ಡಾ ನರಸಾಪೂರ & ಪರಿವಾರ

ಧಾರ್ಮಿಕ ಪುಸ್ತಕ ಸಂಗ್ರಹ

ಶ್ರೀ ಕೃಷ್ಣವಿಠ್ಠಲಪದಗುಚ್ಛ 3.7

ವಾಮನ ಚರಿತೆ

400. ಸುಗುಣಾಂತರಂಗ ಅವಿರ್ಭವಿಸಿ ಅದಿತಿ-ಕಶ್ಯಪ ಪುತ್ರನಾಗಿ |

ಆಗಲೇ ತೋರಿದ ಸುಂದರ ವಟು ವಾಮನರೂಪದಿ ||

ಆಗಮಿಸಿ ಯಜ್ಞಮಂಟಪದಿ ಬೇಡಿದ ಬಲಿಗೆ ದಾನವ |

ಬಗೆಬಗೆಯ ದಾನ ಒಲ್ಲದೆ ಬೇಡಿದ ತ್ರಿಪದ ಭುವಿಯ ||

ಅಗಣಿತ ಬೆಳೆದ ಅಚಿಂತ್ಯಾದ್ಭುತ ತ್ರಿವಿಕ್ರಮರೂಪದಿ |

ಬೇಗ ಅಳೆದ ಎರಡು ಪಾದದಿ ಭುವಿ ಅಂತರಿಕ್ಷವ ||

ನಗೆ ಬೀರಿ ಕೇಳಿದ ಎಲ್ಲಿಡಲಿ ಮೂರನೇ ಪಾದ ಸ್ಥಳತೋರು |

ಯೊಗದಿ ಅರಿತ ಸಾಮನ್ಯನಲ್ಲ ಇವ ಪರಮಾತ್ಮನೆಂದು ||

ಭಂಗವಾಗದಂತೆ ತನ್ನ ಪ್ರತಿಜ್ಞೆ ಸ್ಥಳವ ತೋರಿದ ಶಿರಬಾಗಿ |

ಬೇಗನೆ ಬಲಿಶಿರವ ಮೆಟ್ಟಿ ಪಾತಾಳ ಕಟ್ಟಿದ ||

ಅಂಗನೆಯ ಜೊತೆಗೂಡಿ ನಡೆದ ಚಿರಂಜೀವಿ ಬಲಿ |

ಈಗಲೂ ಕಾಯುತ್ತಿರುವ ಭಕ್ತವತ್ಸಲ ಅರಮನೆ ಬಾಗಿಲವ ||

ಗಗನಕ್ಕೆತ್ತಿದ ಪಾದ ನಖ ತಾಕಿ ಒಡೆಯಿತು ಬ್ರಹ್ಮಾಂಡ ಖರ್ಪರ |

ಸುಜ್ಞಾನಿ ಬ್ರಹ್ಮ ಆ ಜಲದಿ ಮಾಡಿದ ಪಾದಪೂಜೆಯ ||

ಆಗ ವಿಷ್ಟುಪದಿ ಎನಿಸಿ ಪವಿತ್ರಳಾಗಿ ಕೆಳಗೆ ಹರಿದಳು |

ನುಗ್ಗಿ ಬಂದ ರಭಸ ತಡೆದು ಶಿವ ಜಟೆಯಲಿ ಬಂಧಿಸಿದ ||

ಭಗೀರಥ ಮಾಡಿದ ಘೋರ ತಪಕೆ ಮೆಚ್ಚಿ ಕೆಳಗೆ ಕಳುಹಿದ |

ಸಂಗ ತೊರೆಯಲು ಮನವಿಲ್ಲದೆ ದೇವಲೋಕ ಬಿಟ್ಟು ಇಳಿದಳು |

ಸಾಗಿ ಬಂದು ಜಹ್ನುಋಷಿ ಆಶ್ರಮವ ತೇಲಿಸಿದಳು |

ಗಂಗೆಯನು ತೀರ್ಥವೆಂದು ಆಪೋಶನದಿ ಸಕಲ ಸ್ವೀಕರಿಸಿದ ||

ಸುಜ್ಞಾನಿಗಳು ಪಾವನವಾದುದ್ದು ಎಂದು ಬಿಟ್ಟಗಲರು ||

ವಿಜ್ಞಾಪಿಸಲು ಭಗೀರಥ ಕಿವಿಯಿಂದ ಹೊರಹೊರಟಳು ಜಾಹ್ನವಿ |

ಮಂಗಳೆ ಕೆಳಗೆ ಹರಿದು ಭುವಿ ಪಾತಾಳದಿ ಲೋಕ ಪಾವನಗೊಳಿಸಿ ||

ಸಗರ ಕುಲ ಬಾಂಧವರನ್ನೆಲ್ಲಾ ಉದ್ಧರಿಸಿದ ಸುಚರಿತನ ಗಾಥಾ |

ಗಗನದ ಸುರನದಿ ಭೂಮಿಲಿ ಪಾಪ ಕಳೆವ ಗಂಗೆ ||

ಜಗದೋದ್ಧಾರಕ ಶ್ರಿಕೃಷ್ಣವಿಠ್ಠಲನ ಪ್ರೇಮ ಕುವರಿಯಾದಳು ||

401. ಪುಟ್ಟದ ದೇಶವಿಲ್ಲ ಧರಿಸದ ದೇಹವಿಲ್ಲ |

ಮುಟ್ಟದ ಗ್ರಾಸವಿಲ್ಲ ತಿರುಗದ ಸ್ಥಳವಿಲ್ಲ ||

ಬಟ್ಟ ಬಯಲಲ್ಲೂ ನೀನೇಜೊತೆ |

ಹುಟ್ಟಿದ ಸ್ಥಿತಿಯಲ್ಲೂ ನೀನೇಜೊತೆ ||

ಹುಟ್ಟಿದ ಮೇಲೆ ಹೊಟ್ಟೆ ಚಿಂತೆ |

ಹೊಟ್ಟೆಗಾಗಿ ಮಾಡದ ಕೆಲಸವಿಲ್ಲ ||

ಕಟ್ಟದೆ ಬುತ್ತಿ ತಿಂದುಂಡು ತೇಗಿದೆ |

ಜಟ್ಟಿ ನಾನೆಂದು ಎಂಟರಿಂದ ಬೀಗಿದೆ ||

ಕಟ್ಟಕಡೆಗೆ ನಿನ್ನ ಪಾದವೇ ಗತಿಯೆಂದೆ |

ಸತ್ಯದಾಣೆಗೂ ಮುಂದೆ ಎಲ್ಲಿ ಹೇಗೆಂದರಿಯೆ ||

ಖಟ್ವಾಂಗನಂದದಿ ನಿನ್ನ ಸೇರಲರಿಯೆ |

ಕಟ್ಟಿ ಎಳೆದೊಯ್ವಾಗ ನಿನ್ನ ಸ್ಮರಣೆ ಸಾಕು ||

ಇಷ್ಟುಮಾತ್ರ ಪಾಲಿಸು ಶ್ರೀಕೃಷ್ಣವಿಠ್ಠಲನೇ ||

402. ಯಾರು ಬಂದಾರಮ್ಮಾ ನಮ್ಮ ಮನೆಗಿಂದು |

ಪೋರ ಗೋಪಲಕೃಷ್ಣ ಬಂದಾನಮ್ಮ ||ಪ||

ಸುಳಿಸುಳಿದಾಡುತಾ ನಲಿನಲಿಡಾಡುತಾ |

ಮೆಲ್ಲ ಮೆಲ್ಲನೆ ಬಂದು ಸುತ್ತಲೂ ನೋಡುತಾ ||

ನೆಲುವಿನಲ್ಲಿದ್ದ ಹಾಲು ಮೊಸರನೆ ಮೆದ್ದ |

ಕಳ್ಳನ ಹಿಡಿಯಲು ಓಡಿ ಓಡಿ ದಣಿದೇವಮ್ಮಾ ||1||

ಕೋಲು ತರಲು ತನಗೇನೂ ಗೊತ್ತಿಲ್ಲಮ್ಮಾ ಸೊಲ್ಲ |

ಸುಳ್ಳು ಹೇಳುತ್ತಾ ಕನ್ಣೀರ ತುಂಬಿದ ಅಮಾಯಕ ||

ಗಲ್ಲ ಉಬ್ಬಿಸಿ, ತುಟಿ ಕಚ್ಚಿ ಕೆಂಪುಮೋರೆ ಮಾಡಿದ |

ಚೆಲ್ವ ಶ್ರೀಕೃಕಷ್ಣವಿಠ್ಠಲನೇ ಸಕಲ ಚಿತ್ತ ಚೋರನಮ್ಮಾ ||2||

403. ಅನೇಕಾನೇಕ ರೂಪಿ ಪರಮಾತ್ಮನಿಗೆ ನಮ: |

ಅನೇಕಾನೇಕ ಶಿರ, ನೇತ್ರ, ಪಾದ, ಬಾಹುವಿಗೆ ನಮ: ||

ಅನೇಕಾನೇಕ ಹೆಸರಿನ ಪುರುಷ ಶಾಶ್ವತನೇ ನಮ: |

ಅನೇಕನೇಕ ಕೋಟಿ ಯುಗಗಳಲ್ಲವ ತರಿಸುವ ಶ್ರೀಕೃಷ್ಣವಿಠ್ಠಲನೇ ನಮೋನಮ: ||

404. ಒಂದರಸುಖ (ಸ್ವರೂಪ) ಸವಿಯಲು ಎರಡನು ತಿಳಿ | (ಪ್ರವೃತ್ತಿ & ನಿವೃತ್ತಿ)

ಮುದದಿ ಮುರನು (ಜ್ಞಾನಭಕ್ತಿ, ವೈರಾಗ್ಯ), ಪಡೆಯಲು ನಾಲ್ಕುರೀತಿ ಪಾಲಿಸಿ ||(ಧರ್ಮದಿ)

ಐದನ್ನು (ಪಂಚೇಂದ್ರಿಯ) ತುಳಿದು ಆರನ್ನು ತ್ಯಜಿಸಿ | (ಕಾಮಾದಿ)

ಒದ್ದು ಏಳನ್ನು (ಸಪ್ತದೋಷ), ಎಂಟನ್ನು ಪರಿತ್ಯಾಗಿಸಿ || (ಅಷ್ಟಮದ)

ಒಂದೇ ಮನದಿ ಒಂಬತ್ತರಿಂದ (ನವವಿಧಭಕ್ತಿ), ಹತ್ತಾಗುವುದೇ | (ಪೂರ್ಣಜ್ಞಾನಿ)

