ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 3.5

289. ಸುಳ್ಳು ಹೇಳುತಿರುವ ನಿನ್ನ ಕಂದ ಗೋಪಮ್ಮಾ |

ಕಳ್ಳ ಬೆಕ್ಕಿನಂತೆ ಒಳಬಂದು ಪಾಲು ಬೆಣ್ಣೆ ಮೆಲುವ ||

ಮಲಗಿದ್ದ ಶಿಶುಗಳ ಚಿವುಟಿ ಅಳಿಸಿ ಹೋಗುವ |

ಮಳ್ಳನಿಗೆ ಸರಿಯಾಗಿ ಬುದ್ಧಿ ಪೇಳಮ್ಮಾ ||

ಕೇಳಿ ಚಾಡಿ ಮಾತು ರೋಸಿ ಸಿಟ್ಟಿನಲಿ |

ಊಲುಖಕ್ಕೆ ಹಗ್ಗದಿಂದ ಹೊಟ್ಟೆಗೆ ಬಿಗಿದು ಕಟ್ಟಿದಳು ||

ಒಳಗೆ ಕೆಲಸಕೆ ಯಶೋದೆ ಹೋದ ಕೂಡಲೇ |

ಊಲುಖ ಸಹಿತ ಎಳೆದು ಹಿತ್ತಲಿಗೆ ಬಂದ ಕಂದ ||

ನಳಕೂಬರು ಶಾಪದಿಂದ ವೃಕ್ಷವಾಗಿದ್ದು ಕಂಡು |

ಬೀಳಿಸಿ ಅವುಗಳನು ಶಾಪ ಮುಕ್ತರನ್ನಾಗಿಸಿದ ಕನಿಕರದಿ ||

ಕೆಳಗೆ ಬಿದ್ದ ಭಾರಿ ಮರ ನೋಡಿ ಹೆದರಿ ಓಡಿಬಂದಳಾ ತಾಯಿ |

ಕಿಲಕಿಲ ನಗುತಿದ್ದ ದಾಮೋದರನ ಕಂಡು ಸಂತಸ ಪೊಂದಿ ||

ಹಳಿದು ತನ್ನನ್ನೇ ಇನ್ನೆಂದೂ ಶಿಕ್ಷೆ ನೀಡುವುದಿಲ್ಲವೆಂದಳು |

ಜಲ ತುಂಬಿದ ಕಣ್ಗಳಿಂದ ಕಂದನ್ನೆತ್ತಿ ಒಳ ನಡೆದಳು ||

ಕೇಳುಗರ ಮನ ಮೊಹಗೊಳಿಸುವ ಶ್ರೀಕೃಷ್ಣವಿಠ್ಠಲನ |

ಬಾಲ ಲಿಲೆಯ ಸೊಬಗು ಎಷ್ಟೆಂದು ಬಣ್ಣಿಸಲಿ ? ||

290. ಶ್ರೀಕೃಷ್ಣವಿಠ್ಠಲನೇ ಶ್ರೇಷ್ಠರಲ್ಲಿ ಅತೀ ಶ್ರೇಷ್ಠ |

ಶ್ರೀಕೃಷ್ಣವಿಠ್ಠಲನೇ ಪರಮ ಜಗದ್ಗುರು ||

ಶ್ರೀಕೃಷ್ಣವಿಠ್ಠಲನೇ ಜಗತ್ತಿನ ತಾಯಿ-ತಂದೆ |

ಶ್ರೀಕೃಷ್ಣವಿಠ್ಠಲನಿಂದಲೇ ಹಗಲು-ರಾತ್ರಿ ||

ಶ್ರೀಕೃಷ್ಣವಿಠ್ಠಲನೇ ಕಾರಣ ಜನನ-ಮರಣಕೆ |

ಶ್ರೀಕೃಷ್ಣವಿಠ್ಠಲನೇ ಸರ್ವ ಚಲನ ಶಕ್ತಿ ||

ಶ್ರೀಕೃಷ್ಣವಿಠ್ಠಲನದ್ದೇ ಸರ್ವ ನಾಮಗಳು |

ಶ್ರೀಕೃಷ್ಣವಿಠ್ಠಲನೇ ಸಕಲ ಸೃಷ್ಟಿಕಾರ ||

ಶ್ರೀಕೃಷ್ಣವಿಠ್ಠಲನ ಇಚ್ಛೆಯಂತೇ ಎಲ್ಲ ನಡೆವುದು |

ಶ್ರೀಕೃಷ್ಣವಿಠ್ಠಲನೇ ಹೊರೆತು ಮತ್ತೇನೂ ಇಲ್ಲ ||

ಶ್ರೀಕೃಷ್ಣವಿಠ್ಠಲನೇ ನಾಮವೇ ಉಸಿರಾಗಿಸಬೇಕು |

ಶ್ರೀಕೃಷ್ಣವಿಠ್ಠಲನ್ನ ಪಡೆಯುವುದೇ ಜೀವನದ ಗುರಿಯಾಗಬೇಕು ||

291. ಶಿರಬಾಗಿ ನಮಿಸುವೆ ಗುರು ರಾಘವೇಂದ್ರ |

ಕರ ಪಿಡಿದು ಕರುಣದಿ ಕಾಯೋ ಗುರುವೆ ||ಪ||

ಎನ್ನಲಿ ಅಪರಾಧಗಳನೇಕವಿರೆ ಮಾನನಿಧಿ |

ಬನ್ನ ಬಡಿಸದೆ ಚಿತ್ತಕ್ಕೆ ತಂದು ನೀ ಸಲಹೋ ||

ಮನದ ತಲ್ಲಣ ಕಳೆದು ವಾತ್ಸಲ್ಯದಿ ಸಂತೈಸಿ |

ಜ್ಞಾನ ಮಾರ್ಗದಿ ಬಿಡದೆ ಮುನ್ನಡೆಸು ||1||

ಅಮಿತ ದಯಾನಿಧೇ ಪರಿಮಳಾರ್ಯನೆ |

ಕಾಮಿತ ಫಲವೀವೆ ಎಂಬಸೊಲ್ಲ ನಿಜವಲ್ಲವೇ? ||

ಜನ್ಮ ಸಾರ್ಥಕಗೊಳಿಸಲು ಹರಸು ಎನ್ನ |

ಹೃನ್ಮಂದಿರವಾಸಿ ಶ್ರೀಕೃಷ್ನವಿಠ್ಠಲನ ತೋರು ||2||

292. ನಿನ್ನ ರೂಪವನ್ನೇ ನೊಡುತ್ತಾ |

ನಿನ್ನ ನಾಮವನ್ನೇ ಪಾಡುತ್ತಾ ||

ನಿನ್ನ ಕಥೆಯನ್ನೇ ಕೇಳುತ್ತಾ |

ನಿನ್ನ ಗುಣಗಳನ್ನೇ ನೆನೆಯುತ್ತಾ ||

ನಿನ್ನಲ್ಲೇ ಸ್ಥಿರದಿ ಮನವ ನಿಲ್ಲಿಸಿ |

ನಿನ್ನನ್ನೇ ಸೇರುವಂತೆ ಮಾಡು ಶ್ರೀಕೃಷ್ಣವಿಠ್ಠಲ ||

293. ಸೂರ್ಯಕುಲೋತ್ತಮ ರಘುವಂಶ ತಿಲಕ |

ಮೂರು ತಾಯಿಂದರ ಮಡಿಲಲ್ಲಿ ಆಡುತ್ತಾ ||

ಮೂರು ತಮ್ಮಂದಿರ ಒಡನಾಟದ ಜೊತೆ |

ಮೂರುಲೋಕದ ಸ್ವಾಮಿ ತಾ ಕಳೆದ ಬಾಲ್ಯವ ||

ಮರೆಯದೆ ಸತ್ಯ ವಚನ ಪರಿಪಾಲಿಸಲು |

ಮರ್ತೈಲೋಕದ ಶಿಕ್ಷಣಕ್ಕಾಗಿ ತಾ ನಡೆದು ತೋರಿದ ||

ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನೇ |

ತೋರಲು ಲೀಲೆ ನಾನಾವತಾರವೆತ್ತಿದ ಶ್ರೀಕೃಷ್ಣವಿಠ್ಠಲ ||

294. ರೂಪ ಮತ್ಸ್ಯದಿ ವೇದ, ವನೌಷಧಿ ರಕ್ಷಿಸಿದ |

ರೂಪ ವರಾಹದಿ ಧರಣಿಯನ್ನೆತ್ತಿ ಕಕ್ಷೆಯಲ್ಲಿಟ್ಟ ||

ರೂಪ ಕೂರ್ಮದಿ ಗಿರಿಭಾರವೆತ್ತಿ ಅಮೃತ ಊಣಿಸಿದ |

ರೂಪ ನರಸಿಂಹನಾಗಿ ಭಕ್ತಿಗೆ ಒಲಿವನೆಂದು ತೋರಿದ ||

ರೂಪ ವಾಮನದಿ ಅಹಂಕಾರ ಮೆಟ್ಟಿ ಇಂದ್ರಗೆ ಸ್ವಸ್ಥಾನವಿತ್ತ |

ರೂಪ ಪರಶುನಾಗಿ ತಂದೆ ವಚನ ಪರಿಪಾಲಿಸಿದ ||

ರೂಪ ಶ್ರೀರಾಮನಾಗಿ ದುಷ್ಟರ ತರಿದು ಶಿಷ್ಟರ ರಕ್ಷಿಸಿದ |

ರೂಪ ಶ್ರೀಕೃಷ್ಣನಾಗಿ ಧರ್ಮಜ್ಞಾನ ಬೋಧಿಸಿದ ||

ರೂಪ ಬುದ್ಧನಾಗಿ ಅಜ್ಞಾನಿಗಳಿಗೆ ಅವೇದ ಸಾರಿದ |

ರೂಪ ಕಲ್ಕಿಯಾಗಿ ಹಯವೇರಿ ಧರ್ಮಸಂಸ್ಥಾಪಿಸಿದ ||

ರೂಪ ಅನೇಕ ತೋರಿ ಪ್ರತಿಯುಗದಿ ಮನುಕುಲ ಸಂರಕ್ಷಿಸುವ ನಮ್ಮ ಶ್ರೀಕೃಷ್ಣವಿಠ್ಠಲ ||

295. ಶ್ರೀಹರಿಯು ಸ್ವತಂತ್ರ, ಸ್ವಾಭಾವಿಕ ಕರ್ತೃ |

ಬ್ರಹ್ಮಾದಿಗಳ ಕರ್ತೃತ್ವ ಇವನಧೀನ ||

ಬ್ರಹ್ಮಧ್ಯಾನವೇ ಅಕ್ಷಯ ಸುಖ ಅನುಭವ |

ಬ್ರಹ್ಮಯೋಗ ಸಹಿತ ಸುಖವೇ ಶಾಶ್ವತ ||

ಇಹ-ಪರದಿ ಪಾಪ-ಪುಣ್ಯಫಲ ಅಸ್ವತಂತ್ರ |

ಸಹಿಸಿ ಚಿತ್ತ ಚಾಂಚಲ್ಯ ಜ್ಞಾನ ಸಾಧಿಸಿರೆ ||

ಸ್ವಹೃದಯದಿ ಶ್ರೀಕೃಷ್ಣವಿಠ್ಠಲನ ದರ್ಶನಾನಂದ ಪ್ರಾಪ್ತಿ ||

296. ಆಗು-ಹೋಗುಗಳು ಮಾನವರ ವಶವಲ್ಲ |

ಎಗರಾಡದೆ ಏಳು-ಬೀಳುಗಳ ಎದುರಿಸು ||

ನಗುನಗುತಲೇ ಸ್ವೀಕರಿಸು ಪಾಲಿಗೆ ಬಂದಿದ್ದು |

ಸಾಗು ಮುಂದೆ ಸುಖ-ದು:ಖ ದಾಟುತಾ ||

ಬಗೆಬಗೆಯ ಘಟನೆಗಳು ಜೀವನಕೆ ಸವಾಲು |

ಹಿಗ್ಗದೆ-ಕುಗ್ಗದೆ ಸಮಸ್ಥಿತಿ ಕಾಪಾಡಿಕೊಂಡು ||

ಬಗ್ಗಿ ನಡೆದಾಗಲೇ ಸಗ್ಗ-ಸುಖ ಸಿಗುವುದು |

ಆಗಲೇ ಶ್ರೀಕೃಷ್ಣವಿಠ್ಠಲನಲಿ ಭಕ್ತಿ ಬರುವುದು ||

297. ನದಿ ಕಲರವದಿ, ಹೂವಿನ ಪರಿಮಳದಿ, ಗಾಳಿಯ ಸ್ಪರ್ಶದಿ |

ಸುಂದರ ನೋಟದಿ, ಮಗುವಿನ ಮುಗ್ಧತೆಲಿ, ಅರಳಿದ ಪುಷ್ಟದಿ ||

ಹಾಡಿನ ಮಾಧುರ್ಯದಿ, ಮಳೆಬಿದ್ದ ಹಸಿ ಮಣ್ಣಿನ ಸುವಾಸನೆಯಲಿ |

ಅಡಗಿರುವ ಸುಚೇತನ, ಸಕಲ ಪ್ರಾಣಿ, ವೃಕ್ಷ, ಸರ್ವತಾಣದಿ ||

ತುದಿ ಮೊದಲಿಲ್ಲದೆ ಓತ ಪ್ರೋತನಾಗಿ ಎಳ್ಳುಮೊನೆ ಬಿಡದಷ್ಟು |

ಕಂಡು ಕಾಣದಂತೆ ಹಬ್ಬಿರುವ ಸರ್ವಸಾಕ್ಷಿಗನಾಗಿರುವ ||

ಹೃದಯಸ್ಥ ಆತ್ಮದಿ ನೆಲಸಿ ಸರ್ಮವನ್ನೂ ಮಾಡಿ ಮಾಡಿಸುವ |

ಹದಿನಾಲ್ಕು ಲೋಕಗಳಲಿದ್ದು ಜೀವಿಗಳಿಂದ ಸಾಧನೆ ಮಾಳ್ಪ ||

ಪದ್ಮಸ್ಥ ಚತುರ್ಮುಖ ಬ್ರಹ್ಮಾದಿ ಸಕಲ ದೇವತೆಗಳ ಸೃಷ್ಟಿಸುವ |

ಉದರದಿ ಸರ್ವಲೋಕ ಧರಿಸಿ ತಾನೂ ಲೋಕದಿ ಪಸರಿಸಿರುವ ||

ಐದು ಭೂತಗಳೊಳಗೆ ತಾನಿದ್ದು ತನ್ನೊಳಗೆ ಐದು ಭೂತ ಇಷ್ಪಂತೆ |

ಸದಾ ಸೇವಿಸುವ ರಮೆಯ ಹೃದಯಸ್ಥ ತನ್ನ ವಕ್ಷ ಸ್ಥಲದಿ ಕುಳ್ಳಿಸಿರುವ ||

ಬಿಡಿಸಿದರೂ ಬಿಡಿಸಲಾಗದ ಗಂಟಿನ ನಂಟು ಎಲ್ಲದರ ಜೊತೆ |

ಒಡೆಯಲಾರದ ಒಗಟಾಗಿರುವ ನಮ್ಮ ಶ್ರೀಕೃಷ್ಣವಿಠ್ಠಲ ಚಿಂತನೆಗೂ ನಿಲುಕದವ ||

298. ಶ್ರೀಮಹಾಲಕುಮಿ ಸಕಲ ಸೌಭಾಗ್ಯ ಪ್ರದಾತೆ |

ಎಮ್ಮ ಮನೆಗೆ ಬಾರಮ್ಮಾ ಕೈಮುಗಿದು ಬೇಡಿಕೊಂಬೆ ||ತಾಯೇ ||ಪ||

ನೀನೊಲಿದ ಮನೆ ಅರಮನೆಯಾಗುವುದು |

ನೀನಿದ್ದೆಡೆ ಸಂಪತ್ತು ತುಂಬಿ ಹರಿವುದು ||

ನಿನ್ನ ಸಾನಿಧ್ಯದಿ ಮನ ಮುದವಾಹುದು |

ನಿನ್ನಿಂದಲೇ ಜ್ಞಾನ, ಭಕ್ತಿ ಉಕ್ಕೇರುವುದು ||ತಾಯೇ ||1||

ಕಂಗಳು ತೆರೆದು ಕೃಪೆಯಲಿ ನೋಡೆ |

ಹಿಂಗದಂತಹ ಸುಖವಿತ್ತು ಸಲಹು ||

ಭಂಗವಿಲ್ಲದೆ ಸಜ್ಜನ ಸಂಗದೊಳಿಡಿಸು |

ಮಂಗಳಮಯಿ ಸಂತೃಪ್ತಿಯಿಂದ ಹರಸೆನ್ನ ||ತಾಯೆ ||2||

ಅಬ್ಧಿಸುತೆ ನಿತ್ಯಾವಿಯೋಗಿನಿ |

ಶುಭ್ರವಸನೆ ನಾನಾಭರಣ ಭೂಷಿತೆ ||

ಅಭಯ ಹಸ್ತೇ ಬ್ರಹ್ಮ-ರುದ್ರಾದಿವಂದಿತೆ |

ಶುಭಕಾಯೆ ಶ್ರೀಕೃಷ್ಣವಿಠ್ಠಲನರ್ಧಾಂಗಿ ||ತಾಯೆ ||3||

299. ಪೂಜಿಸಲು ನಿತ್ಯ ಮನಬಾರದು |

ಭಜಿಸುವ ರೀತಿ ತಿಳಿಯದು ||

ರಾಜ ವೈಭವಕೆ ಮನ ಸೋಲುವುದು |

ಭೋಜನಕ್ಕಾಗಿ ಸದಾ ಪರಿತಪಿಸುವುದು ||

ಮಜಾ ಮಾಡಿ ಪವಡಿಸೆ ಸುಖರಾತ್ರಿ ಕಳೆವುದು |

ಕಜ್ಜಾಯ ಮೆದ್ದಂತೆ ಕಾಲ ಸರಿಯುತಿದೆ ||

ಮುಂಜಾವಿನ ಮಂಜಿನ ಹನಿಯಂತಿರುವೆ |

ನಿಜದಿ ಸಜ್ಜನರ್ಯಾರೋ ತಿಳಿಯದಲ್ಲ ||

ಗೋಜಲು ಬೀಳದೆ ಹಿಂದೆ-ಮುಂದೆ ನಂಬಿದೆ |

ಕಂಜನಾಭ ಶ್ರೀಕೃಷ್ಣವಿಠ್ಠಲಗೆ ಕ್ಷಮಿಸೆಂದು ಬೇಡುವೆ ||

...

