಾಂತಿಯುಕ್ತ, ವಿಕಾರರಹಿತ ಜಗತ್ಕರ್ತೃ ಸಂಸಾರದಿಂದೆನ್ನ ತಾರಿಸು ||
ಧನ್ವಂತರಿ
ಸೂರ್ಯಕಿರಣದಿಂದ ವನೌಷಧಿ ಬೆಳೆಸುವ |
ಆಯುರ್ವೇದ ಅಧಿಪತಿಯಾದ ಧನ್ವಂತರಿಯೇ ||
ಜಯಿಸಿ ದಾನವರನ್ನು ವಿವಿಧ ಅವತಾರದಿ |
ಮಾಯೆಯಲಿ ಕಾಮಹರನ ಭ್ರಮಿಸಿದ ರೂಪ ತಳೆದು ||
ಸಂಯಮಕ ಸುರರಿಗೆ ಅಮೃತವಿತ್ತವ ಎನಗೆ ಸುಪಥ ತೋರೋ ||
ಮೋಹಿನಿ
ಕ್ಷೀರಸಾಗರ ಮಥನದಿ ಅಸುರರು ಅಮೃತಾಪಹರಿಸಲು |
ಸುರೇಶ್ವರ ತಳೆದ ಲಾವಣ್ಯಮಯ ಸೌಂದರ್ಯರೂಪ ||
ಸುರಳಿ ಗುಂಗುರ ಕೂದಲು ಹಾರಿಸುತ ಶ್ವೇತವಸನೆ |
ಸೀರೆಯುಟ್ಟು ಕುಚನರ್ತಿಸಿ ಬಳಕುತ್ತಾ ಅಸುರರ ವೀಕ್ಷಿಸೆ ||
ಹರಿಯ ಸ್ತ್ರೀರೂಪ ಮೋಹಿನಿಗೆ ಶರಣಾದರೆಲ್ಲ, ಹಾಗೆ ಎನ್ನನ್ನೂ ಶರಣಾಗಿಸು ||
ಷಡಂಗಯುಕ್ತ ವೇದಾಭಿಮಾನಿ ಸರಸ್ವತೀ, ಉಮೆ |
ಸಡಗರದ ರೂಪ ನೋಡಿ ಬೆರಗಾದರು ||
ಕಡು ಕೆಂಪಾದ (ಹವಶದಂತಹ) ಪಾದ ಊರಿ ಬಳಕುವ ಮೋಹಿನಿಯ |
ಕಂಡು ಬ್ರಹ್ಮ, ರುದ್ರಾದಿಗಳು ಅಸಮರ್ಥರಾದ ತಮ್ಮನ್ನು ಮಾನ್ಯಸೆಂದು ||
ಬೇಡಿಕೊಡರೆಲ್ಲ ಜ್ಞಾನಾನಂದ ಸ್ವರೂಪನ ಹೇ| ನನ್ನನ್ನು ಮನ್ನಿಸಲಿ ||
ವರಾಹ
ಜಲಧರ ಕಾರ್ಮೋಡದಂತೆ ನೀಲ ಮೇಘಶಾಮನು |
ಜಲಸಾಗರ, ನದಿ, ಪರ್ವತ ಸಕಲ ಪೊತ್ತವ ||
ಲೋಲೆಯಿಂದಲಿ ಊರ್ವಿ ಹರಣಗೈದ ಹಿರಣ್ಯಾಕ್ಷನ ದಹಿಸಿ |
ಜಲ ಕ್ರೀಡಿಸಿದ ನೈದಿಲೆ ವರ್ಣದ ಭೂವರಾಹನು ||
ಕಲಂಕ ರಹಿತ ಯೋಗಿವರ್ಯರಿಂದ ಸದಾವಂದಿತ, ಎನ್ನ ನಮನ ಸ್ವೀಕರಿಸು ||
ನರಸಿಂಹ
ವಿಜೃಂಭಿಸಿ ಕಂಬದಿಂದ ಹೊರಟು ಭಕ್ತ ಪ್ರಲ್ಹಾದಗೆ ವರವಿತ್ತ |
ವಜ್ರದಂತಹ ತೀಕ್ಷ ನಖದಿಂದ ಹಿರಣ್ಯಕನ ಉದರ ಬಗೆದ ||
ಅಜನಿ ರಮಾ, ಬ್ರಹ್ಮ, ವಾಯು ಗರುಡ, ಶೇಷರಲ್ಲದೆ |
ಅಜ್ಞಾನಿ, ಹರಿದ್ವೇಷಿಗಳನೆಂದೂ ಸಹಿಸನು ನರಸಿಂಹ ||
ಗಜ ಚರ್ಮಾಂಬರಧಾರಿ ರುದ್ರ, ಇಂದ್ರ, ಷಣ್ಮುಖರಿಂದ ಸ್ತುತಿಸಿಕೊಳ್ಳುವವ ಎನ್ನ ರಕ್ಷಿಸಲಿ||
ವಾಮನ
ಚತುರಂಗ ಸೈನ್ಯಬಲದಿ ಸೊಕ್ಕಿದ ದನುಜನು |
ಕೂತನು ಬಲಿ, ಸಾಂಗವಾಗಿ ಯಜ್ಞಮಾಡಲು ||
ಉತ್ತಮ ಮಂಗಲ ತ್ರಿವಿಕ್ರಮ ಶೃಂಗಾರ ಪಾದದಿ |
ಉತ್ತುಂಗ ಬ್ರಹ್ಮಾಂಡ ಕಟಾಹ ತಾಕಿಸಿ ಸುರಗಂಗೆ ಹರಿಸಿದ ||
ಇಂತಹ ವಿರಾಟರೂಪಿಯ ಭಜಿಸೆ ಪಾಪ ಕಳೆವ ವಾಮನನಿಗೆ ನನ್ನ ನಮನಗಳು ||
ದಾನವ ಬಲಿಯಿಂದ ಗುಪ್ತ್ಯಾರ್ಥದಿ ದಾನ ಪಡೆಯಲು |
ದನುಜ ಪರಿವಾರವೆಲ್ಲ ನೆರೆದು ನಿಂತು ನೋಡಿದರು ||
ಮನ ನಿರ್ಮಲದಿ ಕೋಟಿ ಚಂದ್ರನಂತೆ ಪೊಳೆವ ಮೌಂಜಿಧಾರಿ |
ಜನಿವಾರ, ಛತ್ರಿ, ಪಾದುಕಾ, ದಂಡ ಕಮಂಡಲಧರ ||
ಧಾನ್ಯಯೋಗ್ಯ ವಾಮನರೂಪ ಹರ್ಷ ಸುರಿಸಿ ಎನ್ನ ಧನ್ಯನಾಗಿಸಲಿ ||
ಪರಶುರಾಮ
ಶೌರ್ಯದು ಕ್ಷತ್ರಿಯರಾಜ ಸಮೂಹ ಕುಲಾಂತಕ |
ವೀರ್ಯವಂತ ಸಹಸ್ರಾರ್ಜುನನ ಸವರಿದ ಪರಶುರಾಮ ||
ಭಾರ್ಯೆಯ ಪರಾಧಕೆ ಕುಪಿತ ಪಿತನಾಜ್ಞೆಯಂತೆ |
ಧೈರ್ಯದಿ ಮಾತಾ, ಭ್ರಾತೃಗಳ ಶಿರ ಸಂಹರಿಸಿದ ||
ದಯಾಮಯ ಅಮಿತವೀರ್ಯ ಎನ್ನಪರಾಧ ತಡೆಯಲಿ ||
ಶ್ರೀರಾಮ
ಶುಭ್ರ ನಿರ್ಮಲ ಅಮಿತ ಗುಣವಂತ |
ಶ್ರೀರಾಮನು ಲಕ್ಷ್ಮಣನೆಂಬ ಗಿಳಿಗೆ ಯಶೋವಂತ ||
ಪರಶುರಾಮನಲಿ ಯುದ್ಧ ಕಲಹ ತೋರಿದವ |
ಸ್ವರ್ಗಾಧಿಪತಿ ವೈರಿಗಳ ಭಯ ಹೆಚ್ಚಿಸುವ ||
ನಾರು ವಸ್ತ್ರಾನ್ವಿತ ಘೋರ ಮನೋರಥ ಪೂರೈಸನೆಂದಿಗೂ ಎನ್ನನು ರಕ್ಷಿಸಲಿ ||
ರಮಾ, ಬ್ರಹ್ಮಾದಿಗಳಿಗೆ ಸುಖದ ಸ್ವರ್ಗನು |
ಭ್ರಮಿತವಾಲಿ ಭಜಿಸಿ, ರವಿಸುತಗೆ ರಾಜ್ಯವಿತ್ತ ||
ಕಾರ್ಮೋಡ ಕಂಡು ನಲಿವ ನವಿಲಂತೆ ಅಯೋಧ್ಯಾಪತಿ ಸುತ |
ದುರ್ಮುಖ, ಕಾಕರೂಪಿ ಕುರಂಗನ ಒಕ್ಕಣ್ಣು ಮಾಡಿದ ||
ಸುಮುಖ ಶ್ರೀರಾಮ ನಿನ್ನ ಪಾದ ಕಮಲದಿ ಅತುಲ ಭಕ್ತಿಕೊಡು |
ಸ್ವರ್ಗಭೂಮಿ ಜಯಿಸಿದ ತಪಸ್ವಿ ವಿಶ್ವಾಮಿತ್ರ ಜೊತೆ ಹೊರಟ |
ಶ್ರೀರಾಮ ಸಕಲರ ಕಣ್ಮಣಿ ಮನೋ ವಲ್ಲಭ ||
ಸರ್ವದಾ ಹಸನ್ಮುಖನಾದ ಇವಗೆ ಸಮಾನ-ಅಧಿಕರಾರಿಲ್ಲ |
ರುದ್ರವರಪ್ರದ ಧನು ಹದೆಯೇರಿಸಿ ಮುರಿದ ||
ಶೌರ್ಯವಂತ ಸೌಂದರ್ಯಸಾರ ವಿಜಯಿ ಎನ್ನ ಸಂಸಾರದಿಂದ ಜಯಿಸಲಿ ||
ಅರಣ್ಯದಿ ಶರ ಬೀಸಿ ಅಸುರ ಪತ್ನಿಯರ ವಿಧವೆಯಾಗಿಸಿದ ||
ಕರಿ ಮುಂಗುರುಳು ಹಾರಾಡುವ ಭ್ರಮರದಂತೆ, ಭ್ರೂಮಧ್ಯೆತಿಲಕವಿಟ್ಟ |
ಅರವಿಂದ ನಯನೇ, ಸೂರ್ಯವಂಶ ಕುಲವಧು ಬಂದಳು ||
ಶ್ರೀರಾಮನನುಸರಿಸಿ ದುರ್ಗಮ ಕಾನನಮಾರ್ಗ ಸವೆಸಿದಳು |
ತಾರೆ ಗುಂಪಲಿದ್ದ ಉಡುಪನಂತೆ, ಸೀತೆ ಜೊತೆ ಶೋಭಿಸಿದವ ಎನ್ನ ಕಾಪಾಡಲಿ ||
ಜಿತೇಂದ್ರಿಯರಾದ ಮಹಾ ತಪಸ್ವಿಗಳು |
ಸತತದಿ ದಶಾನನನಿಂದ ಕ್ಲೇಶಪಟ್ಟರು ||
ಇಂತಿರಲು ಭುವಿಯೊಳ್, ಅವರ ದು:ಖ, ಭಯ |
ಅಂತಗೊಳಿಸಲು ಯಜ್ಞರಿಪು ದನುಜನ ||
ಚಿತ್ರಕೂಟದಲ್ಲಿದ್ದ ಶ್ರೀರಾಮ ಉದ್ಯುಕ್ತನಾದ, ಇವನ ಭಜಿಸುವಂತಾಗಲಿ ||