ಬದುಕಿನ ಗುರಿ ಶ್ರೀಕೃಷ್ಣವಿಠ್ಠಲನ ಸೇರುವ ಸುಲಭದಾರಿ ||

405 ದಾರಿಯ ತೋರೋ ಮುಕುಂದ ಎನಗೆ ಬೇರ್ಯಾರು ತೋರುವರಿಲ್ಲ |

ಉದ್ಧವಗೆ ಉಪದೇಶಿಸಿದೆ ತತ್ವವ ||

ಯುದ್ಧ ಬೇಡೆಂದರ್ಜುನಗೆ ಬೋಧಿಸಿದೆ ಧರ್ಮವ |

ಭೀಷ್ಮರಿಗೆ ತೋರಿ ನಿಜರೂಪ ಮುಕ್ತಿಯಿತ್ತೆ ||

ಕಷ್ಟದಿ ದ್ರೌಪದಿಯ ಮಾನವ ಕಾಯ್ದೆ |

ಸಕಲರ ಇಷ್ಟಾನಿಷ್ಟ ಬಲ್ಲ ಸರ್ವಜ್ಞನೇ ||

ಶ್ರೀಕೃಷ್ಣವಿಠ್ಠಲ ಎನಗೆ ದಾರಿ ತೋರದಿರೆ ಆಣೆ ನಿನಗೆ ||

406. ಎನಗೆ ಎಳೆತ ಸಕಲ ಕಡೆಗಳಿಂದಲು ಎಳೆತ |

ನಿನಗೆ ತಿಳಿಯದೇ ನಾ ಹೇಗೆ ಧ್ಯಾನಿಸಲಿ ನಿನ್ನ ||ಪ||

ನಿನ್ನ ಬಿಟ್ಟು ಅನ್ಯದರಲ್ಲಿ ಸದಾ ಸೆಳೆತ |

ಮನ ಮತ್ತು ಶರೀರ, ಸತಿ ಆತ್ಮಜರಲಿ ||

ಮನೆ ಮತ್ತು ಆಪತ್ತು ಸಮಾಜ ರಾಷ್ಟ್ರದಲಿ |

ಧನ ಮತ್ತು ಕನಕ ಸೇವಕ ಆತ್ಮೀಯರಲಿ ||1||

ತ್ರೀಗುಣದಲಿ ಸಿಲುಕಿ ಸುತ್ತುತಿರುವೆ ಸದಾ |

ಸಂಗರಹಿತಳಾಗಲು ಆಗದೆ ಒದ್ದಾಡುತಿರುವೆ ||

ಸುಜ್ಞಾನ ಪಡೆಯದೆ ಜನುಮ ವ್ಯರ್ಥವಾಗುತಿದೆ |

ಸುಗುಣಾಂತರಂಗ ಶ್ರೀಕೃಷ್ಣವಿಠ್ಠಲ ಎನ್ನ ಪಾರುಮಾಡು ||2||

407. ಸರಿಯುವುದು ಸಮಯ ಅರಿವಿಲ್ಲದೆ |

ಮರೆಯದೆ ಮುನ್ನ ಮಾಡು ಹರಿಸೇವೆ ||

ಸದಾ ಶ್ರವಣ ನಿರುತನಾಗು ಹರಿಕಥೆಯಲಿ |

ಸದಾ ಕೀರ್ತಿಸು ಚಿತ್ತದಿ ಹರಿಮಹಾತ್ಮೆಯಾ ||

ಸದಾ ಧ್ಯಾನಿಸು ಅಂತ್ಯವಿಲ್ಲದ ಹರಿ ಗುಣಗಳ |

ಸದಾ ದೃಷ್ಟಿಸು ಒಲುಮೆಯಿಂ ಹರಿ ಸರ್ವತ್ರದಿ ||

ಸದಾ ಮಾಡಿದ ಕೆಲಸವ ಹರಿಗರ್ಪಿಸು |

ಸದಾ ಓಡಾಡುವುದು ಹರಿ ತೀರ್ಥಯಾತ್ರೆ ||

ಸದಾ ಅಘ್ರಾಣಿಸು ಭಕ್ತಿಯಿಂ ಹರಿ ನಿರ್ಮಾಲ್ಯವ |

ಸದಾ ಸೇವಿಸು ಪ್ರೀತಿಯಿಂ ಹರಿ ಪ್ರಸಾದವ ||

ಸದಾ ಸತ್ಕರ್ಮಾಚರಣೆಯೇ ಉಸಿರಾಗಲಿ |

ಸದಾ ನಡೆಯುವುದೆಲ್ಲಾ ಹರಿ ಪ್ರೇರಣೆಯೆನ್ನು ||

ಸಚ್ಚಿದಾನಂದಾತ್ಮ ಶ್ರೀಕೃಷ್ಣವಿಠ್ಠಲನೊಲಿವ ||

408. ಅಂತರಂಗದಿ ಪೊಳೆವ ಚಿನ್ಮಯ ವಚನಾತೀತ |

ಅತೀ ಶಕ್ತ ಸುಜೀವಿಗಳ ವೈಕುಂಠದಲ್ಲಿಡುವ ||

ಚೇತನ ಪರಮಾಧೀನ ಎನ್ನ ಕರ, ಚರಣ, ಪ್ರಾಣ |

ಆತ್ಮಸ್ಥ ಪುರುಷ ಶ್ರೀಕೃಷ್ಣವಿಠ್ಠಲ ನಿನಗೆ ನಮೋನಮ: ||

409 ಮುಂಜಾವಿನಲಿ ನಾರಾಯಣ ನಾರಾಯಣ ಎಂದೆನ್ನುತ್ತಾ ||ಪ||

ಎದ್ದು ತುಳಸೀಲಿ ಕೃಷ್ಣನ ವಂದಿಸಿ ||

ಶೌಚದಲಿ ಕೇಶವನ ನೆನೆಸಿ ಮೃತ್ತಿಕಾಶೌಚದಲಿ ತ್ರಿವಿಕ್ರಮನ ||1||

ದಂತಧಾವನ ಕಾಲದಲಿ ಆಷ್ಟಬಾಹುಗಳ ಹರಿಯ ನೆನಿಸಿ |

ವದನ ತೊಳೆವಾಗ ಮನಸಾ ಮಾಧವನ ಸ್ಮರಿಸಿರಿ ||2||

ಸ್ತನ್ಯ ಪಾನ ಮಾಡಿಸುವಾಗ ಬಾಲಕೃಷ್ಣನ ಸ್ಮರಿಸಿ |

ಮಕ್ಕಳಾಡಿಸುವಾಗ ಅಕ್ಕರದಿ ಯಶೋದೆ ನಂದನ ನೆನೆಸಿರಿ ||3||

ಮೃತ್ತಿಕಾ ಸ್ನಾನದಿ ವರಾಹ ಸ್ವಾಮಿ ಸ್ಮರಿಸಿ |

ವಸ್ತ್ರ ಧರಿಸುವಾಗ ಉಪೇಂದ್ರನ ನೆನೆಯಿರಿ ||4||

ತುಲಸಿ ತೆಗೆವಾಗ ದಾಶರಥ ನಂದನ ಸ್ಮರಿಸಿ |

ಹೂ ಬಿಡಿಸುವಾಗ ಯದುಕುಲ ಚಂದ್ರನ ನೆನೆಯಿರಿ ||5||

ಶುದ್ಧ ವಸ್ತ್ರದಿ ವಾಸುದೇವನ ಸದಾ ಸ್ಮರಿಸಿ |

ಕೇಶವನ ಊರ್ಧ್ವ ಪುಂಡ್ರಧಾರಣೆ ಕಾಲದಿ ಸ್ಮರಿಸಿ ||6||

ಮುದ್ರಾಧಾರಣ ಕಾಲದಿ ಕೃದ್ಧೋಲ್ಕರ ನೆನೆದು |

ಆಪೋಶನ ಸಮಯದಿ ಶ್ರೀಹರಿಯ ನೆನೆಯಿರಿ ||7||

ಉಪವಿತ ಧರಿಸುವಾಗ ವಾಮನನ ಸ್ಮರಿಸಿ |

ಪಾದಯಾತ್ರೆಯಲಿ ಜಾಮದಗ್ನಿ ನೆನೆಯಿರೋ ||8|||

ಮಂಗಳಾರತಿ ಸ್ವೀಕರಿಸುವಾಗ ಭಾರ್ಗವನ ನೆನೆಸಿ |

ತೀರ್ಥಪ್ರಾಶನ ಕಾಲದಿ ರಾಮಾ,ಕೃಷ್ಣಾ, ವಾಸುದೇವ ಎನ್ನಿರಿ ||9||

ಶಂಖೋದಕ ಪ್ರೋಕ್ಷಣೆಯಲಿ ಮುಕುಂದನ ಸ್ಮರಿಸಿ |

ಭೋಜನ ಕಾಲದಿ ಭಕ್ಷ್ಯದಲ್ಲಿ ಅಚ್ಯುತನ ನೆನೆಯಿರಿ ||10||

ಶಾಕದಲಿ ಧನ್ವಂತರಿಯ ಮರೆಯದೇ ಸ್ಮರಿಸಿ |

ಪರಮಾನ್ನದಿ ಪಾಂಡುರಂಗನ ನೆನೆಸಿರಿ ||11||

ಬೆಣ್ಣೆಯಲಿ ಕೃಷ್ಣನ ತುಪ್ಪದಲಿ ದಾಮೋದರನ ಸ್ಮರಿಸಿ |

ಎಣ್ಣೆಭಕ್ಷ್ಯದಲಿ ವಿಷ್ಣು ಮತ್ತು ಮೊಸರಲಿ ವಾಮನನ ಸ್ಮರಿಸಿರಿ ||12||

ಕ್ಷೀರಪಾನದಿ ಶ್ರೀನಿವಾಸನ ನೆನಸಿ ಫಲ ಭಕ್ಷಿಸಿ |

ಜಲಪಾನೇ ಬಾಲಕೃಷ್ಣಂ ಮಧುಪಾನೇ ತ್ರಿವಿಕ್ರಮನ ನೆನೆಸಿ ||13||

ಪಾನಕದಿ ನಾರಸಿಂಹನ ಮಾರ್ಗಮಧ್ಯೆ ಗರುಡಾರೂಢ ಶ್ರೀಹರಿಯ |