300. ಮೂರುತಿ ನೊಡಿದರೂ ಭಕುತಿ ಬಾರದು |

ಕೀರುತಿ ಪಾಡಿದರೂ ಭಕುತಿ ಬಾರದು ||

ತೀರ್ಥಯಾತ್ರೆಗೆ ಪೋದರೂ ಭಕುತಿ ಬಾರದು |

ಇರಳು-ಹಗಲು ಸತ್ಸಂಗದಲ್ಲಿದ್ದರೂ ಭಕುತಿ ಬಾರದು ||

ಅರ್ಥ, ವಸನ, ಕನಕ ದಾನಿಸಿದರೂ ಭಕುತಿ ಬಾರದು |

ಬರೀ ಉಪವಾಸ-ವ್ರತಾದಿಯಿಂದಲೂ ಭಕುತಿ ಬಾರದು ||

ಶ್ರೀಕೃಷ್ಣವಿಠ್ಠಲನಲಿ ಅಖಂಡಭಕುತಿ ಬರಲು ಏನು ಮಾಡಲಿ ? ||

301. ನಾನೇನು ಸೇವೆ ಮಾಡಲಿ ಕೃಷ್ಣಯ್ಯಾ |

ಏನು ಮಾಡಿದರೆ ನೀನೊಲಿಯುವೆಯಯ್ಯಾ ||ಪ||

ನಿನ್ನನ್ನೇ ಬಯಸುವ ಎನಗೆ ಸೇವಾಭಾಗ್ಯ ಕೊಡು ||ಅಪ||

ವಿಷಸಹಿತ ಕ್ಷೀರ, ಪ್ರಾಣ ಹೀರಿದವಗೆ |

ವಿಶ್ವನಾಥ ವಿಷವಿಳಿಯಲು ದೃಷ್ಟಿ ತೆಗೆಯಲೇ ? ||1||

ಶಕಟನ ಒದ್ದ ಪುಟ್ಟಪಾದ ನೊವಾಯಿತೇ |

ಶಂಕಿಸದೇ ಎಣ್ಣೆ ಪೂಸಿ ಪಾದ ಒತ್ತಲೆ ? ||2||

ಕದ್ದು ತಿಂದೆ ಮೊಸರು, ಬೆಣ್ಣೆ ಉದರ ಶೂಲೆಯೇ |

ಹದವಾದ ಬಿಸಿನೀರು ಕಾಸಿ ಕುಡಿಸಲೆ ? ||3||

ಉಲೂಖ ಬಂಧನದಿ ಹೊಟ್ಟೆಗೆ ಗಾಯವಾಯಿತೇ |

ಮೆಲ್ಲಗೆ ಊದಿ ಕೈಯಾಡಿಸಲೆ ? ||4||

ಹೆಡೆಯ ಮೇಲೆ ನರ್ತಿಸಿ ದಣಿವಾಯಿತೇ |

ಒಡನೆ ಚಾಮರ ಬೀಸಿ ಅಹ್ಲಾದ ಮಾಡಲೆ ? ||5||

ದಾವಾನಲ ಪಾನಮಾಡಿ ಬಾಯಿ ಸುಟ್ಟಿತೇ |

ಸುವದನಕೆ ಜೇನು ತುಪ್ಪ ಲೇಪಿಸಲೆ ? ||6||

ಕಿರು ಬೆರಳಲಿ ಬೆಟ್ಟ ಎತ್ತಿ ಕೈ ಉಳುಕಿತೇ |

ಪರಿ ಪರಿ ಔಷಧ ತಿಕ್ಕಿ ಪಟ್ಟು ಹಾಕಲೆ ? ||7||

ರಾತ್ರಿಯೆಲ್ಲ ರಾಸ ಕ್ರೀಡಿಸಿ ತನು ದಣಿಯಿತೇ |

ಶಕ್ತಿ ಬರಲು ಕಷಾಯಕಾಸಿ ಕುಡಿಸಲೇ ? ||8||

ವಧಿಸಲು ಕುವಲಯಾ ಪೀಡ ಮೂಡಿದ ಬೆವರು ಹನಿಗಳ |

ಮೃದುವಾದ ಸೆರಗಿನಿಂದ ಒತ್ತಿ ಒರೆಸಲೇ ? ||9||

ಹೆದರಿದ ಮಾವನ ಹತ ಮಾಡಿದವನೇ |

ಬೆದರಂತೆ ಸರ್ವಾಂಗ ರಕ್ಷೆ ಇಡಲೇ ? ||10||

ಗೋಗಳ ಸೇವಿಸಿ ಗೋಪಾಲಕರೊಡನೆ ಒಡಾಡಿದವನೇ |

ಅಂಗ-ಸಂಗದಿ ನಿನ್ನೊಡನಿದ್ದು ಸಂತೋಷ ಕೊಡಲೆ ? ||11||

ಎಂಜಲೆಲೆ ಬಳೆದು ಸುಸ್ತಾಗಿದೆಯೆ |

ಊಂಜಲ ಸೇವೆ ಮಾಡಿ ಹಾಯೆನಿಸಲೆ ? ||12||

ಸಾರಥ್ಯದಿ ಲಗಾಮ ಎಳೆದು ಅಂಗೈಕೆಂಪಾಯಿತೆ |

ವರವೀವ ಹಸ್ತಕೆ ಔಷಧ ಹಚ್ಚಿ ಊದಲೇ ? ||13||

ಪಾದುಕೆಯಾಗಿಸಿ ಪಾದ ಸ್ಪರ್ಶದಿ ಪುನೀತಳಾಗಿಸು |

ಎಂದೂ ಬಿಡದೆ ಪ್ರತಿಜನುಮದಿ ಕೈ ಹಿಡಿದು ನಡೆಸೆನ್ನ ||14||

ಕಡೆಗೆ ನಿನ್ನ ಪಾಡಿ ಕೊಂಡಾಡುವ ಭಾಗ್ಯವಾದರೂ ಕೊಡು |

ಒಡನೆ ಸ್ವೀಕರಿಸಿ ಉದ್ಧರಿಸೆಂದು ಬೇಡಿಕೊಂಬೆ ||15||

ಸದಾ ಇನ್ನೊಬ್ಬರ ಹಿತವನ್ನೆ ಬಯಸುವ |

ಒಡೆಯಾ ಶ್ರೀಕೃಷ್ಣವಿಠ್ಠಲನೇ ಯಾವ ರಿತಿಯಲ್ಲಿ ಸೇವಿಸಲಿ ? ||16||

302. ನೀನೆ ಗತಿ ಕಾಣೋ, ಎನಗೆ ಕೃಷ್ಣಯ್ಯಾ |

ನಿನ್ನ ಬಿಟ್ಟರಿನ್ನಾರು ಕಾಯ್ವರು ||ಪ||

ಎನ್ನ ಮಾನಾಪಮಾನ ನಿನ್ನದಯ್ಯಾ ||ಅಪ||

ಮತಿಹೀನಳೆನಿಸಬೇಡಾ ದುರ್ಗತಿಗೆಳೆಯಬೇಡಾ |

ಸತ್ಯ ಪಥವ ತೋರಿ ಜೀವನ ಸತ್ವವಾಗಿಸು ||

ಮತ್ತೇರದಂತೆ ನಿಜದಿ ಅಷ್ಟಮದ ಅಳಿಸಯ್ಯಾ |

ಚತುರತನದಿ ಚಿಂತೆ ಕಳೆದು ನಿಶ್ಚಿಂತನಾಗಿಸು ||1||

ಹೊಡೆದರೂ ಕಂದ ತಾಯಿ ಬಳಿಗೇ ಹೋಗುವಂತೆ |

ಭಂಡ ಜೀವ ತಿರುಗಿ ತಿರುಗಿ ಪರಮಾತ್ಮನ ಉದರ ಪೊಕ್ಕಂತೆ ||

ಮಾಡುತಾ ಪದೇ ಪದೇ ತಪ್ಪುಗಳ ಕ್ಷಮೆಯಾಚಿಸುವೆ |

ಕಾಡಿ ಬೇಡುವೆ ಎನ್ನ ಅವಗುಣ ಚಿತ್ತಕ್ಕೆ ತರದಿರು ||2||

ಕೈಮುಗಿವೆ, ಶರಣೆಂಬೆ, ಕಾಲಿಗೆ ಬೀಳುವೆ |

ಅಮಲ ಭಕುತಿ ಇತ್ತು ಧ್ಯಾನದಲ್ಲೇ ಮುಳುಗಿಸು ||

ಸುಮನದಿ ಶುದ್ಧ ಮೂರುತಿ ನಿಲ್ಲಿಸೋ ಆನಂದಾತ್ಮನೇ |

ಸಮಯ ಸಮಯಕೆ ಎನ್ನ ತಿದ್ದು ಉದ್ಧರಿಸು ||3||

ತಂದೆ-ತಾಯಿ, ಬಂಧು-ಬಳಗ ಎಲ್ಲ ನೀನೇ |

ಕಂದ ನಿನ್ನವನೆಂದು ತಿಳಿದು ಸಲಹಯ್ಯಾ ||

ನೊಂದ ಜೀವ ನಿನ್ನ ತಿಳಿಯದೆ ನಂದಿಸದಿರು |

ನಂದ ಕಂದ ಶ್ರೀಕೃಷ್ಣವಿಠ್ಠಲ ನಿಂದಿಸೆನ್ನ ದೂರದಿರು ||4||

303. ಹರಿ ಹರಿ ಹರಿ ಎನಲು ಹಾರಿಹೋಗುವುದು ಪಾಪ |

ಹರಿ ಸ್ಮರಣೆ ಎಂತಾದರೂ ಆಗಲಿ ಪಾಪದ ಅಂಜಿಕೆ ಇಲ್ಲ ||1||

ಹರಿ ನಾಮದಲ್ಲಿಹುದು ಅನಂತ ಪಾಪನಾಶ ಶಕ್ತಿ |

ಹರಿದ್ವಾರ ಎನಲು ಸುಖಕೆ ಮಾರ್ಗ ಆಗುವುದು ||2||

ಹರಿವುದು ನೀರು ಎನಲು ಹರಿದು ಹೋಗುವುದು |

ಹರಿಯಿತು ಅರಿವೆ ಎನಲು ಅರಿವು ಮಾಡುವುದು ||3||

ಹರಿಯಿತು ಕಾಗದ ಎನಲು ಪರಪರ ಹರಿವುದು |

ಹರಿಯಿತು ಹಾವು ಎನಲು ಸರಿದು ಹೋಗುವುದು ||4||

ಹರಿಯಿತು ಬೆಳಗು ಎನಲು ಕಳೆವುದು ಕತ್ತಲೆ |

ಹರಿಗೋಲ ಎನಲು ಇದ್ದದ್ದು ಹಿಂದಕ್ಕೆ ಹೋಗುವುದು ||5||

ಹರಿಣಿ ಎನಲು ಜಿಗಿಯುತ್ತಾ ಓಡಿ ಪೋಪುದು |

ಹರಿಣಾಕ್ಷಿ ಎನಲು ದೃಷ್ಟಿಯಿಂದಲೇ ನಾಶವಾಗುವುದು ||6||

ಹರಿವಾಣ ಎನಲು ಹರುಷದಿ ತುಂಬಿ ತುಳುಕುವುದು |

ಹರಿಚಂದನ ಲೇಪ ಎನಲು ವಜ್ರಲೇಪ ಅಳಿವುದು ||7||

ಹರಿವೆ ಸೊಪ್ಪು ಎನಲು ಬೆಂದು ಹೋಗುವದು |

ಹರಿತ್ ಸಸ್ಯಶ್ಯಾಮಲೆ ಎನಲು ಜೀವನ ಹರಿದ್ವರ್ಣವಾಗುವುದು ||8||