ಮಿಂಚುಳ್ಳ ಕಾಂತಿಯ ಚಾಪ ಶತ್ರು ನಿರ್ಮೂಲಿಸುವಂತೆ |
ವಾಂಛಿತ ಪಾದ ಕಮಲದಿಂ ಅತೀ ದಯಾ ರಸ ಸುರಿಯಲಿ ||
ಇಚ್ಛೆಯಲಿ ಜಟಾಯು ಶ್ರೀರಾಮನ ಸಂದರ್ಶಿಸಿ |
ಸ್ವಚ್ಛವಾಗಿ ಪಾಪಿ ರಾವಣ ಕುಕೃತ್ಯನರುಹಿ ಮರಣಿಸಲು ||
ಸಂಚಿತ ಪಾಪ ಪಾವಕ ಅಮಿತಕೀರ್ತಿ, ಪಂಪಾತಟದಿ ಸಂಚರಿಸುವವ ರಕ್ಷಿಸಲಿ |
ಹರಿಣಾಕ್ಷಿ ಕನಕ ಕುರಂಗ ಕುತೂಹಲದಿ ಆಪೇಕ್ಷಿಸಲು |
ಉರ್ವಿಸುತೆ ಅಪಹಾರಕನ ಅನುಜನ ಪೋಷಿಸಲು ||
ಧರಿಸಿದ ಪುಚ್ಛದಾಗ್ರದಿ ಅಗ್ನಿಯಿಂದ ಲಂಕೆ ದಹಿಸಿ |
ಶ್ರೀರಾಮ ಪದತಲ ರಜವ ಹಣೆಯಲಿಟ್ಟ ||
ಹರಿಸೇನೆ ಶರಧಿಗೆ ಸೇತು ಬಂಧಿಸಿದಂತೆ ಭಕ್ತಿಯಿಂದ ಬಂಧಿಸಲಿ ||
ಬಿಲ್ಲು, ಖಡ್ಗ, ಭುಜದಿ ಬತ್ತಳಿಕೆ ಧರಿಸಿ |
ಸಲ್ಲಕ್ಷಣ ಸೂರ್ಯಕಾಂತಿ ಸಮಾನ ಶ್ರೀರಾಮ ಕಪಿಸೈನ್ಯ ಸಂರಕ್ಷಕನ |
ಅಲಕ್ಷಿಸಿದ ರತ್ನಾಕರನ ಕುಪಿತದಿ ಕೆಂಗಣ್ಣು ಕುಡಿ ನೋಟದಿ ವೀಕ್ಷಿಸೆ ||
ತಲ್ಲಣ ಹೃದಯದಿ ಅಮೂಲ್ಯರತ್ನ ಮಣಿ ಪದತಲಕೆ ಸುರಿದ |
ನಲುಮೆಯಲಿ ಸತತ ಸ್ತುತಿಸುವ ವಾಯುಸುತನ ಸ್ವಾಮಿ ಜಯವೀಯಲಿ ||
ಹುಂಕಾರದಿಂದ ಟಂಕಾರನಾದ ಕೇಳಿ ಪಾಪಿಷ್ಠರು |
ಶಂಕೆಯಿಂದ ವಜ್ರದಂತಿದ್ದ ಹೃದಯ ಚೂರಾಯಿತು ||
ಲಂಕಾಧೀಶ ತನಗೆ ಮೃತ್ಯುಕಾಲ ಸಮೀಪಿಸಿತೆಂದು |
ಏಕಕಾಲಕೆ ಅನೇಕ ಶಂಕೆಯಿಂದ ಉದ್ಗಾರ ತೆಗೆದನು ||
ಲಂಕೆಯಲ್ಲಿದ್ದವರ ಕಾಲನಾದ ಶ್ರೀರಾಮ ಧನುರ್ಧಾರಿಯಾದವನ ಸದಾಭಜಿಸುವಂತಾಗಲಿ ||
ಬುದ್ಧಿಯಿಂದ ತಿಳಿಯಲಸಾಧ್ಯನು, ದು:ಖಿತರಿಗೆ ಮಂಗಲನಾಮ |
ಶುದ್ಧ ರಮಾ, ಬ್ರಹ್ಮ, ರುದ್ರ, ಶೇಷ, ಗರುಡ, ಚಂದ್ರ, ಗುರುವಂದ್ಯನು ||
ಹೃದ್ಯರ ರಕ್ಷಣೆ ಭಾರ ಹೊತ್ತಿರುವ ಪ್ರಭು ಶ್ರೀರಾಮ ಸೀಮಾತೀತ ||
ಯುದ್ಧದಿ ಸಕಲ ಕಂಟಕ ರಾವಣನ ವಧಿಸಿದ |
ಆದ್ಯನಾಗಿ ಸಕಲ ವೇದ ಪ್ರತಿಪಾದ್ಯ ಅಪ್ರಾಕೃತ ಪ್ರಕೃತಿಯಿಂದ ರಕ್ಷಿಸಲಿ ||
ಕಾಮವಶ ಇಂದ್ರನಿಂದ ಪತಿತಳಾಗಿ ಪತಿ ವಚನದಂತೆ |
ಶಮ ದಮ ಸಹಿತಳಾಗಿ ಶಿಲೆಯಾಗಿದ್ದವಳ ಉದ್ಧರಿಸಿದ ||
ಉಮೆಯ ಬಯಸಿ ತಪಗೈದ ಶಂಬೂಕನ ಕರದಿ ಕೊಂದ |
ಸಮಾನತೆಯ ಪ್ರತೀಕ ಶ್ರೀರಾಮ ಬೇಡಸ್ತ್ರೀಯ ಅನುಗ್ರಹಿಸಿದ ||
ಮಾನವಂತ ವಿಭೀಷಣಗೆ ಆಶ್ರಯವಿತ್ತು ಶುಭಕೋರಿದವನ ಸದಾ ಆಶ್ರಯಿಸುವಂತಾಗಲಿ||
ಶ್ರೀಕೃಷ್ಣ
ವೃಂದಾವನದಿ ಗೋವೃಂದವ ಕಾಯ್ದು ಲೀಲೆಗಳ ತೋರಿದ |
ನಂದಸುತ ಏಕೈಕ ಸಕಲ ದೇವತೆಗಳಿಂದ ನಮ್ಯ ||
ಬುಧರಿಂದ ನಮಿತನಾದವ ಅಸುರಹರಣಾರ್ಥ ಭುವಿಗಿಳಿದ |
ಸುಂದರ ಚಂದಿರನು ನೀಲಕಾಂತಿ ಶ್ರೀಕೃಷ್ಣ ರೂಪಕೆ ನಾಚಿದ ||
ಉದರಕೆ ಹಗ್ಗದಿಂದ ಬಂಧಿತನಾದವ ಬಂಧನ ಬಿಡಿಸಿಲಿ ||
ಗೋಪಾಲಕ ಉತ್ಸವದಿ ಉತ್ಸಾಹದ ಮೃಷ್ಟಾನ್ನ ಭೋಜನ |
ಲೋಪಿಸಲು ಕುಪಿತ ಇಂದ್ರ ಸುರಿಸಿದ ಮುಸಲಧಾರೆಗೆ ಗಿರಿಧಾರಿಯಾದ ||
ಗೋಪಾಂಗನೆಯರ ವಸ್ತ್ರ ಅಪಹರಿಸಿ ಭಕ್ತಿವಶರನ್ನಾಗಿಸಿ |
ಗೋಪಿಯರೊಡಗೂಡಿ ರಾಸಲೀಲೆ ಆಡಿ ಉದ್ಧರಿಸಿದ ||
ಗೋಪಾರಿಜಾತಹರಣ ಮಾಡಿದ ಶ್ರೀಕೃಷ್ಣ ಸಕಲಪಾಪ ಅಪಹರಿಸಲಿ ||
ಕಂಸಾದಿ ದುರುದ್ಧೇಶಿತ ಅಸುರರ ದಮನಕ್ಕಾಗಿ ಧರೆಗಿಳಿದ |
ಸು-ಸಾರಭೂತನು ಸಂಸಾರಬದ್ಧ ಸಜ್ಜನರೋದ್ಧಾರಕ ||
ಸಂಸಾರದಿ ಸಾತ್ವಿಕರಿಗೆ ಸುಖವೀವ ಶ್ರೀಕೃಷ್ಣ ಜ್ಞಾನಾನಂದ ||
ಹಂಸಾದಿ ತಾಪಸರಿಗೆ ದರುಶನವಿತ್ತು ಹರುಷವೀವ |
ಹಂಸವಾಹಕ ಬ್ರಹ್ಮಾದಿಗಳಿಂದ ಚರಣವಂದ್ಯನು ಆದರದಿ ಚರಣ ತೋರಲಿ ||
ರಾಜೀವ ನೇತ್ರನು ಜ್ಞಾನಿಪ್ರಿಯ ವಿದುರಗೆ ಪ್ರಾಣಪ್ರಿಯ |
ರಾಜ ಜರಾಸಂಧನ ಚತುರಂಗ ಬಲ ಸೈನ್ಯ ಗರ್ವ ಭಂಗಿಸಿ ||
ಭುಜ ಬಲದಿಂದ ಶ್ವೇತಾಶ್ವರೂಪಿ ದೈತ್ಯನ ವಧಿಸಿದ ಶ್ರೀಕೃಷ್ಣ |
ಜಾಜಿ, ಕದಂಬ, ಎಳೆ ಕಮಲಾದಿ ಹೊಮಾಲೆ ಧರಿತ ||
ವಾಜೀಶವಾಹನ ಸುವಾಸಿತ ಶಿರದವ ಸದಾ ರಕ್ಷಿಸಲಿ ||
ಕಾಲೀಯ ಆವಾಸ ಯಮುನೆಯ ಮಡುನಲ್ಲಿದ್ದವನ |
ಕೇಲಿಯಲಿ ತಲೆಮೇಲೆ ನರ್ತಿಸಿ ಪಾದನಖದಿಂ ||
ಕಾಲೂರಿ ರವಿ ಹೊಂಗಿರಣದಂತೆ ಕೆಂಪಾಗಿ ಪ್ರಹಾರಿಸಿದ |
ನೀಲಕಂಠನ ವರದಿಂದ ಸೊಕ್ಕಿದ ದೈತ್ಯರ ವಧಿಸಿದ ||
ಆಲಿಂಗಿಸಿ ಗೋಪಸ್ತ್ರೀಯರ ಸುವಾಸಿತನಾದ ಶ್ರೀಕೃಷ್ಣ ಭಕ್ತಿಯ (ಪರಿಮಳ) ಪಸರಿಸಲಿ ||
ಕೃಷ್ಣಾದಿ ಪಾಂಡುಸುತರು ದ್ರೌಪದಿ ಮನೋರಥವ ಸಂತೈಸಿದರು |
ಕೃಷ್ಣ ಚಿನ್ಹೆ ಧರಿತವರ ಕಷ್ಟ ಕಳೆವ ನೀಲಾದಿ ಷಣ್ಮಹಿಷಿ ಪತಿ ||
ಪೋಷಿಸಿ ಜ್ಞಾನಿಗಳ ಆನಂದ ಕಡಲಿನ ಚಂದ್ರನಂತೆ |
ವಿಷ್ಣುನಾಮಕ ಗೋವರ್ಧನಧಾರಿ ಶ್ರೀಕೃಷ್ಣ ಜಯಶಾಲಿ ||
ನಿಷ್ಣಾತ ಉಪೇಂದ್ರ ಧೈರ್ಯಶಾಲಿ ಸದಾ ಕರುಣಿಸಲಿ ||
ಸುಂದರಿಯರಾದ ಭೂ,ರಮೆ ಸಮೇತ ಬಲರಾಮಾನುಜನ |
ಮಾಧವನಂಘ್ರಿ ಕಮಲದಿ ಕಾಮಪಿತ ರತಿ ಕೊಡಲಿ ||
ವಧಿಸಿ ವ್ಯೋಮಾಸುರ, ಕಾಮಾರ್ತ ಭೌಮಸುರರ ಕನ್ಯೆಯರ |