ಪ್ರೀತಿಯಿಂ ಚುಂಬಿಸುವಾಗ ವೇಣುನಾದ ಪ್ರಿಯನ ನೆನೆಸಿರಿ ||14||

ಹೆಂಡತಿಯೊಡನೆ ಸರಸದಿ ಗೋಪಿವಲ್ಲಭನ ನೆನೆಸಿ |

ಶಯನದಿ ಸಂಕರ್ಷಣ ತಾಂಬೂಲದಿ ಅನಿರುದ್ಧನ ಸ್ಮರಿಸಿರಿ ||15|||

ದಕ್ಷಿಣೆ ಕೊಡುವಾಗ ದಕ್ಷಿಣಾಪತಿ ಹರಿಯ ನೆನೆದು |

ಪ್ರದಕ್ಷಿಣೆ ಕಾಲದಿ ಗರುಡಾತ್ಮ ನಾರಾಯಣ ಎನ್ನಿರಿ ||16||

ಅಂಜಿಕೆಯಲಿ ನರಸಿಂಹನ ನೆನೆದರೆ ಅಭಯಪ್ರಾಪ್ತಿ |

ಫಲಹಾರ ಕಾಲದಿ ವಾಸುದೇವನ ನೆನೆದರೆ ಉದರಪೂರ್ತಿ ||17||

ಪಂಚಪ್ರಾಣಾಹುತಿಯಲಿ ಅನಿರುದ್ಧಾದಿ ರೂಪ ನೆನೆದು |

ಸಂಧ್ಯಾಕಾಲದಲಿ ಶ್ರೀರಾಮ ಜಪದಲಿ ದತ್ತ ನಾಮಕನ ನೆನೆಯಿರಿ ||18||

ಪ್ರೀತಿಯಿಂದ ದೊರಕಿದ್ದಾಗ ಶ್ರೀರಾಮಚಂದ್ರನ ದಯದಿ ಎನ್ನಿ |

ದ್ವೇಷದಿಂದ ಆಗಿದ್ದೆಲ್ಲ ಪರಶುರಾಮನ ದಯದಿ ಎನ್ನಿರಿ ||19||

ವಿಜ್ಞಾನ ಸುಜ್ಞಾನ ಪ್ರಾಪ್ತಿಗಾಗಿ ಹಯಗ್ರೀವನ ಸ್ಮರಣೆ |

ಸರ್ವ ಪದಾರ್ಥದಿ ರಮಾಪತಿಯ ನೆನೆಸಿರಿ ||20||

ಸಕಲ ಕಾರ್ಯವೂ ಶ್ರೀಹರಿ ಚಿತ್ತಕ್ಕೆ ಬಂದಂತೆ ಸೈ |

ಎಂದುದಾಸಿನದಿ ಜಗನ್ನಾಥನ ಸ್ಮರಿಸಿರಿ ||21||

ಆಯಾ ವಸ್ತುಗಳಲ್ಲಿ ತನ್ನಾಮ ಹರಿಯು ರೂಪಗಳ ನೆನೆಸಿ |

ಸ್ಮರಿಸಿ ಈ ಬಗೆಯ ಸದಾ ಚಿಂತಿಸುವಗೆ ವಿಷ್ಣಲೋಕ ಪ್ರಾಪ್ತಿ ನಿ:ಸಂಶಯ ||22||

ಕಾಲಕಾಲಕ್ಕೆ ಈಶ ನೀನು ದಾಸ ನಾನೆಂದು ನೆನೆಸಿ |

ಸರ್ವಕಾರ್ಯವನ್ನು ಶ್ರೀಕೃಷ್ಣವಿಠ್ಠಲಗರ್ಪಿಸಿ ನಿಶ್ಚಿಂತರಾಗಿರಿ ||24||

ಸರ್ವತ್ರ ಸರ್ವದಾ ಸರ್ವದರಲ್ಲಿ ಸರ್ವೇಶನ ನೆನೆಸಿ |

ಸರ್ವಜ್ಞನು ಯೋಗ್ಯತಾನುಸಾರ ಫಲಗಳಿತ್ತು ಕಾಯ್ವ ಕರುಣಾಕರ ಶ್ರೀಕೃಷ್ಣವಿಠ್ಠಲ ||24||

410. ನಿತ್ಯಸ್ಮರಿಸಿ ಎಡೆಬಿಡದೆ ಸಕಲ ಕಾರ್ಯದಿ ಸರ್ವತ್ರ |

ಸತ್ಯಸ್ಯ ಸತ್ಯ ದೋಷದೂರನ ನಿಶ್ಚಲಮನದಿ ||

ಬ್ರಾಹ್ಮೀಕಾಲದಲೆದ್ದು ನಾರಾಯಣನ ಸ್ಮರಿಸಿ ಕೃಷ್ಣಪ್ರಿಯೆ ತುಲಸಿಗೆ ನಮಿಸಿ |

ಶೌಚಕಾಲದಿ ಕೇಶವನೆನ್ನಿ ಮೃತ್ತಿಕಾ ಶೌಚದಿ ತ್ರಿವಿಕ್ರಮನ ||

ದಂತಧಾನವದಿ ಚತುರ್ಭುಜ ಶ್ರೀ ಹರಿ ನೆನೆದು |

ಮುಖಪ್ರಕ್ಷಾಲನದಿ ಮಾಧವನ ಮನದಣಿಯ ನೆನೆಯಿರಿ ||

ಮೊಸರಿನಲಿ ವಾಮನರೂಪ ತುಪ್ಪದಿ ಕೃಷ್ಣನ ಸ್ಮರಿಸಿ |

ಮೃತ್ತಿಕೆ ಸ್ನಾನ ಕಾಲಕೆ ವರಾಹನ ವಸ್ತ್ರ ಧಾರಣೆಯಲಿ ಉಪೇಂದ್ರನ ||

ಮಡಿ ವಸ್ತ್ರದಿ ವಾಸುದೇವನ ಸದಾ ಸ್ಮರಿಸಿ |

ಪುಂಡ್ರ ಧಾರಣೆ ಕಾಲಕೆ ಕೃದ್ಧೋಲ್ಕಾದಿ ಹರಿ ನೆನೆಯಿರಿ ||

ರಾಮಕೃಷ್ಣ ವಾಸುದೇವ ತೀರ್ಥಪಾನ ಸಮಯದಿ |

ಸಮದರ್ಶಿ ಮುಕುಂದನ ಶಂಖೋದಕ ಗ್ರಹಣ ಕಾಲದಿ ಸ್ಮರಿಸಿ ||

ಭೋಜನಾದಿ ಭಕ್ಷ್ಯದಿ ಅಚ್ಯುತನೆನ್ನಿ ತುತ್ತಿಗೊಮ್ಮೆ ಗೋವಿಂದನ ಬಿಡದೆ ಸ್ಮರಿಸಿ |

ಗೋಜುಬೀಳದಿರಲು ಶಾಕದಿ ಧನ್ವಂತರಿ ನಾಮ ಸತತ ನೆನೆಸಿ ||

ಸತ್ಕಥಾ ಕಾಲದಿ ವ್ಯಾಸ, ಕೃಷ್ಣ ಹಯಗ್ರೀವನ ಸ್ಮರಿಸಿ |

ಪತ್ರಛೇದನ ಕಾಲದಿ ಶೇಷಶಾಯಿ ನಾರಾಯಣ ಎನ್ನಿ ||

ಗರಿಕೆ ಕೀಳುತ ಮನದಿ ಕಪಿಲ ಸ್ಮರಿಸೆ ಉತ್ತಮ |

ನಾರಾಯಣನ ದ್ವಿಜರಲಿ ಕ್ಷತ್ರಿಯರಲಿ ಅನಿರುದ್ಧನ ಕಾಣಿರೋ ||

ಗೋವಿನಲಿ ವಿಷ್ಣುರೂಪ ವೈಶ್ಯರಲಿ ಪ್ರದ್ಯುಮ್ನರೂಪ |

ಸೇವಕರಲಿ ಮಹಿದಾಸ ಶೂದ್ರರಲಿ ಸಂಕರ್ಷಣ ನೆನೆಯಿರೋ ||

ಅಲ್ಪಜಾತಿ ಪ್ರಾಣಿ ಪಕ್ಷಿಗಳಲಿ ತ್ರಿವಿಕ್ರಮನ ಸ್ಮರಿಸಿ |

ಕಾಲಕಳೆಯದೆ ಸರ್ವತ್ರ ಗೋವಿಂದನ ಕಾಣಿರೋ ||

ಗ್ರಹಣಕಾಲದಿ ಪರಶುರಾಮನ ಕ್ಷತ್ರಿಯರಲ್ಲಿ ಜನಾರ್ದನ: |

ಆಹಾರ ಸೇವನೆ ಆದಿ ಅಂತ್ಯದಿ ಆಪೋಶನ ಕಾಲದಿ ಹರಿಯನೆನೆಯಿರೋ ||

ಸರ್ವಜ್ಞ ಹರಿಯ ಸ್ಮರಿಸಿ ಸಕಲ ಸಮಯದಿ |

ಅರಿತು ಕೇಶವ ಗೋವಿಂದನೆನ್ನಿ ಪ್ರಭಾತದಿ ||

ಮಧ್ಯಾಹ್ನಾಧಿಪತಿ ವಿಷ್ಣುಂ ಅಪರಾಹ್ನದಿ ಮಧುಸೂದನ |

ಸಾಯಂಕಾಲೇ ನೃಸಿಂಹಂ ಪ್ರದೋಶ ಕಾಲದಿ ಹೃಷಿಕೇಶನ ನೆನೆಸಿ ||

ಆದಿಮೂಲ ಅನಂತರೂಪೀ ಪರಮಾತ್ಮನ ನಾಮಗಳ ಪಠಿಸಿ ಸದಾ |

ಹೃತ್ಕಮಲವಾಸಿ ಶ್ರೀಕೃಷ್ಣವಿಠ್ಠಲ ಸ್ಮರಿಸಿ ಪಡೆಯಿರಿ ಸಕಲ ಫಲವ ||

ಸರ್ವಕಾಲದಿ ವಾಸುದೇವನ ಸದಾ ನೆನೆಯಲು |

ಸರ್ವತ್ರ ವ್ಯಾಪ್ತ ಸದಾನಂದ ಶ್ರೀಕೃಷ್ಣವಿಠ್ಠಲ ಪಂಚವಿಧ ಮುಕ್ತಿನೀವ ||

...

411. ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲಾ ||ಪ||

ಮನ್ನಿಸಿ ಸಕಲ ತಪ್ಪುಗಳ ಬಿಡದೆ ಕಾಯೋ ಶ್ರೀಕೃಷ್ಣವಿಠ್ಠಲಾ ||ಅಪ||

ಚಂದನ ಚರ್ಚಿತ ಸುಂದರವದನ |

ಮಂದಸ್ಮಿತ ನಿಮಿಲನೇತ್ರ ಮುಕುಟಧರನೇ ||

ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲಾ ||1||

ನಡುವಿಗೊಡ್ಯಾಣ ಮಕರಕುಂಡಲ ಧಾರಿನ್ |

ಕಡಗ ಕಂಕಣ ನೂಪುರ ಘಿಲ್ಲೆನ್ನುವ ವರಾಭಯಪ್ರದ ||

ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲ ||2||

ಬ್ರಹ್ಮಾಂಡ ಪಿಂಡಾಡ ಸರ್ವವ್ಯಾಪ್ತಾ ಸರ್ವೇಶ |

ಅಮರ ಸುರಗಣ ಸರ್ವವಂದ್ಯ ಸುಪೂಜಿತ ||

ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲ ||3||

ಲೋಕೈಕನಾಥ ಸಮಸ್ತ ದೋಷದೂರ |

ಲಕ್ಷ್ಮೀಪತಿ ಶೇಷಶಾಯಿನ ಯೋಗೇಶ್ವರ ||

ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲ ||4||

ಜಗತ್ ಪರಿಪಾಲಕ ಸತ್ಯಸ್ಯ ಸತ್ಯ |

ಸ್ವಗತ ಭೇದವಿವರ್ಜಿತ ಸ್ವತಂತ್ರರೂಪಿ ||

ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲ ||5||

ದೇಶ ಕಾಲ ಗುಣತ: ಸರ್ವಸಾಕ್ಷಿ ಏಕೈಕ |

ನಾಶರಹಿತ ಸರ್ವಶಕ್ತ ಅನಂತ ಗುಣಿ ||

ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲ ||6||

ಆನಂದ ವಿಮಲ ಜ್ಞಾನ ಸಾಗರ |

ಚಿನ್ಮಯರೂಪ ಸಂಸಾರ ಭವತಾಕರ ||

ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲ ||7||

ಸ್ಮರಣಾತ್ ಸದಾ ವಂದ್ಯ ಪಾವನರೂಪ |

ಸ್ಫುರೇತ್ ಹೃದ್ಗುಹೇ ನಿಜ ಬಿಂಬರೂಪ ||

ಎನ್ನನುದ್ಧರಿಸೋ ಸ್ವಾಮಿ ಶ್ರೀಕೃಷ್ಣವಿಠ್ಠಲ ||8||

ಶ್ರೀ ಕೃಷ್ಣವಿಠ್ಠಲಪದಗುಚ್ಛ 3 ಅನುಕ್ರಮಣಿಕಾ

412. ಗೌರಿಸುತಗೆ ನಮಿಸಿ ಶೇಷಶಾಯಿಯ ಅನುಗ್ರಹದಿಂ |

ಪರಮ ದಾನವಾವುದೆಂದು ಅರಿತು ಧನ್ಯಳಾಗ ಬಯಸುವೆ ||ಪ||

ಸುತನ ಯಮಗೆ ದಾನ ಮಾಡಿದ ನಚೀಕೇತನ ಪಿತ ಧನ್ಯನೋ |

ಪತಿಯನ್ನೇ ನಾರದಗೆ ದಾನಮಾಡಿದ ಪತ್ನಿ ಸತ್ಯ ಭಾಮೆ ಧನ್ಯಳೋ ||

ಕತ್ತರಿಸಿ ಮಾಂಸವ ಅಳುಕದೆ ದಾನವನಿತ್ತ ಶಿಬಿಯೆ ಧನ್ಯನೋ |

ಎತ್ತರದಿ ಬೆಳೆದ ತ್ರಿವಿಕ್ರಮಗೆ ಭೂದಾನ ಮಾಡಿದ ಬಲಿಯೇ ಧನ್ಯನೋ ||

ದಾನದೊಳು ಪರಂದಾನ ಯಾವುದೆಂದು ಹೇಗೆ ತಿಳಿಯಲಿ ? ||1||

ಷಡ್ರಾಸನ್ನ ದಾನ ಮಾಡಿದ ವಿಪ್ರ ಪತ್ನಿಯರೇ ಧನ್ಯರೋ |

ಬಿಡಿಸಿ ಕನ್ಯಾ ಸೆರೆಯ ರಾಮಗೆ ದಾನವಿತ್ತ ಜನಕ ಧನ್ಯನೋ ||

ಒಡಕು ಕಾಸು ಇಟ್ಟುಕೊಳ್ಳದೇ ಸಕಲ ದಾನವಿತ್ತ ಪುರಂದರನೇ ಧನ್ಯನೋ |

ಒಡನೆ ಜೀವ ತ್ಯಾಗಿಸಿ ತನ್ನೆಲುಬ ದಾನವಿತ್ತ ದಧೀಚಿ ಧನ್ಯನೋ ||

ದಾನದೊಳು ಪರಂ ದಾನ ಯಾವುದೆಂದು ಹೇಗೆ ತಿಳಿಯಲಿ ? ||2||

ಮಮಕಾರ ರೂಪದ ದೇಹನನ್ನದಲ್ಲ ದೇಹದೊಳಿರುವ ಆತ್ಮ ನಾನಲ್ಲ |

ಕರ್ಮವೂ ನಾ ಮಾಡಿದ್ದಲ್ಲ ಮಾನಾಭಿಮಾನ ಸಕಲ ಗುಣವೂ ನನ್ನದಲ್ಲ ||

ಭೂಮಿ ಕಾಣಿ, ಧನ-ಕನಕ, ಜ್ಞಾನ-ವಿದ್ಯೆ, ಅನ್ನ-ನೀರು, ಸೂರು |