ಹರಿದಿನ ಭಕ್ತಿಯಲಿ ಉಪವಾಸವಿರೆ ಹರಿಪದ ಪ್ರಾಪ್ತಿ |

ಹರಿದಾಸ ನಾನೆನಲು ಜೀವನ ಸಾರ್ಥಕ ವೆನಿಪುದು ||9||

ಹರಿಕಥೆಯ ಕೇಳಲು ಪಾಪ ಕಳೆದು ಮುಕ್ತಿ ಸಿಗುವುದು |

ಹರಿಸಂಗ ದೊರಕಲು ಮನ ನಲಿದಾಡುವುದು ||10||

ಹರಿಮಯ ಎನಲು ಸಂತೋಷದ ಹೊನಲಾಗುವುದು |

ಹರಿ ಶ್ರೀಕೃಷ್ಣವಿಠ್ಠಲನೆಂದು ಭಜಿಸೆ ಪಾಪ ಎಲ್ಲಿರುವುದು ? ||11||

304. ಓಡಿ ಪೊದನೇನ ರಂಗಯ್ಯಾ ಓಡಿಪೊದನೇನೆ |

ಪಿಡಿದ ಕೈ ಕೊಸರಿಕೊಂಡು ಓಡಿಪೋದನೇನೆ ||ಪ||

ಹಿಡಿತಕೆ ಸಿಗದವನ ಹೇಗೆ ಹಿಡಿಯಲಿ ||ಅಪ||

ಸದ್ದು ಮಾಡದೆ ಕಳ್ಳ ಬೆಕ್ಕಿನಂತೆ |

ಎಂದಿನಂತೆ ಒಳಗೆ ತಿಳಿಯದ್ಹಾಂಗೆ ಬರುವ ||

ಮೆದ್ದು ಹಾಲು-ಬೆಣ್ಣೆ ಮೆಲ್ಲಗೆ ಹೋಗುವ |

ಹಿಂದಿನಿಂದ ಬಂದು ಹಿಡಿಯಲು ಓಡಿಪೋಗುವ ||1||

ಬರುವ ಪ್ರತಿದಿನ ತಪ್ಪದೆ ಗೆಳೆಯರೊಡನೆ |

ತೋರಿಸಿ ಕೊಲು ಹೆದರಿಸಲು ಹಲ್ಲು ಕಿಸಿಯುವ ||

ಮರಳಿ ಬಂದರೆ ಯಶೋದೆಗೆ ಪೇಳುವೆನೆಂದರೆ |

ತಿರುಗಿ ನಿಂತು ಸೊಟ್ಟಮೊರೆ ಮಾಡಿ ಅಣಕಿಸುವ ||2||

ಹುಸಿ ಮುನಿಸು ತೋರಿದರೂ ಹೃದಯದಿ ಬಯಕೆ |

ಆಸೆ ಮೂಡುವುದು ಮನದಿ ನಿತ್ಯ ಬರಲೆಂದು ||

ಹಸನಾದ ಬೆಣ್ಣೆ, ಕಾಸಿದ ಹಾಲು ಕೊಡಲು ಕಾಯುತ್ತಾ |

ಚೇಷ್ಟೆಕಾರ ಶ್ರೀಕೃಷ್ಣವಿಠ್ಠಲನ ಕಾಣದೆ ಜೀವ ನಿಲ್ಲದು ||3||

305. ಸಕಲ ಪುಣ್ಯವೂ ದಾನದ ಹಿಂದೆ |

ಸಕಲ ದಾನವೂ ಅನ್ನದಾನದ ಹಿಂದೆ ||

ಸಕಲ ಸುಖವೂ ಆರೋಗ್ಯದ ಹಿಂದೆ |

ಸಕಲ ಬಂಧುಗಳು ತಾಯ್ತಂದೆ ಹಿಂದೆ ||

ಸಕಲ ವ್ರತವೂ ಏಕಾದಶಿ ವ್ರತದ ಹಿಂದೆ |

ಸಕಲ ಸುಗುಣಗಳು ಶೀಲಗುಣದ ಹಿಂದೆ ||

ಸಕಲ ವಿದ್ಯೆಯು ಅಧ್ಯಾತ್ಮ ವಿದ್ಯೆ ಹಿಂದೆ |

ಸಕಲ ದೇವತೆಗಳು ಶ್ರೀಕೃಷ್ಣವಿಠ್ಠಲನ ಹಿಂದೆ ||

306. ನಿಜ ಪೇಳಲೇನೆ ಗೋಪಮ್ಮಾ ಮನದಮಾತು |

ಭಜಿಸಿ ನಿತ್ಯ ನಾಮ ಪಾಡುವುದೇ ಎಮ್ಮ ಕಾಯಕ ||

ರಂಜಿಸಿ ಮುದ ನೀಡುವುದು ಅವನ ಲೀಲೆಗಳ ನೆನಪಲಿ |

ವ್ರಜಭೂಮಿ ಕಣಕಣದಲ್ಲಿರುವನೇ ಪ್ರತಿ ಉಸಿರಲಿರುವ ||

ಅಂಜದೆ ಬೀಸುವ ತಂಗಾಳಿಯಲ್ಲಿದೆ ಸ್ಪರ್ಶದ ಅನುಭವ |

ಹೆಜ್ಜೆಯ ಗೆಜ್ಜೆನಾದದಲಿ ಮುರಳಿನಾದ ಕೇಳುವುದು ||

ಮುಂಜಾನೆ ಎದ್ದರೆ ಅವನದೇ ಉದಯರಾಗ |

ಸಂಜೆವರೆಗೂ ಅವನದ್ದೇ ಸದಾ ಗುಣಗಾನ ||

ಮುಂಜಾನೆಯಿಂದ ಸಂಜೆ ತನಕ, ಸಂಜೆಯಿಂದ ಮುಂಜಾನೆತನಕ |

ಕಂಜನಾಭ ಶ್ರೀಕೃಷ್ಣವಿಠ್ಠಲ ಮೂರುತಿ ಒಳ-ಹೊರಗೆ ಎಲ್ಲೆಲ್ಲೂ ಕಾಣುವುದು ||

307. ಮನವಿದೇ ಬಯಸಲಿ ದಯಾನಿಧೇ ದಯಾನಿಧೇ |

ನಿನ್ನ ನೆನೆಯದೇ ಕ್ಷಣವೆಂದೂ ಕಳೆಯದಿರಲಿ ||

ಮನದ ಕನ್ನಡಿಯ ಮಲವು ತೊಳೆದು ಸ್ವಚ್ಛವಾಗಿಸು |

ಬನ್ನ ಬಡಿಸದಿರು ಲೌಕಿಕದಿ ಎಲ್ಲರೊಳಗೆ ||

ಜನುಮ ಜನುಮದಿ ಬಿಂಬಮುರುತಿ ಸ್ಥಿರದಿ ನಿಲ್ಲಿಸು |

ಚೆನ್ನಾಗಿ ನಲಿದಾಡುವುದ ನಿತ್ಯದಿ ಒಳಗಣ್ಣಿಗೆ ತೋರು ||

ಕೊನೆಯತನಕ ಮೊನಚಾಗಿ ಸತ್ಯದಿ ಕಾಣುತಿರಲಿ |

ಕನವರಿಸುತಿರುವೆ ನಿನ್ನ ಕೃಪೆಗಾಗಿ ಪ್ರತಿಕ್ಷಣದಿ ||

ನಿನ್ನ ಬಿಟ್ಟರನ್ನರಿಲ್ಲ ಮನ್ಯುನಾಮಕನೇ |

ಹೃನ್ಮಂದಿರವಾಸಿ ಶ್ರೀಕೃಷ್ಣವಿಠ್ಠಲ ತ್ವರಿತದಿ ದಯಮಾಡೋ ||

308. ಮನುಜನೇ ಮನದಲ್ಲಿ ಮರುಗದಿರು |

ಮನಸ್ಸಿನಂತೆ ನಡೆಯದು ಎಂದೆಂದೂ ||ಪ||

ಹಿಂದೆಂದೂ ನಡೆದಿಲ್ಲ ಮುಂದೆಯೂ ನಡೆಯದು ||ಅಪ ||

ಎಲ್ಲಿ, ಹೇಗೆ ಯಾವಾಗ ಹುಟ್ಟಬೇಕೆಂದು ಬೇಡಿದ್ದಿಯಾ |

ಮಲ್ಲನಂತೆ ಜೀವನಸಾರದಿ ನಾನೇ ಎನ್ನಬೇಡಾ ||

ಇಲ್ಲಸಲ್ಲದ ವಿಚಾರ ಮಾಡಿದರೆ ಅದರಂತೆ ಆಗದು |

ಒಲ್ಲದಿರೆ ಯಾವ ರೀತಿಯ ನಿರ್ಗಮನ ಗೊತ್ತಿದಿಯಾ ||1||

ಜೀವನದ ಚುಕ್ಕಾಣಿ ಹಿಡಿದವರ್ಯಾರೋ |

ಜೀವನದಿ ಬಂದು ಹೋಗವರ್ಯಾರೋ ||

ಜೀವನದ ಘಟಿಸುವ ಘಟನೆಗಳೆಷ್ಟೋ |

ನೋವು-ನಲಿವನೀವ ಅವನಿಷ್ಟ ಬಮದಾಗ ||2||

ಸೂತ್ರದ ಗೊಂಬೆಯಂತೆ ಎಲ್ಲ ಕಾಲದಿ |

ಎತ್ತಿ ಕುಣಿಸಿದರೆ ಕುಣಿಯುವುದು ಅಷ್ಟೆ ||

ಮತ್ತೆ ಕಾಲ ಬರುವರೆಗೆ ಕಾಯುವುದು |

ಚೇತನ ಹೆಸರಿಗಷ್ಟೆ ಚಿತ್ತದಂತೆ ಸಾಗದು ||3||

ಆದಿ-ಅಂತ್ಯ ತಿಳಿದಯೆ ಮಧ್ಯದ ಗೊತ್ತು ಗುರಿ ಇಲ್ಲದೆ |

ಹೋದತ್ತ ಹೊಗುವುದಷ್ಟೋ, ಒಲ್ಲೆನೆಂದರೆ ಬಿಡದು ||

ಎದುರಾಗಿ ಬಿರುಗಾಳಿಗೆ ಹಾದಿಯಲ್ಲಿ ಸಾಗಬಹುದೇ ? |

ಮೊದಲೇ ಎಲ್ಲ ನಿರ್ಧರಿಸುವ ಶ್ರೀಕೃಷ್ಣವಿಠ್ಠಲ ||4||

ನಾರದ

309. ಬ್ರಹ್ಮಪುತ್ರರಿವರು ಭಗವಂತನ ಕಾರ್ಯತತ್ಪರರು |

ಮಹತಿ ಮೀಟುತ ಸಂಚರಿಸುವರು ತ್ರಿಲೋಕದಿ ||

ಬ್ರಹ್ಮಚಾರಿಯಾದರೂ ಸಕಲರ ಮನೋಧರ್ಮವರಿತವರು |

ಇಹ-ಪರದಿ ಕಲಹಪ್ರಿಯರೆಂದೇ ಪ್ರಖ್ಯಾತರು ||

ಸಹನೆಯಲಿ ಪರಾಕಾಷ್ಠರು ನಿಂದೆಯ ಸಹಿಸುವರು |

ಸ್ನೇಹ ಜಿವಿ ಯಾರನ್ನೂ ಎಂದೂ ದ್ವೇಷಿಸರು ||

ಮಹಾತ್ಮರ ಸೇವಿಸಿ ಅಹಿಶಯನನ ಪ್ರಿಯರಾದರು |

ಮಹತ್ವ ಸಾರುವ ಶ್ರೀಮದ್ಭಾಗವತ ರಚಿಸಲು ಪೇಳಿದರು ||