ಬಂಧಿತರಾದ ಪ್ರಣಯಪೀಡಿತ ಕನ್ಯೆಯ ಸ್ವೀಕರಿಸಿದವ ಭೀಮಾಭಿವಂದ್ಯ ||
ರುದ್ರ, ಶೇಷಾದಿ, ವೈಮಾನಿಕ ಸಂಚರಿಪರಿಂದ ವಂದ್ಯನು ಸೆರೆ ಬಿಡಿಸಿದ ಶ್ರೀಕೃಷ್ಣ ||
ವಿಷಮಿಶ್ರಿತ ಭಕ್ಷ್ಯ ಇತ್ತು, ವಿಷಸರ್ಪ ಗಣದಲ್ಲಿ ಬಂಧಿತನ ದೂಡಿ |
ಲಾಕ್ಷಾಗೃಹ ಜ್ವಲಿಸಲು, ರಾಕ್ಷಸರಾದ ಹಿಡಿಂಬ, ಬಕರಿಂದ ಪೀಡಿತರು |
ಭೀಕ್ಷಾನ್ನದಂತಹ ಆಪತ್ತು ಬಂದರೂ ಧೈರ್ಯ ಬಿಡಲಿಲ್ಲ |
ಅಕ್ಷಯ ಸೀರೆಯಿತ್ತ ಶ್ರೀಕೃಷ್ಣ , ದ್ರೌಪದಿಮಾನ ಭಂಗದಿ ||
ಭೀಷಣ ಅಪಹಾಸವಾದರೂ ಧರ್ಮಮಾರ್ಗದಿ ನಡೆದರು ||
ಧರ್ಮಾರ್ಜುನಾದಿ ಪಾಂಡವರ ಅನ್ಯಾಯ ವೀಕ್ಷಿಸಿ |
ಮರ್ಮಘಾತಕರ ಅಕ್ಷೋಹಿಣಿ ಬಲನಾಶ ಮಾಡಲು ನಿರ್ಧರಿಸಿ ||
ಗರುಡಾರೂಢೀ ಖಡ್ಗ, ಬಿಲ್ಲು, ಬಾಣ, ಚಕ್ರ ಪಿಡಿಯಲೊಪ್ಪದೇ |
ಸಾರಥಿಯಾಗಿ ಕಪಿಧ್ವಜ ರಥಕೆ ಅರ್ಜುನನ ರಕ್ಷಿಸಿದ |
ಶ್ರೀಕೃಷ್ಣ ಲಕ್ಷ್ಮೀಪತಿ, ಯದುಪತಿ ಜಯಶಾಲಿಯೆನ್ನ ಜಯಶಾಲಿಯಾಗಿಸಲಿ ||
ಬುದ್ಧ & ಕಲ್ಕಿ
ಬುದ್ಧಾವತಾರದಿ ಬುಧರಿಗೆ ದಯೆತೋರಿ ಅವತರಿಸಿ |
ಶುದ್ಧೋಧನ ಪುತ್ರನಾಗಿ ಕಥಾಗತ ಶಾಸ್ತ್ರ ಸಿದ್ಧಾಂತ ಪ್ರವರ್ತಕನಾದ ||
ಕ್ರೋಧದಿ ಖಡ್ಗ-ಗುರಾಣಿ ಪಿಡಿದು ಕಲ್ಕಿ ರೂಪದಿ |
ಶುದ್ಧಾಶ್ವಯಾನದಿ ದೈತ್ಯರ ಹತಗೈವ ಶ್ರೀಕೃಷ್ಣ ||
ಶುದ್ಧ ಹೃದಯದಿ ಲಕ್ಷ್ಮೀಧರಿಸಿದವಗೇ ಕರಮುಗಿವೆ ಸ್ವೀಕರಿಸಲಿ ||
...ತಾಪಸಿಯರಿಗೆ ವಾರಿಧರ ಕಾರ್ಮೋಡದಂತೆ ಕರಿವರ |
ಅಪಾರ ಸಂಸಾರ ಶತ್ರುವಾದ ಅಹಂನಾಶವೇ ಬಲ ಔಷಧ ||
ಪುಷ್ಪಗಳ ಸಾರ ಶೇಖರಿಸುವ ಭ್ರಮರದಂತೆ ಸದಾ |
ಆಪತ್ತು ಬರಲೀಸದೆ ವೈಕುಂಠದಿ ಚರಿಸುವ ಪದಕಮಲದಲ್ಲಿಟ್ಟು |
ಅಪರಿಮಿತ ವರ್ಣದ ಶ್ರೀಕೃಷ್ಣ ತಾಮರೆ ಸಾರದಂತೆ ರಕ್ಷಿಸಲಿ ||
ಹಯಮುಖ ದೇವನು ಮತ್ಸ್ಯಾದಿ ದಶಾವತಾರಿ ಮನೋಹರನ |
ಬಯಸಿ, ಅತೀ ಭಕ್ತಿಯಲಿ ಶುದ್ಧಬುದ್ಧಿಯ ವಾದಿರಾಜಯತಿ ||
ದಯದಿ ರಚಿಸಿದ ಮಾಣಿಕ್ಯ ಮಾತಿನ ಚಮತ್ಕಾರ ಹಾರ |
ವಾಯು, ಬ್ರಹ್ಮಾದಿವಂದ್ಯ ಶ್ರೀಕೃಷ್ಣವಿಠ್ಠಲನ ಪೂಜೆಯಲಿ ಪಠಿಸಲು ||
ಭಯದ ಯಮಲೋಕವಾಗದೇ ಇತರ ಸುರಲೋಕವೇ ಫಲ ಪ್ರಾಪ್ತಿ ||
196. ಹರಿಯ ನೆನೆದರೆ ಪರಲೋಕ |
ನರರ ನೆನೆದರೆ ಸಂಸಾರಗತಿ ||
ದ್ವೇಷ ಬಿಟ್ಟರೆ ಉತ್ತಮ ಲೋಕ |
ರೋಷ ಮಾಡಲು ಅಧಮಲೋಕ ||
ಕರುಣೆತೋರಲು ಮನಕೆ ಶಾಂತಿ |
ಪರಹಿತ ಬಯಸದಿರೆ ಸ್ವಾರ್ಥಿ ||
ಧನ ದಾನಿಸದಿರೆ ಪಿಸುಣವಂತ |
ಮನ ವಿಶಾಲಿಸೇ ಮಾನ್ಯವಂತ ||
ಗುರು ಹಿರಿಯರ ನಿಂದೆಪಾಪ ವಜ್ರಲೇಪ |
ಕಿರಿಯರ, ಅಸಹಾಯಕರ ಸೇವೆ ಧನ್ಯತಾಭಾವ ||
ಪರರಿಗಾಗಿ ಬಾಳು ಈಲೋಕದಿ ಪರತರ |
ಸೇರಲು ಶ್ರೀಕೃಷ್ಣ ವಿಠ್ಠಲನ ಇದೊಂದೇ ದಾರಿ ||
197. ಎನ್ನ ಸ್ವಾಮಿ ಎನ್ನವ ಗುಣಗಳ ಚಿತ್ತಕ್ಕೆ ತರಿದಿರು |
ನೀನು ಕ್ಷಮಾರ್ಣವನಲ್ಲವೇ, ಎನ್ನ ಅಕ್ಷಮ್ಯಪರಾಧ ಕ್ಷಮಿಸು ||
ನೀನು ಜ್ಞಾನಿಯಲ್ಲವೇ, ಎನ್ನ ಅಜ್ಞಾನ ನೀಗಿಸು |
ನೀನು ಗುಣವಂತನಲ್ಲವೇ ಎನ್ನವ ಗುಣಗಳ ವಧಿಸು ||
ನೀನು ಆನಂದದಾಯಕನಲ್ಲವೇ ಎನಗಧಿಕಾನಂದ ನೀಡು |
ನೀನು ಧನವಂತನಲ್ಲವೇ ಎನ್ನಲಿ ಭಕ್ತಿಧನ ಹೆಚ್ಚಿಸು ||
ನೀನು ವಿಕಾರರಹಿತನಲ್ಲವೇ ಎನ್ನ ವಿಕಾರ ವರ್ಜಿಸು |
ನೀನು ಸಹನವಂತನಲ್ಲವೇ ಎನ್ನನು ಸದಾ ಸಹಿಸು ||
ನೀನು ಶಾಂತಮೂರ್ತಿಯಲ್ಲವೇ ಎನ್ನನು ಶಾಂತಳನ್ನಾಗಿಸು ||
ನೀನು ಸಂತೃಪ್ತನಲ್ಲವೇ ಎನ್ನನು ತೃಪ್ತಿಪಡಿಸು |
ನೀನು ಕಾಮರಹಿತನಲ್ಲವೇ ಎನ್ನನ್ನು ಕಾಮ ವಿಜಯಿಯಾಗಿಸು ||
ನೀನು ಮಹಾದಾನಿಯಲ್ಲವೇ ಎನ್ನನ್ನು ದಾನವಂತಳನ್ನಾಗಿಸು |
ನೀನು ಧರ್ಮಪ್ರಭುವಲ್ಲವೇ ಎನ್ನನ್ನು ಧರ್ಮದಿಂದ ನಡೆಸು ||
ನೀನು ಅನಂತಕಲ್ಯಾಣಗುಣನಲ್ಲವೇ ಎನ್ನನ್ನು ಕಲ್ಯಾಣವಾಗಿಸು |
ನೀನು ಅಚ್ಯುತನಲ್ಲವೇ ಎನ್ನವೇ ಎನ್ನನ್ನು ದೋಷರಹಿತಳನ್ನಾಗಿಸು ||
ನೀನು (ಅಜಾತಶತ್ರು) ಜಿತಾಮಿತ್ರನಲ್ಲವೇ ಎನ್ನ ವೈರಿಗಳ ನಾಶಗೊಳಿಸು |
ನೀನು ಸರ್ವಪ್ರಾಣಿ ಹಿತೈಷಿಯಲ್ಲವೇ ಎನ್ನಹಿತ ನಿನ್ನದಾಗಿಸಿಕೋ ||
ನೀನು ಸರ್ವಭೋಕ್ತಾರನಲ್ಲವೇ ಎನ್ನನ್ನು ಸ್ವೀಕರಿಸು |
ನೀನು ಸರ್ವಾಂತರ್ಯಾಮಿಯಲ್ಲವೇ ಎನ್ನ ಅಂತರ್ಯದಿ ಕಾಣಿಸು ||
ನೀನು ಸರ್ವಪ್ರಭುವಲ್ಲವೇ ಎನ್ನನ್ನು ನಿನ್ನ ದಾಸಳನ್ನಾಗಿಸು ||
ಎನ್ನ ಶ್ರೀಕೃಷ್ಣವಿಠ್ಠಲ ಎನ್ನನ್ನು ನಿನ್ನವಳೆಂದು ಅಪ್ಪಿಕೊ ||
198. ಒಂದೇ ಕಾಲಕೆ ಒಂದೇ ವಿಷಯಕೆ |
ಎಂದೂ ವಿಭಿನ್ನ ಯೋಚನೆ ಬರುವುದು ||ಪ||
ಜೋಡಿ ತಲೆಯಲಿ ಎಂದೂ ಒಂದೇ ವಿಚಾರವಿರದು |
ಕೂಡಿ ಆಲೋಚಿಸಿದರೂ ಒಂದೇ ಚಿತ್ರಣವಿರದು ||
ಕೂಡಾ ಹುಟ್ಟಿದವರಿರಲಿ ಒಡಿನಾಡಿಯೇ ಇರಲಿ |
ಗಂಡ-ಹೆಂಡತಿ ಇರಲಿ ಹಡೆದ ಮಕ್ಕಳೇ ಇರಲಿ ||1||
ಭಿನ್ನ ಜೀವ, ಭಿನ್ನ ಕರ್ಮದಂತೆ ಭಿನ್ನ ಅಭಿರುಚಿ |
ಭಿನ್ನ ಭಿನ್ನ ಸರ್ವಪ್ರಾಣಿಗಳಲಿ ಸರ್ವದಾ ಇರುವುದು ||
ಭಿನ್ನ ನೋಟ, ಭಿನ್ನಊಟ, ಭಿನ್ನಗುರಿ, ಭಿನ್ನಾಭಿಲಾಷೆ |
ಭಿನ್ನಮನ, ಭಿನ್ನಬುದ್ಧಿ, ಭಿನ್ನದೇಹ ಪ್ರಕೃತಿ |||2||
ನೆಲ ಒಂದೇ, ಕಾಲವೊಂದೆ, ಬಾಹ್ಯಾಕಾರವೊಂದೇ |
ಎಲ್ಲ ಸೇವಿಸುವ ಅನ್ನ, ಕುಡಿಯುವ ನೀರು ಒಂದೇ ||
ಬಲಾಬಲ, ದೇಹ-ಬುದ್ಧಿಯಲಿ ಬೇರೆ ಬೇರೆ |
ಎಲ್ಲರಂತರ್ಯಾಮಿ ದೈವ ಶ್ರೀಕೃವಿಠ್ಠಲನೇ ಆದರೂ ಪ್ರಾರಬ್ಧ ಬೇರೆ ಬೇರೆ ||3||
199. ವಾರಿಚರ ಚರಿಸಿ ಸಪ್ತರಾತ್ರಿ ವನೌಷಧಿ ರಕ್ಷಿಸಿದ |
ಘೊರತರ ರಣದಿ ವರಾಹ ಉರ್ವಿಯ ಉಳುಹಿದ ||
ಗಿರಿಧರ ಕುರ್ಮರೂಪಿ ಮಥಿಸಿದ ಸಾಗರವ |
ಸುರವರ ಸಿರಿವರ ಗಂಭಿರನಾದ ನರಹರಿ ||
ಪೋರ ಮೂರು ಪಾದ ಭೂಮಿ ಬೇಡಿ ತ್ರಿವಿಕ್ರಮನಾದ |
ಮಾತೃ-ಭಾತೃರ ಪಿತೃವಾಕ್ಯಕೆ ಪರುಶದಿ ಶಿರತರಿದ ||
ಗುರುವರ ಮಾರುತಿಕಾಂತ ಪ್ರಿಯ ಸೀತಾಪತಿ |
ಗುರುಪುತ್ರ ಮರಳಿಸಿ ಕಂಸಾರಿ ಗುರುದಕ್ಷಿಣೆಯಿತ್ತ ||
ಕರಿವರ ಪರಿವಾರಪಾಲಕ ನವನೀತ ಚೋರ |
ಧರ್ಮಪರಿ ಪಾಲಕ ಜ್ಞಾನಾಮೃತ ಸತ್ಯಬೋಧಕ ||
ಚೋರಪೋರ ಬೋಧಿಸಿ ಅವೇದ ಚಿತ್ತವ ಕೆಡಿಸಿದ |
ಪರಿಸರ ಉಳಿಸಲು ಅಶ್ವನೇರಿ ಖಡ್ಗ ಹಿಡಿದು ಬಂದ ||
ಮಾರಹರ ಭ್ರಮಿತ ರೂಪದಿ ಅಮೃತ ಪಾನಿಸಿದ |
ಸುರಾಸುರರೊಡೆಯ ಭಕ್ತರ ಪ್ರೀತಿ ಪಾತ್ರ ಸದಾ ||
ಪರಿಹರಿಸಿ ಸಜ್ಜನರ ಸಂಸಾರ ಭೀತಿಯ ಕರಪಿಡಿದು ನಡೆಸಿ |
ಗುರುತರ ಪ್ರಾರಬ್ಧ ಬಿಡಿಸಿ ಚರಣಕಮಲದಿ ಇರಿಸು ||
ಪರಾತ್ಪರ ಪಾಪಹರ ಶ್ರೀಕೃಷ್ಣವಿಠ್ಠಲ ದಯಾನಿಧೇ ||
200. ದಣಿವರಿಯದ ದಣಿ ಗುಣಗಳ ಖಣಿ |
ಮಣಿಯನು ಯಾರಿಗೂ ದಿನಮಣಿ ||ಪ||
ಅಣು, ರೇಣು, ತೃಣಕಾಷ್ಠದಲ್ಲಿರುವ |
ಕಣ್ಣುರೆಪ್ಪೆಯಂದದಿ ಸಕಲರ ಕಾಯ್ವ ||
ಬೆಣ್ಣೆಯಂದದಿ ಕರಗುವ ದು:ಖಾರ್ತರಿಗೆ |
ಪ್ರಾಣಿ, ಚಿಣ್ಣರಿಗೂ ಒಲಿದು ಅನುಗ್ರಹಿಪ ||1||
ಕಣಕಣದಲ್ಲಿರುವ ಸುಗುಣಗ್ರಾಹಿ |
ಮಣ ಬಂಗಾರಕೊಟ್ಟರೂ ಒಲಿಯನು ||
ಒಣ ಜಂಬ ತೋರ ಭಕ್ತಾಪರಾಧ ಸಹಿಷ್ಣು |
ದೊಣ್ಣೆನಾಯಕ ಎಲ್ಲರ ಬಿಡದೆ ಹಣಿಯುವ ||2||
ವರ್ಣಾಭಿಮಾನಿ, ಸೃಷ್ಟಿ, ಲಯ ಮಾಳ್ಪ |
ಕುಣಿದು ಕುಣಿಸುವ ಅಕಂಳಕ ||
ಋಣಮೋಚಕ, ಮೋಕ್ಷಪ್ರದಾಯಕ |
ಪರ್ಣಶಾಯಿ ಶ್ರೀಕೃಷ್ಣವಿಠ್ಠಲ ಅಪ್ರತಿಮ ||3||
201. ಅಂಗಳದಲ್ಲಾಡುತಿರಲು ರಘುರಾಮ ಕಂಡಾ |
ಆಗಸದಲ್ಲಿದ್ದ ಚಂದಿರ (ತನಗೆ) ಬೇಕೆಂದು ಹಟ ಮಾಡಿದ ||ಪ||
ಮಗುವಿನಹಟವೆಂದು ಬೇರೆ ಆಟಿಕೆ ತರಲು |
ಚೆಂಗಣ್ಣಿನಲಿ ನೀರು, ಉಬ್ಬಿಸಿಗಲ್ಲ, ಹುಸಿಗೋಪದಿ ||1||
ಬುಗುರಿ, ಚೆಂಡು, ಗೊಂಬೆಗಳನ್ನೆತ್ತಿ ಬಿಸುಟಿದ |
ಗಗನದೆಡೆ ಕೈ ಚಾಚಿ ಪೂರ್ಣ ಚಂದಿರನೇ ಬೇಕೆಂದ ||2||
ಆಗ ತಂದು ಕನ್ನಡಿಯಲಿ ಪ್ರತಿಬಿಂಬ ತೋರಲು |
ನಗುತಾ ಕಿಲಕಿಲ, ಚಪ್ಪಾಳೆ ತಟ್ಟಿದ ಹರ್ಷದಿ ||3||
ತೂಗಿಸಿ ತಲೆ ಗೆಜ್ಜೆ ಕಾಲ್ಗಳ ಹೆಜ್ಜೆ ಕುಣಿಸಿದ |
ಖಗಪತಿ ಶ್ರೀಕೃಷ್ಣವಿಠ್ಠಲ ಜಗಕೆ ಮರುಳ ಮಾಡಿದ ||4||
202. ಆದಿ ಬುನಾದಿಯಿಂದ ಎಲ್ಲ ಶಕ್ತಿಯ ಮೂಲ |
ಆದ್ಯಂತರಹಿತ ಸರ್ವಶಕ್ತ ನೀನಲ್ಲವೇ ? ||ಪ||
ತಿನ್ನುವ ಅನ್ನದಲ್ಲರುವ ಶಕ್ತಿ ನೀನೇ |
ನೀನಲ್ಲದ ಆಹಾರ ಕಸದ ಸಮಾನ ||1||
ಕುಡಿಯುವ ನೀರಿನ ಚೇತನನಾಗಿ |
ಒಡನೆಯೇ ದಾಹ ಪರಿಹರಿಸುವಿ ||2||
ಪ್ರತಿ ಉಸಿರಿನಲ್ಲಿದ್ದು, ಒಂದುಸುರಿನಲ್ಲಿಲ್ಲದಿರೆ |
ಸತ್ತು ಶವವಾಗುವರು ಕ್ಷಣದಲಿ ||3||
ಪ್ರತೀ-ದ್ವೇಷ, ಕಾಮ-ಲೋಭ ಹುಟ್ಟಿಸುವ |
ಕೋತಿ ಮನಸಿನ ಕಡಿವಾಣ ನೀನು ||4||
ಹಿಂದೆ, ಇಂದು-ಮುಂದೆ ಎಂದೆಂದೂ |
ಇದ್ದು ಜೊತೆಗೆ ಶಕ್ತಿಯ ಶಕ್ತಿ ನೀನೇ ಶ್ರೀಕೃಷ್ಣವಿಠ್ಠಲ ||5||
203. ಹುಡುಕ ಬೇಡಿ ಹುಡುಕಿ ದಣಿಯಬೇಡಿ ||ಪ||
ದುಡುಕಿ ಯಾರನ್ನೋ ನಿಯತ ಗುರುವೆನ್ನದಿರಿ ||ಅಪ|||
ಅರುಹುವರು ಸಾಧನದ ಬಗೆ ಅನೇಕರು |
ಮಾರ್ಗದರ್ಶನ ತೋರುವವರನೇಕರು ||
ಶಾಸ್ತ್ರಧ್ಯಾಯ ಮಾಡಿಸುವರನೇಕರು |
ತೋರುವುರು ಗುರಿ ಆದರೆ ತಲುಪಿಸರು ||1||
ನಿಂದ್ಯಾನ್ನ ವರ್ಜಿಸಿ ಅಶೌಚ ತೊರೆದು |
ಸಾಧನೆ ಪೂರ್ಣವಾಗಲು ಸುಜೀವಿ ಬಳಿ ||
ಒದಗಿ ಬರುವ ತಾನೇ ನಿಯತ ಗುರು |
ಕಂದನ ಹುಡುಕಿ ತಾಯಿ ಬರುವಂತೆ ||2||
ಏಕಚಿತ್ತದಿ ಬೋಧಿಸುವ ಸ್ವಬಿಂಬೋಪಾಸನೆ |
ಸಂಕೀರ್ತಿಸಿ, ಸ್ತುತಿಸಿ, ಪೂಜಿಸಲು ಬಿಂಬರೂಪ ||
ಮುಕುಂದನ ಮಂದಿರ ದಾರಿ ಸಿಗುವುದು |
ಲಕುಮಿವಲ್ಲಭ ಶ್ರೀಕೃಷ್ಣವಿಠ್ಠಲನಾಣೆಗೂ ಸತ್ಯ ||3||
204. ಶ್ರೀಗೌರಿ ಕಲ್ಯಾಣಿ ಶಂಕರನರ್ಧಾಂಗಿ |
ಜಗನ್ಮಾತೆ ಉಮಾಮಹೇಶ್ವರಿ ||ಪ||
ಮಾಗಭಿಮಾನಿ ಸೌಭಾಗ್ಯವಂತೆ |
ಗಂಗಾಧರ ಪ್ರಿಯೆ ಸತೀದೇವಿ ||
ಹೊಂಗಿರಣ ಮೂಡಿಸೆನ್ನ ಜೀವನದಿ |
ಜಗನ್ಮಂಗಳೆ, ಪಾರ್ವತಿಯೇ ||ತಾಯೇ |||1||
ಮಾತು ಮನದ ಪ್ರತೀಕವಂತೆ |
ಶತ್ರು ಭಯ ಬಿಡಿಸಿ ಕಾಪಾಡು ||
ಸತ್ಯದ ದಾರಿ ತೋರು ಕರುಣದೀ |
ನಿತ್ಯ ಶ್ರೀಕೃಷ್ಣವಿಠ್ಠಲನ ನಿಜಭಕುತೆ ||ತಾಯೇ ||2||
ಸತೀ ದೇವಿ ದೇಹತ್ಯಾಗ
205. ಕುತೂಹಲದಿ ವೀಕ್ಷಿಸಿ ಕೇಳಿದಳು ದೇವತೆಗಳ |
ಮತ್ತೆಲ್ಲಿ ಹೊರಟರೆಲ್ಲ ಈಪರಿ ಶ್ರೀಂಗಾರದಿ ||
ಗೊತ್ತಿಲ್ಲವೇ ಉಮೆ, ದಕ್ಷ ಯಜ್ಞಕೆ ಹೊರಟೆವು |
ಪತಿ ಬಳಿ ಬಂದು ತಾವೂ ಹೊರಡೋಣವೆಂದಳು ||1||
ಇತ್ತಿಲ್ಲ ತಮಗೆ ಅಹ್ವಾನ ಹೋಗುವುದು ಬೇಡ |
ಮಾತಾ-ಪಿತೃ ಮನೆಗೆ ಹೋಗಲು ಅಹ್ವಾನವೇಕೆ ? ||
ಸಾತ್ತ್ವಿಕ ಯಜ್ಞವಲ್ಲವಿದು ಅಪಮಾನ ತೀರಿಸಲುಸಂಚು |
ಎಂತ ಹೇಳಿದರೂ ಕೇಳದೆ ಉಮೆಯೊಬ್ಬಳೇ ಹೊರಟಳು ||2||
ಅತೀ ಆಡಂಬರದ ಯಜ್ಞಶಾಲೆಕಂಡಳು |
ಮಾತೆ ಸಹೋದರಿಯರೆಲ್ಲ ಬಂದು ಅಪ್ಪಿಕೊಂಡರು ||
ಸ್ವತ: ದಕ್ಷ ಮಾತ್ರ ನೋಡಿಯೂ ಅಲಕ್ಷಿಸಿದ |
ಇತರ ಎಲ್ಲ ದೇವತೆಗಳೆಲ್ಲ ಉಪಸ್ಥಿತರಿದ್ದರು ||3||
ಸಂತೈಸಿ ತನ್ನಮನವ ನಿಂತಳಲ್ಲೇ ಬಂದವಳು |
ಹೋತೃಗಳು ರುದ್ರನಿಗೆ ಆಹುತಿ ಹಾಕದಾಗ ||
ಪಿತನ ಪ್ರಶ್ನಿಸಿ ಅಪಮಾನಿತಳಾದಳು |
ಮಾತಿನಲ್ಲೇ ಅತೀಯಾಗಿ ಶಿವನ ನಿಂದಿಸಿದನು ||4||
ಪತಿಯನಿಂದೆ ತಾಳದೆ ಸತೀ ಕುಪಿತಳಾಗಿ |
ಪಿತನ ಯಜ್ಞದಿ ದೇಹ ಅಗ್ನಿಗಾಹುತಿಸಲು ||
ಅತೀ ಭಯಂಕರ ತಾಪದಿ ಶಿವ ತಾಂಡವನೃತ್ಯದಿ |
ದೂತ ವಿರೂಪಾಕ್ಷನ, ಜಟೆ ಅಪ್ಪಳಿಸಿ ಸೃಜಿಸಿದ ||5||
ಭೂತನಾಥ ಕಳುಹಿದನವನ ಯಜ್ಞ ಧ್ವಂಸಿಸಲು |
ಶಸ್ತ್ರಕ್ಕೆ ಬೆದರದೆ ಶಿರಗಳ ತರಿದು ಚೆಂಡಾಡಿದ ||
ಅತೀ ಶೀಘ್ರದಿ ಯಜ್ಞಶಾಲೆ ರಣರಂಗವಾಯ್ತು |
ಕತ್ತರಿಸಿದ ದಕ್ಷನ ತಲೆ ಯಜ್ಞಗಾಹುತಿಯಾಯ್ತು ||6||
ಪತಿತಪಾವನ ನಾರಾಯಣ ಬಂದು ತಡೆದು |
ನೇತ್ರಹೀನರಿಗೆ ದೃಷ್ಟಿ, ಮೃತರಿಗೆ ಜೀವದಾನಿಸಿ ||
ಸಂತೈಸಿ ಶಿವನ ಶಾಂತಗೊಳಿಸಿದನಾಗ |
ಹೋತನ ತಲೆ ಇರಿಸಿದ ಮಾವ ದಕ್ಷಗೆ ||7|
ನಂತರ ಮದ ಇಳಿದು ವಿನಮ್ರನಾದ ದಕ್ಷ |
ಪ್ರೀತಿಪುತ್ರಿಯ ಮರಣಕ್ಕಾಗಿ ಶೋಕಿಸಿದನು ||
ಅತ್ತ ಸತೀ ಪರ್ವತನ ಪುತ್ರಿ ಪಾರ್ವತಿಯಾಗಿ ಜನಿಸಿ |
ಮತ್ತೆ ಕೈಲಾಸ ಪತಿಯನ್ನೇ ಪಡೆದು ಧನ್ಯಳಾದಳು ||8||
ಮುತ್ತು ದಾರದಲಿ ಪೋಣಿಸಿದಂತೆ |
ಮಾತು ಮನಸು ಒಂದಾದಂತೆ ಜೊತೆಯಾದರು ||
ಸ್ತುತಿಸಿ ಪೂಜಿಸಿ ಅವರ ಅನುಗ್ರಹ ಪಡೆದರೆ |
ಅಂತರ್ಯಾಮಿ ಶ್ರೀಕೃಷ್ಣವಿಠ್ಠಲನ ಸೇರುವರು ||9||
206. ನಾಸಿಕ ಘ್ರಾಣಿಸುವಂತೆ, ಚರ್ಮ ಘ್ರಾಣಿಸಬಲ್ಲುದೆ |
ಅಸ್ವಾದಿಸುವುದು ಜಿಹ್ವೆ, ದೃಷ್ಟಿಸುವುದು ನಯನ ||
ಸುಶಬ್ದಕೆ ಕಿವಿಯಾದರೆ, ಪಾದನಡೆದಂತೆ ಕರ ನಡೆವುದೆ |
ಆಶ್ರಯಕೆ ಆಕಾಶದಂತೆ, ತೃಷೆ ತೀರಲು ನೀರು ಬೇಕು ||
ಸಸ್ಯಕ್ಕಾಧಾರ ನೆಲದಂತೆ, ಬೇಯಿಸಲನ್ನ ಬೆಂಕಿಬೇಕು |
ಉಸಿರಿಗೆ ವಾಯು ಅಗತ್ಯ, ಸ್ಥಿರ ಬುದ್ಧಿ ನಿರ್ಣಾಯಿಸಲು ||
ವಿಶ್ವದಿ ಭಿನ್ನತತ್ವಗಳಿಗೆ ಭಿನ್ನಕಾರ್ಯ, ಇದಕೆ ಅಧಿಕನ್ಯೂನತೆ ಸಲ್ಲ |
ಅಸಾಧ್ಯ ಶ್ರೀಕೃಷ್ಣವಿಠ್ಠಲನೊಬ್ಬನೇ ಪ್ರತಿ ಅಂಗದಿ ಸರ್ವಕಾರ್ಯಮಾಳ್ಪ ||
207. ಸೀಮಿತಕಾಮಿತಾರ್ಥಪ್ರದ ಕಾಮಧೇನು, ಕಲ್ಪವೃಕ್ಷ, ಚಿಂತಾಮಣಿ |
ಕುಮುತಿ ನೀಗಿಸುವ ಸುಮತಿ ಅಸಾಧಾರಣ ಶಕ್ತಿಪ್ರದ ||
ನಾಮ ಮಹಾತ್ಮೆ ಅಂತರಾರ್ಥ ತಿಳಿದು ಭಜಿಸಲು |
ಅಮಿತ ಚತುರ್ವಿಧ ಪುರುಷಾರ್ಥಪ್ರದ ಶ್ರೀಕೃಷ್ಣವಿಠ್ಠನ ಶುಭನಾಮ ||
1
208. ಭೀಷ್ಮ ಸ್ತವರಾಜ, ಅನುಸ್ಮೃತಿ, ಗಜೇಂದ್ರಮೋಕ್ಷ |
ವಿಷ್ಣುಸಹಸ್ರನಾಮ, ಭಗವದ್ಗೀತೆ ಭಾರತದ ಪಂಚರತ್ನನ ||
ನಿಷ್ಕಾಮನದಿ ಸದಾ ಶ್ರವಣ, ಮನನ ಗೈಯಲು |
ವಿಶ್ವಗರ್ಭ ಶ್ರೀಕೃಷ್ಣವಿಠ್ಠಲ ನಿರ್ವಾಜ್ಯ ಭಕ್ತರಿಗತಿ ಸುಲಭನು ||
1
209. ಇಷ್ಟಿಕೆ ಮೇಲೆ ನಿಂತು ಪುಂಡರೀಕನನುಗ್ರಹಿಸಿದ |
ಮುಷ್ಠಿ ಅವಲಿಗೆ ಸಕಲೈಶ್ವರ್ಯವಿತ್ತ ಸುದಾಮಗೆ ||
ಶಿಶುಪಾಲನ ಸಂಹರಿಸಿ ಜಯಗೆ ಸದ್ಗತಿಯಿತ್ತ |
ಭೀಷ್ಮ ನವಗುಣವೆಣಿಸದೆ ಶರಶಯ್ಯದಿ ದರ್ಶನವಿತ್ತ ||
ವಿಶೇಷ ಕರುಣಾಳು ನಮ್ಮ ಶ್ರೀಕೃಷ್ಣವಿಠ್ಠಲ ||
210. ಶುದ್ಧದೇಹ, ಶುದ್ಧ ಮನ ಆಲೋಚನೆಗೆ |
ಸದಾವರ್ಜಿಸಿ ಐದು ತರದ ಭೋಜನ ||
ಕ್ಷುದ್ರ ದೇವತೆಗಿಟ್ಟ ಅನ್ನ, ಮಾಂಸಯುಕ್ತಾನ್ನ |
ಶೂದ್ರಾನ್ನವಲ್ಲದೆ ರಜಸ್ವಲಾದೃಷ್ಟಾನ್ನ ||
ಇದಲ್ಲದೆ ಬೇಡಿ ತಂದ ಅನ್ನ, ಎಂಜಲನ್ನ |
ಇದೆಲ್ಲ ನಿಷಿದ್ಧ ಬಾಧಕ ಸಾಧಕರಿಗೆ ||
ಮೊದಲು ಆಚರಣೆ ಜೊತೆ ವೈರಾಗ್ಯ |
ತದನಂತರ ಆಧ್ಯಾತ್ಮಜ್ಞಾನದಿ ಶ್ರೀಕೃಷ್ನವಿಠ್ಠಲನ ಕೃಪೆ ಗಳಿಸಿರಿ ||
211. ದೊರೆ ಮೆಚ್ಚಲುವೀವ ಧನ, ಕನಕ |
ವಸ್ತ್ರ ವಿಶೇಷ ವಾಹನಾದಿ ಗಳ ||
ಸರ್ವಥಾ ಸ್ವಗೃಹವಿತ್ತು ದಾಸನಾಗನು |
ಪರಮಾತ್ಮಗೆ ಪುತ್ರ ನಾನೆಂದು ಬಿನ್ನೈಸೆ ||
ಸ್ಮರಿಸಿ ಬಾಲ ಸ್ವಭಾವ ಕ್ಷಮಿಸಿ ದೋಷ |
ಸರ್ವತ್ರ ಪಿತನಂತೆ ರಕ್ಷಿಸುವ ಶ್ರೀಕೃಷ್ಣವಿಠ್ಠಲ ||
212. ಪರಮ ಪವಿತ್ರ ಶ್ರವಣ ಮಂಗಳನ |
ಕೀರ್ತಿಸಲು ಸರ್ವಪಾಪ ನಾಶ ||
ಸ್ತ್ರೀರೂಪಧರಿಸಿ ದೈತ್ಯರ ವಂಚಿಸಿ |
ಸುರರಿಗೆ ಅಮೃತಪಾನಿಸಿದ ರೂಪದಿ ||
ಪಾರ್ವತಿಪತಿಯನು ಮೋಹಿಸಿ ಕೆಡಿಸಿ |
ಓದಿಸಿದ ಜ್ಞಾನವ ಶ್ರೀಕೃಷ್ಣವಿಠ್ಠಲನ ಮಾಯೆ ಜಯಿಸರ್ಯಾರು ||
213. ರುದ್ರನೊಡನೆ ಕಾದಾಡಿ ಮಾಯೆ ಹರಿದ |
ಇಂದ್ರನ ಗರ್ವಭಂಗಿಸಿ ಗೋಪರಕಾಯ್ದ ||
ವಧಿಸಿ ಕಂಸನ ತಾಯಿಯ ಸೆರೆ ಬಿಡಿಸಿದ |
ಚಂದ್ರನ ಅಕ್ಷಮ್ಯಪರಾಧ ಸಹಿಸಿದ ||
ಬೈಯ್ದು ಶಿಶುಪಾಲಗಿತ್ತ ಸದ್ಗತಿ |
ಎದೆಗೊದ್ದ ಭೃಗನಪಾದ ಪೂಜಿಸಿದ ಶ್ರೀಕೃಷ್ಣವಿಠ್ಠಲ ಸಹಿಷ್ಣುತೆಯ ಶಿಖರವಲ್ಲವೆ ? ||
214. ದಾಸನಂತೆ ಪಾಂಡವರ ನಿರುತ ಸೇವಿಸಿದ |
ಕುಸಿದ ಅರ್ಜುನಗೆ ಜ್ಞಾನ ಬೋಧಿಸಿದ ||
ಹಸಿವು ತಣಿಸಿದ ಗೋಪಾಲಕರ ಕಾಡಿನಲಿ |
ರಾಸಲೀಲೆಯಲಿ ಗೋಪಿಯರ ರಮಿಸಿದ ||
ಏಸೊಂದು ಸುರರಪರಾಧ ಸಹಿತ ಕ್ಷಮಿಸಿದ |
ಅಸುರಾಂತಕ ನಮ್ಮ ಶ್ರೀಕೃಷ್ಣವಿಠ್ಠಲ ಗುಣಪೂರ್ಣ ||
215. ನಾರುವ ದೇಹದಿ ಜಡದಿ ಬಿದ್ದಿರುವೆ |
ತೋರುತ ಎತ್ತಿ ಹಿಡಿದಿರುವೆ ಪಾಪಗಳ ||
ತರಿದು ಅರಿಗಳ ಶಿರ ಬಗ್ಗಿಸು |
ಮರ್ಯಾದೆ ದಾಟದೆ ಜ್ಞಾನಗಳಿಸುವಂತೆ ||
ಅರಿವು ಶುದ್ಧವಾಗಿ ಚಂಚಲತೆ ನೀಗಿ |
ಭದ್ರವಾಗಿ ನಿನ್ನೆಡೆ ಬರುವಂತೆ ಮಾಡೋ ಶ್ರೀಕೃಷ್ಣವಿಠ್ಠಲ ||
216. ಕಾಣುವ ಜಗವ ಬಣ್ಣಿಸಲೇಕೆ ? |
ಕಾಣದ ದೇವನ ಬಣ್ಣಿಸಲೆಂತು ? ||
ಕಣ್ಣಿಗೆ ಕಣ್ಣಾದವನ ಕಾಣುವುದೆಂತು ? |
ಕಣ್ಣಿಗೆ ಕಾಣದಿದ್ದರೂ ಮನದಿ ನಿಲ್ಲು ||
ಹಣವಂತ ನಾನಲ್ಲ ಗುಣವಂತ ನಾನಲ್ಲ |
ಒಣಮಾತಿಗೆ ಒಲಿಯುವ ನೀನಲ್ಲ ||
ಮಣಿಸುವೆ ಶಿರ ಬಗ್ಗಿ ಬೇಡುವೆ |
ಕಣ್ಣು ಬಿಟ್ಟು ನೋಡು ಒಂದು ಬಾರಿ ||
ಕ್ಷಣ ಕಾಲವಾದರೂ ಎನ್ನನು ದೃಷ್ಟಿಸು |
ಕಣ್ಮಣಿ ನೀನು ಕಡೆಗಾಣಿಸ ಬೇಡೆನ್ನ ||
ಕಾಣಿಸುವೆ ಎಂದು ತಿಳಿಸೊಮ್ಮೆ ಶ್ರೀಕೃಷ್ಣವಿಠ್ಠಲ ||
1
217. ನೀನಿತ್ತ ದೇಹ, ನೀನಿತ್ತ ತಾಯ್ತಂದೆ, ನೀನಿತ್ತ ಪತಿ, ಸುತರು |
ನೀನಿತ್ತ ಒಡನಾಡಿಗಳು, ನೀನಿತ್ತ ಪರಿಸರ, ನೀನಿತ್ತ ಮಾತು ||
ನೀನಿತ್ತ ಗುರುಗಳು, ನೀನಿತ್ತ ವಿದ್ಯೆ, ನೀನಿತ್ತ ಅವಕಾಶಗಳು |
ನೀನಿತ್ತ ಆಹಾರ, ನೀನಿತ್ತ ಆರೋಗ್ಯ, ನೀನಿತ್ತ ಧನ, ಕನಕಾದಿಗಳು ||
ನೀನಿತ್ತ ಮೊದ, ಪ್ರಮೊದ, ನೀನಿತ್ತ ಜ್ಞಾನ, ನೀನಿತ್ತ ಭಕ್ತಿವೈರಾಗ್ಯ |
ನೀನಿತ್ತ ಮರ್ಯಾದೆ, ನೀನಿತ್ತ ಆದರ ಪುರಸ್ಕಾರಗಳು ನಿನ್ನದಲ್ಲವೇ ? ||
ನಿನ್ನ ಒಂದು ದೃಷ್ಟಿಗಾಗಿ ಕಾತರಿಸುತಿರುವೆ, |
ನಿನ್ನ ಒಂದು ಬಾರಿ ದರುಶನಕೆ ಹಾತೊರೆಯುತಿರುವೆ ||
ನಿನ್ನ ನೊಡಿದರೆ ಸಕಲವನ್ನು ನೊಡಿದಂತೆ |
ನಿನ್ನ ತಿಳಿದರೆ ಸಕಲವನ್ನು ತಿಳಿದಂತೆ ||
ನಿನ್ನ ಜೊತೆ ಮಾತಾಡಿದರೆ ಎಲ್ಲ ತೃಪ್ತಿಯಾದಂತೆ |
ನನ್ನ ಹಿಂದು-ಇಂದು-ಮುಂದಿನ ಸಂಗಾತಿ ನಿನ್ನ ಬಿಟ್ಟರನ್ಯರಿಲ್ಲ ||
ನಿನಗಾಗಿ ಪರಿತಪಿಸುತಿರುವೆ, ಎನ್ನ ಎಡಬಿಡದೆ ಕಾಯುವವ ನೀನೇ |
ನೀನು ಮಾಡಿಸಿದಂತೆ ಮಾಡುವೆ |
ನೀನು ನುಡಿದಂತೆ ನುಡಿವೆ ||
ನೀನು ನಡಿಸಿಂತೆ ನಡೆವೆ |
ನೀನು ಕುಣಿಸಿದಂತೆ ಕುಣಿವೆ ||
ನನ್ನ ಜನ್ಮ-ಜೀವನ, ಉಸಿರು ನೀನೇ |
ನಿನ್ನ ಬಿಟ್ಟರನ್ನವೇನು ಇಲ್ಲ, ನಿನ್ನಿಂದ ನಾನು ನನ್ನದೇನಿಲ್ಲ ||
ನಿನ್ನನ್ನೇ ಅನಾದಿಯಿಂದ ಅನಂತಕಾಲದವರೆಗೆ ನಂಬಿರುವೆ |
ನನ್ನಿಂದಾದ ಪುಣ್ಯದಿಂದಾಗಲು ಇದೆಲ್ಲಾ ಸಾಧ್ಯವಿಲ್ಲ ||
ನನ್ನ ಕೈ ಬಿಡದೆ ನಡೆಸಿ ನಿನ್ನವಳನ್ನಾಗಿಸಿಕೋ |
ನೀನೆ ಜನ, ಜೀವನ, ಜಗತ್ತು, ಅವಕಾಶ ಪರಿಸರ ||
ನೀನೆ ಮಣ್ಣು, ಗಾಳಿ, ಬೆಂಕಿ, ನೀರು, ಆಕಾಶವೆಲ್ಲ |
ಎನ್ನ ಹಿಂದೆ-ಮುಂದೆ, ಅಕ್ಕ-ಪಕ್ಕದಲ್ಲಿದ್ದು ರಕ್ಷಿಸುವವ ||
ಎನ್ನ ಅಪರಾಧಗಳ ಚಿತ್ತಕ್ಕೆ ತರದೆ ಅಲಕ್ಷಿಸು ಸದಾ |
ನಿನ್ನ ಅನಂತ ಕರುಣಿಯ ಫಲವಿದು, ಸರ್ವೋದ್ಧಾರಕನೇ ||
ನನ್ನನ್ನು ಕಾಪಾಡಿದಂತೆ ಸಕಲರನ್ನೂ ಕಾಪಾಡಿ ಉದ್ಧರಿಸು |
ನಿನ್ನನು ಅರಿಯದೇ, ಕಾಣಲು ಹಂಬಲಿಸದರೆ ಜನ್ಮ ವ್ಯರ್ಥ ||
ಎನೆಲ್ಲಾ ಕೊಟ್ಟ ದೊರೆ ನಿನಗೆ ನಾನೇನು ಕೊಡಬಲ್ಲೆ |
ಎನ್ನ ಶಿರ ನಿನ್ನಚರಣದಲ್ಲಿಟ್ಟು ಸದಾ ನಮಿಸುವಂತೆ ಅನುಗ್ರಹಿಸು ||
ನಿನ್ನಲಿ ಭಕ್ತಿ ಎಡಬಿಡದೆ ಸದಾ ಹೆಚ್ಚುತಿರಲಿ, ಕುಂದುವುದು ಬೇಡಾ |
ಎನ್ನ ಪ್ರಭೋ, ನಿನ್ನಲಿ ನಿಶ್ಚಲ, ನಿರ್ಮಲ, ನಿರಂತರ, ನಿಜಭಕುತಿ ಕರುಣಿಸು ||
ಎನ್ನ ಜನುಮ ನಿನ್ನ ಸೇವೆಯಲಿ ಸವೆದು ಸಾರ್ಥಕವಾಗಿಸಿಕೋ |
ಎನ್ನ ಅನ್ನ, ನೀರು, ಉಸಿರು, ಜೀವ ನೀನಾಗಿರುವಿ ||
ನಿನ್ನಿಂದ ಅನ್ಯವಾದುದೇನೂ ಎನಗೆ ಬೇಡ ||
ನೀನು ಸಕಲಜನಕ , ಅನುಗ್ರಹಿಸುವವ |
ನೀನಿಲ್ಲದ ಯಾವ ವಸ್ತುವೂ ಇಹ-ಪರದಲ್ಲಿಲ್ಲ ||
ನನ್ನಲ್ಲಿರುವ ತತ್ವಾಭಿಮಾನಿ ದೇವತೆಗಳಂತರ್ಗತನಾಗಿ |
ಎನ್ನ ಇಂದ್ರಿಯಾಭಿಮಾನಿ ದೇವತೆಗಳಂತರ್ಗತನಾಗಿ ||
ಎನ್ನ ಮುಖ್ಯಪ್ರಾಣಾಂತರ್ಗತನಾದ ಎನ್ನ ಬಿಂಬಸ್ಥ |
ನೀನು ಶ್ರೀಕೃಷ್ಣವಿಠ್ಠಲ ಕರುಣೆಯ ಕಡಲು ||
ನಿನ್ನಲ್ಲಿ ಅಮಲ ಭಕ್ತಿ ಇರುವಂತೆ ದಯಮಾಡು ||
1
218. ‘ಮಾತೃದೇವೋಭವ’ ಏಕೆ? ಮಾತೆ ಶ್ರೇಷ್ಠ ಏಕೆ ||ಪ||
ಮಾತೆ ಜನ್ಮದಾತೆ | ಮಾತೆ ಜೀವನದಾತೆ ||
ಮಾತೆ ಅನ್ನದಾತೆ | ಮಾತೆ ಮೊದಲಗುರು ||1||
ಮಾತೆ ಗುಣದಾತೆ | ಮಾತೆ ವಿದ್ಯಾದಾತೆ ||
ಮಾತೆ ಮಾತು ಕಲಿಸಿದಾಕೆ | ಮಾತೆ ರಕ್ಷಿಸುವಾಕೆ ||2||
ಮಾತೆ ಕನಿಕರಮೂರ್ತಿ | ಮಾತೆ ಕ್ಷಮಾಮೂರ್ತಿ ||
ಮಾತೆ ಮಡಿಲುಶಾಂತಿಸ್ಥಾನ | ಮಾತೆ ಸರ್ವಪ್ರದಾತೆ ||3||
ಮಾತೆ ಕಷ್ಟ ಸಹಿಷ್ಣು | ಮಾತೆ ಮಮತೆ ಕಡಲು ||
ಮಾತೆ ಮಾಡು-ಬೇಡ ತಿಳಿಸುವಾಕೆ | ಮಾತೆ ಸಹನಾಮುರ್ತಿ ||4||
ಮಾತೆ ಪ್ರಾಮಾಣಿಕ ಸ್ವರೂಪ | ಮಾತೆ ಸಂಸ್ಕೃತಿ ಪ್ರದಾತೆ ||
ಮಾತೆ ಋಣ ಎಂದಿಗೂ ತೀರದು | ಮಾತೆ ಶ್ರೀಕೃಷ್ಣವಿಠ್ಠಲನ ಚಲಪ್ರತಿಮೆ ||5||
219 ಮಾತೆ ನವಮಾಸ ಭಾರಪೊತ್ತು ನೋವಿನಲ್ಲೂ ಸುಖ ಕಂಡವಳು |
ಉತ್ತಮ ಆಹಾರವಿತ್ತು ತ್ಯಾಗದಿ ಸಲಹಿ ಜೀವನವಿತ್ತವಳು ||
ಪುತ್ರನ ಭಾರವೆಂದೆಣಿಸದೆ ಪೋಷಕಳಾದವಳು |
ಪ್ರತಿ ಉಪಕಾರ ಬಯಸದೆ ನಿ:ಸ್ವಾರ್ಥಿಯಾದವಳು ||
ಪುತ್ರನಿಗೆ ತಾಯಿ ಭಾರವೆಂದೇಕೆ ಎಣಿಸಬೇಕು |
ಪುತ್ರನಿಲ್ಲದಿರೆ ಗತಿ ಇಲ್ಲ ಎನ್ನುವರು ||
ಗತಿ ಯಾರು ಯಾರಿಗೆ ಎಂದು ತಿಳಿಯದು |
ಗತಿ ಪ್ರದ ಶ್ರೀಕೃಷ್ಣವಿಠ್ಠಲನೇ ತಿಳಿಸಬೇಕು ||
220. ಪರಮಶಿವ ಪರಮ ಮಂಗಳ ಕೈಲಾಸ ಪತಿ |
ಪರಮೂರುತಿ ಕಾರುಣ್ಯನಿಧಿ ಉಮಾಪತಿ ಶಂಭೋ ||ಪ||
ವಿರೂಪಾಕ್ಷ ಗಂಗಾಧರ ನಟರಾಜ |
ಚಂದ್ರಚೂಡ ನೀಲಕಂಠ ಡಮರುಧರ ||
ಪಾರ್ವತಿ ಪತಿ ಶಿವಶಂಕರ ನಂದಿವಾಹನ |
ರುದ್ರ ಪರಮೋತ್ತಮ ವೈಷ್ಣವೋತ್ತಮ ||1||
ಧರಿಪ ರುಂಡಮಾಲೆ ತ್ರಿಶೂಲಧಾರಿ |
ಶಿರ ತರಿದು ಮಗನ ಅಹಂಕಾರ ಅಳಿದು |
ಕರಿ ಶಿರವಿಟ್ಟು ವಿಘ್ನೇಶ್ವರನ ಮಾಡಿದ ||
ಶ್ರೀರಾಮ ಭವತಾರಕ ಮಂತ್ರ ಸತಿಗುಪದೇಶಕ ||2||
ವೈರಾಗ್ಯನಿಧಿಯೇ ಮನೋ ನಿಯಾಮಕನೇ |
ಗೌರೀಶ ಈಶನಲಿ ಮನವ ನಿಲ್ಲಿಸಿ ||
ನಿರ್ಮಲ ಭಕುತಿಯಲಿ ಏಕಚಿತ್ತದಿ |
ನಿರುತ ಆರಾಧಿಸುವಂತೆ ದಯೆತೋರೋ ||3||
ಹರಿಹರ ರೂಪದಿ ಭಕ್ತಿಯಲಿ ಅಭೇದ ತೋರಿ |
ಗೌರವವಿತ್ತೆ ಸತಿಗೆ ಅರ್ಧನರನಾರಿರೂಪದಿ ||
ಶೀಘ್ರ ತಪಕೆ ಒಲಿದು ವರ ನೀಡುವ ಉದಾರಿ |
ಕರುಣಾಕರ ಸುಂದರ ಶ್ರೀಕೃಷ್ಣವಿಠ್ಠಲನ ನಿಜಭಕುತ ||4||
221. ಇಟ್ಟಿಗೆ ಕೊಟ್ಟ ಪುಂಡಲೀಕಗೆ ವರವಿತ್ತ |
ಕೊಟ್ಟ ಐಶ್ವರ್ಯ ಮುಷ್ಟಿ ಅವಲಕ್ಕಿ ಇತ್ತ ಸುದಾಮಗೆ ||
ಕೆಟ್ಟ ಮಾತಾಡಿದ ಶಿಶುಪಾಲನ ಹೊಟ್ಟೆಯೊಳಿಟ್ಟ |
ಗಟ್ಟಿಯಾಗಿ ದರುಶನವಿತ್ತ ಭೀಷ್ಮರ ಅವಗುಣಗಳೆಣಿಸದೆ ||
ಸೃಷ್ಟೀಶ ಶ್ರೀಕೃಷ್ಣವಿಠ್ಠಲಗಿಂತ ದಯಾನಿಧೆ ಯಾರಿಹರು ||
222. ಬಿಟ್ಟು ವೈಕುಂಠ ಧರೆಗಿಳಿದ ಭಗವಂತ |
ದುಷ್ಟ ಜನರ ವಧೆಗೆ ಸಜ್ಜನರುದ್ಧಾರಕ್ಕಾಗಿ ||ಪ||
ಸುರರೆಲ್ಲ ತಮ್ಮ ಸಾಧನೆಗಾಗಿ, ಸಾನಿಧ್ಯಕ್ಕಾಗಿ |
ಧರೆಗಿಳಿದು ಸಾಂಗತ್ಯದಿ ಸುಖಿಸಿದರು ||
ಧರಿಸಿ ವಿವಿಧ ರೂಪದಿ ಸೇವೆಗೈಯ್ದರು |
ಪರಮಪಾವನ ಧರ್ಮಯುದ್ಧದಿ ಪಾಲುದಾರರು ||1||
ಇರುತ ಎಲ್ಲರೊಳಗೊಂದಾಗಿ ಮಾನವನಂತೆ |
ತೋರಿದ ಅನೇಕ ಸಹಜ ಲೀಲೆಗಳ ||
ಗುರುತಿಸಲಿಲ್ಲ ಮಂದಮತಿಗಳವನ ವಿಶೇಷವ |
ದರುಶಿಸಿದರೂ ನಿತ್ಯ ನಿಜಭಕುತಿ ಬರಲಿಲ್ಲ ||2||
ಜ್ಞಾನಬೋಧಿಸಿ, ನೀತಿಮಾರ್ಗದಿ ನಡೆದು ತೋರಿದ |
ಅನ್ಯಾಯಗಳ ವಿರುದ್ಧ ಬಿಡದೆ ಸಮರ ಸಾರಿದ ||
ಸನ್ನ್ಯಾಯ ಮಾರ್ಗದಿಂ ಸಕಲರ ಮನಗೆದ್ದ |
ಚಿನ್ಮಯ ಮೂರುತಿ ಸಹೃದಯವಂತ ಶ್ರೀಕೃಷ್ಣವಿಠ್ಠಲ ||3||
223. ಪೋರ ಬಂದಿಹನೆ ನಿಮ್ಮನೆಗೆ ಬಾಲಕರೊಡಗೂಡಿ |
ಬರಿದೇ ಗೊಂದಲ ಮಾಡಿ ಓಡಿ ಬಿಡುವ ತುಂಟ ||ಪ||
ನಿಲುಕದಂತೆ ಇವಗೆ ಮೇಲೆ |
ನೆಲುವಿಗೆಯಲ್ಲಿ ಬೆಣ್ಣೆ ಇಡಲು ||
ಮೆಲ್ಲಗೆ ಯಾವ ಮಾಯೆಯಲ್ಲೋ |
ಕಳ್ಳ ಬೆಕ್ಕಿನಂತೆ ಬಂದು ಸೂರೆ ಮಾಡುವ ||1||
ಎಲ್ಲ ಗಡಿಗೆ ಒಡೆದು ಹಾಕುವ |
ಪಾಲು, ಮೊಸರನ್ನೆಲ್ಲಾ ಚೆಲ್ಲಾಡಿ ||
ಎಲ್ಲರಿಗೂ ಸಮ ತಿನ್ನಲು ಕೊಡುವ |
ಮಲಗಿದ್ದ ಶಿಶುವ ಚಿವುಟಿ ಅಳಿಸುವ ||2||
ಮೂಡಿದ ಮೊಸರಿನಲಿ ಪುಟ್ಟ ಪಾದ |
ನೋಡಿ ಹಿಡಿಯಲು ಹಿಂದೆ ಪೋದರೆ ||
ಓಡಾಡಿಸಿ ಕೈಗೆ ಸಿಗದೆ ಜಾರಿಕೊಳ್ಳುವ |
ಬಿಡೆನು ಅವನೊಮ್ಮೆ ಸಿಕ್ಕರೂ ಸಾಕು ||3||
ಮಾಯಗಾರನಿವ ದೊಡ್ಡ ಮಾಯಗಾರ |
ಬೈಯ್ದು ಹುಸಿ ಮುನಿಸು ತೋರಿದರೂ ||
ಬಯಸುವುದು ಹೃದಯ ಅವ ಬರಲೆಂದು |
ಕಾಯುವೆ ನಿತ್ಯ ಶ್ರೀಕೃಷ್ಣವಿಠ್ಠಲನಿಗಾಗಿ ||4||
224. ಬಾಗಿದ ವಂಶಿಗೆ ಜೇನುಹುಟ್ಟು ಭಾರವೆ ? |
ಬಳ್ಳಿಗೆ ಕುಂಬಳದಂತೆ ||
ಬಾಗಿನ ಕೊಂಬೆಯೆ ಮಹಾಲಕುಮಿ |
ಮೂಲ ಪ್ರಕೃತಿಗಾಶ್ರಯೆ ||
ತೂಗಿ ತೊನೆದಾಡುವ ಜೇನು ಹುಟ್ಟು ಪ್ರಾಣ |
ಸರ್ವಜೀವಕ್ಕಾಧಾರ ||
ಹೋಗಿ ವಿವಿಧ ಮಕರಂದ ಹೀರುವ ಹುಳು-ದೇವತೆಗಳು |
ಪರಮಾತ್ಮನ ಗುಣಗಾನಕ್ಕಾಧಾರ ||
ಕಂಗೊಳಿಸುವ ಚಿಕ್ಕ ತೂತುಗಳ ನಾಡಿಯಲ್ಲಿ ಜೇನಿದೆ |
ಜ್ಞಾನಾನಂದಮಯ ||
ಸುಗಂಧ ಭರಿತ ಕೆಂಪಾದ ಸವಿಜೇನು ಶ್ರೀಕೃಷ್ಣವಿಠ್ಠಲ |
ಮಧುವಿದ್ಯೆಯ ಮೂಲ ||
=
225. ಸಾಧು, ಸಂತರಿಗೆ ಕಂಡೂ ಕಾಣದವ |
ಸಿದ್ಧ, ಗಂಧರ್ವರಿಗೆ ಒಲಿಯದವ ||
ಬುದ್ಧಿಯಿಂದ ತಿಳಿಯಲಾಗದವ |
ಶುದ್ಧ ಹೃದಯದಿ ಬೇಡಿಕೊಳ್ಳಲು ||
ಬುಧರಿಗೆ ದಯದಿ ಒಲಿವಾ ಶ್ರೀಕೃಷ್ಣವಿಠ್ಠಲ ||
226. ಈಶ ಪ್ರೇರಿತ ಸರ್ವವೂ, ಈಶ ಪ್ರೇರಿತ |
ಈಶ ಶಕ್ತಿ ಸರ್ವಕ್ರಿಯಾ ಪ್ರೇರಿತ ||ಪ||
ಈಶ್ವರ ನಿಯತವು ಸರ್ವವಸ್ತು ಸ್ವಭಾವ |
ನಾಶ, ನಿರ್ಮಾಣ ನಿಯಾಮನ ಸರ್ವೇಶನ ಇಚ್ಛೆ ||
ಈಶಾಜ್ಞೆ ಮೀರಲು ಅಸಾಧ್ಯ ಎಲ್ಲರಿಗೂ |
ಶೇಷವಿಷ ಮೇಲೆರಲು ಈಶಪ್ರೇರಣೆ ||
ವಿಷ ಕುಡಿದ ಬಾಲಕ ಪ್ರಹ್ಲಾದ ಏನಾದ ||1||
ವಿಷವೇನು ಮಾಡಿತು ಕಾಲಕೂಟ ಕುಡಿದ ಶಿವನ ||
ವಿಷ ಸ್ತನ್ಯ ಪಾನಿಸಿದ ನಂದನಕಂದ ಏನಾದ |
ಈಶತ್ವ-ವಶತ್ವ ಸರ್ವಕಾಲಿಕ ಸತ್ಯ ||
ದೊಷ ದೂರನ ಒಪ್ಪದವ ಎಲ್ಲೂ ಸಲ್ಲನು |
ವಿಶೇಷ ಈಶ ಈ ನಮ್ಮ ಶ್ರೀಕೃಷ್ಣವಿಠ್ಠಲ ||2||
227. ಕ್ಲೇಶವರ್ಜಿತ ಜನ್ಮ-ಜರಾ-ಮೃತ್ಯುರಹಿತ |
ಶೇಷ ಶಾಯಿ- ಕ್ಷುಧಾ-ತೃಷೆರಹಿತ ||
ದೋಷದೂರ, ವಿಧಿ-ನಿಷೇಧರಹಿತ ಸ್ವಾಮಿ |
ನಾಶರಹಿತ ಅಪ್ರಾಕೃತ ದೇಹಿ ನಿತ್ಯಮುಕ್ತ ||
ಆಶಾದೂರ ಆದ್ಯಂತರಹಿತ ನಿರವದ್ಯ |
ಶಾಶ್ವತ ತ್ರಿಧಾಮವಾಸಿ ಲಕ್ಷ್ಮೀರಮಣ ||
ಶೇಷ್ಠ ನಮ್ಮ ಶ್ರೀಕೃಷ್ಣವಿಠ್ಠಲ ಪರಮ ಪುರುಷೋತ್ತಮ ||
228. ಎನ್ನ ಅಪರಾಧಗಳನೇಕ ದಯೆತೋರು ||ಪ||
ಎನ್ನ ಕ್ಷಮಿಸು ತಾಯೇ ಕ್ಷಮಾಯಾ ಧರಿತ್ರೀ ||ಅಪ ||
ಉಗುಳುವುದು, ತುಳಿಯುವುದು |
ಅಗಿಯುವುದು, ಹುಗಿಯುವುದು ||
ಬಗೆಯುವುದು, ಸುಡುವುದು |
ಬಗೆ ಬಗೆಯ ಅಪರಾಧಗಳನೇಕೆ ||1||
ತಿಳಿದೂ ತಿಳಿಯದೆ ಮಾಡುವ ತಪ್ಪು |
ಒಳ್ಳೆಯದ್ದು ಕೆಟ್ಟದ್ದು ಉದ್ದೇಶಪೂರಿತ ||
ತಿಳಿಯದೆ ನನ್ನದೆಂಬ ಸ್ವಾರ್ಥತನದಿ |
ಮಾಳಿಗೆ ಮನೆಕಟ್ಟಿ ಶಾಶ್ವತ ಸುಖದ ಚಿಂತನೆ ||2||
ತುಣುಕು ಭೂಮಿ ಒಡೆತನಕಾಗಿ ಹೋರಾಟ |
ಅಣ್ಣ-ತಮ್ಮ, ತಂದೆ-ಮಕ್ಕಳ ತಿಕ್ಕಾಟ ವಿರೋದ ||
ಒಣ ಕಣವೂ ಸತ್ತ ನಂತರ ಜೊತೆಬಾರದೆಂಬ ಸತ್ಯ |
ಮನದಿ ತಿಳಿಯದಾದೆ ಶ್ರೀಕೃಷ್ಣವಿಠ್ಠಲನರ್ಧಾಂಗಿಯೆ ||3||
229. ಹೊತ್ತು ಹೋಗದೆಂದು ಕತ್ತೆಯಂತೆ ತಿರುಗಬಾರದು |
ಮುಕ್ತಿಗಾಗಿ ಸಾಧನೆ ಏಕಾಂತದಿ ಸಾಧಿಸಬೇಕು ||
ಪಂಕ್ತಿಯಲಿ ಪರಪಂಕ್ತಿ ಎಂದೂ ಮಾಡಬಾರದು |
ಮತ್ತಿನಲ್ಲಿ ಜೀವನವೆಂದೂ ಕಳೆಯಬಾರದು ||
ಸತೀ ಸುತರಲಿ ಅತೀರಕ್ತಿ ತೋರಬಾರದು |
ಆಸ್ತಿ ಸಂಗ್ರಹದಲ್ಲಿ ಆಸಕ್ತಿ ಇರಬಾರದು ||
ಸ್ವಂತದ್ದೇ ಆದರೂ ಎಲ್ಲ ಬಿಟ್ಟು ಹೋಗಬೇಕು |
ಸ್ತುತಿ ನಿಂದೆಗೆ ಎಂದೂ ಒಳಗಾಗಬಾರದು ||
ಮಾತು ಬರುವುದೆಂದು ಬರೀ ವಾದಿಸಬಾರದು |
ವ್ಯರ್ಥಮಾತು ಆಡುವುದಕ್ಕಿಂತ ಮೌನವೇ ಲೇಸು ||
ಅತೀಯಾಗಿ ತಿಂದು ಅಜೀರ್ಣಮಾಡಿಕೊಳ್ಳಬಾರದು |
ನಿತ್ಯ ಹಂಗಿನ ಹುಗ್ಗಿ ಉಂಬುವುದಕ್ಕಿಂತ ಉಪವಾಸವೇ ಮೇಲು ||
ಅತ್ತು ಪರರ ಕರುಣೆ ಎಂದೂ ಪಡೆಯಬಾರದು |
ಸತ್ತರೂ ಪರರು ನೆನೆಸುವಂತೆ ಬಾಳಬೇಕು ||
ಹೆತ್ತವರ ಮನವೆಂದೂ ನೋಯಿಸಬಾರದು |
ಹತ್ತು ಹಲವು ದೈವಾರಾಧನೆ ವ್ಯರ್ಥಪೋಪುದು ||
ಕರ್ತೃ ಹೆದ್ದೈವ ಸ್ವಂತಂತ್ರನ ತಿಳಿದು ನಂಬಿರಿ |
ಅತ್ಯುತ್ತಮ ಶ್ರೀಕೃಷ್ಣವಿಠ್ಠಲನ್ನೇ ಭಜಿಸಿರಿ ||
230. ಅನುಪಮ ಮುಖ್ಯಪ್ರಾಣನ ಕಾರ್ಯಕೆ ಇಲ್ಲ ಸಮ |
ಜ್ಞಾನಕಾರ್ಯ, ಬಲಕಾರ್ಯವೆರಡೂ ಅನುಪಮ ||
ಹನುಮನಾಗಿ ಹಾರಿದ ನೂರು ಯೋಜನ ಸಾಗರ |
ದಣಿಯದೆ ಸ್ವಾಮಿಯ ಮನದಂತೆ ನಡೆದ ಭೀಮನಾಗಿ ||
ಆನಂದತೀರ್ಥರಾಗಿ ತಾರಿಸಿದರು ವೇದ ಸಾಗರ |
ಧ್ಯಾನಿಸಿ ಶ್ರೀಕೃಷ್ಣವಿಠ್ಠಲನ ಪಾದಪದುಮವ ||
ಶ್ವಾಸ ಜಪ ಜಪಿತ ಮುಖ್ಯಪ್ರಾಣ ಅಜಪಾ |
ಹಂಸವೆಂದರೆ ದೊಷರಹಿತ ಗುಣಪೂರ್ಣ ||
ಸೋSಹಂ ಎಂದರೆ ಅವ್ಯಕ್ತ-ಅಹೇಯನಾದ |
ಸ್ವಾಹಾ ಎಂದರೆ ಸ್ವಾಖ್ಯರಸ ಸ್ವೀಕರಿಪನ ||
ಬ್ರಹ್ಮ-ವಾಯು ಜಪಕೆ ಹರಿಯೇ ನಿಯಾಮಕ |
ಸಹಭೋಗ ಭಾಗಿ ಶ್ರೀಕೃಷ್ಣವಿಠ್ಠಲನ ನಿಜದೂತ ||