ಸಮಸ್ತನಾಥ ಶ್ರೀಕೃಷ್ಣವಿಠ್ಠಲ ಸಕಲವೂ ನಿನ್ನದಿರುವಾಗ ನಾನೆಂತು ದಾನಿಸಲಿ ||

ದಾನದೊಳು ಪರಂದಾನ ಯಾವುದೆಂದು ಹೇಗೆ ತಿಳಿಯಲಿ ? ||3||

413. ಯಾವುದಾದರೊಂದು ಮಾಡೆನಗೆ ದೇವಾ |

ಭಾವುಕಳಾದೆನ್ನ ಒದೆ, ತರಿ, ಸುಡು, ಕೊಲ್ಲು ||

ಯಾವುದಾದರೂ ಕಾವುದೆನ್ನೆಂಬ ನಂಬಿಕೆ ಎನಗಿದೆ ಸ್ವಾಮಿ ||ಪ||

ಒದೆದು ಶಿಲೆಯ ಮಾಡಿದೆ ಬಾಲೆಯುದ್ಧಾರ ||

ಒದೆದೆನ್ನ ಬದುಕು ಉದ್ಧರಿಸೋ ||1||

ತರಿದು ಶಿರವ ಶಿಶುಪಾಲಗಿತ್ತೆ ಮುಕ್ತಿಯ |

ತರಿದೆನ್ನ ಭವದ ಪಾಶ ಸಂಸಾರ ತಾರಿಸೋ ||2||

ಕಡೆಗೆಣ್ಣಿನ ನೋಟದಿ ಅಗಳು ಸೃಷ್ಟಿಸಿ ದ್ರೌಪದಿಯ ಮಾನ ಕಾಯ್ದೆ |

ಕಿಡಿಗಣ್ಣಿನಿಂದೆನ್ನ ಸಕಲ ಪ್ರಾರಬ್ಧ ಪಾಪ ಸುಟ್ಟು ಹಾಕೋ ||3||

ಕೊಂದು ಮಾವನ ದೇವಕಿಯ ಸೆರೆಯ ಬಿಡಿಸಿದೆ |

ಕ್ರೊಧವನಳಿಸಿ ಮದ ಮತ್ಸರ ಕೊಂದೆನ್ನ ಕಾಯೋ ||4||

ಕಾಮಿತಾರ್ಥ ಪ್ರದಾಯಕ ಶ್ರೀಕೃಷ್ಣವಿಠ್ಠಲ ನೀನೆನ್ನವನಾಗದಿದ್ದರೂ ಸರಿ |

ಒಮ್ಮೆಯಾದರೂ ಎನ್ನ ನಿನ್ನವನಾಗಿಸಿಕೋ ಸಾಕು-ಸ್ವಾಮಿ ||5||

414. ಬೇಡಿದ ಕಾಮಿತಾರ್ಥಗಳೀವ ರಮಾಪತಿ | ಮೋಕ್ಷಾದಿ ಪರುಷಾರ್ಥಗಳನಿತ್ತು ತಾ ||

ಕಾಡದೆ ತನ್ನ ತ್ರಿಧಾಮದೊಳಗಿಟ್ಟು | ಅನುದಿನ ಆನಂದ ಪಡಿಸುವನು ||

ಶ್ವೇತದ್ವೀಪ ಎಂದರೆ ಇಂದ್ರಿಯ ನಿಗ್ರಹದಿಂ | ಮನದಿ ಉತ್ತಮಶ್ಲೋಕನ ಧರಿಸೆ ||

ಕುಂಠಿತವಾಗದ ಭಕ್ತಿ ಇರಲು ಮನುಜುಗೆ | ವೈಕುಂಠ ಪದವಿ ಪ್ರಾಪ್ಯುತ ಬಡಿಸುವ ||2||

ಮಾನವಿತ್ತು ವಾಸುದೇವನ ಪಡೆಯಲು ಶಾಶ್ವತ | ಯತ್ನದಿ ಅನುಸರಿಸಲೀ ಬೇಕು ತಂತ್ರವ ||

ಸಾನಿಧ್ಯ ತಾ ನೀಡುವ ಅನಂತಾಸ ನದಿ | ಉಚ್ಚಸ್ತರಕ್ಕೇರಿಸಿ ಮೊಕ್ಷವನೀವ ||3||

ಒಡೆಯನ ಗುಣಗಳ ವ್ಯಾಪಕವರಿತಂತೆ | ಸತ್ಯದಿ ತೋರುವುದು ಲೌಕಿಕಾಲೌಕಿಕ ಸುಖ ||

ನಿತ್ಯದಿ ಮುಕ್ತಾನಂದ ಅನುಭವನೀವ | ಅನಾದಿ ಶ್ರೀಕೃಷ್ಣವಿಠ್ಠಲನ ಪಾದ ನಂಬಲು ||4||

415. ಹರಿಯ ಪೊಗಳಿ ಪಾಡಿ ಆನಂದಿಸಿ ಸದಾ |

ವಿರಮಿಸದಂತೆ ಅನುಗಾಲವೂ ಸೇವಿಸಿರಿ ||ಪ||

ಸಾವಿರ ಮುಖದ ಶೇಷ ಇಂದ್ರರಿಗಸಾಧ್ಯದ |

ಸಾವು ಹುಟ್ಟಿಲ್ಲದ ಮುಕ್ತರರಿಗಾಗದ ||

ನವವಿಧ ಭಕುತಿಯಿಂ ದೊಲಿಸಿ ಭಜಿಸಿರಿ |

ಅವನಿಪತಿಯ ತಡೆ ಇಲ್ಲದೆ ಸ್ಮರಿಸಿರಿ ||

ಸಂತತ ಸ್ಮರಣೆಯಿಂದೆಮಗೆ ಬಹುಲಾಭ |

ಅಂತ್ಯಾದಿ ಗಳಿಲ್ಲದವನಿಗೇನದರ ಸಂಬಂಧ ||

ಸಂತೋಷದಿ ಹಿಗ್ಗಿಲ್ಲವಗೆ ದು:ಖದ ಮಾತಿಲ್ಲ |

ಅತಿಶಯ ಭಕ್ತಿಜ್ಞಾನದಿ ದೊರಕುವನೆಮಗೆ ||

ಕುಣಿದು ಕುಪ್ಪಳಿಸಿದರೂ ನಾವೆಂದಂತಾಗದು |

ಒಣಮಾತು ಢಂಬಾಚಾರಕೆ ಬಗ್ಗುವನಲ್ಲ ||

ಹಣಾಹಣಿಗೆ ಮಣಿಯಲಾರ ದೋಷವಿದೂರ |

ಸಣ್ಣಕ್ರಿಯೆ ಸಹ ಅನವಿಚ್ಛೆಯಂತೆ ನಡೆಯುವುದು ||

ಮಾಡಿ ಮಾಡಿಸುವ ಬೇಡನೆಂದರೆ ಬಿಡ |

ನೊಡಿ ನೋಡಿಸುವ ಕಣ್ಣಿಗೆಂದು ಕಾಣಿಸ ||

ನೋಡಿ ವದನದಿ ನಿಂತು ನುಡಿಸುವ |

ಒಡೆಯ ಕರ್ತೃ ಶ್ರೀಕೃಷ್ಣವಿಠ್ಠಲ ಅನುಕ್ಷಣವೂ ||

416. ಸಂಸಾರದಿ ಬರಲು ಸದಾಕಾಲ ನೆನೆದರೆ ಇಲ್ಲ ಕಷ್ಟ |

ಕಂಸಾದಿ ಸ್ಮರಣಾತ್ ನಿಜ ಪೂರ್ಣಲಾಭ ನಿತ್ಯ ಸಂತುಷ್ಟಿ ||

ವಾಸಿತ ಹೃದ್ಗುಹನ ಗುರುತಿಸದಿರೆ ಜನ್ಮಪೂರ್ಣ ನಷ್ಟ |

ದಾಸನಾಗಿ ಸೇವಿಸೆ ಭಕ್ತ ವತ್ಸಲ ತಾನಾಗುವ ಹೃಷ್ಟ ||

ಆಶಾಪಾಶಕ್ಲೇಶ ಸಂಹರಿಸಿ ನೀಡುವ ದಿವ್ಯದೃಷ್ಟಿ |

ಅಷ್ಟಕರ್ತೃ ಶ್ರೀಕೃಷ್ಣವಿಠ್ಠಲನ ಕೊಂಡಾಡೆ ಒಲಿವ ವಿಶಿಷ್ಠ ||

417. ಕಡೆಗೋಲು ನೇನ ಪಿಡಿದ ಉಡುಪಿ ಕೃಷ್ಣ |

ಬಾಲಕನಾಗಿ ನಿಂತಿಹ ಗುರುವಾಯೂರಪ್ಪನಾಗಿ ||

ಎರಡೂ ಕೈ ಕಟಿಯಲ್ಲಿಟ್ಟು ಪಂಢರಿರಾಯ |

ಅಭಯ ಹಸ್ತದ ಕಂಚಿ ವರದರಾಜ ||

ವರದ ಹಸ್ತ ತೋರಿದ ಶೇಷಗಿರಿವಾಸ |

ಶೇಷ ಶಾಯಿಯಾದ ಶ್ರೀರಂಗನಾಥ ||

ಬದರಿಲಿ ಯೋಗ ಮುದ್ರೆ ಭಂಗಿಲಿ ಕುಳಿತ |

ಸರ್ವದೈವವೂ ಜಗನ್ನಾಥ ಶ್ರೀಕೃಷ್ಣವಿಠ್ಠಲನೇ ||

ಇದು ತ್ರಿಕಾಲಕೂ ಸತ್ಯಸ್ಯ ಸತ್ಯವೆಂದು |

ಕೈಮೇಲೆತ್ತಿ ಪೇಳುವೆ ಶ್ರೀಕೃಷ್ಣವಿಠ್ಠಲನ ದಯದಿ ||

418. ಎನ್ನ ತನು-ಮನ ಶುದ್ಧವಿಲ್ಲ |

ಎನಗೆಲ್ಲ ಅದರ ಅರಿವಿದೆ ||1||

ಎನಗಿಂತ ಅತೀ ಹಿರಿಯ ನೀನು |

ನಾನು ಹೀನಳು ಉತ್ತಮೋತ್ತಮ ನೀನು ||2||

ನಿನ್ನ ಮಧುರ ಗಾನ ಕೇಳುವ ಕೋರಿಕೆ |

ನಿನ್ನ ಜೊತೆ ಒಡನಾಡುವ ಆಸೆ ||3||

ನಿನಗಾಗಿ ಹಂಬಲಿಸುತಿರುವೆ |

ನಿನ್ನನು ಕಾಣುವ ಪ್ರಬಲ ಇಚ್ಛೆ ||4||

ನಿನ್ನನೇ ಶಾಶ್ವತದಿ ಸೇರುವ ಬಯಕೆ |

ನನಗಾಗಿ ಪೂರೈಸೆಯಾ ಶ್ರೀಕೃಷ್ಣವಿಠ್ಠಲ ಭಕ್ತವತ್ಸಲ ||5||

419. ದೇಹ ವೃಕ್ಷದಲಿ ಜೀವ-ಈಶ್ವರ ದ್ವಯರಿಹರು |

ಅಹೇಯ ಶ್ರೇಷ್ಠ ಶುಭಸಾರ ಭೋಕ್ತ, ದು:ಖ ಅಭೋಕ್ತ ||ಪ||

ಶ್ರೀಹಂಸನಾಮಕ ಭಗವಂತನೇ ಪೂರ್ಣಪುಣ್ಯಫಲಕೆ ಭಾಗಿ ||ಅಪ||

ದೇಹಗತ ಸುಖ ಪ್ರಭೇದ ಪಂಚರೂಪಾತ್ಮಕವು |

ಶ್ರೀಹರಿ ಶಿರವೇ ಪ್ರಿಯ-ಪರೋಪಕಾರದ ಆನಂದ ||

ಶ್ರೀಹರಿ ಬಲ ಭುಜವೇ ಮೋದ-ವಿಷಯ ಭೋಗಜನ್ಯ ಸುಖ |

ಶ್ರೀಹರಿ ಎಡಭುಜವೇ ಪ್ರಮೋದ-ಉತ್ತಮ ವಿಷಯ ಭೋಗಸುಖ ||

ಶ್ರೀಹರಿ ಮಧ್ಯದೇಹ ಆನಂದಾತ್ಮ-ಪದಾರ್ಥ ವಿಜ್ಞಾನ ಜನ್ಯ |

ಶ್ರೀಹರಿ ಪುಚ್ಛಪಾದವು ಬ್ರಹ್ಮನಾಮಕನು ||1||

ಇಹನು ಸಕಲ ಪ್ರಾಪ್ತ ವಸ್ತುವಿನಲಿ ನಾರಾಯಣ ನೆನಿಸಿ |

ಇಹ-ಪರದಿ ಸಕಲಕೂ ಸುಖವಿಶೇಷಕೆ ನಿಯಾಮಕ ||

ಬ್ರಹ್ಮಸಹಿತವೇ ಸರ್ವರೂ ಮೋಕ್ಷ ಪಡೆವರು |

ಅರ್ಹರಿಗೂ ಅನ್ಯಥಾ ಸ್ವಯಂ ವಿಷ್ಣುಪದ ಪ್ರಾಪ್ತಿ ಇಲ್ಲ ||

ಬಹು ತರದ ವಿಶ್ವಗತ ಸರ್ವ ಶುಭಭೋಗಜನ್ಯ ಸುಖ |

ಬಾಹ್ಯಾಂತರ ಸ್ಥಿತ ಶ್ರೀಕೃಷ್ಣವಿಠ್ಠಲನ್ನೆ ಸದಾ ಪೊಂದುವುದು ||2||

420. ಪದದ ರಚನೆಗಿಂತ ಪದ್ಧತಿಯಂತೆ ಪದ ಅಭ್ಯಾಸ ಮುಖ್ಯ |

ಪದದ ಅಭ್ಯಾಸಕ್ಕಿಂತ ಪದದ ಭಾವನೆ ಅರಿವು ಮುಖ್ಯ ||

ಪದದ ಭಾವನೆಗಿಂತ ಪದದಿ ಪರೆಮಾತ್ಮನ ಕಾಣುವಿಕೆ ಮುಖ್ಯ |

ಬಿದ್ದು ಹೋಗುವ ಜಡ ದೇಹದಿ ಇರುವ, ಗೋಪಾಲಕನೇ ||

ಪದದಿ ಪರಮಾತ್ಮನ ಕಾಣುವ ಸುಂದರನ ರಾಣಿ ಪೂಜಿಪ |

ಶುದ್ಧ ಶ್ರೀಕೃಷ್ಣವಿಠ್ಠಲ ಸರ್ವಕರ್ತೃವಿಗೆ ನಮೋ ಎಂಬೆ ||

421. ಧರ್ಮಾಧರ್ಮದ ಅರಿವಿದ್ದರೂ ಜೀವಿ |

ಕರ್ಮದಿ ಅಧರ್ಮ ಮಾಡುವುದೇಕೆ ||ಪ|||

ಧರ್ಮಾತ್ಮನೇ ಅಧರ್ಮ ಮಾಡಿಸುವುದೇಕೆ ||ಅಪ||

ಮಾತೃವಧೆ ಮಹಾ ಪಾಪವಿದ್ದರೂ |

ಪಿತೃವಚನ ಪರಿಪಾಲನೆ ದೊಡ್ಡದೆ ? || (ಪರಶುರಾಮ )

ಗುರುಹತ್ಯೆಪಾಪ, ಗುರುತರ ಆದರೂ |

ಗುರುಹತ್ಯೆ ಧರ್ಮವೆನಿಸಿದ್ದೇಕೆ ? || (ಅರ್ಜುನ) ||1||

ಪರರ ನಿಂದನೆಗಂಜಿ ಬಸಿರಿ ಭಾರ್ಯೆ ತ್ಯಜಿಸಿ |

ಪುತ್ರರ ಜನನವೂ ತಿಳಿಯದಿದ್ದುದು ಹೆಂಗೆ ? ||

ಸುಪ್ರಜಾರಾಮನಾಗಿ ಪತ್ನಿ-ಪುತ್ರರ ಪರಿವೆ ಇಲ್ಲವೆ ? |

ಧರ್ಮದ ಮೂರ್ತಿ ಎನಿಸಿದವಗೆ ಆಧರ್ಮ ತಿಳಿಯದೆ ? ||2||

ಧರ್ಮಾಧರ್ಮದ ನಂಟು ಅತೀ ಜಟಿಲ |

ಧರ್ಮವೆನಿಸಿದ್ದು ಅಧರ್ಮವಾಗಿರಬಹುದು |||

ಧರ್ಮಾಧರ್ಮದ ಮಧ್ಯದ ಗೆರೆ ಸೂಕ್ಷ್ಮ |

ಧರ್ಮಮೂರ್ತಿ ಶ್ರೀಕೃಷ್ಣವಿಠ್ಠಲನೇ ಬಿಡಿಸಿ ಪೇಳಯ್ಯಾ ||3||

422. ತಳಮಳಿಸದಿರು ಎಂದೂ ತಾಳುತಿರು ಸದಾ |

ಬಾಳು ಕೊಟ್ಟವನೇ ಬಾಳು ಬೆಳಗುವನು ||ಪ||

ತಿಳಿದುಕೋ ಇದರ ಮರ್ಮ ಸಂದೇಹಿಸದಿರು ||ಅಪ||

ಹಾಳು ಹರಟೆ ಮಾಡಿ ಕಾಲ ಕಳೆಯದಿರು |

ಒಳ್ಳೇಳ್ಳೇ ಮಾತ ಕೇಳಿ ಸುಖಿಸುತಿರು ||

ಕೇಳದೆ ಬರುವ ಸುಖ-ದು:ಖ ಖಗಳಿಗೆ |

ಒಳ-ಹೊರಗಿರುವ ಸ್ವಾಮಿ ತಾನೇ ಹೊಣೆ ||1||

ಹಳೆಯ ಕಡಕುಗಳ ಮರೆಯುತಿರು |

ಕಳ್ಳತನ ಮಾಡದೆ ಪರರ ಸೊತ್ತು ||

ಗಳಿಸಿಕೋ ಎಂದಿಗೂ ಕರಗದ ಆಸ್ತಿ |

ಬೆಳೆಸಿಕೋ ಪುಣ್ಯದ ಸಂಪತ್ತು ||2||

ಕಳವಳಿಸದೇ ಮುಂದೆ ಹೇಗೆಂದು |

ನಳಿ ನಳಿಸುತಿರು ನವ ಉತ್ಸಾಹದಿ ||

ಹೊಳೆಯುತಿರು ಹೊರಗೆ ಬೆಳಕಾಗಿ |

ನಾಳೆ ಹೇಗೆಂದು ಚಿಂತಿಸದೇ ನಿಶ್ಚಿಂತನಾಗಿರು ||3||

ಗೋಳಾಕಾರದೀ ಜನನ-ಮರಣವೆಂಬ |

ಗೋಳು ತಪ್ಪಿಸಲು ಒಂದೇ ಮನದಿ ||

ಜೊಳ್ಳು ವಿಷಯಗಳ ಬಿಟ್ಟು ಶರಣಾಗು |

ದಳ್ಳುರಿಯಿಂದ ಕಾಯ್ವ ಶ್ರೀಕೃಷ್ಣವಿಠ್ಠಲ ಕೃಪಾಳು ||4||

423. ಅರಿವಾಯ್ತೆನಗೆ ಗುರುತರದ ಅರಿವಾಯಿತು |

ಸರಿಯಾದ ರೀತಿಯಲಿ ಖಚಿತದಿ ಅರಿವಾಯ್ತು ||

ಭಜಿಸದೆ ಬೈಯ್ದ ಚೈದ್ಯನ ತನ್ನ ಉದರದಲ್ಲಿಟ್ಟ |

ಸೋಜಿಗದಿ ಶರಶಯ್ಯಯಲ್ಲಿದ್ದವಗೆ ಕಡೆಕಾಲದಿ ದರುಶನವಿತ್ತ ||

ಅಜಮಿಳನ ತಪ್ಪು ಮನ್ನಿಸಿ ಪೊರೆದ ದಯಾನಿಧಿ |

ರಾಜನ ಮೂಹೂರ್ತ ಸಾಧನೆಗೆ ಮುಕ್ತಿ ಇತ್ತವನೆಮ್ಮ ಪೊರೆವ ||1||

ಬರಿದೀ ಮಾತಲ್ಲ ಅನುಭವದ ವಾರ್ತೆ ಇದು |

ಸರಿದಮೇಲೆ ಸಾಕಷ್ಟು ಸಮಯ ಈಗ ಅರಿವಾಯ್ತು ||

ಸುರಿದ್ಹೋದ ಕಾಲ ನೆಲದಮೇಲೆ ಸುರಿದೆಣ್ಣೆಯಂತೆ |

ತಿರುಗಿಬಾರದು ಎಷ್ಟೆ ಪೇಚಾಡಿದರೂ ಸಹ ||2||

ನಡೆಸಿದವ ನೀನೇ, ನಡೆಸುತ್ತಿರುವವ ನೀನೇ |

ತಡವಾದರೂ ಬಿಡದೆ ನಡೆಸುವವ ನೀನೆಂದು ||

ಒಡನೆ ಇನ್ನಾದರೂ ಎಚ್ಚೆತ್ತು ಮುಂದೆ ಇದ್ದಷ್ಟುವೇಳೆ |

ಕೂಡಲೇ ಸದುಪಯೋಗಿಸಿ ಶ್ರೀಕೃಷ್ಣವಿಠ್ಠಲನ ಭಜಸಿದರೆ ಉತ್ತಮ ||3||

424. ಯಾವ ಜನುಮದ ಪುಣ್ಯವೋ, |

ಯಾವ ಸುಖ ಜೀವಿಗಳಾಶೀರ್ವಾದ ಫಲವೋ ||ಪ||

ಭವದ ಆಸೆ ನೀಗಿ ಜನುಮ ಸುಫಲವಾಯಿತು |

ಸಾವು ಬರುವ ಮುನ್ನ ಅರಿವು ಮೂಡಿತು ||ಅಪ||

ಹೊಲಸು ನಾಲಿಗೆ, ಹೊಲಸು ದೇಹ |

ಹೊಲಸು ದೃಶ್ಯ, ಹೊಲಸು ದೃಷ್ಟಿ ||

ಕಲುಷಿತ ಮನ, ಕಲುಷಿತ ಬುದ್ಧಿ |

ಹುಲುಮನುಷಗೆ ಒಲಿಯಿತು ದೈವ ||1||

ಕೊನೆ ಮೊದಲಿಲ್ಲದ ಆನಂದದ ಹೊನಲು |

ಕನಸು-ಮನಸಲೂ ನೆನೆಯದ ಸೌಭಾಗ್ಯವಿದು ||

ಕನವರಿಸಲು ಸಧಾ ಮನದಿ ಬಂದುನಿಂತ |

ಕನಸೆಲ್ಲ ನನಸಾಯ್ತು ಶ್ರೀಕೃಷ್ಣವಿಠ್ಠಲನ ದಯದಿ ||2||

425. ಸುಲಭ ದರುಶನ ಕೊಡಯ್ಯಾ ನಿತ್ಯದಿ |

ಅಲಭ್ಯ ದರುಶನ ಲಭ್ಯವಾಗಿಸಯ್ಯಾ ||ಪ||

ಒಲವಿಂದ ನಿತ್ಯ ಸತತ ದರುಶನ ನೀಡಯ್ಯಾ ||ಅಪ||

ನಾನೇನು ಧನ-ಕನಕ ಬೇಡಲಿಲ್ಲ |

ಮನೆ-ಭೂಮಿ-ಆಸ್ತಿ ಬೇಡೆನಗೆ ||

ನಿನ್ನ ಸ್ಥಾನ-ಮಾನ ನಾನೇಕೆ ಬೇಡಲಿ |

ಜೀನ, ನಿನ್ನ ಚರಣದಿ ಸ್ಥಳವಿತ್ತು ಸಲುಹೋ ||1||

ಬೆಲ್ಲವಿದ್ದಡೆ ಇರುವೆ ಬರುವುದು ಸಹಜ |

ಎಲ್ಲರಿಗೂ ಕೇಳಿದ್ದೆಲ್ಲಾ ಕೊಡುವ ದಾನಿ ನೀನಂತೆ ||

ಎಲ್ಲಿ ಭಕ್ತರೋ ಅಲ್ಲೇ ನೀನಿರುವಿಯಂತೆ |

ಬಲ್ಲೆ ನೀ ಎನ್ನಲಿ ಏನಿಲ್ಲ ಆದರೂ ಬೇಡುವೆ ||2||

ಲೋಕವ ಸುತ್ತಿ ಸುತ್ತಿ ಸಾಕಾಯಿತು |

ರಕರಕಾಲು ತಿಂದು ಅಜೀರ್ಣವಾಯಿತು ||

ಬೇಕೆನ್ನುವುದು ಮುಗಿಯದಾಯ್ತು |

ತೋಕ ನಾನಾಯ್ಯ ಶ್ರೀಕೃಷ್ಣವಿಠ್ಠಲ ಸಾಕು ಮಾಡಯ್ಯಾ ದಯಮಾಡಿ ||3||

426. ನಿನ್ನ ಅಪರಾಧಿ ನಾನು ಎಣಿಸದಂತಹ ಅಪರಾಧವೆನ್ನದು |

ಎನ್ನ ಬಿಡದೆ ಶಿಕ್ಷಿಸು, ಇಲ್ಲ ಅಪರಾಧ ನಿಲ್ಲುವುದಿಲ್ಲ ||

ನಿನ್ನ ಕಾಲಿಗೆನ್ನ ಕುತ್ತಿಗೆ ಬಿಗಿದು ಸರಪಳಿ ಕಟ್ಟು ಇಲ್ಲ |

ಎನ್ನ ಕೈಗಳೆರಡನ್ನು ನಿನ್ನ ಪಾದಕ್ಕೆ ಸೇರಿಸಿ ಕಟ್ಟು ||

ನಿನ್ನ ಕಾಲಿನಿಂದೆನ್ನ ಶಿರಮೆಟ್ಟಿ ಚಿಹ್ನೆ ಮೂಡಿಸು |

ತಿನ್ನಲು ಏನನ್ನೂ ನೀಡದೆ ಸದಾ ನಿನ್ನ ಜೊತೆಯಲ್ಲೇ ಇರಿಸು ||

ನಿನ್ನ ಕಣ್ಗಾವಲಿನಲ್ಲಿ ನಿನ್ನ ಮನೆಯಲ್ಲೇ ಬಂದಿಮಾಡು |

ನಿನ್ನೊಳಗೇ ಇದ್ದು ಈ ಜೀವ ಹೊರಗೆ ಹೋಗದಂತೆ ಮಾಡು ||

ನೀನಿತ್ತ ಯಾವ ಶಿಕ್ಷೆಯೂ ಪ್ರಿಯವೆನಗೆ ಶ್ರೀಕೃಷ್ಣವಿಠ್ಠಲ |

ನೀನಿಲ್ಲದ ಯಾವ ಸುಖವೂ ಎನಗೆ ಬೇಡ ||

!!ಗುರು ಮಧ್ವಾಂತರ್ಗತ ಶ್ರೀಕೃಷ್ಣವಿಠ್ಠಲಾರ್ಪಣಮಸ್ತು !!

ಸಂಪರ್ಕಿಸುವ ವಿಳಾಸ

ಡಾ ಉಪೇಂದ್ರ ಸರಸಾಪೂರ ,

'ಉಪವನ' ಚಾಲುಕ್ಯ ನಗರ ,

ಸೊಲಾಪೂರ ರಸ್ತೆ

ವಿಜಯಪುರ-586101

08352-317603, 9341611126 & 9448862936

ನಮ್ಮ ಇತರ ಪ್ರಕಟಣೆಗಳು