ಇಹದೊಳಿರುವ ನರರಿಗೆ ಸನ್ಮಾರ್ಗ ತೋರಿದರು |

ಬಹು ವಿಧದಿ ಪರಮಾತ್ಮನ ಕೊಂಡಾಡುವ ಭಕ್ತಶ್ರೇಷ್ಠ ||

ಇಹರು ಇವರೇ ನಾರದರೆಂಬ ನಾರಾಯಣ ಸೇವಕ |

ಅಹರ್ನಿಶಿ ಶ್ರೀಕೃಷ್ಣವಿಠ್ಠಲನ ನಾಮ ಜಪಕರು ||

310. ಮಾಡಿದ್ದ ಪಾಪ ಏಕಾಂತದಿ ಯಾರೂ ಅರಿಯರೆನ್ನದಿರು |

ಎಂದೋ ಮಾಡಿದರೂ ಅದು ಮುಂದೆ ಬಾಧಿಸದೇ ತೀರದು ||

ಹದಿಮೂರು ದೇವತೆಗಳು ಅದಕ್ಕೆ ಸಾಕ್ಷಿಯಾಗಿಹರು |

ಆದಿತ್ಯ, ಚಂದ್ರ, ಪಂಚಭೂತಗಳಲ್ಲದೆ ||

ಸಂಧ್ಯಾಕಾಲಗಳು, ಮನ, ಯಮ, ಹಗಲು-ಇರಳು |

ಅದರೊಂದಿಗೆ ಬಹುಮುಖ್ಯವಾದದ್ದೇ ಧರ್ಮ || (ಪರಮಾತ್ಮ)

ಅದಕ್ಕೇ ತಕ್ಕ ಪ್ರಾಯಶ್ಚಿತವಾಗದಿದ್ದರೆ ನಂತರ |

ಮಾಡಿದ್ದುಣ್ಣೋ ಮಹರಾಯಾ ಎಂಬಂತೆ ಸತ್ಯ ಸಂಕಲ್ಪ ||

ಅದರ ಫಲ ಉಣ್ಣಿಸದೆ ಬಿಡನು ಶ್ರೀಕೃಷ್ಣವಿಠ್ಠಲ ||

311. ಚೆನ್ನ ಯಾವ ರೂಪ ಚೆನ್ನ ಮನದಿ

ನೆನೆಯಲು ಯಾವ ರೂಪ ಚೆನ್ನ ||ಸತತ|| ||ಪ||

ಚೆನ್ನವೋ ಬುಟ್ಟಿಯಲಿ ಗೋಕುಲಕೆ ತೆರಳಿದ ರೂಪ |

ಚೆನ್ನವೋ ಪೂತನಿ ಹರಣದ ರೂಪ ||

ಚೆನ್ನವೋ ಬಾಯಲಿ ಬ್ರಹ್ಮಾಂಡ ತೋರಿದ ರೂಪ |

ಚೆನ್ನವೋ ಯಶೋದೆ ಬೆನ್ನಿಗೆ ಬಿದ್ದ ರೂಪ ||1||

ಚೆನ್ನವೋ ಪರರ ಬೆಣ್ಣೆ ಕದಿಯುವ ರೂಪ |

ಚೆನ್ನವೋ ಉಲೂಖ ಬಂಧನದ ರೂಪ ||

ಚೆನ್ನವೋ ಗೋವಳ ಕಾಯ್ದ ರೂಪ |

ಚೆನ್ನವೋ ಗೋವರ್ಧನಧಾರಿ ರೂಪ ||2||

ಚೆನ್ನವೋ ಕಾಳಿಂಗ ಮರ್ದನ ರೂಪ |

ಚೆನ್ನವೋ ಮುರುಳಿ ಊದಿದ ರೂಪ ||

ಚೆನ್ನವೋ ಸ್ತ್ರೀವಸ್ತ್ರಾಪಹರಣ ರೂಪ |

ಚೆನ್ನವೋ ರಾಸಕ್ರೀಡೆಯ ನಾನಾ ರೂಪ ||3||

ಚೆನ್ನವೋ ರಾಧೆ ಸಂಗಡ ವಿಹಾರ ರೂಪ |

ಚೆನ್ನವೋ ಮಾವ ಕಂಸನ ಕೊಂದ ರೂಪ ||

ಚೆನ್ನವೋ ರುಕ್ಮಿಣಿ ವರಿಸಿದ ರೂಪ |

ಚೆನ್ನವೋ ಸುದಾಮನ ಹರಸಿದ ರೂಪ ||4||

ಚೆನ್ನವೋ ರಥ ಸಾರಥ್ಯದ ರೂಪ |

ಚೆನ್ನವೋ ಗೀತೆ ಉಪದೇಶಕ ರೂಪ ||

ಚೆನ್ನವೋ ಅಗಾಧ ವಿಶ್ವರೂಪ |

ಚೆನ್ನವೋ ಚಕ್ರಪಿಡಿದೆತ್ತಿದ ರೂಪ ||5||

ಚೆನ್ನಕ್ಕಿಂತ ಚೆನ್ನ ಅನೇಕಾನೇಕ ರೂಪ |

ಚೆನ್ನ ಕಡೆಗೋಲು ಪಿಡಿದ ಬಾಲ ರೂಪ ||

ಚೆನ್ನ ಸ್ಮರಿಸಲು ಒಲಿವ ಎಲ್ಲ ರೂಪದಿ |

ಚೆನ್ನ ಶ್ರೀಕೃಷ್ಣವಿಠ್ಠಲ ಸುಂದರ ಸಕಲ ರೂಪದಿ ||6||

312. ಆರು ಇರೆ ನೀನಿಲ್ಲದಿರೆ ಎಂತು ಕರುಣಾಕರ |

ಆರು ಬಲ್ಲರು ಆರಿಗೆ ನೀನೊಲಿವೆ ಎಂದು ||

ಆರು ಇದ್ದರೆ ನರಕ ಭಾಜನರಾಗುವರು | (ಕಾಮಾದಿಗಳು)

ಆರು ಗುಣಗಳಿಂದ ಪ್ರಸನ್ನೀಕರಿಸಲಸಾಧ್ಯ || (ಧನ-ರೂಪ, ತಪ-ವಿದ್ಯೆ, ಬಲ-ಪೌರುಷ)

ಆರು ಇದ್ದರೆ ಭಕ್ತಿ ಲಭ್ಯವಾಗುವುದು | (ನಮಸ್ಕಾರ-ಸ್ತುತಿರೂಪಕರ್ಮ, ಪೂಜನ-ಸೇವೆ, ಸ್ಮರಣೆ-ಕಥಾಶ್ರವಣ)

ಆರು ಜನರೋದ್ಧಾರಕನೇ, ಸಮದರ್ಶಿಯೇ || (ಧ್ರುವ-ಗಜೇಂದ್ರ, ವಿದುರ-ವ್ಯಾಧ,

ಕುಬ್ಜೆ-ಸುಧಾಮ)

ಆರು ನಿನಗೊಪ್ಪಿಸುವೆ ದಯಪಾಲಿಸೋ | (ಪಂಚೇಂದ್ರಿಯಮನ)

ಅರಿಗಳ ತರಿದು ಅರಿವು ಮೂಡಿಸೋ ಶ್ರೀಕೃಷ್ಣವಿಠ್ಠಲಾ ||

313. ಪರಮ ಶಾಂತ ನಮ ನರಸಿಂಹ |

ಕರುಣಾಳು ಕಂದನ ಕರೆ ಆಳಿಸಿ ಬಂದ ||

ಕರೆಕರೆ ಮಾಡಿದ ತಂದೆಯ ಒರೆಸಿದ |

ಕರುಳಿನ ಮಾಲೆ ಕೊರಳೊಳು ಧರಿಸಿದ ||

ಕರದಿಂದ ಉದರದಿ ರತ್ನಗಳ ಹುಡುಕಿದ |

ಕರೆದು ಹತ್ತಿರ ಪ್ರಲ್ಹಾದನ ಶಿರ ನೇವರಿಸಿದ ||

ವರವ ಕೇಳೆಂದು ಪ್ರೀತಿಯಲಿ ಪೇಳಿದ |

ಚಕ್ರವರ್ತಿಯ ಮಾಡಿ ಸಿಂಹಾಸನದಿ ಕುಳ್ಳಿರಿಸಿದ ||

ಸುರೇತರ ಕುಲ್ಯನ ಭಕ್ತಿಗೆ ಒಲಿದ |

ಶ್ರೀಕೃಷ್ಣವಿಠ್ಠಲಾಭಿನ್ನ ನರಸಿಂಹ ರೂಪ ಉಗ್ರ ಹೇಗೆ ? ||1||

ಅರ್ಧನರ, ಅರ್ಧಕೇಸರ ರೂಪದಲ್ಲಿರುವ |

ಕೂರಲಗಿನಂತೆ ನಖಗಳ ಪೊಂದಿರುವ ||

ಕರೆದಲ್ಲಿ ಬಂದು ತೋರಿದಲ್ಲಿ ಪ್ರತ್ಯಕ್ಷನಾದ |

ಶೀಘ್ರದಿ ಭಕ್ತರನು ಕರುಣಿಸುವನಿವ ||

ಗರ್ಜಿಸಿ ದ್ವೇಷಿಗಳ ಹೃದಯ ಸೀಳುವ |

ಸ್ಮರಿಸಲು ಸುಜನರು ಸದಾ ನರಸಿಂಹನ ||

ನರಸಿಂಹಸ್ತುತಿ ಪಠಿಸಲು ಶನಿ ಕಾಟವಿರದು |

ಅಗ್ರದಿ ನಾರಸಿಂಹ ಹಿಂದೆ ಶ್ರೀಕೃಷ್ಣವಿಠ್ಠಲರಿದ್ದು ರಕ್ಷಿಪರು ||2||

ಬಾರದು ಭಯ ಕಂದಗೆ ತಾಯಿ ಮಡಿಲಲಿ |

ಬಾರದು ಸಂಶಯ ಗುರುವಿನಲಿ ಶಿಷ್ಯಗೆ ||

ಬಾರದು ಕತ್ತಲೆ ಸೂರ್ಯನ ಬೆಳಕಿನಲಿ |

ಉಗ್ರರೂಪ ಎಂದೂ ತೋರದು ಭಕ್ತಗೆ ನರಸಿಂಹನಲಿ ||

ಶರಣು ಬಂದವರಿಗೆ ಆಪದ್ಬಾಂಧವನಿವ |

ಕರಪಿಡಿದು ನಡೆಸಿ ಆಪತ್ತು ಕಳೆವನು ||

ಪತ್ರ-ಪುಷ್ಪ, ಫಲ-ಜಲದಿ ಸಂತೃಪ್ತ |

ಸಂರಕ್ಷಿಸುವ ಸದಾ ಶ್ರೀಕೃಷ್ಣವಿಠ್ಠಲಾಭಿನ್ನ ನರಸಿಂಹ ||3||

ನೀರು ಕುಡಿದಂತೆ ಆಪೋಶನದಿ ಜಗತ್ತನ್ನೇ ನುಂಗುವ |

ಶ್ರೀಕೃಷ್ಣವಿಠ್ಠಲಾಭಿನ್ನ ನರಸಿಂಹ ಇರುತಿಹನು ಭಾವನೆಗೆ ತಕ್ಕಂತೆ ||

ಶ್ರೀ ಕೃಷ್ಣವಿಠ್ಠಲಪದಗುಚ್ಛ 3 ಅನುಕ್ರಮಣಿಕಾ

314. ಬಾಯ್ತೆರೆದು ಹರಿ ನಾರಾಯಣ, ಗೋವಿಂದ ಎನೆ |

ಎತ್ತರಕೆ ಏರಿಸುವುದು ಎಲ್ಲರ ದೃಷ್ಟಿಯಲಿ ||

ಗುಪ್ತವಾಗಿ ತುಟಿಯಲಿ ಶ್ರೀರಾಮನ ಜಪಿಸಲು ಆರಾಮ | (ಉಪಾಂಶು)

ನಿತ್ಯದಿ ಶ್ರೀಕೃಷ್ಣವಿಠ್ಠಲನ ಮನದಿ ನೆನೆಯೆ ಮುಕ್ತಿಪ್ರದಾಯಕ ||

315. ಸತತ ಮಾಡಲು ಪರಮಾತ್ಮನ ನಾಮೋಚ್ಚಾರ |

ಪ್ರತಿ ಉಸಿರಿಗೊಮ್ಮೆ ಉಚ್ಚರಿಸೆ ದೇಹ ಶುದ್ಧಿಯಲಿ ||

ಚಿತ್ತ ಶುದ್ಧಿಯೂ ಮಾಳ್ಪ ಸಕಲ ಪಾಪ ಪರಿಹಾರದಿ |

ಸ್ತುತ್ಯ ಶ್ರೀಕೃಷ್ಣವಿಠ್ಠಲ ಒಲಿದು ಅನುಗ್ರಹಿಪ ಸರ್ವಸಿದ್ದಿ ||

316. ಸಾವು ನಿಶ್ವಿತ, ಹುಟ್ಟಿದ್ದು ಸಾಯಲೇಬೇಕು |

ಹಾವು ಮೈಮೇಲೆ ಹರಿದಂತೆ ಭಯವೇಕೆ ? ||

ನೋವಿಗಂಜಿದೊಡೆ ಸಾವು ತಪ್ಪವುದೆ ? |

ಸಾವು ದೇಹ ಕಷ್ಟೇ, ಆತ್ಮ ಅಮರ ಸದಾ ||

ಯಾವ ವಿಧದಿ ಬಂದರೂ ದು:ಖಿಸುವದೇಕೆ |

ಕಾವುದಮ್ಮನು ತಪ್ಪದೇ ಶ್ರೀಕೃಷ್ಣವಿಠ್ಠಲನ ಕೃಪೆ ||

317. ಭಿಕ್ಷೆಯಿಂದ ಬಂದ ಜೀವನ ಕಳೆವವರೆಷ್ಟೋ |

ರಕ್ಷೆ ಇಲ್ಲದೆ ಹಾಳಾಗಿ ಕೆಟ್ಟ ಹಾದಿ ಹಿಡಿವವರೆಷ್ಟೋ ||

ಸಾಕ್ಷಿ ಇಲ್ಲವೆಂದು ತಿಳಿದು ಕುಕರ್ಮ ಮಾಡುವವರೆಷ್ಟೊ |

ಭಕ್ಷಣೆಗಾಗಿ ನಿಷಿದ್ಧ ಅನ್ನ ಸೇವಿಸುವವರೆಷ್ಠೋ ||

318 ಕುಕ್ಷಿಗಾಗಿ ಜಗದೊಳು ಅಳುವವರೆಷ್ಟೋ |

ಸೊಕ್ಕಿನಿಂದ ಅನ್ನಹಾಳು ಮಾಡುವವರೆಷ್ಟೋ ||

ದಾಕ್ಷಿಣ್ಯದಿ ಆಹಾರವಿತ್ತು ಸಲುಹುವವರೆಷ್ಟೋ |

ದಕ್ಷ ಶ್ರೀಕೃಷ್ಣವಿಠ್ಠಲ ನಿನ್ನಂತೆ ಹೊಟ್ಟಿಗಿತ್ತು ಸಲುಹುವರ ನಾ ಕಾಣೆ ಎಲ್ಲೂ ||

319. ಎನ್ನ ಆನಂದ ಕೃಷ್ಣಯ್ಯಾ | ಎನ್ನ ಚೇತನ ಕೃಷ್ಣಯ್ಯಾ ||

ಎನ್ನ ಮುದ್ದು ಕೃಷ್ಣಯ್ಯಾ | ಎನ್ನ ಮಹಾದೇವ ಕೃಷ್ಣಯ್ಯಾ ||

ಎನ್ನ ತಾಯಿ ಕೃಷ್ಣಯ್ಯಾ | ಎನ್ನ ತಂದೆ ಕೃಷ್ಣಯ್ಯಾ ||

ಎನ್ನ ಬಂಧು ಕೃಷ್ಣಯ್ಯಾ | ಎನ್ನ ಬಳಗ ಕೃಷ್ಣಯ್ಯಾ ||

ಎನ್ನ ಹಬ್ಬ ಕೃಷ್ಣಯ್ಯಾ | ಎನ್ನ ಹರಿದಿನ ಕೃಷ್ಣಯ್ಯಾ |

ಎನ್ನ ವ್ರತ-ನೇಮ ಕೃಷ್ಣಯ್ಯಾ | ಎನ್ನ ತೀರ್ಥಯಾತ್ರೆ ಕೃಷ್ಣಯ್ಯಾ ||

ಎನ್ನ ವಿದ್ಯೆ ಕೃಷ್ಣಯ್ಯಾ | ಎನ್ನ ಧನ ಕೃಷ್ಣಯ್ಯಾ ||

ಎನ್ನ ಶಾಸ್ತ್ರ ಕೃಷ್ಣಯ್ಯಾ | ಎನ್ನ ಶ್ರವಣ ಕೃಷ್ಣಯ್ಯಾ ||

ಎನ್ನ ಜೀವ ಕೃಷ್ಣಯ್ಯಾ | ಎನ್ನ ಜೀವನ ಕೃಷ್ಣಯ್ಯಾ ||

ಎನ್ನ ಆತ್ಮ ಕೃಷ್ಣಯ್ಯಾ | ಎನ್ನ ಪರಮಾತ್ಮ ಕೃಷ್ಣಯ್ಯಾ ||

ಎನ್ನ ಉಸಿರು ಕೃಷ್ಣಯ್ಯಾ | ಎನ್ನ ಉದ್ಧಾರಕರ್ತ ಕೃಷ್ಣಯ್ಯಾ ||

ಎನ್ನ ಜ್ಞಾನ ಕೃಷ್ಣಯ್ಯಾ | ಎನ್ನ ಭಕುತಿ ಕೃಷ್ಣಯ್ಯಾ ||

ಎನ್ನ ಶ್ರೀಕೃಷ್ಣವಿಠ್ಠಲನೇ | ಎನ್ನ ಸರ್ವಸ್ವ ಕೃಷ್ಣಯ್ಯಾ ||

ಸ್ವಪ್ನ ದರುಶನ

320. ದರ್ಶನ ಪಡೆಯಲು ಸ್ವಪ್ನದಿ ಅನಂತೇಶ್ವರ ಸನ್ನಿಧಿಗೆ ಪೊಗಲು |

ಆಶ್ಚರ್ಯವಾಯಿತು ಪೌಳಿಯಲಿ ಕುಳಿತ ಗುರುಗಳ ಕಂಡು ||

ಆಶೀರ್ವಾದ ಪಡೆಯಲು ಪೋಗಿ ನಮಸ್ಕರಿಸಲು |

ವೀಕ್ಷಿಸಿ ಕೇಳಿದರು ಪರಮಮಂಗಳನ ಕಥೆಯಲಿ ||

ವಿಶೇಷ ಪ್ರಸಂಗ ಯಾವುದಿದೆ ಪೇಳೆನಲು |

ಅಕ್ಷಯಪಾತ್ರೇಲಿ ಪಡೆದ ಕಥಾಭಾಗ ಪ್ರಿಯವೆನಗೆನಲು ||

ಹರ್ಷದಿ ಎನಗೂ ಅದು ಪರಮ ಪ್ರಿಯವೆಂದು ಹೇಳಿ |

ಆಶೀರ್ವಾದದಿ ಇತ್ತು ಫಲಮಂತ್ರಾಕ್ಷತೆ ಹರಿಸಿದರು ||

ಸಾಕ್ಷಾತ್ ಗುರುಗಳಂತರ್ಗತ ಮಾಡಿದ ಪರಮಾನುಗ್ರಹವಿದು |

ದಶದಿಕ್ಕುಗಳಿಂದ ಮನದಿ ಹೃತ್ಪೂರ್ವಕ ನಮನಗಳು ||

ವಿಶ್ವೇಶ ಶ್ರೀಕೃಷ್ಣವಿಠ್ಠಲಗೇ ಪುನ: ನಮೋನಮ: ||

321. ಉಲ್ಲಾಸತೆಯಲಿ ಕೊಳಲು ನುಡಿಸಿದರೆ |

ಗೊಲ್ಲತಿಯರು ನೀವೆಲ್ಲ ಓಡಿ ಬರುವುದುಚಿತವೇ ? ||

ಕೆಲಸ- ಕಾರ್ಯಗಳು ನಿಮಗಿಲ್ಲವೆ ಸದನದಿ |

ಕೈಲಿದ್ದ ಕೆಲಸ ಅರ್ಧಕೆ ಬಿಟ್ಟು ಹೀಗೆ ಬರುವರೆ ? ||

ಒಲವಿನ ಪತಿ-ಸುತರು, ಅತ್ತೇ ಮಾವ ನಿಮಗಿಲ್ಲವೆ ? |

ಬಲು ಸೋಜಿಗ ರಾತ್ರೀಲಿ ಒಂಟಿಯಾಗಿ ಬರುವುದೇ ? ||

ಪೇಳುವೆನು ನಿಮ್ಮ ಒಳ್ಳೆಯದಕ್ಕೆ ಈಗಲೇ ಹಿಂತಿರುಗಿರಿ |

ಗೊಲ್ಲ ಬಾಲ ಲೊಕಾನು ರೂಢಿಯ ಮಾತನಾಡಿದ ||

ಸೊಲ್ಲ ಕೇಳಿ ಗೋಪಿಯರ ಹೃದಯ ತಲ್ಲಣಿಸಿತು |

ಜಲ ತುಂಬಿದ ನಯನದಿ ಗದ್ಗದಿತರಾದರು ||

ಕುಲಟೆಯರು ನಾವೆಲ್ಲ ದುಷ್ಟ ಕಾಮನೆ ಎಮಗಿಲ್ಲ |

ಒಲವಿನ ಪತಿ-ಸುತ, ಅತ್ತೆ-ಮಾವರೆಲ್ಲ ಎಮಗಿಹರು ||

ಎಲ್ಲ ಇವರು ಈ ಜನುಮದ ಪತಿ-ಬಾಂಧವರು |

ಕಳೆದ ಜನುಮದಿ ಶತ್ರು-ಮಿತ್ರ, ಪುತ್ರ-ಕಳತ್ರ ಏನಾಗಿದ್ದರೋ ||

ಬಲವಂತದಿ ಎಮ್ಮನು ಸಂಸಾರ ಚಕ್ರಕ್ಕೆ ಏಕೆ ಸಿಗಿಸುವಿ ? |

ಕಾಲುಗಳು ನಿನ್ನತ್ತಲೇ ಚಲಿಸುವುದು, ಮನ ನಿನ್ನಲ್ಲೇ ನೆಟ್ಟಿದೆ ||

ನಾಲಿಗೆ ನಿನ್ನನ್ನೇ ಪಾಡುವುದು, ಕಣ್ಗಳು ನಿನ್ನನ್ನೇ ಅರಸುವುದು |

ಆಲಿಸಲು ನಿನ್ನ ವೇಣುನಾದ ಕಿವಿ ಸದಾ ಹಾತೊರೆವುದು ||

ಮೇಲೆ ಹುಸಿ ಮುನಿಸು ತೋರಿದರೂ ನಿನ್ನಾಪೇಕ್ಷೆ ಎಮ್ಮ ಧ್ಯೇಯ |

ಎಲ್ಲ ಬಲ್ಲ ನೀನೇ ಪ್ರತಿ ಜನುಮದ ಪತಿ-ಬಂಧು, ಸಂರಕ್ಷಕ ||

ನಿಲ್ಲಿಸಿರುವೆವು ಎಮ್ಮ ಮನ ನಿನ್ನಲಿ ಶಾಶ್ವತವಾಗಿ |

ಒಲ್ಲೆನೆಂದರೆ ಇಲ್ಲೇ (ಪ್ರಾಣತ್ಯಾಗಿಸಿ) ನಿನ್ನ ಸೇರುವೆವು ||

ಲೀಲಾ ಮಾಧವ ನಿನ್ನನ್ನೇ ಶರಣು ಬಂದಿಹೆವು ಅನುಗ್ರಹಿಸು |

ಎಲ್ಲ ಗೊತ್ತಿದ್ದೂ ಪರೀಕ್ಷಿಸಲೆಂದೇ ಕೇಳಿದನೆಂದ ಗೋಪಾಲ ||

ಗೊಲ್ಲರು, ಗೋವ್ಗಳು, ವೃಂದಾವನ ಎನಗೆ ಪರಮಪ್ರಿಯ |

ಪೇಳಿದ ಗೋವಿಂದ ನಸು ನಗುತಾ, ನಾಚಿನಿಂದ ನೀರೆಯರಿಗೆ ||

ಅಲೌಕಿಕ ನಂದನಂದನ ಆನಂದದಿ ರಾಸವಾಡಿ ದಣಿಸಿದ |

ಅಹ್ಲಾದದಿ ಪ್ರೇಮ ಪೂರ್ಣ ಆಲಾಪದಿ ಅವರ ತಣಿಸಿದ ||

ಗೊಲ್ಲಬಾಲೆಯರೆಲ್ಲ ನಿತ್ಯಸಿದ್ಧ ಪತ್ನಿಯರು |

ತುಳಸಿಪ್ರಿಯ ಶ್ರೀಕೃಷ್ಣವಿಠ್ಠಲ ಭಕ್ತವತ್ಸಲನಿವ ||

322. ಪರಮಾತ್ಮ ನಿಸ್ಪೃಹ- ಕರ್ಮರತ: |

ಪರಮಾತ್ಮ ಅಜನ್ಮ- ಅವತಾರಿ ||

ಪರಮಾತ್ಮ ಕಾಲಾತ್ಮ- ಶತ್ರು ಪಲಾಯನಿ |

ಪರಮಾತ್ಮ ಸ್ವಾತ್ಮರಾಮ-ಸಾಸಿರ ಸ್ತ್ರೀ ಭರ್ತ ||

ಪರಮಾತ್ಮ ಅಖಂಡ ಜ್ಞಾನಿ-ಸಲಹಾಪೇಕ್ಷಿ |

ಪರಮಾತ್ಮ ಸಂಸಾರ ರಹಿತ-ಜಗತ್ ಪಿತೃ ||

ಪರಮಾತ್ಮ ಅವ್ಯಕ್ತ-ವ್ಯಕ್ತಾದೀನ |

ಪರಮಾತ್ಮ ಸ್ವತಂತ್ರ- ಪರತಂತ್ರ || (ಭಕ್ತಾನಾಂವಶ)

ಪರಮಾತ್ಮ ಭಯಕೃತ - ಭಯನಾಶಕ |

ಶ್ರೀಕೃಷ್ಣವಿಠ್ಠಲ ಸರ್ವ- ಶೂನ್ಯನಾಮಕ ||

323. ವಿಶಾಲ ನಯನ ಪರಮ ಪುರುಷನ |

ದರ್ಶಿಸಬೇಕು, ಸಂದರ್ಶಿಸಬೇಕು ||

ಸ್ಪರ್ಶಿಸಬೇಕು, ಹರ್ಷಿಸಬೇಕು |

ವಿಷಯಾಸಕ್ತ ಜೀವಿಗೆ ದುರ್ಲಭ ||

ದುಷ್ಟ ಚಿತ್ತ, ಹೃದಯಸ್ಥಗೆ ದೃಷ್ಟಿಗಗೋಚರ |

ಸಾಕ್ಷಾತ್ ಪರತತ್ತ್ವ, ವಿಶುದ್ಧ ಸತ್ವಮಯ ||

ಮೋಕ್ಷಪ್ರದಾತ ಶ್ರೀಕೃಷ್ಣವಿಠ್ಠಲ ಪಾಹಿಮಾಮ್ ||

324. ಚರಣದಲ್ಲಿರಿಸಿಕೋ ಪರಮ ಪಾವನನೇ |

ದುರ್ಗಾಪತಿ ಕರುಣಾಸಾಗರ, ಪತಿತ ಪಾವನನೇ ||ಪ||

ಮೋಸ ಮಾಡುವ ಅವಕಾಶವೊಂದೂ ಬಿಡಲಿಲ್ಲ |

ಕಾಸಿಗೆ ಆಸೆಪಟ್ಟು ಅನ್ಯಾಯಿಗಳ ಸೇವೆಗೈದೆ ||

ಅಸಹ್ಯ, ಅಭಕ್ಷಣ ಆಹಾರ ಸೇವಿಸಿದೆ |

ದುಷ್ಟನಾಗಿರುವ ಎನ್ನ ಕ್ಷಮಿಸಿ ಸಲಹೋ ||1||

ಪಂಕ್ತಿಯಲಿ ಪರಪಂಕ್ತಿ ಮಾಡಿದೆ |

ಸೊಕ್ಕಿನಲಿ ಮಾತಂದು ಮನ ನೋಯಿಸಿದೆ ||

ಉಕ್ಕಿ ಬಂದ ಕೋಪದಿ ಕೆಡಕು ಬಯಸಿದೆ |

ತೋಕ ನಾನಯ್ಯಾ ಕ್ಷಮಿಸಿ ಸಲಹೋ ||2||

ಅನ್ಯರು ಮಾನಗೇಡಿ ಎಂದರೇನೂ ಭಯವಿಲ್ಲ |

ಮನನೊಂದು ಹೃತ್ಪೂರ್ವಕದಿ ಬೇಡುವೆ ||

ಅನನ್ಯ ಭಕುತಿ ಇತ್ತು ನಿಶ್ಚಯದಿ ಕಾಪಾಡು |

ಜನ್ಮ ಸಾರ್ಥಕವಾಗಿಸಯ್ಯಾ ಶ್ರೀಕೃಷ್ಣವಿಠ್ಠಲ ||3||

325. ಮತ ಬೇಕು, ಮತಿ ಬೇಕು ಪತಿಗೆ |

ಸತಿಯಾಗಿ ಸಂಸಾರದಿ ನಿರಾಸಕ್ತಿಬೇಕು ||

ಅತಿ ಸೇವೆಗೈದು ಗುರುಗಳೊಲುಮೆಯಲಿ |

ಪತಿತ ಪಾವನನ ನಿತ್ಯ ಒಲೈಸಬೇಕು ||

ಸತ್ಯ ಜ್ಞಾನದಿ ಅನಂತ ಬ್ರಹ್ಮನ ಅರಿಯಬೇಕು |

ಭಕ್ತಿ ಸಾಗರದಿ ತತ್ಪರತೆಯಲಿ ತತ್ತ್ವನಿಷ್ಠನಾಗಿ ||

ಉತ್ಸಾಹದಿ ಉತ್ಥಾನಗೈದು ಉಚ್ಚಸ್ತರದಿ |

ಉತ್ತುಂಗ ಶ್ರೀಕೃಷ್ಣವಿಠ್ಠಲನ ಭಜಿಸಬೇಕು ||

ಮತ = ದ್ವೈತಸಿದ್ಧಾಂತ, ಮತಿ = ಬುದ್ಧಿ, ಪತಿ = ಪರಮಾತ್ಮ, ಸತಿ = ವಿಧೇಯ (ಸರ್ವಾಂಗಸೇವೆ)

|

326. ಸತ್ಯವಂತ ಬ್ರಹ್ಮನ ಪುತ್ರ ಅಧರ್ಮ |

ಈತನ ಸತಿಯಾದಳು ಮೃಷಾ ||

ಪುತ್ರ-ದಂಭ, ಪುತ್ರಿ ಮಾಯಾ ಜನಿಸೆ |

ಸಂತಾನರಹಿತ ನಿರ್ಋತಿ ಗ್ರಹಿಸಿದರಿವರಿಬ್ಬರ ||

ಸಂತತಿ ಬೆಳೆದು ಜನಿಸಿದರು ಲೋಭ-ನಿಕೃತಿ | (ಶಾಠ್ಯ)

ಮತ್ತೆ ಇವರಿಂದ ಕ್ರೋಧ-ಹಿಂಸೆ ಪುಟ್ಟಿದರು ||

ಪುತ್ರರಾಗಿ ಕಲಿ (ಕಲಹ)-ದುರುಕ್ತಿ ಇವರಿಗಾದರು |

ಪತ್ನಿದುರುಕ್ತಿಯಿಂದ ಭಯ-ಮೃತ್ಯು ಸಂತತಿ ಪಡೆದ ಕಲಿ ||

ಉತ್ಪನ್ನವಾಯಿತು ಯಾತನೆ ನಿರಯ (ನರಕ) ಜೋಡಿ ಇವರಿಂದ |

ಅತ್ಯಾಚಾರ-ಅನ್ಯಾಯ, ಅಶಾಂತಿಯ ಮೂಲವೇ ಅಧರ್ಮವಂಶ ||

ತತ್ತರಿಸಿ ಇದರಿಂದ ಪ್ರಳಯ ಕಾರಣವಾಯ್ತು |

ನಿತ್ಯದಿ ಇದ ತಿಳಿಯಲು ಅಧರ್ಮ ತ್ಯಜಿಸಿ ಪುಣ್ಯ ದೊರೆವುದು ||

ಸತ್ಸಂಗವಿರೆ, ಅಧರ್ಮ ಸಂತತಿಯಿಂದಲೇ ದೂರವಾಗುವುದು |

ಸಾತ್ತ್ವಿಕ ಪೂಜೆಯಲಿ ಸದಾ ಶ್ರೀಕೃಷ್ಣವಿಠ್ಠಲಗೆ ಕೃತಜ್ಞನಾಗಿರುವ ||

ಶ್ರೀಹರಿ ಅವತಾರ ಕಾರ್ಯ

327. ಸರೋವರದಲ್ಲಿಳಿದ ಗಜನ ಕಾಲ್ಪಿಡಿದು |

ಭದ್ರವಾಗಿ ಬಿಡದೆ ಮಕರ ನೀರಲ್ಲೆಳೆದ ||

ಸ್ವರಕ್ಷಣೆ ಫಲ ನೀಡದಿರಲು ಆರ್ತಿಯಲಿ |

ಪರಮಾತ್ಮನ ಸ್ತುತಿಸಿ ಮೊರೆ ಇಟ್ಟ ||

ಕರಿಯ ಕರೆ ಕೇಳಿ ಅವಸರದಿ ಶ್ರೀಹರಿ |

ಗರುಡನ ಹೆಗಲೇರಿ ರಮೆಗೂ ಪೇಳದೆ ||

ತ್ವರಿತದಿ ಧಾವಿಸಿ ಕಂಟಕ ಮಕರಿಯ |

ಕೊರಳು ತರಿದು ಒಡನೆ ಶುಭವಿತ್ತ ||

ಶ್ರೀಕೃಷ್ಣವಿಠ್ಠಲನ ಕಾರುಣ್ಯಕ್ಕೇನೆಂಬೆ ||1||

ಮಾತೃವಚನದಂತೆ ತೆರಳಿ |

ಅರಣ್ಯದಿ ಕಠಿಣ ತಪಗೈದ ||

ಸರಳ ಮನದ ಚಿಣ್ಣ ತರಳಗೆ |

ಆರು ತಿಂಗಳಿಗೆ ಪ್ರತ್ಯಕ್ಷನಾಗಿ ||

ಕರದಲ್ಲಿದ್ದ ಶಂಖ ಗಲ್ಲಕೆ ಸ್ಪರ್ಶಿಸೆ |

ತೆರೆದು ಕಣ್ಣು ನೋಡಿದ ಒಳಗಿದ್ದ ರೂಪ ಹೊರಗೆ ||

ಸರ್ವಾಂಗದಿ ಶರಣಾದವಗೆ ಚಿರಸ್ಥಾನವಿತ್ತ |

ಶ್ರೀಕೃಷ್ಣವಿಠ್ಠಲನ ಕಾರುಣ್ಯಕ್ಕೇನೆಂಬೆ ||2||

ಹರಿ ಹರಿ ಎಂದೊಡೆ ಹರಿವುದು ಪಾಪವೆಲ್ಲ |

ಹರಿ ಹರಿ ಎಂದೊಡೆ ಉದ್ಧರಿಸುವ ಸಕಲರ ||

ಹರಿ ಹರಿ ಎಂದೊಡೆ ತರಿವನೆಲ್ಲ ಕಷ್ಟವ |

ಹರಿ ಹರಿ ಎಂದೊಡೆ ನೆರಳಿನಂದದಿ ಸದಾ ಕಾಯ್ವ ||

ಹರಿ ಹರಿ ಎಂದೊಡೆ ಹರಸುವನು ಹರುಷದಿ |

ಹರಿ ಹರಿ ಎಂಬ ಶ್ರೀಕೃಷ್ಣವಿಠ್ಠಲನೇ ಓಡಿ ಬರುವ ||3||

328. ಸ್ಮರಿಸಲು ಸದಾ ಹರಿನಾಮ ಭಕುತಿಯಲಿ |

ಇರುಳು-ಹಗಲು ಉಪದ್ರವ ಬಾರದಂತೆ ||

ಪರಿಹರಿಸಿ ಸಕಲ ಕಷ್ಟ ಕಾರ್ಪಣ್ಯಗಳ |

ಹರಿದು ಬಿಸುಟುವ ಭವದ ಗಂಟು ||

ಶ್ರೀರಮಾ ವಲ್ಲಭ ಆಪತ್ತು ಬರಲೀಸದೆ |

ಶ್ರೀಕೃಷ್ಣವಿಠ್ಠಲ ತನ್ನ ಭಕುತರ ಯೋಗಕ್ಷೇಮಕಾಯ್ವ ||

329. ನಿನ್ನ ಧ್ಯಾನಿಸುವ ಮನವಿತ್ತರೆ ಧ್ಯಾನಿಸುವೆನಯ್ಯಾ |

ನಿನ್ನ ವೀಕ್ಷಿಸುವ ದೃಶ್ಯವಿತ್ತರೆ ದೃಷ್ಟಿಸುವೆನಯ್ಯಾ ||

ನಿನ್ನ ಕಥಾಶ್ರವಣಿಸುವ ಭಾಗ್ಯವಿತ್ತರೆ ಶ್ರವಣಿಸುವೆನಯ್ಯಾ |

ನಿನ್ನತ್ತ ಧಾವಿಸುವ ಅವಕಾಶವಿತ್ತರೆ ಓಡಿ ಬರುವೆನಯ್ಯಾ ||

ನಿನ್ನ ಸೇವಾ ಸಂದರ್ಭವಿತ್ತರೆ ಸೇವೆ ಸಲ್ಲಿಸುವೆನಯ್ಯಾ |

ನಿನ್ನತ್ತ ಧಾವಿಸುವ ಅವಕಾಶವಿತ್ತರೆ ಸೇವೆ ಸಲ್ಲಿಸುವೆನಯ್ಯಾ |

ನಿನ್ನಿಂದ ಸರ್ವಸೇವಾ ಸೌಭಾಗ್ಯ ಸಿಕ್ಕರೆ ನನ್ನ ಅರ್ಪಿಸುವೆನಯ್ಯಾ ||

ನಿನ್ನ ಓಲೈಸುವ ಬುದ್ಧಿ ಇತ್ತರೆ ಅದರಲ್ಲೇ ಮುಳುಗುವೆನಯ್ಯಾ |

ನೀನೆನ್ನ ಯೋಗೇಶ್ವರ ಶ್ರೀಕೃಷ್ಣವಿಠ್ಠಲ ಸಕಲ ಯೋಗ ದಯಪಾಲಿಸು ||

330. ಜಯ, ಜಯ ಕರುಣಾಸಾಗರ ಭವ ಬಂಧಮೋಚಕ |

ಭಯವ ಪರಿಹರಿಸಿ ಧ್ಯಾನವೀಯೋ ದಯಾನಿಧೇ ||

ಕಯಾದು ಇತ್ತ ವಿಷ ಅಮೃತವಾಗಿಸಿದಂತೆ |

ಸಿಯಾ ರಾಮನ ನಂಬಿದ ಹನುಮನ ಪೊರೆದಂತೆ ||

ಮಾಯಾ ಸಂಸಾರ ಬಿಡಿಸಿ ಪದಕಮಲದಲ್ಲಿರಿಸು |

ವಾಯ್ವಾಂತರ್ಗತ ಸಚ್ಚಿದಾನಂದಾತ್ಮಕ ಶ್ರೀಕೃಷ್ಣವಿಠ್ಠಲ ||

331. ವಿಧವಿಧದ ಆನಂದ ಲೌಕಿಕದಿ |

ಬಂದು ಹೋಗುವುವು ಕ್ಷಣಿಕದಿ ||ಪ||

ಮೋದ ಅಮೋದ ಪ್ರಮೊದ ಸುಖವೀವುದು |

ಸದಾ ಅಲೌಕಿಕದ ಆನಂದ ಪರಮಾನಂದ ||

ಹುಡುಕಬಾರದು ಹೊರಗಿನ ವಸ್ತುವಿನಲಿ |

ತಡಕಾಡಬೇಕು ತನ್ನೊಳಗೆ ಮುಳುಗಿ ||1||

ಕಡೆ ಇಲ್ಲದ ನಿತ್ಯ ಆನಂದವ |

ಪಡೆಯಬೇಕು ಬಿಡದೆ ಶಾಶ್ವತದಿ ||

ನಂದನಕಂದ ಆನಂದ ಸ್ವರೂಪಿ |

ಒಡೆಯ ಶ್ರೀಕೃಷ್ಣವಿಠ್ಠಲ ಬೇಡಿಕೊಂಡರೆ ಅನುಗ್ರಹೀಪ ||2||

332. ಆಳವಾದ ಅಲೌಕಿಕ ಜ್ಞಾನ, ವಿಜ್ಞಾನ |

ತಿಳಿಯಲು ಮಾನವ ಜನುಮ ಸಾರ್ಥಕ ||ಪ||

ತಿಳಿಯಲಾಗದು ಸಂಪೂರ್ಣದಿ ಎಂದೂ |

ಒಳ್ಳೇಯದಾಗುವುದು ತಿಳಿಸಿಕೊಂಡರೆ ||

ಅಳತೆ ಇಲ್ಲದ, ಎಲ್ಲೆ ಇಲ್ಲದ್ದು |

ಕೊಳೆಯದೇ ಸದಾ ಜೊತೆಯಲ್ಲಿಹುದು ||1||

ಅಳೆಯಲಾಗದು, ಕಳೆಯಲಾಗದು |

ತಿಳಿದು, ತಿಳಿಸುವ ಕ್ರಮವಿದೆ ||

ಬೆಳಸಿ, ಉಳಿಸುವ ವಿಧಾನವಿದೆ |

ಉಳಿದಾಗ ಫಳಫಳ ಹೊಳೆವುದು ||2||

ಕಳ್ಳತನವಾಗದು ಸುರಕ್ಷೆ ಈವುದು |

ತಿಳುವಳಿಕೆ ನೀಡಿ ಸುಖವೀವುದು ||

ಬಳುವಳಿಯಾಗಿ ಮುಂದೂ ಬರುವುದು |

ಬೆಳೆಯುವುದು ಜನ್ಮ ಜನ್ಮದಿ ||3||

ಹೇಳುವಂತಹ ನಿರ್ದುಷ್ಟ ಆಕಾರವಿಲ್ಲದ್ದು |

ಕೇಳಿ ತಿಳಿದಾಗ ಆನಂದ ಅಪರಿಮಿತ ||

ಸುಳ್ಳಲ್ಲ ಇದೇ ಸತ್ಯದ ಜ್ಞಾನ |

ಕೇಳಿಕೊಂಡರೆ ಅನುಗ್ರಹೀಪ ನಮ್ಮ ಶ್ರೀಕೃಷ್ಣವಿಠ್ಠಲ ||4||

333.. ಒಂದು ಒಂದೇ, ಒಂದೇ ಸಾಧ್ಯ, ಸಾಧನೆ |

ಒಂದರ ಸಮ ಮತ್ತೊಂದಿಲ್ಲ, ಒಂದೇ ಎಂದೂ ಎಂದೆಂದಿಗೂ ||ಪ||

ಒಂದರಿಂದಲೇ ಆನಂದ, ಮಹದಾನಂದ |

ಒಂದನ್ನೇ ನಂಬಿರಿ ಅನ್ಯವೇನಿಲ್ಲ ಜೀವನದಿ ||ಅಪ||

ಒಂದರ ಸಮ ಯಾವ ತೀರ್ಥಯಾತ್ರೆ ಇಲ್ಲ |

ಒಂದರ ಸಮ ಯಾವ ಪವಿತ್ರ ನದಿ ಇಲ್ಲ ||

ಒಂದರ ಸಮ ಸಕಲ ವ್ರತ-ಆಚರಣೆ |

ಒಂದರ ಸಮ ಸಕಲ ಯಜ್ಞ, ದಾನ, ತಪ ||1||

ಒಂದರಲ್ಲಿ ಮುಳುಗಿದರೆ ಸಕಲೋದ್ಧಾರ |

ಒಂದರಲ್ಲಿದ್ದ ಶಕ್ತಿ ಎಲ್ಲದರಲ್ಲಿದೆ ||

ಒಂದೇ ಸಕಲ ರೋಗಕ್ಕೆ ಸಿದ್ಧೌಷದ |

ಒಂದರಿಂದ ಹಿಂದು-ಇಂದು-ಮುಂದಿನ ಶುದ್ಧಿ ||2||

ಒಂದಕ್ಕೆ ಯಾವ ದೇಶ-ಕಾ ಲನಿಯಮವಿಲ್ಲ |

ಒಂದಕ್ಕೆ ಯಾವ ವರ್ಣಾಶ್ರಮ ಭೇದವಿಲ್ಲ ||

ಒಂದಕ್ಕೆ ಯಾವ ಶೌಚಾಶೌಚ ಬಾಧೆ ಇಲ್ಲ |

ಒಂದರಿಂದ ಸಕಲ ಪಾಪ ವಿಮುಕ್ತವು ||3||

ಒಂದನ್ನೇ ಪದೇ ಪದೇ ಉಚ್ಚರಿಸು |

ಒಂದು ಮಾಡುವುದು ಭಕ್ತಿ ಧೃಡತೆ ||

ಒಂದರಲ್ಲೇ ಉತ್ಕಟ ಶ್ರದ್ಧೇ ಇರಲಿ |

ಒಂದರ ನಿರಂತರ ಸೇವನೆ ಮಧುರಾತಿ ಮಧುರ ||4||

ಒಂದೇ ಸುಡುವುದು ಸಕಲ ಪಾಪರಾಶಿ |

ಒಂದೇ ತಡೆವುದು ಬರುವ ದುರಂತ ||

ಒಂದೇ ಕೊಡುವುದು ಅಮಿತ ಪುಣ್ಯ |

ಒಂದೇ ಇಡುವುದು ಪಾದ ಪದ್ಮದಿ ||5||

ಒಂದರಿಂದ ಆರ್ತತೆ ಪೋಪುದು |

ಒಂದರಿಂದ ದು:ಖ ಅಳಿವುದು ||

ಒಂದರಿಂದ ಭೀತಿ ತೊಲಗುವುದು |

ಒಂದರಿಂದಲೇ ವ್ಯಾಧಿ ನಿವಾರಣ ||6||

ಒಂದು ಎಂಬುದು ಅಜಮಿಳನ ಪೊರೆಯಿತು |

ಒಂದು ಎಂಬುದು ದ್ರೌಪದಿಯ ಕಾಯ್ದಿತು ||

ಒಂದು ಎಂಬುದು ಪ್ರಲ್ಹಾದನ ರಕ್ಷಿಸಿತು |

ಒಂದು ಎಂಬುದು ಕರಿಗೆ ಮೋಕ್ಷ ಕೊಟ್ಟಿತು ||7||

ಒಂದರಿಂದಲೇ ಸರ್ವತ್ರ ರಕ್ಷಣೆ |

ಒಂದರಿಂದಲೇ ಸರ್ವದರಿಂದ ರಕ್ಷಣೆ ||

ಒಂದರಿಂದಲೇ ಸರ್ವದಾ ರಕ್ಷಣೆ |

ಒಂದೇ ಸರ್ವದ ಸರ್ವಸಾರ ||8||

ಒಂದು ಇರುವುದು ಕೃತಯುಗದಿ ಧ್ಯಾನ |

ಒಂದು ಇರುವುದು ತ್ರೇತಾಯುಗದಿ ಯಜ್ಞ ||

ಒಂದು ಇರುವುದು ದ್ವಾಪಾರದಿ ಅರ್ಚನೆ |

ಒಂದೇ ಇರುವುದು ಕಲಿಯುಗದಿ ನಾಮ ಕೀರ್ತನೆ ||9||

ಒಂದು ನಾಮದಿ ಸಕಲನಾಮ ಪುಣ್ಯ |

ಒಂದು ರೂಪದಿ ಸಕಲರೂಪ ಸ್ಮರಣೆ ||

ಒಂದು ಕ್ರಿಯೆದಿ ಸಕಲ ಶಕ್ತಿ ಸ್ಫುರಣೆ |

ಒಂದರಿಂದ ನಾಮ ರೂಪ ಕ್ರಿಯೆ ಅಭೇದ ||10||

ಒಂದು ನಾಮದಿ ಅಡಕ ಸರ್ವನಾಮ |

ಒಂದುರೂಪದಿ ಅಡಕ ಸರ್ವರೂಪ ||

ಒಂದು ಗುಣದಿ ಅಡಕ ಸರ್ವಗುಣ |

ಒಂದರಿಂದ ಅಭೇದ ರೂಪ ಗುಣ ಕ್ರಿಯಾ ||11||

ಒಂದರಿಂದಲ್ಲಿದೆ ಸುಖದ ಭಂಡಾರ |

ಒಂದರಲ್ಲಿದೆ ಅನಿಷ್ಟ ನಿವಾರಕ ||

ಒಂದರಿಂದಲೇ ಶತ್ರುನಿವಾರಣ |

ಒಂದೇ ಸುಹೃತ ಮಿತ್ರ, ಬಾಂಧವ ||12||

ಒಂದರಿಂದ ಸಕಲ ಮಂಗಲಮಯ |

ಒಂದನ್ನರಿತರೆ ಸಕಲ ವೇದವೇದ್ಯ ||

ಒಂದರಿಂದಲೇ ಪರಮಗತಿ |

ಒಂದು ಎಂಬುದು ಶ್ರೀಕೃಷ್ಣವಿಠ್ಠಲನಾಮ ಸಂಕೀರ್ತನೆ ||12||

ಜಯಹರಿ ಶ್ರೀಕೃಷ್ಣವಿಠ್ಠಲ, ಅಚ್ಯುತ, ಅನಂತ, ಗೋವಿಂದ |

334. ತಿಳಿದಷ್ಟೂ ತಿಳಿಯುವ ತಿಳಿಯಾದ | ತಿಳಿಯಲಾರದ ತಿಳುವಳಿಕೆ ಕೊಡು ||

ತಿಳಿದು ತಿಳಿಸುವ ನಿರ್ದುಷ್ಟ | ತಿಳಿದೂ ತಿಳಿಯದಿರೆ ಅವಿದ್ಯೆ ||

ಕಾಳು ಕಾಳಾಗಿ ಹೆಕ್ಕಿ ಕಣಜ ತುಂಬಿಸಿ | ಕಳೆದುಹೋಗುವ ಮುನ್ನ ಗಳಿಸಿಕೊಳ್ಳಬೇಕು ||

ಸುಳ್ಳು ಇದಲ್ಲ ಸತ್ಯದಿ ಶ್ರೀಕೃಷ್ಣವಿಠ್ಠಲನ | ಕೊಳ್ಳೆಹೊಡೆಯಬೇಕು ನಮ್ಮ ಪಾಲಿನದ್ದು ||

(ಜ್ಞಾನ-ಆನಂದ)

335. ಶ್ರೀನಾರಾಯಣವರ್ಮ ಕಥಾ

ಸರ್ವದೋಷದೂರ, ಸರ್ವಗುಣಪೂರ್ಣ ಓಂಕಾರಸ್ವರೂಪ |

ಸರ್ವಸ್ಥಳದಿ, ಸರ್ವವ್ಯಾಪುತ ಇಹ-ಪರದಿ ರಕ್ಷಿಪ ||1||

ಗುರು ವಿಶ್ವರೂಪರ ಮಂತ್ರತುಲ್ಯ ನಾರಾಯಣ ಕವಚ ಧರಿಸಿ |

ಇಂದ್ರ ಅಸುರರ ಗೆಲ್ಲಿ ಮೂರುಲೊಕದ ಸಾಮ್ರಾಜ್ಯ ಪಡೆದ ||2||

ಪರಿಪೂರ್ಣನಾದ ಪರಮಾತ್ಮನ ಧ್ಯಾನ ಸಹಿತ ಚಿಂತಿಸಿ |

ಪಾರಾಯಣ ರೂಪದಿ ಮಾಡಿದ ವಿದ್ಯಾ ತೇಜ ತಪೋಮೂರ್ತಿಯ ||3||

ಸರ್ವತ್ರ, ಸರ್ವಗ, ಸರ್ವರೂಪದಿಂ ರಕ್ಷಿಸಲಿ |

ಸರ್ವದಾ ಕರುಣಾಮೂರ್ತಿಸ್ಮರಿಸೆ ಸದಾ ರಕ್ಷಿಸಲಿ ||4||

ಗರುಡಗಾಮಿ ಶ್ರೀಹರಿ ಸರ್ವರಕ್ಷಕನ ಧ್ಯಾನಿಸಿ ಪಾದಪದ್ಮವ |

ಕರದಿ ಶಂಖ, ಚಕ್ರ, ಗುರಾಣಿ, ಖಡ್ಗ, ಗದೆ, ಬಾಣ, ಧನು, ಪಾಶಧರಿಸಿಹ ||5||

ನೀರಲಿ ಮತ್ಸಮೂರ್ತಿ ಜಲಜಂತು ವರುಣ ಪಾಶದಿಂದೆನ್ನ ರಕ್ಷಿಸಲಿ |

ಸುರೂಪ ವಾಮನ ನೆಲದಿ, ವಿಶ್ವರೂಪಿ ತ್ರಿವಿಕ್ರಮ ಆಕಾಶದಿ ರಕ್ಷಿಸಲಿ ||6|||

ಘೋರ ಅಟ್ಟಹಾಸದಿ ದೈತ್ಯ ಸ್ತ್ರೀಗರ್ಭಪಾತಿಸಿದ ದಾನವ ಶತ್ರು |

ನರಸಿಂಹ ಕೋಟೆ, ಅರಣ್ಯ, ರಣಭೂಮಿಯಲ್ಲೆನ್ನ ರಕ್ಷಿಸಲಿ ||7||

ಕೋರೆಯಲಿ ಭೂಮಿ ಧರಿಸಿಹ ಯಜ್ಞ ವರಾಹ ಮಾರ್ಗದಲಿ |

ಪರಶುರಾಮ ಗಿರಿ, ಕಂದರದಿ, ಲಕ್ಷ್ಮಣ ಸಹಿತ ಭರತಾಗ್ರಜ ಪ್ರವಾಸದಿ ರಕ್ಷಿಸಲಿ ||8||

ಉಗ್ರ ಪ್ರಮಾದಗಳು, ಅಭಿಚಾರದಿಂದ ನಾರಾಯಣ ರಕ್ಷಿಸಲಿ |

ಕರ್ಮಬಂಧನದಿಂದ ಕಪಿಲನು ಯೋಗೇಶ್ವರದತ್ತನು, ಯೋಗದಲ್ಲಿಯ ವಿಘ್ನದಿಂದ ರಕ್ಷಿಸಲಿ ||9||

ಪರಮ ಋಷಿ ಸನತ್ಕುಮಾರನು ಕಾಮದೇವನಿಂದಲೂ |

ಮಾರ್ಗಕ್ರಮಿಸುವಾಗ ದೇವತಾವರ್ಯರಿಗಭಿವಂದಿಸದ ಪರಾಧವ ||10||

ನಾರದರು ಪೂಜೆ ಕಾಲದಿ ನಡೆದ ಸೇವಾಪರಾಧಗಳಿಂದಲೂ |

ಕೂರ್ಮಾವತಾರಿ ಶ್ರೀಹರಿ ಎಲ್ಲ ರೀತಿಯ ನರಕದಿಂದೆನ್ನ ರಕ್ಷಿಸಲಿ ||11||

ಪರಮಾತ್ಮ ಧನ್ವಂತರಿ ಕುಪಥ್ಯದಿಂದ ಋಷಭನು ಜಿತೇಂದ್ರಿಯದಿ |

ಭರಿಸುವ ಕ್ರೋಧ, ದು:ಖಗಳ ದ್ವಂದ್ವವ ಯಜ್ಞ ರಕ್ಷಿಸಲಿ ||12||

ಮರ್ತ್ಯಲೋಕದಿ ಬರುವ ಕಷ್ಟವನ್ನು ಬಲರಾಮ ನೀಗಲಿ |

ಸರ್ಪಾಧಿರಾಜ ಶ್ರೀಆದಿಶೇಷನು ಸರ್ಪಗಣದಿಂದೆನ್ನ ರಕ್ಷಿಸಲಿ ||13||

ಶ್ರೀಕೃಷ್ಣದ್ವೈಪಾಯನ ಅಜ್ಞಾನದಿಂದ, ಬುದ್ಧ ಪಾಷಂಡಿಗಳಿಂದಲೂ |

ಧರ್ಮರಕ್ಷಣಾರ್ಥದಿ ಅವತರಿಸುವ ಕಲ್ಕಿ ಕಲಿದೋಷದಿಂದೆನ್ನ ರಕ್ಷಿಸಲಿ ||14||

ಸುಹೃತ ಗದಾಪಾಣಿ ಕೇಶವ ಪ್ರಾತ:ದಿ ನಂತರ ಪಿಳ್ಳಂಗೋವಿ ಗೋವಿಂದನು ರಕ್ಷಿಸಲಿ |

ನಾರಾಯಣನು ಪೂರ್ವ ಮಧ್ಯಾಹ್ನದಿ ನಂತರ ಚಕ್ರಧಾರಿ ವಿಷ್ಣು ರಕ್ಷಿಸಲಿ ||15||

ತೀವ್ರದಿ ಅಪರಾಹ್ನದಿ ಧನುರ್ಧಾರಿ ಮಧುಸೂದನ, ಸಾಯಂಕಾಲದಿ ಮೂರ್ಲೋಕದಿ ಮಾಧವ |

ಅರ್ಧರಾತ್ರೀಲಿ ಹೃಷಿಕೇಶ, ನಿಶೀಥದಿ ಪದ್ಮನಾಭನೆನ್ನ ಸಲಹಲಿ ||16||

ದೊರೆ ಶ್ರೀವತ್ಸಾಂಕಿತ ಅಪರಾತ್ರೀಲಿ, ಖಡ್ಗಧಾರಿ ಜನಾರ್ದನ ಉಷ:ಕಾಲದಿ |

ಸೂರ್ಯೋದಯ ಮೊದಲು ದಾಮೋದರನು, ಪ್ರಭಾತದಿ ಕಾಲಮೂರ್ತಿ ವಿಶ್ವೇಶ್ವರ ರಕ್ಷಿಸಲಿ ||17||

ಕಾರ್ಯಕಾರಣ ಕರ್ತ ಕಾಲ ಚಕ್ರನಧೀನ ಸರ್ವವೆಂಬ ಸತ್ಯದ |

ಅರಿವಿನಿಂದ ಎಲ್ಲ ಉಪದ್ರವಗಳು ನಾಶವಾಗಲಿ ||18||

ಚಕ್ರರಾಜ ಸುದರ್ಶನನೇ ವಾಯುಸಹಿತ, ಹುಲ್ಲಿನಮೆದೆ ಸುಡುವಂತೆ |

ಶೀಘ್ರದಿ ನಮ್ಮ ಶತ್ರುಸೈನ್ಯವ ಸುಟ್ಟುಹಾಕು, ಸುಟ್ಟುಹಾಕು ||19||

ಪರಮಾತ್ಮ ಪ್ರಿಯನೇ ವಜ್ರಾಯುಧಕೆ ಮಿಗಿಲಾದ ಕಿಡಿ ಉದುರಿಸುವ ಗದೆಯೇ |

ಸರ್ವಕೂಷ್ಮಾಂಡ ಯಕ್ಷ, ಭೂತಾದಿ ಗ್ರಹದಿಗಳ ಸದೆ ಬಡೆ ||20||

ಶತ್ರುಹೃದಯ ನಡಗಿಸುವ ಶಂಖ ಧ್ವನಿಯಿಂದ ಸರ್ವಪ್ರೇತ, ಪಿಶಾಚಿ |

ಘೋರ ಬ್ರಹ್ಮರಾಕ್ಷಸರ ಘೋರದೃಷ್ಟಿಯಿಂದ ರಕ್ಷಿಸಲಿ ||21||

ಅರಿಯ ತೀಕ್ಷ್ಣವಾದ ಅಲಗಿನಿಂದ ಶತ್ರುಗಳು ಛಿನ್ನ ಭಿನ್ನ ಆಗಲಿ |

ನೂರಾರು ಚಂದ್ರಮಂಡಲ ಸಮ ಗುರಾಣಿಪ್ರಭೆ, ಪಾಪಾತ್ಮರ ಪಾಪನೇತ್ರ ಮುಚ್ಚಿ ರಕ್ಷಿಸಲಿ ||22||

ಸೂರ್ಯವಿರೋಧಿಗ್ರಹ, ಧೂಮಕೇತು, ಜೀವಿಗಳಿಂದ ಬರುವ ಭಯ |

ಕೋರೆಗಾಡಿ ಹಿಂಸ್ರಪಶು, ಸರಿಸೃಪ, ಭೂತಪ್ರೇತ ಭಯನಿವಾರಿಸಲಿ ||23|||

ಸರ್ವಕ್ಕೂ ದಿವ್ಯೌಷಧವಾದ ಭಗವನ್ನಾಮರೂಪ ಅಸ್ತ್ರವೆಂಬ ಮಂತ್ರ |

ಕೀರ್ತಿಶ್ರೇಯಸ್ಸಿಗೆ ವಿಘ್ನತರುವ ಭಯವನ್ನು ನೀಗಿಸಲಿ ||24||

ಗರುಡರೂಢಿಯ ಸ್ತುತಿಸುವ ಬೃಹತ್ ರಥಂತರ ಸಾಮವೇದ |

ಗರುಡ ವಿಷ್ವಕ್ಸೇನ ಪ್ರಭುನಾಮವು ಉಳಿದೆಲ್ಲ ರೀತಿಯಲಿ ರಕ್ಷಿಸಲಿ ||25||

ಹರಿಯ ನಾಮ ರೂಪ, ನಾನಾ ಆಯುಧ, ಶ್ರೇಷ್ಠ ಪಾರ್ಷದರೆಲ್ಲ |

ಇಂದ್ರಿಯ, ಬುದ್ಧಿ, ಮನ-ಪ್ರಾಣಸಹಿತ ಕಾಪಾಡಲಿ ||26||

ಕಾರ್ಯ, ಕಾರಣರೂಪದ ಈ ಜಗತ್ತು ಭಗವಂತನೇ ಆಗಿರುವನೆಂದು |

ಅರಿತರೆ ಸತ್ಯ ಆಗುವುದು ಉಪದ್ರವಗಳ ನಾಶ ||27||

ಸ್ವರೂಪದಿ ವಿಕಲ್ಪರಹಿತ ಭಗವಂತ ಮಾಯಾ ಸ್ವ-ಶಕ್ತಿಯಲಿ |

ಧರಿಸಿರುವ ಸತ್ಯದಿ ಆಯುಧ, ರೂಪ, ನಾಮವ ||28||

ಸರ್ವಜ್ಞ ಭಗವಾನ್ ಹರಿಯೊಬ್ಬನೇ ಸರ್ವಸತ್ಯ |

ಸರ್ವದಾ ಸ್ವರೂಪದಿಂದ ಸರ್ವತ್ರ ರಕ್ಷಿಸಲಿ ||29||

ಯಾರ ಅಟ್ಟಹಾಸದಿ ಭಯ ಓಡಿಸುವನೊ ಅಂತಹ ಸ್ವತೇಜ ನರಸಿಂಹ |

ಸರ್ವರಕ್ಷಕನಾಗಿ ದಿಕ್ಕು ವಿದಿಕ್ಕುಗಳಲಿ ಒಳ ಹೊರಗೆ ಸಮಸ್ತ ರಕ್ಷಿಸಲಿ ||30||

ನಾರಾಯಣಾತ್ಮಕವಾದ ನಾರಾಯಣವರ್ಮ ಕಥೆಯಿಂದ |

ಸರ್ವ ಸುರಕ್ಷಿತನಾಗಿ ಸರ್ವದೈತ್ಯರ ಗೆಲ್ಲಬಲ್ಲೆ ||31||

ನಾರಾಯಣ ಕವಚಧರಿಸಿದವ ಯಾರನ್ನಾದರೂ ದೃಷ್ಟಿಸಲು |

ಚರಣ ಸ್ಪರ್ಶಿಸಿದರೂ ಸಹ ಸಮಸ್ತಭಯ ನಿವಾರಿಸುವುದು ||32||

ಧರಿಸಲು ವೈಷ್ಣವವಿದ್ಯೆ ಭಯವಿರದು ಈ ಜಗದೀ |

ಚೋರ, ರಾಜ, ಗ್ರಹ, ವ್ಯಾಘ್ರಾದಿತರಗಳಿಂದಾಗದು ||33||

ವಿಪ್ರನೊಬ್ಬ ಕೌಶಿಕ ಗೋತ್ರಜನು ಧರಿಸಿ ಈ ವಿದ್ಯೆ |

ಮರಣಿಸಿದ ಮರಳು ಗಾಡಿನಲಿ ||34||

ಚಿತ್ರರಥನೆಂಬ ಗಂಧರ್ವ ತನ್ನ ಪತ್ನಿಯೊಂದಿಗೆ ಆಕಾಶಮಾರ್ಗದಿ |

ಬರುವಾಗ ಆ ಸ್ಥಳದಿ ಕೆಳಗೆ ಬಿದ್ದನು ||35||

ನಾರಾಯಣ ಕವಚ ಧರಿಸಿದ ಪ್ರಭಾವ ವಿದೆಂದು ವಾಲಖಿಲ್ಯರು ಅರುಹಲು |

ಸರಸ್ವತಿ ನದಿಯಲಿ ಅಸ್ಥಿ ವಿಸರ್ಜಿಸಿ ಸ್ನಾನಮಾಡಿ ತೆರಳಿದನು ||36||

ನಾರಾಯಣ ಕವಚ ಸದಾ ಕೇಳುವ, ಆದರದಿ ಧರಿಸುವ ಮಾನ್ಯನು |

ಸರ್ವ ಅಭಯ ಪದದಿ ಪೂಜ್ಯನಾಗುವ ಜಗದಲ್ಲಿ ||37||

ಗುರುವಿಶ್ವರೂಪ ರಚಿತ ಶ್ರೇಷ್ಠನಾರಾಯಣ ವಿದ್ಯೆ |

ಮೂರ್ಲೋಕದಿ ಅಸುರರ ಗೆಲಿದು ಸಾಮ್ರಾಜ್ಯ ಲಕ್ಷ್ಮೀ ಸೇವಿಸಿದನು ||38||

ಪರೀಕ್ಷಿತಗೆ ಶ್ರೀಶುಕಮಹರ್ಷಿ ಪೇಳಿದರೆಂಬಲ್ಲಿಗೆ |

ಕರುಣೆಯಿಂದ ಶ್ರೀಕೃಷ್ಣವಿಠ್ಠಲ ಪೇಳಿದ ಶ್ರೀನಾರಾಯಣವರ್ಮ ಕಥನ ಮುಗಿಸುವೆ ||39||

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು