ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 3.4

232. ಇಪ್ಪತ್ತೊಂದು ಸಾವಿರ ಮೇಲೆ ನೂರು |

ಜಪಮಾಡುವ ನಾಲ್ಕು ಶರೀರಗಳಲಿ ||

ಇಪ್ಪುದ್ದು ಮೊತ್ತ ಎಂಬತ್ತಾರು ಸಾವಿರ ನಾನೂರು |

ಜಪ ಮಾಳ್ಪ ಭಕ್ತನಿಗೆ ಅನುರೂಪ ಫಲ ಬ್ರಹ್ಮಪಟ್ಟ ||

ನಿಷ್ಪಕ್ಷಪಾತಿ ಶ್ರೀಕೃಷ್ಣವಿಠ್ಠಲ ಕೊಡುವ ಸಾಲಿಗನಂತೆ ||

233. ಹದಿನಾಲ್ಕುಲೋಕದ ಅನಂತ ಜೀವರಾಶಿಗೆ |

ಎಡಬಿಡದೆ ಮಹಾ ಬ್ರಹ್ಮಕಲ್ಪಕಾಲ ಶ್ವಾಸಜಪ ||

ಮಾಡಿ ಪೂರ್ಣಭಕ್ತಿಯಲಿ ಸಮರ್ಪಿಸಲು |

ಮೊದಲ ಸ್ವಾಖ್ಯರಸಾನಂದ ಸಹಭೋಗವಿತ್ತು ||

ಒದಗಿಸುವ ಕಲ್ಪಪರ್ಯಂತ ಬ್ರಹ್ಮಪದವಿ ಫಲರೂಪದಿ |

ಇಂದಿರಾಪತಿ ಶ್ರೀಕೃಷ್ಣವಿಠ್ಠಲ ಪ್ರಸಾದಿಸುವ ಸೇವೆಗೆ ತಕ್ಕಂತೆ ||

234. ಮೋದದಿ ಚತುರ್ವಿಂಶತಿ ರೂಪದಿ ಲೀಲೆ ತೋರುವ |

ಕುಂದಿಲ್ಲದ ಒಬ್ಬನೇ ಭಗವಂತ ಅನೇಕ ನಾಮದಿ ||ಪ||

ಚೆಂದದಿ ಆನಂದಿಸಿ ನಿತ್ಯ ಆನಂದವೀವ ಯೋಗ್ಯತಾನುಸಾರದಿ ||ಅಪ||

ಮುದದಿ ಸುರರಿಗೆ ಸುಖವೀವ ಕೇಶವ ರೂಪದಿ |

ಮಡದಿ ಸಹಿತ ಶೇಷತಲ್ಪನಾಗಿರುವ ನಾರಾಯಣ ||

ಹೆಂಡತಿಗೆ ನಿತ್ಯಾಶ್ರಯನಾಗಿರುವ ನಿತ್ಯಾವಿಯೋಗಿ ಮಾಧವ |

ವೇದ, ಗೋ, ಬ್ರಾಹ್ಮಣಪ್ರಿಯ ಗೋವಿಂದ ||1||

ಎಡಬಿಡದೆ ಎಲ್ಲಡೆ ಸದಾ ವ್ಯಾಪಿಸಿರುವ ವಿಷ್ಣು |

ಮದವೇರಿದ ಅಸುರರ ದಮನಿಸಿದ ಮಧುಸೂದನ ||

ಬೇಡಿದ ದಾನ ಪಡೆಯಲು ಬೆಳೆದ ನಿಂತ ತ್ರಿವಿಕ್ರಮ |

ಸುಂದರ ಬಾಲಕ ರೂಪ ತಳೆದ ವಾಮನ ||2|||

ಎದೆಯಲ್ಲಿ ಲಕ್ಷ್ಮೀಯ ನಿತ್ಯ ಧರಿಸಿರುವ ಶ್ರೀಧರ |

ಇಂದ್ರಿಯಗಳಿಗೆ ಸದಾ ಸುಖವೀವ ಹೃಷೀಕೇಶ ||

ಪದ್ಮಪೊತ್ತ ಪೊಕ್ಕಳಲಿ ಚತುರ್ಮುಖನಿಗಾಗಿ ಪದ್ಮನಾಭ |

ಉದರಕೆ ಹಗ್ಗದಿ ಕಟ್ಟಿಸಿಕೊಂಡ ದಾಮೋದರ ||3||

ಮಾಡುವ ಸಕಲ ಜಗತ್ತಿನ ಲಯ ಸಂಕೆರ್ಷಣ |

ಸದಾ ಎಲ್ಲಡೆ ಸಂತೋಷದಿ ಕ್ರೀಡಿಸುವ ವಾಸುದೇವ ||

ಜಡ-ಜೀವಗಳ ಸೃಷ್ಷಿಸುವ ಪ್ರದ್ಯುಮ್ನ |

ಬಿಡದೆ ಪಾಲಿಪ ಲೋಕವ ಅನಿರುದ್ಧ ||4||

ಇದ್ದ ಸರ್ವಕ್ಕಿಂತ ಉತ್ತಮೋತ್ತಮ ಪುರುಷೋತ್ತಮ |

ಇಂದ್ರಿಯ ಜನ್ಯರಹಿತ ಜ್ಞಾನಿ ಯಾಗಿರುವ ಅಧೊಕ್ಷಜ ||

ತಾಂಡವನಾಡುವ ಉಂಡು ಸಕಲ ಜಗತ್ ನರಸಿಂಹ |

ಭದ್ರನಾಗಿರುವ ತನ್ನ ಸ್ಥಾನದಿ ದೋಷ ದೂರ ಅಚ್ಯುತ ||5||

ಮರ್ದನ ಗೊಳಿಸುವ ಜನನ-ಮರಣ ಚಕ್ರ ಜನಾರ್ದನ |

ಇಂದ್ರನ ಸಂಪ್ರೀತಗೊಳಿಸಿದ ತಮ್ಮನಾಗಿ ಉಪೇಂದ್ರ ||

ಬಂದ ಸಂಕಷ್ಟ ಕಳೆದು ಭಕ್ತರ ಸಲಹುವ ಶ್ರೀಹರಿ |

ಬೋಧಿಸಲು ಜ್ಞಾನ ಧರೆಗಿಳಿದ ಶ್ರೀಕೃಷ್ಣರೂಪದಿ ||6||

ಇದ್ದಷ್ಟೂ ರೂಪ, ಕ್ರಿಯೆ, ನಾಮ ತಿಳಿಯಲಾಗದು, ಹೇಳಲಾಗದು |

ಆದ್ಯನಂತ ರಹಿತನ ಮಿತ ಬುದ್ಧಿಯಲಿ ಅರಿಯಲಾಗದು ||

ಬುದ್ಧಿಗೆ ಹೊಳೆದಷ್ಟು ಯೋಗ್ಯತೆಯಲಿ ತಿಳಿಸಿರುವೆ |

ಬಿಡದೆ ನಿತ್ಯದಿ ಸ್ಮರಿಸಲು ಶ್ರೀಕೃಷ್ಣವಿಠ್ಠಲ ಪದಲೊಕವೀವ ||7||

235. ಶರ್ಕರ, ಮಧುವಿಗಿಂತ ಸವಿಯಾದ ನಾಮ |

ಭಕ್ತಿಯಲಿ ಉಸಿರಾಗಿಸಿ ನಿತ್ಯದಿ ಬಿಡದೆ ||

ಶ್ರೀಕೃಷ್ಣವಿಠ್ಠಲನಾಮ ಸದಾ ಇಷ್ಟದಿ ಭಜಿಸೆ |

ಸಕಲಾಭೀಷ್ಟ ಕೊಟ್ಟು ಪೊರೆವ ಸರ್ವತ್ರ ಸರ್ವದಾ ||

236. ಜೀವನ ಸಾರ್ಥಕ್ಯ

ಶ್ರೀಕೃಷ್ಣವಿಠ್ಠಲನ, ಸರ್ವೋತ್ತಮತ್ವ ತಿಳಿಯುವುದೊಂದು ಅಗ್ಗಳಿಕೆ |

ಶ್ರೀಕೃಷ್ಣವಿಠ್ಠಲನ ಲೀಲೆಗಳ ಬರೆಯುವುದೊಂದು ವೆಗ್ಗಳಿಕೆ ||

ಶ್ರೀಕೃಷ್ಣವಿಠ್ಠಲನ ಅವತಾರ ಉದ್ದೇಶ ತಿಳಿಯುದೊಂದು ಹೆಗ್ಗಳಿಕೆ |

ಶ್ರೀಕೃಷ್ಣವಿಠ್ಠಲನ ತಿಳಿಯಲು ಪ್ರಯತ್ನಿಸದಿರೆ ಜೀವ ತೆಗಳಿಕೆ ||

ಶ್ರೀಕೃಷ್ಣವಿಠ್ಠಲನ ತಿಳಿಯದೆ ವ್ಯರ್ಥ ಜೀವಿಸಿದರೆ ಹಳಹಳಿಕೆ |

ಶ್ರೀಕೃಷ್ಣವಿಠ್ಠಲನ ತತ್ವ ತಿಳಿದು ತಿಳಿಸದಿರೆ ಜೀವನ ಕಿಗ್ಗಳಿಕೆ ||

ಶ್ರೀಕೃಷ್ಣವಿಠ್ಠಲನ ಕೊಂಡಾಡುವುದೇ ಜೀವನ ಸಾರ್ಥಕತೆಯ ಹೊಗಳುವಿಕೆ ||

237. ಭಕ್ತಿಮಾರ್ಗದರ್ಶಿ - ಪದಗದ್ಯ

ಮಾರ್ಗ ಅನೇಕ ಭಕ್ತಿ ಮೂಡಲು, ಭಕ್ತಿ ಮುಕ್ತಿಯ ಸೋಪಾನ |

ಬರೀ ಮನದಿ ಭಕ್ತಿ ಮಾಡಿದರೆ ಸಾಲದು, ಉನ್ನತಿ ಸಾಧಿಸಿ ||

ವರ್ಜಿಸಿ ಸಂಸಾರ ಸುಖ, ತ್ಯಜಿಸಿ ಆಶೆ ಪ್ರಯತ್ನದಿ |

ಪ್ರೇರೆಪಿಸಿ, ವೃದ್ಧಿಸಲು ವ್ರತ-ನೇಮಾದಿ ಮಾಡುವ ಬುದ್ಧಿ ಬೇಕು ||

ಬರೀ ಬುದ್ಧಿ ಇದ್ದರೆ ಸಾಲದು, ಅದಕ್ಕೆ ಸತ್ಸಂಗದ ಪರಿಸರ ಬೇಕು |

ಪರಿಸರವೊಂದಿದ್ದರೆ ಸಾಲದು, ಕಣ್ಣ ಮುಂದೆ ಬಿಂಬ ಮೂರ್ತಿಬೇಕು ||

ತೆರೆದಾಗ ಕಣ್ಣು ಮುಂದೆ, ಮುಚ್ಚಿದಾಗ ಹೃದಯದೊಳಗೆ ಕಾಣುತಿರಬೇಕು |

ಬರೀ ಕಂಡರೆ ಸಾಲದು, ಅದನು ತರ ತರದಿ ವರ್ಣಿಸಬೇಕು ||

ವರ್ಣಿಸಿದರಷ್ಟೇ ಸಾಲದು, ಕುಳಿತಲ್ಲಿ ನಿಂತಲ್ಲಿ ಹೊರಗೂ ಕಾಣಬೇಕು |

ಹೊರಗೆ ಕಂಡರೆ ಸಾಲದು, ನಮಗಿಂತ ಹೆಚ್ಚು ಪ್ರೀತಿಸಬೇಕು ||

ಬರೀ ಪ್ರೀತಿಸಿದರೆ ಸಾಲದು, ವಿವಿಧ ರೂಪದಿ ವಿಧದ ವಸ್ತುಗಳಲಿ ಅನುಭವಿಸಬೇಕು |

ಬರೀ ಅನುಭವಿಸಿದರೆ ಸಾಲದು, ನಾವು ಅವನ ಅಂಶವೆಂಬ ಜ್ಞಾನಬೇಕು ||

ಸರಳ ಜ್ಞಾನವಾದರೆ ಸಾಲದು, ವಿರಳ ವಿಜ್ಞಾನ-ಸುಜ್ಞಾನ ಬರಬೇಕು |

ಬರೀ ವಿಜ್ಞಾನವಾದರೆ ಸಾಲದು, ಅವನ ಅನಂತ ಗುಣ ತಿಳಿದು ಭಜಿಸಬೇಕು ||

ಬರೀ ಒಮ್ಮೆ ಭಜಿಸಿದರೆ ಸಾಲದು, ಉಸಿರಿನಂತೆ ಸದಾ ಧರಿಸಬೇಕು |

ಬೇರೆ ಬೇರೆ ಗುಣಗಳನ್ನು ತಿಳಿದು ಆನಂದೋದ್ರೇಕದಿಂದ ಮೈಮರೆಯಬೇಕು ||

ಸ್ಮರಿಸಿ ಒಂದರೊಳನಂತ ರೂಪ, ನಾಮ, ಕ್ರಿಯೆ ಸದಾ ಸುಖಿಸಬೇಕು |

ಪರೋಪಕಾರಿ ನಿಸ್ಸೀಮ ನಿರವಧಿಕ, ನಿರುಪಮ, ಶ್ರೇಷ್ಠತಮ ||

ಶ್ರೀಕೃಷ್ಣವಿಠ್ಠಲ ಆತ್ಮಬಂಧು ದಯದಿ ದು:ಖ ಕಳೆದು ನಿತ್ಯ-ಸುಖವೀವ ||

238. ಹೊಂಗಿರಣದ ಹೊಂಬೆಳಕಲಿ ಹೊಂಗೊಳಲು ಊದಲು |

ಬಗೆ ಬಗೆಯ ಪಕ್ಷಿಗಳ ಕೂಜರ ಮೆಳೈಸಿತು ||ಪ||

ನಿಮಿಲ ನೇತ್ರನು ಹೊಂಬಿಸಿಲ ಅಹ್ಲಾದಕರ |

ಸುಮನದಿ ಸವಿಯುತ್ತಾ ನಾದದಿ ತಲ್ಲಿನನಾದ ||

ಸುಮಧು ಸವಿಯುವುದು ಮರೆತಿತ್ತು ದುಂಬಿ |

ಮೈಮನ ತೂಗಿದಂತೆ ಗಿಡ ಬಳ್ಳಿಗಳು ಓಲಾಡುತ್ತಿದ್ದವು ||1||

ಗೋಗಳು ಕಿವಿ ನಿಮಿರಿಸಿ ಬಾಲವನ್ನೆತ್ತಿ |

ಲಗು ಬಗೆಯಲಿ ಧಾವಿಸಿ ಓಡಿ ಬಂದವು ||

ಭೋರ್ಗೆರವ ನದಿ ಶಾಂತತೆಯಲಿ ಹರಿಯಿತು |

ಸುಗಂಧ ಪೂರಿತ ಶೀತಲಗಾಳಿ ಮಂದವಾಗಿ ಬೀಸುತ್ತಿತ್ತು ||2||

ಆಲಿಸಿ ಕೊಳಲದನಿ ಮರೆತು ದೇಹಭಾನ |

ಅಲ್ಲಿ ಓಡಿ ಬಂದ ರಾಧೇಯ ಬಿಸಿಯುಸಿರಿನ ||

ತಾಳಕೆ ಸರಿಯಾಗಿ ಕುಚಗಳು ಕುಣಿಯುತ್ತಿತ್ತು |

ಹೊಳೆಯುತಿತ್ತು ಬೆವರ ಹನಿ ಹಣೆಯಲಿ ಮುತ್ತಿನಂತೆ ||3||

ಪಕ್ಕ ಕೆದರಿದ ನವಿಲಿನಂತೆ ಮನದಣೆಯ ನರ್ತಿಸಿದಾಗ |

ಶಿಖೆಗೆ ಕಟ್ಟಿದ ಪೂಮಾಲೆ ಬಿಚ್ಚಿ ಉದರಿದವು ||

ಹಾಕಲು ಹೆಚ್ಚೆ ನೂಪುರದ ಗೆಜ್ಜೆ ಚೆಲ್ಲಾಡಿದವು |

ಸಖನ ಪಕ್ಕಕೆ ಕುಳಿತು ಕಣ್ಮಚ್ಚಿ ಆನಂದಿಸಿದಳು ||4||

ಪ್ರಕೃತಿ ಎಲ್ಲಡೆ ನಿನಾದ ಅಲೆ ಪಸರಿಸಿತ್ತು |

ಪರಿಸರದ ಅರಿವಿಲ್ಲದಂತೆ ತನ್ಮಯನಾಗಿದ್ದ ||

ಪರಮಾತ್ಮ ತನ್ನನ್ನೆ ಮರೆತು ಮೇರುಗಿರಿಯಾಗಿದ್ದ |

ಶ್ರೀಕೃಷ್ಣವಿಠ್ಠಲ ಪರವಶನಾದ ದೃಶ್ಯ ಅಪೂರ್ವವಾಗಿತ್ತು ||5||

239 ಅಬ್ಬಾ | ಎಂಥಾ ಸಾಹಸವಂತ ಈ ಪೋರ |

ಒಬ್ಬನೇ ಎಂತೆಂತಹ ಸಾಹಸ ಮಾಡಿದ ||ಪ||

ಅಂಜುವನಲ್ಲ ಯಾವುದಕೂ, ಕಂಜನಾಭ ಅಂಜದಗಂಡು ||ಅಪ||

ಪ್ರಳಯಾಂತಕ ಜಲದಿ ಶಿಶುವಾಗಿ ಮಲಗಿ |

ಕಾಲ್ಬೆರಳು ಬಾಯಲ್ಲಿಟ್ಟು ಎಲೆ ಮೇಲೆ ತೇಲಿದ ||

ಮಲಗಿದ್ದ ಶೇಷ ಶಯನನು ಯೋಗ ನಿದ್ರೇಲಿ |

ಕಾಲ ತಾನಾಗಿ, ಕಲ್ಪಕೃತ ಭಯ ರಹಿತ ||1||

ಮತ್ಸ ತಾನಾಗಿ ನಾಮೆ ಪಿಡಿದು ಏಳುದಿನ ತೇಲಿದ |

ಸತ್ಯವಂತ ರಾಜನ ಉಳುಹಿದ ಸಂಪದ ಸಹಿತ ||

ಮಂಥನ ಸಮಯದಿ ಮಂದರ ಪೊತ್ತ |

ಮತ್ತೆ ಪ್ರವೇಶಿಸಿ ಸಕಲದರಲ್ಲಿ ಅಮೃತವಿತ್ತ ||2||

ಕಕ್ಷೆಯಲಿ ಪೃಥ್ವಿ ಕಳಚಿ ನೀರಲಿ ಬೀಳಲು |

ವೀಕ್ಷಿಸಿ ವರಾಹ ತಂದಿಟ್ಟ ಸ್ವಸ್ಥಾನದಿ ||

ರಾಕ್ಷಸ ಹಿರಣ್ಯಾಕ್ಷ ಮತ್ತೆ ಕದ್ದೊಯ್ಯಲು |

ತಕ್ಷಣವೇ ಸಂಹರಿಸಿ ದಾಡೆಯಲ್ಲಿಟ್ಟು ರಕ್ಷಿಸಿದ ||3||

ಭಕ್ತಿಯಲಿ ಬಾಲಕ ಪ್ರಾರ್ಥಿಸೆ ಜಲದ ಬಾಧೆ ತಡೆದ |

ಭಕ್ತಿಯಲಿ ಜಲವಿತ್ತು ಸಂಕಲ್ಪಿಸಿದವನ ಉದ್ಧರಿಸಿದ ||

ಲೋಕದಿ ಸುರಗಂಗೆ ಹರಿಸಿ ಪಾವನ ಗೊಳಿಸಿದ |

ರಕ್ತವ ಜಲದಂತೆ ಹರಿಸಿ ದುಷ್ಟ ಕ್ಷತ್ರಿಯರ ತರಿದ ||4||

ವಾರ್ತೆಕಳುಹಿದರೂ ಕಡಲರಾಜ ಅಲಕ್ಷಿಸಿಲು |

ಬತ್ತಿಸುವೆ ಜಲವೆಂದು ಧನುರ್ಧಾರಿಯಾದ ಕೋಪದಿ ||

ತತ್ತರಿಸಿ ಭಯದಿ ಮುತ್ತು ಮಾಣಿಕ್ಯದ ಆತಿಥ್ಯವಿತ್ತ |

ಸೇತು ಬಂಧಿಸಿ ಸಾಗರದಿ, ರಾಕ್ಷಸರ ಶಿರ ತರಿದ ||5||

ಶಿಶುವಾಗಿ ಪುಟ್ಟಿ ಭೋರ್ಗೆರೆವ ಯಮುನೆ ದಾಟಿದ |

ವಿಷಯುಕ್ತ ಕಾಲೀಯ ಹೆಡೆಮೇಲೆ ನರ್ತಿಸಿದ ||

ಶೇಷ ಬಂಧನ ಬಿಡಿಸಿ ನಂದನ ಕರೆತಂದ |

ವಿಶೇಷ ವಿಶಿಷ್ಠನಿವ ಸಕಲರಿಗೂ ಪ್ರೀತಿ ಪಾತ್ರ ||6||

ಸುರಿವ ಮುಸಲಧಾರೆಯಲಿ ನಲಗಲು ಎಲ್ಲ |

ಕಿರುಬೆರಳಲಿ ಗೊವರ್ಧನ ಪಿಡಿದೆತ್ತಿ ಏಳು ದಿನ ||

ಗೋವೃಂದ, ಯಾದವರೆಲ್ಲರ ಸದಾ ರಕ್ಷಿಸಿದ |

ಶರನ್ನವ ರಾತ್ರಿ ಯಮುನೆ ತೀರದಿ ರಾಸ ರಚಿಸಿದ ||7||

ಮಗನನ್ನೇ ಬದುಕಿಸಿ ಗುರುದಕ್ಷಿಣೆ ಕೊಡೆನಲು |

ಸಾಗರದಡಿಯಲ್ಲಿ ಗುರುಪುತ್ರನ ಹುಡುಕಲು ||

ತೆಗೆದು ಪಾಂಚಜನ್ಯ ಶಂಖ ತಾನೇ ಧರಿಸಿದ |

ಬಗೆ ಬಗೆಯ ಲೀಲೆಗಳ ಜಲದಿ ಮಾಡಿದ ||8||

ಜಲದಂತೆ ನಿರ್ಮಲ ಪವಿತ್ರವಾದ ವೇದಗಳನು |

ಉಳುಹಲು ದುರ್ಮಾರ್ಗ ಬೋಧಿಸಿದ ಬುದ್ಧನಾಗಿ ||

ಕಲ್ಕಿಯಾಗಿ ಕುದುರೆಯನೇರಿ ಬರುವ |

ಕಲಿಯ ಬಾಧೆ ತಪ್ಪಿಸಿ ಪಾಪ ಕಳೆವ ನಾರಾಯಣ ||9||

ಜಲ, ನೆಲ, ಗಾಳಿ, ಆಹಾರ ಸಕಲದಲ್ಲಿ ವ್ಯಾಪ್ತ |

ಶ್ರೀಲಕ್ಷ್ಮೀನಲ್ಲ ನಿತ್ಯಾವಿಯೋಗಿಯ ಕರಪಿಡಿದು ||

ಅಳಿಯನಾದ ಸಮುದ್ರ ರಾಜನಿಗೆ ಶೋಭಾನೆ |

ಲೀಲೆಗಳ ಕೊಂಡಾಡಲು ನಿತ್ಯ ಸುಖವೀವ ಶ್ರೀಕೃಷ್ಣವಿಠ್ಠಲ ||10||

240. ಮಾತು ನೀನೆ, ಮೌನ ನೀನೇ |

ದಾತಾ ನೀನೇ, ಪಡೆವವ ನೀನೇ ||

ಶಾಂತ ನೀನೇ, ರೌದ್ರ ನೀನೇ |

ಭಕ್ತರ ಹಿಂಬಾಲಕ ನೀನೇ, ಮಾರ್ಗದರ್ಶಿ ನೀನೇ ||

ಅಂತರಂಗದಲ್ಲೂ ನೀನೇ, ಬಹಿರಂಗದಲ್ಲೂ ನೀನೇ |

ಪತಿ ನೀನೇ, ಮತಿ ನೀನೇ ||

ಸತ್ಯ ನೀನೇ ನಿತ್ಯ ನೀನೇ |

ಆತ್ಮ ನೀನೇ ಶ್ರೀಕೃಷ್ಣವಿಠ್ಠಲ ನಿನ್ನಬಿಟ್ಟಿರನ್ಯರಿಲ್ಲ ||

241. ಬಂಗಾರ ವರ್ಣದ ಗಂಗಾಜನಕನೇ |

ಸಂಗ ಬಿಡಿಸಿ ಮಂಗ ಬುದ್ಧಿಯ ||

ಭಂಗವಾಗದೆ ಕಂಗೊಳಿಸುವಂತ |

ಹಿಂಗದಂತಹ ಸೌಭಾಗ್ಯ ನನ್ನದಾಗಲಿ ಶ್ರೀಕೃಷ್ಣವಿಠ್ಠಲ ||

242. ಒಳಗೆ ಹೀನ ಬುದ್ಧಿ, ಮೇಗಣ ಸುಂದರ ಹೊದಿಕೆ |

ಹೊಲಸಿನ ಹೊಂಡ, ದುರ್ಗಂಧದ ಬೀಡು ||

ಕೀಳು ಸ್ವಾರ್ಥದ ಗೂಡು, ಹಿಂಗದಾಸೆಯ ಕೊಂಡ |(ಬೆಟ್ಟ)

ಕಾಲು ಜಾರಿದೆ ಪ್ರಪಾತಕೆ, ಜಗಪತಿ ಶ್ರೀಕೃಷ್ಣವಿಠ್ಠಲ ಕಾಯೋ ||

243. ತಾ ಸೃಷ್ಟಿಸಿದ ಸಕಲ ಜೀವರಾಶಿ ಪೊರೆವ |

ವರಾವರನು ಅವರಂತೆಯೇ ಇಟ್ಟು ವೀಕ್ಷಿಸುವ ||

ಸರ್ವರಿಗೂ ಅಲ್ಲಲ್ಲೇ ಉಸಿರು-ಆಹಾರವಿತ್ತು ರಕ್ಷಿಸುವ |

ಸರ್ವರೊಳಗಿದ್ದು ಸರ್ವಕಾರ್ಯಮಾಡಿಸಿ ಫಲವೀವ ||

ತೋರನು ಬಾಹ್ಯದಿ, ತೋರಿಕೊಳ್ಳುವ ಕ್ರಿಯೆಯೊಳಗೆ |

ಕರುಣಾಳು ಶ್ರೀಕೃಷ್ಣವಿಠ್ಠಲ ಎಂದಿಗೂ ಯಾರನೂ ಮರೆಯನು ||

=

244. ಅಮ್ಮಾ , ಲಕುಮಿ ನಿನ್ನ ನಲ್ಲಗೆ ಪೇಳೆ |

ಒಮ್ಮೇ ಎನ್ನ ಕರುಣೆಯಲಿ ನೋಡೆಂದು ||ಪ||

ಸಮಸ್ತ ಜಗದೊಡೆಯ ಬಿಡುವಿನಿಂದೆನ್ನ ನೊಡೆಂದು ||ಅಪ||

ದೊಡ್ಡ ವಿಶ್ವದಲ್ಲಿಯ ಚಿಕ್ಕ ಹುಳು ನಾನು |

ಕಡೆಗಾಣಿಸದೆ ಎನ್ನ ಕೈ ಪಿಡಿದು ನಡೆಸೆಂದು ||

ಕಡಲ ನೀರಿನ ಹನಿ ಬಿಂದು ನಾನು |

ಒಡಲೊಳಗೆ ತಪ್ಪೆಲ್ಲಾ ಮುಚ್ಚಿ ಮನ್ನಿಸೆಂದು ||1||

ನೆಲಸಲು ನೆಲ, ಬದುಕಲು ಅವಕಾಶ |

ಒಲವಿಂದ ಕಾಲಕಾಲಕೆ ಆಹಾರವಿತ್ತು ||

ಎಲ್ಲ ಕಷ್ಟ ಕಳೆದು ಸುಖವಿತ್ತು |

ಸಲುಹಿ ಸತತ ಸ್ವಾಮಿ ದಯೆ ಸೂಸಲೆಂದು ||2||

ಸಂಸಾರ ಸಾಗರದಿ ಈಜಲು ಬಾರದೆ |

ಸಂಸಾರದಿ ಜೀವನ ಕಳೆವಂತೆ ಆಗಲೆಂದು ||

ಹೇಸಿಗೆಯಲಿ ದಿನ ಕಳೆಯದಂತೆ ಅನುಗ್ರಹಿಸಿ |

ಆಸೆ-ನಿರಾಸೆ, ಬಂಧನ ಬಿಡಿಸೆಂದು ಶ್ರೀಕೃಷ್ಣವಿಠ್ಠಲನಲಿ ಪೇಳು ||3||

=

245. ಹಂತ ಹಂತದಲ್ಲೂ ಬಿಡದೆ ಕಾಯ್ವನು ಮಾಡಿದ ತ್ಯಾಗದ ಲೆಕ್ಕವೇನು |

ಪ್ರತಿ ವಸ್ತುವಿನಲ್ಲಿದ್ದು, ಪ್ರತಿ ಕ್ಷಣದಿ, ಪ್ರತಿಕ್ರಿಯೆಯಲಿ ಸ್ಪಂದಿಸುವವನ ಕಾಣದಾದೆ ||ಅಪ||

ತಾಯ್ತಂದೆಯರ ಕೊಟ್ಟೆ, ಬಂಧು-ಬಾಂಧವರನ್ನಿತ್ತೆ |

ಹೊತ್ತು ಹೊತ್ತಿಗೆ ಹೊಟ್ಟೆ ತುಂಬಿಸಿ ಸಂತೋಷವಿತ್ತೆ ||

ಅತಿಶಯ ಪ್ರೇಮ, ಅಪಾರ ಕರುಣೆಯಲಿ ತೋಯಿಸಿದೆ |

ಹಿತದ ದೃಷ್ಟಿಯಲಿ ಆಸೆ-ನಿರಾಸೆಯಿತ್ತು ಸಲುಹಿದೆ ||1||

ಆಕಾರವಿಲ್ಲದ ಕಣಕ್ಕೆ ಸಕಾಲದಿ ಆಕಾರ ಕೊಟ್ಟು ಕಾಪಾಡಿದೆ |

ಚಿಕ್ಕ ಮಾಂಸದ ಮುದ್ದೆಗೆ ಕಣ್ಣು, ಮೂಗು, ಕೈಕಾಲು ಕೆತ್ತಿದೆ ||

ಚೊಕ್ಕದಾಗಿ ಚಿಕ್ಕ ಪ್ರದೇಶದಿ ಅನ್ನಾಹಾರ, ಉಸಿರು ಇತ್ತೆ |

ನೀ ಕೊಟ್ಟರೂಪ, ಬುದ್ಧಿ, ದೃಷ್ಟಿ, ಮನಸಲಿ ಮೈಮರೆತೆ ||2||

ಬರುತಲೆ ಎಲ್ಲ ಕಡೆನೋಡಿದೆ ಎಲ್ಲವೂ ನನದೆಂದೆ |

ಹೆರವರ ಸಂತೋಷ ಸಹಿಸದೆ ಅಮಿತ ಶೋಕ ತಳೆದೆ ||

ಯಾರಿಗೂ ನೆರವೂ ನೀಡದೆ ಸಕಲವೂ ನನಗಾಗಿ ಇರುವುದೆಂದೆ |

ಬರೀ ಒಣ ಜಂಭದಿ ಕಾಲ ಕಳೆಯುತ ಕಾಲವ ಅರಿಯದಾದೆ ||3||

ನೀನೆನಗೆ ದಯದಿ ಇತ್ತ ಅನ್ನ-ವಸ್ತ್ರ, ಧನ-ಕನಕವ |

ನಾನೇ ಪರರಿಗೆ ದಾನಿಸಿ ಅಹಂಭಾವದಿ ಹೆಮ್ಮೆ ಪಟ್ಟೆ ||

ನಾನು, ನನ್ನದು, ನನಗಾಗಿ ಎಂಬ ಮಂತ್ರಜಪದಿ ಮುಳುಗಿದೆ |

ಮನ ಮಥಿಸಿ, ಅಂತ:ಶುದ್ಧಿಗಾಗಿ ಎಂದೂ ಪ್ರಯತ್ನಿಸಲಿಲ್ಲ ||4||

ಭಕ್ತರಿಗಾಗಿ ಮೀನಾದೆ, ಭಕ್ತರಿಗಾಗಿ ಆಮೆಯಾದೆ |

ಭಕ್ತರಿಗಾಗಿ ಹೆಣ್ಣಿನ ರೂಪ ಹೊತ್ತೆ, ಭಕ್ತರಿಗಾಗಿ ಭಿಕ್ಷೆ ಬೇಡಿದೆ ||

ಭಕ್ತರಿಗಾಗಿ ಸ್ತಂಭದಿಂದ ಬಂದೆ, ಭಕ್ತರಿಗಾಗಿ ಬೆತ್ತಲೆನಿಂತೆ |

ಭಕ್ತರಿಗಾಗಿ ವಿಶ್ವರೂಪ ತೋರಿದೆ, ಭಕ್ತರನು ಹಗಲಿರುಳು ರಕ್ಷಿಸಿದೆ ||5||

ತಿಳಿಯದೆ ನಿನ್ನ ತ್ಯಾಗ, ಅರಿಯದೆ ಜೀವನಧ್ಯೇಯ |

ಬಳಸಿದೆ ಸಕಲ ಸೌಭಾಗ್ಯ ನಿನ್ನುಪಕಾರ ಸ್ಮರಿಸಿದೆ ||

ತಿಳುವಳಿಕೆ ಹೆಚ್ಚಿ ಜ್ಞಾನ ಪಡೆವ ಜನ್ಮವ ವ್ಯರ್ಥ ಕಳೆದೆ |

ಎಲ್ಲ ಬಲ್ಲ ಶ್ರೀಕೃಷ್ಣವಿಠ್ಠಲ ಕೃತಘ್ನಳ ಕ್ಷಮಿಸೆಯಾ ||6||

246. ಬ್ರಹ್ಮಾಂಡದ ಪ್ರತಿ ವಸ್ತುವಿನಲ್ಲಿದ್ದು ವ್ಯಾಪಕದಿ ಬಾಹ್ಯಕ್ರಿಯೆ ಮಾಳ್ಪ |

ಪಿಂಡಾಂಡದ ಪ್ರತಿ ಕಣದಲ್ಲಿದ್ದು ಪ್ರತಿಕ್ಷಣ ನಡೆವ ಕ್ರಿಯೆಯ ಮೂಲ ||

ಪಡೆದು ಬಂದಷ್ಟು ಸುಖ-ದು:ಖ ಪ್ರತಿ ಜೀವಿಗೆ ಬಿಡದೆ ಕೊಡುವ |

ಗಂಡರ ಗಂಡ ಶ್ರೀಕೃಷ್ಣವಿಠ್ಠಲ ಸರ್ವರ ಸದಿಚ್ಛೆ ಪೂರೈಸುವ ||

247. ಕಾಣುವ ಒಂದೊಂದು ಕ್ರಿಯೆಯಲಿ ಅನೇಕ ಕ್ರಿಯೆಗಳಡಗಿವೆ |

ಸಣ್ಣದಿರಲಿ, ದೊಡ್ಡದಿರಲಿ ಮುಂದನೇಕ ಕ್ರಿಯೆಗೆ ರಂಗಮಂಚ ||

ಜ್ಞಾನ-ಇಚ್ಛೆಯು ಕ್ರಿಯೆಗೆ ಮೂಲವಾದರೂ ಪ್ರಯತ್ನಬೇಕು |

ಚಿನ್ಮಯ ಶ್ರೀಕೃಷ್ಣವಿಠ್ಠಲನ ಅನುಗ್ರಹ ಮೊದಲಿರಬೇಕು ||

248. ಗುರು-ಹಿರಿಯರ ವಾಕ್ಯ ಪರಿಪಾಲನೆಯಲ್ಲಿ ಶ್ರದ್ಧೆ |

ಗುರುನಿಂದೆಯ ಪಾಪ ವಜ್ರಲೇಪದಂತೆ ||

ನಿರ್ವ್ಯಾಜ್ಯ, ನಿರ್ಮಲ ಮನದಿ ಗುರುಸೇವೆ ಯಶಕೆ ಕಾರಣ |

ಗುರು ಕರುಣೆಗೆ ಪಾತ್ರರಾದವರು ಹರಿಗೆ ಪ್ರಿಯರು ||

ಗುರ್ವಾಂತರ್ಗತ ಜಗದ್ಗುರು ಶ್ರೀಕೃಷ್ಣವಿಠ್ಠಲ ಒಲಿವ ||

249. ದುಷ್ಟ ಜನರ ಸಹವಾಸ ಯಾರೂ ಬಯಸರು |

ಕಷ್ಟ, ದುಖ:ಗಳ ಯಾರು ಇಷ್ಟ ಪಡರು ||

ನಷ್ಟವಾಗಲಿ, ಲಾಭವಾಗಲಿ ಹರಿಪ್ರಸಾದವೆಂದು |

ನಿಷ್ಠೆಯಲಿ ಸ್ವೀಕರಿಸಿ ಶಾಂತನಾಗಿದ್ದರೆ ||

ಚೇಷ್ಟಾನಾಮಕ ಶ್ರೀಕೃಷ್ಣವಿಠ್ಠಲ ತೇಲಿಸುವ ||

250. ಅನಾದಿಕಾಲೀನ ಧರ್ಮಸುಳ್ಳೇ |

ಅನಂತಕಾಲದ ವೇದ ಸುಳ್ಳೇ ||

ಆನಂದ, ಜ್ಞಾನಸ್ವರೂಪ ದೇವ ಸುಳ್ಳೆ |

ಸನಾತನ ಸತ್ಸಂಪ್ರದಾಯ ಸುಳ್ಳೆ ||

ಅನುಭವಿಸುವ ಜಗತ್ತು ಸುಳ್ಳೆ |

ಭಿನ್ನಾಭಿನ್ನ ಕಾಣುವ ವಸ್ತು ಸುಳ್ಳೇ ||

ಅನನ್ಯ ಶ್ರೀಕೃಷ್ಣವಿಠ್ಠನಾಣೆಗೂ ಸರ್ವವೂ ನಿತ್ಯಸತ್ಯ ||

251. ಹೆಂಗೇ ಇಟ್ಟರೂ ಸರಿಯೇ ಹರಿಯೇ ಹೀಗ್ಹೆಂಗೆಂದು ಕೇಳೆನು ||ಪ||

ಹಂಗಾದರೂ ಇಡು, ಹಿಂಗಾದರೂ ಇಡು ನಿನ್ನ ಕೃಪೆಯಿರಲಿ ||ಅಪ||

ಅನ್ನವಾದರೂ ಇಕ್ಕು, ಉಪವಾಸವಾದರೂ ಕುಕ್ಕು |

ನನ್ನೀ ಮಾತಾದರೂ ಸರಿಯೇ, ಹೀಗೆಳೆದರೂ ಸೈ ||

ಕುನ್ನಿಯಂತೆ ತುಚ್ಛಮಾಡಿದರೂ, ಏನೂ ಅನ್ನೆನು |

ಮಾನ್ಯದ: ನೀನು, ಮಾನಾಪಮಾನ ನಿನ್ನದಲ್ಲವೆ ? ||1||

ವೃದ್ಧಿಸುವ ಹ್ರಾಸವರ್ಜಿತ ಭಕ್ತಿಯನ್ನೇ ನೀಡು |

ಒಂದೇಮನದಿ ನಿರುತ ನೆನೆವಂತೆ ಮಾಡು ||

ಇಂದು, ಮುಂದಿನ ಕರ್ಮಗಳೀಗಲೆ ಅರ್ಪಿಸುವೆ |

ತಂದೆ, ಶ್ರೀಕೃಷ್ಣವಿಠ್ಠಲ ಸ್ವೀಕರಿಸಿ ಉದ್ಧರಿಸೋ ||2||

252. ಕಾಣದು ಪುಷ್ಪದೊಳಗಿನ ಸುಗಂಧ |

ಕಾಣದು ಫಲದೊಳಗಿನ ರುಚಿ ||

ಕಾಣದೂ ಪಾಲಿನೊಳಗಿನ ಘೃತ |

ಕಾಣದು ಕಾಷ್ಟದೊಳಗಿನ ಅಗ್ನಿ ||

ಕಾಣದ ದೈವದಲಿ ನಿರ್ಮಲ ಭಕ್ತಿಮಾಡೆ |

ಕಾಣದ ಹೃದ್ಗುಹಾವಾಸಿ ಒಲಿದು ಅನುಗ್ರಹೀಪ ||

ಜಾಣ ಪ್ರಾಣನಾಮಕ ಶ್ರೀಕೃಷ್ಣವಿಠ್ಠಲ ||

253. ಪುಟ್ಟಿಸುವವ, ಪಾಲಿಸುವವ, ಲಯಿಸುವವ ನೀನೇ |

ಗಟ್ಟಿಯಾಗಿ ಶೃಂಖಲೆಗಳ ಕ್ರಿಯೆ ಘಟಿಸುವನೇ ||ಪ||

ಬಟ್ಟಿನಲಿ ಕುಣಿಸಿ ಹೊಣೆಮಾತ್ರ ಜೀವಿಗೇಕೆ ||ಅಪ||

ಎಂಬತ್ನಾಲ್ಕು ಲಕ್ಷಯೋನಿಗಳಲಿ ಪುಟ್ಟಿದ ಜೀವಿಗೆ |

ಉಂಬುವಂತೆ ಮಾಡಿ ಅವರವರ ಪಾಪ-ಪುಣ್ಯಫಲ ||

ಕಾಂಬದಂತಿದ್ದು ಹೇಗೆ ತಕ್ಕ ಸಾಧನೆ ಮಾಡಿಸುವಿ ? |

ಸಂಬಳದ ಪ್ರತಿಫಲಾಶೆ ರಹಿತ ಎಲ್ಲರ ಲೆಕ್ಕ ಹೇಗೆ ಇಡುವಿ ? ||1||

ಬದ್ಧ ದ್ವೇಷಿಗಳ, ಸಿದ್ದ ಪುರುಷರ ಸಲಹುವವನೆ |

ಶುದ್ಧಾತ್ಮರ, ಸುರಾಸುರರ ಸರ್ವರ ನಡೆಸುವವನೆ ||

ಬಂಧನದಲ್ಲಿ ಹಾಕಿ ಸಿಕ್ಕು ಬಿಡಿಸುವವನೆ |

ಕ್ರೋಧರಹಿತ ಬುದ್ಧಿವಂತನೇ ಹೇಗೆ ಮಾಡುವಿ ? ||2||

ಪುಟ್ಟುವುದಕ್ಕೆ ಮುನ್ನ ತಕ್ಕ ಜನ್ಮವಿತ್ತು |

ಕಟ್ಟಿಹಾಕಿ ಸರ್ವರ ವಿವಿಧ ಮಾಯೆಗಳಲಿ ||

ಒಟ್ಟಿನಲಿ ತನ್ನಗುರಿ ಮರೆತು ಜೀವಿಸಿ |

ಚಟ್ಟ ನೆದ್ದು ಹೋಗುವರು ಶ್ರೀಕೃಷ್ಣವಿಠ್ಠಲನ ಸ್ಮರಿಸದೆ ||3||

254.. ಒಂದೇ ಪದಕೆ ಅರ್ಥ ಬೇರೆ ಬೇರೆ ||ಪ||

ಒಂದೇ ಭಾವ, ಒಂದೇರಾಗ, ಒಂದೇ ತಾಳ ||ಪ||

ಒಂದೇ ನುಡಿ ಆದರೂ ಅರ್ಥ ಹಲವು |

ಕೆದಕುತ್ತಾ ಹೋದಂತೆ ಅನೇಕಾರ್ಥಗಳು ||

ಸಂದರ್ಭ ಸಮಯ ಬೇರಾದಂತೆ ಅರ್ಥಬೇರೆ |

ಇದಕೆ ದೊರಕುವ ಪ್ರತಿಕ್ರಿಯೆ ಬೇರೆ ಬೇರೆ |||1||

ಪದ ಹೊರಡಿಸಿ ನುಡಿಸುವವ ನೀನೇ |

ಪದ ಶಬ್ದದಲಿ ಕೇಳಿಸುವವ ನೀನೆ ||

ಪದದ ವಿವರ ವಿಚಾರ ತಿಳಿಸುವವ ನೀನೆ |

ಆದರೂ ಅದರ ಅರ್ಥಗಳನೇಕ ಏಕೆ ? ||2||

ಪದ ಪ್ರತಿ ಪದದಲ್ಲೂ ನೀನೇ ಇರುವಿ |

ಆದ ಅನಂತವತಾರದಂತೆ ಅರ್ಥವೂ ಅನಂತ ||

ಆದ್ಯನು ಅನಂತ ಬಗೆಯಲಿ ತೋರ್ಪ |

ಶಬ್ದಾತೀತ ಶ್ರೀಕೃಷ್ಣವಿಠ್ಠಲನ ನಿರ್ದಿಷ್ಟದಿ ಅರ್ಥೈಸುವುದು ಹೇಗೆ ? ||3||

255. ಕೋದಂಡಪಾಣಿ ಪುರುಷೋತ್ತಮನೇ |

ಬದುಕಲಹುದೇ ನಿನ್ನ ಪದಕಮಲ ತೊರೆದು ||ಪ||

ಉದ್ಧರಿಸಿದೆ ಬಾಲೆಯ, ಪಾದ ಶಿಲೆಯ ಮೇಲಿಟ್ಟು |

ವಧಿಸಿದೆ ವಾಲಿಯ, ಸುಗ್ರೀವಗೆ ಸ್ನೇಹ ಹಸ್ತವಿತ್ತು ||

ಕೊಂದು ಅಸುರರ ಋಷಿಗಳಿಗೆ ಅಭಯವಿತ್ತೆ |

ಮಂದಿ ಮಾತಿಗೆ ಸತಿಯ ತೊರೆದು ಮಾನ್ಯವಿತ್ತೆ ||1||

ಅಂಬುದಾಟಿ ಮಾತೆಗೆ ಅಂಗುಲೀಯಕವಿತ್ತ |

ನಂಬಿದ ಬಂಟಗೆ ಸ್ವಾತ್ಮ, ಸಹಭೋಗವಿತ್ತೆ ||

ಜಂಬೂ ವಾನರ ಸೈನ್ಯಜೊತೆ ರಾವಣನ ಸಂಹರಿಸಿದೆ |

ಇಂಬುವರಿತ ಸ್ವಯಂಭೂ ಶ್ರೀಕೃಷ್ಣವಿಠ್ಠಲ ಕರುಣಿಸು ||2||

256. ರಮ್ಯ ಅಂಡಾಕಾರದ ಬ್ರಹ್ಮಾಂಡದಿ ಎಲ್ಲರಿಗೂ |

ತಮ್ಮ ನಾಡಿ ಮಿಡಿತ ಇರುವರೆಗೂ ಜೀವನ ||

ತಮ್ಮ ಬದುಕಿಗೆ ತಾವೇ ಉಸಿರಾಡಿಸಬೇಕು |

ತಮ್ಮ ಸೊಂಡಿಯಿಂದಲೇ ನೀರು ಕುಡಿಯಬೇಕು ||

ತಮ್ಮ ಕುಂಡಿ ಊರಿಯೇ ಕೂಡಬೇಕು |

ತಮ್ಮ ಮಂಡೆ ಮೇಲೆ ದಂಡೆ ಮುಡಿಯಬೇಕು ||

ತಮ್ಮ ಗಂಡನ ಸೇವೆಯೇ ಸಂಸಾರದ ಸುಖ |

ನಮ್ಯ ಗಾಡಿಕಾರ ಶ್ರೀಕೃಷ್ಣವಿಠ್ಠಲನ ಮುಂದೇನು ಆಢ್ಯತೆ ? ||

257. ಕ್ಷಿರಸಾಗರದಿ ಶೇಷಶಾಯಿಯಾದ ನಾರಾಯಣನೇ |

ಸರ್ವರ ರಕ್ಷಿಸಲು ಎತ್ತಿದನೇಕ ರೂಪಗಳ ಕಾಲಕಾಲಕೆ ||

ಕರಿಯಕಾಲ ಮಕರನಿಂದ ಬಿಡಿಸಿದ ಶ್ರೀಹರಿ |

ಅಮೃತಕಲಶಧಾರಿ ಸರ್ವೇಷ್ಟಪ್ರದಾಯಕ ಧನ್ವಂತರಿ ||

ಮಾತೃಗೆ ತತ್ವೋಪದೇಶದಿ ಸದ್ಗತಿ ಇತ್ತ ಕಪಿಲ |

ಅರಸು ಸತ್ಯವ್ರತಗೆ ಧರ್ಮಬೋಧಿಸಿದ ಮತ್ಸ್ಯ ||

ನೀರಲಿ ಮುಳುಗುವ ಮಂದರ ಪೊತ್ತ ಕೂರ್ಮ |

ಹಿರಣ್ಯಾಕ್ಷನ ವಧಿಸಿ ಧರೆಯನ್ನುಳುಹಿದ ವರಾಹ ||

ಹಿರಣ್ಯಕನ ಕೊಂದು ಪ್ರಹ್ಲಾದಗೆ ವರವಿತ್ತ ನರಹರಿ |

ಇಂದ್ರಗೆ ಅಧಿಪತ್ಯವೀಯಲು ಬಲಿಯ ಪಾತಾಳಕೊತ್ತಿದ ವಾಮನ ||

ಪಿತೃವಾಕ್ಯಪಾಲಕ ಕ್ಷತ್ರಿಯ ಕುಲಾಂತಕ ಪರಶುರಾಮ |

ಮಾರುತಿವಲ್ಲಭ ಮಾತೃ ವಚನಪಾಲಕ ಶ್ರೀರಾಮ ||

ನೀರೆಯ ಸೀರೆಕದ್ದವ, ನೀರೆಗೆ ಸೀರೆ ಇತ್ತ ನೀರಜಾಕ್ಷ |

ಜಾರ, ಚೋರ, ಆನಂದಕಂದ ನಂದಕುಮಾರ ಶ್ರೀಕೃಷ್ಣ ||

ಅರ್ಧಾಂಗಿಯ ತೊರೆದ ಧರ್ಮ ಸುಬೋಧಕ ಬುದ್ಧ |

ಏರಿ ಹಯವ ಬರುವ ಖಡ್ಗಧಾರಿ ಕಲ್ಕಿ ||

ಶ್ರೀಕೃಷ್ಣವಿಠ್ಠಲ ಸಕಲರುದ್ಧರಿಸಲು ನಿನಗೆ ಇಷ್ಟೆಲ್ಲಾ ವಿವಿಧ ರೂಪ ಬೇಕಿತ್ತೇ ? ||

258. ಚಕ್ರಧರ ನಕ್ರನ ಕೊಂದು |

ವಕ್ರ ಗಜರಾಜಗೆ ಮುಕ್ತಿ ಇತ್ತ ||

ಶಕ್ರನ ಗರ್ವ ಭಂಗಿಸಿದ |

ವಿಕ್ರಮ ಉರುಕ್ರಮನಿವ |

ಶ್ರೀಕೃಷ್ಣವಿಠ್ಠಲ ಕ್ರತೋಸ್ಮರ ಕ್ರತುಸ್ಮರ ||

259. ಎಷ್ಟು ಶಾಸ್ತ್ರ ಓದಿದರೇನು |

ಎಷ್ಟು ವ್ರತ-ನೇಮವಾಚರಿಸಿದರೇನು ||

ಎಷ್ಟು ತೀರ್ಥಯಾತ್ರೆ ಗೈದರೇನು |

ಎಷ್ಟು ಪ್ರತಿಮೆ ಸಂದರ್ಶಿಸಿದರೇನು ||

ಎಷ್ಟು ಭಜನೆ ಮಾಡಿದರೇನು |

ಎಷ್ಟು ಸತ್ಸಂಗದಲ್ಲಿದ್ದರೇನು ||

ಎಷ್ಟು ತೀರ್ಥ-ಪ್ರಸಾದ ಸ್ವೀಕರಿಸಿದರೇನು |

ಎಷ್ಟು ಕಷ್ಟಪಟ್ಟರೂ ಭಕ್ತಿ ಪುಟ್ಟಲಿಲ್ಲ ||

ಇಷ್ಟು ಮಾತ್ರ ತಿಳಿದೆ ಶ್ರೀಕೃಷ್ಣವಿಠ್ಠಲನೇ |

ಸೃಷ್ಟಿಕರ್ತ ನಿನ್ನ ಅನುಗ್ರಹವಾಗದೆ ಏನೂ ಸಿಗದು ||

260. ದೆವ್ವ ಮೆಟ್ಟಿದೆ ಎನಗೆ ಪ್ರಾಪಂಚಿಕ ವಿಷಯಗಳ |

ಜವರಾಯನ ಭಯವಿಲ್ಲದೆ ಅನಾಚಾರ ಮಾಡುವ ||

ಭವ ಬಂಧ ಬಿಡಿಸಿ ಭಕ್ತರ ಸಂಗದಿ ಕೂಡುವಂತೆ |

ಅವ್ವ ಲಕುಮಿ, ನಿನ್ನಂತರ್ಯಾಮಿ ಶ್ರೀಕೃಷ್ಣವಿಠ್ಠಲಗೆ ಪೇಳೇ ||

ಶ್ರೀ ಕೃಷ್ಣವಿಠ್ಠಲಪದಗುಚ್ಛ 3 ಅನುಕ್ರಮಣಿಕಾ

261. ಸುದಾಮ ಸಖ ಅನಿಮಿತ್ತ ಬಂಧುವೇ |

ಚೆಂದದಿ ಕಾಯೋ ಜನುಮ ಜನುಮದಿ ||ಪ||

ಎಂದಿಗೂ ಮಾನ ಅವಮಾನ ನಿನದಯ್ಯಾ |

ಆದದಾಯಿತು ಪಾಪಗಳ ಕಳೆದು ದಯದಿ ||

ಮುಂದೆಂದೂ ಹಾದಿ ತಪ್ಪದಂತೆ ಮಾಡು |

ಭೇದವೆಣಿಸದೆ ನೋಡು ಸಮದರ್ಶಿಯೇ ||1||

ಹೃದಯ ಮಂದಿರದಲಿ ಸ್ಥಿರದಿ ನೆಲೆಸು |

ಎಂದೆಂದೂ ವಿಸ್ಮರಣೆ ಬರದಿರಲಿ ||

ಒಂದೇ ಮನದಿ ಸದಾ ಸ್ಮರಿಸುವಂತಾಗಲಿ |

ಸುಂದರಿನಾಥ ನಿನ್ನ ದರುಶನವಾಗಲಿ ||2||

ಮಂದಿಯೊಳಗಾಡಿಸಿ ಮಂದನೆನಿಸಬೇಡ |

ಕುಂದುಗಳೆಣಿಸದೆ ಕಂದಿಸದೆ ಎನ್ನ ||

ಬಂದು ಭರದಿಂ ಸಲಹೋ ಶುದ್ಧಾತ್ಮ |

ಯದುಕುಲಚಂದ್ರ ಶ್ರೀಕೃಷ್ಣವಿಠ್ಠಲ ||3||

262.. ಮನದಿ ಮಾತು ವ್ಯಕ್ತವಾಗಲು ಭಾಷೆ ಬೇಕು |

ಮನದ ಮಾತು, ಆಡುವ ಭಾಷೆ ಬೇರೆಯಾಗಲೂಬಹುದು ||

ಮಾನ್ಯ-ಅಮಾನ್ಯತೆ ಬರುವುದು ಆಡುಭಾಷೆಯಿಂದ |

ಮೌನದಿಂದ ತಿಳಿಸುವದಕ್ಕೆ ಭಾಷೆಬೇಡ ||

ಮೌನದೊಳಡಗಿಹುದು ಪ್ರೀತಿ, ದ್ವೇಷ, ರೋಷ, ಆನಂದ |

ಕಣ್ಣಿನ ಮೌನ ಭಾಷೆಯಿಂದ ಭಾವನೆವಿದಿತ ||

ಕಾಣದ ದೈವ ಶ್ರೀಕೃಷ್ಣವಿಠ್ಠಲ ಮನದೊಳಗಿದ್ದು ಎಲ್ಲ ನಡೆಸುವ ||

263.. ಭಾಷೆ ತಿಳಿಯದು ಹಕ್ಕಿಗಳ ಇಂಚರದ |

ಭಾಷೆ ತಿಳಿಯದು ಪ್ರಾಣಿಗಳ ಕೂಗಾಟದ ||

ಭಾಷೆ ಭಿನ್ನ, ವೇಷ, ಆವಾಸ ಭಿನ್ನ |

ಪುಷ್ಪಗಳ ವಿಭಿನ್ನ ಸುಗಂಧದ ಮೂಲ ತಿಳಿಯದು ||

ಪುಷ್ಟಿಕರ ಜೇನರುಚಿ ಇರುವ ಬಗೆ ಅರಿಯದು |

ಭಾಷೆಯಾಡದ ಹರಿವ ಜಲದ ವಿಭಿನ್ನತೆ ಗೊತ್ತಾಗದು ||

ಭಾಷೆಗಿಂತ ಉತ್ತಮ ಮೌನ, ಎಲ್ಲವೂ ತಿಳಿಸುವುದಂತೆ |

ವಿಶಿಷ್ಟ ಶ್ರೀಕೃಷ್ಣವಿಠ್ಠಲನ ಮೌನ ಒಟ್ಟಾರೆ ತಿಳಿಯದಲ್ಲ ಹೇಗೆ ? ||

264. ಭಿನ್ನಾಭಿನ್ನ ಈ ಪ್ರಪಂಚದೆಲ್ಲೆಡೆ ಸತ್ಯದಿ ಇದೆ |

ತಿನ್ನುವ ಅನ್ನದಿಂದ, ಅನ್ನುವ ವೇದದವರೆಗೂ ಇದೆ ||ಪ||

ಹೂವ ರಸ-ರುಚಿ ಬೇರಾದರೂ ಮಧುವಿನ ರುಚಿ ಒಂದೇ |

ಜೀವಿಗಳು ಭಿನ್ನರೂಪವಾದರೂ ಒಳಗಿರುವ ಪರಮಾತ್ಮನೊಬ್ಬನೇ ||

ಬದುಕುವ ಜೀವನ ಬೇರೆಯಾದರೂ ನಿಶ್ವಿತ ಮೃತ್ಯು ಒಂದೇ |

ನದಿ ಜಲದ ರುಚಿ ಬೇರಾದರೂ ಸಮುದ್ರ ನೀರು ಉಪ್ಪೇ ||1||

ಒಡಾಡಲು ಕಾಲುಗಳೆರಡಾದರೂ ನಡಿಗೆ ಒಂದೇಕಡೆ |

ನೋಡುವ ಕಣ್ಣು ಎರಡು ಬೇರಾದರೂ ದೃಷ್ಟಿ ಒಂದೇ ||

ದೇವತೆಗಳು ಹಲವಾರು ಇದ್ದರೂ ಪರದೈವನೊಬ್ಬನೇ |

ಅವತಾರರೂಪ ಬೇರೆಯಾದರೂ ಮೂಲರೂಪದ ಶ್ರೀಕೃಷ್ಣವಿಠ್ಠಲನೊಬ್ಬನೇ ||2||

265. ಯಾರು ಆಕಾಶದಲ್ಲಿ ಶಬ್ದ ಇಟ್ಟವರು ? |

ಯಾರು ವಾಯುವಿನಲ್ಲಿ ಸ್ಪರ್ಶವಿಟ್ಟವರು ? ||

ಯಾರು ಅಗ್ನಿಯಲ್ಲಿ ರೂಪ ಇಟ್ಟವರು ? |

ಯಾರು ನೀರಿನಲ್ಲಿ ರಸ ಇಟ್ಟವರು ? ||

ಯಾರು ಪೃಥ್ವಿಯಲಿ ಗಂಧವಿಟ್ಟವರು ? |

ಯಾರು ಚೇತನರಲ್ಲಿ ಚೇತನವಿಟ್ಟವರು ? ||

ಪರಮ ಚೇತನ ಶ್ರೀಕೃಷ್ಣವಿಠ್ಠಲನೇ ಅಲ್ಲವೆ ? ||

266. ಯಾರು ಜೀವಿಗಳಲಿ ಅಷ್ಟಮದವಿಟ್ಟವರು ? |

ಯಾರು ಸಂಸಾರದಿ ಅಭಿಮಾನವಿಟ್ಟವರು ? ||

ಯಾರು ಮನದಿ ಅಹಂಕಾರವಿಟ್ಟವರು ? |

ಯಾರು ದಿವಾ-ರಾತ್ರಿಯಲಿ ಆಯಸ್ಸುಇಟ್ಟವರು ? ||

ಯಾರು ಸೃಷ್ಟ ವಸ್ತುವಿಗೆ ನಾಶವಿತ್ತವರು ? |

ಯಾರು ದೇಶ, ಕಾಲ, ಗುಣ ಬಿಟ್ಟಿರದವರು ? ||

ಪರಮ ಮಹದ್ಬ್ರಹ್ಮ ಶ್ರೀಕೃಷ್ಣವಿಠ್ಠಲನಲ್ಲವೆ ? ||

267. ಎಲ್ಲ ಮೊಡಗಳು ಮಳೆ ಸುರಿಸುವುದಿಲ್ಲ |

ಎಲ್ಲ ವೀರ್ಯಾಣುಗಳಿಂದ ಶಿಶು ಪುಟ್ಟುವುದಿಲ್ಲ ||

ಎಲ್ಲ ಆಶ್ರಮಿಗಳಿಗೆ ಒಂದೇ ತರದ ಯಜ್ಞವಿಲ್ಲ |

ಎಲ್ಲ ಬೀಜಗಳಿಂದ ಉತ್ಕೃಷ್ಟ ಸಸ್ಯ ಹುಟ್ಟುವುದಿಲ್ಲ ||

ಎಲ್ಲ ತಿನ್ನುವುದರಿಂದ ದೇಹಕ್ಕೇ ಹಿತವಿಲ್ಲ |

ಎಲ್ಲ ಕರ್ಮಾಚರಣೆ ಒಂದೇ ಬಗೆಯದಲ್ಲ ||

ಎಲ್ಲ ಕರ್ಮಗಳು ಹರಿ ಪ್ರೀತ್ಯರ್ಥವಾಗುವುದಿಲ್ಲ |

ಕೆಲವು ಮಾತ್ರ ಶ್ರೀಕೃಷ್ಣವಿಠ್ಠಲನ ದಯದಿ ಫಲವೀವುದು ||

268.. ನಮಗೆ ಜಿಹ್ವೆ ಮೂಲಕ ರಸಸ್ವಾದನೆ |

ನಮಗೆ ಕಿವಿಯ ಮೂಲಕ ಶಬ್ದ ಗ್ರಹಣ ||

ನಮಗೆ ನಾಸಿಕದ ಮೂಲಕ ಆಘ್ರಾಣ |

ನಮಗೆ ಕಣ್ಣಿನ ಮೂಲಕ ಮಾತ್ರ ದೃಷ್ಟಿ ||

ನಮಗೆ ಕಾಲಿನಿಂದ ಮಾತ್ರ ನಡಿಗೆ |

ಬೊಮ್ಮಪಿತ ಶ್ರೀಕೃಷ್ಣವಿಠ್ಠಲ ಮಾತ್ರ ಒಂದೇ ಅವಯವದಿ ಸರ್ವಕಾರ್ಯಮಾಡಬಲ್ಲ ||

269.. ಕಣ್ಣಿನಿಂದ ದೃಷ್ಟಿ-ಸೃಷ್ಟಿ |

ಕಣ್ಣಿನಿಂದ ಭಯ-ಲಯ ||

ಕಣ್ಣಿನಿಂದ ಶಾಪ-ಅನುಗ್ರಹ |

ಕಣ್ಣಿನಿಂದ ಹಗಲು-ರಾತ್ರಿ ||

ಕಣ್ಣಿನಿಂದಲ್ಲದೆ ಬೇರೆ ಅಂಗದಿಂದಲೂ |

ಕಣ್ಮಣಿ ಶ್ರೀಕೃಷ್ಣವಿಠ್ಠಲ ಸರ್ವಕಾರ್ಯಮಾಳ್ವ ||

270.. ಸ್ವಾರ್ಥಕ್ಕಾಗಿ ಎಷ್ಟು ಜೀವಿ-ಸಸ್ಯಗಳ ಬಲಿ ಕೊಡುವೆವೋ |

ಸತ್ತು ಹೋಗುವ ಭಯದಿ ಎಷ್ಟು ಪ್ರಾಣಿಗಳ ವಧಿಸುವೆವೋ ||

ಪ್ರತಿ ಹೆಜ್ಜೆ ಕೆಳಗೆ ಎಷ್ಟು ಕ್ರಿಮಿಗಳು ಸಾಯುವವೋ |

ಪ್ರತಿ ಚಪ್ಪಾಳೆಯಲ್ಲಿ ಎಷ್ಟು ಕ್ರಿಮಿಗಳು ಸಾಯುವವೋ ||

ಪ್ರತಿ ಮಾತಿಗೆ ಬಾಯ್ದೆರೆದಾಗ ಎಷ್ಟು ಕ್ರಿಮಿ ಸಾಯುವವೋ |

ಪ್ರತಿ ತುತ್ತಿಗೆ ಎಷ್ಟು ಕ್ರಿಮಿ ನುಂಗುವೆವೋ ||

ಪ್ರತಿ ಉಸಿರಿಗೂ ಎಷ್ಟು ಕ್ರಿಮಿಗಳು ಸಾಯುವವೋ |

ಪ್ರತಿ ಒಂದು ದಿನದ ಬದುಕಿಗೆ ಹತ್ತು ಜನ್ಮವೆತ್ತುವಷ್ಟು ಪಾಪ ||

ಹೊತ್ತು ತಿರುಗುವ ಜೀವಕ್ಕೆ ಮುಕ್ತಿ ಹೇಗೆ ಸಾಧ್ಯ ? |

ಭಕ್ತಿಯ ಶಕ್ತಿಯಿಂದ ಎಲ್ಲಾ ಪಾಪ ಅಳಿವುದು ಶ್ರೀಕೃಷ್ಣವಿಠ್ಠಲ ದಯದಿ ||

271. ಸಿಕ್ಕು ಬಿದ್ದೆನಲ್ಲ ಸಂಸಾರದ ಕೆಸರಲಿ |

ಸಿಕ್ಕ ಸಿಕ್ಕ ದಾರೀಲಿ ತಿರುಗಿ ಇಲ್ಲಿ ಬಂದೆನಲ್ಲ ||

ಸಿಕ್ಕು ಬಿಡಿಸುವುದ್ಹೇಗೆಂದು ಕಾಣದೆ |

ಸಿಕ್ಕಿರುವವರಿಗೆಲ್ಲಾ ಕೇಳಿ ಮೊಸಹೋದೆ ||

ಸಿಕ್ಕ ಸಿಕ್ಕಿದ್ದೆಲ್ಲಾ ಹೇಳಿ ದಾರಿ ತಪ್ಪಿಸಿದರಲ್ಲ |

ಸಿಕ್ಕಷ್ಟೇ ಸಿಗಲಿ ಎಂಬ ಆಸೆಗೆ ಸಿಲುಕಿರುವೆ ||

ಸಿಕ್ಕರೂ ಸಿಗದ ಶ್ರೀಕೃಷ್ಣವಿಠ್ಠಲನೇ ಪಾರುಗೈಸು ||

ಸಹಸಾರ್ಚಿತಸಪ್ತಜಿಹ್ವಸಪ್ತೈಧಾ ಸಪ್ತವಾಹನ | ಅಮೂರ್ತಿರನಘೋಚಿಂತ್ಯೋಭಯಕೃದ್ಭಯನಾಶನ: ||

272.. ತಿಳಿದ ಬುಧರ ಜಿಹ್ವೆಯಾಗಿರುವನ ತಿಳಿಯಲು | (ಪರಮಾತ್ಮ)

ತಿಳಿದ ಸಜ್ಜನರ ಸಮೂಹ ಸೇರಿ || (ಸತ್ಸಂಗ)

ಏಳು ತರದ ಕಟ್ಟಿಗೆ ಒಟ್ಟಿ | (ರೂಪ, ಶಬ್ಧ, ಗಂಧ, ರಸ, ಸ್ಪರ್ಶ, ಸಂಶಯ, ನಿಶ್ವಯ)

ಏಳು ತರದ ಬೆಂಕಿ ಉರಿಸಿ || ( ಇವುಗಳ ಜ್ಞಾನದಿ)

ಏಳು ತರದಿಂದ ಅನುಭವಿಸಿ | (ಅನುಭವ ಜ್ಞಾನದಿ)

ಏಳು ತರದ ಗಾಡಿಯೆಳೆವ || (4 ವೇದ ಮೂಲರಾಮಯಣ, ಮಹಾಭಾರತ, ಪಂಚರಾತ್ರ)

ಏಳು ತರದ ರಥದಿ ಕುಳಿತವ | ( ಉಪಸ್ಥಿತ ಭಗವಂತನ ತಿಳಿಸುವ ಗುರು)

ಗೆಳೆಯ, ದೋಷದೂರ ಆನಂದ |

ಕಳವಳದಿ ಅಭಯ ನೀಡುವನೆಂದು |

ತಿಳಿಸುವ ಅಚಿಂತ್ಯ ಶ್ರೀಕೃಷ್ಣವಿಠ್ಠಲನ ಗುಣಗಳ ||

ಶ್ರೀಮದ್ಭಾಗವತದ ಸರಳ ಅರ್ಥ

273. ತಪವೇ ಶ್ರೀಮದ್ಭಾಗವತ ಸಾರಬೋಧ |

ತಪವೆಂದರೆ ದೀರ್ಘ ಆಲೋಚನೆ, ಚಿಂತನೆ ||

ತಪವೆಂದರೆ ಸತ್ಯತೆಯ ದೀಕ್ಷೆ ಸ್ವೀಕಾರ |

ತಪದಿಂದ ಐಹಿಕ-ಪರಮಾರ್ಥ ಸುಖ ||

ತಪದಿಂಧ ದುಷ್ಟ ಶಕ್ತಿ ನಾಶನ |

ತಪದಿಂದ ಭಗವದ್ ಸಾಕ್ಷಾತ್ಕಾರ ||

ತಪದಿಂದ ಭೋಗಸುಖ, ಮುಕ್ತಿ |

ತಪವೆಂದರೆ ಶ್ರದ್ಧೆ ನಂಬಿಕೆಗಳ ಗೂಡು ||

ತಪವೆಂದರೆ ಅಚಲ ನಿಷ್ಠೆದ್ಯೋತಕ |

ತಪದಿಂದ ಶಾಪ-ಅನುಗ್ರಹ, ಮೋಚಕ ||

ತಪವೆಂದರೆ ಮಾಡುವ ಕೆಲಸದಿ ನಿಷ್ಠೆ |

ತಪವೆಂದರೆ ಪ್ರಾಮಾಣಿಕ ಪ್ರತೀಕ ||

ತಪವೆಂದರೆ ವಚನದಲ್ಲಿ ನಂಬಿಕೆ |

ತಪವೆಂದರೆ ಮಾಡುವ ಕೃತ್ಯದಿ ಪ್ರೀತಿ ||

ತಪವೆಂದರೆ ಹಿರಿಯರ ಮಾತಲಿ ವಿಶ್ವಾಸ |

ತಪವೆಂದರೆ ಗುರುಗಳಲಿ ಶ್ರದ್ಧೆ ||

ತಪವೆಂದರೆ ಅಸಾಧ್ಯ ಸಾಧ್ಯವಾಗಿಸುವುದು |

ತಪ ಮಾಡಲು ಜಾತಿ, ಲಿಂಗ, ವಯಸ್ಸು ಅಭೇಧ ||

ತಪವೆಂದರೆ ಸರ್ವಕಾಲಿಕ ಸರ್ವರ ಉದ್ಧಾರ ಮಾರ್ಗ |

ತಪವೆಂದರೆ ಕೆಲಸದಿ ಸಾಧಿಸಲುಯಶ ||

ತಪವೆಂದರೆ ಜೀವನಸಾರದ ಸತ್ಯ |

ತಪ ಜೀವಿತದಿ ಸಾಧಿಸಿದರೆ ಮುಕ್ತಿಗೆ ಸೋಪಾನ ||

ತಪ ಸಾಧಿಸಿ ಜೀವಿಯ ಸೃಷ್ಟಿಸಿದ |

ತಪ ಸಾಧಿಸಿ ಪ್ರಾಣಿಯಾದರೂ ಮೋಕ್ಷಪ್ರಾಪ್ತಿ ||

ತಪ ಸಾಧಿಸಿದ ಬಾಲಕರಿಗೆ ಪ್ರತ್ಯಕ್ಷನಾದ |

ತಪ ಸಾಧಿಸಿ ಋಷಿ ಲಯ ಅನುಭವಿಸಿದ ||

ತಪದಿಂದ ಭಗವದ್ ಸಂತಾನಪ್ರಾಪ್ತಿ |

ತಪವೆಂದರೆ ಶ್ರೀಮದ್ಭಾಗವತೇ ಸಾಕ್ಷಿ ||

ತಪದಿಂದ ಶ್ರೀಕೃಷ್ಣವಿಠ್ಠಲನಲ್ಲಿ ಸಾಯುಜ್ಯಪ್ರಾಪ್ತಿ ||

274. ತಾಯೇ, ಹರಿಣಾಕ್ಷಿಯೇ ಸ್ಥಿರದಿ ಪೇಳೆ, ಕಾಯಲು ಎನ್ನ ಸದಾ ||ಪ||

ಮಾಯಾಂಗಿನಿ ಪ್ರಪಂಚವ ಮಾಯೆಯಲಿ ಇಟ್ಟವಳೇ ||ಅಪ||

ಮೋಹಿನಿ ರೂಪದಿ ಮರುಳ ಮಾಡಿ ಅಮೃತವಿತ್ತವ |

ಮೋಹ ಹುಟ್ಟಿಸಿ ಬಿಡಿಸುವ ಸಕಲ ಲೋಕಪಾಲಕ ||

ಬಹುವೇಷಧರಿಸಿ ಭಕ್ತರ ಉದ್ಧರಿಸಿ ಸಲಹುವಗೆ |

ಸಹನೆಯಿಂದ ಪಾಪ ಕಳೆದು ಸಾಲೋಕ್ಯದಲ್ಲಿಡಲು ಪೇಳೆ || ||1||

ಸಮುದ್ರ ಮಥನದಿ ಮಂದರಗಿರಿ ಎತ್ತಿದ |

ಮನ್ಮಥಪಿತನವರಿಸಿ ಕ್ಷೀರಸಾಗರದಿ ಕುಳಿತು ||

ಮನ್ಮೋಹಕ ಮುಗುಳುನಗೆ ಬೀರುತ್ತಾ ಪಾದ ಸೇವಿಸುವಳೇ |

ಕರ್ಮಗಳ ಕಳೆದು ಸಾಮಿಪ್ಯದಲ್ಲಿಡಲು ಪೇಳೆ || ||2||

ಸುರಪ್ರಿಯ ಸತ್ಯ ಅನಾದಿ ಜ್ಞಾನ ಮೂರುತಿ |

ಸುರನದಿ ಭುವಿಗೆ ಹರಿಸಿ ಪಾವನಗೊಳಿಸಿ ||

ಊರುವಿನಿಂದ ಅಪ್ಸರೆ ಪುಟ್ಟಿಸಿ ಅಚ್ಚರಿಸಿದ ಯೊಗಿಗೆ |

ಅರ್ಧಾಂಗಿನಿ ಶ್ರೀಕೃಷ್ಣವಿಠ್ಠಲಪ್ರಿಯೆ ಸಾಯುಜ್ಯ ನೀಡಲು ಪೇಳೆ || ||3||

275 ಕರುಣಾಕರ ನೀನಲ್ಲವೆ ? ಧಯಾನಿಧಿ |

ಸರ್ವರಪಾಲಿಪ, ತಂದೆ ಕರುಣಾಕರ ||ಪ||

ಬಂಧನವ ಬಿಡಿಸಯ್ಯಾ ಕರುಣಾಕರ |

ಚೆಂದದಿ ಸಲಹಯ್ಯಾ ಕರುಣಾಕರ ||

ಒಂದೇ ಮನದಿ ಬೇಡಿಕೊಂಬೆ ಕರುಣಾಕರ |

ಮಂದಮತಿಯನುದ್ಧರಿಸೋ ಕರುಣಾಕರ ||1||

ಕಾಲಿಗೆ ಬಿದ್ದೆನಯ್ಯಾ ಕರುಣಾಕರ |

ಪಾಲಿಸೆನ್ನ ಕೈಪಿಡಿದು ಕರುಣಾಕರ ||

ಬಲವಿತ್ತು ಮೇಲೆತ್ತು ಕರುಣಾಕರ |

ಒಲವಿಂದ ನೋಡಯ್ಯಾ ಕರುಣಾಕರ ||2||

ಕೂಸಿನ ಸಂಕಟ ಅರಿಯದೇ ಕರುಣಾಕರ |

ಹೇಸಿಯೆಂದು ತಳ್ಳುವರೇ ಕುರುಣಾಕರ ||

ಎಸಗಿದ ತಪ್ಪು ಮನ್ನಿಸು ಕರುಣಾಕರ |

ಹೊಸ ಶಾಶ್ವತ ಬಾಳುನೀಡು ಶ್ರೀಕೃಷ್ಣವಿಠ್ಠಲ ||ಕರುಣಾಕರ ||3||

276. ಪರಮಾತ್ಮಗೆ ಜ್ಞಾನವೇ ಹೃದಯ |

ಪರಮಾತ್ಮಗೆ ಆನಂದವೇ ಶರೀರ ||

ಪರಮಾತ್ಮಗೆ ಕ್ರಿಯೆಗಳೇ ಆಕಾರ |

ಪರಾತ್ಪರ ಶ್ರೀಕೃಷ್ಣವಿಠ್ಠಲ ಅವಿನಾಶಿ ||

ದಶಾವತಾರದ ಪ್ರಾರ್ಥನಾ ದಶಕ

277. ಭೂಮಿಯನ್ನು ಕಕ್ಷೆಯಲ್ಲಿರಿಸಿದ ವರಾಹನೇ |

ನಮ್ಮ ಭಕ್ತಿ ಕಕ್ಷೆಯಿಂದ ಕಳಚುತ್ತಿದೆ ಉದ್ಧರಿಸು ||1||

ಸಮುದ್ರದಿ ಮುಳುಗುವ ಬೆಟ್ಟ ಅಡಿಯಿಂದೆತ್ತಿದ ಕೂರ್ಮನೇ |

ನಮ್ಮ ಅಕ್ಷಮ್ಯ ಅಪರಾಧ ಬೆಟ್ಟದಿಂದೆತ್ತಿ ಉದ್ಧರಿಸು ||2||

ಕಮಂಡಲದಿಂದ ಬಂದು ಪ್ರಳಯದಲಿ ತೇಲಿಸಿದ ಮತ್ಸನೇ |

ನಮ್ಮ ಮಮಕಾರದಲಿ ತೇಲುತ್ತಿರುವುದ ತಪ್ಪಿಸಿ ಉದ್ಧರಿಸು ||3||

ಒಮ್ಮನದಿ ನಂಬಿದ ಬಾಲಕನ ಅನುಗ್ರಹಿಸಿದ ನರಸಿಂಹನೇ |

ನಮ್ಮ ಕಾಮ, ಕ್ರೋಧಾದಿಗಳನ್ನು ಸುಟ್ಟು ಉದ್ಧರಿಸು ||4||

ಬ್ರಾಹ್ಮಣನಾಗಿ ಬಂದು ಕ್ಷತ್ರಿಯರ ತರಿದ ಪರಶುರಾಮನೇ |

ನಮ್ಮ ಅಹಂಕಾರದ ಹೆಮ್ಮರ ತರಿದು ಉದ್ಧರಿಸು ||5||

ತ್ರಿಮಾತೆಪುತ್ರ ಜಾನಕಿಕಾಂತ ಮಾರುತಿ ಪ್ರಾಣ ಶ್ರೀರಾಮನೇ |

ನಮ್ಮ ಚತುರಾರ್ಥಗಳು ಪರಸೇವೆ ಯಾಗುವಂತೆ ಉದ್ಧರಿಸು ||6||

ಮನ್ಮೋಹಕ ರೂಪನೇ ಯಧು ಕುಲೋದ್ಧಾರಕ ಶ್ರೀಕೃಷ್ಣನೇ |

ನಮ್ಮ ಹೃನ್ಮಂದಿರದಿ ನೆಲಸಿ ಜ್ಞಾನ, ಭಕ್ತಿ ಇತ್ತು ಉದ್ಧರಿಸು |||7||

ಧರ್ಮವ ಉಳುಹಲು ಅಧರ್ಮ ಉಪದೇಶಿಸಿದ ಬುದ್ಧನೇ | ನಮ್ಮ ಜೀವನದ ಕತ್ತಲು ಪರಿಹರಿಸಿ ಉದ್ಧರಿಸು ||8||

ಧರ್ಮಯುದ್ಧಕ್ಕಾಗಿ ಖಡ್ಗಪಾಣಿ, ಹಯವೇರಿದ ಕಲ್ಕಿಯೇ |

ನಮ್ಮ ಬಂಧ ಪಾಶ ಬಿಡಿದಿ ಶ್ರೀಕೃಷ್ಣವಿಠ್ಠಲನಡಿಗೆ ಬೀಳಿಸಿ ಉದ್ಧರಿಸು ||9||

278. ಪರಮಾತ್ಮ ಐಶ್ವರ್ಯಾದಿ ಧರ್ಮಸ್ವರೂಪ |

ಪರಮಾತ್ಮ ಅನಂತ ಶಕ್ತಿ ಸ್ವರೂಪ ||

ಪರಮಾತ್ಮಗಿಲ್ಲ ಲೌಕಿಕ ಆನಂದ ರೂಪ |

ಪರಮಾತ್ಮ ಅಸಂಖ್ಯಾತ ಜ್ಞಾನಾದಿ ಗುಣಪೂರ್ಣ ||

ಪರಮಾತ್ಮ ಸ್ವಾಭಾವಿಕ ಉತ್ತಮೋತ್ತ ಉತ್ತುಂಗ |

ಪರಮಾತ್ಮ ಶ್ರೀಕೃಷ್ಣವಿಠ್ಠಲನೇ ಸರ್ವಪ್ರಣೀತ ||

279. ದೈನ್ಯಕೆ ಸಿಲುಕುವ ದೇವನಲ್ಲನಿವ |

ಚೆನ್ನಾದ ನಿಷ್ಕಲಂಕ ಭಕ್ತಿಗೊಲಿವ ||

ಭಿನ್ನಾಭಿನ್ನ, ಅವ್ಯಕ್ತಾವ್ಯಕ್ತ, ಶೂನ್ಯ ನಾಮಕನಿವ |

ಧ್ಯಾನಕ್ಕೆ ನಿಲುಕುವ ಗುಣಗಳು ಚಿಂತ್ಯಾ ||(ಲಕ್ಷ್ಮೀ, ಬ್ರಹ್ಮರಿಗೆ )

ಅನ್ಯರಿಗೆ ಧ್ಯಾನಿಸಲು ಅಶಕ್ಯಗುಣಗಳೇ ಅಚಿಂತ್ಯಾ (ಇತತರಿಗೆ)

ಮಾನ್ಯ ಶ್ರೀಕೃಷ್ಣವಿಠ್ಠಲನೇ ಚಿಂತ್ಯಾ: ಅಚಿಂತ್ಯಾ: ||

280. ತುಳುಸಿಯ ನಿಜ ಮಂದಿರ ವೃಂದಾವನ |

ತುಳುಸಿಲಿ ನಿತ್ಯ ಶ್ರೀಹರಿ ಸನ್ನಿಧಾನ ||ಪ||

ತುಳುಸಿ ವೃಂದಾವನವಿರೆ ಮನೆ-ಮನ ಶಾಂತಿಸ್ಥಾನ ||ಅಪ||

ಧನ್ವಂತರಿಯ ಅಶ್ರುಬಿಂದುಲಿ ಜನಿಸಿದಳು ರೂಪಮತಿ |

ಸರ್ಮ ಪುಪಷ್ಪಗಳಾರ್ಪಣೆ ಫಲ ತುಳುಸಿ ಅರ್ಪಿಸಲಹುದು ||

ದೇವಿ ಜಾಂಬುವತಿ ತುಳಸಿ ರೂಪದಿ ಹರಿಸೇವಿಪಳು |

ಸರ್ಮ ಸಾಧನೆ ಇದ್ದು ತುಳುಸಿ ಇಲ್ಲದ ಪೂಜೆ ಹರಿ ಕೊಳ್ಳನೋ ||1||

ದುರಿತ ಕಳೆದು ದರುಶನದಿ ಫಲವೀವಳು ನಿಶ್ಚಯ |

ಸರ್ವ ಹತ್ಯೆಯ ಪಾಪ ಕಳೆದು ಗೋದಾನ ಪುಣ್ಯ ಲಭ್ಯ ||

ತೀರ್ಥಾಭಿಮಾನಿಗಳು ಮೂಲದಿ, ಮಧ್ಯೆ ಸರ್ಮದೇವತೆಗಳವಾಸ |

ಅಗ್ರಭಾಗದಿ ಸರ್ವವೇದಾಭಿಮಾನಿಗಳಿದ್ದು ಅಭೀಷ್ಟೆ ಪೂರೈಪರು ||2||

ತುಳಸಿ ನಿಂದಿಸಿದವರೆಲ್ಲಾ ಜಗದಿ ನಿಂದ್ಯರಾಗುವರು |

ತುಳಸಿ ವಂದಿಸಿದವರೆಲ್ಲಾ ಸುರ-ನರ ವಂದ್ಯರಾಗುವರು ||

ತಿಳಿದ ಸಜ್ಜನರು ನಿತ್ಯದಿ ಪೂಜಿಸಲು ಪಾಪ ಪರಿಹಾರ |

ತುಳಸಿಸಹಿತ ಶ್ರೀಕೃಷ್ಣವಿಠ್ಠಲನಂಘ್ರಿ ಪೂಜಿಸೆ ಇಹ-ಪರದಿ ಸೌಖ್ಯ ||3||

281. ಇದ್ದಾಗ ಇಲ್ಲದ ಚಿಂತೆ, ಇಲ್ಲದಾಗ ಇರುವುದರ ಚಿಂತೆ |

ಎದ್ದಾಗ ಬೀಳುವ ಚಿಂತೆ ಬಿದ್ದಾಗ ಏಳುವ ಚಿಂತೆ ||

ಉಂಡು ಅಜೀರ್ಣವಾದಾಗ ಉಪವಾಸದ ಚಿಂತೆ, ಉಪವಾಸದಿ ಊಟದ ಚಿಂತೆ |

ನಿದ್ದೆಯಿದ್ದಾಗ ಎಚ್ಚರದ ಚಿಂತೆ, ಎಚ್ಚರದಿ ನಿದ್ದೆ ಚಿಂತೆ ||

ಸದ್ದು ಜೋರಾದಾಗ ನಿಶಬ್ದದ ಚಿಂತೆ, ನಿಶಬ್ದವಾದಾಗ ಶಬ್ದದ ಚಿಂತೆ |

ಇದ್ದರೂ ಹೆರವರ ವಸ್ತು ಕದಿಯುವ ಚಿಂತೆ, ಕದ್ದಮೇಲೆ ಉಳಿಸುವ ಚಿಂತೆ ||

ಇದ್ದೂ ಇಲ್ಲದಂತಿರಬೇಕೆಂಬ ಅರಿವಿನ ಚಿಂತೆ ಅನುಗಾಲಕೂ ಚಿಂತೆ |

ಹೊದ್ದ ಆಸೆಯ ಹೊದಿಕೆ ಸರಿಯದೆ, ಮುಗಿಯದಿರುವ ಚಿಂತೆ ||

ಒದ್ದಾಡುತ್ತಾ ಗುದ್ದು ತಿಂದು ಪೆದ್ದನಂತೆ ಜೀವನ ಗತಿಸಿದರೂ |

ಚಿದ್ದೇಹ ಮುದ್ದು ಶ್ರೀಕೃಷ್ಣವಿಠ್ಠಲನ ಚಿಂತೆ ಬರುವುದೇ ?||

ಧರ್ಮಚಕ್ರಸಾರ

282. ಚಕ್ರ, ಚಕ್ರ ಧರ್ಮಚಕ್ರ ತಿರುಗುತಲೇ ಇರುವುದು |

ಧರ್ಮಚಕ್ರ ಯುಗಯುಗದಿ ತಿರುಗುತಲೇ ಇರುವುದು ||

ಯಾರೂ ತಿರುಗಿಸದಿದ್ದರೂ ಅದು ತಿರುಗುತಲೇ ಇರುವುದು |

ಚಕ್ರ ಸುಖದಿ ತಿರುಗಲು ಮಾನವರೆಲ್ಲ ಶ್ರಮಿಸಬೇಕು ||

ಸೂತ್ರದಿ ಪೋಣಿಸಿದ ಮಣಿಯಂತೆ ಸರ್ವರೂ ಜೀವನಿಯಮಬದ್ಧರು |

ಸರಳದಿ ತಿರುಗಲು ಸಹಬಾಳ್ವೆಯಲಿ ಔದಾರ್ಯಬೇಕು ||

ಸರ್ವರೂ ಯಜ್ಞ, ದಾನ, ತಪೋವಂತರಾಗಬೇಕು |

ಚಕ್ರಕಾಲ ಕಾಲದಿ ಬದಲಿಸಿದರೂ ಧ್ಯೇಯ ಒಂದೇ ಇರಬೇಕು ||

ವರ್ಜಿಸಿ ಕಾಮಕ್ರೋಧಗಳ ಇನ್ನೊಬ್ಬರ ಕಷ್ಟಕೆ ಒದಗಬೇಕು |

ಸ್ವಾರ್ಥಿಯಾಗದೇ ಪ್ರಿತಿ, ದಯೆ, ಶಾಂತಿ ಉಸಿರಾಗಿಸಬೇಕು ||

ಬರೀ ನಾವು ಸುಖಿಸಿದರೆ ಸಾಲದು ಬೇರೆಯವರನ್ನೂ ಸುಖಿಯಾಗಿಸಬೇಕು |

ಬರುವವರಿಗೆ ಸುಖ ಜೀವನದ ಭದ್ರತೆ ಕಲ್ಪಿಸಿ ಹೋಗಬೇಕು ||

ದಾರಿದ್ರ್ಯ, ನೆಲ, ಜಲ, ಆಹಾರ ಕ್ಷಾಮಕೆ ಕಾರಣವಾಗಬಾರದು |

ಆರೋಗ್ಯ, ಸುಖದ ವಾತಾವರಣ ಸಾಧಿಸಿ, ಉಳಿಸುವ ಕಾರ್ಯಸಾಧಿಸಬೇಕು ||

ಸರ್ವರೂಪ ಸುಖದ ಸೂತ್ರ ಅಳವಡಿಸಿ ಮುಂದಿನವರಿಗೆ ಕೊಡಬೇಕು |

ಧರ್ಮದ ಮರ್ಮವೇ ನಿಜ ಜೀವನದ ಸುಖದ ಸಾರ ||

ಧರ್ಮ ಚಕ್ರದ ರೂವಾರಿ ಶ್ರೀಕೃಷ್ಣವಿಠ್ಠಲನಲಿ ನಿಜಭಕ್ತಿ ಬೆಳೆಸಬೇಕು ||

283. ಬ್ರಹ್ಮಾಂಡದಿ ಸಣ್ಣ ಕ್ರಿಯೆ ಹಿಂದೆ ಎಷ್ಟೊಂದು ಕ್ರಿಯೆ ಅಡಗಿವೆ |

ಅಹಂಕಾರದಿ ನಾ ಮಾಡಿದೆ ಎನ್ನುವರಿಗೆ ಏನು ಗೊತ್ತು ? ||

ಬಹು ಜೀವರ ಶ್ರಮದಿಂದ, ಬಹು ಜನ್ಮದ ಪುಣ್ಯದಿಂದ ಸಾಧಿಸುವುದು |

ಬಹು ಜನರ ಕ್ಷೇಮಕ್ಕಾಗಿ ನಿ:ಸ್ವಾರ್ಥದಿ ಪ್ರಾರ್ಥಿಸಬೇಕು ||

ಬಹು ಜನ ಶೂಶ್ರುಷ ಮಾನವ ಜನ್ಮದ ಸಾರ್ಥಕತೆ |

ಇಹದ ಶಾಂತಿ, ಪ್ರೀತಿ ಇದರಲ್ಲೇ ಹುದುಗಿದೆ ||

ಸಹಬಾಳ್ವೆ ಮಹಿಮೆಯ ಗುಟ್ಟು ಇದರಲ್ಲೇ ಇದೆ |

ದೇಹದ ಪ್ರತೀ ಕ್ರಿಯೇ ತತ್ವಾಭಿಮಾನಿ ದೇವತೆಗಳಿಂದ ನಡೆವುದು ||

ದೇಹದ ಸುಸ್ಥಿತಿಯೂ ಬಹು ಇಂದ್ರಿಯಗಳ ಪರಿಶ್ರಮದ ಫಲ |

ಮಹತ್ವ ತಿಳಿದು ಬಳಿದರೆ ಇಹ-ಪರದಿ ಆಗುವುದು ಸೌಖ್ಯ ||

ಅಹೇಯ ಶ್ರೀಕೃಷ್ಣವಿಠ್ಠಲನೊಬ್ಬನೇ ಪರಿಶ್ರಮರಹಿತ ಸರ್ವಕರ್ತೃ ||

284. ಸುವ್ಯವಸ್ಥಿತ ಸೃಷ್ಟಿ, ನಿಯಾಮಕರು ಯಾರಿಹರು |

ಸುವ್ಯವಸ್ಥಿತ ಜಗತ್ತಿನ ವ್ಯವಸ್ಥೇಲಿ ಯಾರ ಕೈವಾಡ ||

ಸುವ್ಯವಸ್ಥಿತ ಕಾಲಚಕ್ರ ಯಾರು ಉರುಳಿಸುವರು |

ಸುವ್ಯವಸ್ಥಿತ ಜನ ಜೀವನ ಚಕ್ರ ಯಾರ ತಿರುಗುವಿಕೆ ||

ಸುವ್ಯವಸ್ಥಿತ ಪಿಂಡಾಂಡದ ರಚನಾಕಾರ ಯಾರಿಹರು |

ಸುವ್ಯವಸ್ಥಿತದಿ ಪಂಚೇಂದ್ರಿಯಗಳ ಕಾರ್ಯ ನಿರ್ಧರಿಸುವರು ಯಾರು ||

ನವ್ಯತೆಯ ಭವ್ಯತೆ ಜೀವಿಗಳಿಗೆ ಉಣಿಸುವರು ಯಾರು |

ಅವ್ಯಯ ನಮ್ಯ ಶ್ರೀಕೃಷ್ಣವಿಠ್ಠಲದ್ದೇ ಈ ಅಚಿಂತ್ಯಾಧ್ಬುತ ಕ್ರಿಯೆ ||

285. ಕೊಡಪಾನ ಒಡೆಯುವುದೆಂದು ಕೊಳ್ಳದೆ ಬಿಡುವರುಂಟೆ | (ಮಾನವಜನ್ಮ)

ಬಿಡಬೇಕಾದಿತು ಹೊರಗೆ ಉಸಿರೆಂದು ಒಳಗೆಳೆಯದಿರುವರೆ ? ||

ಗಡಿಬಿಡಿ ಜೀವನದಿ ಓಡಾಡದೆ ಕುಳಿತಿದ್ದರೆ ನಡೆವುದೆ ? | (ಜ್ಞಾನಾರ್ಜನೆ)

ನಡೆವವ ಎಡವುನಲ್ಲದೆ ಮಲಗಿದವ ಎಡುವುವನೇ ? || (ಪಾಪಕ್ಕೆ ಹೆದರಿ ಪುಣ್ಯಕರ್ಮ- ಬಿಡುವರೆ)

ಬಿದ್ದರೆ ಎತ್ತುವ ಒಡೆಯ ಶ್ರೀಕೃಷ್ಣವಿಠ್ಠಲನಿರೆ ಚಿಂತೆ ಯಾಕೆ ? ||

286. ಹಡೆದ ತಾಯ್ತಂದೆಯರ ಬಿಟ್ಟು ಗೋಕುಲಕೆ ನಡೆದೆ |

ಪಡೆದ ತಾಯ್ತಂದೆಯರ ಬಿಟ್ಟು ಮಥುರೆಗೆ ಪೋದೆ ||

ಮಡಿಕೆ ಒಡೆದು ಗೋಪಿಯರ ಕಾಡಿ ಆನಂದಿಸಿದೆ |

ಗಡಿಗೆ ಹಾಲು-ಬೆಣ್ಣೆ ಮೆದ್ದು ಗೋಪಿಯರ ತೊರೆದೆ ||

ಒಡನಾಡಿಗಳಾದ ಗೋಪಾಲಕರ ಒಡನಾಟ ತೊರೆದೆ |

ಚೆಂಡಾಡಿ ದುಷ್ಟರ ಶಿರಗಳ ಭೂಭಾರ ಇಳುಹಿದೆ ||

ಒಡನೆ ಆಸಕ್ತಿಯಲಿ ನಿರಾಸಕ್ತಿ ಬೋಧಿಸಿದೆ |

ಕೂಡಲೇ ಹಚ್ಚಿಕೊಂಡಿದ್ದು ಬಿಚ್ಚುಕೊಳ್ಳಲು ಹೇಳಿದೆ ||

ಕೂಡಿಟ್ಟದ್ದು ಪರರಿಗೆ ಕೊಟ್ಟಿದ್ದು ತನಗೆ ಎಂದೆ |

ಮಾಡದೆ ಕರ್ಮಫಲಪೇಕ್ಷೆ ಸಮರ್ಪಿಸು ಎಂದೆ ||

ಕಡೆಗೆ ಮಣ್ಣಿನಿಂದ ಹುಟ್ಟಿ ಮಣ್ಣಾಗುವ ದೇಹದ ಮೋಹ ತೊರೆಎಂದೆ |

ನಡೆದಂತೆ ನುಡಿದೆ ನುಡಿದಂತೆ ನಡೆದೆ ||

ಪದ್ಮಪತ್ರದಂತೆ ಸಂಸಾರದಲ್ಲಿದ್ದು ಪಯಣಿಸು ಎಂದೆ |

ಪದುಮನಾಭ ಶ್ರೀಕೃಷ್ಣವಿಠ್ಠಲ ದಯಾಂಬುಧೇ ಶರಣೆಂಬೆ ತಾರಿಸೆನ್ನ ||

287. ಪ್ರಸನ್ನ ಸುಂದರ ಮೂರುತಿ ಯಾರೆಂದು ಪೇಳಲಿ |

ಪ್ರಸಿದ್ಧನಿವ ಸುಜ್ಞಾನವಂತ ಪಸರಿಸಿಹನೆಲ್ಲಡೆ ಇಹ-ಪರದಿ ||ಪ||

ತ್ರೇತಾಯುಗದಿ ಆಂಜನೇಯನಾಗಿ |

ಮತ್ತೆ ದ್ವಾಪರದಿ ಬಲಭೀಮನಾಗಿ ||

ಇತ್ತ ಕಲಿಯುಗದಿ ಮಧ್ವರಾಗಿ |

ಸತತ ರಾಮ ಕೃಷ್ಣ, ವ್ಯಾಸರ ಸೇವಿಸುವ ||1||

ಹುಟ್ಟುತಲೆ ಸೂರ್ಯನೆಡೆಗೆ ಜಿಗಿದ |

ಮುಷ್ಟಿಯಲಿ ಬಂಡೆ ಪುಡಿ ಮಾಡಿದ ||

ಮೆಟ್ಟಿ ಶಿರ ಅಸುರರ ಭಂಜಿಸಿದ |

ಪುಟ್ಟ ಪೋರ ಧೀರ ಹನುಮಂತ ||2||

ಪಂಚರೂಪದಿಂದಿಹ ಮುಖ್ಯಪ್ರಾಣ |

ಕಿಂಚಿತ್ ಅಪಶಬ್ದ ನುಡಿಯನೆಂದು ||

ಮುಂಚೆ ಮಾಡಿದ ಸಂಚಿತಾರ್ಥ ಕಳೆವ |

ಸಚ್ಚಿದಾನಂದಾತ್ಮಗೆ ಪೇಳಿ ಮೆಚ್ಚಿಸುವ ||3||

ಪ್ರತಿ ಶ್ವಾಸದಿ ಚೇತನ ಪುರೈಸುವ |

ಪ್ರತಿ ಇಂದ್ರಿಯಗಳಲ್ಲಿದ್ದು ಪ್ರೇರಕನಾಗಿಹ ||

ಪ್ರತಿಷ್ಠ ಜೇಷ್ಠ ಶ್ರೇಷ್ಠ ವರಿಷ್ಠ |

ವಾತಾತ್ಮಜ ವಾನರ ಮುಖ್ಯನಿವ ||4||

ಸ್ವಾಮಿ ಕಾರ್ಯ ಸ್ವಕಾರ್ಯದಂತೆ ಮಾಳ್ಪ |

ಕಾಮಿಸಿ ಭಕ್ತಿ, ಮುಕ್ತಿಯ ಬೇಡನೆಂದೂ ||

ಸುಮ್ಮಾನದಿ ಸಹಭೋಗ ಸುಖ ಉಂಬ |

ಹೆಮ್ಮೆಯಲಿ ರಾಮದೂತನೆನಿಸಿಕೊಂಬ ||5||

ಹಾರಿ ಬರುವ ಎಲ್ಲಿ ನೆನೆದರಲ್ಲಿ |

ಬರದಂತೆ ಆಪತ್ತು ಕಾಯ್ವ ||

ವರವಿತ್ತು ಸತತ ಸಲಹುವ |

ಚಿರಂಜೀವಿ ಇವ ಭಕ್ತಿಗೆ ಒಲಿವ ||6||

ಇವನಿಂದ ಗ್ರಹಬಾಧೆ ತಪ್ಪುವುದು |

ಇವನಿಂದ ಜೀವನದಿ ಸಾಮರಸ್ಯ ||

ಇವನನು ಗ್ರಹದಿ ಸರ್ವವಿಜಯ ನಿಶ್ಚಿತ |

ಇವನೊಲಿದರೆ ಪರಮಾತ್ಮ ಒಲಿವ ||7|||

ಅಣುವಾಗುವ ತಾ ಮಹತ್ತಾಗುವ |

ಗುಣವಂತ ಬಲುಧೀಮಂತ ||

ವರ್ಣನೆಗೂ ನಿಲುಕದ ಪುಣ್ಯವಂತ |

ಚಿನ್ಮಯ ಶ್ರೀಕೃಷ್ಣವಿಠ್ಠಲನ ಪರಮಪ್ರಿಯನಿವ ||8||

288. ಕ್ಷಮಿಸು ಹನುಮಯ್ಯ, ನಿನ್ನಯ್ಯನ ಖ್ಯಾತಿ ಬಲ್ಲೆಯಾ |

ಹೆಮ್ಮೆಯಲಿ ಒಮ್ಮೊಮ್ಮೆ ಭಕುತರ ಎತ್ತಿತೋರುವನಯ್ಯಾ ||

ಪುಟ್ಟ ಬಾಲಕನ ದಿಟ್ಟ ಭಕುತಿಗೆ ಒಲಿದ ಸ್ಥಂಭೋದ್ಭವ |

ಕೆಟ್ಟ ಪಿತನ ಸೊಕ್ಕು ಮುರಿದು ಅಂತ ಕಾಣಿಸಿದ ||

ಕೊಟ್ಟ ಮಾತಿನಂತೆ ಅರಣ್ಯಕೆ ತೆರಳಿ ಹೆಣ್ಣನುದ್ಧರಿಸಿದ |

ಕೆಟ್ಟದಾಗಿ ಹೆಣ್ಣಿಗಾಗಿ ಪ್ರಲಾಪಿಸಿ ಯುದ್ಧದಿ ಅಸುರರ ತರಿದ ||1||

ಕೊಟ್ಟ ಉಂಗುರ ಮುಟ್ಟಿಸಿದಕ್ಕಾಗಿ ಸಹಭೋಗವಿತ್ತ ಸಂತಸದಿ |

ಸೃಷ್ಟಿ-ಲಯ ಭ್ರೂಕುಣಿತದಿ ಮಾಡುವಗೆ ಇನ್ನೊಬ್ಬರ ನೆರವು ಬೇಕೆ ? ||

ಮೀಟುತ ತಂಬೂರಿ ನಾರಾಯಣ ಎನ್ನುತ ನಾರದರಲ್ಲಿ ಬರಲು |

ತಟ್ಟನೆ ಅನಾರೋಗ್ಯದ ಸೋಂಗುಹಾಕಿ ಉರುಳಿ ಉರುಳಿ ನರಳಿದ ||2||

ಸ್ಪಷ್ಟ ಪರಿಹಾರವಿದಕೆ ಭಕುತರ ಪಾದಧೂಳಿ ಪರಮೌಷಧವೆಂದ |

ಎಷ್ಟೂ ತಡಮಾಡದೆ ಪಟ್ಟದರಸಿರೆಡೆಗೆ ಬಂದುಪಾದಧೂಳಿ ಬೇಡಲು |

ಕೊಟ್ಟು ಪಾದಧೂಳಿ ಸ್ವಾಮಿಗೆ ಅಪಚಾರವೆಸಗೆವು ಎಂದರೆಲ್ಲ |

ಒಟದಿ ವ್ರಜಕೆ ಬಂದು ಗೋಪಿಯರನೆ ದೈನ್ಯದಿ ಬೇಡಿದರು ||3||

ಕೊಟ್ಟರೆಲ್ಲ ತಮ್ಮ ಪಾದಧೂಳಿ ಬೇಗಹೋಗಿ ಪೂಸಿರೆಂದರು |

ತಟ್ಟದೆ ಹೋದಿತೆ ಪಾಪ, ನರಕ ಭಯ ನಿಮಗಿಲ್ಲವೆ ? ಎನ್ನಲು ||

ಎಷ್ಟೋ ಜನುಮದಿ ಪಾಪಮಾಡಿ ನರಕ ಅನುಭವಿಸಿಲ್ಲವೆ ? ಈಗ ಪುಣ್ಯಮಾಡಿ ಅನುಭವಿಸುವೆವು |

ಕಷ್ಟ ಕಳೆದು ಸ್ವಾಮಿ ಬೇಗ ಗುಣವಾಗಲೆಂದು ಹಾರೈಸಿ ಬೀಳ್ಕೊಟ್ಟರು ||4||

ಮೃತ್ತಿಕಾ ಲೇಪನದಿ ಆರೋಗ್ಯವಾದಂತೆ ನಟಿಸಿದ ಕಪಟನಾಟಕಧಾರಿ |

ಪಟ್ಟ ಮಹಿಷಿಯರಿಗಿಂತ ಗೋಪಾಂಗನೆಯರ ಭಕ್ತಿ ಮೇಲೆಂದು ತೋರಿದ ||

ದೃಷ್ಟಿಯಿಂದ ದುಷ್ಟಸೈನ್ಯ ಸಂಹರಿಸಿ ಪಾರ್ಥಗೆ ಕೀರ್ತಿಯಿತ್ತಂತೆ |

ಶಿಷ್ಟಭಕ್ತ ವತ್ಸಲ ಶ್ರೀಕೃಷ್ಣವಿಠ್ಠಲನ ಲೀಲೆ ಅಚಿಂತ್ಯಾದ್ಭುತ ||5||

ಹಗ್ಗದಿಂದ ಬಿಗಿದ ದೋಣಿ ಹೊತ್ತವನೆ ನಿನ್ನ ಪಾದಪದ್ಮತೋರೋ ||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು